Revised Common Lectionary (Semicontinuous)
ಗೊಲ್ಯಾತನು ಇಸ್ರೇಲರ ಮೇಲೆ ಸ್ಪರ್ಧಿಸಿದ್ದು
17 ಫಿಲಿಷ್ಟಿಯರು ತಮ್ಮ ಸೈನ್ಯವನ್ನು ಯುದ್ಧಕ್ಕಾಗಿ ಯೆಹೂದದೇಶದ ಸೋಕೋವಿನಲ್ಲಿ ಒಟ್ಟುಗೂಡಿಸಿದರು. ಅವರು ಸೋಕೋವಿಗೂ ಅಜೇಕಕ್ಕೂ ಮಧ್ಯದಲ್ಲಿರುವ ಎಫೆಸ್ದಮ್ಮೀಮ್ ಎಂಬ ಹೆಸರಿನ ಪಟ್ಟಣದಲ್ಲಿ ಪಾಳೆಯಮಾಡಿಕೊಂಡರು.
4 ಫಿಲಿಷ್ಟಿಯರಲ್ಲಿ ಗೊಲ್ಯಾತನೆಂಬ ಹೆಸರಿನ ವೀರ ಯೋಧನಿದ್ದನು. ಆತನು ಗತ್ ಊರಿನವನು. ಗೊಲ್ಯಾತನು ಒಂಭತ್ತು ಅಡಿ ಎತ್ತರವಾಗಿದ್ದನು. ಅವನು ಫಿಲಿಷ್ಟಿಯರ ಪಾಳೆಯದಿಂದ ಹೊರಬಂದನು. 5 ಅವನು ತಾಮ್ರದ ಶಿರಸ್ತ್ರಾಣವನ್ನು ಧರಿಸಿದ್ದನು. ಮೀನಿನ ಮೇಲಿರುವ ಚಿಪ್ಪುಗಳಂತಿದ್ದ ತಾಮ್ರದ ಕವಚವನ್ನು ಅವನು ತೊಟ್ಟಿದ್ದನು. ಅದು ನೂರಿಪ್ಪತ್ತೈದು ಪೌಂಡ್ಗಳಷ್ಟು ಭಾರವಾಗಿತ್ತು. 6 ಗೊಲ್ಯಾತನು ಕಾಲುಗಳಿಗೂ ತಾಮ್ರದ ಕವಚವನ್ನು ತೊಟ್ಟಿದ್ದನು. ಅವನು ಹೆಗಲಿನಲ್ಲಿ ತಾಮ್ರದ ಈಟಿಯನ್ನು ಕಟ್ಟಿಕೊಂಡಿದ್ದನು. 7 ಗೊಲ್ಯಾತನ ಬರ್ಜಿಯ ಹಿಡಿಕೆಯು ನೇಕಾರರ ಕುಂಟೆಯ ಗಾತ್ರದಷ್ಟಿತ್ತು. ಆ ಬರ್ಜಿಯ ಅಲಗಿನ ಭಾರವು ಹದಿನೈದು ಪೌಂಡ್ಗಳಷ್ಟಿತ್ತು. ಗೊಲ್ಯಾತನ ಗುರಾಣಿಯನ್ನು ಹೊತ್ತಿದ್ದ ಅವನ ಸಹಾಯಕನು ಅವನ ಮುಂದೆ ಹೋಗುತ್ತಿದ್ದನು.
8 ಗೊಲ್ಯಾತನು ಪ್ರತಿದಿನ ಹೊರಕ್ಕೆ ಬಂದು ಇಸ್ರೇಲಿನ ಸೈನಿಕರನ್ನು ಕಂಡು ಆರ್ಭಟಿಸುತ್ತಿದ್ದನು. ಅವನು, “ನೀವೆಲ್ಲ ಸಾಲಾಗಿನಿಂತು ಯುದ್ಧಕ್ಕೆ ಸಿದ್ಧರಾಗಿರುವುದೇಕೆ? ನೀವು ಸೌಲನ ಸೇವಕರು. ನಾನು ಫಿಲಿಷ್ಟಿಯನು, ನೀವು ಒಬ್ಬನನ್ನು ಆರಿಸಿ ನನ್ನೊಡನೆ ಹೋರಾಡಲು ಕಳುಹಿಸಿ. 9 ಅವನು ನನ್ನನ್ನು ಕೊಂದುಬಿಟ್ಟರೆ, ನಾವು ಅಂದರೆ ಫಿಲಿಷ್ಟಿಯರೆಲ್ಲ ನಿಮ್ಮ ಗುಲಾಮರಾಗುತ್ತೇವೆ. ಆದರೆ ನಾನು ಅವನನ್ನು ಸೋಲಿಸಿ ಕೊಂದುಬಿಟ್ಟರೆ, ನೀವೆಲ್ಲ ನಮಗೆ ಗುಲಾಮರಾಗಿದ್ದು ನಮ್ಮ ಸೇವೆಯನ್ನು ಮಾಡಬೇಕು” ಎಂದು ಆರ್ಭಟಿಸಿದನು.
10 ಫಿಲಿಷ್ಟಿಯನು, “ಈ ದಿನ ನಾನು ಇಸ್ರೇಲ್ ಸೈನ್ಯವನ್ನು ಹೀಯಾಳಿಸುವೆನು. ನನ್ನೊಂದಿಗೆ ಹೋರಾಡಲು ನಿಮ್ಮ ಮನುಷ್ಯನೊಬ್ಬನನ್ನು ಕಳುಹಿಸಿ” ಎಂದು ಕೊಚ್ಚಿಕೊಂಡನು.
11 ಸೌಲನು ಮತ್ತು ಅವನ ಸೈನಿಕರು ಗೊಲ್ಯಾತನು ಹೇಳಿದ್ದನ್ನು ಕೇಳಿ ಬಹಳ ಭಯಪಟ್ಟರು.
19 ನಿನ್ನ ಸಹೋದರರು ಎಲ್ಲಾ ಇಸ್ರೇಲ್ ಸೈನಿಕರಂತೆ ಸೌಲನ ಜೊತೆಯಲ್ಲಿ ಏಲಾ ಕಣಿವೆಯಲ್ಲಿದ್ದಾರೆ. ಅವರು ಫಿಲಿಷ್ಟಿಯರ ವಿರುದ್ಧ ಹೋರಾಡುತ್ತಿದ್ದಾರೆ” ಎಂದು ಹೇಳಿದನು.
20 ದಾವೀದನು ಮಾರನೆಯ ದಿನ ಬೆಳಿಗ್ಗೆ ಕುರುಬನೊಬ್ಬನಿಗೆ ತನ್ನ ಕುರಿಗಳನ್ನು ಕಾಯಲು ಒಪ್ಪಿಸಿದನು. ಇಷಯನು ತಿಳಿಸಿದಂತೆ ದಾವೀದನು ಆಹಾರವನ್ನೆಲ್ಲ ತೆಗೆದುಕೊಂಡು ಹೊರಟನು. ದಾವೀದನು ತನ್ನ ಬಂಡಿಯನ್ನು ಪಾಳೆಯಕ್ಕೆ ಹೊಡೆದುಕೊಂಡು ಹೋದನು. ದಾವೀದನು ಅಲ್ಲಿಗೆ ಬರುವಷ್ಟರಲ್ಲಿ ಸೈನಿಕರೆಲ್ಲರು ಯುದ್ಧಭೂಮಿಗೆ ಹೋಗುವುದರಲ್ಲಿದ್ದರು. ಸೈನಿಕರೆಲ್ಲರು ಆರ್ಭಟಿಸುತ್ತಾ ಯುದ್ಧಭೂಮಿಯಲ್ಲಿ ಸೇರುತ್ತಿದ್ದರು. 21 ಇಸ್ರೇಲರು ಮತ್ತು ಫಿಲಿಷ್ಟಿಯರು ಯುದ್ಧಕ್ಕೆ ಸಿದ್ಧರಾಗಲು ಸಾಲುಸಾಲಾಗಿ ನಿಲ್ಲುತ್ತಿದ್ದರು.
22 ದಾವೀದನು ತಾನು ತಂದಿದ್ದವುಗಳನ್ನು ಕಾವಲುಗಾರನ ಬಳಿಯಲ್ಲಿಟ್ಟು ಇಸ್ರೇಲ್ ಸೈನಿಕರಿದ್ದ ಸ್ಥಳಕ್ಕೆ ಓಡಿಹೋಗಿ ತನ್ನ ಸಹೋದರರ ಬಗ್ಗೆ ವಿಚಾರಿಸಿದನು. 23 ಬಳಿಕ ತನ್ನ ಸಹೋದರರನ್ನು ಕಂಡುಕೊಂಡು ಅವರೊಂದಿಗೆ ಮಾತಾಡತೊಡಗಿದನು. ಆ ಸಮಯದಲ್ಲಿ ಗತ್ ದೇಶದ ಗೊಲ್ಯಾತನೆಂಬ ಹೆಸರಿನ ಫಿಲಿಷ್ಟಿಯ ರಣವೀರನು ಆ ಸೇನೆಯಿಂದ ಹೊರಬಂದನು. ಗೊಲ್ಯಾತನು ಎಂದಿನಂತೆ ಇಸ್ರೇಲರ ವಿರುದ್ಧ ಆರ್ಭಟಿಸಿದನು. ದಾವೀದನಿಗೆ ಅವನ ಆರ್ಭಟವು ಕೇಳಿಸಿತು.
32 ದಾವೀದನು ಸೌಲನಿಗೆ, “ಜನರು ಗೊಲ್ಯಾತನಿಗೆ ಹೆದರಿಕೊಳ್ಳುವುದು ಬೇಕಾಗಿಲ್ಲ. ನಾನು ನಿನ್ನ ಸೇವಕ. ನಾನು ಈ ಫಿಲಿಷ್ಟಿಯನ ವಿರುದ್ಧ ಹೋರಾಡುತ್ತೇನೆ” ಎಂದು ಹೇಳಿದನು.
33 ಸೌಲನು, “ನೀನು ಹೊರಗೆ ಹೋಗಿ ಗೊಲ್ಯಾತನೊಂದಿಗೆ ಹೋರಾಡಲು ಸಾಧ್ಯವಿಲ್ಲ. ನೀನು ಒಬ್ಬ ಸೈನಿಕನೂ ಅಲ್ಲ! ಗೊಲ್ಯಾತನು ಬಾಲ್ಯದಿಂದಲೂ ಯುದ್ಧವೀರನಾಗಿದ್ದಾನೆ” ಎಂದನು.
34 ಆದರೆ ದಾವೀದನು ಸೌಲನಿಗೆ, “ನಾನು ನಿನ್ನ ಸೇವಕ. ನಾನು ನನ್ನ ತಂದೆಯ ಕುರಿಗಳನ್ನು ಕಾಯುತ್ತಿದ್ದೆ. ಸಿಂಹವಾಗಲಿ ಕರಡಿಯಾಗಲಿ ಬಂದು ಕುರಿಮಂದೆಯಿಂದ ಕುರಿಗಳನ್ನು ಹಿಡಿದುಕೊಂಡರೆ, 35 ಆದನ್ನು ನಾನು ಅಟ್ಟಿಸಿಕೊಂಡು ಹೋಗುತ್ತಿದ್ದೆ. ನಾನು ಆ ಕ್ರೂರ ಮೃಗದ ಮೇಲೆ ಆಕ್ರಮಣ ಮಾಡಿ, ಅದರ ಬಾಯಿಂದ ಕುರಿಯನ್ನು ಬಿಡಿಸುತ್ತಿದ್ದೆನು. ಅದು ನನ್ನ ಮೇಲೆ ಆಕ್ರಮಣ ಮಾಡಿದರೆ, ನಾನು ಅದರ ಗಡ್ಡ ಹಿಡಿದು ಹೋರಾಡಿ ಅದನ್ನು ಕೊಲ್ಲುತ್ತಿದ್ದೆನು. 36 ನಾನು ಒಂದು ಸಿಂಹವನ್ನೂ ಒಂದು ಕರಡಿಯನ್ನೂ ಕೊಂದಿದ್ದೇನೆ. ಅದೇ ರೀತಿಯಲ್ಲಿ ನಾನು ಅನ್ಯದೇಶಿಯನಾದ ಗೊಲ್ಯಾತನನ್ನೂ ಕೊಂದು ಹಾಕುತ್ತೇನೆ. ಜೀವಸ್ವರೂಪನಾದ ದೇವರ ಸೈನ್ಯವನ್ನು ಹೀಯಾಳಿಸಿದ್ದರಿಂದ ಗೊಲ್ಯಾತನು ಸಾಯಲೇಬೇಕು. 37 ಯೆಹೋವನು ನನ್ನನ್ನು ಸಿಂಹದಿಂದಲೂ ಕರಡಿಯಿಂದಲೂ ರಕ್ಷಿಸಿದನು. ಯೆಹೋವನು ಈ ಗೊಲ್ಯಾತನಿಂದಲೂ ನನ್ನನ್ನು ರಕ್ಷಿಸುತ್ತಾನೆ” ಎಂದು ಹೇಳಿದನು.
ಸೌಲನು ದಾವೀದನಿಗೆ, “ಹೋಗು, ಯೆಹೋವನು ನಿನ್ನೊಂದಿಗಿರಲಿ” ಎಂದು ಹೇಳಿದನು.
38 ಸೌಲನು ತನ್ನ ಯುದ್ಧವಸ್ತ್ರಗಳನ್ನು ದಾವೀದನಿಗೆ ತೊಡಿಸಿದನು. ಸೌಲನು ತಾಮ್ರದ ಶಿರಸ್ತ್ರಾಣವನ್ನು ದಾವೀದನ ತಲೆಯ ಮೇಲಿಟ್ಟನು ಮತ್ತು ಲೋಹದ ಕವಚವನ್ನು ದಾವೀದನ ಮೈಗೆ ತೊಡಿಸಿದನು. 39 ದಾವೀದನು ಕತ್ತಿಯನ್ನು ಸಿಕ್ಕಿಸಿಕೊಂಡು, ಆ ಕಡೆ ಈ ಕಡೆ ಸುತ್ತಾಡಿದನು. ಸೌಲನ ಯುದ್ಧ ವಸ್ತ್ರಗಳನ್ನು ದಾವೀದನು ಧರಿಸಲು ಪ್ರಯತ್ನಿಸಿದನು. ಆದರೆ ದಾವೀದನಿಗೆ ಅಂತಹ ಭಾರದ ವಸ್ತ್ರಗಳನ್ನು ಧರಿಸಿ ಅಭ್ಯಾಸವಿರಲಿಲ್ಲ.
ದಾವೀದನು ಸೌಲನಿಗೆ, “ನಾನು ಇವುಗಳನ್ನು ಧರಿಸಿಕೊಂಡು ಹೋರಾಡಲಾಗುವುದಿಲ್ಲ; ನನಗೆ ಇವುಗಳನ್ನು ಧರಿಸಿಕೊಂಡು ಅಭ್ಯಾಸವಿಲ್ಲ” ಎಂದು ಹೇಳಿ ಅವುಗಳನ್ನೆಲ್ಲ ತೆಗೆದು ಹಾಕಿದನು. 40 ದಾವೀದನು ತನ್ನ ಕೋಲನ್ನು ಕೈಯಲ್ಲಿ ಹಿಡಿದುಕೊಂಡು, ಕಣಿವೆಯಲ್ಲಿ ಐದು ನುಣುಪುಕಲ್ಲುಗಳನ್ನು ಆರಿಸಿಕೊಂಡು ಅವುಗಳನ್ನು ಕುರಿಕಾಯಲು ಬಳಸುವ ಚೀಲದಲ್ಲಿ ಹಾಕಿಕೊಂಡು ಕವಣೆಯನ್ನು ಕೈಯಲ್ಲಿ ಹಿಡಿದುಕೊಂಡನು. ನಂತರ ಗೊಲ್ಯಾತನನ್ನು ಎದುರಿಸಲು ಹೋದನು.
ದಾವೀದನು ಗೊಲ್ಯಾತನನ್ನು ಕೊಂದದ್ದು
41 ಫಿಲಿಷ್ಟಿಯನು (ಗೊಲ್ಯಾತನು) ದಾವೀದನ ಬಳಿಗೆ ನಿಧಾನವಾಗಿ ನಡೆಯುತ್ತಾ ಬಂದನು. ಗೊಲ್ಯಾತನ ಮುಂದೆ ಅವನ ಸಹಾಯಕನು ಗುರಾಣಿಯನ್ನು ಹೊತ್ತುಕೊಂಡು ನಡೆಯುತ್ತಾ ಹೋದನು. 42 ಗೊಲ್ಯಾತನು ದಾವೀದನನ್ನು ನೋಡಿ ನಕ್ಕನು. ದಾವೀದನು ಸೈನಿಕನಲ್ಲವೆಂಬುದು ಗೊಲ್ಯಾತನಿಗೆ ಗೊತ್ತಾಯಿತು. ದಾವೀದನು ಕೆಂಬಣ್ಣದ ಸುಂದರ ಯುವಕನಾಗಿದ್ದನು. 43 ಗೊಲ್ಯಾತನು ದಾವೀದನಿಗೆ, “ಈ ಕೋಲು ಏನಕ್ಕೆ? ನಾಯಿಯನ್ನು ಓಡಿಸುವಂತೆ ನನ್ನನ್ನು ಓಡಿಸುವುದಕ್ಕೆ ಬಂದೆಯಾ?” ಎಂದು ಕೇಳಿದನು. ಬಳಿಕ ಗೊಲ್ಯಾತನು ತನ್ನ ದೇವರ ಹೆಸರುಗಳ ಮೇಲೆ ದಾವೀದನನ್ನು ಶಪಿಸಿದನು. 44 ಗೊಲ್ಯಾತನು ದಾವೀದನಿಗೆ, “ಬಾ ಇಲ್ಲಿಗೆ, ನಿನ್ನ ದೇಹವನ್ನು ಪಕ್ಷಿಗಳಿಗೂ ಕ್ರೂರಪ್ರಾಣಿಗಳಿಗೂ ಆಹಾರವನ್ನಾಗಿ ಮಾಡುತ್ತೇನೆ!” ಎಂದನು.
45 ದಾವೀದನು ಫಿಲಿಷ್ಟಿಯನಿಗೆ, “ನೀನಾದರೋ ಖಡ್ಗ, ಈಟಿ ಮತ್ತು ಭರ್ಜಿಗಳನ್ನು ಹಿಡಿದುಕೊಂಡು ನನ್ನ ಬಳಿಗೆ ಬಂದಿರುವೆ. ನಾನಾದರೋ ಸರ್ವಶಕ್ತನೂ ಇಸ್ರೇಲರ ಸೈನ್ಯಗಳ ದೇವರೂ ಆಗಿರುವ ಯೆಹೋವನ ಹೆಸರಿನಲ್ಲಿ ನಿನ್ನ ಬಳಿಗೆ ಬಂದಿರುವೆ! ನೀನು ಹೀಯಾಳಿಸಿದ್ದು ಆತನನ್ನೇ. 46 ಇಂದು ನಾನು ನಿನ್ನನ್ನು ಸೋಲಿಸಲು ಯೆಹೋವನು ಸಹಾಯಮಾಡುತ್ತಾನೆ. ನಾನು ನಿನ್ನನ್ನು ಕೊಲ್ಲುತ್ತೇನೆ. ಇಂದು ನಾನು ನಿನ್ನ ತಲೆಯನ್ನು ಕತ್ತರಿಸಿ ನಿನ್ನ ದೇಹವನ್ನು ಪಕ್ಷಿಗಳಿಗೂ ಕ್ರೂರಮೃಗಗಳಿಗೂ ಆಹಾರವನ್ನಾಗಿ ಕೊಡುತ್ತೇನೆ. ಉಳಿದೆಲ್ಲ ಫಿಲಿಷ್ಟಿಯರಿಗೂ ಸಹ ನಾವು ಅದೇ ರೀತಿ ಮಾಡುತ್ತೇವೆ. ಆಗ ಇಸ್ರೇಲಿನಲ್ಲಿ ದೇವರಿದ್ದಾನೆಂಬುದು ಇಡೀ ಜಗತ್ತಿಗೆಲ್ಲ ಗೊತ್ತಾಗುವುದು! 47 ಜನರನ್ನು ರಕ್ಷಿಸಲು ಯೆಹೋವನಿಗೆ ಕತ್ತಿ ಮತ್ತು ಈಟಿಗಳ ಅಗತ್ಯವಿಲ್ಲ ಎಂಬುದು ಇಲ್ಲಿ ಸೇರಿರುವ ಜನರಿಗೆಲ್ಲ ತಿಳಿಯುತ್ತದೆ. ಇದು ಯೆಹೋವನ ಯುದ್ಧ. ಫಿಲಿಷ್ಟಿಯರನ್ನೆಲ್ಲ ಸೋಲಿಸಲು ಯೆಹೋವನು ನಮಗೆ ಸಹಾಯ ಮಾಡುತ್ತಾನೆ” ಎಂದು ಹೇಳಿದನು.
48 ಫಿಲಿಷ್ಟಿಯನಾದ ಗೊಲ್ಯಾತನು ಆಕ್ರಮಣಮಾಡಲು ದಾವೀದನ ಹತ್ತಿರಕ್ಕೆ ಬಂದನು. ದಾವೀದನೂ ಗೊಲ್ಯಾತನನ್ನು ಸಂಧಿಸಲು ವೇಗವಾಗಿ ಓಡಿದನು.
49 ದಾವೀದನು ತನ್ನ ಚೀಲದಿಂದ ಒಂದು ಕಲ್ಲನ್ನು ಹೊರತೆಗೆದನು. ಅದನ್ನು ಅವನು ಕವಣೆಯಲ್ಲಿ ಸಿಕ್ಕಿಸಿ ಬೀಸಿ ಹೊಡೆದನು. ಕವಣೆಯಿಂದ ಅವನು ಬೀಸಿದ ಕಲ್ಲು ಗೊಲ್ಯಾತನ ಹಣೆಗೆ ಬಡಿಯಿತು. ಆ ಕಲ್ಲು ಅವನ ಹಣೆಯಲ್ಲಿ ಆಳವಾದ ಗಾಯವನ್ನು ಮಾಡಿತು. ಕೂಡಲೇ ಗೊಲ್ಯಾತನು ಬೋರಲಾಗಿ ನೆಲದ ಮೇಲೆ ಬಿದ್ದನು.
57 ದಾವೀದನು ಗೊಲ್ಯಾತನನ್ನು ಕೊಂದು ಹಿಂದಿರುಗಿದಾಗ, ಅಬ್ನೇರನು ಅವನನ್ನು ಸೌಲನ ಹತ್ತಿರಕ್ಕೆ ಕರೆತಂದನು. ದಾವೀದನು ಫಿಲಿಷ್ಟಿಯನ ತಲೆಯನ್ನು ಕೈಯಲ್ಲಿ ಹಿಡಿದುಕೊಂಡೇ ಇದ್ದನು.
58 ಸೌಲನು, “ಯುವಕನೇ, ನಿನ್ನ ತಂದೆ ಯಾರು?” ಎಂದು ಪ್ರಶ್ನಿಸಿದನು.
ದಾವೀದನು, “ನಾನು ನಿಮ್ಮ ಸೇವಕನಾದ ಬೆತ್ಲೆಹೇಮಿನ ಇಷಯನ ಮಗ” ಎಂದು ಉತ್ತರಿಸಿದನು.
ದಾವೀದ ಮತ್ತು ಯೋನಾತಾನರು ಆತ್ಮೀಯ ಗೆಳೆಯರಾದರು
18 ದಾವೀದನು ಸೌಲನೊಂದಿಗೆ ಮಾತನಾಡಿದ ಬಳಿಕ ಯೋನಾತಾನನು ದಾವೀದನೊಂದಿಗೆ ಒಂದಾದನು. ಯೋನಾತಾನನು ತನ್ನನ್ನು ಪ್ರೀತಿಸುವಷ್ಟೇ ದಾವೀದನನ್ನು ಪ್ರೀತಿಸಲಾರಂಭಿಸಿದನು. 2 ಸೌಲನು ಅಂದಿನಿಂದ ದಾವೀದನನ್ನು ತನ್ನ ಜೊತೆಯಲ್ಲಿಯೇ ಇರಿಸಿಕೊಂಡನು. ಸೌಲನು ದಾವೀದನನ್ನು ಅವನ ತಂದೆಯ ಮನೆಗೆ ಹೋಗಲು ಬಿಡಲಿಲ್ಲ. 3 ಯೋನಾತಾನನು ದಾವೀದನನ್ನು ಬಹಳವಾಗಿ ಪ್ರೀತಿಸುತ್ತಿದ್ದನು. ಅವನು ದಾವೀದನೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡನು. 4 ಯೋನಾತಾನನು ತಾನು ಧರಿಸಿದ್ದ ಮೇಲಂಗಿಯನ್ನೂ ತನ್ನ ಸಮವಸ್ತ್ರಗಳನ್ನೂ ತನ್ನ ಬಿಲ್ಲನ್ನೂ ಕತ್ತಿಯನ್ನೂ ಸೊಂಟಪಟ್ಟಿಯನ್ನೂ ದಾವೀದನಿಗೆ ಕೊಟ್ಟನು.
ಸೌಲನು ದಾವೀದನ ಯಶಸ್ಸನ್ನು ಗಮನಿಸಿದನು
5 ಸೌಲನು ದಾವೀದನನ್ನು ಬೇರೆಬೇರೆ ಯುದ್ಧಗಳಲ್ಲಿ ಹೋರಾಡಲು ಕಳುಹಿಸಿದನು. ದಾವೀದನು ಆ ಯುದ್ಧಗಳಲ್ಲೆಲ್ಲಾ ಯಶ್ವಸಿಯಾದನು. ಆದ್ದರಿಂದ ಸೌಲನು ದಾವೀದನನ್ನು ಸೈನ್ಯಾಧಿಪತಿಯನ್ನಾಗಿ ನೇಮಿಸಿದನು. ಇದು ಸೌಲನ ಅಧಿಕಾರಿಗಳಿಗೂ ಇತರರಿಗೂ ಸಂತಸವನ್ನು ಉಂಟುಮಾಡಿತು!
ಸೌಲನು ದಾವೀದನಿಗೆ ಭಯಪಟ್ಟನು
10 ಮಾರನೆಯ ದಿನ, ದೇವರಿಂದ ಬಂದ ದುರಾತ್ಮವು ಸೌಲನನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿತು. ಸೌಲನು ತನ್ನ ಮನೆಯಲ್ಲಿ ಹುಚ್ಚನಂತೆ ಕೂಗಿಕೊಳ್ಳುತ್ತಿದ್ದನು. ಆಗ ದಾವೀದನು ಎಂದಿನಂತೆ ಕಿನ್ನರಿಯನ್ನು ಬಾರಿಸುತ್ತಿದ್ದನು. 11 ಸೌಲನ ಕೈಯಲ್ಲಿ ಒಂದು ಈಟಿಯಿತ್ತು. “ಗೋಡೆಗೆ ಹತ್ತಿಕೊಳ್ಳುವಂತೆ ನಾನು ದಾವೀದನನ್ನು ತಿವಿಯುವೆ” ಎಂದು ಅವನು ಯೋಚಿಸಿ ಎರಡು ಬಾರಿ ಈಟಿಯನ್ನು ಎಸೆದನು. ಆದರೆ ದಾವೀದನು ಎರಡು ಸಲವೂ ತಪ್ಪಿಸಿಕೊಂಡನು.
12 ಯೆಹೋವನು ಸೌಲನನ್ನು ಬಿಟ್ಟು ದಾವೀದನ ಜೊತೆಗಿದ್ದನು. ಆದ್ದರಿಂದ ಸೌಲನು ದಾವೀದನಿಗೆ ಭಯಪಟ್ಟನು. 13 ಸೌಲನು ದಾವೀದನನ್ನು ತನ್ನಿಂದ ದೂರಕಳುಹಿಸಿದನು. ಸೌಲನು ದಾವೀದನನ್ನು ಒಂದು ಸಾವಿರ ಸೈನಿಕರಿಗೆ ಸೇನಾಪತಿಯನ್ನಾಗಿ ಮಾಡಿದನು. ದಾವೀದನು ಯುದ್ಧದಲ್ಲಿ ಸೈನಿಕರನ್ನು ಮುನ್ನಡೆಸಿದನು. 14 ಯೆಹೋವನು ದಾವೀದನ ಜೊತೆಗಿದ್ದನು. ಆದ್ದರಿಂದ ದಾವೀದನು ಎಲ್ಲದರಲ್ಲೂ ಯಶ್ವಸಿಯಾದನು. 15 ದಾವೀದನು ಬಹಳವಾಗಿ ಯಶ್ವಸಿಯಾಗುತ್ತಿರುವುದನ್ನು ಕಂಡ ಸೌಲನು ದಾವೀದನಿಗೆ ಮತ್ತಷ್ಟು ಭಯಪಟ್ಟನು. 16 ಆದರೆ ಇಸ್ರೇಲಿನ ಮತ್ತು ಯೆಹೂದದ ಜನರೆಲ್ಲ ದಾವೀದನನ್ನು ಪ್ರೀತಿಸಿದರು. ಅವನು ಯುದ್ಧದಲ್ಲಿ ಅವರನ್ನು ಮುನ್ನಡೆಸಿದ್ದರಿಂದ ಮತ್ತು ಅವರಿಗೋಸ್ಕರ ಹೋರಾಡಿದ್ದರಿಂದ ಅವರು ಅವನನ್ನು ಬಹಳವಾಗಿ ಪ್ರೀತಿಸಿದರು.
9 ಯೆಹೋವನು ಕುಗ್ಗಿಹೋದವರಿಗೆ ಆಶ್ರಯಸ್ಥಾನವೂ
ಇಕ್ಕಟ್ಟಿನಲ್ಲಿರುವವರಿಗೆ ಆಶ್ರಯದುರ್ಗವೂ ಆಗಿದ್ದಾನೆ.
10 ಯೆಹೋವನೇ, ನಿನ್ನ ಹೆಸರನ್ನು ಬಲ್ಲವರು ನಿನ್ನಲ್ಲಿ ಭರವಸೆಯಿಡುವರು.
ಯಾಕೆಂದರೆ ನಿನ್ನ ಸಹಾಯಕ್ಕಾಗಿ ಬರುವವರನ್ನು ನೀನು ತೊರೆದುಬಿಡುವುದಿಲ್ಲ.
11 ಚೀಯೋನಿನ ನಿವಾಸಿಗಳೇ, ಯೆಹೋವನನ್ನು ಸಂಕೀರ್ತಿಸಿರಿ.
ಆತನ ಮಹತ್ಕಾರ್ಯಗಳನ್ನು ಜನಾಂಗಗಳಲ್ಲಿ ಪ್ರಕಟಿಸಿರಿ.
12 ಪ್ರಾಣಾಪರಾಧಕ್ಕೆ ಮುಯ್ಯಿತೀರಿಸುವ ಆತನು
ಕುಗ್ಗಿಹೋದವರ ಮೊರೆಯನ್ನು ಮರೆಯದೆ ಅವರನ್ನು ಜ್ಞಾಪಿಸಿಕೊಂಡನು.
13 “ಯೆಹೋವನೇ, ನನ್ನನ್ನು ಕನಿಕರಿಸು.
ಇಗೋ, ವೈರಿಗಳು ನನಗೆ ಕೇಡುಮಾಡುತ್ತಿದ್ದಾರೆ.
‘ಮರಣ ದ್ವಾರ’ದಿಂದ ತಪ್ಪಿಸಿ ಕಾಪಾಡು.”
14 ಆಗ ಜೆರುಸಲೇಮಿನ ದ್ವಾರಗಳ ಬಳಿಯಲ್ಲಿ ನಿನ್ನನ್ನು ಸಂಕೀರ್ತಿಸುವೆನು.
ನೀನು ನನ್ನನ್ನು ರಕ್ಷಿಸಿದ್ದರಿಂದ ಹರ್ಷಿಸುವೆನು.
15 ಅನ್ಯಜನಾಂಗಗಳವರು ತಾವು ತೋಡಿದ ಕುಣಿಗಳಲ್ಲಿ ತಾವೇ ಬಿದ್ದುಹೋಗುವರು;
ತಾವು ಹಾಸಿದ ಬಲೆಗಳಲ್ಲಿ ತಾವೇ ಸಿಕ್ಕಿಬೀಳುವರು.
16 ಯೆಹೋವನು ಅವರನ್ನು ಅವರ ಕುಯುಕ್ತಿಯಲ್ಲಿಯೇ ಸಿಕ್ಕಿಸಿದ್ದರಿಂದ
ಆತನ ನೀತಿಯು ಪ್ರಖ್ಯಾತವಾಯಿತು.
17 ದೇವರನ್ನು ಅಲಕ್ಷ್ಯ ಮಾಡುವ ಜನರೆಲ್ಲ ಕೆಟ್ಟವರು.
ಅವರು ಮರಣದ ಸ್ಥಳಕ್ಕೆ ಹೋಗುವರು.
18 ಕೆಲವೊಮ್ಮೆ, ಇಕ್ಕಟ್ಟಿನಲ್ಲಿರುವವರನ್ನು ದೇವರು ಮರೆತಿರುವಂತೆ ಕಾಣುತ್ತದೆ;
ಕುಗ್ಗಿಹೋದ ಅವರಿಗೆ ನಿರೀಕ್ಷೆಯೇ ಇಲ್ಲದಂತೆ ಕಂಡರೂ
ದೇವರು ಅವರನ್ನು ಮರೆತುಬಿಡುವುದಿಲ್ಲ.
19 ಯೆಹೋವನೇ, ಎದ್ದೇಳು! ಜನಾಂಗಗಳಿಗೆ ನ್ಯಾಯತೀರಿಸು.
ಅವರು ಬಲಿಷ್ಠರಾಗಕೂಡದು.
20 ಯೆಹೋವನೇ, ಅವರಿಗೆ ಭಯಹುಟ್ಟಿಸು;
ತಾವು ಕೇವಲ ಮನುಷ್ಯರೆಂಬುದನ್ನು ಅವರು ಗ್ರಹಿಸಿಕೊಳ್ಳಲಿ.
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ. ರಚನೆಗಾರ: ದಾವೀದ.
133 ಆಹಾ, ಸಹೋದರರು ಅನ್ಯೋನ್ಯತೆಯಿಂದಿರುವುದು
ಎಷ್ಟೋ ಒಳ್ಳೆಯದು, ಎಷ್ಟೋ ರಮ್ಯವಾದದ್ದು.
2 ಅದು ಯಾಜಕನ ತಲೆಯ ಮೇಲೆ ಹಾಕಲ್ಪಟ್ಟು ಆರೋನನ ಗಡ್ಡಕ್ಕೂ
ಅಲ್ಲಿಂದ ಅವನ ಉಡುಪುಗಳ ಮೇಲೆಯೂ ಇಳಿದುಬರುವ ಪರಿಮಳ ತೈಲದಂತಿರುವುದು;
3 ಅದು ಹೆರ್ಮೋನ್ ಪರ್ವತದಿಂದ ಹುಟ್ಟಿ ಚೀಯೋನ್ ಪರ್ವತದ ಮೇಲೆ ಬೀಳುವ ದಟ್ಟವಾದ ಮಂಜಿನಂತಿರುವುದು.
ಯೆಹೋವನು ನಿತ್ಯಜೀವವೆಂಬ ತನ್ನ ಆಶೀರ್ವಾದವನ್ನು ಅನುಗ್ರಹಿಸಿದ್ದು ಚೀಯೋನಿನಲ್ಲಿಯೇ.
6 ನಾವು ದೇವರ ಜೊತೆಕೆಲಸದವರಾಗಿದ್ದೇವೆ. ಆದ್ದರಿಂದ ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ, ನೀವು ದೇವರಿಂದ ಹೊಂದಿಕೊಂಡ ಕೃಪೆಯು ವ್ಯರ್ಥವಾಗದಂತೆ ನೋಡಿಕೊಳ್ಳಿ. 2 ದೇವರು ಹೀಗೆನ್ನುತ್ತಾನೆ:
“ಸುಪ್ರಸನ್ನತೆಯ ಕಾಲದಲ್ಲಿ ನಾನು ನಿನಗೆ ಕಿವಿಗೊಟ್ಟೆನು,
ರಕ್ಷಣೆಯ ದಿನದಲ್ಲಿ ನಾನು ನಿನಗೆ ಸಹಾಯ ಮಾಡಿದೆನು.”(A)
ಇದೇ ಆ “ಸುಪ್ರಸನ್ನತೆಯ ಕಾಲ.” ಇದೇ ಆ “ರಕ್ಷಣೆಯ ದಿನ.”
3 ನಮ್ಮ ಸೇವೆಯು ನಿಂದೆಗೆ ಒಳಗಾಗಬಾರದೆಂದು ನಾವು ಯಾರಿಗೂ ತೊಂದರೆ ಮಾಡುವುದಿಲ್ಲ. 4 ಆದರೆ ಪ್ರತಿಯೊಂದು ವಿಷಯದಲ್ಲಿಯೂ ನಾವು ದೇವರ ಸೇವಕರೆಂಬುದನ್ನು ತೋರ್ಪಡಿಸುತ್ತೇವೆ. ನಾವು ಸಂಕಟಗಳಲ್ಲಿಯೂ ಕೊರತೆಗಳಲ್ಲಿಯೂ ಇಕ್ಕಟ್ಟುಗಳಲ್ಲಿಯೂ 5 ಪೆಟ್ಟುಗಳಲ್ಲಿಯೂ ಸೆರೆಮನೆಗಳಲ್ಲಿಯೂ ಕಲಹಗಳಲ್ಲಿಯೂ ಕಷ್ಟವಾದ ಕೆಲಸಗಳಲ್ಲಿಯೂ ನಿದ್ದೆಗೇಡುಗಳಲ್ಲಿಯೂ ಉಪವಾಸಗಳಲ್ಲಿಯೂ ಬಹು ತಾಳ್ಮೆಯನ್ನು ತೋರುತ್ತೇವೆ. 6 ನಾವು ದೇವರ ಸೇವಕರೆಂಬುದನ್ನು ನಮ್ಮ ತಿಳುವಳಿಕೆಯಿಂದಲೂ ತಾಳ್ಮೆಯಿಂದಲೂ ಕನಿಕರದಿಂದಲೂ ಮತ್ತು ಪರಿಶುದ್ಧ ಜೀವಿತದಿಂದಲೂ ತೋರ್ಪಡಿಸಿದ್ದೇವೆ. ನಾವು ಇದನ್ನು ಪವಿತ್ರಾತ್ಮನಿಂದಲೂ ನಿಜವಾದ ಪ್ರೀತಿಯಿಂದಲೂ 7 ಸತ್ಯವನ್ನು ಹೇಳುವುದರಿಂದಲೂ ದೇವರ ಶಕ್ತಿಯಿಂದಲೂ ತೋರ್ಪಡಿಸುತ್ತೇವೆ. ಪ್ರತಿಯೊಂದರ ವಿರೋಧವಾಗಿ ನಮ್ಮನ್ನು ಸಂರಕ್ಷಿಸಿಕೊಳ್ಳಲು ನಮ್ಮ ಒಳ್ಳೆಯ ಜೀವಿತವನ್ನೇ ಉಪಯೋಗಿಸುತ್ತೇವೆ.
8 ಕೆಲವರು ನಮ್ಮನ್ನು ಸನ್ಮಾನಿಸುತ್ತಾರೆ; ಇನ್ನು ಕೆಲವರು ನಮಗೆ ಅವಮಾನ ಮಾಡುತ್ತಾರೆ. ಕೆಲವರು ನಮ್ಮ ಬಗ್ಗೆ ಒಳ್ಳೆಯ ವಿಷಯಗಳನ್ನು ಹೇಳುತ್ತಾರೆ; ಇನ್ನು ಕೆಲವರು ನಮ್ಮ ಬಗ್ಗೆ ಕೆಟ್ಟ ವಿಷಯಗಳನ್ನು ಹೇಳುತ್ತಾರೆ. ಕೆಲವರು ನಮ್ಮನ್ನು ಸುಳ್ಳುಗಾರರೆನ್ನುತ್ತಾರೆ, ಆದರೆ ನಾವು ಸತ್ಯವನ್ನೇ ಹೇಳುತ್ತೇವೆ. 9 ನಾವು ಪ್ರಸಿದ್ಧರಾಗಿದ್ದರೂ ಕೆಲವರು ನಮ್ಮನ್ನು ಅಪ್ರಸಿದ್ಧರಂತೆ ಕಾಣುತ್ತಾರೆ. ನಾವು ಸಾಯುವಂತಿದ್ದರೂ ಬದುಕಿದ್ದೇವೆ; ಶಿಕ್ಷಿಸಲ್ಪಟ್ಟರೂ ಕೊಲ್ಲಲ್ಪಡಲಿಲ್ಲ; 10 ದುಃಖಿತರಂತೆ ಕಂಡರೂ ಯಾವಾಗಲೂ ಉಲ್ಲಾಸಿಸುವವರಾಗಿದ್ದೇವೆ; ಬಡವರಂತೆ ಕಂಡರೂ ಅನೇಕರನ್ನು ನಂಬಿಕೆಯಲ್ಲಿ ಐಶ್ವರ್ಯವಂತರನ್ನಾಗಿ ಮಾಡುತ್ತಿದ್ದೇವೆ; ಏನೂ ಇಲ್ಲದವರಂತೆ ಕಂಡರೂ ವಾಸ್ತವವಾಗಿ ಎಲ್ಲವನ್ನೂ ಹೊಂದಿದವರಾಗಿದ್ದೇವೆ.
11 ಕೊರಿಂಥದಲ್ಲಿರುವ ನಿಮ್ಮೊಂದಿಗೆ ಬಿಚ್ಚುಮನಸ್ಸಿನಿಂದ ಮಾತಾಡಿದ್ದೇವೆ. ನಮ್ಮ ಹೃದಯಗಳನ್ನು ನಿಮ್ಮ ಮುಂದೆ ತೆರೆದಿಟ್ಟಿದ್ದೇವೆ. 12 ನಿಮ್ಮ ಮೇಲೆ ನಮಗಿರುವ ಪ್ರೀತಿಯು ನಿಂತು ಹೋಗಿಲ್ಲ. ಆದರೆ ನಮ್ಮ ಮೇಲೆ ನಿಮಗಿದ್ದ ಪ್ರೀತಿಯೇ ನಿಂತು ಹೋಗಿದೆ. 13 ನೀವು ನನ್ನ ಮಕ್ಕಳೆಂಬಂತೆ ನಾನು ನಿಮ್ಮೊಂದಿಗೆ ಮಾತಾಡುತ್ತಿದ್ದೇನೆ. ನಾವು ತೆರೆದಂತೆ ನೀವು ಸಹ ನಿಮ್ಮ ಹೃದಯಗಳನ್ನು ತೆರೆಯಿರಿ.
ಯೇಸುವಿನ ಆಜ್ಞೆಗೆ ಬಿರುಗಾಳಿಯ ವಿಧೇಯತೆ
(ಮತ್ತಾಯ 8:23-27; ಲೂಕ 8:22-25)
35 ಆ ದಿನ ಸಂಜೆ, ಯೇಸು ತನ್ನ ಶಿಷ್ಯರಿಗೆ “ನನ್ನೊಂದಿಗೆ ಬನ್ನಿ, ಸರೋವರದ ಆಚೆದಡಕ್ಕೆ ಹೋಗೋಣ” ಎಂದು ಹೇಳಿದನು. 36 ಯೇಸು ಮತ್ತು ಆತನ ಶಿಷ್ಯರು ಅಲ್ಲಿದ್ದ ಜನರನ್ನು ಅಲ್ಲಿಯೇ ಬಿಟ್ಟುಹೋದರು. ಯೇಸು ಕುಳಿತುಕೊಂಡು ಉಪದೇಶಿಸುತ್ತಿದ್ದ ದೋಣಿಯಲ್ಲಿಯೇ ಅವರು ಹೋದರು. ಅವರೊಂದಿಗೆ ಬೇರೆ ದೋಣಿಗಳೂ ಇದ್ದವು. 37 ಅವರು ಹೋಗುತ್ತಿರಲು ಸರೋವರದ ಮೇಲೆ ಬಿರುಗಾಳಿ ಬೀಸಿತು. ಎತ್ತರವಾದ ಅಲೆಗಳು ದೋಣಿಗೆ ಅಪ್ಪಳಿಸತೊಡಗಿದ್ದರಿಂದ ದೋಣಿಯು ನೀರಿನಿಂದ ತುಂಬಿಹೋಯಿತು. 38 ಯೇಸುವು ದೋಣಿಯ ಹಿಂಭಾಗದಲ್ಲಿ ತಲೆದಿಂಬಿನ ಮೇಲೆ ತಲೆಯನ್ನಿಟ್ಟು ನಿದ್ರಿಸುತ್ತಿದ್ದನು. ಶಿಷ್ಯರು ಆತನ ಬಳಿಗೆ ಹೋಗಿ, ಆತನನ್ನು ಎಬ್ಬಿಸಿ, “ಗುರುವೇ, ನೀನು ನಮ್ಮ ಬಗ್ಗೆ ಚಿಂತಿಸುವುದಿಲ್ಲವೆ? ನಾವು ಮುಳುಗಿಹೋಗುತ್ತಿದ್ದೇವೆ!” ಎಂದರು.
39 ಯೇಸು ಎಚ್ಚೆತ್ತು ಬಿರುಗಾಳಿ ಮತ್ತು ಅಲೆಗಳಿಗೆ, “ಪ್ರಶಾಂತವಾಗಿರಿ! ಮೊರೆಯದಿರಿ!” ಎಂದು ಆಜ್ಞಾಪಿಸಿದನು. ಆಗ ಬಿರುಗಾಳಿ ನಿಂತುಹೋಯಿತು ಮತ್ತು ಸರೋವರವು ಪ್ರಶಾಂತವಾಯಿತು.
40 ಯೇಸು ತನ್ನ ಶಿಷ್ಯರಿಗೆ, “ನೀವೇಕೆ ಹೆದರುತ್ತೀರಿ? ನಿಮ್ಮಲ್ಲಿ ಇನ್ನೂ ನಂಬಿಕೆಯಿಲ್ಲವೇ?” ಎಂದು ಕೇಳಿದನು.
41 ಶಿಷ್ಯರು ಬಹಳ ಭಯಪಟ್ಟು, “ಈತನು ಯಾರಿರಬಹುದು? ಗಾಳಿ ಮತ್ತು ನೀರು ಸಹ ಈತನ ಮಾತನ್ನು ಕೇಳುತ್ತವೆಯಲ್ಲಾ?” ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡರು.
Kannada Holy Bible: Easy-to-Read Version. All rights reserved. © 1997 Bible League International