Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಯೋಬನು 30-31

30 “ಈಗಲಾದರೋ, ನನಗಿಂತ ಚಿಕ್ಕವರೂ ನನ್ನನ್ನು ಗೇಲಿ ಮಾಡುತ್ತಾರೆ.
    ಅವರ ತಂದೆಗಳನ್ನು ನನ್ನ ಕುರಿಕಾಯುವ ನಾಯಿಗಳಿಗೂ ಯೋಗ್ಯರಲ್ಲವೆಂದು ತಳ್ಳಿಬಿಟ್ಟಿದ್ದೆನು.
ಆ ಯೌವನಸ್ಥರ ತಂದೆಗಳಿಗೆ ನನ್ನಲ್ಲಿ ಕೆಲಸ ಮಾಡುವಷ್ಟು ಬಲವಿರಲಿಲ್ಲ.
    ಅವರು ಮುದುಕರಾಗಿದ್ದರು; ತ್ರಾಣವಿಲ್ಲದವರಾಗಿದ್ದರು.
ಆ ಮನುಷ್ಯರು ಬಡಕಲಾಗಿದ್ದರು; ತಿನ್ನಲಿಕ್ಕಿಲ್ಲದೆ ಹಸಿವೆಯಿಂದಿದ್ದರು;
    ಅಡವಿಯ ಒಣಧೂಳನ್ನು ತಿನ್ನುತ್ತಿದ್ದರು.
ಅವರು ಮರುಭೂಮಿಯಲ್ಲಿ ಉಪ್ಪುಸಸಿಗಳನ್ನು ಕೀಳುತ್ತಿದ್ದರು;
    ಕುರುಚಲು ಮರದ ಬೇರುಗಳನ್ನು ತಿನ್ನುತ್ತಿದ್ದರು.
ಅವರನ್ನು ಬೇರೆಯವರು ಬಲವಂತದಿಂದ ಹೊರಗಟ್ಟುತ್ತಿದ್ದರು.
    ಕಳ್ಳರನ್ನೋ ಎಂಬಂತೆ ಜನರು ಅವರನ್ನು ಕಂಡು ಕೂಗಿಕೊಳ್ಳುತ್ತಿದ್ದರು.
ಆ ಮುದುಕರು ನದಿಯ ದಂಡೆಗಳಲ್ಲಿಯೂ ನೆಲದ ಕುಳಿಗಳಲ್ಲಿಯೂ
    ಗುಹೆಗಳಲ್ಲಿಯೂ ವಾಸಿಸುತ್ತಿದ್ದರು.
ಅವರು ಪೊದೆಗಳಲ್ಲಿ ಕಾಡುಕತ್ತೆಗಳಂತೆ ಅರಚುತ್ತಿದ್ದರು;
    ಮುಳ್ಳುಗಿಡಗಳ ಕೆಳಗೆ ಕೂಡಿಕೊಳ್ಳುತ್ತಿದ್ದರು.
ಅಯೋಗ್ಯರಾಗಿದ್ದ ಈ ಗುಂಪಿನವರು
    ದೇಶಭ್ರಷ್ಟರಾಗಿದ್ದರು.

“ಈಗಲಾದರೋ ಅವರ ಗಂಡುಮಕ್ಕಳು ನನ್ನ ಮೇಲೆ ಗೇಲಿ ಹಾಡುಗಳನ್ನು ಕಟ್ಟುವರು;
    ನನ್ನ ಹೆಸರು ಅವರಿಗೆ ಹಾಸ್ಯವಾಯಿತು.
10 ಆ ಯೌವನಸ್ಥರು ನನ್ನನ್ನು ಕಂಡು ಅಸಹ್ಯಪಡುತ್ತಾರೆ; ನನ್ನಿಂದ ದೂರ ನಿಲ್ಲುತ್ತಾರೆ.
    ನನ್ನ ಮುಖದ ಮೇಲೆ ಉಗುಳುವುದಕ್ಕೂ ಅವರು ಹಿಂದೆಗೆಯರು!
11 ದೇವರು ನನ್ನ ಬಿಲ್ಲಿನ ತಂತಿಯನ್ನು ಕಿತ್ತು ನನ್ನನ್ನು ಬಲಹೀನಗೊಳಿಸಿದ್ದಾನೆ.
    ಆ ಯೌವನಸ್ಥರು ಕಡಿವಾಣವಿಲ್ಲದವರಾಗಿ ಕೋಪದಿಂದ ನನಗೆ ವಿರೋಧವಾಗಿ ಎದ್ದಿದ್ದಾರೆ.
12 ಅವರು ನನ್ನ ಬಲಗಡೆಯಲ್ಲಿ ಎದ್ದು ನನ್ನ ಕಾಲುಗಳನ್ನು ಹಿಂದಕ್ಕೆ ನೂಕಿ
    ನನ್ನನ್ನು ನಾಶಮಾಡಲು ದಿಬ್ಬಹಾಕಿದ್ದಾರೆ.
13 ನಾನು ತಪ್ಪಿಸಿಕೊಂಡು ಹೋಗುವ ದಾರಿಯನ್ನು ಆ ಯೌವನಸ್ಥರು ಕಾಯುತ್ತಿದ್ದಾರೆ.
    ನನ್ನನ್ನು ನಾಶಮಾಡುವುದರಲ್ಲಿ ಅವರು ಯಶಸ್ವಿಯಾಗುವರು.
    ಅವರಿಗೆ ವಿರುದ್ಧವಾಗಿ ನನಗೆ ಸಹಾಯಮಾಡಲು ಯಾರೂ ಇಲ್ಲ.
14 ಅವರು ಗೋಡೆಯನ್ನು ಒಡೆದು ನುಗ್ಗಿಬರಲು
    ಕಲ್ಲುಗಳು ನನ್ನ ಮೇಲೆ ಬೀಳುವವು.
15 ನಾನು ಭಯದಿಂದ ನಡುಗುತ್ತಿರುವೆ.
    ಗಾಳಿಯು ವಸ್ತುಗಳನ್ನು ಕೊಚ್ಚಿಕೊಂಡು ಹೋಗುವಂತೆ ಆ ಯೌವನಸ್ಥರು ನನ್ನ ಮಾನವನ್ನು ಅಟ್ಟಿಬಿಡುವರು.
    ನನ್ನ ಸುರಕ್ಷತೆಯು ಮೋಡದಂತೆ ಕಾಣದೆಹೋಗುವುದು.

16 “ಈಗ ನನ್ನ ಜೀವಿತವು ಕೊನೆಗೊಂಡಿದೆ; ಸಾವು ಸಮೀಪವಾಗಿದೆ.
    ಸಂಕಟದ ದಿನಗಳು ನನ್ನನ್ನು ಹಿಡಿದುಕೊಂಡಿವೆ.
17 ರಾತ್ರಿಯಲ್ಲಿ ನನ್ನ ಎಲುಬುಗಳೆಲ್ಲಾ ನೋಯುತ್ತವೆ.
    ನನ್ನನ್ನು ಕಚ್ಚುತ್ತಿರುವ ನೋವು ನಿಲ್ಲುವುದೇ ಇಲ್ಲ.
18 ದೇವರು ನನ್ನ ಮೇಲಂಗಿಯ ಕೊರಳಪಟ್ಟಿಯನ್ನು ಹಿಡಿದು
    ನನ್ನ ಬಟ್ಟೆಯನ್ನು ತಿರುವಿಬಿಟ್ಟಿದ್ದಾನೆ.
19 ದೇವರು ನನ್ನನ್ನು ಮಣ್ಣಿಗೆ ಎಸೆದುಬಿಟ್ಟಿದ್ದಾನೆ,
    ನಾನು ಧೂಳಿನಂತೆಯೂ ಬೂದಿಯಂತೆಯೂ ಆಗಿದ್ದೇನೆ.

20 “ದೇವರೇ, ನಾನು ಸಹಾಯಕ್ಕಾಗಿ ನಿನಗೆ ಮೊರೆಯಿಡುವೆನು, ಆದರೆ ನೀನು ಉತ್ತರಿಸುವುದಿಲ್ಲ.
    ನಾನು ಎದ್ದುನಿಂತು ಪ್ರಾರ್ಥಿಸಿದರೂ ನೀನು ನನಗೆ ಗಮನ ಕೊಡುವುದಿಲ್ಲ.
21 ದೇವರೇ, ನೀನು ನನ್ನ ಪಾಲಿಗೆ ಕ್ರೂರನಾಗಿಬಿಟ್ಟೆ.
    ನಿನ್ನ ಶಕ್ತಿಯಿಂದ ನನ್ನನ್ನು ನೋಯಿಸುತ್ತಿರುವೆ.
22 ದೇವರೆ, ನನ್ನನ್ನು ಎತ್ತಿಕೊಂಡು ಹೋಗಲು ನೀನು ಬಿರುಗಾಳಿಗೆ ಅವಕಾಶಕೊಟ್ಟೆ;
    ನೀನು ನನ್ನನ್ನು ಎತ್ತಿ ಬಿರುಗಾಳಿಗೆ ಎಸೆದುಬಿಟ್ಟೆ.
23 ನೀನು ನನ್ನನ್ನು ಮರಣಕ್ಕೀಡು ಮಾಡಿರುವುದು ನನಗೆ ಗೊತ್ತಿದೆ.
    ಜೀವಿಸಿರುವ ಪ್ರತಿಯೊಬ್ಬನೂ ಸಾಯಲೇಬೇಕು.

24 “ಆದರೆ ಈಗಾಗಲೇ ನಾಶವಾಗಿ ಸಹಾಯಕ್ಕಾಗಿ ಕೂಗಿಕೊಳ್ಳುವವನಿಗೆ
    ಯಾರೂ ಕೇಡುಮಾಡುವುದಿಲ್ಲ.
25 ದೇವರೇ, ಕಷ್ಟದಲ್ಲಿರುವವರಿಗಾಗಿ ನಾನು ಅತ್ತದ್ದು ನಿನಗೆ ಗೊತ್ತಿದೆ.
    ಬಡವರಿಗೋಸ್ಕರ ನನ್ನ ಹೃದಯವು ಬಹು ದುಃಖಗೊಂಡದ್ದು ನಿನಗೆ ತಿಳಿದಿದೆ.
26 ಆದರೆ ನಾನು ಒಳ್ಳೆಯವುಗಳನ್ನು ನಿರೀಕ್ಷಿಸುತ್ತಿದ್ದಾಗ ನನಗೆ ಕೇಡುಗಳೇ ಆದವು.
    ನಾನು ಬೆಳಕಿಗಾಗಿ ಎದುರುನೋಡುತ್ತಿದ್ದಾಗ ನನಗೆ ಕತ್ತಲಾಯಿತು.
27 ನನ್ನ ಅಂತರಂಗವು ಕುದಿಯುತ್ತಿದೆ; ಸಂಕಟವು ನಿಲ್ಲುತ್ತಲೇ ಇಲ್ಲ.
    ಸಂಕಟವು ಈಗ ತಾನೆ ಆರಂಭಗೊಂಡಿದೆ.
28 ನಾನು ದುಃಖಿತನೂ ಕುಂದಿಹೋದವನೂ ಆಗಿರುವೆ; ನನಗೆ ಉಪಶಮನವೇ ಇಲ್ಲ.
    ನಾನು ಸಭೆಯಲ್ಲಿ ನಿಂತುಕೊಂಡು ಸಹಾಯಕ್ಕಾಗಿ ಕೂಗುತ್ತಿರುವೆ.
29 ನಾನು ನರಿಗಳಂತೆಯೂ ಉಷ್ಟ್ರಪಕ್ಷಿಗಳಂತೆಯೂ
    ಒಬ್ಬಂಟಿಗನಾಗಿರುವೆ.
30 ನನ್ನ ಚರ್ಮವು ಕಡುಕಪ್ಪಾಗಿದೆ.
    ನನ್ನ ದೇಹವು ಜ್ವರದಿಂದ ಬಿಸಿಯಾಗಿದೆ.
31 ಶೋಕಗೀತೆಗಳನ್ನು ನುಡಿಸಲು ನನ್ನ ಹಾರ್ಪ್ ವಾದ್ಯವನ್ನು ಶೃತಿ ಮಾಡಲಾಗಿದೆ.
    ನನ್ನ ಕೊಳಲು ಅಳುವವರಿಗೆ ತಕ್ಕಂತೆ ನುಡಿಯುತ್ತದೆ.
31 “ಯುವತಿಯನ್ನು ಕಾಮದಾಶೆಯಿಂದ ನೋಡುವುದಿಲ್ಲವೆಂದು
    ನನ್ನ ಕಣ್ಣುಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇನೆ.
ಸರ್ವಶಕ್ತನಾದ ದೇವರು ಜನರಿಗೆ ಏನು ಮಾಡುವನು?
    ದೇವರು ತನ್ನ ಉನ್ನತವಾದ ಪರಲೋಕದಿಂದ ಜನರಿಗೆ ಹೇಗೆ ಪ್ರತಿಫಲವನ್ನು ಕೊಡುವನು?
ಆತನು ದುಷ್ಟರಿಗೆ ತೊಂದರೆಯನ್ನೂ ನಾಶನವನ್ನೂ
    ತಪ್ಪಿತಸ್ಥರಿಗೆ ವಿಪತ್ತನ್ನೂ ಕಳುಹಿಸುವನು.
ನಾನು ಮಾಡುವ ಪ್ರತಿಯೊಂದು ದೇವರಿಗೆ ಗೊತ್ತು
    ಮತ್ತು ನಾನಿಡುವ ಪ್ರತಿಯೊಂದು ಹೆಜ್ಜೆಯನ್ನೂ ಆತನು ಗಮನಿಸುವನು.

“ನಾನು ಸುಳ್ಳು ಹೇಳಲಿಲ್ಲ;
    ಜನರಿಗೆ ಮೋಸಮಾಡಲು ಪ್ರಯತ್ನಿಸಲೂ ಇಲ್ಲ.
ದೇವರು ನ್ಯಾಯವಾದ ಅಳತೆಮಾನಗಳಿಂದ ನನ್ನನ್ನು ತೂಗಿದರೆ,
    ನಾನು ನಿರಪರಾಧಿಯೆಂದು ಆತನಿಗೆ ಗೊತ್ತಾಗುವುದು.
ನಾನು ನೀತಿಮಾರ್ಗವನ್ನು ಬಿಟ್ಟುಹೋಗಿದ್ದರೆ,
    ನನ್ನ ಕಣ್ಣುಗಳು ನನ್ನ ಹೃದಯವನ್ನು ಕೆಟ್ಟದ್ದಕ್ಕೆ ನಡೆಸಿದ್ದರೆ,
    ನನ್ನ ಕೈಗಳು ಪಾಪದಿಂದ ಕೊಳಕಾಗಿದ್ದರೆ,
ನಾನು ಬಿತ್ತಿ ಬೆಳೆಸಿದ ಬೆಳೆಗಳನ್ನು ಬೇರೆಯವರು ತಿನ್ನಲಿ;
    ನಾನು ಬೆಳೆಸಿದ ಸಸಿಗಳು ಕೀಳಲ್ಪಡಲಿ.

“ಒಂದುವೇಳೆ ನಾನು ಪರಸ್ತ್ರೀಯಲ್ಲಿ ಮರುಳುಗೊಂಡಿದ್ದರೆ,
    ನನ್ನ ನೆರೆಯವನ ಹೆಂಡತಿಯೊಂದಿಗೆ ವ್ಯಭಿಚಾರ ಮಾಡಲು ಅವನ ಮನೆಯ ಬಾಗಿಲಲ್ಲಿ ಕಾದುಕೊಂಡಿದ್ದರೆ,
10 ನನ್ನ ಹೆಂಡತಿಯು ಬೇರೊಬ್ಬನಿಗೆ ಸೇವಕಿಯಾಗಲಿ;
    ಬೇರೆಯವರು ಆಕೆಯೊಂದಿಗೆ ಮಲಗಿಕೊಳ್ಳಲಿ.
11 ಯಾಕೆಂದರೆ ವ್ಯಭಿಚಾರ ಅವಮಾನಕರ.
    ಆ ಪಾಪಕ್ಕೆ ದಂಡನೆಯಾಗಲೇಬೇಕು.
12 ವ್ಯಭಿಚಾರವು ಸುಟ್ಟು ನಾಶಮಾಡುವ ಬೆಂಕಿಯಂತಿದೆ.
    ನಾನು ಹೊಂದಿರುವ ಪ್ರತಿಯೊಂದನ್ನು ಅದು ನಾಶಮಾಡಿಬಿಡುತ್ತಿತ್ತು.

13 “ನನ್ನ ಸೇವಕಸೇವಕಿಯರು ನನಗೆ ವಿರೋಧವಾಗಿ ದೂರನ್ನು ಹೊಂದಿದ್ದಾಗ
    ನಾನು ಅವರಿಗೆ ನ್ಯಾಯವನ್ನು ದೊರಕಿಸಿಲ್ಲದಿದ್ದರೆ
14 ದೇವರು ನನ್ನನ್ನು ಮುಖಾಮುಖಿಯಾಗಿ ಸಂಧಿಸುವಾಗ ನಾನೇನು ಮಾಡಲಿ?
    ನಾನು ಮಾಡಿದ್ದಕ್ಕೆ ವಿವರಣೆ ಕೊಡುವಂತೆ ದೇವರು ನನ್ನನ್ನು ಕರೆಯುವಾಗ ನಾನೇನು ಉತ್ತರ ಕೊಡಲಿ?
15 ದೇವರು ನನ್ನನ್ನು ನನ್ನ ತಾಯಿಯ ಗರ್ಭದಲ್ಲಿ ನಿರ್ಮಿಸಿದನು.
    ದೇವರು ನನ್ನ ಸೇವಕಸೇವಕಿಯರನ್ನೂ ನಿರ್ಮಿಸಿದನು.
    ದೇವರು ನಮ್ಮೆಲ್ಲರನ್ನು ನಮ್ಮ ತಾಯಂದಿರ ಗರ್ಭಗಳಲ್ಲಿ ರೂಪಿಸಿದನು.

16 “ಬಡಜನರಿಗೆ ಸಹಾಯಮಾಡಲು ನಾನೆಂದೂ ನಿರಾಕರಿಸಲಿಲ್ಲ;
    ವಿಧವೆಯರಿಗೆ ಬೇಕಾದದ್ದನ್ನೆಲ್ಲ ನಾನು ಒದಗಿಸಿಕೊಟ್ಟೆನು.
17 ನಾನು ಸ್ವಾರ್ಥದಿಂದ ನನ್ನ ಆಹಾರವನ್ನು ಎಂದೂ ಇಟ್ಟುಕೊಳ್ಳಲಿಲ್ಲ.
    ಅನಾಥರು ಹಸಿವೆಯಿಂದಿರಲು ನಾನೆಂದೂ ಅವಕಾಶ ಕೊಟ್ಟಿಲ್ಲ.
18 ನಾನು ನನ್ನ ಜೀವಮಾನವೆಲ್ಲಾ, ಅನಾಥರಿಗೆ ತಂದೆಯಂತಿದ್ದೆನು;
    ವಿಧವೆಯರನ್ನು ಪರಿಪಾಲಿಸಿದೆನು.
19 ಬಟ್ಟೆಯಿಲ್ಲದೆ ಸಂಕಟಪಡುತ್ತಿರುವವರನ್ನೂ
    ಮೇಲಂಗಿಯಿಲ್ಲದ ಬಡವರನ್ನೂ ನಾನು ಕಂಡಾಗಲೆಲ್ಲಾ
20 ಅವರಿಗೆ ಬಟ್ಟೆಗಳನ್ನು ಕೊಟ್ಟೆನು.
    ನನ್ನ ಕುರಿಗಳ ಉಣ್ಣೆಯಿಂದ ಅವರ ಮೈಯನ್ನು ಬೆಚ್ಚಗೆ ಮಾಡಿದೆನು.
    ಅವರು ನನ್ನನ್ನು ಪೂರ್ಣಹೃದಯದಿಂದ ಆಶೀರ್ವದಿಸಿದರು.
21 ನನಗೆ ನ್ಯಾಯಸ್ಥಾನದಲ್ಲಿ ಬೆಂಬಲವಿದ್ದರೂ
    ಅನಾಥರನ್ನು ಕಂಡು ನಾನೆಂದೂ ಅವರ ಮೇಲೆ ಕೈ ಮಾಡಲಿಲ್ಲ.
22 ನಾನು ಹಾಗೆ ಮಾಡಿದ್ದರೆ,
    ನನ್ನ ತೋಳು ಕೀಲುತಪ್ಪಿ ಭುಜದಿಂದ ಮುರಿದುಬೀಳಲಿ.
23 ನಾನು ಆ ಕೆಟ್ಟಕಾರ್ಯಗಳಲ್ಲಿ ಯಾವುದನ್ನೂ ಮಾಡಲಿಲ್ಲ.
    ಯಾಕೆಂದರೆ ನಾನು ದೇವರ ಶಿಕ್ಷೆಗೆ ಹೆದರಿಕೊಂಡಿದ್ದೆ.
    ಆತನ ವೈಭವದ ಎದುರಿನಲ್ಲಿ ನಿಂತುಕೊಳ್ಳಲು ನನಗಾಗಲಿಲ್ಲ.

24 “ನಾನು ನನ್ನ ಐಶ್ವರ್ಯಗಳಲ್ಲಿ ಎಂದೂ ಭರವಸವಿಡಲಿಲ್ಲ.
    ನಾನು ಬಂಗಾರಕ್ಕೆ ‘ನೀನೇ ನನ್ನ ನಿರೀಕ್ಷೆ’ ಎಂದು ಹೇಳಲೇ ಇಲ್ಲ.
25 ನನ್ನ ಐಶ್ವರ್ಯದಿಂದಲೂ ನಾನು ಗರ್ವಿಷ್ಠನಾಗಲಿಲ್ಲ.
    ನಾನು ಗಳಿಸಿದ ಅಪಾರ ಹಣವೂ ನನ್ನನ್ನು ಉಲ್ಲಾಸಪಡಿಸಲಿಲ್ಲ.
26 ಪ್ರಕಾಶಮಾನವಾದ ಸೂರ್ಯನನ್ನಾಗಲಿ
    ಸುಂದರವಾದ ಚಂದ್ರನನ್ನಾಗಲಿ ನಾನೆಂದೂ ಪೂಜಿಸಲಿಲ್ಲ.
27 ನಾನು ಮರುಳುಗೊಂಡು
    ನನ್ನ ಕೈಗೆ ಮುದ್ದಿಡುವುದರ ಮೂಲಕ ಸೂರ್ಯಚಂದ್ರರನ್ನು ಪೂಜಿಸಲಿಲ್ಲ.
28 ನಾನು ಅವುಗಳಲ್ಲಿ ಯಾವುದನ್ನೇ ಮಾಡಿದ್ದರೂ ನನಗೆ ಶಿಕ್ಷೆಯಾಗುತ್ತಿತ್ತು.
    ಯಾಕೆಂದರೆ ಆಗ ನಾನು ಸರ್ವಶಕ್ತನಾದ ದೇವರಿಗೆ ಅಪನಂಬಿಗಸ್ತನಾಗುತ್ತಿದ್ದೆನು.

29 “ನನ್ನ ವೈರಿಗಳು ನಾಶವಾದಾಗ
    ನಾನೆಂದೂ ಸಂತೋಷಪಡಲಿಲ್ಲ.
ನನ್ನ ವೈರಿಗಳಿಗೆ ಕೇಡಾದಾಗ
    ನಾನೆಂದೂ ನಗಲಿಲ್ಲ.
30 ನನ್ನ ವೈರಿಗಳನ್ನು ಶಪಿಸಿ, ಅವರಿಗೆ ಸಾವನ್ನು ಕೋರಲು
    ನಾನೆಂದೂ ನನ್ನ ಬಾಯಿಗೆ ಅವಕಾಶ ಕೊಡಲಿಲ್ಲ.
31 ನಾನು ಅಪರಿಚಿತರಿಗೆ ಯಾವಾಗಲೂ ಊಟ ಕೊಟ್ಟದ್ದು
    ನನ್ನ ಮನೆಯಲ್ಲಿರುವ ಎಲ್ಲರಿಗೂ ಗೊತ್ತಿದೆ.
32 ನಾನು ಅಪರಿಚಿತರನ್ನು ನನ್ನ ಮನೆಗೆ ಯಾವಾಗಲೂ ಆಹ್ವಾನಿಸುತ್ತಿದ್ದೆನು.
    ಆದ್ದರಿಂದ ರಾತ್ರಿಯಲ್ಲಿ ಅವರು ಬೀದಿಗಳಲ್ಲಿ ಮಲಗಿಕೊಳ್ಳಬೇಕಾಗಿರಲಿಲ್ಲ.
33 ಬೇರೆಯವರು ತಮ್ಮ ಪಾಪಗಳನ್ನು ಮರೆಮಾಡಲು ಪ್ರಯತ್ನಿಸಬಹುದು.
    ಆದರೆ ನಾನು ನನ್ನ ಯಾವ ಪಾಪವನ್ನೂ ಮರೆಮಾಡಲಿಲ್ಲ.
34 ಜನರ ಮಾತಿಗೆ ನಾನೆಂದೂ ಭಯಗೊಂಡಿರಲಿಲ್ಲ; ಯಾವ ಕುಟುಂಬದ ಅಸಮ್ಮತಿಗೂ ನಾನೆಂದೂ ಹೆದರಿಕೊಂಡಿರಲಿಲ್ಲ; ಅಂಥ ಯಾವ ಭಯವೂ ನನ್ನನ್ನು ಮೌನಗೊಳಿಸಿ ಮನೆಯೊಳಗಿರಿಸಲಿಲ್ಲ.
    ಯಾಕೆಂದರೆ ನನ್ನ ಮೇಲೆ ಜನರಿಗಿರುವ ದ್ವೇಷಕ್ಕೆ ನಾನು ಹೆದರಿಕೊಂಡಿರಲಿಲ್ಲ.

35 “ಅಯ್ಯೋ, ನನಗೆ ಕಿವಿಗೊಡುವುದಕ್ಕೆ ಯಾರಾದರೊಬ್ಬರು ಇರಬೇಕಿತ್ತು!
    ನಾನು ಸತ್ಯವನ್ನೇ ಹೇಳಿದೆನೆಂಬುದಕ್ಕೆ ಇದೋ, ಇಲ್ಲಿದೆ ನನ್ನ ಸಹಿ!
ಸರ್ವಶಕ್ತನಾದ ದೇವರು ನನಗೆ ಉತ್ತರಕೊಡಲಿ.
    ನನ್ನ ಮೇಲೆ ಅಪವಾದ ಹೊರಿಸುವವನು, ಆಪಾದನೆಯ ಪತ್ರವನ್ನು ಕೊಡಲಿ!
36 ಖಂಡಿತವಾಗಿಯೂ ನಾನು ಆ ಪತ್ರವನ್ನು ನನ್ನ ಹೆಗಲ ಮೇಲೆ ಇಟ್ಟುಕೊಳ್ಳುವೆನು.
    ಅದನ್ನು ಕಿರೀಟವನ್ನಾಗಿ ಧರಿಸಿಕೊಳ್ಳುವೆನು.
37 ನಾನು ಮಾಡಿರುವ ಪ್ರತಿಯೊಂದನ್ನು ದೇವರಿಗೆ ವಿವರಿಸುವೆನು.
    ನಾನು ಅಧಿಪತಿಯಂತೆ ತಲೆಯೆತ್ತಿಕೊಂಡು ಆತನ ಸಮೀಪಕ್ಕೆ ಬರುವೆನು.

38 “ನನ್ನ ಹೊಲವನ್ನು ಬೇರೆಯವರಿಂದ ಕಿತ್ತುಕೊಳ್ಳಲಿಲ್ಲ;
    ಈ ವಿಷಯದಲ್ಲಿ ಯಾರೂ ನನ್ನ ಮೇಲೆ ಅಪವಾದ ಹೊರಿಸಲಾರರು.
39 ನಾನು ರೈತರಿಗೆ ಬೆಳೆಯಲ್ಲಿ ಪಾಲು ಕೊಟ್ಟೆನು;
    ಯಾರೂ ಹಸಿವೆಯಿಂದ ಇರಲು ಬಿಡಲಿಲ್ಲ.
40 ಇವುಗಳಲ್ಲಿ ನಾನು ಯಾವುದನ್ನಾದರೂ ಮಾಡಿದ್ದರೆ,
    ಗೋಧಿ ಮತ್ತು ಬಾರ್ಲಿಗಳ ಬದಲಾಗಿ ನನ್ನ ಹೊಲಗಳಲ್ಲಿ ಮುಳ್ಳುಗಳೂ ಕಳೆಗಳೂ ಬೆಳೆಯಲಿ.”

ಹೀಗೆ ಯೋಬನ ಮಾತುಗಳು ಮುಗಿದವು.

ಅಪೊಸ್ತಲರ ಕಾರ್ಯಗಳು 13:26-52

26 “ನನ್ನ ಸಹೋದರರೇ, ಅಬ್ರಹಾಮನ ಕುಟುಂಬದ ಪುತ್ರರೇ, ನಿಜದೇವರನ್ನು ಆರಾಧಿಸುತ್ತಿರುವ ಯೆಹೂದ್ಯರಲ್ಲದವರೇ, ಕೇಳಿರಿ! ಈ ರಕ್ಷಣೆಯ ಸಂದೇಶವನ್ನು ಕಳುಹಿಸಿರುವುದು ನಮಗಾಗಿಯೇ. 27 ಜೆರುಸಲೇಮಿನಲ್ಲಿ ವಾಸವಾಗಿದ್ದ ಯೆಹೂದ್ಯರು ಮತ್ತು ಯೆಹೂದ್ಯನಾಯಕರು ಯೇಸುವೇ ರಕ್ಷಕನೆಂಬುದನ್ನು ಅರ್ಥಮಾಡಿಕೊಳ್ಳಲಿಲ್ಲ. ಪ್ರವಾದಿಗಳು ಯೇಸುವಿನ ಬಗ್ಗೆ ಬರೆದಿದ್ದ ಮಾತುಗಳನ್ನು ಪ್ರತಿ ಸಬ್ಬತ್‌ದಿನದಂದು ಓದಲಾಗುತ್ತಿತ್ತು. ಆದರೆ ಅವರು ಅರ್ಥಮಾಡಿಕೊಳ್ಳಲಿಲ್ಲ. ಆ ಯೆಹೂದ್ಯರು ಯೇಸುವನ್ನು ಅಪರಾಧಿಯೆಂದು ತೀರ್ಪುಮಾಡಿದರು. ಹೀಗೆ ಮಾಡುವುದರ ಮೂಲಕವಾಗಿ ಅವರು ಪ್ರವಾದಿಗಳ ನುಡಿಗಳನ್ನು ನೆರವೇರಿಸಿದರು! 28 ಯೇಸು ಸಾಯಲೇಬೇಕೆಂಬುದಕ್ಕೆ ಸರಿಯಾದ ಕಾರಣವನ್ನು ಅವರು ಕಂಡುಹಿಡಿಯಲಾಗದಿದ್ದರೂ ಯೇಸುವನ್ನು ಕೊಲ್ಲಿಸಬೇಕೆಂದು ಪಿಲಾತನನ್ನು ಕೇಳಿಕೊಂಡರು.

29 “ಪವಿತ್ರ ಗ್ರಂಥದಲ್ಲಿ ಬರೆದಿರುವಂತೆ ಯೇಸುವಿಗೆ ಸಂಭವಿಸಬೇಕಾಗಿದ್ದ ಕೆಟ್ಟವುಗಳನ್ನೆಲ್ಲ ಯೆಹೂದ್ಯರು ಆತನಿಗೆ ಮಾಡಿದರು. ಬಳಿಕ ಅವರು ಯೇಸುವನ್ನು ಶಿಲುಬೆಯಿಂದ ಕೆಳಗಿಳಿಸಿ ಸಮಾಧಿಯಲ್ಲಿಟ್ಟರು. 30 ಆದರೆ ದೇವರು ಆತನನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದನು! 31 ಇದಾದ ಮೇಲೆ ಗಲಿಲಾಯದಿಂದ ಯೇಸುವಿನೊಂದಿಗೆ ಜೆರುಸಲೇಮಿಗೆ ಬಂದಿದ್ದವರು, ಅನೇಕ ದಿನಗಳವರೆಗೆ ಆತನನ್ನು ನೋಡಿದರು. ಈಗ ಅವರೇ ಜನರಿಗೆ ಸಾಕ್ಷಿಗಳಾಗಿದ್ದಾರೆ.

32 “ದೇವರು ನಮ್ಮ ಪಿತೃಗಳಿಗೆ ಮಾಡಿದ ವಾಗ್ದಾನದ ವಿಷಯವಾದ ಸುವಾರ್ತೆಯನ್ನು ನಾವು ನಿಮಗೆ ಹೇಳುತ್ತೇವೆ. 33 ನಾವು ಅವರ ಸಂತತಿಯವರಾಗಿದ್ದೇವೆ. ದೇವರು ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸುವುದರ ಮೂಲಕ ಆ ವಾಗ್ದಾನವನ್ನು ನಮಗಾಗಿ ನೆರವೇರಿಸಿದ್ದಾನೆ. ಇದರ ಬಗ್ಗೆ ಎರಡನೆ ಕೀರ್ತನೆಯಲ್ಲಿ ಹೀಗೆಂದು ಬರೆದಿದೆ:

‘ನೀನೇ ನನ್ನ ಮಗನು.
    ಇಂದೇ ನಾನು ನಿನ್ನನ್ನು ಪಡೆದೆನು.’(A)

34 ದೇವರು ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ್ದರಿಂದ ಆತನು ಇನ್ನೆಂದಿಗೂ ಸಮಾಧಿಗೆ ಸೇರಿ ಕೊಳೆಯುವುದಿಲ್ಲ ಎಂಬ ವಿಷಯದಲ್ಲಿ ದೇವರು ಇಂತೆಂದಿದ್ದಾನೆ:

‘ನಾನು ದಾವೀದನಿಗೆ ಮಾಡಿದ ಸತ್ಯವೂ ಪವಿತ್ರವೂ
    ಆದ ವಾಗ್ದಾನಗಳನ್ನು ನಿನಗೆ ಕೊಡುತ್ತೇನೆ.’(B)

35 ಆದರೆ ಮತ್ತೊಂದು ಸ್ಥಳದಲ್ಲಿ ದೇವರು ಹೀಗೆನ್ನುತ್ತಾನೆ:

‘ನೀನು ನಿನ್ನ ಪರಿಶುದ್ಧನ ದೇಹವನ್ನು ಸಮಾಧಿಯಲ್ಲಿ ಕೊಳೆಯಲು ಬಿಡುವುದಿಲ್ಲ.’(C)

36 “ದಾವೀದನು ತನ್ನ ಜೀವಮಾನಕಾಲದಲ್ಲಿ ದೇವರ ಚಿತ್ತಕ್ಕನುಸಾರವಾಗಿ ಬಾಳಿದನು. ಬಳಿಕ ಅವನು ಸತ್ತುಹೋದನು. ದಾವೀದನನ್ನು ಅವನ ಪಿತೃಗಳೊಂದಿಗೆ ಸಮಾಧಿಮಾಡಲಾಯಿತು. ಅವನ ದೇಹ ಸಮಾಧಿಯಲ್ಲಿ ಕೊಳೆತುಹೋಯಿತು! 37 ಆದರೆ ದೇವರಿಂದ ಜೀವಂತವಾಗಿ ಎಬ್ಬಿಸಲ್ಪಟ್ಟ ಯೇಸುವಿನ ದೇಹ ಸಮಾಧಿಯಲ್ಲಿ ಕೊಳೆಯಲ್ಪಡಲಿಲ್ಲ. 38-39 ಸಹೋದರರೇ, ಇದು ನಿಮಗೆ ತಿಳಿದಿರಲಿ: ಆತನ ಮೂಲಕವಾಗಿ ನಿಮ್ಮ ಪಾಪಗಳಿಗೆ ಕ್ಷಮೆ ದೊರೆಯುತ್ತದೆ. ಮೋಶೆಯ ಧರ್ಮಶಾಸ್ತ್ರಕ್ಕೆ, ನಿಮ್ಮನ್ನು ನಿಮ್ಮ ಪಾಪಗಳಿಂದ ಬಿಡಿಸಲಾಗಲಿಲ್ಲ. ಆದರೆ ಯೇಸುವಿನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬನು ಆತನ ಮೂಲಕವಾಗಿ ತನ್ನ ಎಲ್ಲಾ ಪಾಪಗಳಿಂದ ಬಿಡುಗಡೆಯಾಗುವನು. 40 ಆದ್ದರಿಂದ ಪ್ರವಾದಿಗಳು ತಿಳಿಸಿರುವ ಈ ಕೆಲವು ಸಂಗತಿಗಳು ನಿಮ್ಮಲ್ಲಿ ನಿಜವಾಗದಂತೆ ಎಚ್ಚರಿಕೆಯಾಗಿರಿ:

41 ‘ಅಪಹಾಸ್ಯ ಮಾಡುವವರೇ,
    ಆಶ್ಚರ್ಯಪಡುತ್ತಾ ನಾಶವಾಗಿಹೋಗಿರಿ.
ನೀವು ನಂಬಲೊಲ್ಲದ ಒಂದು ಕಾರ್ಯವನ್ನು
    ನಾನು ಮಾಡುವೆನು.
ಬೇರೊಬ್ಬನು ನಿಮಗೆ ಅದನ್ನು ವಿವರಿಸಿದರೂ
    ನೀವು ನಂಬುವುದಿಲ್ಲ!’”(D)

42 ಪೌಲ ಮತ್ತು ಬಾರ್ನಬ ಸಭಾಮಂದಿರದಿಂದ ಹೋಗುವಾಗ, ಈ ಸಂಗತಿಗಳ ಬಗ್ಗೆ ಇನ್ನೂ ಹೆಚ್ಚಿಗೆ ತಿಳಿಸುವುದಕ್ಕಾಗಿ ಮುಂದಿನ ಸಬ್ಬತ್‌ದಿನದಂದು ಮತ್ತೆ ಬರಬೇಕೆಂದು ಜನರು ಅವರನ್ನು ಕೇಳಿಕೊಂಡರು. 43 ಸಭೆಯು ಮುಗಿದ ಮೇಲೆ ಅನೇಕ ಯೆಹೂದ್ಯರು ಪೌಲ ಬಾರ್ನಬರನ್ನು ಆ ಸ್ಥಳದಿಂದ ಹಿಂಬಾಲಿಸಿದರು. ಯೆಹೂದ್ಯರ ಧರ್ಮಕ್ಕೆ ಸೇರಿಕೊಂಡಿದ್ದ ಅನೇಕ ಅನ್ಯಮತೀಯರೂ ಆ ಯೆಹೂದ್ಯರೊಂದಿಗಿದ್ದರು. ಮತಾಂತರಗೊಂಡಿದ್ದ ಇವರು ಸಹ ನಿಜದೇವರನ್ನು ಆರಾಧಿಸುತ್ತಿದ್ದರು. ಪೌಲ ಬಾರ್ನಬರು ಅವರೊಂದಿಗೆ ಮಾತಾಡಿ, ದೇವರ ಕೃಪೆಯಲ್ಲೇ ಭರವಸವಿಟ್ಟು ಮುಂದುವರಿಯಬೇಕೆಂದು ಪ್ರೋತ್ಸಾಹಪಡಿಸಿದರು.

44 ಮುಂದಿನ ಸಬ್ಬತ್‌ದಿನದಂದು, ಪ್ರಭುವಿನ ವಾಕ್ಯವನ್ನು ಕೇಳುವುದಕ್ಕಾಗಿ ಬಹುಮಟ್ಟಿಗೆ ನಗರದ ಜನರೆಲ್ಲರೂ ನೆರೆದುಬಂದರು. 45 ಇದನ್ನು ಕಂಡ ಯೆಹೂದ್ಯರಿಗೆ ಬಹಳ ಅಸೂಯೆಯಾಯಿತು. ಅವರು ಪೌಲನ ಮಾತುಗಳನ್ನು ಕಟುವಾಗಿ ದೂಷಿಸಿ ಅವುಗಳಿಗೆ ವಿರೋಧವಾಗಿ ವಾದಿಸಿದರು. 46 ಆದರೆ ಪೌಲ ಬಾರ್ನಬರು ಬಹು ಧೈರ್ಯದಿಂದ ಮಾತಾಡಿ, “ನಾವು ದೇವರ ಸಂದೇಶವನ್ನು ಯೆಹೂದ್ಯರಾದ ನಿಮಗೆ ಮೊದಲು ಹೇಳಬೇಕು. ಆದರೆ ನೀವು ನಿಮ್ಮನ್ನು ನಿತ್ಯಜೀವಕ್ಕೆ ಅಪಾತ್ರರೆಂದು ಎಣಿಸಿಕೊಂಡು ತಿರಸ್ಕರಿಸುತ್ತಿದ್ದೀರಿ. ಆದ್ದರಿಂದ ನಾವು ಅನ್ಯಧರ್ಮದವರ ಬಳಿಗೆ ಹೋಗುತ್ತೇವೆ! 47 ಏಕೆಂದರೆ ಪ್ರಭುವು ನಮಗೆ ಕೊಟ್ಟ ಆಜ್ಞೆ ಇಂತಿದೆ:

‘ಲೋಕದ ಕಟ್ಟಕಡೆಯಲ್ಲಿರುವ ಜನರೆಲ್ಲರಿಗೂ ನೀನು ರಕ್ಷಕನಾಗಿರಬೇಕೆಂದು
    ನಾನು ನಿನ್ನನ್ನು ಇತರ ಜನಾಂಗಗಳಿಗೆ ಬೆಳಕನ್ನಾಗಿ ಮಾಡಿದ್ದೇನೆ.’(E)

48 ಪೌಲನ ಈ ಮಾತುಗಳನ್ನು ಕೇಳಿದ ಯೆಹೂದ್ಯರಲ್ಲದ ಜನರು ಬಹು ಸಂತೋಷಪಟ್ಟು ಪ್ರಭುವಿನ ಸಂದೇಶಕ್ಕಾಗಿ ಸ್ತುತಿಸಿದರು. ನಿತ್ಯಜೀವವನ್ನು ಹೊಂದಿಕೊಳ್ಳಲು ಆಯ್ಕೆಯಾಗಿದ್ದವರೆಲ್ಲರೂ ನಂಬಿಕೊಂಡರು.

49 ಪ್ರಭುವಿನ ಸಂದೇಶವನ್ನು ಆ ನಾಡಿನಲ್ಲೆಲ್ಲಾ ಸಾರಲಾಯಿತು. 50 ಆದರೆ ಯೆಹೂದ್ಯರು ಕೆಲವು ಧಾರ್ಮಿಕ ಸ್ತ್ರೀಯರನ್ನೂ ನಗರದ ನಾಯಕರನ್ನೂ ಪ್ರಚೋಧಿಸಿ, ಪೌಲ ಬಾರ್ನಬರ ಮೇಲೆ ಅವರು ಕೋಪಗೊಳ್ಳುವಂತೆಯೂ ಅವರಿಗೆ ವಿರೋಧಿಗಳಾಗುವಂತೆಯೂ ಮಾಡಿ ಪೌಲ ಬಾರ್ನಬರನ್ನು ಪಟ್ಟಣದಿಂದ ಹೊರಗಟ್ಟಿಸಿದರು. 51 ಆದ್ದರಿಂದ ಪೌಲ ಬಾರ್ನಬರು ಅವರ ವಿರೋಧವಾಗಿ ತಮ್ಮ ಕಾಲಿನ ಧೂಳನ್ನು ಝಾಡಿಸಿ,[a] ಇಕೋನಿಯಾ ಪಟ್ಟಣಕ್ಕೆ ಹೋದರು. 52 ಆದರೆ ಯೇಸುವಿನ ಶಿಷ್ಯರು ಸಂತೋಷವಾಗಿದ್ದರು ಮತ್ತು ಪವಿತ್ರಾತ್ಮಭರಿತರಾಗಿದ್ದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International