Revised Common Lectionary (Semicontinuous)
71 ಯೆಹೋವನೇ, ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ;
ಎಂದಿಗೂ ಆಶಾಭಂಗಪಡಿಸಬೇಡ.
2 ನೀನು ನೀತಿವಂತನಾಗಿರುವುದರಿಂದ ನನ್ನನ್ನು ರಕ್ಷಿಸುವೆ; ಬಿಡುಗಡೆಮಾಡುವೆ.
ನನಗೆ ಕಿವಿಗೊಟ್ಟು ನನ್ನನ್ನು ರಕ್ಷಿಸು.
3 ನೀನೇ ನನ್ನ ಸಂರಕ್ಷಣೆಯ ಆಶ್ರಯಗಿರಿಯಾಗಿರು.
ನನ್ನನ್ನು ರಕ್ಷಿಸಲು ಆಜ್ಞಾಪಿಸು.
ನೀನೇ ನನ್ನ ಬಂಡೆಯೂ ಕೋಟೆಯೂ ಆಗಿರುವೆ.
4 ನನ್ನ ದೇವರೇ, ದುಷ್ಟರಿಂದಲೂ
ಕ್ರೂರವಾದ ಕೆಟ್ಟವರಿಂದಲೂ ನನ್ನನ್ನು ರಕ್ಷಿಸು.
5 ನನ್ನ ಒಡೆಯನೇ, ನನ್ನ ಬಾಲ್ಯದಿಂದಲೂ
ನೀನೇ ನನ್ನ ನಿರೀಕ್ಷೆಯೂ ಭರವಸವೂ ಆಗಿರುವೆ.
6 ನಾನು ಹುಟ್ಟಿದಂದಿನಿಂದಲೂ ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ.
ನಾನು ಜನಿಸಿದಂದಿನಿಂದಲೂ ನೀನೇ ನನಗೆ ಆಧಾರವಾಗಿರುವೆ.
ನಾನು ನಿನ್ನನ್ನು ಕೊಂಡಾಡುತ್ತಲೇ ಇರುವೆನು.
1 ಇವು ಯೆರೆಮೀಯನ ಸಂದೇಶಗಳು. ಯೆರೆಮೀಯನು ಹಿಲ್ಕೀಯನೆಂಬುವನ ಮಗನು. ಯೆರೆಮೀಯನು ಅನಾತೋತ್ ನಗರದ ಯಾಜಕ ಕುಟುಂಬಕ್ಕೆ ಸೇರಿದವನಾಗಿದ್ದನು. ಆ ನಗರವು ಬೆನ್ಯಾಮೀನ್ಯರ ಪ್ರದೇಶದಲ್ಲಿತ್ತು. 2 ಯೆಹೂದದಲ್ಲಿ ಆಮೋನನ ಮಗನಾದ ಯೋಷೀಯನ ಆಳ್ವಿಕೆಯ ಹದಿಮೂರನೆಯ ವರ್ಷದಲ್ಲಿ ಯೆಹೋವನು ಯೆರೆಮೀಯನೊಂದಿಗೆ ಮಾತನಾಡಲು ಪ್ರಾರಂಭಿಸಿದನು. 3 ಯೆಹೋಯಾಕೀಮನು ಯೆಹೂದದಲ್ಲಿ ಆಳುವಾಗಲೂ ಯೆಹೋವನು ಯೆರೆಮೀಯನೊಂದಿಗೆ ಮಾತನಾಡುವದನ್ನು ಮುಂದುವರೆಸಿದನು. ಯೆಹೋಯಾಕೀಮನು ಯೋಷೀಯನ ಮಗನು. ಯೆಹೂದದಲ್ಲಿ ಚಿದ್ಕೀಯನು ಆಳಿದ ಹನ್ನೊಂದು ವರ್ಷ ಐದು ತಿಂಗಳ ಕಾಲ ಯೆಹೋವನು ಯೆರೆಮೀಯನೊಂದಿಗೆ ಮಾತನಾಡುವದನ್ನು ಮುಂದುವರೆಸಿದನು. ಚಿದ್ಕೀಯನು ಸಹ ಯೋಷೀಯನ ಮಗನಾಗಿದ್ದನು. ಚಿದ್ಕೀಯನ ಆಳ್ವಿಕೆಯ ಹನ್ನೊಂದನೇ ವರ್ಷದ ಐದನೆಯ ತಿಂಗಳಿನಲ್ಲಿ ಜೆರುಸಲೇಮಿನ ನಿವಾಸಿಗಳು ಸೆರೆ ಒಯ್ಯಲ್ಪಟ್ಟರು.
ಎರಡು ದರ್ಶನಗಳು
11 ಯೆಹೋವನಿಂದ ನನಗೆ ಈ ಸಂದೇಶ ಬಂದಿತು: “ಯೆರೆಮೀಯನೇ, ನಿನಗೆ ಏನು ಕಾಣುತ್ತಿದೆ?” ಎಂದು ಯೆಹೋವನು ಕೇಳಿದನು.
ನಾನು ಆತನಿಗೆ, “ಬಾದಾಮಿಯ ಮರದಿಂದ ಮಾಡಿದ ಒಂದು ದಂಡ ಕಾಣಿಸುತ್ತಿದೆ” ಎಂದು ಉತ್ತರಕೊಟ್ಟೆನು.
12 ಆಗ ಯೆಹೋವನು, “ನೀನು ಸರಿಯಾಗಿ ನೋಡಿರುವೆ, ನನ್ನ ಮಾತನ್ನು ನೆರವೇರಿಸಲು ಎಚ್ಚರಗೊಂಡಿದ್ದೇನೆ” ಎಂದು ತಿಳಿದುಕೊ ಎಂಬುದಾಗಿ ಹೇಳಿದನು.
13 ಇನ್ನೊಂದು ಸಲ ಯೆಹೋವನು, “ನಿನಗೆ ಏನು ಕಾಣುತ್ತಿದೆ?” ಎಂದು ಕೇಳಿದನು.
ನಾನು ಯೆಹೋವನಿಗೆ, “ಕುದಿಯುವ ನೀರಿನ ಒಂದು ಹಂಡೆ ಕಾಣುತ್ತಿದೆ. ಆ ಹಂಡೆಯು ಉತ್ತರದಿಂದ ಈ ಕಡೆಗೆ ಬಾಗಿಕೊಂಡಿದೆ” ಎಂದು ಉತ್ತರಿಸಿದೆನು.
14 ಯೆಹೋವನು ನನಗೆ, “ಉತ್ತರ ದಿಕ್ಕಿನಿಂದ
ಈ ದೇಶದ ನಿವಾಸಿಗಳೆಲ್ಲರ ಮೇಲೆ ಒಂದು ಕೇಡು ಬರುವದು.
15 ಸ್ವಲ್ಪ ಸಮಯದಲ್ಲಿಯೇ ನಾನು ಉತ್ತರ ರಾಜ್ಯಗಳ ಎಲ್ಲಾ ಜನರನ್ನು ಕರೆಯುತ್ತೇನೆ” ಎಂದನು.
ಮತ್ತೆ ಯೆಹೋವನು ಹೀಗೆ ಹೇಳಿದನು:
“ಆ ದೇಶಗಳ ರಾಜರು ಬರುವರು.
ಅವರು ಜೆರುಸಲೇಮಿನ ಹೆಬ್ಬಾಗಿಲಿನ ಹತ್ತಿರ ತಮ್ಮ ಆಸನಗಳನ್ನು ಹಾಕುವರು.
ಅವರು ಜೆರುಸಲೇಮಿನ ಎಲ್ಲಾ ಕೋಟೆಗೋಡೆಗಳಿಗೆ ಮುತ್ತಿಗೆಹಾಕುವರು.
ಅವರು ಯೆಹೂದ ಪ್ರದೇಶದ ಎಲ್ಲಾ ನಗರಗಳ ಮೇಲೆ ಧಾಳಿ ಮಾಡುವರು.
16 ನಾನು ನನ್ನ ಜನರ ವಿರುದ್ಧ ನನ್ನ ನ್ಯಾಯನಿರ್ಣಯವನ್ನು ಘೋಷಿಸುವೆನು.
ಅವರು ಕೆಟ್ಟ ಜನರು, ಅವರು ನನ್ನ ವಿರೋಧಿಗಳಾಗಿದ್ದಾರೆ.
ನನ್ನ ಜನರು ನನ್ನನ್ನು ತ್ಯಜಿಸಿದ್ದಾರೆ.
ಅವರು ನನ್ನನ್ನು ಹೇಗೆ ತ್ಯಜಿಸಿದರು?
ಅವರು ಅನ್ಯದೇವರುಗಳಿಗೆ ಹೋಮ ಮಾಡಿದರು.
ಅವರು ತಮ್ಮ ಕೈಗಳಿಂದಲೇ ಮಾಡಿದ ವಿಗ್ರಹಗಳನ್ನು ಪೂಜಿಸಿದರು.
17 “ಯೆರೆಮೀಯನೇ, ಸಿದ್ಧನಾಗು! ಎದ್ದುನಿಲ್ಲು!
ನಾನು ಹೇಳಿದ್ದೆಲ್ಲವನ್ನು ಜನರಿಗೆ ಹೇಳು.
ಅವರಿಗೆ ಹೆದರಬೇಡ.
ನೀನು ಅವರಿಗೆ ಹೆದರಿಕೊಂಡರೆ,
ನಾನು ನಿನ್ನನ್ನು ಅವರೆದುರಿನಲ್ಲಿ ಹೆದರಿಸುವೆನು.
18 ಇಗೋ, ನೀನು ನನ್ನ ವಿಷಯವಾಗಿ ಹೇಳಬೇಕು.
ನಾನು ನಿನ್ನನ್ನು ಭದ್ರವಾದ ನಗರವನ್ನಾಗಿಯೂ
ಕಬ್ಬಿಣದ ಕಂಬವನ್ನಾಗಿಯೂ
ಕಂಚಿನ ಗೋಡೆಯನ್ನಾಗಿಯೂ ಮಾಡುತ್ತೇನೆ.
ನೀನು ದೇಶದಲ್ಲಿ ಎಲ್ಲರಿಗೂ ಎದುರಾಗಿ ನಿಲ್ಲಬಹುದು,
ಯೆಹೂದ ದೇಶದ ರಾಜರ ವಿರುದ್ಧವಾಗಿಯೂ
ಯೆಹೂದದ ನಾಯಕರ ವಿರುದ್ಧವಾಗಿಯೂ
ಯೆಹೂದದ ಯಾಜಕರ ವಿರುದ್ಧವಾಗಿಯೂ
ಯೆಹೂದದೇಶದ ಜನರ ವಿರುದ್ಧವಾಗಿಯೂ ನೀನು ನಿಲ್ಲುವೆ.
19 ಆ ಜನರೆಲ್ಲಾ ನಿನ್ನ ವಿರುದ್ಧ ಹೋರಾಡುವರು,
ಆದರೆ ಅವರು ನಿನ್ನನ್ನು ಸೋಲಿಸಲಾಗುವುದಿಲ್ಲ.
ಏಕೆಂದರೆ ನಾನೇ ನಿನ್ನೊಂದಿಗೆ ಇರುವೆನು.
ನಾನೇ ನಿನ್ನನ್ನು ರಕ್ಷಿಸುವೆನು.”
ಇದು ಯೆಹೋವನಾದ ನನ್ನ ಮಾತು.
ಯೇಸು ಸಬ್ಬತ್ದಿನಕ್ಕೆ ಒಡೆಯನು
(ಮತ್ತಾಯ 12:1-8; ಮಾರ್ಕ 2:23-28)
6 ಒಂದಾನೊಂದು ಸಬ್ಬತ್ದಿನದಲ್ಲಿ ಯೇಸು ಪೈರಿನ ಹೊಲಗಳನ್ನು ಹಾದುಹೋಗುತ್ತಿದ್ದನು. ಆತನ ಶಿಷ್ಯರು ತೆನೆಗಳನ್ನು ಕಿತ್ತು, ಕೈಗಳಲ್ಲಿ ಹೊಸಕಿ ಕಾಳನ್ನು ತಿಂದರು. 2 ಕೆಲವು ಫರಿಸಾಯರು, “ನೀವು ಸಬ್ಬತ್ದಿನದಲ್ಲಿ ಹೀಗೆ ಮಾಡುವುದು ಮೋಶೆಯ ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿದೆ” ಎಂದು ಹೇಳಿದರು.
3 ಅದಕ್ಕೆ ಯೇಸು, “ದಾವೀದನು ಮತ್ತು ಅವನ ಸಂಗಡಿಗರು ಹಸಿದಿದ್ದಾಗ ದಾವೀದನು ಏನು ಮಾಡಿದನೆಂಬುದನ್ನು ನೀವು ಓದಿದ್ದೀರಿ. 4 ದಾವೀದನು ದೇವರ ಮಂದಿರದೊಳಕ್ಕೆ ಹೋಗಿ, ದೇವರಿಗೆ ಸಮರ್ಪಿಸಿದ್ದ ರೊಟ್ಟಿಯನ್ನು ತೆಗೆದುಕೊಂಡು ತಿಂದನು. ತನ್ನ ಜೊತೆ ಇದ್ದ ಜನರಿಗೂ ಸ್ವಲ್ಪ ಕೊಟ್ಟನು. ಇದು ಮೋಶೆಯ ಧರ್ಮಶಾಸ್ತ್ರಕ್ಕೆ ವಿರುದ್ಧ. ಯಾಜಕರು ಮಾತ್ರವೇ ಈ ರೊಟ್ಟಿಯನ್ನು ತಿನ್ನಬಹುದು ಎಂದು ಧರ್ಮಶಾಸ್ತ್ರ ಹೇಳುತ್ತದೆ” ಎಂದು ಉತ್ತರಿಸಿ, 5 “ಮನುಷ್ಯಕುಮಾರನು ಸಬ್ಬತ್ ದಿನಕ್ಕೂ ಒಡೆಯನಾಗಿದ್ದಾನೆ” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International