Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 1

ಮೊದಲನೆ ಭಾಗ

(ಕೀರ್ತನೆಗಳು 1–41)

ಯಾವನು ದುಷ್ಟರ ಮಾರ್ಗವನ್ನು ಅನುಸರಿಸದೆ,
    ಪಾಪಿಗಳಂತೆ ಜೀವಿಸದೆ,
ದೇವರಿಗೆ ಅವಿಧೇಯರಾದ ಜನರೊಂದಿಗೆ ಸೇರದೆ ಇರುವನೋ
    ಅವನೇ ಭಾಗ್ಯವಂತನು.
ನೀತಿವಂತನಾದ ಅವನು ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಿಸುತ್ತಾ
    ಅದನ್ನೇ ಹಗಲಿರುಳು ಧ್ಯಾನಿಸುವನು.
ಅವನು ನೀರಿನ ಕಾಲುವೆಗಳ ಬಳಿಯಲ್ಲಿ
    ಹುಲುಸಾಗಿ ಬೆಳೆದಿರುವ ಮರದಂತಿರುವನು.
ಆ ಮರವು ತಕ್ಕಕಾಲದಲ್ಲಿ ಫಲಿಸುವುದು;
    ಬಾಡದ ಎಲೆಗಳಿಂದ ಯಾವಾಗಲೂ ತುಂಬಿರುವುದು;
ಅಂತೆಯೇ ಅವನ ಕಾರ್ಯಗಳೆಲ್ಲಾ ಸಫಲವಾಗುವವು.

ದುಷ್ಟರಾದರೋ ಹಾಗಲ್ಲ!
    ಅವರು ಗಾಳಿ ಬಡಿದುಕೊಂಡು ಹೋಗುವ ಹೊಟ್ಟಿನಂತಿರುವರು.
ನ್ಯಾಯತೀರ್ಪಿನ ಕಾಲ ಬಂದಾಗ ದುಷ್ಟರಿಗೆ ಅಪರಾಧಿಗಳೆಂದು ತೀರ್ಪಾಗುವುದು.
    ಪಾಪಿಗಳಿಗೆ ನೀತಿವಂತರ ಮಧ್ಯದಲ್ಲಿ ಸ್ಥಳವಿರುವುದಿಲ್ಲ.
ಯೆಹೋವನು ನೀತಿವಂತರನ್ನು ಸಂರಕ್ಷಿಸುವನು;
    ದುಷ್ಟರನ್ನಾದರೋ ನಾಶಪಡಿಸುವನು.

ಯೆರೆಮೀಯ 17:1-4

ಹೃದಯದ ಮೇಲೆ ಬರೆದ ಅಪರಾಧ

17 “ಯೆಹೂದದ ಜನರ ಅಪರಾಧ
    ಅಳಿಸಲಾಗದ ಸ್ಥಳದಲ್ಲಿ ಬರೆಯಲಾಗಿದೆ.
ಆ ಅಪರಾಧಗಳು ಕಬ್ಬಿಣದ ಲೇಖನಿಯಿಂದ ಕಲ್ಲಿನ ಮೇಲೆ ಕೆತ್ತಲಾಗಿವೆ.
    ಅವರ ಪಾಪಗಳು ವಜ್ರದ ಮೊನೆಯುಳ್ಳ ಲೇಖನಿಯಿಂದ ಕಲ್ಲಿನ ಮೇಲೆ ಕೆತ್ತಲಾಗಿವೆ.
    ಅವರ ಹೃದಯವೇ ಆ ಕಲ್ಲು,
ಆ ಪಾಪಗಳು ಅವರ ಯಜ್ಞವೇದಿಕೆಗಳ ಕೊಂಬುಗಳಲ್ಲಿ ಕೆತ್ತಿವೆ.
ಅವರ ಮಕ್ಕಳು ಸುಳ್ಳುದೇವರುಗಳಿಗೆ ಅರ್ಪಿಸಿದ
    ಯಜ್ಞವೇದಿಕೆಗಳನ್ನು ಜ್ಞಾಪಿಸಿಕೊಳ್ಳುವರು.
ಅವರು ಅಶೇರಳಿಗೆ ಅರ್ಪಿಸಿದ
    ಮರದ ವಿಗ್ರಹಸ್ತಂಭಗಳನ್ನು ಜ್ಞಾಪಿಸಿಕೊಳ್ಳುವರು.
ಅವರು ಸೊಂಪಾಗಿ ಬೆಳೆದ ಮರದ ಕೆಳಗೆ
    ಮತ್ತು ಬೆಟ್ಟಗಳ ಮೇಲೆ ಆ ವಸ್ತುಗಳನ್ನು ಜ್ಞಾಪಿಸಿಕೊಳ್ಳುವರು.
ಅವರು ಆ ವಸ್ತುಗಳನ್ನು ಬೆಟ್ಟಗಳ ಮೇಲೆಯೂ
    ಬಯಲು ಪ್ರದೇಶದಲ್ಲಿಯೂ ಜ್ಞಾಪಿಸಿಕೊಳ್ಳುವರು.
ಯೆಹೂದದ ಜನರಲ್ಲಿ ಭಂಡಾರಗಳಿವೆ.
    ನಾನು ಅವುಗಳನ್ನು ಬೇರೆಯವರಿಗೆ ಒಪ್ಪಿಸುತ್ತೇನೆ.
ನಿಮ್ಮ ದೇಶದಲ್ಲಿದ್ದ ಎಲ್ಲಾ ಉನ್ನತಸ್ಥಳಗಳನ್ನು ಜನರು ನಾಶಮಾಡುವರು.
ಆ ಸ್ಥಳಗಳಲ್ಲಿ ಪೂಜೆಮಾಡಿ
    ನೀವು ಪಾಪಕ್ಕೆ ಗುರಿಯಾಗಿರುವಿರಿ.
ನಾನು ನಿಮಗೆ ಕೊಟ್ಟ ಭೂಮಿಯನ್ನು ನೀವು ಕಳೆದುಕೊಳ್ಳುವಿರಿ.
    ನಿಮ್ಮನ್ನು ನಿಮಗೆ ತಿಳಿಯದ ನಾಡಿನಲ್ಲಿ ನಿಮ್ಮ ಶತ್ರುಗಳ ದಾಸರನ್ನಾಗಿ ಮಾಡುವೆನು.
ಏಕೆಂದರೆ ನನಗೆ ತುಂಬಾ ಕೋಪ ಬಂದಿದೆ.
    ನನ್ನ ಕೋಪವು ಉರಿಯುವ ಜ್ವಾಲೆಯಂತಿದೆ; ನೀವು ಅದರಲ್ಲಿ ಭಸ್ಮವಾಗಿ ಹೋಗುವಿರಿ.”

ಲೂಕ 11:24-28

ಬರಿದಾದ ಹೃದಯ

(ಮತ್ತಾಯ 12:43-45)

24 “ದೆವ್ವವು ಒಬ್ಬ ವ್ಯಕ್ತಿಯಿಂದ ಹೊರಗೆ ಬಂದ ಮೇಲೆ ವಿಶ್ರಾಂತಿಗಾಗಿ ಸ್ಥಳವನ್ನು ಹುಡುಕುತ್ತಾ ನೀರಿಲ್ಲದ ಸ್ಥಳಗಳಲ್ಲಿ ಅಲೆದಾಡುತ್ತದೆ. ಆದರೆ ವಿಶ್ರಮಿಸಿಕೊಳ್ಳಲು ಅದಕ್ಕೆ ಸ್ಥಳ ದೊರೆಯುವುದಿಲ್ಲ. ಆದ್ದರಿಂದ ‘ನಾನು ಬಿಟ್ಟುಬಂದ ಮನೆಗೆ (ವ್ಯಕ್ತಿ) ಹಿಂತಿರುಗುವೆನು’ ಎಂದುಕೊಳ್ಳುತ್ತದೆ. 25 ಅದು ಆ ವ್ಯಕ್ತಿಯ ಬಳಿಗೆ ಹಿಂತಿರುಗಿ ಬಂದಾಗ, ಆ ಮನೆಯನ್ನು (ವ್ಯಕ್ತಿ) ಗುಡಿಸಿ ಅಲಂಕರಿಸಿರುವುದನ್ನು ಕಾಣುತ್ತದೆ. 26 ಆಗ ಹೊರಟುಹೋಗಿ ತನಗಿಂತಲೂ ಹೆಚ್ಚು ಕೆಟ್ಟವುಗಳಾದ ಬೇರೆ ಏಳು ದೆವ್ವಗಳನ್ನು ಕರೆದುಕೊಂಡು ಬರುತ್ತದೆ. ಬಳಿಕ ಆ ದೆವ್ವಗಳೆಲ್ಲಾ ಆ ಮನುಷ್ಯನೊಳಗೆ ಹೋಗಿ ಅಲ್ಲೇ ವಾಸಿಸುತ್ತವೆ. ಆಗ ಆ ವ್ಯಕ್ತಿಯು ಮೊದಲಿಗಿಂತಲೂ ಹೆಚ್ಚಿನ ಸಂಕಟಕ್ಕೆ ಒಳಗಾಗುತ್ತಾನೆ” ಎಂದು ಹೇಳಿದನು.

ನಿಜವಾದ ಭಾಗ್ಯವಂತರು

27 ಯೇಸು ಈ ಸಂಗತಿಗಳನ್ನು ಹೇಳಿದಾಗ, ಅಲ್ಲಿ, ಜನರೊಂದಿಗಿದ್ದ ಒಬ್ಬ ಸ್ತ್ರೀ ಯೇಸುವಿಗೆ, “ನಿನ್ನನ್ನು ಹೆತ್ತು ಪೋಷಿಸಿದ ತಾಯಿ ಭಾಗ್ಯವಂತಳೇ ಸರಿ!” ಎಂದು ಹೇಳಿದಳು.

28 ಆದರೆ ಯೇಸು, “ದೇವರ ವಾಕ್ಯವನ್ನು ಕೇಳಿ ಅದಕ್ಕೆ ವಿಧೇಯರಾಗುವ ಜನರೇ ಭಾಗ್ಯವಂತರು!” ಎಂದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International