Revised Common Lectionary (Semicontinuous)
ರಚನೆಗಾರ: ದಾವೀದ.
26 ಯೆಹೋವನೇ, ನನಗೆ ನ್ಯಾಯವನ್ನು ನಿರ್ಣಯಿಸು; ನನ್ನ ಜೀವಿತ ಶುದ್ಧವಾಗಿತ್ತೆಂದು ನಿರೂಪಿಸು.
ನಾನು ಯೆಹೋವನಲ್ಲಿಯೇ ಭರವಸವಿಟ್ಟಿದ್ದೆನು.
2 ಯೆಹೋವನೇ, ನನ್ನನ್ನು ಪರೀಕ್ಷಿಸಿ ತಿಳಿದುಕೊ.
ನನ್ನ ಹೃದಯವನ್ನೂ ಮನಸ್ಸನ್ನೂ ಸೂಕ್ಷ್ಮವಾಗಿ ಪರಿಶೋಧಿಸು.
3 ನಿನ್ನ ಶಾಶ್ವತ ಪ್ರೀತಿಯನ್ನು ದೃಷ್ಟಿಯಲ್ಲಿಟ್ಟುಕೊಂಡಿದ್ದೇನೆ.
ನಿನ್ನ ಸತ್ಯಕ್ಕನುಸಾರವಾಗಿ ಜೀವಿಸುವೆನು.
4 ಅಯೋಗ್ಯರಾದ ಅವರಲ್ಲಿ ನಾನೂ ಒಬ್ಬನಲ್ಲ.
ನಾನು ಕಪಟಿಗಳ ಜೊತೆ ಸೇರುವವನಲ್ಲ.
5 ಆ ದುಷ್ಟ ತಂಡಗಳನ್ನು ನಾನು ದ್ವೇಷಿಸುತ್ತೇನೆ.
ಮೋಸಗಾರರ ಆ ತಂಡಗಳಿಗೆ ನಾನು ಸೇರುವುದಿಲ್ಲ.
6 ಯೆಹೋವನೇ, ನಾನು ನಿನ್ನ ಯಜ್ಞವೇದಿಕೆಯ[a] ಸುತ್ತಲೂ ನಡೆಯಲು
ನನ್ನ ಕೈಗಳನ್ನು ತೊಳೆದುಕೊಳ್ಳುತ್ತೇನೆ.
7 ನಾನು ನಿನಗೆ ಸ್ತುತಿಗೀತೆಗಳನ್ನು ಹಾಡುವೆನು.
ನಿನ್ನ ಅದ್ಭುತಕಾರ್ಯಗಳ ಕುರಿತು ಹಾಡುವೆನು.
8 ಯೆಹೋವನೇ, ನಿನ್ನ ಆಲಯವೂ ನಿನ್ನ ಮಹಿಮಾಗುಡಾರವೂ
ನನಗೆ ಎಷ್ಟೋ ಪ್ರಿಯವಾಗಿವೆ.
9 ಆ ಪಾಪಿಗಳ ಗುಂಪಿನಲ್ಲಿ ನನ್ನನ್ನು ಸೇರಿಸಬೇಡ.
ಆ ಕೊಲೆಗಾರರ ಜೀವದೊಂದಿಗೆ ನನ್ನ ಜೀವವನ್ನು ತೆಗೆಯಬೇಡ.
10 ಅವರು ಜನರನ್ನು ವಂಚಿಸುವರು;
ಕೆಟ್ಟಕಾರ್ಯಗಳನ್ನು ಮಾಡಲು ಲಂಚ ತೆಗೆದುಕೊಳ್ಳುವರು.
11 ನಾನಾದರೋ ನಿರಪರಾಧಿ.
ನನಗೆ ಕರುಣೆತೋರಿ ನನ್ನನ್ನು ರಕ್ಷಿಸು.
12 ನಾನು ಎಲ್ಲಾ ಅಪಾಯಗಳಿಂದ ಪಾರಾಗಿದ್ದೇನೆ.
ಯೆಹೋವನೇ, ನಿನ್ನ ಭಕ್ತರ ಸಭೆಯಲ್ಲಿ ನಿನ್ನನ್ನು ಕೊಂಡಾಡುವೆನು.
ಎಲೀಫಜನ ವಾದ
4 ಆಗ ತೇಮಾನ್ಯನಾದ ಎಲೀಫಜನು ಹೀಗೆ ಉತ್ತರಿಸಿದನು:
2 “ಒಬ್ಬನು ನಿನ್ನೊಂದಿಗೆ ಮಾತಾಡತೊಡಗಿದರೆ ನಿನಗೆ ಬೇಸರವಾಗುವುದೇ?
ಸುಮ್ಮನಿರಲು ನನಗಂತೂ ಸಾಧ್ಯವಿಲ್ಲ.
3 ಯೋಬನೇ, ನೀನು ಅನೇಕರಿಗೆ ಉಪದೇಶಿಸಿರುವೆ.
ನೀನು ಬಲಹೀನನ ಕೈಗಳಿಗೆ ಶಕ್ತಿಯನ್ನು ಕೊಟ್ಟಿರುವೆ;
4 ಎಡವಿಬಿದ್ದವರನ್ನು ನಿನ್ನ ಮಾತುಗಳಿಂದ ಉದ್ಧರಿಸಿರುವೆ;
ಬಲಹೀನವಾದ ಮೊಣಕಾಲುಗಳನ್ನು ಪ್ರೋತ್ಸಾಹದಿಂದ ಬಲಗೊಳಿಸಿರುವೆ.
5 ಈಗಲಾದರೋ ನಿನಗೆ ಕೇಡು ಬಂದಿದೆ;
ಆದ್ದರಿಂದ ನೀನು ನಿರಾಶನಾಗಿರುವೆ.
ಕೇಡು ನಿನಗೆ ಬಡಿದಿರುವುದರಿಂದ
ಭ್ರಮೆಗೊಂಡಿರುವೆ.
6 ನೀನು ದೇವರಲ್ಲಿ ಭಯಭಕ್ತಿಯಿಂದಿರುವುದರಿಂದ
ಆತನಲ್ಲಿ ಭರವಸವಿಡು.
ನೀನು ನೀತಿವಂತನಾಗಿರುವುದರಿಂದ
ಅದೇ ನಿನ್ನ ನಿರೀಕ್ಷೆಯಾಗಿರಲಿ.
7 ಯೋಬನೇ, ಆಲೋಚಿಸು: ಎಂದಾದರೂ ನಿರಪರಾಧಿಯು ನಾಶವಾಗಿರುವನೇ?
ಎಂದಾದರೂ ಯಥಾರ್ಥವಂತರು ನಾಶವಾಗಿರುವರೇ?
8 ನಾನು ನೋಡಿರುವಂತೆ, ಅಧರ್ಮವನ್ನು ಮತ್ತು ಕೇಡನ್ನು ಬಿತ್ತುವವರು
ಅದನ್ನೇ ಕೊಯ್ಯುವರು.
9 ದೇವರ ಉಸಿರು ಅವರನ್ನು ಕೊಲ್ಲುತ್ತದೆ;
ಆತನ ಕೋಪದ ಗಾಳಿಯು ಅವರನ್ನು ನಾಶಮಾಡುತ್ತದೆ.
10 ದುಷ್ಟರು ಸಿಂಹಗಳಂತೆ ಗರ್ಜಿಸುತ್ತಾ ಗುರುಗುಟ್ಟುವರು.
ಆದರೆ ದೇವರು ದುಷ್ಟರನ್ನು ಸುಮ್ಮನಿರಿಸಿ, ಅವರ ಹಲ್ಲುಗಳನ್ನು
ಮುರಿದುಹಾಕುವನು.
11 ದುಷ್ಟರು ಆಹಾರವಿಲ್ಲದ ಸಿಂಹಗಳಂತಿದ್ದು ಸಾಯುವರು;
ಅವರ ಮಕ್ಕಳು ಚದರಿಹೋಗಿ ಅಳಿದುಹೋಗುವರು.
12 “ಒಂದು ಸಂದೇಶವು ನನಗೆ ರಹಸ್ಯವಾಗಿ ತಿಳಿಸಲ್ಪಟ್ಟಿತು;
ನನ್ನ ಕಿವಿಗಳಿಗೆ ಅದು ಗುಸುಗುಸು ಸದ್ದಾಗಿ ಕೇಳಿಬಂತು.
13 ಮನುಷ್ಯರಿಗೆ ಗಾಢನಿದ್ರೆ ಹತ್ತುವ ಸಮಯದಲ್ಲಿ
ರಾತ್ರಿಯ ಕನಸುಗಳಿಂದ ಯೋಚನೆಯಲ್ಲಿರುವಾಗ
14 ನನಗೆ ಎಲುಬುಗಳೆಲ್ಲಾ ನಡುಗುವಷ್ಟು
ಭಯಂಕರವಾದ ಭಯ ಉಂಟಾಯಿತು.
15 ಯಾವುದೋ ಒಂದು ಉಸಿರು ನನ್ನ ಮುಖಕ್ಕೆ ಸುಳಿಯಲು
ಮೈಯೆಲ್ಲಾ ರೋಮಾಂಚನಗೊಂಡಿತು.
16 ಯಾವುದೋ ಒಂದು ಆತ್ಮ
ನನ್ನ ಕಣ್ಣೆದುರಿನಲ್ಲಿ ಬಂದು ನಿಂತುಕೊಂಡಿತು;
ಅದು ಏನೆಂಬುದು ನನಗೆ ಗೊತ್ತಾಗಲಿಲ್ಲ.
ಸೂಕ್ಷ್ಮ ಧ್ವನಿಯೊಂದು ನನಗೆ ಕೇಳಿಬಂತು.
17 ಅದೇನೆಂದರೆ: ‘ದೇವರಿಗಿಂತಲೂ ನೀತಿವಂತನಾದ ಮನುಷ್ಯನಿರುವನೇ?
ಮನುಷ್ಯನು ತನ್ನ ಸೃಷ್ಟಿಕರ್ತನಿಗಿಂತಲೂ ಶುದ್ಧನಾಗಿರುವನೇ?
18 ದೇವರು ತನ್ನ ಪರಲೋಕದ ಸೇವಕರುಗಳಲ್ಲಿಯೂ ಭರವಸವಿಡುವುದಿಲ್ಲ.
ದೇವರು ತನ್ನ ದೂತರುಗಳಲ್ಲಿಯೂ ತಪ್ಪನ್ನು ಕಂಡುಹಿಡಿಯುವನು.
19 ಹೀಗಿರಲು ದೇವರು ಮನುಷ್ಯರಲ್ಲಿ ಎಷ್ಟೋ ತಪ್ಪುಗಳನ್ನು ಕಂಡುಹಿಡಿಯುವನು;
ಮನುಷ್ಯರು ಮಣ್ಣಿನ ಮನೆಗಳಲ್ಲಿ[a] ವಾಸಿಸುತ್ತಾರೆ.
ಈ ಮಣ್ಣಿನ ಮನೆಗಳ ಅಸ್ತಿವಾರಗಳು ಧೂಳಿನಲ್ಲಿವೆ.
ಅವರು ಹುಳಕ್ಕಿಂತಲೂ ಸುಲಭವಾಗಿ ಸಾವಿಗೀಡಾಗುವರು!
20 ಸೂರ್ಯೋದಯ ಮತ್ತು ಸೂರ್ಯಾಸ್ತಮಾನಗಳ ನಡುವೆ ಅವರು ನಜ್ಜುಗುಜ್ಜಾಗುವರು.
ಅವರು ಸತ್ತು ನಿತ್ಯ ನಾಶವಾಗುವುದನ್ನು ಯಾರೂ ಗಮನಿಸುವುದಿಲ್ಲ.
21 ಅವರ ಗುಡಾರಗಳ ಹಗ್ಗಗಳು ಬಿಚ್ಚಲ್ಪಡುವವು,
ಅವರು ಜ್ಞಾನವಿಲ್ಲದವರಾಗಿ ಸತ್ತುಹೋಗುವರು.’”
ಪವಿತ್ರಾತ್ಮನಿಗೆ ಅಧೀನವಾದ ಜೀವಿತ
8 ಆದ್ದರಿಂದ ಈಗ ಕ್ರಿಸ್ತ ಯೇಸುವಿನಲ್ಲಿರುವ ಜನರಿಗೆ ಅಪರಾಧಿಗಳೆಂದು ತೀರ್ಪಾಗುವುದಿಲ್ಲ. 2 ನನಗೆ ಅಪರಾಧಿಯೆಂದು ತೀರ್ಪಾಗದಿರುವುದೇಕೆ? ಏಕೆಂದರೆ ಕ್ರಿಸ್ತ ಯೇಸುವಿನಲ್ಲಿರುವ ಜನರಿಗೆ ಜೀವವನ್ನು ತರುವ ಪವಿತ್ರಾತ್ಮನ ನಿಯಮವು ನನ್ನನ್ನು ಪಾಪ ಮತ್ತು ಮರಣಗಳನ್ನು ತರುವ ನಿಯಮದಿಂದ ಬಿಡುಗಡೆ ಮಾಡಿತು. 3 ಧರ್ಮಶಾಸ್ತ್ರವು ನಿರ್ಬಲವಾಗಿತ್ತು. ಏಕೆಂದರೆ ನಮ್ಮ ಪಾಪಾಧೀನಸ್ವಭಾವವೇ ಅದನ್ನು ಬಲಹೀನಗೊಳಿಸಿತು. ಹೀಗಿರಲಾಗಿ, ಧರ್ಮಶಾಸ್ತ್ರವು ಮಾಡಲಾಗದ್ದನ್ನು ದೇವರು ಮಾಡಿದನು. ದೇವರು ತನ್ನ ಸ್ವಂತ ಮಗನನ್ನೇ ಪಾಪಾಧೀನವಾದ ಮಾನವ ಸ್ವಭಾವದಲ್ಲಿ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಕಳುಹಿಸಿಕೊಟ್ಟನು. ಆದಕಾರಣ ದೇವರು ಪಾಪಕ್ಕೆ ಮರಣದಂಡನೆಯನ್ನು ವಿಧಿಸಲು ಮಾನವ ಸ್ವಭಾವವನ್ನೇ ಉಪಯೋಗಿಸಿಕೊಂಡನು. 4 ಈಗ ನಮ್ಮ ಸ್ವಭಾವಕ್ಕನುಸಾರವಾಗಿ ಜೀವಿಸದೆ ಪವಿತ್ರಾತ್ಮನಿಗನುಸಾರವಾಗಿ ಜೀವಿಸುತ್ತಿರುವ ನಮ್ಮಲ್ಲಿ ಧರ್ಮಶಾಸ್ತ್ರದ ನಿಯಮಗಳು ನೆರವೇರಲೆಂದು ದೇವರು ಹೀಗೆ ಮಾಡಿದನು.
5 ತಮ್ಮ ಪಾಪಸ್ವಭಾವಕ್ಕನುಸಾರವಾಗಿ ಜೀವಿಸುವ ಜನರು ತಮ್ಮ ಪಾಪಸ್ವಭಾವವು ಬಯಸುವ ಸಂಗತಿಗಳ ಬಗ್ಗೆ ಮಾತ್ರ ಆಲೋಚಿಸುತ್ತಾರೆ. ಆದರೆ ಆತ್ಮನಿಗನುಸಾರವಾಗಿ ಜೀವಿಸುವ ಜನರು ತಮ್ಮಿಂದ ಆತ್ಮನು ಅಪೇಕ್ಷಿಸುವ ಕಾರ್ಯಗಳ ಬಗ್ಗೆ ಆಲೋಚಿಸುತ್ತಾರೆ. 6 ಒಬ್ಬನ ಆಲೋಚನೆಯು ಅವನ ಪಾಪ ಸ್ವಭಾವದ ಹಿಡಿತಕ್ಕೆ ಒಳಪಟ್ಟಿದ್ದರೆ ಅವನಿಗೆ ಆತ್ಮಿಕ ಮರಣವಾಗುತ್ತದೆ. ಆದರೆ ಒಬ್ಬನ ಆಲೋಚನೆಯು ಪವಿತ್ರಾತ್ಮನ ಹತೋಟಿಗೆ ಒಳಪಟ್ಟಿದ್ದರೆ, ಅವನಲ್ಲಿ ಜೀವವೂ ಸಮಾಧಾನವೂ ಇರುತ್ತದೆ. 7 ಏಕೆಂದರೆ ಒಬ್ಬನ ಆಲೋಚನೆಯು ಅವನ ಪಾಪಾಧೀನಸ್ವಭಾವದ ಹಿಡಿತಕ್ಕೆ ಒಳಪಟ್ಟಿದ್ದರೆ, ಅವನು ದೇವರಿಗೆ ವಿರೋಧವಾಗಿದ್ದಾನೆ. ಅವನು ದೇವರ ನಿಯಮಕ್ಕೆ ವಿಧೇಯನಾಗುವುದೂ ಇಲ್ಲ್ಲ, ವಿಧೇಯನಾಗಲು ಸಾಧ್ಯವಿರುವುದೂ ಇಲ್ಲ. 8 ತಮ್ಮ ಪಾಪಸ್ವಭಾವದ ಆಡಳಿತಕ್ಕೆ ಒಳಪಟ್ಟಿರುವ ಆ ಜನರು ದೇವರನ್ನು ಮೆಚ್ಚಿಸಲು ಸಾಧ್ಯವಿಲ್ಲ.
9 ಆದರೆ ನೀವು ನಿಮ್ಮ ಪಾಪಸ್ವಭಾವದ ಆಡಳಿತಕ್ಕೆ ಒಳಗಾಗಿಲ್ಲ. ದೇವರಾತ್ಮನು ನಿಮ್ಮಲ್ಲಿ ನಿಜವಾಗಿಯೂ ವಾಸವಾಗಿದ್ದರೆ, ನೀವು ಪವಿತ್ರಾತ್ಮನ ಆಡಳಿತಕ್ಕೆ ಒಳಗಾಗಿದ್ದೀರಿ ಯಾವನಲ್ಲಾದರೂ ಕ್ರಿಸ್ತನ ಆತ್ಮನು ಇಲ್ಲದಿದ್ದರೆ, ಅವನು ಕ್ರಿಸ್ತನಿಗೆ ಸೇರಿದವನಲ್ಲ. 10 ನಿಮ್ಮ ದೇಹವು ಪಾಪದ ದೆಸೆಯಿಂದಾಗಿ ಯಾವಾಗಲೂ ಸತ್ತದ್ದಾಗಿದೆ. ಆದರೆ ಕ್ರಿಸ್ತನು ನಿಮ್ಮಲ್ಲಿದ್ದರೆ ಆತ್ಮನು ನಿಮಗೆ ಜೀವವನ್ನು ಕೊಡುತ್ತಾನೆ. ಏಕೆಂದರೆ ಕ್ರಿಸ್ತನು ನಿಮ್ಮನ್ನು ನೀತಿವಂತರನ್ನಾಗಿ ಮಾಡಿದ್ದಾನೆ. 11 ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ ದೇವರ ಆತ್ಮನು ನಿಮ್ಮಲ್ಲಿ ವಾಸವಾಗಿದ್ದರೆ, ಸತ್ತುಹೋಗುವ ನಿಮ್ಮ ದೇಹಗಳಿಗೆ ಆತನು ಜೀವವನ್ನು ಸಹ ಕೊಡುತ್ತಾನೆ. ಕ್ರಿಸ್ತನನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದಾತನು ದೇವರೇ. ನಿಮ್ಮಲ್ಲಿ ವಾಸವಾಗಿರುವ ಪವಿತ್ರಾತ್ಮನ ಮೂಲಕ ಆತನು ನಿಮ್ಮ ದೇಹಗಳಿಗೆ ಜೀವವನ್ನು ಕೊಡುತ್ತಾನೆ.
Kannada Holy Bible: Easy-to-Read Version. All rights reserved. © 1997 Bible League International