Revised Common Lectionary (Semicontinuous)
49 ನಿನ್ನ ವಾಗ್ದಾನವನ್ನು ನನಗೋಸ್ಕರ ನೆನಪು ಮಾಡಿಕೋ.
ಆ ವಾಗ್ದಾನವೇ ನನ್ನ ನಿರೀಕ್ಷೆಯಾಗಿದೆ.
50 ಸಂಕಟಪಡುತ್ತಿರುವಾಗ ನೀನು ನನ್ನನ್ನು ಸಂತೈಸಿದೆ.
ನಿನ್ನ ನುಡಿಗಳು ನನ್ನನ್ನು ಉಜ್ಜೀವನಗೊಳಿಸಲಿ.
51 ಗರ್ವಿಷ್ಠರು ನನ್ನನ್ನು ಗೇಲಿಮಾಡುತ್ತಲೇ ಇದ್ದರು.
ನಾನಾದರೋ ನಿನ್ನ ಉಪದೇಶಗಳನ್ನು ಅನುಸರಿಸುತ್ತಲೇ ಇದ್ದೆನು.
52 ನಿನ್ನ ಜ್ಞಾನದ ನಿರ್ಧಾರಗಳನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವೆ.
ಅವು ನನ್ನನ್ನು ಸಂತೈಸುತ್ತವೆ.
53 ನಿನ್ನ ಉಪದೇಶಗಳನ್ನು ಅನುಸರಿಸದ ದುಷ್ಟರನ್ನು
ನಾನು ಕಾಣುವಾಗ ಬಹುಕೋಪಗೊಳ್ಳುವೆ.
54 ನನಗಂತೂ, ನಿನ್ನ ಕಟ್ಟಳೆಗಳು
ನನ್ನ ಮನೆಯಲ್ಲಿ[a] ಹಾಡುಗಳಾಗಿವೆ.
55 ರಾತ್ರಿಯಲ್ಲಿ ನಾನು ನಿನ್ನ ಹೆಸರನ್ನೂ
ನಿನ್ನ ಉಪದೇಶಗಳನ್ನೂ ಜ್ಞಾಪಿಸಿಕೊಳ್ಳುವೆ.
56 ಯಾಕೆಂದರೆ, ನಾನು ನಿನ್ನ ನಿಯಮಗಳಿಗೆ ಎಚ್ಚರಿಕೆಯಿಂದ ವಿಧೇಯನಾಗುವೆನು.
ದೇವರ ವಾಗ್ದಾನ
33 ಎರಡನೇ ಬಾರಿ ಯೆರೆಮೀಯನಿಗೆ ಯೆಹೋವನಿಂದ ಸಂದೇಶ ಬಂದಿತು. ಯೆರೆಮೀಯನು ಇನ್ನೂ ಕಾರಾಗೃಹದ ಅಂಗಳದಲ್ಲಿ ಸೆರೆಯಾಗಿದ್ದನು. 2 “ಯೆಹೋವನು ಭೂಮಿಯನ್ನು ಸೃಷ್ಟಿಸಿದನು. ಆತನೇ ಅದನ್ನು ಸುರಕ್ಷಿತವಾಗಿಡುವನು. ಯೆಹೋವನು ಹೀಗೆನ್ನುತ್ತಾನೆ: 3 ‘ಯೆಹೂದವೇ, ನನಗೆ ಪ್ರಾರ್ಥಿಸು. ಆಗ ನಾನು ನಿನಗೆ ಉತ್ತರಿಸುವೆನು. ನಾನು ನಿನಗೆ ಬಹು ಮುಖ್ಯವಾದ ರಹಸ್ಯಗಳನ್ನು ತಿಳಿಸುತ್ತೇನೆ. ಈ ಸಂಗತಿಗಳನ್ನು ನೀನು ಹಿಂದೆಂದೂ ಕೇಳಲಿಲ್ಲ. 4 ಯೆಹೋವನು ಇಸ್ರೇಲಿನ ದೇವರಾಗಿದ್ದಾನೆ. ಜೆರುಸಲೇಮಿನಲ್ಲಿನ ಮನೆಗಳ ಬಗ್ಗೆಯೂ ಮತ್ತು ಯೆಹೂದದ ರಾಜರ ಅರಮನೆಗಳ ಬಗ್ಗೆಯೂ ಯೆಹೋವನು ಹೀಗೆ ಹೇಳುತ್ತಾನೆ. ವೈರಿಗಳು ಆ ಮನೆಗಳನ್ನು ಕೆಡವಿಬಿಡುತ್ತಾರೆ. ವೈರಿಗಳು ನಗರದ ಕೋಟೆಗೋಡೆಗಳ ತುದಿಯವರೆಗೂ ಇಳಿಜಾರಾದ ಗೋಡೆಗಳನ್ನು ಕಟ್ಟುತ್ತಾರೆ. ವೈರಿಗಳು ಖಡ್ಗ ಹಿಡಿದು ಈ ನಗರದ ಜನರೊಂದಿಗೆ ಕಾದಾಡುವರು.
5 “‘ಜೆರುಸಲೇಮಿನ ಜನರು ಅನೇಕ ದುಷ್ಕೃತ್ಯಗಳನ್ನು ಮಾಡಿದ್ದಾರೆ. ನಾನು ಅವರ ಮೇಲೆ ಕೋಪಗೊಂಡಿದ್ದೇನೆ; ಅವರಿಗೆ ವಿರುದ್ಧವಾಗಿದ್ದೇನೆ. ನಾನು ಅಲ್ಲಿ ಬಹಳ ಜನರನ್ನು ಕೊಂದುಹಾಕುವೆನು. ಬಾಬಿಲೋನಿನ ಸೈನ್ಯವು ಜೆರುಸಲೇಮಿನ ವಿರುದ್ಧ ಹೋರಾಡಲು ಬರುವುದು. ಜೆರುಸಲೇಮಿನ ಮನೆಗಳಲ್ಲಿ ಅನೇಕಾನೇಕ ಮೃತದೇಹಗಳು ಕಣ್ಣಿಗೆ ಬೀಳುವವು.
6 “‘ಅನಂತರ ನಾನು ಆ ನಗರದ ಜನರನ್ನು ಕ್ಷಮಿಸುವೆನು. ಆ ಜನರು ಶಾಂತಿಯನ್ನೂ ಸುರಕ್ಷಣೆಯನ್ನೂ ಪಡೆಯುವಂತೆ ಮಾಡುವೆನು. 7 ಯೆಹೂದ ಮತ್ತು ಇಸ್ರೇಲುಗಳಿಗೆ ಮತ್ತೊಮ್ಮೆ ಒಳ್ಳೆಯದಾಗುವಂತೆ ಮಾಡುವೆನು. ಅವರನ್ನು ನಾನು ಮೊದಲಿನಂತೆ ಶಕ್ತಿಶಾಲಿಗಳನ್ನಾಗಿ ಮಾಡುವೆನು. 8 ಅವರು ನನ್ನ ವಿರುದ್ಧ ಪಾಪಗಳನ್ನು ಮಾಡಿದರೂ ಅವರ ಪಾಪಗಳನ್ನು ತೊಳೆದುಬಿಡುವೆನು. ಅವರು ನನ್ನ ವಿರುದ್ಧ ಕಾದಾಡಿದರೂ ಅವರನ್ನು ಕ್ಷಮಿಸುವೆನು. 9 ಆಗ ಜೆರುಸಲೇಮ್ ಒಂದು ಅದ್ಭುತವಾದ ಸ್ಥಳವಾಗುವುದು; ಜನರು ಸಂತೋಷದಿಂದಿರುವರು. ಅಲ್ಲಿ ನಡೆದ ಒಳ್ಳೆಯ ಸಂಗತಿಗಳ ಬಗ್ಗೆ ಕೇಳಿದಾಗ ಬೇರೆ ಜನಾಂಗಗಳ ಜನರು ಅದನ್ನು ಹೊಗಳುವರು; ವಿಸ್ಮಯಪಡುವರು. ನಾನು ಜೆರುಸಲೇಮಿಗೆ ಮಾಡುತ್ತಿರುವ ಒಳಿತಿನ ವಿಷಯವು ಅವರ ಕಿವಿಗೆ ಬೀಳುವುದು.’
10 “‘ನಮ್ಮ ದೇಶವು ಒಂದು ಬರಿದಾದ ಮರುಭೂಮಿಯಾಗಿದೆ. ಅಲ್ಲಿ ಜನರಾಗಲಿ ಪ್ರಾಣಿಗಳಾಗಲಿ ವಾಸಿಸುವದಿಲ್ಲ’ ಎಂದು ನೀವು ಹೇಳುತ್ತಿರುವಿರಿ. ಜೆರುಸಲೇಮಿನ ಬೀದಿಗಳಲ್ಲಿ ಮತ್ತು ಯೆಹೂದದ ಊರುಗಳಲ್ಲಿ ಈಗ ಮೌನವಿದೆ. ಆದರೆ ಬೇಗನೆ ಅಲ್ಲಿ ಧ್ವನಿಕೇಳಿಸುವುದು. 11 ಅಲ್ಲಿ ಹರ್ಷದ ಮತ್ತು ಸಂತೋಷದ ಧ್ವನಿ ಕೇಳಿಬರುವುದು. ಅಲ್ಲಿ ವಧುವರರ ಸಂತೋಷದ ಧ್ವನಿ ಕೇಳಿಸುವುದು. ಜನರು ಯೆಹೋವನ ಆಲಯಕ್ಕೆ ತಮ್ಮ ಕಾಣಿಕೆಗಳನ್ನು ಅರ್ಪಿಸಲು ಬರುವ ಧ್ವನಿಯು ಕೇಳಿಸುವುದು. ಅವರು ‘ಸರ್ವಶಕ್ತನಾದ ಯೆಹೋವನನ್ನು ಸ್ತುತಿಸಿರಿ. ಆತನು ಒಳ್ಳೆಯವನು. ಆತನ ಕರುಣೆಯು ಶಾಶ್ವತವಾಗಿರುವುದು’ ಎಂದು ಹೇಳುವರು. ನಾನು ಯೆಹೂದಕ್ಕೆ ಪುನಃ ಸುಸ್ಥಿತಿಯನ್ನು ತರುವುದರಿಂದ ಜನರು ಹೀಗೆ ಹೇಳುವರು. ಅದು ಮೊದಲಿನಂತೆ ಆಗುವುದು.” ಯೆಹೋವನು ಈ ವಿಷಯಗಳನ್ನು ಹೇಳಿದನು.
12 ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ: “ಈ ಸ್ಥಳವು ಈಗ ಬರಿದಾಗಿದೆ. ಈಗ ಇಲ್ಲಿ ಜನರಾಗಲಿ ಪಶುಗಳಾಗಲಿ ವಾಸಿಸುವದಿಲ್ಲ. ಆದರೆ ಯೆಹೂದದ ಎಲ್ಲಾ ಊರುಗಳಲ್ಲಿ ಜನರು ವಾಸಿಸುವರು; ಕುರುಬರು ವಾಸಿಸುವರು. ಕುರಿಮಂದೆಗಳಿಗಾಗಿ ಹುಲ್ಲುಗಾವಲುಗಳಿರುವವು. 13 ಕುರಿಗಳು ತಮ್ಮ ಮುಂದೆ ನಡೆದುಕೊಂಡು ಹೋಗುವಾಗ ಕುರುಬರು ಅವುಗಳನ್ನು ಎಣಿಸುವರು. ಇಡೀ ದೇಶದಲ್ಲೆಲ್ಲ ಅಂದರೆ ಬೆಟ್ಟಪ್ರದೇಶದಲ್ಲಿಯೂ ಪಶ್ಚಿಮದ ಇಳಿಜಾರು ಪ್ರದೇಶಗಳಲ್ಲಿಯೂ ನೆಗೆವ್ ಪ್ರದೇಶದಲ್ಲಿಯೂ ಯೆಹೂದದ ಎಲ್ಲಾ ಊರುಗಳಲ್ಲಿಯೂ ತಮ್ಮ ಕುರಿಗಳನ್ನು ಎಣಿಸುತ್ತಿರುವರು.”
ಧನಿಕ ಯುವಕನ ಸಮಸ್ಯೆ
(ಮಾರ್ಕ 10:17-31; ಲೂಕ 18:18-30)
16 ಒಬ್ಬನು ಯೇಸುವಿನ ಬಳಿಗೆ ಬಂದು, “ಬೋಧಕನೇ ನಾನು ನಿತ್ಯಜೀವ ಹೊಂದಲು ಯಾವ ಒಳ್ಳೆಯ ಕಾರ್ಯವನ್ನು ಮಾಡಬೇಕು?” ಎಂದು ಕೇಳಿದನು.
17 ಯೇಸು, “ಒಳ್ಳೆಯದನ್ನು ಕುರಿತು ನೀನು ನನ್ನನ್ನು ಕೇಳುವುದೇಕೆ? ದೇವರೊಬ್ಬನೇ ಒಳ್ಳೆಯವನು. ಆದರೆ ನೀನು ನಿತ್ಯಜೀವವನ್ನು ಹೊಂದಬೇಕೆಂದಿದ್ದರೆ ಈ ಆಜ್ಞೆಗಳಿಗೆ ವಿಧೇಯನಾಗು” ಎಂದು ಉತ್ತರಕೊಟ್ಟನು.
18 ಆ ಮನುಷ್ಯನು, “ಯಾವ ಆಜ್ಞೆಗಳು?” ಎಂದು ಕೇಳಿದನು.
ಯೇಸು “ಕೊಲೆ ಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು. 19 ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು ಮತ್ತು ನಿನ್ನನ್ನು ನೀನು ಪ್ರೀತಿಸುವಂತೆ ಬೇರೆಯವರನ್ನೂ ಪ್ರೀತಿಸಬೇಕು”(A) ಎಂದು ಉತ್ತರಕೊಟ್ಟನು.
20 ಆ ಯುವಕನು, “ನಾನು ಇವೆಲ್ಲವುಗಳಿಗೆ ವಿಧೇಯನಾಗಿದ್ದೇನೆ. ನಾನು ಬೇರೆ ಏನಾದರೂ ಮಾಡಬೇಕೇ?” ಎಂದು ಕೇಳಿದನು.
21 ಯೇಸು, “ನೀನು ಸಂಪೂರ್ಣನಾಗಬೇಕೆಂದಿದ್ದರೆ ಹೋಗಿ ನಿನ್ನ ಆಸ್ತಿಯನ್ನೆಲ್ಲಾ ಮಾರಿ, ಬಂದ ಹಣವನ್ನು ಬಡವರಿಗೆ ಕೊಡು. ಆಗ ನಿನಗೆ ಪರಲೋಕದಲ್ಲಿ ದೊಡ್ಡ ಭಂಡಾರ ಇರುವುದು. ನಂತರ ಬಂದು ನನ್ನನ್ನು ಹಿಂಬಾಲಿಸು!” ಎಂದು ಉತ್ತರಕೊಟ್ಟನು.
22 ಇದನ್ನು ಕೇಳಿದಾಗ ಅವನು ಬಹಳ ದುಃಖದಿಂದ ಹೊರಟುಹೋದನು. ಏಕೆಂದರೆ ಅವನು ದೊಡ್ಡ ಐಶ್ವರ್ಯವಂತನಾಗಿದ್ದನು.
Kannada Holy Bible: Easy-to-Read Version. All rights reserved. © 1997 Bible League International