Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 150

150 ಯೆಹೋವನಿಗೆ ಸ್ತೋತ್ರವಾಗಲಿ!
ದೇವರನ್ನು ಆತನ ಆಲಯದಲ್ಲಿ ಸ್ತುತಿಸಿರಿ!
    ಆತನ ಶಕ್ತಿಯನ್ನು ಪರಲೋಕದಲ್ಲಿ ಸ್ತುತಿಸಿರಿ!
ಆತನ ಮಹತ್ಕಾರ್ಯಗಳಿಗಾಗಿ ಆತನನ್ನು ಸ್ತುತಿಸಿರಿ!
    ಆತನ ಮಹತ್ವಕ್ಕೆ ತಕ್ಕಂತೆ ಆತನನ್ನು ಸ್ತುತಿಸಿರಿ!
ತುತ್ತೂರಿಗಳನ್ನೂ ಕೊಂಬುಗಳನ್ನೂ ಊದುತ್ತಾ ಆತನನ್ನು ಸ್ತುತಿಸಿರಿ!
    ಹಾರ್ಪ್‌ವಾದ್ಯಗಳನ್ನೂ ಲೈರ್‌ವಾದ್ಯಗಳನ್ನೂ ನುಡಿಸುತ್ತಾ ಆತನನ್ನು ಸ್ತುತಿಸಿರಿ.
ದಮ್ಮಡಿಗಳನ್ನು ಬಡಿಯುತ್ತಾ ಕುಣಿಯುತ್ತಾ ಆತನನ್ನು ಸ್ತುತಿಸಿರಿ.
    ತಂತಿವಾದ್ಯಗಳಿಂದಲೂ ಕೊಳಲುಗಳಿಂದಲೂ ಆತನನ್ನು ಸ್ತುತಿಸಿರಿ.
ತಾಳಗಳಿಂದ ಆತನನ್ನು ಸ್ತುತಿಸಿರಿ!
    ಝಲ್ಲರಿಗಳಿಂದ ಆತನನ್ನು ಸ್ತುತಿಸಿರಿ!

ಸಮಸ್ತ ಜೀವಿಗಳೇ, ಯೆಹೋವನಿಗೆ ಸ್ತೋತ್ರಮಾಡಿರಿ!

ಯೆಹೋವನಿಗೆ ಸ್ತೋತ್ರವಾಗಲಿ!

1 ಸಮುವೇಲನು 17:1-23

ಗೊಲ್ಯಾತನು ಇಸ್ರೇಲರ ಮೇಲೆ ಸ್ಪರ್ಧಿಸಿದ್ದು

17 ಫಿಲಿಷ್ಟಿಯರು ತಮ್ಮ ಸೈನ್ಯವನ್ನು ಯುದ್ಧಕ್ಕಾಗಿ ಯೆಹೂದದೇಶದ ಸೋಕೋವಿನಲ್ಲಿ ಒಟ್ಟುಗೂಡಿಸಿದರು. ಅವರು ಸೋಕೋವಿಗೂ ಅಜೇಕಕ್ಕೂ ಮಧ್ಯದಲ್ಲಿರುವ ಎಫೆಸ್ದಮ್ಮೀಮ್ ಎಂಬ ಹೆಸರಿನ ಪಟ್ಟಣದಲ್ಲಿ ಪಾಳೆಯಮಾಡಿಕೊಂಡರು.

ಸೌಲನು ಮತ್ತು ಇಸ್ರೇಲಿನ ಸೈನಿಕರು ಒಟ್ಟಾಗಿ ಸೇರಿ ಏಲಾ ಕಣಿವೆಯಲ್ಲಿ ಪಾಳೆಯಮಾಡಿಕೊಂಡರು. ಸೌಲನ ಸೈನಿಕರು ಸಾಲಾಗಿನಿಂತು ಫಿಲಿಷ್ಟಿಯರ ಮೇಲೆ ಯುದ್ಧಕ್ಕೆ ಸಿದ್ಧರಾದರು. ಫಿಲಿಷ್ಟಿಯರು ಒಂದು ಗುಡ್ಡದ ಮೇಲೂ ಇಸ್ರೇಲರು ಮತ್ತೊಂದು ಗುಡ್ಡದ ಮೇಲೂ ನಿಂತರು. ಕಣಿವೆಯು ಆ ಎರಡು ಗುಡ್ಡಗಳ ಮಧ್ಯೆ ಇದ್ದಿತು.

ಫಿಲಿಷ್ಟಿಯರಲ್ಲಿ ಗೊಲ್ಯಾತನೆಂಬ ಹೆಸರಿನ ವೀರ ಯೋಧನಿದ್ದನು. ಆತನು ಗತ್ ಊರಿನವನು. ಗೊಲ್ಯಾತನು ಒಂಭತ್ತು ಅಡಿ ಎತ್ತರವಾಗಿದ್ದನು. ಅವನು ಫಿಲಿಷ್ಟಿಯರ ಪಾಳೆಯದಿಂದ ಹೊರಬಂದನು. ಅವನು ತಾಮ್ರದ ಶಿರಸ್ತ್ರಾಣವನ್ನು ಧರಿಸಿದ್ದನು. ಮೀನಿನ ಮೇಲಿರುವ ಚಿಪ್ಪುಗಳಂತಿದ್ದ ತಾಮ್ರದ ಕವಚವನ್ನು ಅವನು ತೊಟ್ಟಿದ್ದನು. ಅದು ನೂರಿಪ್ಪತ್ತೈದು ಪೌಂಡ್‌ಗಳಷ್ಟು ಭಾರವಾಗಿತ್ತು. ಗೊಲ್ಯಾತನು ಕಾಲುಗಳಿಗೂ ತಾಮ್ರದ ಕವಚವನ್ನು ತೊಟ್ಟಿದ್ದನು. ಅವನು ಹೆಗಲಿನಲ್ಲಿ ತಾಮ್ರದ ಈಟಿಯನ್ನು ಕಟ್ಟಿಕೊಂಡಿದ್ದನು. ಗೊಲ್ಯಾತನ ಬರ್ಜಿಯ ಹಿಡಿಕೆಯು ನೇಕಾರರ ಕುಂಟೆಯ ಗಾತ್ರದಷ್ಟಿತ್ತು. ಆ ಬರ್ಜಿಯ ಅಲಗಿನ ಭಾರವು ಹದಿನೈದು ಪೌಂಡ್‌ಗಳಷ್ಟಿತ್ತು. ಗೊಲ್ಯಾತನ ಗುರಾಣಿಯನ್ನು ಹೊತ್ತಿದ್ದ ಅವನ ಸಹಾಯಕನು ಅವನ ಮುಂದೆ ಹೋಗುತ್ತಿದ್ದನು.

ಗೊಲ್ಯಾತನು ಪ್ರತಿದಿನ ಹೊರಕ್ಕೆ ಬಂದು ಇಸ್ರೇಲಿನ ಸೈನಿಕರನ್ನು ಕಂಡು ಆರ್ಭಟಿಸುತ್ತಿದ್ದನು. ಅವನು, “ನೀವೆಲ್ಲ ಸಾಲಾಗಿನಿಂತು ಯುದ್ಧಕ್ಕೆ ಸಿದ್ಧರಾಗಿರುವುದೇಕೆ? ನೀವು ಸೌಲನ ಸೇವಕರು. ನಾನು ಫಿಲಿಷ್ಟಿಯನು, ನೀವು ಒಬ್ಬನನ್ನು ಆರಿಸಿ ನನ್ನೊಡನೆ ಹೋರಾಡಲು ಕಳುಹಿಸಿ. ಅವನು ನನ್ನನ್ನು ಕೊಂದುಬಿಟ್ಟರೆ, ನಾವು ಅಂದರೆ ಫಿಲಿಷ್ಟಿಯರೆಲ್ಲ ನಿಮ್ಮ ಗುಲಾಮರಾಗುತ್ತೇವೆ. ಆದರೆ ನಾನು ಅವನನ್ನು ಸೋಲಿಸಿ ಕೊಂದುಬಿಟ್ಟರೆ, ನೀವೆಲ್ಲ ನಮಗೆ ಗುಲಾಮರಾಗಿದ್ದು ನಮ್ಮ ಸೇವೆಯನ್ನು ಮಾಡಬೇಕು” ಎಂದು ಆರ್ಭಟಿಸಿದನು.

10 ಫಿಲಿಷ್ಟಿಯನು, “ಈ ದಿನ ನಾನು ಇಸ್ರೇಲ್ ಸೈನ್ಯವನ್ನು ಹೀಯಾಳಿಸುವೆನು. ನನ್ನೊಂದಿಗೆ ಹೋರಾಡಲು ನಿಮ್ಮ ಮನುಷ್ಯನೊಬ್ಬನನ್ನು ಕಳುಹಿಸಿ” ಎಂದು ಕೊಚ್ಚಿಕೊಂಡನು.

11 ಸೌಲನು ಮತ್ತು ಅವನ ಸೈನಿಕರು ಗೊಲ್ಯಾತನು ಹೇಳಿದ್ದನ್ನು ಕೇಳಿ ಬಹಳ ಭಯಪಟ್ಟರು.

ದಾವೀದನು ಯುದ್ಧರಂಗದ ಮುಂಭಾಗಕ್ಕೆ ಬರುವನು

12 ದಾವೀದನು ಇಷಯನ ಮಗ. ಇಷಯನು ಯೆಹೂದ ಪ್ರಾಂತ್ಯದ ಬೆತ್ಲೆಹೇಮಿನ ಎಫ್ರಾತ ವಂಶದವನು. ಇಷಯನಿಗೆ ಎಂಟು ಜನ ಮಕ್ಕಳಿದ್ದರು. ಸೌಲನ ಕಾಲಕ್ಕಾಗಲೇ ಇಷಯನು ಮುದುಕನಾಗಿದ್ದನು. 13 ಇಷಯನ ಮೂವರು ಹಿರಿಯ ಮಕ್ಕಳು ಸೌಲನೊಂದಿಗೆ ಯುದ್ಧಕ್ಕೆ ಹೋಗಿದ್ದರು. ಎಲೀಯಾಬನು ಮೊದಲನೆಯ ಮಗ. ಅಬೀನಾದಾಬನು ಎರಡನೆಯ ಮಗ. ಶಮ್ಮನು ಮೂರನೆಯ ಮಗ. 14 ದಾವೀದನು ಎಲ್ಲರಿಗಿಂತ ಕಿರಿಯ ಮಗ. ಅವನಿಗಿಂತ ಹಿರಿಯರಾದ ಮೂವರು ಮಕ್ಕಳು ಸೌಲನ ಸೈನ್ಯದಲ್ಲಿದ್ದರು. 15 ಆದರೆ ದಾವೀದನು ಆಗಾಗ್ಗೆ ಸೌಲನನ್ನು ಬಿಟ್ಟು ತನ್ನ ತಂದೆಯ ಕುರಿಗಳನ್ನು ಕಾಯುವುದಕ್ಕಾಗಿ ಬೆತ್ಲೆಹೇಮಿಗೆ ಹೋಗುತ್ತಿದ್ದನು.

16 ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಗೊಲ್ಯಾತನು ಹೊರಬಂದು ಇಸ್ರೇಲ್ ಸೈನ್ಯಕ್ಕೆ ಎದುರಾಗಿ ನಿಲ್ಲುತ್ತಿದ್ದನು. ಈ ರೀತಿ ಗೊಲ್ಯಾತನು ಇಸ್ರೇಲರನ್ನು ನಲವತ್ತು ದಿನಗಳ ಕಾಲ ಹೀಯಾಳಿಸಿದನು.

17 ಒಂದು ದಿನ ಇಷಯನು ತನ್ನ ಮಗನಾದ ದಾವೀದನಿಗೆ, “ಬೇಯಿಸಿದ ಮೂವತ್ತು ಸೇರು ಕಾಳುಗಳನ್ನು ಮತ್ತು ಹತ್ತು ರೊಟ್ಟಿಗಳನ್ನು ಸೈನ್ಯದಲ್ಲಿರುವ ನಿನ್ನ ಸಹೋದರರಿಗಾಗಿ ತೆಗೆದುಕೊಂಡು ಹೋಗು. 18 ನಿನ್ನ ಸಹೋದರರ ಸಹಸ್ರಾಧಿಪತಿಗೆ ಹತ್ತು ಉಂಡೆ ಗಿಣ್ಣನ್ನೂ ತೆಗೆದುಕೊಂಡು ಹೋಗು. ನಿನ್ನ ಸಹೋದರರ ಕ್ಷೇಮ ಸಮಾಚಾರವನ್ನು ಕೇಳಿಕೊಂಡು, ಅವರು ಕ್ಷೇಮವಾಗಿದ್ದಾರೆಂಬುದಕ್ಕೆ ಒಂದು ಗುರುತನ್ನು ತೆಗೆದುಕೊಂಡು ಬಾ. 19 ನಿನ್ನ ಸಹೋದರರು ಎಲ್ಲಾ ಇಸ್ರೇಲ್ ಸೈನಿಕರಂತೆ ಸೌಲನ ಜೊತೆಯಲ್ಲಿ ಏಲಾ ಕಣಿವೆಯಲ್ಲಿದ್ದಾರೆ. ಅವರು ಫಿಲಿಷ್ಟಿಯರ ವಿರುದ್ಧ ಹೋರಾಡುತ್ತಿದ್ದಾರೆ” ಎಂದು ಹೇಳಿದನು.

20 ದಾವೀದನು ಮಾರನೆಯ ದಿನ ಬೆಳಿಗ್ಗೆ ಕುರುಬನೊಬ್ಬನಿಗೆ ತನ್ನ ಕುರಿಗಳನ್ನು ಕಾಯಲು ಒಪ್ಪಿಸಿದನು. ಇಷಯನು ತಿಳಿಸಿದಂತೆ ದಾವೀದನು ಆಹಾರವನ್ನೆಲ್ಲ ತೆಗೆದುಕೊಂಡು ಹೊರಟನು. ದಾವೀದನು ತನ್ನ ಬಂಡಿಯನ್ನು ಪಾಳೆಯಕ್ಕೆ ಹೊಡೆದುಕೊಂಡು ಹೋದನು. ದಾವೀದನು ಅಲ್ಲಿಗೆ ಬರುವಷ್ಟರಲ್ಲಿ ಸೈನಿಕರೆಲ್ಲರು ಯುದ್ಧಭೂಮಿಗೆ ಹೋಗುವುದರಲ್ಲಿದ್ದರು. ಸೈನಿಕರೆಲ್ಲರು ಆರ್ಭಟಿಸುತ್ತಾ ಯುದ್ಧಭೂಮಿಯಲ್ಲಿ ಸೇರುತ್ತಿದ್ದರು. 21 ಇಸ್ರೇಲರು ಮತ್ತು ಫಿಲಿಷ್ಟಿಯರು ಯುದ್ಧಕ್ಕೆ ಸಿದ್ಧರಾಗಲು ಸಾಲುಸಾಲಾಗಿ ನಿಲ್ಲುತ್ತಿದ್ದರು.

22 ದಾವೀದನು ತಾನು ತಂದಿದ್ದವುಗಳನ್ನು ಕಾವಲುಗಾರನ ಬಳಿಯಲ್ಲಿಟ್ಟು ಇಸ್ರೇಲ್ ಸೈನಿಕರಿದ್ದ ಸ್ಥಳಕ್ಕೆ ಓಡಿಹೋಗಿ ತನ್ನ ಸಹೋದರರ ಬಗ್ಗೆ ವಿಚಾರಿಸಿದನು. 23 ಬಳಿಕ ತನ್ನ ಸಹೋದರರನ್ನು ಕಂಡುಕೊಂಡು ಅವರೊಂದಿಗೆ ಮಾತಾಡತೊಡಗಿದನು. ಆ ಸಮಯದಲ್ಲಿ ಗತ್ ದೇಶದ ಗೊಲ್ಯಾತನೆಂಬ ಹೆಸರಿನ ಫಿಲಿಷ್ಟಿಯ ರಣವೀರನು ಆ ಸೇನೆಯಿಂದ ಹೊರಬಂದನು. ಗೊಲ್ಯಾತನು ಎಂದಿನಂತೆ ಇಸ್ರೇಲರ ವಿರುದ್ಧ ಆರ್ಭಟಿಸಿದನು. ದಾವೀದನಿಗೆ ಅವನ ಆರ್ಭಟವು ಕೇಳಿಸಿತು.

ಅಪೊಸ್ತಲರ ಕಾರ್ಯಗಳು 5:12-16

ದೇವರ ಸೂಚಕಕಾರ್ಯಗಳು

12 ಅಪೊಸ್ತಲರು ಅನೇಕ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿದರು. ಜನರೆಲ್ಲರೂ ಆ ಕಾರ್ಯಗಳನ್ನು ನೋಡಿದರು. ಅಪೊಸ್ತಲರು ಒಟ್ಟಾಗಿ ಸೊಲೊಮೋನನ ಮಂಟಪದಲ್ಲಿರುತ್ತಿದ್ದರು. ಅವರೆಲ್ಲರ ಉದ್ದೇಶ ಒಂದೇ ಆಗಿತ್ತು. 13 ಅವರೊಂದಿಗೆ ನಿಂತುಕೊಳ್ಳಲು ತಮಗೂ ಯೋಗ್ಯತೆ ಇದೆಯೆಂದು ಬೇರೆ ಯಾರಿಗೂ ಅನ್ನಿಸಲಿಲ್ಲ. ಜನರೆಲ್ಲರೂ ಅಪೊಸ್ತಲರ ಬಗ್ಗೆ ಒಳ್ಳೆಯ ಸಂಗತಿಗಳನ್ನು ಹೇಳುತ್ತಿದ್ದರು. 14 ಮತ್ತು ಹೆಚ್ಚುಹೆಚ್ಚು ಜನರು ಪ್ರಭುವನ್ನು ನಂಬಿಕೊಂಡರು. ಅನೇಕ ಸ್ತ್ರೀಯರೂ ಪುರುಷರೂ ವಿಶ್ವಾಸಿಗಳ ಸಮುದಾಯಕ್ಕೆ ಸೇರುತ್ತಿದ್ದರು. 15 ಹೀಗಿರಲು, ಪೇತ್ರನು ದಾರಿಯಲ್ಲಿ ಹೋಗುತ್ತಾನೆಂಬ ಸುದ್ದಿಯನ್ನು ಕೇಳಿದ ಜನರು ಕಾಯಿಲೆಯವರನ್ನು ಬೀದಿಗಳಿಗೆ ಹೊತ್ತುಕೊಂಡು ಬಂದು ಹಾಸಿಗೆ ಮತ್ತು ಡೋಲಿಗಳ ಮೇಲೆ ಮಲಗಿಸುತ್ತಿದ್ದರು. ಪೇತ್ರನ ನೆರಳು ಬಿದ್ದರೆ ಸಾಕು, ಕಾಯಿಲೆಯವರು ಗುಣಮುಖರಾಗುತ್ತಾರೆಂದು ಜನರು ಯೋಚಿಸಿಕೊಂಡಿದ್ದರು. 16 ಜೆರುಸಲೇಮಿನ ಸುತ್ತಮುತ್ತಲಿನ ಊರುಗಳಿಂದೆಲ್ಲಾ ಜನರು ಬರುತ್ತಿದ್ದರು. ಅವರು ಕಾಯಿಲೆಯವರನ್ನೂ ದೆವ್ವಪೀಡಿತರಾಗಿದ್ದವರನ್ನೂ ಹೊತ್ತುಕೊಂಡು ಬರುತ್ತಿದ್ದರು. ಈ ಜನರೆಲ್ಲರಿಗೂ ಗುಣವಾಯಿತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International