Old/New Testament
ಅರಾಮ್ಯರೊಂದಿಗೆ ವೈಮನಸ್ಸು
7 ಆಹಾಜನು ಯೋಥಾಮನ ಮಗನು. ಯೋಥಾಮನು ಉಜ್ಜೀಯನ ಮಗನು. ರೆಚೀನ್ ಎಂಬವನು ಅರಾಮ್ಯರ ಅರಸನಾಗಿದ್ದನು. ರೆಮಲ್ಯನ ಮಗನಾದ ಪೆಕಹನು ಇಸ್ರೇಲಿನ ಅರಸನಾಗಿದ್ದನು. ಆಗ ಆಹಾಜನು ಯೆಹೂದದ ಅರಸನಾಗಿದ್ದನು. ರೆಚೀನ್ ಮತ್ತು ಪೆಕಹ ಇವರಿಬ್ಬರೂ ಜೆರುಸಲೇಮಿಗೆ ವಿರುದ್ಧವಾಗಿ ಯುದ್ಧಕ್ಕೆ ಹೊರಟರು. ಆದರೆ ಆ ನಗರವನ್ನು ಸೋಲಿಸಲು ಅವರಿಂದಾಗಲಿಲ್ಲ.
2 ದಾವೀದನ ವಂಶದವರಿಗೆ ಒಂದು ಸಂದೇಶವು ಕಳುಹಿಸಲ್ಪಟ್ಟಿತು, “ಅರಾಮ್ಯರ ಸೈನ್ಯ ಮತ್ತು ಎಫ್ರಾಯೀಮ್ಯರ ಸೈನ್ಯ (ಇಸ್ರೇಲ್) ಒಟ್ಟಾಗಿ ಶಿಬಿರ ಹೂಡಿದ್ದಾರೆ” ಎಂಬುದೇ ಆ ಸಂದೇಶ. ಅರಸನಾದ ಆಹಾಜನು ಈ ಸಂದೇಶವನ್ನು ಕೇಳಿದಾಗ, ಅವನೂ ಅವನ ಜನರೂ ಬಹಳವಾಗಿ ಭಯಹಿಡಿದವರಾದರು. ಅಡವಿಯ ಮರಗಳು ಬಿರುಗಾಳಿಗೆ ತತ್ತರಿಸುತ್ತವೋ ಎಂಬಂತೆ ಅವರು ತತ್ತರಿಸಿದರು.
3 ಆಗ ಯೆಹೋವನು ಯೆಶಾಯನಿಗೆ, “ನೀನೂ ನಿನ್ನ ಮಗನಾದ ಶೆಯಾರ್ ಯಾಶೂಬನೂ ಆಹಾಜನ ಬಳಿಗೆ ಹೋಗಿ ಮಾತನಾಡಬೇಕು. ನೀರು ಮೇಲಿನ ಕೊಳಕ್ಕೆ ಸೇರುವ ಸ್ಥಳಕ್ಕೆ ಹೋಗು. ಇದು ಅಗಸನ ಹೊಲಕ್ಕೆ ಹೋಗುವ ಮಾರ್ಗದಲ್ಲಿದೆ.
4 “ಆಹಾಜನಿಗೆ ಹೀಗೆ ಹೇಳು: ‘ಶಾಂತನಾಗಿದ್ದು ಜಾಗ್ರತೆಯಿಂದಿರು. ಭಯಪಡಬೇಡ. ರೆಚೀನ್ ಮತ್ತು ರೆಮಲ್ಯನ ಮಗ ಇವರಿಬ್ಬರೂ ಸೇರಿ ನಿನ್ನನ್ನು ಬೆದರಿಸದಂತೆ ನೋಡಿಕೋ. ಅವರಿಬ್ಬರೂ ಸುಟ್ಟುಹೋದ ಕೋಲಿನಂತಿದ್ದಾರೆ. ಹಿಂದೆ ಅವರು ಬೆಂಕಿಯಿಂದ ಉರಿಯುತ್ತಿದ್ದರು. ಆದರೆ ಈಗ ಅವರು ಕೇವಲ ಹೊಗೆಯಾಡುತ್ತಿದ್ದಾರೆ. ರೆಚೀನ್, ಅರಾಮ್ ಮತ್ತು ರೆಮಲ್ಯನ ಮಗ ಕೋಪಗೊಂಡಿದ್ದಾರೆ. 5 ಅವರು ನಿನ್ನ ವಿರುದ್ಧವಾಗಿ ಕುತಂತ್ರ ನಡಿಸಿದ್ದಾರೆ. 6 ಅವರು, “ನಾವು ಹೋಗಿ ಯೆಹೂದಕ್ಕೆ ವಿರುದ್ಧವಾಗಿ ಯುದ್ಧ ಮಾಡೋಣ. ಯೆಹೂದ ರಾಜ್ಯವನ್ನು ನಾವಿಬ್ಬರೂ ಭಾಗ ಮಾಡಿಕೊಳ್ಳೋಣ ಮತ್ತು ಟಾಬೇಲನ ಮಗನನ್ನು ಯೆಹೂದದ ಹೊಸ ಅರಸನಾಗಿ ಮಾಡೋಣ ಎಂದು ಮಾತಾಡಿಕೊಳ್ಳುತ್ತಿದ್ದಾರೆ.”’”
7 ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ: “ಅವರ ಕುತಂತ್ರವು ನಡೆಯದು. ಅದು ನೆರವೇರದು. 8 ದಮಸ್ಕದಲ್ಲಿ ರೆಚೀನನು ಅರಸನಾಗಿರುವಷ್ಟು ಸಮಯ ಅದು ನಡೆಯದು. ಎಫ್ರಾಯೀಮ್ (ಇಸ್ರೇಲ್) ಈಗ ಒಂದು ದೇಶವಾಗಿದೆ. ಆದರೆ ಇನ್ನು ಅರವತ್ತೈದು ವರ್ಷಗಳೊಳಗೆ ಎಫ್ರಾಯೀಮ್ ಒಂದು ದೇಶವಾಗಿರದು. 9 ಸಮಾರ್ಯವು ಎಫ್ರಾಯೀಮಿನ ರಾಜಧಾನಿಯಾಗಿರುವಷ್ಟು ಕಾಲ ಮತ್ತು ರೆಮಲ್ಯನ ಮಗನು ಸಮಾರ್ಯದಲ್ಲಿ ಅರಸನಾಗಿರುವಷ್ಟು ಕಾಲ ಅವರ ಯೋಜನೆಗಳು ಕೈಗೂಡುವುದಿಲ್ಲ. ನೀನು ಈ ವಾರ್ತೆಯನ್ನು ನಂಬದಿದ್ದರೆ ಜನರು ನಿನ್ನ ಮಾತನ್ನು ನಂಬದಿರಲಿ.”
ಇಮ್ಮಾನುವೇಲ್: ದೇವರು ನಮ್ಮೊಂದಿಗಿದ್ದಾನೆ
10 ಬಳಿಕ ಯೆಹೋವನು ಆಹಾಜನೊಡನೆ ಮಾತನ್ನು ಮುಂದುವರಿಸಿದನು. 11 ಯೆಹೋವನು ಅವನಿಗೆ, “ಇವೆಲ್ಲಾ ಸತ್ಯವೆಂದು ಮನದಟ್ಟು ಮಾಡಿಕೊಳ್ಳಲು ಒಂದು ಗುರುತನ್ನು ಕೇಳಿಕೊ. ನಿನಗೆ ಯಾವ ಗುರುತನ್ನು ಬೇಕಾದರೂ ಕೇಳಿಕೊ. ಆ ಗುರುತು ಆಳವಾದ ನರಕದಿಂದ ಬಂದ ಗುರುತಾದರೂ ಸರಿಯೇ ಅಥವಾ ಉನ್ನತವಾದ ಆಕಾಶದಿಂದ ಬಂದ ಗುರುತಾದರೂ ಸರಿಯೇ, ನಿನಗೆ ದಯಪಾಲಿಸುವೆನು” ಎಂದು ಹೇಳಿದನು.
12 ಅದಕ್ಕೆ ಆಹಾಜನು, “ಇದು ಸತ್ಯವೆಂಬುದಕ್ಕೆ ನಾನು ಯಾವ ಗುರುತನ್ನೂ ಕೇಳಲಾರೆ. ನಾನು ಯೆಹೋವನನ್ನು ಪರೀಕ್ಷಿಸುವುದಿಲ್ಲ” ಎಂದು ಹೇಳಿದನು.
13 ಆಗ ಯೆಶಾಯನು ಹೇಳಿದ್ದೇನೆಂದರೆ, “ದಾವೀದನ ಮನೆತನದವರೇ, ಕಿವಿಗೊಟ್ಟು ಕೇಳಿರಿ. ನೀವು ಜನರ ತಾಳ್ಮೆಯನ್ನು ಪರೀಕ್ಷಿಸುತ್ತೀರಿ. ಆದರೆ ಅದು ನಿಮಗೆ ದೊಡ್ಡ ವಿಷಯವಲ್ಲ. ಆದರೆ ಈಗ ನೀವು ನನ್ನ ದೇವರ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದೀರಿ. 14 ನನ್ನ ಒಡೆಯನಾದ ದೇವರು ನಿಮಗೊಂದು ಗುರುತನ್ನು ಕೊಡುವನು:
ಇಗೋ, ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಮಗನಿಗೆ ಜನ್ಮ ನೀಡುವಳು.
ಆತನಿಗೆ ಇಮ್ಮಾನುವೇಲ್ ಎಂದು ಹೆಸರಿಡುವಳು.
15 ಆತನು ಒಳ್ಳೆಯದನ್ನು ಆರಿಸಿಕೊಳ್ಳಲು ಮತ್ತು ಕೆಟ್ಟದ್ದನ್ನು ನಿರಾಕರಿಸಲು ಕಲಿತುಕೊಳ್ಳುವವರೆಗೆ
ಮೊಸರನ್ನೂ ಜೇನುತುಪ್ಪವನ್ನೂ ತಿನ್ನುವನು.
16 ಆ ಮಗುವು ಒಳ್ಳೆಯದರ ಬಗ್ಗೆ ಮತ್ತು ಕೆಟ್ಟದ್ದರ ಬಗ್ಗೆ ಕಲಿತುಕೊಳ್ಳುವಷ್ಟು ವಯಸ್ಸಾಗುವ ಮೊದಲೇ
ಎಫ್ರಾಯೀಮ್ ದೇಶ ಮತ್ತು ಅರಾಮ್ಯರ ದೇಶ ನಿರ್ಜನವಾಗುವುದು.
ನೀವೀಗ, ಆ ಇಬ್ಬರು ಅರಸರಿಗೆ ಭಯಪಡುತ್ತಿದ್ದೀರಿ.
17 “ಆದರೆ ನೀವು ಯೆಹೋವನಿಗೆ ಭಯಪಡುವವರಾಗಿರಬೇಕು. ಯಾಕೆಂದರೆ ಆತನು ನಿಮಗೆ ಸಂಕಟದ ಕಾಲವನ್ನು ತಂದೊಡ್ಡುವನು. ಅದು ಎಫ್ರಾಯೀಮ್ ಯೆಹೂದದಿಂದ ಅಗಲಿಹೋದ ಸಮಯದಲ್ಲಾದ ಸಂಕಟದಂತಿರುವುದು. ಆ ಸಂಕಟವು ನಿಮ್ಮ ಜನಗಳಿಗೂ ನಿಮ್ಮ ಪೂರ್ವಿಕರ ಕುಟುಂಬಕ್ಕೂ ಬರುವದು. ದೇವರು ಏನು ಮಾಡುವನು? ಆತನು ಅಶ್ಶೂರದ ರಾಜನನ್ನು ನಿಮಗೆ ವಿರುದ್ಧವಾಗಿ ಯುದ್ಧಕ್ಕೆ ಬರಮಾಡುವನು.
18 “ಆ ಸಮಯದಲ್ಲಿ ಯೆಹೋವನು ನೊಣಗಳನ್ನು ಕರೆಯುವನು. ಆ ನೊಣಗಳು ಈಗ ಈಜಿಪ್ಟಿನ ನದಿಗಳ ಸಮೀಪದಲ್ಲಿವೆ. ಯೆಹೋವನು ದುಂಬಿಗಳನ್ನು ಕರೆಯುವನು. ಆ ದುಂಬಿಗಳು ಈಗ ಅಶ್ಶೂರ್ ದೇಶದಲ್ಲಿವೆ. ಈ ವೈರಿಗಳು ನಿಮ್ಮ ದೇಶಕ್ಕೆ ಬಂದು 19 ಮರುಭೂಮಿಯ ಹಳ್ಳಗಳ ಸಮೀಪದಲ್ಲಿರುವ ಬಂಡೆಯ ಸಂದುಗೊಂದುಗಳಲ್ಲಿಯೂ ನೀರಿನ ಬಾವಿಗಳ ಬಳಿಯಲ್ಲಿರುವ ಮುಳ್ಳುಪೊದೆಗಳಲ್ಲಿಯೂ ಶಿಬಿರ ಹಾಕಿಕೊಳ್ಳುವರು. 20 ಯೆಹೋವನು ಅಶ್ಶೂರದವರ ಮೂಲಕ ಯೆಹೂದವನ್ನು ಶಿಕ್ಷಿಸುವನು. ಆತನು ಅಶ್ಶೂರವನ್ನು ಬಾಡಿಗೆಗೆ ತೆಗೆದುಕೊಂಡ ಕ್ಷೌರಿಕನ ಕತ್ತಿಯಂತೆ ತೆಗೆದುಕೊಂಡು ಯೆಹೂದದ ತಲೆಕೂದಲನ್ನೂ ಕೈಕಾಲುಗಳ ಕೂದಲನ್ನೂ ಗಡ್ಡವನ್ನೂ ಬೋಳಿಸಿಬಿಡುವನು.
21 “ಆ ಕಾಲದಲ್ಲಿ ಯಾವನೇ ಆಗಲಿ ಹಸುವನ್ನೂ ಎರಡು ಕುರಿಗಳನ್ನೂ ಸಾಕಿ, 22 ಅವು ಕರೆಯುವ ಹಾಲಿನಿಂದ ಮೊಸರನ್ನು ತಿನ್ನುವನು; ದೇಶದಲ್ಲಿರುವ ಪ್ರತಿಯೊಬ್ಬನೂ ಮೊಸರನ್ನೂ ಜೇನುತುಪ್ಪವನ್ನೂ ತಿಂದು ಜೀವಿಸುವನು. 23 ಒಂದುಸಾವಿರ ದ್ರಾಕ್ಷಾಲತೆಗಳಿರುವ ತೋಟಗಳಿರುತ್ತವೆ. ಪ್ರತಿಯೊಂದು ದ್ರಾಕ್ಷಾಲತೆಯು ಒಂದುಸಾವಿರ ಬೆಳ್ಳಿನಾಣ್ಯಗಳಷ್ಟು ಬೆಲೆಬಾಳುವಂಥದ್ದಾಗಿರುತ್ತದೆ. ಆದರೆ ಅಂಥ ತೋಟಗಳು ಹಣಜಿಗಳಿಂದಲೂ ಮುಳ್ಳುಗಿಡಗಳಿಂದಲೂ ತುಂಬಿಕೊಂಡಿರುವವು. 24 ದೇಶವು ಕಾಡಾಗುವುದರಿಂದ ಜನರು ಬಿಲ್ಲುಬಾಣಗಳೊಡನೆ ಸಂಚರಿಸುವರು. 25 ಒಂದು ಕಾಲದಲ್ಲಿ ಜನರು ಈ ಬೆಟ್ಟಗಳ ಮೇಲೆ ವ್ಯವಸಾಯ ಮಾಡಿ ಬೆಳೆಯನ್ನು ಬೆಳೆಯುತ್ತಿದ್ದರು. ಆದರೆ ಆ ಸಮಯದಲ್ಲಿ ಜನರು ಅಲ್ಲಿಗೆ ಹೋಗುವುದಿಲ್ಲ. ದೇಶವು ಹಣಜಿಯಿಂದಲೂ ಮುಳ್ಳುಗಿಡಗಳಿಂದಲೂ ತುಂಬಿರುವದು. ಆ ಸ್ಥಳಗಳಿಗೆ ದನಕುರಿಗಳು ಮಾತ್ರವೇ ಹೋಗುತ್ತವೆ.”
ಅಶ್ಶೂರವು ಬೇಗನೇ ಬರುವದು
8 ಯೆಹೋವನು ಹೇಳಿದ್ದೇನೆಂದರೆ, “ಒಂದು ದೊಡ್ಡ ಸುರುಳಿಯನ್ನು ತಂದು ಅದರ ಮೇಲೆ ಹೀಗೆ ಲೇಖನಿಯಿಂದ ಬರೆ: ‘ಮಹೇರ್ ಶಾಲಾಲ್ ಹಾಷ್ ಬಜ್.’” (ಇದರರ್ಥ: “ಕೊಳ್ಳೆಗೆ ಅವಸರ, ಸೂರೆಗೆ ಆತುರ.”)
2 ನಾನು ನಂಬಿಗಸ್ತರಾದ ಕೆಲವು ಜನರನ್ನು ಸಾಕ್ಷಿಗೋಸ್ಕರವಾಗಿ ಆರಿಸಿಕೊಂಡೆನು. (ಅವರು ಯಾರೆಂದರೆ, ಯಾಜಕನಾದ ಊರೀಯ ಮತ್ತು ಯೆಬೆರೆಕ್ಯನ ಮಗನಾದ ಜೆಕರ್ಯ.) ನಾನು ಆ ವಾಕ್ಯವನ್ನು ಬರೆಯುವಾಗ ಇವರು ನೋಡುತ್ತಿದ್ದರು. 3 ಆಮೇಲೆ ನಾನು ಒಬ್ಬ ಪ್ರವಾದಿನಿಯ ಬಳಿಗೆ ಹೋದೆನು. ಆಕೆಯನ್ನು ಕೂಡಲು, ಆಕೆ ಗರ್ಭವತಿಯಾಗಿ ಒಬ್ಬ ಮಗನನ್ನು ಹಡೆದಳು. ಆಗ ಯೆಹೋವನು ನನಗೆ, “‘ಆ ಮಗನಿಗೆ ಮಹೇರ್ ಶಾಲಾಲ್ ಹಾಷ್ ಬಜ್’ ಎಂಬ ಹೆಸರನ್ನಿಡು. 4 ಯಾಕೆಂದರೆ ಆ ಮಗನು ಅಪ್ಪಾ, ಅಮ್ಮಾ ಎಂದು ಕರೆಯಲು ತೊಡಗುವ ಮೊದಲೇ ದೇವರು ದಮಸ್ಕ ಮತ್ತು ಸಮಾರ್ಯದ ಎಲ್ಲಾ ಐಶ್ವರ್ಯವನ್ನು ತೆಗೆದು ಅದನ್ನು ಅಶ್ಶೂರದ ಅರಸನಿಗೆ ಕೊಡುವನು” ಎಂದು ಹೇಳಿದನು.
5 ಮತ್ತೆ ಯೆಹೋವನು ನನ್ನೊಂದಿಗೆ ಮಾತನಾಡಿದನು. 6 ನನ್ನ ಒಡೆಯನು ಹೀಗೆಂದನು: “ಈ ಜನರು ನಿಧಾನವಾಗಿ ಹರಿಯುವ ಸಿಲೋವ ಕೊಳದ ನೀರನ್ನು ಸ್ವೀಕರಿಸುವುದಿಲ್ಲ. ಇವರು ರೆಚೀನ್ ಮತ್ತು ರೆಮಲ್ಯನ ಮಗನೊಂದಿಗೆ ಸಂತೋಷದಲ್ಲಿದ್ದಾರೆ. 7 ಯೆಹೋವನಾದ ನಾನು ನಿಮಗೆ ವಿರುದ್ಧವಾಗಿ ಅಶ್ಶೂರದ ಅರಸನನ್ನೂ ಅವನ ಸಮಸ್ತ ಸೈನ್ಯವನ್ನೂ ತರುವೆನು. ಅವರು ಯೂಫ್ರೇಟೀಸ್ ನದಿಯ ರಭಸದ ಪ್ರವಾಹದ ನೀರಿನಂತೆ ಬರುವರು. ಅವರು ನದಿಯ ದಂಡೆಯ ಮೇಲೆ ಏರಿಬರುವ ನೀರಿನಂತಿರುವರು. 8 ಆ ನೀರು ಹೊಳೆಯಿಂದಾಚೆ ಬಂದು ಯೆಹೂದದ ಮೇಲೆ ಹರಿಯುವುದು. ಆ ನೀರು ಏರುತ್ತಾಬಂದು ಯೆಹೂದವನ್ನು ಕುತ್ತಿಗೆಯ ತನಕ ಮುಳುಗಿಸುವದು ಮಾತ್ರವಲ್ಲ ಅದನ್ನು ಸಂಪೂರ್ಣವಾಗಿ ಮುಳುಗಿಸಿಬಿಡುವದು.
“ಇಮ್ಮಾನುವೇಲನೇ, ಈ ಜಲಪ್ರವಾಹವು ಎಲ್ಲಾ ಕಡೆಗಳಿಗೆ ಹಬ್ಬುತ್ತಾ ನಿಮ್ಮ ದೇಶವನ್ನು ಪೂರ್ತಿಯಾಗಿ ಮುಚ್ಚಿಬಿಡುವದು.”
9 ಸಮಸ್ತ ಜನಾಂಗಗಳೇ, ಯುದ್ಧಕ್ಕೆ ಸಿದ್ಧರಾಗಿ!
ನೀವು ಸೋಲುವಿರಿ.
ದೂರದೇಶದವರೇ, ಕೇಳಿರಿ,
ರಣರಂಗಕ್ಕಿಳಿಯಲು ಸಿದ್ಧರಾಗಿ!
ನೀವು ಸೋಲುವಿರಿ.
10 ಯುದ್ಧ ಮಾಡಲು ಯೋಜನೆ ಹಾಕಿರಿ.
ಆದರೆ ನಿಮ್ಮ ಯೋಜನೆಯೆಲ್ಲಾ ನಿಷ್ಫಲವಾಗುವುದು.
ನಿಮ್ಮ ಸೈನ್ಯಕ್ಕೆ ಆಜ್ಞೆಕೊಡಿರಿ.
ಆದರೆ ಅದು ನಿಷ್ಪ್ರಯೋಜಕವಾಗುವುದು.
ಯಾಕೆಂದರೆ ದೇವರು ನಮ್ಮೊಂದಿಗಿದ್ದಾನೆ!
ಯೆಶಾಯನಿಗೆ ಎಚ್ಚರಿಕೆ
11 ಯೆಹೋವನು ತನ್ನ ಮಹಾಶಕ್ತಿಯಿಂದ ನನ್ನೊಡನೆ ಮಾತನಾಡಿದನು. ನಾನು ಇತರರಂತೆ ಇರಬಾರದೆಂದು ಯೆಹೋವನು ನನ್ನನ್ನು ಎಚ್ಚರಿಸಿದನು. ಆತನು ನನಗೆ, 12 “ಪ್ರತಿಯೊಬ್ಬನೂ ‘ಇನ್ನೊಬ್ಬನು ನಿನಗೆ ವಿರುದ್ಧವಾಗಿ ಕೇಡು ಬಗೆಯುತ್ತಾನೆ’ ಎಂದು ಹೇಳುವನು. ಅದನ್ನು ನೀನು ನಂಬಬೇಡ. ಆ ಜನರು ಭಯಪಡುವ ವಿಷಯಗಳಿಗೆ ನೀನು ಭಯಪಡಬೇಡ.
13 “ಸರ್ವಶಕ್ತನಾದ ಯೆಹೋವನೊಬ್ಬನಿಗೇ ನೀನು ಭಯಪಡಬೇಕು. ಆತನನ್ನೇ ನೀನು ಗೌರವಿಸಬೇಕು. ನೀನು ಭಯಪಡಬೇಕಾದದ್ದು ಆತನೊಬ್ಬನಿಗೇ. 14 ನೀನು ಯೆಹೋವನನ್ನು ಪರಿಶುದ್ಧನೆಂದು ಪರಿಗಣಿಸಿ ಗೌರವಿಸಿದರೆ, ಆತನು ನಿನಗೆ ಆಶ್ರಯನಾಗುವನು. ಆದರೆ ನೀನು ಆತನನ್ನು ಸನ್ಮಾನಿಸದೆ ಹೋದರೆ ಆತನು ನಿನಗೆ ಮುಗ್ಗರಿಸುವ ಕಲ್ಲಾಗಿ ಪರಿಣಮಿಸುವನು. ಆತನು ಇಸ್ರೇಲಿನ ಎರಡು ಕುಟುಂಬಗಳವರಿಗೆ ಎಡವುವ ಕಲ್ಲೂ ಮುಗ್ಗರಿಸುವ ಬಂಡೆಯೂ ಆಗಿರುವನು. ಯೆಹೋವನು ಜೆರುಸಲೇಮಿನ ಎಲ್ಲಾ ಜನರನ್ನು ಹಿಡಿಯುವ ಬಲೆಯಾಗಿರುವನು. 15 ಎಷ್ಟೋ ಜನರು ಈ ಬಂಡೆಯಿಂದ ಎಡವಿಬೀಳುವರು. ಅವರು ಬಿದ್ದು ಮುರಿಯಲ್ಪಡುವರು; ಬಲೆಗೆ ಸಿಕ್ಕಿಕೊಳ್ಳುವರು.”
16 ಯೆಹೋವನು, “ಒಡಂಬಡಿಕೆ ಮಾಡಿಕೊಂಡು ಅದಕ್ಕೆ ಮುದ್ರೆಹಾಕು. ಮುಂದಿನ ಪೀಳಿಗೆಗಾಗಿ ನನ್ನ ಬೋಧನೆಯನ್ನು ಜೋಪಾನವಾಗಿರಿಸು. ನನ್ನ ಹಿಂಬಾಲಕರ ಕಣ್ಣೆದುರಿನಲ್ಲೇ ಹೀಗೆ ಮಾಡು” ಎಂದು ಹೇಳಿದನು. 17 ಆ ಒಡಂಬಡಿಕೆಯು ಹೀಗಿತ್ತು:
ನನ್ನ ದೇವರಾದ ಯೆಹೋವನ ಸಹಾಯಕ್ಕಾಗಿ ನಾನು ಕಾಯುತ್ತಿರುವೆನು.
ಯಾಕೋಬನ ಕುಟುಂಬದ ಬಗ್ಗೆ ಯೆಹೋವನು ನಾಚಿಕೊಂಡಿದ್ದಾನೆ.
ಅವರ ಕಡೆ ನೋಡಲು ಆತನು ನಿರಾಕರಿಸುತ್ತಾನೆ.
ಆದರೆ ನಾನು ಯೆಹೋವನನ್ನು ನಿರೀಕ್ಷಿಸುವೆನು.
ಆತನು ನನ್ನನ್ನು ರಕ್ಷಿಸುವನು.
18 “ನಾನೂ ನನ್ನ ಮಕ್ಕಳೂ ಇಸ್ರೇಲ್ ಜನರಿಗೆ ಒಂದು ಗುರುತಾಗಿದ್ದೇವೆ. ಸರ್ವಶಕ್ತನಾದ ಯೆಹೋವನು ನಮ್ಮನ್ನು ಕಳುಹಿಸಿದ್ದಾನೆ. ಆತನು ಚೀಯೋನ್ ಬೆಟ್ಟದಲ್ಲಿ ವಾಸಿಸುತ್ತಾನೆ.”
19 ಕೆಲವರು, “ಏನು ಮಾಡಬೇಕೆಂದು ಕಣಿಹೇಳುವವರನ್ನೂ ಬೇತಾಳಿಕರನ್ನೂ ವಿಚಾರಿಸು” ಎಂದು ಹೇಳುತ್ತಾರೆ. (ಕಣಿಹೇಳುವವರು ತಾವು ಮಂತ್ರಶಕ್ತಿಯುಳ್ಳವರೆಂದು ಜನರಿಗೆ ತೋರಿಸಲು ಪಕ್ಷಿಗಳು ಮಾಡುವ ಶಬ್ದವನ್ನು ಬಾಯಿಂದ ಮಾಡಿ ತಮಗೆ ರಹಸ್ಯಗಳು ಗೊತ್ತಿವೆ ಎಂದು ತೋರಿಸಿಕೊಳ್ಳುತ್ತಾರೆ.) ನಾನು ಹೇಳುವುದೇನೆಂದರೆ, “ಜನರು ಸಹಾಯಕ್ಕಾಗಿ ದೇವರನ್ನೇ ಕೇಳಿಕೊಳ್ಳಬೇಕು. ಆ ಕಣಿಹೇಳುವವರೂ ಬೇತಾಳಿಕರೂ ತಾವು ಏನು ಮಾಡಬೇಕೆಂದು ಸತ್ತವರನ್ನು ವಿಚಾರಿಸುವರು. ಜೀವಿಸುವವರು ಸತ್ತವರನ್ನು ಯಾಕೆ ವಿಚಾರಿಸಬೇಕು?” 20 ನೀವು ಉಪದೇಶಗಳಿಗೂ ಒಡಂಬಡಿಕೆಗೂ ವಿಧೇಯರಾಗಿರಬೇಕು. ನೀವು ಈ ಆಜ್ಞೆಗಳನ್ನು ಅನುಸರಿಸದಿದ್ದರೆ, ತಪ್ಪು ಆಜ್ಞೆಗಳನ್ನು ಹಿಂಬಾಲಿಸುವಿರಿ. ಬೇತಾಳಿಕರಿಂದ, ಕಣಿಹೇಳುವವರಿಂದ ಬರುವ ಆಜ್ಞೆಗಳೇ ತಪ್ಪು ಆಜ್ಞೆಗಳು. ಅವುಗಳಿಗೆ ಯಾವ ಬೆಲೆಯೂ ಇಲ್ಲ. ಅವುಗಳನ್ನು ಅನುಸರಿಸುವುದರಿಂದ ನಿಮಗೆ ಯಾವ ಪ್ರಯೋಜನವೂ ಇಲ್ಲ. 21 ನೀವು ಆ ತಪ್ಪಾದ ಆಜ್ಞೆಗಳನ್ನು ಅನುಸರಿಸಿದರೆ ನಿಮ್ಮ ದೇಶದಲ್ಲಿ ಸಂಕಟವೂ ಹಸಿವೆಯೂ ಉಂಟಾಗುತ್ತವೆ. ಜನರು ಹಸಿವಿನಿಂದ ಬಳಲುವರು. ಆಗ ಅವರಲ್ಲಿ ಸಿಟ್ಟು ಉಂಟಾಗಿ ತಮ್ಮ ಅರಸನನ್ನೂ ಅವನ ದೇವರುಗಳನ್ನೂ ಬೈಯುವರು ಮತ್ತು ಸಹಾಯಕ್ಕಾಗಿ ದೇವರಿಗೆ ಮೊರೆಯಿಡುವರು. 22 ತಮ್ಮ ದೇಶದಲ್ಲಿ ಸುತ್ತಲೂ ನೋಡುವಾಗ ಕೇವಲ ಸಂಕಟಗಳೇ ಕುಗ್ಗಿಸುವ ಕಾರ್ಗತ್ತಲೆಗಳೇ ಕಾಣಿಸುವವು. ಆ ದುಃಖವು ಅವರನ್ನು ದೇಶದಿಂದ ತೊಲಗಿಸಿಬಿಡುವುದು. ಕಾರ್ಗತ್ತಲೆಯಲ್ಲಿ ಸಿಕ್ಕಿಬಿದ್ದ ಜನರಿಗೆ ತಮ್ಮನ್ನು ಬಿಡಿಸಿಕೊಳ್ಳಲಾಗುವುದಿಲ್ಲ.
ಮರಣದಿಂದ ಜೀವಕ್ಕೆ
2 ಮೊದಲು ನಿಮ್ಮ ಆತ್ಮಿಕ ಜೀವಿತಗಳು, ನಿಮ್ಮ ಪಾಪಗಳ ಮತ್ತು ನೀವು ದೇವರಿಗೆ ವಿರುದ್ಧವಾಗಿ ಮಾಡಿದ ಕೆಟ್ಟಕಾರ್ಯಗಳ ದೆಸೆಯಿಂದ ಸತ್ತುಹೋಗಿದ್ದವು. 2 ಹೌದು, ಮೊದಲು ನೀವು ಆ ಪಾಪಗಳನ್ನೇ ಮಾಡುತ್ತಿದ್ದಿರಿ. ಈ ಲೋಕದ ಮಾರ್ಗಗಳಿಗನುಸಾರವಾಗಿ ನೀವು ಜೀವಿಸಿದಿರಿ. ವಾಯುಮಂಡಲದಲ್ಲಿರುವ ದುಷ್ಟಶಕ್ತಿಗಳ ಅಧಿಪತಿಯನ್ನು ನೀವು ಅನುಸರಿಸಿದಿರಿ. ದೇವರಿಗೆ ಅವಿಧೇಯರಾದ ಜನರಲ್ಲಿ ಈಗ ಕಾರ್ಯಮಾಡುತ್ತಿರುವುದು ಅದೇ ಆತ್ಮ. 3 ಮೊದಲು ನಾವೆಲ್ಲರೂ ಆ ಜನರಂತೆಯೇ ಜೀವಿಸುತ್ತಿದ್ದೆವು. ಶರೀರಭಾವದ ನಮ್ಮ ಇಚ್ಛೆಗಳನ್ನು ಪೂರೈಸಲು ನಾವು ಪ್ರಯತ್ನಿಸುತ್ತಿದ್ದೆವು. ನಮ್ಮ ದೇಹ, ಮನಸ್ಸುಗಳು ಬಯಸಿದ್ದನ್ನೆಲ್ಲಾ ನಾವು ಮಾಡಿದೆವು. ನಾವು ದುಷ್ಟಜನರಾಗಿದ್ದೆವು. ನಮ್ಮ ಆ ಜೀವಿತದ ದೆಸೆಯಿಂದ ನಾವು ಆಗಲೇ ದೇವರ ಕೋಪಕ್ಕೆ ಗುರಿಯಾಗಬೇಕಿತ್ತು. ನಮಗೂ ಇತರ ಜನರಿಗೂ ಯಾವ ವ್ಯತ್ಯಾಸವೂ ಇರಲಿಲ್ಲ.
4 ಆದರೆ ಕರುಣಾನಿಧಿಯಾಗಿರುವ ದೇವರು ನಮ್ಮನ್ನು ಬಹಳವಾಗಿ ಪ್ರೀತಿಸಿದನು. 5 ನಾವು ದೇವರಿಗೆ ವಿರುದ್ಧವಾಗಿ ಮಾಡಿದ ಕಾರ್ಯಗಳ ದೆಸೆಯಿಂದ ಸತ್ತವರಾಗಿದ್ದೆವು. ಆದರೆ ನಮ್ಮನ್ನು ಕ್ರಿಸ್ತನೊಂದಿಗೆ ಬದುಕಿಸಿದನು. ನೀವು ದೇವರ ಕೃಪೆಯಿಂದ ರಕ್ಷಣೆ ಹೊಂದಿದವರಾಗಿದ್ದೀರಿ. 6 ದೇವರು ನಮ್ಮನ್ನು ಕ್ರಿಸ್ತನೊಂದಿಗೆ ಎಬ್ಬಿಸಿ ಆತನೊಂದಿಗೆ ಪರಲೋಕದಲ್ಲಿ ಸಿಂಹಾಸನದ ಮೇಲೆ ಕುಳ್ಳಿರಿಸಿದ್ದಾನೆ. ಕ್ರಿಸ್ತ ಯೇಸುವಿನಲ್ಲಿರುವ ನಮಗಾಗಿ ದೇವರು ಇದನ್ನು ಮಾಡಿದನು. 7 ದೇವರು ತನ್ನ ಮಹಾತಿಶಯವಾದ ಕೃಪೆಯನ್ನು ಮುಂದಿನ ಕಾಲದಲ್ಲೆಲ್ಲಾ ತೋರಿಸಬೇಕೆಂದು ಹೀಗೆ ಮಾಡಿದ್ದಾನೆ. ದೇವರು ಈ ಕೃಪೆಯನ್ನು ತನ್ನ ಕರುಣೆಯ ಮೂಲಕ ನಮಗೆ ಕ್ರಿಸ್ತ ಯೇಸುವಿನಲ್ಲಿ ತೋರಿಸುತ್ತಾನೆ.
8 ಆದ್ದರಿಂದ ನೀವು ನಂಬಿಕೆಯ ಮೂಲಕ ದೇವರ ಕೃಪೆಯಿಂದಲೇ ರಕ್ಷಣೆ ಹೊಂದಿದವರಾಗಿದ್ದೀರಿ. ಆ ರಕ್ಷಣೆಯು ನಿಮ್ಮಿಂದ ಉಂಟಾದದ್ದಲ್ಲ, ಅದು ದೇವರ ವರ. 9 ನಿಮಗೆ ರಕ್ಷಣೆ ದೊರೆತದ್ದು ನಿಮ್ಮ ಒಳ್ಳೆಯ ಕಾರ್ಯಗಳಿಂದಲ್ಲ. ಆದ್ದರಿಂದ ತನ್ನನ್ನು ತಾನೇ ರಕ್ಷಿಸಿಕೊಂಡಿರುವುದಾಗಿ ಯಾರೂ ಹೊಗಳಿಕೊಳ್ಳಲು ಸಾಧ್ಯವಿಲ್ಲ. 10 ನಾವು ದೇವರ ನಿರ್ಮಾಣ. ನಾವು ಒಳ್ಳೆಯ ಕಾರ್ಯಗಳನ್ನು ಮಾಡಬೇಕೆಂದು ದೇವರು ನಮ್ಮನ್ನು ಕ್ರಿಸ್ತಯೇಸುವಿನಲ್ಲಿ ಹೊಸ ಜನರನ್ನಾಗಿ ಮಾಡಿದನು. ದೇವರು ನಮಗೋಸ್ಕರವಾಗಿ ಆ ಒಳ್ಳೆಯ ಕಾರ್ಯಗಳನ್ನು ಮೊದಲೇ ಯೋಜನೆ ಮಾಡಿದನು. ನಾವು ಆ ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ಜೀವಿಸಬೇಕೆಂಬುದು ದೇವರ ಯೋಜನೆಯಾಗಿತ್ತು.
ಕ್ರಿಸ್ತನ ಮೂಲಕ ಸಮಾನತ್ವ
11 ನೀವು ಹುಟ್ಟಿದಂದಿನಿಂದ ಅನ್ಯಜನರಾಗಿದ್ದೀರಿ. ನಿಮ್ಮನ್ನು “ಸುನ್ನತಿಯಿಲ್ಲದವರು” ಎಂದು ಯೆಹೂದ್ಯರು ಕರೆಯುತ್ತಾರೆ. ನಿಮ್ಮನ್ನು “ಸುನ್ನತಿಯಿಲ್ಲದವರು” ಎಂದು ಕರೆಯುವ ಯೆಹೂದ್ಯರು ತಮ್ಮ ಬಗ್ಗೆ “ಸುನ್ನತಿಯವರು” ಎಂದು ಹೇಳಿಕೊಳ್ಳುತ್ತಾರೆ. (ಅವರ ಸುನ್ನತಿಯು ಶರೀರದಲ್ಲಿ ಕೈಯಿಂದ ಮಾಡಲ್ಪಡುತ್ತದೆ.) 12 ಪೂರ್ವಕಾಲದಲ್ಲಿ ನೀವು ಕ್ರಿಸ್ತನಿಲ್ಲದವರಾಗಿದ್ದಿರಿ ಎಂಬುದನ್ನು ಜ್ಞಾಪಿಸಿಕೊಳ್ಳಿರಿ. ನೀವು ಇಸ್ರೇಲಿನ ಪ್ರಜೆಗಳಾಗಿರಲಿಲ್ಲ. ದೇವರು ತನ್ನ ಜನರೊಂದಿಗೆ ಮಾಡಿಕೊಂಡಿದ್ದ ವಾಗ್ದಾನಗಳಿಗೆ ಸಂಬಂಧಪಟ್ಟ ಒಡಂಬಡಿಕೆಗಳನ್ನು ನೀವು ಹೊಂದಿರಲಿಲ್ಲ. ನಿಮಗೆ ನಿರೀಕ್ಷೆಯಿರಲಿಲ್ಲ ಮತ್ತು ನೀವು ದೇವರನ್ನು ತಿಳಿದಿರಲಿಲ್ಲ. 13 ಹೌದು, ಒಂದು ಕಾಲದಲ್ಲಿ ನೀವು ದೇವರಿಗೆ ಬಹು ದೂರವಾಗಿದ್ದಿರಿ. ಆದರೆ ಈಗ ನೀವು ಕ್ರಿಸ್ತ ಯೇಸುವಿನ ರಕ್ತದ ಮೂಲಕ ದೇವರಿಗೆ ಸಮೀಪಸ್ಥರಾದಿರಿ.
14 ಕ್ರಿಸ್ತನಿಂದ ಈಗ ನಮಗೆ ಸಮಾಧಾನ ದೊರೆತಿದೆ. ಕ್ರಿಸ್ತನು ಯೆಹೂದ್ಯರನ್ನೂ ಯೆಹೂದ್ಯರಲ್ಲದವರನ್ನೂ ಒಂದೇ ಜನಾಂಗವನ್ನಾಗಿ ಮಾಡಿದ್ದಾನೆ. ಯೆಹೂದ್ಯರೂ ಯೆಹೂದ್ಯರಲ್ಲದವರೂ ತಮ್ಮ ಮಧ್ಯೆ ಒಂದು ಅಡ್ಡಗೋಡೆಯಿದೆಯೋ ಎಂಬಂತೆ ಬೇರ್ಪಟ್ಟಿದ್ದರು. ಅವರು ಒಬ್ಬರನ್ನೊಬ್ಬರು ದ್ವೇಷಿಸಿದರು. ಆದರೆ ಕ್ರಿಸ್ತನು ತನ್ನ ದೇಹವನ್ನೇ ಅರ್ಪಿಸುವುದರ ಮೂಲಕ ದ್ವೇಷವೆಂಬ ಆ ಗೋಡೆಯನ್ನು ಕೆಡವಿದನು. 15 ಯೆಹೂದ್ಯರ ಧರ್ಮಶಾಸ್ತ್ರವು ಅನೇಕ ಆಜ್ಞೆಗಳನ್ನೂ ನಿಯಮಗಳನ್ನೂ ಹೊಂದಿತ್ತು. ಆದರೆ ಕ್ರಿಸ್ತನು ಆ ಧರ್ಮಶಾಸ್ತ್ರವನ್ನು ಅಂತಿಮಗೊಳಿಸಿದನು. ಯೆಹೂದ್ಯರನ್ನು ಮತ್ತು ಯೆಹೂದ್ಯರಲ್ಲದವರನ್ನು ತನ್ನಲ್ಲಿ ಒಂದು ಜನಾಂಗವನ್ನಾಗಿ ಮಾಡಿ ಶಾಂತಿಯನ್ನು ಸ್ಥಾಪಿಸಬೇಕೆಂಬುದೇ ಕ್ರಿಸ್ತನ ಉದ್ದೇಶವಾಗಿತ್ತು. 16 ಈ ಎರಡು ಜನಾಂಗಗಳ ನಡುವೆ ಇದ್ದ ದ್ವೇಷವನ್ನು ಕ್ರಿಸ್ತನು ಶಿಲುಬೆಯ ಮೂಲಕ ಕೊನೆಗೊಳಿಸಿದನು. ಈ ಜನಾಂಗಗಳು ಒಂದೇ ದೇಹವಾದ ಬಳಿಕ ಅವರನ್ನು ದೇವರ ಬಳಿಗೆ ನಡೆಸಬೇಕೆಂಬುದು ಕ್ರಿಸ್ತನ ಬಯಕೆಯಾಗಿತ್ತು. ಶಿಲುಬೆಯ ಮೇಲೆ ಪ್ರಾಣಕೊಡುವುದರ ಮೂಲಕ ಕ್ರಿಸ್ತನು ತನ್ನ ಈ ಬಯಕೆಯನ್ನು ಪೂರೈಸಿದನು. 17 ದೇವರಿಗೆ ದೂರವಾಗಿದ್ದ ನಿಮ್ಮ ಬಳಿಗೂ ಸಮೀಪಸ್ಥರಾಗಿದ್ದವರ ಬಳಿಗೂ ಕ್ರಿಸ್ತನು ಬಂದು ಸಮಾಧಾನದ ಕುರಿತು ಉಪದೇಶಿಸಿದನು. 18 ಹೌದು, ಕ್ರಿಸ್ತನ ಮೂಲಕ ನಾವೆಲ್ಲರೂ ಒಬ್ಬ ಆತ್ಮನಿಂದ ನಮ್ಮ ತಂದೆಯಾದ ದೇವರ ಬಳಿಗೆ ಬರಲು ಶಕ್ತರಾಗಿದ್ದೇವೆ.
19 ಆದ್ದರಿಂದ ಯೆಹೂದ್ಯರಲ್ಲದವರಾದ ನೀವು ಈಗ ವಿದೇಶಿಯರಲ್ಲ ಮತ್ತು ಅನ್ಯಜನರಲ್ಲ. ಈಗ ನೀವು ದೇವರ ಪರಿಶುದ್ಧ ಜನರೊಂದಿಗೆ ಪ್ರಜೆಗಳಾಗಿದ್ದೀರಿ. ನೀವು ದೇವರ ಕುಟುಂಬಕ್ಕೆ ಸೇರಿದವರಾಗಿದ್ದೀರಿ. 20 ವಿಶ್ವಾಸಿಗಳಾದ ನೀವು ದೇವರ ಸ್ವಂತ ಕಟ್ಟಡವಾಗಿದ್ದೀರಿ. ಅಪೊಸ್ತಲರೂ ಪ್ರವಾದಿಗಳೂ ಎಂಬ ಅಸ್ತಿವಾರದ ಮೇಲೆ ಆ ಕಟ್ಟಡವು ಕಟ್ಟಲ್ಪಟ್ಟಿದೆ. ಕ್ರಿಸ್ತನೇ ಆ ಕಟ್ಟಡಕ್ಕೆ ಮೂಲೆಗಲ್ಲಾಗಿದ್ದಾನೆ. 21 ಇಡೀ ಕಟ್ಟಡವು ಕ್ರಿಸ್ತನಲ್ಲಿ ಒಂದಾಗಿ ಸೇರಿಕೊಂಡಿದೆ. ಕ್ರಿಸ್ತನೇ ಅದನ್ನು ಬೆಳೆಯಿಸಿ ಪ್ರಭುವಿನಲ್ಲಿ ಪರಿಶುದ್ಧವಾದ ದೇವಾಲಯವನ್ನಾಗಿ ಮಾಡುತ್ತಾನೆ. 22 ನೀವು ಕ್ರಿಸ್ತನಲ್ಲಿ ಇತರ ಜನರೊಂದಿಗೆ (ಯೆಹೂದ್ಯರೊಂದಿಗೆ) ಕಟ್ಟಲ್ಪಡುತ್ತಿದ್ದೀರಿ. ದೇವರು ತನ್ನ ಆತ್ಮನ ಮೂಲಕ ವಾಸಿಸತಕ್ಕ ನಿವಾಸಸ್ಥಾನವಾಗಿ ನಿರ್ಮಿತರಾಗುತ್ತಿದ್ದೀರಿ.
Kannada Holy Bible: Easy-to-Read Version. All rights reserved. © 1997 Bible League International