Revised Common Lectionary (Semicontinuous)
ಸೌಲನು ಮಾರ್ಪಾಟಾದನು
9 ಪ್ರಭುವಿನ ಶಿಷ್ಯರನ್ನು ಹೆದರಿಸಲು ಮತ್ತು ಕೊಲ್ಲಲು ಸೌಲನು ಜೆರುಸಲೇಮಿನಲ್ಲಿ ಇನ್ನೂ ಪ್ರಯತ್ನಿಸುತ್ತಿದ್ದನು. ಆದ್ದರಿಂದ ಅವನು ಪ್ರಧಾನಯಾಜಕನ ಬಳಿಗೆ ಹೋಗಿ, 2 ದಮಸ್ಕದಲ್ಲಿ ಕ್ರಿಸ್ತನ ಮಾರ್ಗವನ್ನು ಅನುಸರಿಸುವವರನ್ನು ಕಂಡುಹಿಡಿದು, ಸ್ತ್ರೀಯರು, ಪುರುಷರು ಎನ್ನದೆ ಅವರನ್ನು ಬಂಧಿಸಿ ಜೆರುಸಲೇಮಿಗೆ ಎಳೆದುಕೊಂಡು ಬರಲು ತನಗೆ ಅಧಿಕಾರ ಕೊಟ್ಟಿರುವುದಾಗಿ ದಮಸ್ಕ ಪಟ್ಟಣದ ಸಭಾಮಂದಿರಗಳಿಗೆ ಪತ್ರಬರೆಯಬೇಕೆಂದು ಕೇಳಿಕೊಂಡನು.
3 ಅಂತೆಯೇ ಸೌಲನು ದಮಸ್ಕಕ್ಕೆ ಹೊರಟನು. ಅವನು ಪಟ್ಟಣದ ಸಮೀಪಕ್ಕೆ ಬಂದಾಗ, ಬಹು ಪ್ರಕಾಶಮಾನವಾದ ಬೆಳಕೊಂದು ಆಕಾಶದಿಂದ ಇದ್ದಕ್ಕಿದ್ದಂತೆ ಅವನ ಸುತ್ತಲೂ ಹೊಳೆಯಿತು. 4 ಸೌಲನು ನೆಲಕ್ಕೆ ಬಿದ್ದನು. “ಸೌಲನೇ, ಸೌಲನೇ, ನೀನು ನನ್ನನ್ನೇಕೆ ಹಿಂಸಿಸುತ್ತಿರುವೆ?” ಎಂಬ ವಾಣಿಯೊಂದು ಅವನಿಗೆ ಕೇಳಿಸಿತು.
5 ಸೌಲನು, “ಪ್ರಭುವೇ, ನೀನು ಯಾರು?” ಎಂದನು.
ಆ ವಾಣಿಯು, “ನೀನು ಹಿಂಸಿಸುತ್ತಿರುವ ಯೇಸುವೇ ನಾನು! 6 ಈಗ ಎದ್ದು ಪಟ್ಟಣದೊಳಗೆ ಹೋಗು. ನೀನು ಏನು ಮಾಡಬೇಕೆಂಬುದನ್ನು ಅಲ್ಲಿಯ ಒಬ್ಬನು ನಿನಗೆ ತಿಳಿಸುವನು” ಎಂದಿತು.
7 ಸೌಲನೊಂದಿಗೆ ಪ್ರಯಾಣ ಮಾಡುತ್ತಿದ್ದವರು ಅಲ್ಲೇ ನಿಂತಿದ್ದರು. ಅವರು ಏನೂ ಮಾತಾಡಲಿಲ್ಲ. ಆ ಜನರು ವಾಣಿಯನ್ನು ಕೇಳಿದರು. ಆದರೆ ಅವರು ಯಾರನ್ನೂ ನೋಡಲಿಲ್ಲ. 8 ಸೌಲನು ನೆಲದ ಮೇಲಿಂದ ಎದ್ದು ಕಣ್ಣುಗಳನ್ನು ತೆರೆದನು. ಆದರೆ ಅವನಿಗೆ ಏನೂ ಕಾಣಲಿಲ್ಲ. ಆದ್ದರಿಂದ ಸೌಲನೊಂದಿಗಿದ್ದ ಜನರು ಅವನನ್ನು ಕೈಹಿಡಿದು ದಮಸ್ಕಕ್ಕೆ ಕರೆದೊಯ್ದರು. 9 ಮೂರು ದಿನಗಳವರೆಗೆ ಸೌಲನಿಗೆ ಏನೂ ಕಾಣಲಿಲ್ಲ. ಅವನು ಊಟವನ್ನೂ ಮಾಡಲಿಲ್ಲ ನೀರನ್ನೂ ಕುಡಿಯಲಿಲ್ಲ.
10 ದಮಸ್ಕದಲ್ಲಿ ಯೇಸುವಿನ ಶಿಷ್ಯನೊಬ್ಬನಿದ್ದನು. ಅವನ ಹೆಸರು ಅನನೀಯ. ಪ್ರಭುವು ಅನನೀಯನನ್ನು ದರ್ಶನದಲ್ಲಿ “ಅನನೀಯನೇ” ಎಂದು ಕರೆದನು.
ಅನನೀಯನು, “ಪ್ರಭುವೇ, ಇಗೋ ಇದ್ದೇನೆ” ಎಂದು ಉತ್ತರಕೊಟ್ಟನು.
11 ಪ್ರಭುವು ಅನನೀಯನಿಗೆ, “ಎದ್ದು, ‘ನೇರಬೀದಿ’ ಎಂಬ ಬೀದಿಗೆ ಹೋಗು. ಅಲ್ಲಿರುವ ಯೂದನ[a] ಮನೆಯನ್ನು ಕಂಡುಕೊಂಡು ತಾರ್ಸಸ್ ಪಟ್ಟಣದ ಸೌಲನ ಬಗ್ಗೆ ವಿಚಾರಿಸು. ಈಗ ಅವನು ಅಲ್ಲಿ ಪ್ರಾರ್ಥಿಸುತ್ತಿದ್ದಾನೆ. 12 ಸೌಲನು ಒಂದು ದರ್ಶನವನ್ನು ಕಂಡಿದ್ದಾನೆ. ಅನನೀಯನೆಂಬ ಒಬ್ಬನು ಅವನ ಬಳಿಗೆ ಬಂದು ತನ್ನ ಕೈಗಳನ್ನು ಅವನ ಮೇಲಿಡುವನು. ಆಗ ಅವನಿಗೆ ಮತ್ತೆ ದೃಷ್ಟಿಬರುವುದು. ಇದೇ ಆ ದರ್ಶನ” ಎಂದು ಹೇಳಿದನು.
13 ಆದರೆ ಅನನೀಯನು, “ಪ್ರಭುವೇ, ಜೆರುಸಲೇಮಿನಲ್ಲಿರುವ ನಿನ್ನ ಪವಿತ್ರ ಜನರಿಗೆ ಈ ಮನುಷ್ಯನು ಮಾಡಿದ ಅನೇಕ ಕೆಟ್ಟಕೃತ್ಯಗಳ ಬಗ್ಗೆ ಜನರು ನನಗೆ ಹೇಳಿದ್ದಾರೆ. 14 ಈಗ ಅವನು ದಮಸ್ಕಕ್ಕೂ ಬಂದಿದ್ದಾನೆ. ನಿನ್ನಲ್ಲಿ ನಂಬಿಕೆ ಇಡುವ[b] ಜನರೆಲ್ಲರನ್ನು ಬಂಧಿಸುವ ಅಧಿಕಾರವನ್ನು ಮಹಾಯಾಜಕರು ಅವನಿಗೆ ಕೊಟ್ಟಿದ್ದಾರೆ” ಎಂದು ಹೇಳಿದನು.
15 ಆದರೆ ಪ್ರಭುವು ಅನನೀಯನಿಗೆ, “ಹೋಗು! ಮುಖ್ಯವಾದ ಕೆಲಸಕ್ಕಾಗಿ ನಾನು ಸೌಲನನ್ನು ಆರಿಸಿಕೊಂಡಿದ್ದೇನೆ. ಅವನು ನನ್ನ ಬಗ್ಗೆ ರಾಜರುಗಳಿಗೂ ಯೆಹೂದ್ಯರಿಗೂ ಮತ್ತು ಇತರ ಜನಾಂಗಗಳಿಗೂ ತಿಳಿಸಬೇಕಾಗಿದೆ. 16 ಅವನು ನನ್ನ ಹೆಸರಿನ ನಿಮಿತ್ತ ಅನುಭವಿಸಬೇಕಾಗಿರುವ ಹಿಂಸೆಯನ್ನು ನಾನೇ ಅವನಿಗೆ ತೋರಿಸಿಕೊಡುವೆನು” ಎಂದು ಹೇಳಿದನು.
17 ಆದ್ದರಿಂದ ಅನನೀಯನು ಅಲ್ಲಿಂದ ಹೊರಟು ಯೂದನ ಮನೆಗೆ ಹೋದನು. ಅವನು ಸೌಲನ ಮೇಲೆ ತನ್ನ ಕೈಗಳನ್ನಿಟ್ಟು, “ಸೌಲನೇ, ನನ್ನ ಸಹೋದರನೇ, ಪ್ರಭುವಾದ ಯೇಸು ನನ್ನನ್ನು ಕಳುಹಿಸಿದ್ದಾನೆ. ನೀನು ಇಲ್ಲಿಗೆ ಬರುವಾಗ ದಾರಿಯಲ್ಲಿ ಕಂಡದ್ದು ಆತನನ್ನೇ. ನೀನು ಮತ್ತೆ ದೃಷ್ಟಿಪಡೆಯಬೇಕೆಂತಲೂ ಪವಿತ್ರಾತ್ಮಭರಿತನಾಗಬೇಕೆಂತಲೂ ಯೇಸು ನನ್ನನ್ನು ಕಳುಹಿಸಿದನು” ಎಂದು ಹೇಳಿದನು. 18 ಇದ್ದಕ್ಕಿದ್ದಂತೆ, ಮೀನಿನ ಪರೆಯಂತಿದ್ದ ಏನೋ ಒಂದು ಸೌಲನ ಕಣ್ಣುಗಳಿಂದ ಕಳಚಿಬಿದ್ದಿತು. ಸೌಲನಿಗೆ ಮತ್ತೆ ಕಣ್ಣುಕಾಣತೊಡಗಿತು! ಸೌಲನು ಮೇಲೆದ್ದು, ದೀಕ್ಷಾಸ್ನಾನ ಮಾಡಿಸಿಕೊಂಡನು. 19 ಬಳಿಕ ಅವನು ಊಟಮಾಡಿ ಚೇತರಿಸಿಕೊಂಡನು.
ಸೌಲನು ದಮಸ್ಕದಲ್ಲಿ ಬೋಧಿಸುವನು
ಸೌಲನು ದಮಸ್ಕದಲ್ಲಿ ಯೇಸುವಿನ ಶಿಷ್ಯರೊಂದಿಗೆ ಕೆಲವು ದಿನಗಳವರೆಗೆ ಇದ್ದನು. 20 ಅವನು ತಡಮಾಡದೆ ಸಭಾಮಂದಿರಗಳಿಗೆ ಹೋಗಿ “ಯೇಸುವೇ ದೇವಕುಮಾರ”ನೆಂದು ಬೋಧಿಸತೊಡಗಿದನು.
ದೇವಾಲಯದ ಪ್ರತಿಷ್ಠೆಗಾಗಿ ರಚಿಸಲ್ಪಟ್ಟಿದೆ. ರಚನೆಗಾರ: ದಾವೀದ.
30 ಯೆಹೋವನೇ, ನನ್ನನ್ನು ಇಕ್ಕಟ್ಟುಗಳಿಂದ ಮೇಲೆತ್ತಿದವನು ನೀನೇ;
ಶತ್ರುಗಳಿಗೆ ಸೋತುಹೋಗಿ ಅವರ ಹಾಸ್ಯಕ್ಕೆ ಗುರಿಯಾಗದಂತೆ ಮಾಡಿದವನು ನೀನೇ;
ಆದ್ದರಿಂದ ನಿನ್ನನ್ನು ಕೊಂಡಾಡುವೆನು.
2 ನನ್ನ ದೇವರಾದ ಯೆಹೋವನೇ, ನಾನು ನಿನಗೆ ಪ್ರಾರ್ಥಿಸಿದಾಗ
ನೀನು ನನ್ನನ್ನು ಗುಣಪಡಿಸಿದೆ.
3 ಯೆಹೋವನೇ, ನೀನು ನನ್ನನ್ನು ಸಾವಿನಿಂದ ಬದುಕಿಸಿದೆ;
ಪಾತಾಳಕ್ಕೆ ಇಳಿದುಹೋಗದಂತೆ ನನ್ನನ್ನು ಕಾಪಾಡಿದೆ.[a]
4 ಯೆಹೋವನ ಭಕ್ತರೇ, ಆತನನ್ನು ಕೀರ್ತಿಸಿರಿ!
ಆತನ ಪರಿಶುದ್ಧ ಹೆಸರನ್ನು[b] ಕೊಂಡಾಡಿರಿ.
5 ಆತನ ಕೋಪವು ಕ್ಷಣಮಾತ್ರವಿರುವುದು.
ಆತನ ಪ್ರೀತಿಯಾದರೋ ಶಾಶ್ವತವಾದದ್ದು.
ನಾನು ಸಂಜೆಯಲ್ಲಿ ದುಃಖದಿಂದ ಮಲಗಿಕೊಂಡರೂ
ಮುಂಜಾನೆ ಹರ್ಷದಿಂದ ಎಚ್ಚರಗೊಳ್ಳುವೆನು.
6 ನಾನು ಸುರಕ್ಷಿತವಾಗಿದ್ದಾಗ
ನನಗೆ ಕೇಡೇ ಇಲ್ಲವೆಂದುಕೊಂಡೆನು.
7 ಯೆಹೋವನೇ, ನಾನು ನಿನ್ನ ಕೃಪೆಗೆ ಪಾತ್ರನಾಗಿದ್ದಾಗ
ನನ್ನನ್ನು ಯಾವುದೂ ಸೋಲಿಸಲಾರದು ಎಂದುಕೊಂಡೆನು.
ಆದರೆ ನೀನು ನನಗೆ ವಿಮುಖನಾದಾಗ
ಭಯದಿಂದ ನಡುಗತೊಡಗಿದೆ.
8 ಯೆಹೋವನೇ, ನಾನು ನಿನಗೆ ಅಭಿಮುಖನಾಗಿ ಪ್ರಾರ್ಥಿಸಿದೆ;
ಕರುಣೆತೋರು ಎಂದು ನಿನ್ನನ್ನು ಕೇಳಿಕೊಂಡೆ.
9 “ದೇವರೇ, ನಾನು ಸತ್ತು ಸಮಾಧಿಯೊಳಗೆ ಹೋದರೆ,
ಅದರಿಂದ ಒಳ್ಳೆಯದೇನಾದೀತು?
ಸತ್ತವರು ಕೇವಲ ಮಣ್ಣಿನಲ್ಲಿ ಬಿದ್ದಿರುವರು!
ಅವರು ನಿನ್ನನ್ನು ಸ್ತುತಿಸುವುದಿಲ್ಲ!
ಶಾಶ್ವತವಾದ ನಿನ್ನ ನಂಬಿಗಸ್ತಿಕೆಯ ಕುರಿತು ಅವರು ಹೇಳುವುದಿಲ್ಲ.
10 ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳಿ ನನಗೆ ಕರುಣೆತೋರು!
ಯೆಹೋವನೇ, ನನಗೆ ಸಹಾಯಮಾಡು!” ಎಂದು ಕೇಳಿಕೊಂಡೆನು.
11 ಆಗ ನೀನು ನನಗೆ ಸಹಾಯಮಾಡಿ ನನ್ನ ಗೋಳಾಟವನ್ನು
ಸಂತೋಷದ ನರ್ತನವನ್ನಾಗಿ ಮಾರ್ಪಡಿಸಿದೆ.
ನನ್ನ ಶೋಕವಸ್ತ್ರಗಳನ್ನು ತೆಗೆದುಹಾಕಿ
ಹರ್ಷವಸ್ತ್ರಗಳನ್ನು ಹೊದಿಸಿದೆ.
12 ನಾನು ಮೌನವಾಗಿರದೆ ಸದಾಕಾಲ ನಿನ್ನನ್ನು ಸ್ತುತಿಸುವೆನು.
ನನ್ನ ದೇವರಾದ ಯೆಹೋವನೇ, ನಿನ್ನನ್ನು ಸದಾಕಾಲ ಸ್ತುತಿಸುವೆನು.
11 ನಂತರ ನಾನು ನೋಡಿದಾಗ, ಅನೇಕ ದೇವದೂತರ ಧ್ವನಿಗಳನ್ನು ಕೇಳಿದೆನು. ಈ ದೇವದೂತರು ಸಿಂಹಾಸನದ, ನಾಲ್ಕು ಜೀವಿಗಳ ಮತ್ತು ಹಿರಿಯರ ಸುತ್ತಲೂ ಇದ್ದರು. ಅವರ ಸಂಖ್ಯೆಯು ಲಕ್ಷೋಪಲಕ್ಷವಾಗಿಯೂ ಕೋಟ್ಯಾನು ಕೋಟಿಯಾಗಿಯೂ ಇತ್ತು. 12 ಈ ದೇವದೂತರು ಗಟ್ಟಿಯಾದ ಧ್ವನಿಯಿಂದ ಇಂತೆಂದರು:
“ವಧಿತನಾದ ಕುರಿಮರಿಯು ಅಧಿಕಾರವನ್ನು, ಸಂಪತ್ತನ್ನು, ಜ್ಞಾನವನ್ನು, ಬಲವನ್ನು,
ಗೌರವವನ್ನು, ಪ್ರಭಾವವನ್ನು, ಸ್ತೋತ್ರವನ್ನು ಪಡೆಯಲು ಯೋಗ್ಯನಾಗಿದ್ದಾನೆ!”
13 ಇದಲ್ಲದೆ ಆಕಾಶದಲ್ಲಿಯೂ ಭೂಮಿಯಲ್ಲಿಯೂ ಭೂಮಿಯ ಕೆಳಭಾಗದಲ್ಲೂ ಸಮುದ್ರದಲ್ಲೂ ಇರುವ ಪ್ರತಿಯೊಂದು ಜೀವಿಗಳು ಹೀಗೆ ಹೇಳುವುದನ್ನು ಕೇಳಿದೆನು:
“ಸಿಂಹಾಸನದ ಮೇಲೆ ಕುಳಿತಿರುವಾತನಿಗೂ ಕುರಿಮರಿಯಾದಾತನಿಗೂ
ಸ್ತೋತ್ರ, ಗೌರವ, ಪ್ರಭಾವ, ಅಧಿಕಾರಗಳು ಯುಗಯುಗಾಂತರಗಳಲ್ಲಿಯೂ ಇರಲಿ!”
14 ಆ ನಾಲ್ಕು ಜೀವಿಗಳು “ಆಮೆನ್!” ಎಂದು ಹೇಳಿದವು. ಹಿರಿಯರು ಮೊಣಕಾಲೂರಿ ಆರಾಧಿಸಿದರು.
ಏಳು ಮಂದಿ ಶಿಷ್ಯರಿಗೆ ಯೇಸುವಿನ ದರ್ಶನ
21 ತರುವಾಯ, ಯೇಸು ತನ್ನ ಶಿಷ್ಯರಿಗೆ ತಿಬೇರಿಯ (ಗಲಿಲಾಯ) ಸರೋವರದ ಬಳಿ ಕಾಣಿಸಿಕೊಂಡನು. ಅದು ಹೀಗೆ ನಡೆಯಿತು: 2 ಕೆಲವು ಶಿಷ್ಯರು ಒಟ್ಟಾಗಿ ಸೇರಿದ್ದರು. ಅವರು ಯಾರೆಂದರೆ, ಸೀಮೋನ್ ಪೇತ್ರ, ದಿದುಮನೆಂಬ ತೋಮ, ಗಲಿಲಾಯಕ್ಕೆ ಸೇರಿದ ಕಾನಾ ಊರಿನವನಾದ ನತಾನಿಯೇಲ, ಜೆಬೆದಾಯನ ಇಬ್ಬರು ಗಂಡುಮಕ್ಕಳು ಮತ್ತು ಇನ್ನಿಬ್ಬರು ಶಿಷ್ಯರು. 3 ಪೇತ್ರನು ಅವರಿಗೆ, “ನಾನು ಮೀನು ಹಿಡಿಯಲು ಹೋಗುತ್ತಿದ್ದೇನೆ” ಎಂದನು.
ಉಳಿದ ಶಿಷ್ಯರು, “ನಾವೂ ನಿನ್ನೊಂದಿಗೆ ಬರುತ್ತೇವೆ” ಎಂದು ಹೇಳಿದರು. ಅಂತೆಯೇ ಶಿಷ್ಯರೆಲ್ಲಾ ಹೊರಟು ದೋಣಿಯನ್ನು ಹತ್ತಿದರು. ಅವರು ರಾತ್ರಿಯೆಲ್ಲಾ ಬಲೆ ಬೀಸಿದರೂ ಒಂದು ಮೀನೂ ಸಿಗಲಿಲ್ಲ.
4 ಅಂದು ಮುಂಜಾನೆಯಾದಾಗ, ಯೇಸು ತೀರದಲ್ಲಿ ನಿಂತುಕೊಂಡಿದ್ದನು. ಆದರೆ ಆತನೇ ಯೇಸು ಎಂಬುದು ಶಿಷ್ಯರಿಗೆ ಗೊತ್ತಿರಲಿಲ್ಲ. 5 ಆಗ ಆತನು ತನ್ನ ಶಿಷ್ಯರಿಗೆ, “ಮಕ್ಕಳೇ, ನಿಮಗೆ ಮೀನು ಸಿಕ್ಕಿತೋ?” ಎಂದು ಕೇಳಿದನು.
ಶಿಷ್ಯರು, “ಇಲ್ಲ” ಎಂದು ಉತ್ತರಕೊಟ್ಟರು.
6 ಯೇಸು, “ನಿಮ್ಮ ದೋಣಿಯ ಬಲಭಾಗದಲ್ಲಿ ನಿಮ್ಮ ಬಲೆ ಬೀಸಿರಿ. ಅಲ್ಲಿ ಕೆಲವು ಮೀನುಗಳು ಸಿಕ್ಕುತ್ತವೆ” ಎಂದು ಹೇಳಿದನು. ಶಿಷ್ಯರು ಹಾಗೆಯೇ ಮಾಡಿದರು. ಬಹಳ ಮೀನುಗಳು ಸಿಕ್ಕಿಕೊಂಡದ್ದರಿಂದ ಅವರು ಬಲೆಯನ್ನು ದೋಣಿಯೊಳಗೆ ಎಳೆದುಕೊಳ್ಳಲಾಗಲಿಲ್ಲ.
7 ಯೇಸುವಿನ ಪ್ರೀತಿಯ ಶಿಷ್ಯನು ಪೇತ್ರನಿಗೆ, “ಆ ಮನುಷ್ಯನು ಪ್ರಭುವೇ!” ಎಂದು ಹೇಳಿದನು. ಕೂಡಲೇ ಪೇತ್ರನು ತನ್ನ ಅಂಗಿಯನ್ನು ಹಾಕಿಕೊಂಡು, ನೀರಿಗೆ ಧುಮುಕಿದನು. (ಪೇತ್ರನು ಮೀನು ಹಿಡಿಯುವುದಕ್ಕಾಗಿ ತನ್ನ ಅಂಗಿಯನ್ನು ಬಿಚ್ಚಿಟ್ಟಿದ್ದನು.) 8 ಉಳಿದ ಶಿಷ್ಯರು ದೋಣಿಯಲ್ಲಿ ತೀರಕ್ಕೆ ಹೋದರು. ಅವರು ಬಲೆತುಂಬ ಮೀನುಗಳನ್ನು ದಡಕ್ಕೆ ಎಳೆದುಕೊಂಡು ಹೋದರು. ಅವರು ದಡದಿಂದ ಬಹುದೂರದಲ್ಲೇನೂ ಇರಲಿಲ್ಲ. ಕೇವಲ ಮುನ್ನೂರು ಅಡಿಗಳಷ್ಟು ದೂರದಲ್ಲಿದ್ದರು. 9 ಶಿಷ್ಯರು ದೋಣಿಯಿಂದ ಇಳಿದು ದಡಕ್ಕೆ ಹೋದಾಗ, ಬೆಂಕಿಯ ಕೆಂಡಗಳನ್ನು ಕಂಡರು. ಬೆಂಕಿಯ ಮೇಲೆ ಮೀನುಗಳಿದ್ದವು ಮತ್ತು ಕೆಲವು ರೊಟ್ಟಿಗಳೂ ಅಲ್ಲಿದ್ದವು. 10 ಬಳಿಕ ಯೇಸು, “ನೀವು ಹಿಡಿದ ಮೀನುಗಳಲ್ಲಿ ಕೆಲವನ್ನು ತನ್ನಿರಿ” ಎಂದು ಹೇಳಿದನು.
11 ಸೀಮೋನ್ ಪೇತ್ರನು ದೋಣಿಯೊಳಕ್ಕೆ ಹೋಗಿ ಬಲೆಯನ್ನು ದಡಕ್ಕೆ ಎಳೆದುಕೊಂಡು ಬಂದನು. ಬಲೆಯು ದೊಡ್ಡ ಮೀನುಗಳಿಂದ ತುಂಬಿತ್ತು. ಅದರಲ್ಲಿ 153 ಮೀನುಗಳಿದ್ದವು. ಅವು ಬಹಳ ಭಾರವಾಗಿದ್ದರೂ ಬಲೆಯು ಹರಿದುಹೋಗಲಿಲ್ಲ. 12 ಯೇಸು ಅವರಿಗೆ, “ಬಂದು ಊಟ ಮಾಡಿ” ಎಂದು ಹೇಳಿದನು. ಶಿಷ್ಯರಲ್ಲಿ ಒಬ್ಬರಾದರೂ, “ನೀನು ಯಾರು?” ಎಂದು ಆತನನ್ನು ಕೇಳಲಿಲ್ಲ. ಆತನು ಪ್ರಭುವೆಂದು ಅವರಿಗೆ ತಿಳಿದಿತ್ತು. 13 ಯೇಸುವು ಸಮೀಪಕ್ಕೆ ಬಂದು ರೊಟ್ಟಿಯನ್ನು ಮತ್ತು ಮೀನುಗಳನ್ನು ತೆಗೆದುಕೊಂಡು ಅವರಿಗೆ ಕೊಟ್ಟನು.
14 ಯೇಸು ಪುನರುತ್ಥಾನ ಹೊಂದಿದ ಮೇಲೆ ತನ್ನ ಶಿಷ್ಯರಿಗೆ ಕಾಣಿಸಿಕೊಂಡದ್ದು ಇದು ಮೂರನೆಯ ಸಲ.
ಪೇತ್ರನೊಂದಿಗೆ ಯೇಸುವಿನ ಸಂಭಾಷಣೆ
15 ಅವರು ಊಟಮಾಡಿದ ಮೇಲೆ, ಯೇಸು ಸೀಮೋನ್ ಪೇತ್ರನಿಗೆ, “ಯೋಹಾನನ ಮಗನಾದ ಸೀಮೋನನೇ, ಇಲ್ಲಿರುವ ಇವರು ನನ್ನನ್ನು ಪ್ರೀತಿಸುವುದಕ್ಕಿಂತಲೂ ಹೆಚ್ಚಾಗಿ ನೀನು ನನ್ನನ್ನು ಪ್ರೀತಿಸುವೆಯೋ?” ಎಂದು ಕೇಳಿದನು.
ಪೇತ್ರನು, “ಹೌದು ಪ್ರಭುವೇ, ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂಬುದು ನಿನಗೆ ಗೊತ್ತಿದೆ” ಎಂದನು.
ಯೇಸು ಪೇತ್ರನಿಗೆ, “ನನ್ನ ಕುರಿಮರಿಗಳನ್ನು[a] ಮೇಯಿಸು” ಎಂದನು.
16 ಎರಡನೆಯ ಸಾರಿ ಯೇಸು ಪೇತ್ರನಿಗೆ, “ಯೋಹಾನನ ಮಗನಾದ ಸೀಮೋನನೇ, ನೀನು ನನ್ನನ್ನು ಪ್ರೀತಿಸುವೆಯೋ?” ಎಂದು ಕೇಳಿದನು.
ಪೇತ್ರನು, “ಹೌದು, ಪ್ರಭುವೇ, ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂಬುದು ನಿನಗೆ ಗೊತ್ತಿದೆ” ಎಂದನು.
ಯೇಸು ಪೇತ್ರನಿಗೆ, “ನನ್ನ ಕುರಿಗಳನ್ನು ಕಾಯಿ” ಎಂದನು.
17 ಯೇಸು ಮೂರನೆಯ ಸಾರಿ, “ಯೋಹಾನನ ಮಗನಾದ ಸೀಮೋನನೇ, ನೀನು ನನ್ನನ್ನು ಪ್ರೀತಿಸುವೆಯೋ?” ಎಂದು ಕೇಳಿದನು.
ಯೇಸು, “ನೀನು ನನ್ನನ್ನು ಪ್ರೀತಿಸುವೆಯೋ?” ಎಂದು ಮೂರು ಸಾರಿ ಕೇಳಿದ್ದರಿಂದ ಪೇತ್ರನಿಗೆ ದುಃಖವಾಯಿತು. ಪೇತ್ರನು, “ಪ್ರಭುವೇ, ನಿನಗೆ ಪ್ರತಿಯೊಂದೂ ತಿಳಿದಿದೆ. ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂಬುದು ನಿನಗೆ ಗೊತ್ತಿದೆ” ಎಂದನು.
ಯೇಸು ಪೇತ್ರನಿಗೆ, “ನನ್ನ ಕುರಿಗಳನ್ನು ಮೇಯಿಸು. 18 ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ನೀನು ಯೌವನಸ್ಥನಾಗಿದ್ದಾಗ, ನಡುಕಟ್ಟಿಕೊಂಡು ನಿನಗೆ ಇಷ್ಟವಾದ ಕಡೆಗೆಲ್ಲಾ ಹೋದೆ. ಆದರೆ ನೀನು ಮುದುಕನಾದಾಗ, ನಿನ್ನ ಕೈಗಳನ್ನು ಚಾಚುವೆ ಮತ್ತು ಬೇರೊಬ್ಬನು ನಿನ್ನ ನಡುಕಟ್ಟಿ ನಿನಗೆ ಇಷ್ಟವಿಲ್ಲದ ಕಡೆಗೆ ನಿನ್ನನ್ನು ನಡೆಸಿಕೊಂಡು ಹೋಗುವನು” ಎಂದು ಹೇಳಿದನು. 19 (ದೇವರನ್ನು ಮಹಿಮೆಪಡಿಸುವುದಕ್ಕಾಗಿ ಪೇತ್ರನು ಯಾವ ರೀತಿ ಸಾಯುತ್ತಾನೆ ಎಂಬುದನ್ನು ಸೂಚಿಸಲು ಯೇಸು ಹೀಗೆ ಹೇಳಿದನು.) ಬಳಿಕ ಯೇಸು ಪೇತ್ರನಿಗೆ, “ನನ್ನನ್ನು ಹಿಂಬಾಲಿಸು!” ಎಂದನು.
Kannada Holy Bible: Easy-to-Read Version. All rights reserved. © 1997 Bible League International