Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 104:1-9

104 ನನ್ನ ಆತ್ಮವೇ, ಯೆಹೋವನನ್ನು ಕೊಂಡಾಡು!
    ಯೆಹೋವನೇ, ನನ್ನ ದೇವರೇ, ನೀನು ಬಹಳ ದೊಡ್ಡವನು!
ನೀನು ಮಹಿಮೆಯನ್ನೂ ಘನತೆಯನ್ನೂ ಧರಿಸಿಕೊಂಡಿರುವೆ.
    ನೀನು ಬೆಳಕನ್ನು ನಿಲುವಂಗಿಯಂತೆ ಧರಿಸಿಕೊಂಡಿರುವೆ
ನೀನು ಆಕಾಶಮಂಡಲವನ್ನು ಪರದೆಯಂತೆ ಹರಡಿರುವೆ.
    ನಿನ್ನ ಮನೆಯನ್ನು ಅವುಗಳ ಮೇಲೆ ಕಟ್ಟಿರುವೆ.
ದಟ್ಟವಾದ ಮೋಡಗಳನ್ನು ರಥಗಳನ್ನಾಗಿ ಮಾಡಿಕೊಂಡು
    ಗಾಳಿಯ ರೆಕ್ಕೆಗಳ ಮೇಲೆ ಆಕಾಶದಲ್ಲಿ ಸಂಚರಿಸುವೆ.
ಗಾಳಿಯನ್ನು ನಿನ್ನ ದೂತರನ್ನಾಗಿಯೂ
    ಬೆಂಕಿಯನ್ನು ನಿನ್ನ ಸೇವಕರನ್ನಾಗಿಯೂ ಮಾಡಿರುವೆ.[a]
ಭೂಮಿಯನ್ನು ನೀನು ಅಸ್ತಿವಾರದ ಮೇಲೆ ಕಟ್ಟಿರುವುದರಿಂದ
    ಅದೆಂದಿಗೂ ನಾಶವಾಗದು.
ನೀನು ಭೂಮಿಗೆ ನೀರನ್ನು ಕಂಬಳಿಯಂತೆ ಹೊದಿಸಿರುವೆ.
    ಅದು ಬೆಟ್ಟಗಳನ್ನು ಮುಚ್ಚಿಕೊಂಡಿತು.
ನೀನು ಆಜ್ಞಾಪಿಸಲು ನೀರು ಹಿಂತಿರುಗಿತು.
    ನೀನು ಬರ್ಜಿಸಲು ನೀರು ಓಡಿಹೋಯಿತು.
ಜಲರಾಶಿಗಳು ಬೆಟ್ಟಗಳಿಂದ ಇಳಿದು
    ಕಣಿವೆಗಳಿಗೂ ನೀನು ಗೊತ್ತುಪಡಿಸಿದ ಸ್ಥಳಗಳಿಗೂ ಹರಿದುಹೋದವು.
ನೀನು ಸಮುದ್ರಗಳಿಗೆ ಮೇರೆಗಳನ್ನು ಗೊತ್ತುಪಡಿಸಿರುವುದರಿಂದ
    ನೀರಿನಿಂದ ಭೂಮಿಯು ಮತ್ತೆಂದಿಗೂ ಆವೃತವಾಗದು.

ಕೀರ್ತನೆಗಳು 104:24

24 ಯೆಹೋವನೇ, ನೀನು ಅನೇಕ ಆಶ್ಚರ್ಯಕರವಾದ ಕಾರ್ಯಗಳನ್ನು ಮಾಡಿರುವೆ.
    ನೀನು ಸೃಷ್ಟಿಸಿದ ವಸ್ತುಗಳಿಂದ ಭೂಮಿಯು ತುಂಬಿಹೋಗಿದೆ.
    ನಿನ್ನ ಪ್ರತಿಯೊಂದು ಕಾರ್ಯದಲ್ಲೂ ನಿನ್ನ ಜ್ಞಾನವನ್ನು ಕಾಣಬಲ್ಲವು.

ಕೀರ್ತನೆಗಳು 104:35

35 ಪಾಪಾತ್ಮರು ಭೂಮಿಯಿಂದ ಕಾಣದೆಹೋಗಲಿ.
    ದುಷ್ಟರು ಎಂದೆಂದಿಗೂ ನಿರ್ಮೂಲವಾಗಲಿ.
ನನ್ನ ಆತ್ಮವೇ, ಯೆಹೋವನನ್ನು ಸ್ತುತಿಸು!

ಯೆಹೋವನನ್ನು ಕೊಂಡಾಡು!

ಯೋಬನು 37

37 “ಗುಡುಗು ಮಿಂಚುಗಳು ನನ್ನನ್ನು ಭಯಗೊಳಿಸಿವೆ.
    ನನ್ನ ಹೃದಯವು ಢವಢವನೆ ಬಡಿದುಕೊಳ್ಳುತ್ತಿದೆ.
ಪ್ರತಿಯೊಬ್ಬರೂ ಕೇಳಿರಿ! ದೇವರ ಧ್ವನಿಯು ಗುಡುಗಿನ ಧ್ವನಿಯಂತಿದೆ.
    ಆತನ ಬಾಯಿಂದ ಬರುವ ಗುಡುಗುಟ್ಟುವ ಧ್ವನಿಯನ್ನು ಕೇಳಿರಿ.
ಇಡೀ ಆಕಾಶಮಂಡಲದಲ್ಲೆಲ್ಲಾ ಪ್ರಕಾಶಿಸಲೆಂದು ದೇವರು ತನ್ನ ಸಿಡಿಲನ್ನು ಕಳುಹಿಸುವನು.
    ಅದು ಭೂಮಿಯ ಮೇಲೆಲ್ಲಾ ಪ್ರಕಾಶಿಸುವುದು.
ಸಿಡಿಲು ಪ್ರಕಾಶಿಸಿದ ನಂತರ ದೇವರ ಗರ್ಜನೆಯು ಕೇಳಿಬರುವುದು.
    ಆತನು ತನ್ನ ಆಶ್ಚರ್ಯಕರವಾದ ಧ್ವನಿಯಿಂದ ಗುಡುಗುಟ್ಟುವನು!
ಸಿಡಿಲು ಪ್ರಕಾಶಿಸುವಾಗ ಆತನ ಧ್ವನಿಯು ಗುಡುಗುಟ್ಟುವುದು!
ದೇವರ ಗುಡುಗುಟ್ಟುವ ಧ್ವನಿಯು ಆಶ್ಚರ್ಯಕರವಾಗಿದೆ!
    ನಾವು ಅರ್ಥಮಾಡಿಕೊಳ್ಳಲಾಗದ ಮಹಾಕಾರ್ಯಗಳನ್ನು ಆತನು ಮಾಡುತ್ತಾನೆ.
ಆತನು ಹಿಮಕ್ಕೆ,
    ‘ಭೂಮಿಯ ಮೇಲೆ ಬೀಳು’ ಎಂತಲೂ
ಮಳೆಗೆ,
    ‘ಭೂಮಿಯ ಮೇಲೆ ಸುರಿ’ ಎಂತಲೂ ಆಜ್ಞಾಪಿಸುವನು.
ದೇವರು ತನ್ನ ಕಾರ್ಯವನ್ನು ಎಲ್ಲರೂ ತಿಳಿದುಕೊಳ್ಳಬೇಕೆಂದು
    ಪ್ರತಿಯೊಬ್ಬರನ್ನು ಮನೆಯೊಳಗೆ ಕೂಡಿಹಾಕುತ್ತಾನೆ.[a]
ಪ್ರಾಣಿಗಳು ಓಡಿಹೋಗಿ ತಮ್ಮ ಗುಹೆಗಳಲ್ಲಿ ಸೇರಿಕೊಳ್ಳುತ್ತವೆ.
ದಕ್ಷಿಣ ದಿಕ್ಕಿನಿಂದ ಬಿರುಗಾಳಿಯೂ
    ಉತ್ತರ ದಿಕ್ಕಿನಿಂದ ಚಳಿಗಾಳಿಯೂ ಬರುತ್ತವೆ.
10 ದೇವರ ಉಸಿರು ನೀರನ್ನು ಮಂಜನ್ನಾಗಿ ಮಾಡಿ
    ಸಾಗರಗಳನ್ನು ಹೆಪ್ಪುಗಟ್ಟಿಸುವುದು.
11 ದೇವರು ಮೋಡಗಳಲ್ಲಿ ನೀರು ತುಂಬಿಸುವನು.
    ಆತನು ತನ್ನ ಮಿಂಚನ್ನು ಮೋಡಗಳಲ್ಲೆಲ್ಲಾ ಹರಡುವನು.
12 ಭೂಮಂಡಲದಲ್ಲೆಲ್ಲಾ ಚಲಿಸಲು ದೇವರು ಮೋಡಗಳಿಗೆ ಆಜ್ಞಾಪಿಸುವನು.
    ಮೋಡಗಳು ಆತನ ಆಜ್ಞೆಗನುಸಾರವಾಗಿ ಮಾಡುತ್ತವೆ.
13 ದೇವರು ಜನರನ್ನು ದಂಡಿಸುವುದಕ್ಕಾಗಲಿ
    ನೀರನ್ನು ಒದಗಿಸುವ ಮೂಲಕ ತನ್ನ ನಿರಂತರ ಪ್ರೀತಿಯನ್ನು ತೋರಿಸುವುದಕ್ಕಾಗಲಿ ಮೋಡಗಳನ್ನು ಬರಮಾಡುವನು.

14 “ಯೋಬನೇ, ಒಂದು ನಿಮಿಷ ಮೌನವಾಗಿದ್ದು ಕೇಳು.
    ದೇವರ ಅದ್ಭುತಕಾರ್ಯಗಳ ಬಗ್ಗೆ ಮೌನವಾಗಿದ್ದು ಆಲೋಚಿಸು.
15 ಯೋಬನೇ, ದೇವರು ಮೋಡಗಳನ್ನು ಹೇಗೆ ಹತೋಟಿಯಲ್ಲಿಡುತ್ತಾನೆಂಬುದು ನಿನಗೆ ಗೊತ್ತಿದೆಯೋ?
    ದೇವರು ಸಿಡಿಲನ್ನು ಹೇಗೆ ಹೊಳೆಯ ಮಾಡುತ್ತಾನೆಂಬುದು ನಿನಗೆ ಗೊತ್ತಿದೆಯೋ?
16 ಆಕಾಶದಲ್ಲಿ ಮೋಡಗಳು ಹೇಗೆ ತೂಗಾಡುತ್ತಿವೆ ಎಂಬುದು ನಿನಗೆ ಗೊತ್ತಿದೆಯೋ?
    ದೇವರ ಆಶ್ಚರ್ಯಕಾರ್ಯಗಳಲ್ಲಿ ಮೋಡಗಳು ಒಂದು ಉದಾಹರಣೆಯಷ್ಟೇ.
    ಅವುಗಳ ಬಗ್ಗೆ ದೇವರಿಗೆ ಸಂಪೂರ್ಣವಾಗಿ ತಿಳಿದಿದೆ.
17 ಯೋಬನೇ, ನಿನಗೆ ಇವುಗಳ ಬಗ್ಗೆ ಗೊತ್ತಿಲ್ಲ.
    ದಕ್ಷಿಣ ದಿಕ್ಕಿನ ಬಿಸಿಗಾಳಿಯಿಂದ ಭೂಮಿಯು ಸ್ತಬ್ಧವಾದಾಗ, ನೀನು ಬೆವತು ಬಟ್ಟೆಗಳು ಒದ್ದೆಯಾಗುವುದಷ್ಟೇ ನಿನಗೆ ತಿಳಿದಿದೆ.
18 ಯೋಬನೇ, ಆಕಾಶಮಂಡಲವನ್ನು ಹರಡುವುದಕ್ಕಾಗಲಿ
    ಅದಕ್ಕೆ ಕಂಚಿನ ದರ್ಪಣದಂತೆ ಮೆರಗು ನೀಡುವುದಕ್ಕಾಗಲಿ ನೀನು ದೇವರಿಗೆ ಸಹಾಯಮಾಡಬಲ್ಲೆಯಾ?[b]

19 “ಯೋಬನೇ, ನಾವು ದೇವರಿಗೆ ಹೇಳಬೇಕಾದುದನ್ನು ನಮಗೆ ತಿಳಿಸು!
ನಮಗೆ ಸಾಕಷ್ಟು ಗೊತ್ತಿಲ್ಲದಿರುವುದರಿಂದ ಏನು ಹೇಳಬೇಕೋ ನಮಗೆ ತಿಳಿಯದು.
20 ನಾನು ದೇವರಿಗೆ, ‘ನಿನ್ನೊಂದಿಗೆ ಮಾತಾಡಬೇಕಾಗಿದೆ’ ಎಂದು ಹೇಳಲಾರೆ.
    ಯಾಕೆಂದರೆ ಅದು ನಾಶನವನ್ನೇ ಕೇಳಿಕೊಂಡಂತಾಗುವುದು.
21 ಯಾವನೂ ಪ್ರಕಾಶಮಾನವಾದ ಸೂರ್ಯನನ್ನು ನೋಡಲಾರನು.
    ಗಾಳಿಯು ಮೋಡಗಳನ್ನು ಬಡಿದುಕೊಂಡು ಹೋದಮೇಲೆ ಆಕಾಶದಲ್ಲಿ ಸೂರ್ಯನು ಬಹು ಪ್ರಕಾಶಮಾನವಾಗಿ ಹೊಳೆಯುತ್ತಿರುವನು.
22 ದೇವರ ಹೊನ್ನಿನ ಮಹಿಮೆಯು ಪವಿತ್ರ ಪರ್ವತದಿಂದ ಹೊಳೆಯುವುದು.
    ದೇವರ ಸುತ್ತಲೂ ಪ್ರಕಾಶಮಾನವಾದ ಬೆಳಕು ಸುತ್ತುವರಿದಿದೆ.
23 “ಸರ್ವಶಕ್ತನಾದ ದೇವರು ಮಹೋನ್ನತನೇ ಸರಿ! ನಾವು ಆತನನ್ನು ಅರ್ಥಮಾಡಿಕೊಳ್ಳಲು ನಮಗೆ ಸಾಧ್ಯವಿಲ್ಲ.
    ದೇವರು ಮಹಾ ಬಲಿಷ್ಠನಾಗಿದ್ದರೂ ನಮಗೆ ಒಳ್ಳೆಯವನೂ ನ್ಯಾಯವಂತನೂ ಆಗಿದ್ದಾನೆ; ಆತನು ನಮ್ಮನ್ನು ಹಿಂಸಿಸಲು ಇಷ್ಟಪಡುವುದಿಲ್ಲ.
24 ಆದಕಾರಣವೇ ಜನರು ದೇವರಲ್ಲಿ ಭಯಭಕ್ತಿಯಿಂದಿರುವರು.
    ದೇವರಾದರೋ ತಮ್ಮನ್ನು ಜ್ಞಾನಿಗಳೆಂದು ಭಾವಿಸಿಕೊಂಡಿರುವ ಗರ್ವಿಷ್ಠರನ್ನು ಗೌರವಿಸುವುದಿಲ್ಲ.”

ಪ್ರಕಟನೆ 17

ಮೃಗದ ಮೇಲಿದ್ದ ಸ್ತ್ರೀ

17 ಏಳು ಮಂದಿ ದೇವದೂತರಲ್ಲಿ ಒಬ್ಬನು ಬಂದು ನನ್ನ ಸಂಗಡ ಮಾತನಾಡಿದನು. ಏಳು ಪಾತ್ರೆಗಳನ್ನು ಹೊಂದಿದ್ದವರಲ್ಲಿ ಇವನೂ ಒಬ್ಬನಾಗಿದ್ದನು. ಆ ದೇವದೂತನು, “ಬಾ, ಪ್ರಸಿದ್ಧಳಾದ ವೇಶ್ಯಾಸ್ತ್ರೀಗೆ ನೀಡುವ ದಂಡನೆಯನ್ನು ನಾನು ನಿನಗೆ ತೋರಿಸುತ್ತೇನೆ. ಬಹಳ ನೀರುಗಳ ಮೇಲೆ ಕುಳಿತುಕೊಂಡಿರುವವಳು ಅವಳೇ. ಲೋಕದ ರಾಜರುಗಳು ಅವಳೊಂದಿಗೆ ಲೈಂಗಿಕ ಪಾಪ ಮಾಡಿದರು. ಲೋಕದ ಜನರು ಅವಳ ಲೈಂಗಿಕ ಪಾಪವೆಂಬ ದ್ರಾಕ್ಷಾರಸವನ್ನು ಕುಡಿದು ಮತ್ತರಾದರು” ಎಂದು ಹೇಳಿದನು.

ಬಳಿಕ ದೇವದೂತನು ಪವಿತ್ರಾತ್ಮವಶನಾದ ನನ್ನನ್ನು ಎತ್ತಿಕೊಂಡು ಮರಳುಗಾಡಿಗೆ ಹೋದನು. ಅಲ್ಲಿ ಒಬ್ಬ ಸ್ತ್ರೀಯು ಕೆಂಪು ಮೃಗದ ಮೇಲೆ ಕುಳಿತಿರುವುದನ್ನು ನಾನು ನೋಡಿದೆನು. ಆ ಮೃಗದ ಮೈಮೇಲೆಲ್ಲಾ ದೇವದೂಷಣೆಯ ಹೆಸರುಗಳು ಬರೆದಿದ್ದವು. ಅದಕ್ಕೆ ಏಳು ತಲೆಗಳೂ ಹತ್ತು ಕೊಂಬುಗಳೂ ಇದ್ದವು. ಆ ಸ್ತ್ರೀಯು ಧೂಮ್ರ ವರ್ಣದ ಮತ್ತು ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಿದ್ದಳು. ಅವಳು ತಾನು ತೊಟ್ಟಿದ್ದ ಚಿನ್ನ, ರತ್ನ, ಮುತ್ತು, ಮುಂತಾದವುಗಳಿಂದ ಪ್ರಕಾಶಿಸುತ್ತಿದ್ದಳು. ಅವಳು ತನ್ನ ಕೈಯಲ್ಲಿ ಚಿನ್ನದ ಬಟ್ಟಲನ್ನು ಹಿಡಿದಿದ್ದಳು. ಆ ಬಟ್ಟಲು ಅಸಹ್ಯವಾದವುಗಳಿಂದ ಮತ್ತು ಅವಳ ಲೈಂಗಿಕ ಪಾಪಗಳ ಅಶುದ್ಧತೆಯಿಂದ ತುಂಬಿಹೋಗಿತ್ತು. ಅವಳ ಹಣೆಯ ಮೇಲೆ ಒಂದು ಬರಹವನ್ನು ಬರೆದಿತ್ತು. ಆ ಬರಹಕ್ಕೆ ಗೂಢಾರ್ಥವಿತ್ತು. ಅಲ್ಲಿ ಬರೆದಿದ್ದುದು ಹೀಗಿತ್ತು:

ಬಾಬಿಲೋನ್ ಎಂಬ ಮಹಾನಗರಿಯು

ಭೂಮಿಯಲ್ಲಿರುವ ಕೆಟ್ಟಕಾರ್ಯಗಳಿಗೆ

ಮತ್ತು ಜಾರಸ್ತ್ರೀಯರಿಗೆ ತಾಯಿ.

ಆ ಸ್ತ್ರೀಯು ಕುಡಿದು ಮತ್ತಳಾಗಿರುವುದನ್ನು ನಾನು ನೋಡಿದೆನು. ಅವಳು ದೇವರ ಪರಿಶುದ್ಧ ಜನರ ರಕ್ತವನ್ನು ಕುಡಿದು ಮತ್ತಳಾಗಿದ್ದಳು. ಯೇಸುವಿನಲ್ಲಿ ತಮಗಿರುವ ನಂಬಿಕೆಯ ಕುರಿತಾಗಿ ತಿಳಿಸಿದ ಜನರ ರಕ್ತವನ್ನು ಅವಳು ಕುಡಿದು ಮತ್ತಳಾಗಿದ್ದಳು.

ಆ ಸ್ತ್ರೀಯನ್ನು ನಾನು ನೋಡಿದಾಗ ನನಗೆ ತುಂಬಾ ಆಶ್ಚರ್ಯವಾಯಿತು. ಆಗ ದೇವದೂತನು ನನಗೆ, “ನೀನೇಕೆ ಆಶ್ಚರ್ಯಗೊಂಡೆ? ಈ ಸ್ತ್ರೀಯ ಗೂಢಾರ್ಥವನ್ನು ಮತ್ತು ಈಕೆ ಸವಾರಿ ಮಾಡುತ್ತಿರುವ ಏಳು ತಲೆಗಳನ್ನು ಮತ್ತು ಹತ್ತು ಕೊಂಬುಗಳನ್ನು ಹೊಂದಿರುವ ಮೃಗದ ಗೂಢಾರ್ಥವನ್ನು ನಾನು ನಿನಗೆ ಹೇಳುತ್ತೇನೆ. ನೀನು ನೋಡಿದ ಆ ಮೃಗವು ಒಂದು ಕಾಲದಲ್ಲಿ ಜೀವಿಸಿತ್ತು. ಆದರೆ ಈಗ ಆ ಮೃಗವು ಜೀವಂತವಾಗಿಲ್ಲ. ಆದರೆ ಆ ಮೃಗವು ತಳವಿಲ್ಲದ ಕೂಪದಿಂದ ಜೀವಂತವಾಗಿ ಮೇಲೆದ್ದುಬಂದು ನಾಶವಾಗು ವುದು. ಲೋಕದಲ್ಲಿ ಜೀವಿಸುತ್ತಿರುವ ಜನರು ಆ ಮೃಗವನ್ನು ನೋಡಿ, ಅದು ಒಂದು ಕಾಲದಲ್ಲಿ ಜೀವಂತವಾಗಿತ್ತು, ಈಗ ಇಲ್ಲ, ಆದರೆ ಮತ್ತೆ ಬರುವುದು ಎಂಬುದನ್ನು ತಿಳಿದು ಅವರು ಆಶ್ಚರ್ಯಪಡುವರು. ಲೋಕವು ಸೃಷ್ಟಿಯಾದಂದಿನಿಂದ ಜೀವಬಾಧ್ಯರ ಪುಸ್ತಕದಲ್ಲಿ ಈ ಜನರ ಹೆಸರುಗಳನ್ನು ಬರೆದೇ ಇಲ್ಲ.

“ಇದನ್ನು ಅರ್ಥಮಾಡಿಕೊಳ್ಳಲು ನಿನಗೆ ಬುದ್ಧಿ ಬೇಕು. ಆ ಮೃಗದ ಏಳು ತಲೆಗಳೇ ಆ ಸ್ತ್ರೀಯು ಕುಳಿತುಕೊಳ್ಳುವ ಏಳು ಬೆಟ್ಟಗಳಾಗಿವೆ. ಅವು ಏಳು ಮಂದಿ ರಾಜರುಗಳೂ ಆಗಿವೆ. 10 ಐದು ಮಂದಿ ರಾಜರುಗಳು ಈಗಾಗಲೇ ಸತ್ತಿದ್ದಾರೆ. ಒಬ್ಬ ರಾಜನು ಮಾತ್ರ ಈಗ ಜೀವಿಸಿದ್ದಾನೆ. ಕೊನೆಯ ರಾಜನು ಬರುತ್ತಾನೆ. ಅವನು ಬಂದು ಸ್ವಲ್ಪಕಾಲ ಮಾತ್ರ ಇರುತ್ತಾನೆ. 11 ಒಂದುಕಾಲದಲ್ಲಿ ಜೀವಿಸಿದ್ದು, ಆದರೆ ಈಗ ಜೀವಿಸಿಲ್ಲದ ಈ ಮೃಗವು ಎಂಟನೆಯ ರಾಜ. ಈ ಎಂಟನೆಯ ರಾಜನೂ ಮೊದಲ ಏಳು ರಾಜರುಗಳ ಗುಂಪಿಗೆ ಸೇರಿದವನು. ಅವನೂ ನಾಶವಾಗುತ್ತಾನೆ.

12 “ನೀನು ನೋಡಿದ ಹತ್ತು ಕೊಂಬುಗಳೇ ಹತ್ತು ರಾಜರುಗಳಾಗಿವೆ. ಈ ಹತ್ತು ರಾಜರುಗಳು ಇನ್ನೂ ತಮ್ಮ ರಾಜ್ಯವನ್ನು ಪಡೆದಿಲ್ಲ. ಆದರೆ ಅವರು ಆಳುವ ಅಧಿಕಾರವನ್ನು ಮೃಗದ ಸಂಗಡ ಒಂದು ಗಂಟೆ ಪಡೆಯುತ್ತಾರೆ. 13 ಈ ಹತ್ತು ರಾಜರುಗಳೆಲ್ಲರೂ ಒಂದೇ ಉದ್ದೇಶವುಳ್ಳವರಾಗಿದ್ದಾರೆ. ಅವರು ತಮ್ಮ ಶಕ್ತಿಯನ್ನು ಮತ್ತು ಅಧಿಕಾರವನ್ನು ಮೃಗಕ್ಕೆ ಕೊಡುತ್ತಾರೆ. 14 ಅವರು ಕುರಿಮರಿಯಾದಾತನ ವಿರುದ್ಧ ಯುದ್ಧಗಳನ್ನು ಮಾಡುತ್ತಾರೆ. ಆದರೆ ಕುರಿಮರಿಯಾದಾತನು ಪ್ರಭುಗಳ ಪ್ರಭುವಾದ್ದರಿಂದ ಮತ್ತು ರಾಜಾಧಿರಾಜನಾದ್ದರಿಂದ ಅವರನ್ನು ಸೋಲಿಸುತ್ತಾನೆ. ಆತನೊಂದಿಗೆ, ತಾನು ಕರೆದಿರುವ ಜನರು, ಆಯ್ಕೆಮಾಡಿಕೊಂಡಿರುವ ಜನರು ಮತ್ತು ತನ್ನ ನಂಬಿಗಸ್ತ ಹಿಂಬಾಲಕರು ಇದ್ದರು” ಎಂದನು.

15 ನಂತರ ದೇವದೂತನು ನನಗೆ ಹೀಗೆ ಹೇಳಿದನು: “ಆ ವೇಶ್ಯೆಯು ಕುಳಿತುಕೊಳ್ಳುವ ನೀರುಗಳನ್ನು ನೀನು ನೋಡಿದೆ. ಈ ನೀರುಗಳು ಈ ಲೋಕದ ಅನೇಕ ಜನರನ್ನೂ ವಿವಿಧ ಜನಾಂಗಗಳನ್ನೂ ಪ್ರಜೆಗಳನ್ನೂ ಭಾಷೆಗಳನ್ನೂ ಸೂಚಿಸು ತ್ತವೆ. 16 ನೀನು ನೋಡಿದ ಆ ಮೃಗ ಮತ್ತು ಅದರ ಹತ್ತು ಕೊಂಬುಗಳು (ರಾಜರುಗಳು) ಆ ವೇಶ್ಯೆಯನ್ನು ದ್ವೇಷಿಸುತ್ತವೆ. ಅವಳಲ್ಲಿರುವುದನ್ನೆಲ್ಲ ಅವರು ಕಿತ್ತುಕೊಂಡು, ಅವಳನ್ನು ನಗ್ನಾವಸ್ಥೆಯಲ್ಲಿ ಬಿಡುತ್ತಾರೆ. ಅವರು ಅವಳ ದೇಹವನ್ನು ತಿಂದು, ಅವಳನ್ನು ಬೆಂಕಿಯಲ್ಲಿ ಸುಟ್ಟುಬಿಡುತ್ತಾರೆ. 17 ತನ್ನ ಕಾರ್ಯವನ್ನು ಮಾಡಬೇಕೆಂಬ ಬಯಕೆಯನ್ನು ದೇವರು ಆ ಹತ್ತು ರಾಜರುಗಳಲ್ಲಿ ಉಂಟುಮಾಡಿದ್ದರಿಂದ ಅವರು ಆಳಲು ತಮಗಿದ್ದ ಅಧಿಕಾರವನ್ನು ಮೃಗಕ್ಕೆ ಕೊಡಲು ಸಮ್ಮತಿಸಿದರು. ದೇವರು ಹೇಳಿದ್ದೆಲ್ಲ ಸಂಪೂರ್ಣವಾಗಿ ನೆರವೇರುವ ತನಕ ಅವರು ಆಳುತ್ತಾರೆ. 18 ನೀನು ನೋಡಿದ ಸ್ತ್ರೀಯು ಲೋಕದ ರಾಜರುಗಳನ್ನು ಆಳುವ ಮಹಾನಗರಿಯಾಗಿದ್ದಾಳೆ.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International