Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 124

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ. ರಚನೆಗಾರ: ದಾವೀದ.

124 ಯೆಹೋವನು ನಮ್ಮ ಕಡೆ ಇಲ್ಲದಿದ್ದಿದ್ದರೆ ನಮ್ಮ ಗತಿ ಏನಾಗುತ್ತಿತ್ತು?
    ಇಸ್ರೇಲರೇ, ನನಗೆ ಉತ್ತರಹೇಳಿ.
ವೈರಿಗಳು ನಮ್ಮ ಮೇಲೆ ಆಕ್ರಮಣ ಮಾಡಿದಾಗ
    ಯೆಹೋವನು ನಮ್ಮ ಕಡೆ ಇಲ್ಲದಿದ್ದಿದ್ದರೆ ನಮ್ಮ ಗತಿ ಏನಾಗುತ್ತಿತ್ತು?
ಶತ್ರುಗಳು ನಮ್ಮಮೇಲೆ ಕೋಪಗೊಂಡಾಗಲೆಲ್ಲಾ
    ನಮ್ಮನ್ನು ಜೀವಂತವಾಗಿ ನುಂಗಿಬಿಡುತ್ತಿದ್ದರು.
ಶತ್ರುಸೈನ್ಯಗಳು ನಮ್ಮನ್ನು ಕೊಚ್ಚಿಕೊಂಡು ಹೋಗುವ
    ಪ್ರವಾಹದಂತೆಯೂ ಮುಳುಗಿಸುವ ನದಿಯಂತೆಯೂ ಆಗಿರುತ್ತಿದ್ದರು.
ಆ ಗರ್ವಿಷ್ಠರು ನಮ್ಮ ಪಾಲಿಗೆ ಬಾಯಿಯವರೆಗೂ
    ಮೇಲೇರಿ ಮುಳುಗಿಸುವ ನೀರಿನಂತಾಗುತ್ತಿದ್ದರು.

ಯೆಹೋವನಿಗೆ ಸ್ತೋತ್ರವಾಗಲಿ!
    ನಮ್ಮ ಶತ್ರುಗಳು ನಮ್ಮನ್ನು ಹಿಡಿದು ಕೊಲ್ಲಲು ಆತನು ಅವಕಾಶ ಕೊಡಲಿಲ್ಲ.

ನಾವು ಬಲೆಯಿಂದ ತಪ್ಪಿಸಿಕೊಂಡ ಪಕ್ಷಿಯಂತಿದ್ದೇವೆ.
    ಬಲೆಯು ಹರಿದುಹೋದದ್ದರಿಂದ ನಾವು ತಪ್ಪಿಸಿಕೊಂಡೆವು.
ನಮಗೆ ಸಹಾಯವು ಯೆಹೋವನಿಂದಲೇ ಬಂದಿತು.
    ಭೂಮ್ಯಾಕಾಶಗಳನ್ನು ಸೃಷ್ಟಿಮಾಡಿದವನು ಆತನೇ.

ಆದಿಕಾಂಡ 9:1-17

ಹೊಸ ಪ್ರಾರಂಭ

ದೇವರು ನೋಹನನ್ನೂ ಅವನ ಮಕ್ಕಳನ್ನೂ ಆಶೀರ್ವದಿಸಿ ಅವರಿಗೆ, “ಅನೇಕ ಮಕ್ಕಳನ್ನು ಪಡೆದು ಭೂಮಿಯಲ್ಲೆಲ್ಲಾ ತುಂಬಿಕೊಳ್ಳಿರಿ. ಭೂಮಿಯ ಮೇಲಿರುವ ಪ್ರತಿಯೊಂದು ಪ್ರಾಣಿಯೂ ನಿಮಗೆ ಹೆದರಿ ಭಯಪಡುವುದು; ಆಕಾಶದಲ್ಲಿ ಹಾರಾಡುವ ಪ್ರತಿಯೊಂದು ಪಕ್ಷಿಯೂ ನಿಮಗೆ ಹೆದರಿ ಭಯಪಡುವುದು; ನೆಲದ ಮೇಲೆ ಹರಿದಾಡುವ ಪ್ರತಿಯೊಂದು ಕ್ರಿಮಿಯೂ ಮತ್ತು ಸಮುದ್ರದಲ್ಲಿರುವ ಪ್ರತಿಯೊಂದು ಮೀನೂ ನಿಮಗೆ ಹೆದರಿ ಭಯಪಡುವುದು. ನೀವು ಅವುಗಳಿಗೆಲ್ಲಾ ಒಡೆಯರಾಗಿರುತ್ತೀರಿ. ಮೊದಲು, ನಿಮ್ಮ ಆಹಾರಕ್ಕಾಗಿ ಸಸ್ಯಗಳನ್ನು ಕೊಟ್ಟೆನು. ಈಗ ನಿಮ್ಮ ಆಹಾರಕ್ಕಾಗಿ ಪ್ರತಿಯೊಂದು ಪ್ರಾಣಿಯನ್ನೂ ಕೊಟ್ಟಿದ್ದೇನೆ. ಭೂಮಿಯ ಮೇಲಿರುವ ಎಲ್ಲವನ್ನೂ ನಾನು ನಿಮಗೋಸ್ಕರ ಕೊಟ್ಟಿದ್ದೇನೆ. ಆದರೆ ನಾನು ನಿಮಗೆ ಆಜ್ಞಾಪಿಸುವುದೇನೆಂದರೆ ರಕ್ತದಿಂದ ಕೂಡಿರುವ ಮಾಂಸವನ್ನು ನೀವು ತಿನ್ನಕೂಡದು. ಯಾವನಾದರೂ ನಿಮ್ಮ ಜೀವಹತ್ಯೆ ಮಾಡಿದರೆ, ನಾನು ಅವನ ಜೀವವನ್ನು ತೆಗೆಯುವೆನು. ಯಾವ ಪ್ರಾಣಿಯಾದರೂ ಮನುಷ್ಯನನ್ನು ಕೊಂದರೆ, ನಾನು ಆ ಪ್ರಾಣಿಯ ಪ್ರಾಣವನ್ನು ತೆಗೆಯುತ್ತೇನೆ.

“ದೇವರು ಮನುಷ್ಯನನ್ನು ತನ್ನ ಹೋಲಿಕೆಗನುಸಾರವಾಗಿ ನಿರ್ಮಿಸಿದನು.
    ಆದ್ದರಿಂದ ಯಾವನು ಮನುಷ್ಯನ ರಕ್ತವನ್ನು ಸುರಿಸುವನೋ ಅವನ ರಕ್ತವನ್ನು ಮನುಷ್ಯನೇ ಸುರಿಸುವನು.”

“ನೋಹನೇ, ನಿನಗೂ ನಿನ್ನ ಮಕ್ಕಳಿಗೂ ಅನೇಕ ಮಕ್ಕಳು ಹುಟ್ಟಲಿ. ನೀವು ಅಭಿವೃದ್ಧಿಗೊಂಡು ಭೂಮಿಯಲ್ಲಿ ತುಂಬಿಕೊಳ್ಳಿರಿ” ಎಂದು ಹೇಳಿದನು.

8-9 ಆಮೇಲೆ ದೇವರು ನೋಹನಿಗೂ ಅವನ ಮಕ್ಕಳಿಗೂ, “ನಾನು ನಿಮಗೆ ಮತ್ತು ಮುಂದೆ ಜೀವಿಸುವ ನಿಮ್ಮ ಜನರಿಗೆ ವಾಗ್ದಾನ ಮಾಡುತ್ತೇನೆ. 10 ನಾವೆಯೊಳಗಿಂದ ಬಂದ ಎಲ್ಲಾ ಪಕ್ಷಿಗಳಿಗೆ, ಎಲ್ಲಾ ಪಶುಗಳಿಗೆ ಮತ್ತು ಪ್ರಾಣಿಗಳಿಗೆ ನಾನು ವಾಗ್ದಾನ ಮಾಡುತ್ತೇನೆ. ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಗೆ ವಾಗ್ದಾನ ಮಾಡುತ್ತೇನೆ. 11 ನಾನು ನಿಮಗೆ ಮಾಡುವ ವಾಗ್ದಾನವೇನೆಂದರೆ: ಭೂಮಿಯ ಮೇಲಿದ್ದ ಎಲ್ಲಾ ಜೀವಿಗಳು ಜಲಪ್ರಳಯದಿಂದ ನಾಶವಾದವು. ಆದರೆ ಮತ್ತೆಂದಿಗೂ ಈ ರೀತಿ ಆಗುವುದಿಲ್ಲ. ಜಲಪ್ರಳಯವು ಭೂಮಿಯ ಮೇಲಿರುವ ಎಲ್ಲಾ ಜೀವಿಗಳನ್ನು ಇನ್ನೆಂದಿಗೂ ನಾಶಗೊಳಿಸುವುದಿಲ್ಲ” ಎಂದು ಹೇಳಿದನು.

12 ಇದಲ್ಲದೆ ದೇವರು, “ನನ್ನ ವಾಗ್ದಾನಕ್ಕೆ ಸಾಕ್ಷಿಯಾಗಿ ನಾನು ನಿಮಗೊಂದು ಗುರುತನ್ನು ಕೊಡುವೆನು. ನಾನು ನಿಮ್ಮೊಡನೆ ಮತ್ತು ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯೊಡನೆ ಒಡಂಬಡಿಕೆ ಮಾಡಿಕೊಂಡಿರುವುದನ್ನು ಈ ಗುರುತು ತೋರಿಸುತ್ತದೆ. ಈ ಗುರುತು ಯಾವಾಗಲೂ ಇರುವುದು. 13 ನಾನು ಮೋಡಗಳಲ್ಲಿ ಇಟ್ಟಿರುವ ಮುಗಿಲುಬಿಲ್ಲು ನನಗೂ ಭೂಮಿಗೂ ಆಗಿರುವ ಒಡಂಬಡಿಕೆಗೆ ಗುರುತಾಗಿರುವುದು. 14 ನಾನು ಮೋಡಗಳನ್ನು ಭೂಮಿಯ ಮೇಲೆ ಕವಿಸುವಾಗ, ಮೋಡದಲ್ಲಿ ಮುಗಿಲುಬಿಲ್ಲನ್ನು ಕಾಣುವಿರಿ. 15 ನಾನು ಈ ಮುಗಿಲುಬಿಲ್ಲನ್ನು ನೋಡುವಾಗ, ನನಗೂ ನಿಮಗೂ ಮತ್ತು ಭೂಮಿಯ ಮೇಲಿರುವ ಎಲ್ಲಾ ಜೀವಿಗಳಿಗೂ ಆಗಿರುವ ಒಡಂಬಡಿಕೆಯನ್ನು ನೆನಪುಮಾಡಿಕೊಳ್ಳುವೆನು. ಜಲಪ್ರಳಯವು ಇನ್ನೆಂದಿಗೂ ಭೂಮಿಯ ಮೇಲಿರುವ ಎಲ್ಲಾ ಜೀವಿಗಳನ್ನು ನಾಶಗೊಳಿಸುವುದಿಲ್ಲ ಎಂಬುದೇ ಈ ಒಡಂಬಡಿಕೆ. 16 ನಾನು ಮೋಡಗಳಲ್ಲಿರುವ ಮುಗಿಲುಬಿಲ್ಲನ್ನು ನೋಡುವಾಗ, ಶಾಶ್ವತವಾದ ಈ ಒಡಂಬಡಿಕೆಯನ್ನು ಜ್ಞಾಪಕ ಮಾಡಿಕೊಳ್ಳುವೆನು. ನನಗೂ ಮತ್ತು ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಗಳಿಗೂ ಆದ ಒಡಂಬಡಿಕೆಯನ್ನು ನೆನಸಿಕೊಳ್ಳುವೆನು” ಎಂದು ಹೇಳಿದನು.

17 ಆದ್ದರಿಂದ ದೇವರು ನೋಹನಿಗೆ, “ಭೂಮಿಯ ಮೇಲಿರುವ ಎಲ್ಲಾ ಜೀವಿಗಳೊಡನೆ ನಾನು ಮಾಡಿಕೊಂಡ ಒಡಂಬಡಿಕೆಗೆ ಈ ಮುಗಿಲುಬಿಲ್ಲು ಗುರುತಾಗಿರುವುದು” ಎಂದು ಹೇಳಿದನು.

ಇಬ್ರಿಯರಿಗೆ 11:32-40

32 ನಾನು ನಿಮಗೆ ಮತ್ತಷ್ಟು ದೃಷ್ಟಾಂತಗಳನ್ನು ಹೇಳುವ ಅಗತ್ಯವಿದೆಯೋ? ನಾನು ಗಿದ್ಯೋನನ, ಬಾರಾಕನ, ಸಂಸೋನನ, ಯೆಫ್ತಾಹನ, ದಾವೀದನ, ಸಮುವೇಲನ ಮತ್ತು ಪ್ರವಾದಿಗಳ ಕುರಿತು ನಿಮಗೆ ಹೇಳುವಷ್ಟು ಸಮಯ ನನಗಿಲ್ಲ. 33 ಆ ಜನರೆಲ್ಲರೂ ಬಲವಾದ ನಂಬಿಕೆಯುಳ್ಳವರಾಗಿದ್ದರು. ಆ ನಂಬಿಕೆಯಿಂದಲೇ ರಾಜ್ಯಗಳನ್ನು ಸೋಲಿಸಿದರು. ಅವರು ಯೋಗ್ಯವಾದ ಕಾರ್ಯಗಳನ್ನು ಮಾಡಿದರು ಮತ್ತು ದೇವರು ವಾಗ್ದಾನ ಮಾಡಿದ್ದವುಗಳನ್ನು ಪಡೆದುಕೊಂಡರು. ಅವರಲ್ಲಿ ಕೆಲವರು ತಮ್ಮ ನಂಬಿಕೆಯಿಂದ ಸಿಂಹಗಳ ಬಾಯಿಗಳನ್ನು ಮುಚ್ಚಿದರು; 34 ಕೆಲವರು ಉರಿಯುವ ಬೆಂಕಿಯನ್ನು ನಂದಿಸಿದರು; ಇನ್ನು ಕೆಲವರು ಕತ್ತಿಗಳ ಬಾಯಿಂದ ಪಾರಾದರು; ದುರ್ಬಲರಾಗಿದ್ದವರು ತಮ್ಮ ನಂಬಿಕೆಯಿಂದ ಪ್ರಬಲರಾದರು; ಯುದ್ಧದಲ್ಲಿ ಶಕ್ತಿಶಾಲಿಗಳಾಗಿ ಶತ್ರುಗಳನ್ನು ಸೋಲಿಸಿದರು. 35 ಸತ್ತುಹೋಗಿದ್ದವರು ಸಾವಿನಿಂದ ಮೇಲೆದ್ದರು ಮತ್ತು ಅವರನ್ನು ಅವರವರ ಕುಟುಂಬಗಳ ಸ್ತ್ರೀಯರಿಗೆ ಒಪ್ಪಿಸಲಾಯಿತು. ಇತರ ಕೆಲವರು ಯಾತನೆಯನ್ನು ಅನುಭವಿಸುತ್ತಿದ್ದಾಗಲೂ ಪುನರುತ್ಥಾನದ ನಂತರವಿರುವ ಶ್ರೇಷ್ಠ ಜೀವಿತಕ್ಕಾಗಿ ಬಿಡುಗಡೆ ಹೊಂದಲು ಒಪ್ಪಲಿಲ್ಲ. 36 ಕೆಲವರು ಇತರರಿಂದ ಅಪಹಾಸ್ಯಕ್ಕೆ ಗುರಿಯಾದರು, ಪೆಟ್ಟುಗಳನ್ನು ಅನುಭವಿಸಿದರು, ಸೆರೆವಾಸದಲ್ಲಿದ್ದರು. 37 ಕೆಲವರನ್ನು ಕಲ್ಲೆಸೆದು ಕೊಂದರು, ಕೆಲವರನ್ನು ಅರ್ಧಕತ್ತರಿಸಿ ಎರಡು ಭಾಗ ಮಾಡಿದರು. ಕೆಲವರನ್ನು ಕತ್ತಿಗಳಿಂದ ಇರಿದುಕೊಂದರು. ಇವರಲ್ಲಿ ಕೆಲವರು ಕುರಿ ಮತ್ತು ಹೋತಗಳ ಚರ್ಮಗಳನ್ನು ತೊಟ್ಟುಕೊಂಡಿದ್ದರು; ಕೆಲವರು ಬಡವರಾಗಿದ್ದರು; ಹಿಂಸೆಗೆ ಒಳಗಾಗಿದ್ದರು ಮತ್ತು ಜನರ ಕ್ರೂರ ವರ್ತನೆಗೆ ಗುರಿಯಾಗಿದ್ದರು. 38 ಇವರಿಗೆ ಈ ಲೋಕವು ಯೋಗ್ಯವಾಗಿರಲಿಲ್ಲ. ಇವರು ಮರುಭೂಮಿಗಳಲ್ಲಿ, ಬೆಟ್ಟಗಳಲ್ಲಿ ಅಲೆಯುತ್ತಾ ಗುಹೆಗಳಲ್ಲಿಯೂ ನೆಲದ ಕುಣಿಗಳಲ್ಲಿಯೂ ವಾಸಿಸುತ್ತಿದ್ದರು.

39 ಇವರೆಲ್ಲರೂ ತಮ್ಮ ನಂಬಿಕೆಯ ವಿಷಯದಲ್ಲಿ ಪ್ರಸಿದ್ಧರಾಗಿದ್ದರು. ಆದರೆ ದೇವರ ದೊಡ್ಡ ವಾಗ್ದಾನವನ್ನು ಇವರಲ್ಲಿ ಯಾರೂ ಹೊಂದಿಕೊಳ್ಳಲಿಲ್ಲ. 40 ದೇವರು ನಮಗೆ ಶ್ರೇಷ್ಠವಾದದ್ದನ್ನು ಕೊಡಲು ಯೋಜನೆ ಮಾಡಿದನು. ನಮ್ಮೊಡನೆ ಮಾತ್ರ ಅವರು ಪರಿಪೂರ್ಣರಾಗಬೇಕೆಂಬುದೇ ಆ ಯೋಜನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International