Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 23

ರಚನೆಗಾರ: ದಾವೀದ.

23 ಯೆಹೋವನೇ ನನಗೆ ಕುರುಬನು.
    ನನಗೆ ಕೊರತೆಯೇ ಇಲ್ಲ.
ಆತನು ನನ್ನನ್ನು ಹಸಿರುಗಾವಲುಗಳಲ್ಲಿ ತಂಗಿಸುವನು.
    ಪ್ರಶಾಂತವಾದ ನೀರಿನ ತೊರೆಗಳ ಬಳಿಯಲ್ಲಿ ನನ್ನನ್ನು ನಡೆಸುವನು.
ಆತನು ತನ್ನ ಹೆಸರಿಗೆ ತಕ್ಕಂತೆ ನನ್ನ ಪ್ರಾಣಕ್ಕೆ ಚೈತನ್ಯ ನೀಡಿ
    ನೀತಿಮಾರ್ಗದಲ್ಲಿ ನನ್ನನ್ನು ನಡೆಸುವನು.
ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ
    ನೀನು ನನ್ನೊಂದಿಗಿರುವುದರಿಂದ ಭಯಪಡುವುದಿಲ್ಲ.
    ನಿನ್ನ ದೊಣ್ಣೆಯೂ ಊರುಗೋಲೂ ನನ್ನನ್ನು ಸಂತೈಸುತ್ತವೆ.
ವೈರಿಗಳ ಎದುರಿನಲ್ಲಿ ನೀನು ನನಗೆ ಔತಣವನ್ನು ಸಿದ್ಧಪಡಿಸಿರುವೆ;
    ನನ್ನ ತಲೆಗೆ ಎಣ್ಣೆಯನ್ನು ಹಚ್ಚಿರುವೆ.
    ನನ್ನ ಪಾತ್ರೆಯು ತುಂಬಿ ಹೊರಸೂಸುತ್ತಿದೆ.
ನಿಶ್ಚಯವಾಗಿ ನನ್ನ ಜೀವಮಾನದಲ್ಲೆಲ್ಲಾ ಶುಭವೂ ಕೃಪೆಯೂ ನನ್ನೊಂದಿಗಿರುತ್ತವೆ.
    ನನ್ನ ಜೀವಮಾನವೆಲ್ಲಾ ಯೆಹೋವನ ಆಲಯದಲ್ಲೇ ವಾಸಿಸುವೆನು.

ಯೆಶಾಯ 22:1-8

ಜೆರುಸಲೇಮಿಗೆ ದೇವರ ಸಂದೇಶ

22 ದಿವ್ಯದರ್ಶನದ ಕಣಿವೆಯ ವಿಷಯವಾಗಿ ದುಃಖದ ಸಂದೇಶ:

ಜನಗಳೇ, ನಿಮಗೆ ಏನಾಯಿತು?
    ನಿಮ್ಮ ಮನೆ ಮಾಳಿಗೆಯ ಮೇಲೆ ಯಾಕೆ ಅಡಗಿರುತ್ತೀರಿ?
ಹಿಂದಿನ ಕಾಲದಲ್ಲಿ ಈ ನಗರವು ಅತ್ಯಂತ ಜನಸಂದಣಿಯಿಂದ ಕೂಡಿತ್ತು.
ಈ ನಗರದಲ್ಲಿ ಗದ್ದಲವೂ ಜನರ ಸಂತಸದ ಧ್ವನಿಯೂ ತುಂಬಿತ್ತು.
    ಆದರೆ ಈಗ ಎಲ್ಲವೂ ಬದಲಾಯಿತು.
ನಿಮ್ಮ ಜನರು ಸತ್ತದ್ದು ಖಡ್ಗದಿಂದಲ್ಲ.
    ಯುದ್ಧದಲ್ಲಿ ಸಾಯದೆ ಬೇರೆ ರೀತಿಯಲ್ಲಿ ಸತ್ತರು.
ಅಧಿಪತಿಗಳೆಲ್ಲಾ ಒಟ್ಟಾಗಿ ಪಲಾಯನಗೈದರು.
    ಆದರೆ ಅವರೆಲ್ಲಾ ಬಿಲ್ಲುಗಳಿಲ್ಲದೆ ಹಿಡಿಯಲ್ಪಟ್ಟರು.
ನಿಮ್ಮ ಎಲ್ಲಾ ಅಧಿಕಾರಿಗಳು ಒಟ್ಟಾಗಿ ಬಹು ದೂರಪ್ರದೇಶಗಳಿಗೆ ಓಡಿದರು.
    ಆದರೆ ಅವರೆಲ್ಲಾ ಹಿಡಿಯಲ್ಪಟ್ಟರು.

ಆದ್ದರಿಂದ ನಾನು ಹೇಳುವುದೇನೆಂದರೆ: “ನೀವು ನನ್ನ ಕಡೆಗೆ ನೋಡಬೇಡಿ!
    ನನ್ನನ್ನು ಅಳಲು ಬಿಡಿರಿ!
ಜೆರುಸಲೇಮಿನ ನಾಶನದ ಕುರಿತಾಗಿ ನನ್ನನ್ನು ಕೂಡಲೇ ಸಂತೈಸಬೇಡಿರಿ.”

ಯೆಹೋವನು ಒಂದು ವಿಶೇಷ ದಿನವನ್ನು ಆರಿಸಿರುತ್ತಾನೆ. ಆ ದಿನದಲ್ಲಿ ಗಲಭೆ ಮತ್ತು ಗಲಿಬಿಲಿಯು ಇರುವದು. ದಿವ್ಯದರ್ಶನದ ಕಣಿವೆಯಲ್ಲಿ ಜನರು ಒಬ್ಬರನ್ನೊಬ್ಬರು ತುಳಿದುಕೊಂಡು ಅವರ ಮೇಲೆಯೇ ನಡೆದುಕೊಂಡು ಹೋಗುವರು. ನಗರದ ಕೋಟೆಗೋಡೆಗಳು ಕೆಡವಲ್ಪಡುವವು. ಕಣಿವೆಯಲ್ಲಿ ವಾಸಿಸುವ ಜನರು ಬೆಟ್ಟದ ಮೇಲಿನ ನಗರದ ಜನರಿಗೆ ಚೀರಾಡುವರು. ಏಲಾಮಿನ ಅಶ್ವಸೈನಿಕರು ತಮ್ಮ ಬತ್ತಳಿಕೆಯನ್ನು ತೆಗೆದುಕೊಂಡು ರಣರಂಗಕ್ಕೆ ಹೊರಡುವರು. ಕೀರ್ ಸ್ಥಳದ ಜನರು ತಮ್ಮ ಗುರಾಣಿಗಳಿಂದ ಶಬ್ದಮಾಡುವರು. ಸೈನ್ಯಗಳು ನಿಮ್ಮ ವಿಶೇಷವಾದ ಕಣಿವೆಯಲ್ಲಿ ಎದುರುಬದುರಾಗಿ ಭೇಟಿಯಾಗುವರು. ಕಣಿವೆಯು ರಥಗಳಿಂದ ತುಂಬಿಹೋಗುವದು. ಅಶ್ವದಳದವರನ್ನು ದ್ವಾರದ ಮುಂದೆ ನಿಲ್ಲಿಸಲಾಗುವದು. ಆ ಸಮಯದಲ್ಲಿ ಯೆಹೂದದ ಜನರು ತಾವು ಕಾಡಿನ ಅರಮನೆಯಲ್ಲಿಟ್ಟಿದ್ದ ಆಯುಧಗಳನ್ನು ಉಪಯೋಗಿಸುವುದಕ್ಕೆ ಮನಸ್ಸು ಮಾಡುವರು. ಯೆಹೂದವನ್ನು ರಕ್ಷಿಸುವ ಗೋಡೆಗಳನ್ನು ಶತ್ರುಗಳು ಕೆಡವಿಹಾಕುವರು.

1 ಪೇತ್ರನು 5:1-5

ದೇವರ ಮಂದೆ

ನಿಮ್ಮ ಸಭಾಹಿರಿಯರಿಗೆ ನಾನು ಈಗ ಕೆಲವು ಮಾತುಗಳನ್ನು ಹೇಳಬೇಕಾಗಿದೆ. ನಾನೂ ಒಬ್ಬ ಹಿರಿಯನಾಗಿದ್ದೇನೆ. ನಾನು ಕ್ರಿಸ್ತನ ಬಾಧೆಗಳನ್ನು ಕಣ್ಣಾರೆ ನೋಡಿದ್ದೇನೆ. ನಮಗೆ ಪ್ರತ್ಯಕ್ಷವಾಗುವ ಪ್ರಭಾವದಲ್ಲಿ ನಾನೂ ಪಾಲುಗಾರನಾಗಿದ್ದೇನೆ. ನೀವು ಜವಾಬ್ದಾರಿ ವಹಿಸಿಕೊಂಡಿರುವ ಸಭೆಯನ್ನು ಪರಿಪಾಲಿಸಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ಅವರು ದೇವರ ಮಂದೆ. ನೀವು ಆ ಮಂದೆಯನ್ನು ಕಾಯಿರಿ, ಏಕೆಂದರೆ ಅದು ನಿಮ್ಮ ಬಯಕೆಯಾಗಿದೆ; ಅದು ಬಲವಂತದಿಂದ ಹೊರಿಸಿದ ಹೊರೆಯಲ್ಲ. ದೇವರು ಅದನ್ನೇ ಇಷ್ಟಪಡುತ್ತಾನೆ. ನೀವು ಆ ಮಂದೆಯನ್ನು ಕಾಯುವುದು ಹಣದ ನಿಮಿತ್ತವಲ್ಲ, ದೇವರ ಸೇವೆ ಮಾಡಲು ನಿಮಗಿರುವ ಸಂತಸದ ನಿಮಿತ್ತವಾಗಿಯೇ. ನೀವು ಜವಾಬ್ದಾರರಾಗಿರುವ ಆ ಮಂದೆಯ ಮೇಲೆ ದಬ್ಬಾಳಿಕೆ ಮಾಡಬೇಡಿ. ನೀವು ಅವರಿಗೆ ಉತ್ತಮ ಮಾದರಿಯಾಗಿರಿ. ಪ್ರಧಾನ ಕುರುಬನು (ಕ್ರಿಸ್ತನು) ಪ್ರತ್ಯಕ್ಷನಾದಾಗ, ನಿಮಗೆ ಕಿರೀಟವು ಲಭಿಸುವುದು. ಮಹಾ ಪ್ರಭಾವವನ್ನು ಹೊಂದಿರುವ ಆ ಕಿರೀಟವು ತನ್ನ ಸೌಂದರ್ಯವನ್ನು ಕಳೆದುಕೊಳ್ಳುವುದೇ ಇಲ್ಲ.

ಯುವಕರೇ, ನಾನು ನಿಮಗೂ ಕೆಲವು ಮಾತುಗಳನ್ನು ಹೇಳಬೇಕಾಗಿದೆ. ನೀವು ಹಿರಿಯರಿಗೆ ಅಧೀನರಾಗಿರಬೇಕು. ನೀವೆಲ್ಲರೂ ಒಬ್ಬರಿಗೊಬ್ಬರು ನಮ್ರತೆಯಿಂದ ನಡೆದುಕೊಳ್ಳಬೇಕು.

“ದೇವರು ಅಹಂಕಾರಿಗಳಿಗೆ ವಿರುದ್ಧನಾಗಿದ್ದಾನೆ.
    ಆದರೆ ಆತನು ನಮ್ರತೆಯಿಂದ ಇರುವ ಜನರಿಗೆ ಕೃಪೆಯನ್ನು ದಯಪಾಲಿಸುವನು.”(A)

1 ಪೇತ್ರನು 5:12-14

ಅಂತಿಮ ಶುಭಾಶಯಗಳು

12 ನಾನು ಈ ಕಿರುಪತ್ರವನ್ನು ಸಿಲ್ವಾನನ ನೆರವಿನಿಂದ ಬರೆದೆನು. ಅವನು ಕ್ರಿಸ್ತನಲ್ಲಿ ನಂಬಿಗಸ್ತನಾದ ಸಹೋದರನೆಂಬುದು ನನಗೆ ತಿಳಿದಿದೆ. ನಾನು ನಿಮ್ಮನ್ನು ಸಂತೈಸಲು ಮತ್ತು ಪ್ರೋತ್ಸಾಹಿಸಲು ಈ ಪತ್ರವನ್ನು ಬರೆದೆನು. ಇದುವೇ ದೇವರ ನಿಜವಾದ ಕೃಪೆ ಎಂಬುದನ್ನು ನಿಮಗೆ ತಿಳಿಸಬೇಕೆಂಬುದೇ ನನ್ನ ಅಪೇಕ್ಷೆಯಾಗಿತ್ತು. ಆ ಕೃಪೆಯಲ್ಲಿ ಸ್ಥಿರತೆಯಿಂದಿರಿ.

13 ಬಾಬಿಲೋನಿನಲ್ಲಿರುವ ಸಭೆಯವರು ನಿಮಗೆ ವಂದನೆಗಳನ್ನು ತಿಳಿಸಿದ್ದಾರೆ. ನಿಮ್ಮನ್ನು ಆರಿಸಿಕೊಂಡಂತೆಯೇ ಆ ಜನರನ್ನೂ ಆರಿಸಿಕೊಳ್ಳಲಾಗಿದೆ. ಕ್ರಿಸ್ತನಲ್ಲಿ ನನ್ನ ಮಗನಾದ ಮಾರ್ಕನೂ ನಿಮಗೆ ವಂದನೆಗಳನ್ನು ತಿಳಿಸಿದ್ದಾನೆ. 14 ನೀವು ಭೇಟಿ ಮಾಡಿದಾಗ ಒಬ್ಬರಿಗೊಬ್ಬರು ಪ್ರೀತಿಯ ಮುದ್ದನ್ನು ನೀಡಿರಿ.

ಕ್ರಿಸ್ತನಲ್ಲಿರುವ ನಿಮಗೆಲ್ಲರಿಗೂ ಶಾಂತಿಯಿರಲಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International