Revised Common Lectionary (Semicontinuous)
ಮೊದಲನೆ ಭಾಗ
(ಕೀರ್ತನೆಗಳು 1–41)
1 ಯಾವನು ದುಷ್ಟರ ಮಾರ್ಗವನ್ನು ಅನುಸರಿಸದೆ,
ಪಾಪಿಗಳಂತೆ ಜೀವಿಸದೆ,
ದೇವರಿಗೆ ಅವಿಧೇಯರಾದ ಜನರೊಂದಿಗೆ ಸೇರದೆ ಇರುವನೋ
ಅವನೇ ಭಾಗ್ಯವಂತನು.
2 ನೀತಿವಂತನಾದ ಅವನು ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಿಸುತ್ತಾ
ಅದನ್ನೇ ಹಗಲಿರುಳು ಧ್ಯಾನಿಸುವನು.
3 ಅವನು ನೀರಿನ ಕಾಲುವೆಗಳ ಬಳಿಯಲ್ಲಿ
ಹುಲುಸಾಗಿ ಬೆಳೆದಿರುವ ಮರದಂತಿರುವನು.
ಆ ಮರವು ತಕ್ಕಕಾಲದಲ್ಲಿ ಫಲಿಸುವುದು;
ಬಾಡದ ಎಲೆಗಳಿಂದ ಯಾವಾಗಲೂ ತುಂಬಿರುವುದು;
ಅಂತೆಯೇ ಅವನ ಕಾರ್ಯಗಳೆಲ್ಲಾ ಸಫಲವಾಗುವವು.
4 ದುಷ್ಟರಾದರೋ ಹಾಗಲ್ಲ!
ಅವರು ಗಾಳಿ ಬಡಿದುಕೊಂಡು ಹೋಗುವ ಹೊಟ್ಟಿನಂತಿರುವರು.
5 ನ್ಯಾಯತೀರ್ಪಿನ ಕಾಲ ಬಂದಾಗ ದುಷ್ಟರಿಗೆ ಅಪರಾಧಿಗಳೆಂದು ತೀರ್ಪಾಗುವುದು.
ಪಾಪಿಗಳಿಗೆ ನೀತಿವಂತರ ಮಧ್ಯದಲ್ಲಿ ಸ್ಥಳವಿರುವುದಿಲ್ಲ.
6 ಯೆಹೋವನು ನೀತಿವಂತರನ್ನು ಸಂರಕ್ಷಿಸುವನು;
ದುಷ್ಟರನ್ನಾದರೋ ನಾಶಪಡಿಸುವನು.
18 ನನಗೆ ಅರ್ಥಮಾಡಿಕೊಳ್ಳಲು ಕಷ್ಟವಾದ ಮೂರು ಸಂಗತಿಗಳಿವೆ; ನಿಜವಾಗಿಯೂ ನಾಲ್ಕು ಸಂಗತಿಗಳನ್ನು ನಾನು ಅರ್ಥಮಾಡಿಕೊಳ್ಳಲಾರೆ: 19 ಆಕಾಶದಲ್ಲಿ ಹಾರುವ ಹದ್ದಿನ ರೀತಿ, ಬಂಡೆಯ ಮೇಲೆ ಹರಿದಾಡುವ ಹಾವು, ಸಮುದ್ರದ ಮೇಲೆ ಸಂಚರಿಸುವ ಹಡಗು ಮತ್ತು ಹೆಂಗಸನ್ನು ಪ್ರೇಮಿಸುತ್ತಿರುವ ಗಂಡಸು.
20 ವ್ಯಭಿಚಾರಿಣಿಯ ನಡತೆಯು ಇದೇ. ಆಕೆ ಊಟ ಮಾಡುವಳು, ಬಾಯಿ ಒರಸಿಕೊಳ್ಳುವಳು ಮತ್ತು ತಾನು ಯಾವ ತಪ್ಪನ್ನೂ ಮಾಡಿಲ್ಲವೆಂದು ಹೇಳುವಳು.
21 ಭೂಮಿಯ ಮೇಲೆ ಕೇಡುಮಾಡುವ ಮೂರು ಸಂಗತಿಗಳಿವೆ; ನಿಜವಾಗಿಯೂ ನಾಲ್ಕು ಸಂಗತಿಗಳನ್ನು ಭೂಮಿಯು ತಾಳಲಾಗದು: 22 ರಾಜನಾದ ಸೇವಕ, ತನಗೆ ಅಗತ್ಯವಿರುವ ಪ್ರತಿಯೊಂದನ್ನು ಪಡೆದಿರುವ ಮೂಢ, 23 ಪ್ರೀತಿಯನ್ನು ಕಂಡಿಲ್ಲದಿದ್ದರೂ ಮದುವೆಯಾಗುವ ಸ್ತ್ರೀ ಮತ್ತು ತನ್ನ ಯಜಮಾನಿಯ ಸ್ಥಾನವನ್ನು ಕಸಿದುಕೊಳ್ಳುವ ಸೇವಕಿ.
24 ಭೂಮಿಯ ಮೇಲೆ ನಾಲ್ಕು ಪ್ರಾಣಿಗಳಿವೆ. ಆದರೆ ಈ ಪ್ರಾಣಿಗಳು ತುಂಬ ವಿವೇಕವುಳ್ಳವುಗಳಾಗಿವೆ.
25 ಇರುವೆಗಳು ಸಣ್ಣಗಿವೆ ಮತ್ತು ಬಲಹೀನವಾಗಿವೆ. ಆದರೆ ಅವು ಸುಗ್ಗೀಕಾಲದಲ್ಲಿ ತಮ್ಮ ಆಹಾರವನ್ನು ಕೂಡಿಸಿಟ್ಟುಕೊಳ್ಳುತ್ತವೆ.
26 ಬೆಟ್ಟದ ಮೊಲ ಬಲಿಷ್ಠವಾದ ಪ್ರಾಣಿಯಾಗಿಲ್ಲದಿದ್ದರೂ ಅವು ಬಂಡೆಗಳಲ್ಲಿ ತಮಗೆ ಮನೆಗಳನ್ನು ಮಾಡಿಕೊಳ್ಳಬಲ್ಲವು.
27 ಮಿಡತೆಗಳಿಗೆ ರಾಜನಿಲ್ಲದಿದ್ದರೂ ಅವು ಗುಂಪುಗುಂಪಾಗಿ ಹೋಗುತ್ತವೆ.
28 ಹಲ್ಲಿಗಳನ್ನು ನಿಮ್ಮ ಕೈಗಳಲ್ಲಿ ಹಿಡಿದುಕೊಳ್ಳಬಹುದು. ಅವು ಅಷ್ಟು ಸಣ್ಣವು. ಆದರೆ ಅವು ರಾಜನ ಮನೆಗಳಲ್ಲಿಯೂ ವಾಸಿಸುತ್ತವೆ.
29 ಮೂರು ಪ್ರಾಣಿಗಳಿವೆ: ಅವು ನಡೆಯುವಾಗ ಗಂಭೀರತೆಯು ಎದ್ದುಕಾಣುತ್ತದೆ. ನಿಜವಾಗಿಯೂ ನಾಲ್ಕು ಇವೆ:
30 ಸಿಂಹವು ಎಲ್ಲಾ ಪ್ರಾಣಿಗಳಲ್ಲಿ ಅತಿ ಬಲಿಷ್ಠವಾದದ್ದು; ಅದು ಯಾವುದಕ್ಕೂ ಭಯಪಡುವುದಿಲ್ಲ.
31 ಬಹು ಹೆಮ್ಮೆಯಿಂದ ನಡೆಯುವ ಬೇಟೆನಾಯಿ;
ಹೋತ ಮತ್ತು
ತನ್ನ ಜನರ ನಡುವೆ ಇರುವ ರಾಜ.
32 ನೀನು ನಿನ್ನನ್ನು ಹೆಚ್ಚಿಸಿಕೊಂಡು ಮೂಢನಾಗಿದ್ದರೆ, ಕೆಡುಕನ್ನು ಆಲೋಚಿಸುತ್ತಿದ್ದರೆ, ಸ್ವಲ್ಪ ಯೋಚಿಸು.
33 ಹಾಲನ್ನು ಕರೆಯುವವನು ಬೆಣ್ಣೆಮಾಡುವನು. ಮತ್ತೊಬ್ಬನ ಮೂಗನ್ನು ಹೊಡೆದರೆ ರಕ್ತ ಬರುವುದು. ಅಂತೆಯೇ, ನೀನು ಜನರನ್ನು ಕೋಪಗೊಳಿಸಿದರೆ, ಜಗಳವನ್ನು ಎಬ್ಬಿಸುವೆ.
25 ಸಹೋದರ ಸಹೋದರಿಯರೇ, ನಿಮ್ಮನ್ನು ನೀವೇ ಬುದ್ಧಿವಂತರೆಂದು ಎಣಿಸಿಕೊಳ್ಳದಂತೆ ಇದುವರೆಗೆ ರಹಸ್ಯವಾಗಿದ್ದ ಸತ್ಯವನ್ನು ನಿಮಗೆ ತಿಳಿಸುತ್ತೇನೆ. ಅದೇನೆಂದರೆ: ಇಸ್ರೇಲಿನ ಜನರಲ್ಲಿ ಒಂದು ಪಾಲು ಮಂದಿ ಮೊಂಡರಾದರು. ಆದರೆ ಯೆಹೂದ್ಯರಲ್ಲದ ಜನರೆಲ್ಲರೂ ದೇವರ ಬಳಿಗೆ ಬಂದಾಗ ಅವರ ಮೊಂಡತನವು ಇಲ್ಲವಾಗುವುದು. 26 ಹೀಗೆ ಎಲ್ಲಾ ಇಸ್ರೇಲರು ರಕ್ಷಣೆ ಹೊಂದುವರು. ಪವಿತ್ರ ಗ್ರಂಥದಲ್ಲಿ ಹೀಗೆ ಬರೆಯಲ್ಪಟ್ಟಿದೆ:
“ಸಿಯೋನಿನಿಂದ ರಕ್ಷಕನು ಬರುವನು:
ಆತನು ಯಾಕೋಬನ ಕುಟುಂಬದಿಂದ ಎಲ್ಲಾ ದುಷ್ಟತನವನ್ನು ನಿವಾರಣೆ ಮಾಡುವನು.
27 ನಾನು ಆ ಜನರ ಪಾಪಗಳನ್ನು ಪರಿಹರಿಸುವಾಗ
ಅವರೊಂದಿಗೆ ಈ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು.”(A)
28 ಯೆಹೂದ್ಯರು ಸುವಾರ್ತೆಯನ್ನು ಸ್ವೀಕರಿಸಿಕೊಳ್ಳಲಿಲ್ಲ. ಆದ್ದರಿಂದ ಅವರು ದೇವರ ಶತ್ರುಗಳಾಗಿದ್ದಾರೆ. ಯೆಹೂದ್ಯರಲ್ಲದ ಜನರಿಗೆ ಸಹಾಯವಾಗಲೆಂದೇ ಇದಾಯಿತು. ಆದರೆ ಯೆಹೂದ್ಯರು ಇನ್ನೂ ದೇವರಿಂದ ಆರಿಸಲ್ಪಟ್ಟ ಜನರಾಗಿದ್ದಾರೆ. ಆದ್ದರಿಂದ ಆತನು ಪಿತೃಗಳೊಂದಿಗೆ ತಾನು ಮಾಡಿಕೊಂಡ ಒಡಂಬಡಿಕೆಯ ನಿಮಿತ್ತ ಅವರನ್ನು ಪ್ರೀತಿಸುತ್ತಾನೆ. 29 ಆತನು, ತಾನು ಕರೆಯುವ ಜನರ ವಿಷಯವಾಗಿಯೂ ತಾನು ಅವರಿಗೆ ಕೊಡುವ ವರಗಳ ವಿಷಯವಾಗಿಯೂ ತನ್ನ ಮನಸ್ಸನ್ನು ಬದಲಾಯಿಸುವುದೇ ಇಲ್ಲ; ತಾನು ಜನರಿಗೆ ನೀಡಿದ ಕರೆಯನ್ನು ಹಿಂತೆಗೆದುಕೊಳ್ಳುವುದೇ ಇಲ್ಲ. 30 ಒಂದು ಕಾಲದಲ್ಲಿ ನೀವು ಆತನಿಗೆ ವಿಧೇಯರಾಗಿರಲಿಲ್ಲ. ಈಗಲಾದರೋ ನೀವು ಕರುಣೆಯನ್ನು ಹೊಂದಿಕೊಂಡಿರಿ. ಏಕೆಂದರೆ ಅವರು (ಯೆಹೂದ್ಯರು) ಆತನಿಗೆ ಅವಿಧೇಯರಾದರು. 31 ದೇವರು ನಿಮಗೆ ಕರುಣೆ ತೋರಿದ್ದರಿಂದ ಈಗ ಯೆಹೂದ್ಯರು ವಿಧೇಯರಾಗುವುದಿಲ್ಲ. ಆದರೆ ಅವರು ಸಹ ದೇವರಿಂದ ಕರುಣೆಯನ್ನು ಹೊಂದಿಕೊಳ್ಳಲೆಂದು ಹೀಗಾಯಿತು. 32 ಎಲ್ಲರೂ ದೇವರಿಗೆ ಅವಿಧೇಯರಾದರು. ದೇವರು ಎಲ್ಲರಿಗೂ ಕರುಣೆಯನ್ನು ತೋರಬೇಕೆಂದು ಎಲ್ಲರನ್ನೂ ಒಟ್ಟಾಗಿ ಅವಿಧೇಯತ್ವದಿಂದ ಬಂಧಿಸಿದ್ದಾನೆ.
Kannada Holy Bible: Easy-to-Read Version. All rights reserved. © 1997 Bible League International