Revised Common Lectionary (Semicontinuous)
ರಚನೆಗಾರ: ದಾವೀದ.
58 ಅಧಿಪತಿಗಳೇ, ನಿಮ್ಮ ತೀರ್ಪುಗಳು ನ್ಯಾಯವಾಗಿವೆಯೋ?
ನ್ಯಾಯಾಧಿಪತಿಗಳೇ, ನಿಮ್ಮ ತೀರ್ಪುಗಳು ಯಥಾರ್ಥವಾಗಿವೆಯೋ?
2 ಇಲ್ಲ, ನಿಮ್ಮ ಆಲೋಚನೆಗಳೆಲ್ಲಾ ದುಷ್ಟತನವೇ;
ನೀವು ಭೂಲೋಕದಲ್ಲಿ ತೂಗಿಕೊಡುವುದು ಅನ್ಯಾಯವನ್ನೇ.
3 ಆ ದುಷ್ಟರು ಹುಟ್ಟಿದಾಕ್ಷಣದಿಂದ ತಪ್ಪನ್ನು ಮಾಡತೊಡಗಿದರು.
ಅವರು ಹುಟ್ಟಿದಂದಿನಿಂದ ಸುಳ್ಳುಗಾರರಾಗಿದ್ದಾರೆ.
4 ಅವರ ಕೋಪವು ನಾಗರಹಾವಿನ ವಿಷದಷ್ಟೇ ಅಪಾಯಕರ.[a]
ಕಿವುಡು ನಾಗರಹಾವಿನಂತೆ ಅವರು ಸತ್ಯಕ್ಕೆ ಕಿವಿಗೊಡುವುದಿಲ್ಲ.
5 ಕಿವುಡು ನಾಗರಹಾವುಗಳು ಹಾವಾಡಿಗರ ಕೊಳಲ ನಾದವನ್ನು ಕೇಳಲಾರವು.
ಆ ದುಷ್ಟರು ದುಷ್ಟಾಲೋಚನೆಗಳನ್ನು ಮಾಡುವಾಗ ಕಿವುಡು ನಾಗರಹಾವುಗಳಂತಿರುವರು.
6 ಯೆಹೋವನೇ, ಅವರು ಸಿಂಹಗಳಂತಿದ್ದಾರೆ.
ದೇವರೇ, ಅವರ ಹಲ್ಲುಗಳನ್ನು ಮುರಿದುಹಾಕು.
7 ಹರಿದು ಕಾಣದೆಹೋಗುವ ನೀರಿನಂತೆ ಆ ಜನರು ಕಾಣದೆ ಹೋಗಲಿ.
ಹಾದಿಯ ಮೇಲಿರುವ ಕಳೆಯಂತೆ ಅವರು ಜಜ್ಜಿಹೋಗಲಿ.
8 ಬಸವನಹುಳಗಳು ದಾರಿಯಲ್ಲೇ ಕರಗಿಹೋಗುವಂತೆ ಅವರೂ ಕರಗಿಹೋಗಲಿ.
ಗರ್ಭದಲ್ಲೇ ಸತ್ತುಹೋದ ಮಗುವಿನಂತೆ ಅವರು ಹಗಲನ್ನು ಕಾಣದಂತಾಗಲಿ.
9 ಒಲೆಯಲ್ಲಿ ಉರಿದುಹೋಗುವ ಮುಳ್ಳುಕಡ್ಡಿಗಳನ್ನು
ಗಾಳಿಯು ಹಾರಿಸಿಬಿಡುವಂತೆ ದೇವರ ಉಗ್ರಕೋಪವು ಅವರನ್ನು ನಾಶಮಾಡಲಿ.
10 ದುಷ್ಟರಿಗಾಗುವ ಪ್ರತಿದಂಡನೆಯನ್ನು
ನೀತಿವಂತರು ಕಂಡು ಹರ್ಷಿಸುವರು;
ಆ ದುಷ್ಟರ ರಕ್ತದಲ್ಲಿ ಕಾಲಾಡಿಸುವರು.
11 ಆಗ ಜನರೆಲ್ಲರು, “ನೀತಿವಂತರಿಗೆ ಪ್ರತಿಫಲ ಸಿಕ್ಕೇಸಿಕ್ಕುವುದು;
ಲೋಕಕ್ಕೆ ತೀರ್ಪು ನೀಡುವ ದೇವರಿರುವುದು ಸತ್ಯವೇ ಸರಿ” ಎಂದು ಹೇಳುವರು.
23 “ಯೆಹೂದವೇ, ‘ನಾನು ತಪ್ಪಿತಸ್ಥಳಲ್ಲವೆಂದೂ ನಾನು ಬಾಳನ ವಿಗ್ರಹಗಳನ್ನು ಪೂಜಿಸಲಿಲ್ಲವೆಂದೂ’
ನೀನು ನನಗೆ ಹೇಗೆ ಹೇಳುವೆ?
ನೀನು ಕಣಿವೆಯಲ್ಲಿ ಮಾಡಿದ ಕಾರ್ಯಗಳ ಬಗ್ಗೆ ಯೋಚಿಸು.
ನೀನು ಮಾಡಿದ ಕೆಲಸಗಳ ಬಗ್ಗೆ ಯೋಚಿಸು.
ನೀನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಓಡಿಹೋಗುವ
ತೀವ್ರಗತಿಯ ಹೆಣ್ಣು ಒಂಟೆಯಂತೆ ಇರುವೆ.
24 ನೀನು ಮರುಭೂಮಿಯಲ್ಲಿ ವಾಸಿಸುವ ಕಾಡುಕತ್ತೆಯಂತೆ ಇರುವೆ.
ಅದು ಬೆದೆಯ ಕಾಲದಲ್ಲಿ ಗಾಳಿಯನ್ನು ಮೂಸಿ ನೋಡುತ್ತದೆ.
ಅದಕ್ಕೆ ಬೆದೆ ಏರಿದಾಗ ಯಾರೂ ಅದನ್ನು ಹಿಡಿಯಲು ಸಾಧ್ಯವಿಲ್ಲ.
ಅದು ಬೆದೆಗೆ ಬಂದಾಗ ಅದನ್ನು ಇಷ್ಟಪಡುವ ಪ್ರತಿಯೊಂದು ಗಂಡು ಕತ್ತೆಗೆ ಅದು ಲಭಿಸುವುದು.
ಆಗ ಅದನ್ನು ಪಡೆಯುವುದು ಬಹಳ ಸುಲಭ.
25 ಯೆಹೂದವೇ, ವಿಗ್ರಹಗಳ ಬೆನ್ನುಹತ್ತಿ ಹೋಗುವದನ್ನು ನಿಲ್ಲಿಸು!
ಆ ಅನ್ಯದೇವರುಗಳ ಬಗ್ಗೆ ನಿನ್ನಲ್ಲಿರುವ ಬಯಕೆಯನ್ನು ತೊರೆದುಬಿಡು.
ಆದರೆ ನೀನು ‘ಹಾಗೆ ಮಾಡಿದರೆ ಪ್ರಯೋಜನವೇನು?
ನಾನು ಅವುಗಳನ್ನು ಬಿಡಲಾರೆ.
ನಾನು ಆ ಅನ್ಯದೇವರುಗಳನ್ನು ಪ್ರೀತಿಸುತ್ತೇನೆ.
ನಾನು ಅವುಗಳನ್ನು ಪೂಜಿಸಬಯಸುತ್ತೇನೆ’ ಎಂದು ಹೇಳುವೆ.
26 “ಜನರ ಕೈಗೆ ಸಿಕ್ಕಿಬಿದ್ದಾಗ
ಕಳ್ಳನಿಗೆ ನಾಚಿಕೆಯಾಗುತ್ತದೆ.
ಅದೇ ರೀತಿಯಲ್ಲಿ ಇಸ್ರೇಲ್ ವಂಶವು ನಾಚಿಕೆಪಡುತ್ತದೆ.
ರಾಜರು ಮತ್ತು ನಾಯಕರು ನಾಚಿಕೆಪಡುವರು.
ಯಾಜಕರು ಮತ್ತು ಪ್ರವಾದಿಗಳು ನಾಚಿಕೆಪಡುವರು.
27 ಅವರು ಮರದ ತುಂಡುಗಳೊಡನೆ ಮಾತನಾಡಿ,
‘ನೀನು ನಮ್ಮ ತಂದೆ’ ಎಂದು ಹೇಳುವರು.
ಆ ಜನರು ಕಲ್ಲುಬಂಡೆಯೊಂದಿಗೆ ಮಾತನಾಡಿ,
‘ನೀನು ನಮಗೆ ಜನ್ಮಕೊಟ್ಟ ತಾಯಿ’ ಎಂದು ಹೇಳುವರು.
ಆ ಜನರೆಲ್ಲರು ನಾಚಿಕೆಪಡುವರು.
ಅವರು ನನ್ನ ಕಡೆಗೆ ನೋಡುವದಿಲ್ಲ.
ಅವರು ನನಗೆ ವಿಮುಖರಾಗಿದ್ದಾರೆ.
ಆದರೆ ಯೆಹೂದದ ಜನರು ಕಷ್ಟದಲ್ಲಿ ಸಿಕ್ಕಿಹಾಕಿಕೊಂಡಾಗ,
‘ಬಾ ನಮ್ಮನ್ನು ರಕ್ಷಿಸು’ ಎಂದು ನನ್ನನ್ನು ಕೇಳುತ್ತಾರೆ.
28 ಆ ವಿಗ್ರಹಗಳು ಬಂದು ನಿಮ್ಮನ್ನು ರಕ್ಷಿಸಲಿ, ನೀವು ಮಾಡಿದ ವಿಗ್ರಹಗಳು ಎಲ್ಲಿವೆ?
ನೀವು ಕಷ್ಟದಲ್ಲಿದ್ದಾಗ ಆ ವಿಗ್ರಹಗಳು ಬಂದು ನಿಮ್ಮನ್ನು ರಕ್ಷಿಸುವವೇ ಎಂಬುದನ್ನು ನೋಡೋಣ.
ಯೆಹೂದದ ನಿವಾಸಿಗಳೇ, ನಿಮ್ಮಲ್ಲಿ ಎಷ್ಟು ಪಟ್ಟಣಗಳಿವೆಯೋ ಅಷ್ಟು ವಿಗ್ರಹಗಳಿವೆ.
29 “ನೀವು ನನ್ನೊಂದಿಗೆ ಏಕೆ ಚರ್ಚೆಮಾಡುವಿರಿ,
ನೀವೆಲ್ಲರೂ ನನ್ನ ವಿರುದ್ಧ ದಂಗೆ ಎದ್ದಿದ್ದೀರಿ”
ಎನ್ನುತ್ತಾನೆ ಯೆಹೋವನು.
30 “ಯೆಹೂದದ ಜನರೇ ನಾನು ನಿಮ್ಮನ್ನು ಶಿಕ್ಷಿಸಿದೆ,
ಆದರೆ ಅದರಿಂದ ಪ್ರಯೋಜನವಾಗಲಿಲ್ಲ.
ಶಿಕ್ಷಿಸಿದರೂ ನೀವು ಹಿಂತಿರುಗಿ ಬರಲಿಲ್ಲ.
ನಿಮ್ಮಲ್ಲಿಗೆ ಬಂದ ಪ್ರವಾದಿಗಳನ್ನು ನೀವು ಕತ್ತಿಯಿಂದ ಕೊಂದುಹಾಕಿದಿರಿ.
ನೀವು ಅಪಾಯಕಾರಿಯಾದ ಸಿಂಹದಂತಿದ್ದು ಪ್ರವಾದಿಗಳನ್ನು ಕೊಂದುಹಾಕಿದಿರಿ.”
31 ಈ ಪೀಳಿಗೆಯ ಜನರೇ, ಯೆಹೋವನ ಸಂದೇಶದ ಕಡೆಗೆ ಗಮನ ಕೊಡಿ,
“ಇಸ್ರೇಲಿನ ಜನರಿಗೆ ನಾನು ಮರಳುಗಾಡಿನಂತೆ ಇರುವೆನೇ?
ನಾನು ಗಾಢಾಂಧಕಾರಮಯವಾದ ಮತ್ತು ಅಪಾಯಕಾರಿಯಾದ ಭೂಮಿಯಂತೆ ಇರುವೆನೇ?
ನನ್ನ ಜನರು, ‘ನಮಗೆ ಇಷ್ಟವಾದ ಮಾರ್ಗವನ್ನು ಅನುಸರಿಸಲು ನಾವು ಸ್ವತಂತ್ರರಾಗಿದ್ದೇವೆ.
ಯೆಹೋವನೇ, ನಾವು ಪುನಃ ನಿನ್ನಲ್ಲಿಗೆ ಬರುವದಿಲ್ಲ’ ಎಂದು ಹೇಳುತ್ತಾರೆ.
ಅವರು ಹಾಗೆ ಏಕೆ ಹೇಳುತ್ತಾರೆ?
32 ಯುವತಿಯು ತನ್ನ ಆಭರಣಗಳನ್ನು ಮರೆಯುವಳೇ? ಇಲ್ಲ.
ವಧುವು ಮದುವೆಯ ಉಡುಪನ್ನು ಧರಿಸಿಕೊಳ್ಳಲು ಮರೆಯುವಳೇ? ಇಲ್ಲ.
ಆದರೆ ನನ್ನ ಜನರು ನನ್ನನ್ನು ಅಸಂಖ್ಯಾತ ದಿನಗಳವರೆಗೆ ಮರೆತುಬಿಟ್ಟಿದ್ದಾರೆ.
33 “ಯೆಹೂದವೇ, ಪ್ರಿಯತಮನ ಬೆನ್ನುಹತ್ತಿ ಹೋಗುವದು ನಿನಗೆ ಗೊತ್ತು.
ಆದಕಾರಣ ದುರಾಭ್ಯಾಸವನ್ನು ನೀನು ಕಲಿತುಕೊಂಡಿರುವೆ.
34 ನಿನ್ನ ಕೈಗಳ ಮೇಲೆ ರಕ್ತದ ಕಲೆ ಇದೆ.
ಅದು ನಿರ್ದೋಷಿಗಳಾದ ಬಡವರ ರಕ್ತ.
ಅವರು ನಿನ್ನ ಕೈಗೆ ಸಿಕ್ಕಿಹಾಕಿಕೊಂಡ ಕಳ್ಳರಾಗಿರಲಿಲ್ಲ.
ಆದರೂ ನೀನು ಅವರನ್ನು ಕೊಲೆ ಮಾಡಿರುವೆ.
ನೀನು ಅಂಥ ಕೆಟ್ಟ ಕೆಲಸವನ್ನು ಮಾಡಿರುವೆ.
35 ಆದರೆ ನೀನು, ‘ನಾನು ತಪ್ಪು ಮಾಡಿಲ್ಲ.
ದೇವರು ನನ್ನ ಮೇಲೆ ಕೋಪಗೊಂಡಿಲ್ಲ’ ಎಂದು ಹೇಳುತ್ತಿರುವೆ.
ಆದ್ದರಿಂದ ನೀನು ಸುಳ್ಳು ಹೇಳಿದ ಅಪರಾಧಿಯೆಂದು ನಾನು ನಿನಗೆ ತೀರ್ಪುನೀಡುತ್ತೇನೆ.
ಏಕೆಂದರೆ ‘ನಾನು ಯಾವ ತಪ್ಪೂ ಮಾಡಿಲ್ಲ’ ಎಂದು ನೀನು ಹೇಳಿಕೊಳ್ಳುತ್ತಿರುವೆ.
36 ನಿನ್ನ ವಿಚಾರಗಳನ್ನು ಬದಲಾಯಿಸುವದು ನಿನಗೆ ಸುಲಭ.
ಅಸ್ಸೀರಿಯಾ ನಿನ್ನನ್ನು ನಿರಾಶೆಗೊಳಿಸಿತು.
ಆಗ ನೀನು ಅಸ್ಸೀರಿಯರನ್ನು ಬಿಟ್ಟು ಈಜಿಪ್ಟಿನ ಸಹಾಯವನ್ನು ಕೇಳಿದೆ,
ಈಜಿಪ್ಟ್ ನಿನ್ನನ್ನು ನಿರಾಶೆಗೊಳಿಸುತ್ತದೆ.
37 ಕೊನೆಗೆ ನೀನು ಈಜಿಪ್ಟನ್ನು ಬಿಡುವೆ, ನಾಚಿಕೆಯಿಂದ
ತಲೆಯ ಮೇಲೆ ಕೈಯಿಟ್ಟುಕೊಂಡು ಹೊರಡುವೆ.
ನೀನು ಆ ದೇಶಗಳನ್ನು ನಂಬಿರುವೆ,
ಆದರೆ ಆ ದೇಶಗಳಿಂದ ನಿನಗೆ ಯಾವ ಅನುಕೂಲವೂ ಆಗದು.
ಯೆಹೋವನು ಆ ದೇಶಗಳನ್ನು ನಿರಾಕರಿಸಿದ್ದಾನೆ.”
7 ನಿಮ್ಮ ಸಭಾನಾಯಕರನ್ನು ನೆನಪು ಮಾಡಿಕೊಳ್ಳಿ. ಅವರು ನಿಮಗೆ ದೇವರ ಸಂದೇಶವನ್ನು ಬೋಧಿಸಿದರು. ಅವರು ಹೇಗೆ ಜೀವಿಸಿದ್ದರು ಮತ್ತು ಹೇಗೆ ಸತ್ತರು ಎಂಬುದನ್ನು ನೆನಪಿಸಿಕೊಳ್ಳಿ. ಅವರ ನಂಬಿಕೆಯನ್ನು ಅನುಸರಿಸಿರಿ. 8 ಯೇಸು ಕ್ರಿಸ್ತನು ನಿನ್ನೆ ಇದ್ದಂತೆ ಇಂದಿಗೂ ಇದ್ದಾನೆ. ಸದಾಕಾಲ ಹಾಗೆಯೇ ಇರುವನು. 9 ನಿಮ್ಮನ್ನು ತಪ್ಪು ಮಾರ್ಗಕ್ಕೆ ಎಳೆಯುವಂತಹ ಅನ್ಯೋಪದೇಶಗಳ ಕಡೆಗೆ ಗಮನಕೊಡಬೇಡಿ. ನಿಮ್ಮ ಹೃದಯಗಳು ದೇವರ ಕೃಪೆಯಿಂದ ಬಲವಾಗಬೇಕೇ ಹೊರತು ಆಹಾರದ ನಿಯಮಗಳ ಪಾಲನೆಯಿಂದಲ್ಲ. ಆ ನಿಯಮಗಳ ಪಾಲನೆಯು ಜನರಿಗೆ ಸಹಾಯಕವಾಗುವುದಿಲ್ಲ.
10 ನಮಗೊಂದು ಯಜ್ಞವಿದೆ. ಪವಿತ್ರ ಗುಡಾರದಲ್ಲಿ ಸೇವೆ ಸಲ್ಲಿಸುತ್ತಿರುವ ಯಾಜಕರು ನಮ್ಮ ಯಜ್ಞದಿಂದ ತಿನ್ನಲಾಗುವುದಿಲ್ಲ. 11 ಪ್ರಧಾನಯಾಜಕನು ಪಶುಗಳ ರಕ್ತವನ್ನು ಮಹಾ ಪವಿತ್ರಸ್ಥಳದೊಳಕ್ಕೆ ತೆಗೆದುಕೊಂಡು ಹೋಗುತ್ತಾನೆ. ಅವನು ಪಾಪಗಳಿಗಾಗಿ ಆ ರಕ್ತವನ್ನು ಅರ್ಪಿಸುತ್ತಾನೆ. ಆದರೆ ಆ ಪಶುಗಳ ದೇಹಗಳು ಪಾಳೆಯದ ಆಚೆ ಸುಡಲ್ಪಡುತ್ತವೆ. 12 ಆದ್ದರಿಂದ ಯೇಸುವು ನಗರದ ಹೊರಗಡೆ ಸಂಕಟವನ್ನು ಅನುಭವಿಸಿದನು. ಆತನು ತನ್ನ ಜನರನ್ನು ಪವಿತ್ರರನ್ನಾಗಿಸಲು, ತನ್ನ ಸ್ವಂತ ರಕ್ತವನ್ನೇ ಅರ್ಪಿಸಿ ಸತ್ತನು. 13 ನಾವು ಪಾಳೆಯದ ಹೊರಗಡೆಯಲ್ಲಿರುವ ಆತನ ಬಳಿಗೆ ಹೋಗಬೇಕು. ಆತನಿಗಾದ ಅಪಮಾನವನ್ನು ನಾವೂ ಸ್ವೀಕರಿಸಿಕೊಳ್ಳಬೇಕು. 14 ಈ ಲೋಕದಲ್ಲಿ ಶಾಶ್ವತವಾಗಿರುವ ನಗರವೇ ಇಲ್ಲ. ಆದರೆ ನಾವು ಮುಂದೆ ಬರುವ ನಗರಕ್ಕಾಗಿ ಕಾಯುತ್ತಿದ್ದೇವೆ. 15 ಆದ್ದರಿಂದ ಆತನ ಮೂಲಕ ನಾವು ದೇವರಿಗೆ ಯಜ್ಞಗಳನ್ನು ಅರ್ಪಿಸುವುದನ್ನು ನಿಲ್ಲಿಸಬಾರದು. ಆತನೇ ಪ್ರಭುವೆಂದು ನಮ್ಮ ಬಾಯಿಂದ ಅರಿಕೆ ಮಾಡುವುದೇ ನಾವು ಅರ್ಪಿಸುವ ಯಜ್ಞವಾಗಿದೆ. 16 ಇದಲ್ಲದೆ ಪರೋಪಕಾರವನ್ನೂ ದಾನಧರ್ಮವನ್ನೂ ಮರೆಯದಿರಿ. ಇವೇ ದೇವರಿಗೆ ಸಮರ್ಪಕವಾದ ಯಜ್ಞಗಳು.
17 ನಿಮ್ಮ ಸಭಾನಾಯಕರಿಗೆ ವಿಧೇಯರಾಗಿರಿ ಮತ್ತು ಅವರ ಅಧಿಕಾರದ ಅಧೀನದಲ್ಲಿರಿ. ಅವರೇ ನಿಮಗೆ ಜವಾಬ್ದಾರರು. ಅವರು ನಿಮ್ಮ ಆತ್ಮಗಳನ್ನು ಕಾಯುವವರಾಗಿದ್ದಾರೆ. ಅವರು ಈ ಕಾರ್ಯವನ್ನು ವ್ಯಸನದಿಂದ ಮಾಡದೆ ಸಂತೋಷದಿಂದ ಮಾಡಲು ಸಾಧ್ಯವಾಗುವಂತೆ ಅವರಿಗೆ ವಿಧೇಯರಾಗಿರಿ. ಅವರ ಕಾರ್ಯವನ್ನು ಕಷ್ಟಕರವನ್ನಾಗಿ ಮಾಡುವುದರಿಂದ ನಿಮಗೇನೂ ಪ್ರಯೋಜನವಿಲ್ಲ.
18 ನಮಗೋಸ್ಕರ ಪ್ರಾರ್ಥಿಸುವುದನ್ನು ಮುಂದುವರಿಸಿರಿ. ನಾವು ಯಾವಾಗಲೂ ಉತ್ತಮ ಕಾರ್ಯಗಳನ್ನು ಮಾಡಲು ಪ್ರಯತ್ನಿಸುವುದರಿಂದ, ನಮ್ಮ ಹೃದಯಗಳು ಶುದ್ಧವಾಗಿವೆ ಎಂಬ ನಂಬಿಕೆ ನಮಗಿದೆ. 19 ದೇವರು ನನ್ನನ್ನು ನಿಮ್ಮ ಬಳಿಗೆ ಬೇಗನೆ ಕಳುಹಿಸುವಂತೆ ನೀವು ಆತನಲ್ಲಿ ಪ್ರಾರ್ಥನೆಯನ್ನು ಮಾಡಬೇಕೆಂದು ನಾನು ಬೇಡಿಕೊಳ್ಳುತ್ತೇನೆ. ನನಗೆ ಅತ್ಯಗತ್ಯವಾದದ್ದು ಇದೇ.
20-21 ಶಾಂತಿಸ್ವರೂಪನಾದ ದೇವರು ನಿಮಗೆ ಬೇಕಾದ ತನ್ನ ವರದಾನಗಳನ್ನು ದಯಪಾಲಿಸಲಿ ಎಂದು ನಾನು ಆತನಲ್ಲಿ ಪ್ರಾರ್ಥಿಸುತ್ತೇನೆ. ಏಕೆಂದರೆ ಆಗ ನೀವು ಆತನ ಇಷ್ಟಕ್ಕನುಸಾರವಾದವುಗಳನ್ನೆಲ್ಲಾ ಮಾಡಲು ಸಾಧ್ಯವಾಗುವುದು. ತನ್ನ ರಕ್ತವನ್ನು ಸುರಿಸಿ ಸಭೆಯೆಂಬ ಹಿಂಡಿಗೆ ಮಹಾಕುರುಬನಾಗಿರುವ ನಮ್ಮ ಪ್ರಭುವಾದ ಯೇಸುವನ್ನು ಸತ್ತವರೊಳಗಿಂದ ಮೇಲಕ್ಕೆ ಎಬ್ಬಿಸಿದವನು ದೇವರೇ. ಆತನ ರಕ್ತವು ಶಾಶ್ವತವಾದ ಹೊಸ ಒಡಂಬಡಿಕೆಯನ್ನಾರಂಭಿಸಿತು. ದೇವರು ತನಗೆ ಸಂತೋಷವನ್ನು ಉಂಟುಮಾಡುವ ಕಾರ್ಯಗಳನ್ನು ಯೇಸು ಕ್ರಿಸ್ತನ ಮೂಲಕ ನಮ್ಮಲ್ಲಿ ನಡೆಸಲಿ. ಯೇಸುವಿಗೆ ಎಂದೆಂದಿಗೂ ಮಹಿಮೆಯಾಗಲಿ. ಆಮೆನ್.
Kannada Holy Bible: Easy-to-Read Version. All rights reserved. © 1997 Bible League International