Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಆದಿಕಾಂಡ 50:15-21

ಸಹೋದರರು ಯೋಸೇಫನಿಗೆ ಭಯಪಟ್ಟರು

15 ಯಾಕೋಬನು ಸತ್ತಮೇಲೆ, ಯೋಸೇಫನ ಸಹೋದರರು ಕಳವಳಗೊಂಡರು. ಅವರು “ನಾವು ಮಾಡಿದ ಕಾರ್ಯಕ್ಕೆ ಯೋಸೇಫನು ಇನ್ನು ಮೇಲೆ ನಮ್ಮನ್ನು ದ್ವೇಷಿಸುವನೇ?” ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡರು. 16 ಆದ್ದರಿಂದ ಸಹೋದರರು ಯೋಸೇಫನಿಗೆ ಈ ಸಂದೇಶವನ್ನು ಕಳುಹಿಸಿದರು: “ನಿನ್ನ ತಂದೆ ಸಾಯುವ ಮೊದಲು ನಮಗೆ ಆಜ್ಞಾಪಿಸಿದ್ದೇನೆಂದರೆ, 17 ನೀವು ಯೋಸೇಫನಿಗೆ, ಈ ಸಂದೇಶವನ್ನು ಕೊಡಬೇಕು, ‘ನಾವು ಮಾಡಿದ್ದು ಕೆಟ್ಟಕಾರ್ಯವೇ ನಿಜ. ಅದಕ್ಕಾಗಿ ನೀನು ಅವರನ್ನು ಕ್ಷಮಿಸಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತಿದ್ದೇನೆ.’ ಆದ್ದರಿಂದ ನಾವು ಮಾಡಿದ ಕೆಟ್ಟಕಾರ್ಯಕ್ಕಾಗಿ ನೀನು ನಮ್ಮನ್ನು ಕ್ಷಮಿಸಬೇಕು. ನಾವು ನಿನ್ನ ತಂದೆಯ ದೇವರಿಗೆ ಸೇವಕರಾಗಿದ್ದೇವೆ” ಎಂದು ಹೇಳಿದರು.

ಈ ವಿಷಯಗಳನ್ನು ಕೇಳಿ ಅವನು ದುಃಖದಿಂದ ಅತ್ತನು. 18 ಸಹೋದರರು ಯೋಸೇಫನ ಬಳಿಗೆ ಹೋಗಿ ಅವನ ಮುಂದೆ ಅಡ್ಡಬಿದ್ದು, “ನಾವು ನಿನ್ನ ಸೇವಕರಾಗಿದ್ದೇವೆ” ಎಂದು ಹೇಳಿದರು.

19 ಆಗ ಯೋಸೇಫನು ಅವರಿಗೆ, “ಭಯಪಡಬೇಡಿ. ನಾನು ದೇವರಲ್ಲ; ನಿಮ್ಮನ್ನು ಶಿಕ್ಷಿಸಲು ನನಗೆ ಅಧಿಕಾರವಿಲ್ಲ. 20 ನೀವು ನನಗೆ ಕೇಡುಮಾಡಲು ಯೋಚಿಸಿದಿರಿ. ಆದರೆ ದೇವರು ಒಳ್ಳೆಯದನ್ನೇ ಮಾಡಿದನು. ಬಹಳ ಜನರ ಪ್ರಾಣವನ್ನು ಉಳಿಸುವುದಕ್ಕಾಗಿ ನನ್ನನ್ನು ಬಳಸಿಕೊಳ್ಳುವುದು ದೇವರ ಯೋಜನೆಯಾಗಿತ್ತು. ಈಗಲೂ ಆತನದು ಅದೇ ಯೋಜನೆ. 21 ಆದ್ದರಿಂದ ಭಯಪಡದಿರಿ. ನಾನು ನಿಮ್ಮನ್ನೂ ನಿಮ್ಮ ಮಕ್ಕಳನ್ನೂ ಪೋಷಿಸುತ್ತೇನೆ” ಎಂದು ಹೇಳಿದನು. ಯೋಸೇಫನು ತನ್ನ ಸಹೋದರರೊಂದಿಗೆ ಸೌಮ್ಯವಾಗಿ ಮಾತನಾಡಿದ್ದರಿಂದ ಅವರಿಗೆ ತುಂಬ ಸಂತೋಷವಾಯಿತು.

ಕೀರ್ತನೆಗಳು 103:1-7

ರಚನೆಗಾರ: ದಾವೀದ.

103 ನನ್ನ ಆತ್ಮವೇ, ಯೆಹೋವನನ್ನು ಕೊಂಡಾಡು!
    ನನ್ನ ಸರ್ವಾಂಗಗಳೇ, ಆತನ ಪವಿತ್ರ ಹೆಸರನ್ನು ಕೊಂಡಾಡಿರಿ!
ನನ್ನ ಆತ್ಮವೇ, ಯೆಹೋವನನ್ನು ಕೊಂಡಾಡು!
    ಆತನ ಉಪಕಾರಗಳಲ್ಲಿ ಒಂದನ್ನೂ ಮರೆಯಬೇಡ.
ಆತನು ನಮ್ಮ ಪಾಪಗಳನ್ನೆಲ್ಲಾ ಕ್ಷಮಿಸುವನು;
    ನಮ್ಮ ಕಾಯಿಲೆಗಳನ್ನೆಲ್ಲಾ ವಾಸಿಮಾಡುವನು.
ಆತನು ನಮ್ಮ ಜೀವವನ್ನು ನಾಶನದಿಂದ ರಕ್ಷಿಸಿ
    ನಮಗೆ ಪ್ರೀತಿಯನ್ನೂ ಕನಿಕರವನ್ನೂ ತೋರುವನು.
ಆತನು ನಮಗೆ ಸುವರಗಳನ್ನು ಹೇರಳವಾಗಿ ದಯಪಾಲಿಸುವನು.
    ಹದ್ದಿಗೆ ಬರುವಂತೆಯೇ ನಮಗೆ ಯೌವನವನ್ನು ಬರಮಾಡುತ್ತಾನೆ.
ಯೆಹೋವನು ನೀತಿವಂತನಾಗಿದ್ದಾನೆ.
    ಕುಗ್ಗಿಹೋದವರಿಗೆ ಆತನು ನ್ಯಾಯ ದೊರಕಿಸುವನು.
ಆತನು ತನ್ನ ಕಟ್ಟಳೆಗಳನ್ನು ಮೋಶೆಗೆ ಉಪದೇಶಿಸಿದನು;
    ತನ್ನ ಮಹತ್ಕಾರ್ಯಗಳನ್ನು ಇಸ್ರೇಲರಿಗೆ ತೋರಿಸಿದನು.

ಕೀರ್ತನೆಗಳು 103:8-13

ಯೆಹೋವನು ಕನಿಕರವುಳ್ಳವನೂ ಕೃಪಾಪೂರ್ಣನೂ
    ತಾಳ್ಮೆಯುಳ್ಳವನೂ ಪ್ರೀತಿಪೂರ್ಣನೂ ಆಗಿದ್ದಾನೆ.
ಆತನು ಯಾವಾಗಲೂ ಟೀಕಿಸುವವನಲ್ಲ.
    ಆತನು ನಮ್ಮ ಮೇಲೆ ನಿತ್ಯವೂ ಕೋಪವಾಗಿರುವವನಲ್ಲ.
10 ನಾವು ದೇವರಿಗೆ ವಿರೋಧವಾಗಿ ಪಾಪಮಾಡಿದೆವು.
    ಆದರೂ ತಕ್ಕ ದಂಡನೆಯನ್ನು ಆತನು ನಮಗೆ ಕೊಡಲಿಲ್ಲ.
11 ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವಾಗಿದೆಯೋ
    ಆತನ ಮಹಾಪ್ರೀತಿಯು ಆತನ ಭಕ್ತರ ಮೇಲೆ ಅಷ್ಟೇ ಅಪಾರವಾಗಿದೆ.
12 ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟೋ ದೂರವಿರುವಂತೆ
    ನಮ್ಮ ಪಾಪಗಳನ್ನು ನಮ್ಮಿಂದ ತೆಗೆದು ದೂರ ಮಾಡಿದ್ದಾನೆ.
13 ತಂದೆಯು ಮಕ್ಕಳನ್ನು ಕನಿಕರಿಸುವಂತೆ
    ಯೆಹೋವನು ತನ್ನ ಭಕ್ತರನ್ನು ಕನಿಕರಿಸುವನು.

ರೋಮ್ನಗರದವರಿಗೆ 14:1-12

ಬೇರೆಯವರನ್ನು ಟೀಕಿಸಬೇಡಿ

14 ನಂಬಿಕೆಯಲ್ಲಿ ಬಲಹೀನನಾಗಿರುವ ವ್ಯಕ್ತಿಯನ್ನು ನಿಮ್ಮ ಸಮುದಾಯಕ್ಕೆ ಸೇರಿಸಿಕೊಳ್ಳಿರಿ. ಅವನ ವೈಯಕ್ತಿಕ ಅಭಿಪ್ರಾಯಗಳ ಬಗ್ಗೆ ಅವನೊಂದಿಗೆ ವಾಗ್ವಾದ ಮಾಡಬೇಡಿ. ಒಬ್ಬನು ಯಾವ ಬಗೆಯ ಆಹಾರವನ್ನಾದರೂ ತಿನ್ನಬಹುದೆಂದು ಭಾವಿಸುತ್ತಾನೆ. ಆದರೆ ನಂಬಿಕೆಯಲ್ಲಿ ಬಲಹೀನನಾಗಿರುವ ವ್ಯಕ್ತಿಯು ತಾನು ತರಕಾರಿಗಳನ್ನು ಮಾತ್ರ ತಿನ್ನಬಹುದೆಂದು ಭಾವಿಸುತ್ತಾನೆ. ಯಾವ ಬಗೆಯ ಆಹಾರವನ್ನಾದರೂ ತಿನ್ನಬಹುದೆಂದು ನಂಬುವ ವ್ಯಕ್ತಿಯು ತರಕಾರಿಯನ್ನು ಮಾತ್ರ ತಿನ್ನುವ ವ್ಯಕ್ತಿಗಿಂತ ತನ್ನನ್ನು ಉತ್ತಮನೆಂದು ಭಾವಿಸಿಕೊಳ್ಳಕೂಡದು. ಅಂತೆಯೇ, ತರಕಾರಿಗಳನ್ನು ಮಾತ್ರ ತಿನ್ನುವ ವ್ಯಕ್ತಿಯು ಎಲ್ಲಾ ಆಹಾರಪದಾರ್ಥಗಳನ್ನು ತಿನ್ನುವ ವ್ಯಕ್ತಿಯನ್ನು ತಪ್ಪಿತಸ್ಥನೆಂದು ನಿರ್ಣಯಿಸಕೂಡದು. ದೇವರು ಆ ವ್ಯಕ್ತಿಯನ್ನೂ ಸ್ವೀಕರಿಸಿಕೊಂಡಿದ್ದಾನೆ. ನೀನು ಮತ್ತೊಬ್ಬ ವ್ಯಕ್ತಿಯ ಸೇವಕನಿಗೆ ತೀರ್ಪು ಮಾಡಕೂಡದು. ಅವನು ಮಾಡುತ್ತಿರುವುದು ಸರಿಯೋ ತಪ್ಪೋ ಎಂಬುದನ್ನು ಅವನ ಸ್ವಂತ ಯಜಮಾನನೇ ನಿರ್ಣಯಿಸುವನು. ಪ್ರಭುವಿನ ಸೇವಕನು ನಿರ್ದೋಷಿಯಾಗಿರುತ್ತಾನೆ, ಏಕೆಂದರೆ ಪ್ರಭುವು ಅವನನ್ನು ನಿರ್ದೋಷಿಯನ್ನಾಗಿ ಮಾಡಲು ಶಕ್ತನಾಗಿದ್ದಾನೆ.

ಒಬ್ಬನು ಒಂದು ದಿನಕ್ಕಿಂತ ಮತ್ತೊಂದು ದಿನವನ್ನು ಹೆಚ್ಚು ಮುಖ್ಯವೆಂದು ನಂಬಬಹುದು. ಆದರೆ ಇನ್ನೊಬ್ಬನು ಎಲ್ಲಾ ದಿನಗಳು ಒಂದೇ ಎಂದು ನಂಬಬಹುದು. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸ್ವಂತ ಮನಸ್ಸಿನಲ್ಲಿರುವ ತನ್ನ ಸ್ವಂತ ನಂಬಿಕೆಯ ಬಗ್ಗೆ ನಿಶ್ಚಯದಿಂದಿರಬೇಕು. ಒಂದು ದಿನಕ್ಕಿಂತ ಮತ್ತೊಂದು ದಿನವನ್ನು ಮುಖ್ಯವೆಂದು ಯೋಚಿಸುವ ವ್ಯಕ್ತಿಯು ಪ್ರಭುವಿಗೋಸ್ಕರವಾಗಿಯೇ ಹಾಗೆ ಯೋಚಿಸುವವನಾಗಿದ್ದಾನೆ. ಅಂತೆಯೇ ಎಲ್ಲಾ ಬಗೆಯ ಆಹಾರಪದಾರ್ಥಗಳನ್ನು ತಿನ್ನುವ ವ್ಯಕ್ತಿಯು ಪ್ರಭುವಿಗೋಸ್ಕರವೇ ಅವುಗಳನ್ನು ತಿನ್ನುತ್ತಾನೆ. ಹೌದು, ಅವನು ಆ ಆಹಾರಕ್ಕಾಗಿ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾನೆ.

ಹೌದು, ನಾವೆಲ್ಲರೂ ಪ್ರಭುವಿಗೋಸ್ಕರವೇ ಜೀವಿಸುವವರಾಗಿದ್ದೇವೆ. ನಾವು ಜೀವಿಸುವುದಾಗಲಿ ಸಾಯುವುದಾಗಲಿ ನಮಗೋಸ್ಕರವಲ್ಲ. ನಾವು ಬದುಕುವುದಾಗಿದ್ದರೆ, ಪ್ರಭುವಿಗೋಸ್ಕರ ಬದುಕುತ್ತೇವೆ; ಸಾಯುವುದಾಗಿದ್ದರೆ, ಪ್ರಭುವಿಗೋಸ್ಕರ ಸಾಯುತ್ತೇವೆ. ಆದ್ದರಿಂದ ಬದುಕಿದರೂ ಸತ್ತರೂ ನಾವು ಪ್ರಭುವಿಗೆ ಸೇರಿದವರಾಗಿದ್ದೇವೆ. ಆದಕಾರಣ, ಮತ್ತೆ ಜೀವಿಸುವುದಕ್ಕಾಗಿಯೇ ಕ್ರಿಸ್ತನು ಸತ್ತು ಸಮಾಧಿಯೊಳಗಿಂದ ಜೀವಂತನಾಗಿ ಎದ್ದುಬಂದನು. ಸತ್ತುಹೋದ ಜನರಿಗೂ ಬದುಕಿರುವ ಜನರಿಗೂ ತಾನು ಪ್ರಭುವಾಗಿರಬೇಕೆಂದು ಆತನು ಹೀಗೆ ಮಾಡಿದನು.

10 ಹೀಗಿರಲು, ಕ್ರಿಸ್ತನಲ್ಲಿ ನಿನ್ನ ಸಹೋದರನಾಗಿರುವವನನ್ನು ನೀನು ಟೀಕಿಸುವುದೇಕೆ? ನೀನು ನಿನ್ನ ಸಹೋದರಿನಿಗಿಂತಲೂ ಉತ್ತಮನೆಂದು ಯೋಚಿಸುವುದೇಕೆ? ನಾವೆಲ್ಲರೂ ದೇವರ ಮುಂದೆ ನಿಂತುಕೊಳ್ಳುವೆವು, ಆಗ ಆತನು ನಮ್ಮೆಲ್ಲರಿಗೂ ತೀರ್ಪು ಕೊಡುವನು. 11 ಹೌದು, ಪವಿತ್ರ ಗ್ರಂಥದಲ್ಲಿ ಹೀಗೆ ಬರೆಯಲ್ಪಟ್ಟಿದೆ:

“‘ಪ್ರತಿಯೊಬ್ಬನೂ ನನಗೆ ಅಡ್ಡಬೀಳುವನು.
    ಪ್ರತಿಯೊಬ್ಬನೂ ನನ್ನನ್ನು ದೇವರೆಂದು ಹೇಳುವನು.
    ನನ್ನ ಜೀವದಾಣೆಯಾಗಿಯೂ ಈ ಸಂಗತಿಗಳು ನೆರವೇರುತ್ತವೆ’ ಎನ್ನುತ್ತಾನೆ ಪ್ರಭುವು.”(A)

12 ಆದ್ದರಿಂದ ನಮ್ಮಲ್ಲಿ ಪ್ರತಿಯೊಬ್ಬರೂ ನಮ್ಮನಮ್ಮ ಜೀವಿತದ ಬಗ್ಗೆ ದೇವರಿಗೆ ಲೆಕ್ಕ ಒಪ್ಪಿಸಬೇಕು.

ಮತ್ತಾಯ 18:21-35

ಕ್ಷಮಾಪಣೆಯನ್ನು ಕುರಿತ ಸಾಮ್ಯ

21 ಆಗ ಪೇತ್ರನು ಯೇಸುವಿನ ಬಳಿಗೆ ಬಂದು, “ಪ್ರಭುವೇ, ನನ್ನ ಸಹೋದರನು ನನಗೆ ಯಾವುದಾದರೂ ತಪ್ಪು ಮಾಡುತ್ತಲೇ ಇದ್ದರೆ ನಾನು ಎಷ್ಟು ಸಲ ಅವನನ್ನು ಕ್ಷಮಿಸಬೇಕು? ನಾನು ಅವನನ್ನು ಏಳು ಸಲ ಕ್ಷಮಿಸಬೇಕೋ?” ಎಂದು ಕೇಳಿದನು.

22 ಯೇಸು, “ಏಳು ಸಲಕ್ಕಿಂತಲೂ ಹೆಚ್ಚಾಗಿ ಕ್ಷಮಿಸಬೇಕು. ಅವನು ನಿನಗೆ ಎಪ್ಪತ್ತೇಳು ಸಲ ತಪ್ಪು ಮಾಡಿದರೂ ನೀನು ಅವನನ್ನು ಕ್ಷಮಿಸುತ್ತಲೇ ಇರಬೇಕೆಂದು ನಾನು ನಿನಗೆ ಹೇಳುತ್ತೇನೆ” ಎಂದನು.

23 “ಪರಲೋಕರಾಜ್ಯವು ತನ್ನ ಸೇವಕರು ತನಗೆ ಕೊಡಬೇಕಿದ್ದ ಸಾಲದ ಹಣವನ್ನು ವಸೂಲಿ ಮಾಡಲು ತೀರ್ಮಾನಿಸಿದ ಒಬ್ಬ ರಾಜನಿಗೆ ಹೋಲಿಕೆಯಾಗಿದೆ. 24 ರಾಜನು ತನ್ನ ಹಣವನ್ನು ವಸೂಲಿ ಮಾಡುವುದಕ್ಕೆ ಪ್ರಾರಂಭಿಸಿದನು. ಒಬ್ಬ ಸೇವಕನು ಹತ್ತು ಸಾವಿರ ಬೆಳ್ಳಿಯ ನಾಣ್ಯಗಳನ್ನು ರಾಜನಿಗೆ ಸಾಲ ಕೊಡಬೇಕಿತ್ತು. 25 ಆ ಸೇವಕನು ತನ್ನ ಯಜಮಾನನಾದ ರಾಜನಿಗೆ ಹಣವನ್ನು ಕೊಡಲು ಸಮರ್ಥನಾಗಿರಲಿಲ್ಲ. ಆದ್ದರಿಂದ ಆ ಸೇವಕನನ್ನು ಮತ್ತು ಅವನಲ್ಲಿದ್ದ ಪ್ರತಿಯೊಂದನ್ನೂ ಅವನ ಹೆಂಡತಿ ಮತ್ತು ಮಕ್ಕಳ ಸಮೇತವಾಗಿ ಮಾರಿ, ಬಂದ ಹಣವನ್ನೆಲ್ಲಾ ಕೊಡಬೇಕಾದ ಸಾಲಕ್ಕೆ ವಜಾ ಮಾಡಬೇಕೆಂದು ರಾಜನು ಆಜ್ಞಾಪಿಸಿದನು.

26 “ಆಗ ಸೇವಕನು ರಾಜನ ಕಾಲಿಗೆ ಬಿದ್ದು, ‘ಸ್ವಲ್ಪ ತಾಳ್ಮೆ ತಂದುಕೊಳ್ಳಿ. ನಾನು ನಿಮಗೆ ಕೊಡಬೇಕಾದ ಸಾಲವನ್ನೆಲ್ಲಾ ತೀರಿಸುತ್ತೇನೆ.’ ಎಂದು ಬೇಡಿಕೊಂಡನು. 27 ರಾಜನು ತನ್ನ ಸೇವಕನ ವಿಷಯದಲ್ಲಿ ದುಃಖಪಟ್ಟು ಅವನು ಕೊಡಬೇಕಾದ ಸಾಲವನ್ನು ಮನ್ನಿಸಿ ಅವನನ್ನು ಬಿಡುಗಡೆ ಮಾಡಿದನು.

28 “ತರುವಾಯ, ಅದೇ ಸೇವಕನು ತನಗೆ ನೂರು ಬೆಳ್ಳಿಯ ನಾಣ್ಯಗಳನ್ನು ಕೊಡಬೇಕಾಗಿದ್ದ ಬೇರೊಬ್ಬ ಸೇವಕನನ್ನು ಕಂಡು ಅವನ ಕುತ್ತಿಗೆ ಹಿಡಿದು, ‘ನೀನು ನನಗೆ ಕೊಡಬೇಕಾಗಿರುವ ಹಣವನ್ನು ಕೊಡು’ ಎಂದನು.

29 “ಆ ಸೇವಕನು ಅವನ ಕಾಲಿಗೆ ಬಿದ್ದು, ‘ಸ್ವಲ್ಪ ತಾಳ್ಮೆಯಿಂದಿರು. ನಾನು ನಿನಗೆ ಕೊಡಬೇಕಾದ ಸಾಲವನ್ನೆಲ್ಲಾ ತೀರಿಸುತ್ತೇನೆ’ ಎಂದು ಬೇಡಿಕೊಂಡನು.

30 “ಆದರೆ ಮೊದಲನೇ ಸೇವಕನು ತಾಳಿಕೊಳ್ಳಲಿಲ್ಲ. ತನಗೆ ಸಾಲ ಕೊಡಬೇಕಾಗಿದ್ದ ಸೇವಕನ ವಿಷಯದಲ್ಲಿ ನ್ಯಾಯಾಧಿಪತಿಗೆ ದೂರುಕೊಟ್ಟು ಅವನನ್ನು ಸೆರೆಮನೆಗೆ ಹಾಕಿಸಿದನು. ಆ ಸೇವಕನು ಸಾಲ ತೀರಿಸುವವರೆಗೂ ಸೆರೆಮನೆಯಲ್ಲಿ ಇರಬೇಕಾಯಿತು. 31 ಇದನ್ನು ಕಂಡ ಇತರ ಸೇವಕರೆಲ್ಲರೂ ಬಹಳವಾಗಿ ದುಃಖಪಟ್ಟು ನಡೆದ ಸಂಗತಿಯನ್ನೆಲ್ಲಾ ಯಜಮಾನನಿಗೆ ತಿಳಿಸಿದರು.”

32 “ಆಗ ಯಜಮಾನನು ತನ್ನ ಸೇವಕನನ್ನು ಒಳಗೆ ಕರೆದು, ‘ನೀನು ದುಷ್ಟ ಸೇವಕನು. ನೀನು ನನಗೆ ಹೆಚ್ಚು ಹಣ ಕೊಡಬೇಕಾಗಿತ್ತು. ಆದರೆ ನೀನು ನನ್ನನ್ನು ಬೇಡಿಕೊಂಡದ್ದರಿಂದ ನಿನ್ನ ಸಾಲವನ್ನೆಲ್ಲ ನಾನು ಮನ್ನಿಸಿಬಿಟ್ಟೆ. 33 ಹೀಗಿರಲು ನಾನು ನಿನಗೆ ಕರುಣೆ ತೋರಿದಂತೆ ನಿನ್ನ ಜೊತೆ ಸೇವಕನಿಗೂ ನೀನು ಕರುಣೆ ತೋರಿಸಬೇಕಿತ್ತು’ ಎಂದು ಹೇಳಿ 34 ಬಹುಕೋಪಗೊಂಡು ಅವನನ್ನು ಶಿಕ್ಷಿಸುವುದಕ್ಕಾಗಿ ಸೆರೆಮನೆಗೆ ಹಾಕಿಸಿದನು. ಆ ಸೇವಕನು ತನ್ನ ಸಾಲವನ್ನೆಲ್ಲಾ ತೀರಿಸುವ ತನಕ ಸೆರೆಮನೆಯಲ್ಲಿ ಇರಬೇಕಾಯಿತು.

35 “ಪರಲೋಕದ ನನ್ನ ತಂದೆಯು ನಿಮಗೆ ಮಾಡುವಂತೆಯೇ ಈ ರಾಜನು ಮಾಡಿದನು. ನೀವು ನಿಮ್ಮ ಸಹೋದರನನ್ನಾಗಲಿ ಸಹೋದರಿಯನ್ನಾಗಲಿ ನಿಜವಾಗಿಯೂ ಕ್ಷಮಿಸಬೇಕು. ಇಲ್ಲದಿದ್ದರೆ ಪರಲೋಕದ ನನ್ನ ತಂದೆಯೂ ನಿಮ್ಮನ್ನು ಕ್ಷಮಿಸುವುದಿಲ್ಲ” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International