Revised Common Lectionary (Complementary)
ರಚನೆಗಾರ: ದಾವೀದ.
23 ಯೆಹೋವನೇ ನನಗೆ ಕುರುಬನು.
ನನಗೆ ಕೊರತೆಯೇ ಇಲ್ಲ.
2 ಆತನು ನನ್ನನ್ನು ಹಸಿರುಗಾವಲುಗಳಲ್ಲಿ ತಂಗಿಸುವನು.
ಪ್ರಶಾಂತವಾದ ನೀರಿನ ತೊರೆಗಳ ಬಳಿಯಲ್ಲಿ ನನ್ನನ್ನು ನಡೆಸುವನು.
3 ಆತನು ತನ್ನ ಹೆಸರಿಗೆ ತಕ್ಕಂತೆ ನನ್ನ ಪ್ರಾಣಕ್ಕೆ ಚೈತನ್ಯ ನೀಡಿ
ನೀತಿಮಾರ್ಗದಲ್ಲಿ ನನ್ನನ್ನು ನಡೆಸುವನು.
4 ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ
ನೀನು ನನ್ನೊಂದಿಗಿರುವುದರಿಂದ ಭಯಪಡುವುದಿಲ್ಲ.
ನಿನ್ನ ದೊಣ್ಣೆಯೂ ಊರುಗೋಲೂ ನನ್ನನ್ನು ಸಂತೈಸುತ್ತವೆ.
5 ವೈರಿಗಳ ಎದುರಿನಲ್ಲಿ ನೀನು ನನಗೆ ಔತಣವನ್ನು ಸಿದ್ಧಪಡಿಸಿರುವೆ;
ನನ್ನ ತಲೆಗೆ ಎಣ್ಣೆಯನ್ನು ಹಚ್ಚಿರುವೆ.
ನನ್ನ ಪಾತ್ರೆಯು ತುಂಬಿ ಹೊರಸೂಸುತ್ತಿದೆ.
6 ನಿಶ್ಚಯವಾಗಿ ನನ್ನ ಜೀವಮಾನದಲ್ಲೆಲ್ಲಾ ಶುಭವೂ ಕೃಪೆಯೂ ನನ್ನೊಂದಿಗಿರುತ್ತವೆ.
ನನ್ನ ಜೀವಮಾನವೆಲ್ಲಾ ಯೆಹೋವನ ಆಲಯದಲ್ಲೇ ವಾಸಿಸುವೆನು.
ಯೆಹೋವನು ಮತ್ತು ವಿಗ್ರಹಗಳು
10 ಇಸ್ರೇಲ್ ವಂಶದವರೇ, ಯೆಹೋವನ ಮಾತುಗಳನ್ನು ಕೇಳಿರಿ. 2 ಯೆಹೋವನು ಹೀಗೆ ಹೇಳುತ್ತಾನೆ:
“ಬೇರೆ ಜನಾಂಗಗಳಂತೆ ಜೀವಿಸಬೇಡಿ.
ಆಕಾಶದಲ್ಲಿ ಕಾಣುವ ವಿಶೇಷ ಉತ್ಪಾತಗಳಿಗೆ ಹೆದರಬೇಡಿರಿ.
ಆಕಾಶದಲ್ಲಿ ಕಾಣುವ ಉತ್ಪಾತಗಳಿಗೆ ಬೇರೆ ಜನಾಂಗಗಳು ಹೆದರುತ್ತವೆ.
ಆದರೆ ನೀವು ಅವುಗಳಿಗೆ ಹೆದರಬಾರದು.
3 ಬೇರೆ ಜನರ ಸಂಪ್ರದಾಯಗಳು ನಿಷ್ಪ್ರಯೋಜಕವಾದವುಗಳಾಗಿವೆ.
ಅವರ ವಿಗ್ರಹಗಳು ಅರಣ್ಯದ ಮರವಲ್ಲದೆ ಮತ್ತೇನಲ್ಲ.
ಅವರ ವಿಗ್ರಹಗಳು ಬಡಗಿಯು ಉಳಿಯಿಂದ ಮಾಡಲ್ಪಟ್ಟವುಗಳು.
4 ಅವರು ತಮ್ಮ ವಿಗ್ರಹಗಳನ್ನು ಬೆಳ್ಳಿಬಂಗಾರಗಳಿಂದ ಸುಂದರವಾಗಿ ಅಲಂಕರಿಸುತ್ತಾರೆ.
ಸುತ್ತಿಗೆಯಿಂದ ಮೊಳೆ ಬಡಿದು ಅವುಗಳು ಬೀಳದಂತೆ ನಿಲ್ಲಿಸುತ್ತಾರೆ.
5 ಬೇರೆ ಜನಾಂಗದವರ ವಿಗ್ರಹಗಳು
ಸೌತೆಕಾಯಿ ತೋಟಗಳಲ್ಲಿ ನಿಲ್ಲಿಸುವ ಬೆದರುಕಂಬಗಳಂತಿವೆ.
ಅವರ ವಿಗ್ರಹಗಳು ಮಾತಾಡಲಾರವು;
ಅವು ನಡೆಯಲಾರವು. ಜನರು ಆ ವಿಗ್ರಹಗಳನ್ನು ಹೊತ್ತುಕೊಂಡು ಹೋಗಬೇಕು.
ಆದ್ದರಿಂದ ಆ ವಿಗ್ರಹಗಳಿಗೆ ಹೆದರಬೇಡಿರಿ.
ಅವು ನಿಮಗೆ ಕೇಡನ್ನೂ ಮಾಡಲಾರವು;
ಸಹಾಯವನ್ನೂ ಮಾಡಲಾರವು.”
6 ಯೆಹೋವನೇ, ನಿನ್ನತೆ ಯಾರೂ ಇಲ್ಲ.
ನೀನೇ ಮಹೋನ್ನತನು.
ನಿನ್ನ ಹೆಸರು ಮಹೋನ್ನತವಾದದ್ದು; ಸಾಮರ್ಥ್ಯಪೂರ್ಣವಾದದ್ದು.
7 ದೇವರೇ, ಪ್ರತಿಯೊಬ್ಬರೂ ನಿನ್ನನ್ನು ಗೌರವಿಸಬೇಕು.
ನೀನು ಪ್ರತಿಯೊಂದು ಜನಾಂಗಕ್ಕೂ ರಾಜನಾಗಿರುವೆ.
ಅವರೆಲ್ಲರೂ ನಿನಗೆ ಗೌರವ ತೋರಿಸಬೇಕು.
ಜನಾಂಗಗಳಲ್ಲಿ ಎಷ್ಟೋ ಮಂದಿ ಜ್ಞಾನಿಗಳಿದ್ದಾರೆ
ಆದರೆ ಅವರಲ್ಲಿ ಒಬ್ಬರೂ ನಿನ್ನಷ್ಟು ಜ್ಞಾನಿಗಳಲ್ಲ.
8 ಬೇರೆ ಜನಾಂಗಗಳ ಎಲ್ಲಾ ಜನರು ಮಂದಬುದ್ಧಿಯವರಾಗಿದ್ದಾರೆ ಮತ್ತು ಮೂರ್ಖರಾಗಿದ್ದಾರೆ;
ಅವರ ಉಪದೇಶಗಳು ನಿಷ್ಪ್ರಯೋಜಕವಾದ ಮರದ ಬೊಂಬೆಗಳಿಂದ ಬಂದವುಗಳಾಗಿವೆ.
9 ಅವರು ತಾರ್ಷೀಷ್ ನಗರದ ಬೆಳ್ಳಿಯಿಂದಲೂ
ಧಿಫಜ್ ನಗರದ ಬಂಗಾರದಿಂದಲೂ ತಮ್ಮ ವಿಗ್ರಹಗಳನ್ನು ಮಾಡುತ್ತಾರೆ.
ಆ ವಿಗ್ರಹಗಳನ್ನು ಬಡಗಿಗಳು, ಕಮ್ಮಾರರು ಮತ್ತು ಅಕ್ಕಸಾಲಿಗರು ಮಾಡುತ್ತಾರೆ;
ಅವರು ನೀಲಿ ಮತ್ತು ಕಂದು ಬಣ್ಣದ ಬಟ್ಟೆಗಳನ್ನು ಆ ವಿಗ್ರಹಗಳಿಗೆ ತೊಡಿಸುತ್ತಾರೆ.
ಅವು ಕುಶಲರ ಕೌಶಲ್ಯವಾಗಿವೆ.
10 ಯೆಹೋವನೊಬ್ಬನೇ ನಿಜವಾದ ದೇವರು.
ಆತನು ನಿಜವಾಗಿಯೂ ಜೀವಸ್ವರೂಪನಾಗಿದ್ದಾನೆ.
ಆತನು ಶಾಶ್ವತವಾಗಿ ಆಳುವ ರಾಜನಾಗಿದ್ದಾನೆ.
ಆತನು ಕೋಪಿಸಿಕೊಂಡಾಗ ಭೂಮಿಯು ನಡುಗುತ್ತದೆ.
ಜನಾಂಗಗಳು ಆತನ ಕೋಪವನ್ನು ತಡೆಯಲಾರವು.
11 ಯೆಹೋವನು ಹೇಳುತ್ತಾನೆ, “ಈ ಸಂದೇಶವನ್ನು ಆ ಜನರಿಗೆ ಹೇಳು:
‘ಆ ಸುಳ್ಳುದೇವರುಗಳು ಭೂಲೋಕವನ್ನೂ ಪರಲೋಕವನ್ನೂ ಸೃಷ್ಟಿ ಮಾಡಿಲ್ಲ.
ಆ ಸುಳ್ಳುದೇವರುಗಳನ್ನು ನಾಶಮಾಡಲಾಗುವುದು;
ಅವುಗಳು ಭೂಲೋಕದಿಂದಲೂ ಆಕಾಶದಿಂದಲೂ ಕಣ್ಮರೆಯಾಗುವವು.’”
12 ದೇವರು ತನ್ನ ಶಕ್ತಿಯಿಂದ ಭೂಲೋಕವನ್ನು ಸೃಷ್ಟಿಸಿದನು.
ದೇವರು ತನ್ನ ಜ್ಞಾನದಿಂದ ಈ ಜಗತ್ತನ್ನು ನಿರ್ಮಿಸಿದನು.
ತನ್ನ ವಿವೇಕದಿಂದ ದೇವರು
ಈ ಭೂಮಂಡಲದ ಮೇಲೆ ಆಕಾಶವನ್ನು ಹೊದಿಸಿದ್ದಾನೆ.
13 ಯೆಹೋವನು ಗರ್ಜಿಸುವ ಗುಡುಗನ್ನು ಬರಮಾಡುತ್ತಾನೆ.
ಆತನು ಆಕಾಶದಿಂದ ನೀರನ್ನು ಮಹಾಪ್ರವಾಹದಂತೆ ಸುರಿಸುತ್ತಾನೆ.
ಆತನು ಭೂಮಿಯ ಎಲ್ಲೆಡೆಯಿಂದ ಮೇಘಗಳು ಆಕಾಶಕ್ಕೆ ಏರಿಹೋಗುವಂತೆ ಮಾಡುತ್ತಾನೆ.
ಆತನು ಮಳೆಯೊಂದಿಗೆ ಸಿಡಿಲನ್ನು ಬೀಳಿಸುತ್ತಾನೆ.
ತನ್ನ ಭಂಡಾರದಿಂದ ಹೊರಗೆ ಗಾಳಿ ಬೀಸುವಂತೆ ಮಾಡುತ್ತಾನೆ.
14 ಜನರು ಬುದ್ಧಿಗೇಡಿಗಳಾಗಿದ್ದಾರೆ.
ತಾವು ಕೆತ್ತಿದ ವಿಗ್ರಹಗಳಿಂದ ಅಕ್ಕಸಾಲಿಗರು ಮೋಸಹೋಗುತ್ತಾರೆ.
ಆ ವಿಗ್ರಹಗಳು ಕೇವಲ ಸುಳ್ಳಿನ ಕಂತೆಗಳು.
ಅವುಗಳಲ್ಲಿ ಜೀವವಿಲ್ಲ.[a]
15 ಆ ವಿಗ್ರಹಗಳು ನಿಷ್ಪ್ರಯೋಜಕ ವಸ್ತುಗಳಾಗಿವೆ.
ಅವು ಅಪಹಾಸ್ಯಕ್ಕೆ ಯೋಗ್ಯವಾದವುಗಳಾಗಿವೆ.
ನ್ಯಾಯನಿರ್ಣಯದ ಸಮಯದಲ್ಲಿ
ಆ ವಿಗ್ರಹಗಳನ್ನು ನಾಶಪಡಿಸಲಾಗುವುದು.
16 ಆದರೆ ಯಾಕೋಬ್ಯರ ದೇವರು ಆ ವಿಗ್ರಹಗಳಂತಲ್ಲ.
ಆತನು ಸಮಸ್ತವನ್ನೂ ನಿರ್ಮಿಸಿದಾತನಾಗಿದ್ದಾನೆ.
ಇಸ್ರೇಲು ಆತನ ಸ್ವಾಸ್ತ್ಯವಾದ ಜನಾಂಗ.
“ಸರ್ವಶಕ್ತನಾದ ಯೆಹೋವ” ಎಂಬುದು ಆತನ ನಾಮಧೇಯ.
ನಾವು ಕ್ರಿಸ್ತನ ಕಡೆಗೆ ನೋಡುವಾಗ ದೇವರನ್ನೇ ಕಾಣುತ್ತೇವೆ
15 ದೇವರನ್ನು ನೋಡಲು ಯಾವ ವ್ಯಕ್ತಿಗೂ ಸಾಧ್ಯವಿಲ್ಲ.
ಆದರೆ ಯೇಸುವು ದೇವರ ಪ್ರತಿರೂಪಿಯಾಗಿದ್ದಾನೆ.
ಸೃಷ್ಟಿಸಲ್ಪಟ್ಟವುಗಳಿಗೆಲ್ಲಾ ಯೇಸು ಅಧಿಪತಿಯಾಗಿದ್ದಾನೆ.
16 ಭೂಲೋಕ ಮತ್ತು ಪರಲೋಕಗಳಲ್ಲಿರುವ ಎಲ್ಲವುಗಳು,
ದೃಶ್ಯ ಮತ್ತು ಅದೃಶ್ಯವಾದವುಗಳು, ಆತ್ಮಿಕ ಶಕ್ತಿಗಳು,
ಪ್ರಭುತ್ವಗಳು ಆತನ ಶಕ್ತಿಯಿಂದ ನಿರ್ಮಿತವಾಗಿವೆ. ಅಧಿಪತಿಗಳು ಮತ್ತು ಅಧಿಕಾರಿಗಳು ಆತನ ಶಕ್ತಿಯಿಂದ ನಿರ್ಮಿತರಾದರು.
ಸಮಸ್ತವೂ ಕ್ರಿಸ್ತನ ಮೂಲಕವಾಗಿ ಆತನಿಗೋಸ್ಕರ ಸೃಷ್ಟಿಸಲ್ಪಟ್ಟವು.
17 ಅವುಗಳಿಗಿಂತ ಮೊದಲೇ ಕ್ರಿಸ್ತನಿದ್ದನು.
ಸಮಸ್ತಕ್ಕೂ ಆತನೇ ಆಧಾರಭೂತನಾಗಿದ್ದಾನೆ.
18 ಕ್ರಿಸ್ತನು ದೇಹಕ್ಕೆ (ಸಭೆಯ) ಶಿರಸ್ಸಾಗಿದ್ದಾನೆ.
ಪ್ರತಿಯೊಂದೂ ಆತನಿಂದಲೇ ಬರುತ್ತದೆ.
ಮರಣದಿಂದ ಪ್ರಥಮವಾಗಿ ಎದ್ದುಬಂದವನು ಆತನೇ.
ಆದ್ದರಿಂದ ಎಲ್ಲಾದರಲ್ಲಿಯೂ ಯೇಸುವೇ ಅತ್ಯಂತ ಪ್ರಾಮುಖ್ಯನಾಗಿದ್ದಾನೆ.
19 ಆತನಲ್ಲಿ ತನ್ನ ಸರ್ವಸಂಪೂರ್ಣತೆಯು ನೆಲಸಿರಬೇಕೆಂಬುದೂ,
20 ಆತನು ಶಿಲುಬೆಯ ಮೇಲೆ ಸುರಿಸಿದ ರಕ್ತದಿಂದ ಸಮಾಧಾನವನ್ನು ಉಂಟುಮಾಡಿ
ಭೂಪರಲೋಕಗಳಲ್ಲಿರುವ ಸಮಸ್ತವನ್ನು
ತನಗೆ ಸಂಧಾನಪಡಿಸಿಕೊಳ್ಳಬೇಕೆಂಬುದೂ ದೇವರ ಚಿತ್ತವಾಗಿತ್ತು.
21 ಒಂದು ಕಾಲದಲ್ಲಿ ನೀವು ದೇವರಿಂದ ಬೇರ್ಪಟ್ಟಿದ್ದಿರಿ, ದುಷ್ಕೃತ್ಯಗಳನ್ನು ಮಾಡುತ್ತಾ ನಿಮ್ಮ ಮನಸ್ಸುಗಳಲ್ಲಿ ದೇವರಿಗೆ ಶತ್ರುಗಳಾಗಿದ್ದಿರಿ. 22 ಈಗಲಾದರೋ ಕ್ರಿಸ್ತನು ಶರೀರಧಾರಿಯಾಗಿ ಈ ಲೋಕದಲ್ಲಿದ್ದಾಗ ತನ್ನ ಪ್ರಾಣವನ್ನೇ ಕೊಡುವುದರ ಮೂಲಕ ನಿಮಗೂ ದೇವರಿಗೂ ಸಂಧಾನ ಮಾಡಿದ್ದಾನೆ. ನಿಮ್ಮನ್ನು ಪರಿಶುದ್ಧರನ್ನಾಗಿಯೂ ನಿಷ್ಕಳಂಕರನ್ನಾಗಿಯೂ ನಿರ್ದೋಷಿಗಳನ್ನಾಗಿಯೂ ದೇವರ ಸನ್ನಿಧಿಯಲ್ಲಿ ನಿಲ್ಲಿಸಬೇಕೆಂಬುದೇ ಕ್ರಿಸ್ತನ ಉದ್ದೇಶವಾಗಿತ್ತು. 23 ನೀವು ಕೇಳಿದ ಸುವಾರ್ತೆಯ ಮೇಲೆ ನಿಮಗಿರುವ ನಂಬಿಕೆಯಲ್ಲಿ ದೃಢವಾಗಿ ನೆಲೆಗೊಂಡಿದ್ದು ಅದರಿಂದುಂಟಾಗುವ ನಿರೀಕ್ಷೆಯನ್ನು ಬಿಟ್ಟು ಹೋಗದಿದ್ದರೆ ಇದು ಸಾಧ್ಯ. ಈ ಸುವಾರ್ತೆಯನ್ನು ಪ್ರಪಂಚದ ಜನರಿಗೆಲ್ಲ ಸಾರಲಾಗಿದೆ. ಪೌಲನಾದ ನಾನು ಈ ಸುವಾರ್ತೆಯನ್ನು ಸಾರುವ ಸೇವಕನಾದೆನು.
Kannada Holy Bible: Easy-to-Read Version. All rights reserved. © 1997 Bible League International