Revised Common Lectionary (Semicontinuous)
ಕೃತಜ್ಞತಾ ಸ್ತುತಿಗೀತೆ.
100 ಸಮಸ್ತ ಭೂನಿವಾಸಿಗಳೇ,
ಯೆಹೋವನಿಗೆ ಗಾಯನ ಮಾಡಿರಿ!
2 ಯೆಹೋವನ ಸೇವೆಯನ್ನು ಸಂತೋಷದಿಂದ ಮಾಡಿರಿ;
ಹರ್ಷಗೀತೆಗಳೊಡನೆ ಆತನ ಸನ್ನಿಧಿಗೆ ಬನ್ನಿರಿ!
3 ಯೆಹೋವನೇ ದೇವರೆಂದು ತಿಳಿದುಕೊಳ್ಳಿರಿ.
ನಮ್ಮನ್ನು ಸೃಷ್ಟಿಸಿದವನು ಆತನೇ, ನಾವು ಆತನವರು.
ನಾವು ಆತನ ಜನರೂ ಮಂದೆಯೂ ಆಗಿದ್ದೇವೆ.
4 ಕೃತಜ್ಞತಾಗೀತೆಗಳೊಡನೆ ಆತನ ಪಟ್ಟಣಕ್ಕೆ ಬನ್ನಿರಿ.
ಸ್ತುತಿಗೀತೆಗಳೊಡನೆ ಆತನ ಆಲಯಕ್ಕೆ ಬನ್ನಿರಿ.
ಆತನನ್ನು ಸನ್ಮಾನಿಸುತ್ತಾ ಆತನ ಹೆಸರನ್ನು ಕೊಂಡಾಡಿರಿ.
5 ಯೆಹೋವನು ಒಳ್ಳೆಯವನು!
ಆತನ ಪ್ರೀತಿಯು ಶಾಶ್ವತವಾದದ್ದು,
ಆತನ ನಂಬಿಗಸ್ತಿಕೆಯು ನಿರಂತರವಾದದ್ದು.
17 “ಇಸ್ರೇಲು ದೇಶಗಳಲ್ಲೆಲ್ಲಾ
ಚದರಿಹೋದ ಕುರಿಹಿಂಡಿನಂತಾಗಿದೆ.
ಸಿಂಹಗಳಿಗೆ ಹೆದರಿ ಓಡಿಹೋದ
ಕುರಿಗಳಂತಾಗಿದೆ ಇಸ್ರೇಲು.
ಅದನ್ನು ತಿಂದು ಮುಗಿಸಿದ ಮೊದಲನೆ ಸಿಂಹವೆಂದರೆ
ಅಶ್ಶೂರದ ರಾಜನು.
ಅದರ ಎಲುಬುಗಳನ್ನು ಜಗಿದ ಕೊನೆಯ ಸಿಂಹವೆಂದರೆ
ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು.
18 ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆಂದನು:
‘ನಾನು ಬಾಬಿಲೋನಿನ ರಾಜನನ್ನು ಮತ್ತು ಅವನ ದೇಶವನ್ನು ಬಹುಬೇಗ ದಂಡಿಸುವೆನು.
ಅಶ್ಶೂರದ ರಾಜನನ್ನು ದಂಡಿಸಿದಂತೆ ನಾನು ಅವನನ್ನು ದಂಡಿಸುವೆನು.
19 “‘ಆದರೆ ಇಸ್ರೇಲನ್ನು ಪುನಃ ಅದರ ಹುಲ್ಲುಗಾವಲಿಗೆ ತರುವೆನು.
ಅದು ಕರ್ಮೆಲ್ ಬೆಟ್ಟದ ಮೇಲೆ ಮತ್ತು ಬಾಷಾನಿನ ಪ್ರದೇಶದಲ್ಲಿ ಮೇಯುವದು.
ಅದು ತಿಂದು ತೇಗುವದು.
ಅದು ಎಫ್ರಾಯೀಮಿನ ಮತ್ತು ಗಿಲ್ಯಾದಿನ ಬೆಟ್ಟಗಳಲ್ಲಿ ತಿಂದು ತೃಪ್ತಿಪಡುವದು.’”
20 ಇದು ಯೆಹೋವನ ನುಡಿ. “ಆ ಸಮಯದಲ್ಲಿ ಜನರು ಇಸ್ರೇಲಿನ ದೋಷವನ್ನು ಕಂಡುಹಿಡಿಯಲು ಪ್ರಯತ್ನಿಸುವರು.
ಆದರೆ ಯಾವ ದೋಷಗಳೂ ಇರುವದಿಲ್ಲ.
ಜನರು ಯೆಹೂದದ ಪಾಪಗಳನ್ನು ಹುಡುಕುವ ಪ್ರಯತ್ನ ಮಾಡುವರು.
ಆದರೆ ಯಾವ ಪಾಪಗಳೂ ಸಿಕ್ಕುವದಿಲ್ಲ.
ಏಕೆಂದರೆ ಇಸ್ರೇಲಿನ ಮತ್ತು ಯೆಹೂದದ ಜನರಲ್ಲಿ ಅಳಿದುಳಿದ ಕೆಲವು ಜನರನ್ನು ನಾನು ರಕ್ಷಿಸುತ್ತೇನೆ.
ಅವರ ಪಾಪಗಳನ್ನೆಲ್ಲ ಕ್ಷಮಿಸಿದ್ದೇನೆ.”
31 ಯೆಹೂದ್ಯರು ಯೇಸುವನ್ನು ಕೊಲ್ಲಲು ಮತ್ತೆ ಕಲ್ಲುಗಳನ್ನು ತೆಗೆದುಕೊಂಡರು. 32 ಆದರೆ ಯೇಸು ಅವರಿಗೆ, “ನಾನು ತಂದೆಯಿಂದ ಅನೇಕ ಒಳ್ಳೆಯ ಕಾರ್ಯಗಳನ್ನು ಮಾಡಿದ್ದೇನೆ. ನೀವು ಆ ಕಾರ್ಯಗಳನ್ನು ನೋಡಿದ್ದೀರಿ. ಆ ಒಳ್ಳೆಯ ಕಾರ್ಯಗಳಲ್ಲಿ ಯಾವುದರ ನಿಮಿತ್ತ ನೀವು ನನ್ನನ್ನು ಕೊಲ್ಲಬೇಕೆಂದಿದ್ದೀರಿ?” ಎಂದು ಹೇಳಿದನು.
33 ಯೆಹೂದ್ಯರು, “ನಾವು ನಿನ್ನನ್ನು ಕೊಲ್ಲುತ್ತಿರುವುದು ನೀನು ಮಾಡಿದ ಯಾವುದೇ ಒಳ್ಳೆಯ ಕಾರ್ಯದ ನಿಮಿತ್ತದಿಂದಲ್ಲ. ನೀನು ಮಾಡುತ್ತಿರುವ ದೇವದೂಷಣೆಗಾಗಿ. ನೀನು ಕೇವಲ ಒಬ್ಬ ಮನುಷ್ಯ. ನೀನು ನಿನ್ನನ್ನೇ ದೇವರೆಂದು ಹೇಳಿಕೊಳ್ಳುತ್ತಿರುವೆ! ಆದಕಾರಣ ಕಲ್ಲುಗಳಿಂದ ನಿನ್ನನ್ನು ಕೊಲ್ಲಬೇಕೆಂದಿದ್ದೇವೆ!” ಎಂದು ಉತ್ತರಕೊಟ್ಟರು.
34 ಅದಕ್ಕೆ ಯೇಸು, “ನಿಮ್ಮ ಧರ್ಮಶಾಸ್ತ್ರದಲ್ಲಿ, ‘ನಾನು ನಿಮ್ಮನ್ನು ದೇವರುಗಳೆಂದು ಹೇಳಿದೆನು’(A) ಎಂಬುದಾಗಿ ಬರೆದಿದೆ. 35 ದೇವರ ಸಂದೇಶವನ್ನು ಹೊಂದಿದ್ದ ಜನರನ್ನು ಈ ಪವಿತ್ರ ಗ್ರಂಥವು ದೇವರುಗಳೆಂದು ಕರೆದಿದೆ. ಪವಿತ್ರ ಗ್ರಂಥವು ಯಾವಾಗಲೂ ಸತ್ಯವಾದದ್ದು. 36 ತಂದೆಯೇ ನನ್ನನ್ನು ಪ್ರತಿಷ್ಠಿಸಿ ಈ ಲೋಕಕ್ಕೆ ಕಳುಹಿಸಿಕೊಟ್ಟಿರುವುದರಿಂದ ನಾನು ದೇವರ ಮಗನು ಎಂದು ಹೇಳಿದ್ದಕ್ಕೆ ನೀವು ನನ್ನನ್ನು ದೇವದೂಷಣೆ ಮಾಡುವವನೆಂದು ಹೇಳುವುದೇಕೆ? 37 ನನ್ನ ತಂದೆಯು ಮಾಡುವುದನ್ನು ನಾನು ಮಾಡದಿದ್ದರೆ, ನಾನು ಹೇಳುವುದನ್ನು ನಂಬಬೇಡಿ. 38 ಆದರೆ ನನ್ನ ತಂದೆಯು ಮಾಡುವ ಕಾರ್ಯಗಳನ್ನೇ ನಾನು ಮಾಡಿದರೆ, ಆ ಕಾರ್ಯಗಳಲ್ಲಿ ನೀವು ನಂಬಿಕೆ ಇಡಬೇಕು. ನೀವು ನನ್ನಲ್ಲಿ ನಂಬಿಕೆ ಇಡದಿದ್ದರೂ ನನ್ನ ಕಾರ್ಯಗಳಲ್ಲಾದರೂ ನಂಬಿಕೆ ಇಡಿರಿ. ತಂದೆಯು ನನ್ನಲ್ಲಿದ್ದಾನೆ ಮತ್ತು ನಾನು ತಂದೆಯಲ್ಲಿದ್ದೇನೆ ಎಂಬುದನ್ನು ಆಗ ನೀವು ತಿಳಿದುಕೊಳ್ಳುವಿರಿ ಮತ್ತು ಅರ್ಥಮಾಡಿಕೊಳ್ಳುವಿರಿ” ಎಂದು ಹೇಳಿದನು.
39 ಯೇಸುವನ್ನು ಬಂಧಿಸಲು ಯೆಹೂದ್ಯರು ಮತ್ತೆ ಪ್ರಯತ್ನಿಸಿದರು. ಆದರೆ ಯೇಸು ಅವರಿಂದ ತಪ್ಪಿಸಿಕೊಂಡನು.
40 ಬಳಿಕ ಯೇಸು ಜೋರ್ಡನ್ ನದಿಯ ಆಚೆಯ ದಡಕ್ಕೆ ಹೋದನು. ಯೋಹಾನನು ಮೊದಲು ದೀಕ್ಷಾಸ್ನಾನ ಕೊಡುತ್ತಿದ್ದ ಸ್ಥಳಕ್ಕೆ ಯೇಸು ಹೋಗಿ ಅಲ್ಲಿ ತಂಗಿದನು. 41 ಆಗ ಅನೇಕ ಜನರು ಆತನ ಬಳಿಗೆ ಬಂದರು. “ಯೋಹಾನನು ಎಂದೂ ಅದ್ಭುತಕಾರ್ಯವನ್ನು ಮಾಡಲಿಲ್ಲ. ಆದರೆ ಯೋಹಾನನು ಈ ಮನುಷ್ಯನ (ಯೇಸುವಿನ) ಬಗ್ಗೆ ಹೇಳಿದ ಪ್ರತಿಯೊಂದೂ ಸತ್ಯವಾದದ್ದು” ಎಂದು ಅವರು ಮಾತಾಡಿಕೊಂಡರು. 42 ಮತ್ತು ಅಲ್ಲಿ ಅನೇಕ ಜನರು ಯೇಸುವಿನಲ್ಲಿ ನಂಬಿಕೆ ಇಟ್ಟರು.
Kannada Holy Bible: Easy-to-Read Version. All rights reserved. © 1997 Bible League International