Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 51:1-12

ದಾವೀದನು ಬತ್ಷೆಬಳೊಂದಿಗೆ ವ್ಯಭಿಚಾರ ಮಾಡಿದಾಗ ಪ್ರವಾದಿಯಾದ ನಾತಾನನು ದಾವೀದನ ಬಳಿಗೆ ಹೋಗಿ ದೇವರ ನ್ಯಾಯತೀರ್ಪನ್ನು ಹೇಳುತ್ತಾನೆ. ಆಗ ಈ ಕೀರ್ತನೆ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.

51 ಪ್ರೀತಿಸ್ವರೂಪನಾದ ದೇವರೇ, ನನಗೆ ಕರುಣೆತೋರು;
    ಕರುಣಾನಿಧಿಯೇ, ನನ್ನ ಪಾಪಗಳನ್ನೆಲ್ಲಾ ಅಳಿಸಿಬಿಡು.
ನನ್ನ ದೋಷವನ್ನು ತೊಳೆದುಬಿಡು.
    ನನ್ನ ಪಾಪವನ್ನು ಪರಿಹರಿಸಿ ನನ್ನನ್ನು ಮತ್ತೆ ಶುದ್ಧೀಕರಿಸು!
ನಾನು ಪಾಪಮಾಡಿದ್ದೇನೆಂದು ನನಗೆ ಗೊತ್ತಿದೆ.
    ಆ ಪಾಪಗಳು ನನ್ನ ಮುಂದೆಯೇ ಇವೆ.
ನಿನ್ನ ದೃಷ್ಟಿಗೆ ಕೆಟ್ಟದ್ದಾಗಿದ್ದನ್ನೇ ಮಾಡಿದ್ದೇನೆ.
    ಹೌದು, ನಾನು ಪಾಪ ಮಾಡಿದ್ದು ನಿನಗೇ.
ನಾನು ತಪ್ಪಿತಸ್ಥನೆಂತಲೂ ನೀನು ನೀತಿವಂತನೆಂತಲೂ
    ಜನರಿಗೆ ಗೊತ್ತಾಗಲೆಂದೇ ಇವುಗಳನ್ನು ಅರಿಕೆಮಾಡಿಕೊಳ್ಳುತ್ತಿದ್ದೇನೆ.
    ನಿನ್ನ ತೀರ್ಪುಗಳು ನ್ಯಾಯಬದ್ಧವಾಗಿವೆ.
ಹುಟ್ಟಿದಂದಿನಿಂದ ನಾನು ಪಾಪಿಯೇ.
    ಮಾತೃಗರ್ಭವನ್ನು ಪ್ರವೇಶಿಸಿದ ದಿನದಿಂದ ನಾನು ದ್ರೋಹಿಯೇ.
ದೇವರೇ, ನಾನು ನಿನಗೆ ನಂಬಿಗಸ್ತನಾಗಿರಬೇಕೆಂಬುದೇ ನಿನ್ನ ಅಪೇಕ್ಷೆ.
    ಆದ್ದರಿಂದ ಸುಜ್ಞಾನದ ರಹಸ್ಯಗಳನ್ನು ನನಗೆ ಉಪದೇಶಿಸು.
ಹಿಸ್ಸೋಪ್ ಗಿಡದ ಬರಲಿನಿಂದ ನನ್ನನ್ನು ತೊಳೆದು ಶುದ್ಧೀಕರಿಸು;
    ನಾನು ಹಿಮಕ್ಕಿಂತಲೂ ಬಿಳುಪಾಗುವ ತನಕ ನನ್ನನ್ನು ತೊಳೆ!
ನನ್ನಲ್ಲಿ ಆನಂದವನ್ನೂ ಉಲ್ಲಾಸವನ್ನೂ ಬರಮಾಡು.
    ನೀನು ಜಜ್ಜಿಹಾಕಿದ ಮೂಳೆಗಳು ಮತ್ತೆ ಉಲ್ಲಾಸಿಸಲಿ!
ನನ್ನ ಪಾಪಗಳನ್ನು ನೋಡಬೇಡ!
    ಅವುಗಳನ್ನೆಲ್ಲ ಅಳಿಸಿಬಿಡು!
10 ದೇವರೇ, ನನ್ನಲ್ಲಿ ಶುದ್ಧ ಹೃದಯವನ್ನು ನಿರ್ಮಿಸು!
    ನನ್ನ ಆತ್ಮವನ್ನು ಮತ್ತೆ ಬಲಗೊಳಿಸಿ ನನ್ನನ್ನು ನೂತನಪಡಿಸು.
11 ನಿನ್ನ ಸನ್ನಿಧಿಯಿಂದ ನನ್ನನ್ನು ತಳ್ಳಿಬಿಡಬೇಡ!
    ನಿನ್ನ ಪವಿತ್ರಾತ್ಮನನ್ನು ನನ್ನಿಂದ ತೆಗೆಯಬೇಡ!
12 ನಿನ್ನ ರಕ್ಷಣೆಯಿಂದುಂಟಾಗುವ ಆನಂದವನ್ನು ನನಗೆ ಮತ್ತೆ ದಯಪಾಲಿಸು!
    ನಿನಗೆ ವಿಧೇಯನಾಗಿರಲು ನನ್ನ ಮನಸ್ಸನ್ನು ದೃಢಪಡಿಸು.

ಹಬಕ್ಕೂಕ 3:2-13

ಯೆಹೋವನೇ, ನಾನು ನಿನ್ನ ವಿಚಾರ ಕೇಳಿದೆನು.
    ಯೆಹೋವನೇ, ನೀನು ಹಿಂದಿನ ಕಾಲದಲ್ಲಿ ಮಾಡಿದ ಮಹತ್ಕಾರ್ಯಗಳು ನನ್ನನ್ನು ಚಕಿತಗೊಳಿಸಿವೆ.
ನಮ್ಮ ಕಾಲದಲ್ಲಿಯೂ ಮಹತ್ಕಾರ್ಯಗಳನ್ನು ಮಾಡಬೇಕೆಂದು ಪ್ರಾರ್ಥಿಸುತ್ತೇನೆ.
    ದಯಮಾಡಿ, ಆ ಘಟನೆಗಳು ನಮ್ಮ ದಿವಸಗಳಲ್ಲೂ ನೆರವೇರುವಂತೆ ಮಾಡು.
ಅದರ ಜೊತೆಯಲ್ಲಿ ನಮ್ಮ ಮೇಲೆ
    ಕರುಣೆ ತೋರಿಸಲು ಮರೆಯಬೇಡ.

ತೇಮಾನಿನಿಂದ ಯೆಹೋವನು ಬರುತ್ತಿದ್ದಾನೆ.
    ಪರಿಶುದ್ಧನಾದವನು ಪಾರಾನ್ ಪರ್ವತದಿಂದ ಬರುತ್ತಿದ್ದಾನೆ.
ಯೆಹೋವನ ಮಹಿಮೆಯು ಆಕಾಶಮಂಡಲವನ್ನು ಮುಚ್ಚುತ್ತದೆ.
    ಅವನ ಸ್ತೋತ್ರವು ಭೂಲೋಕವನ್ನು ತುಂಬುತ್ತದೆ.
ಬೆಳಕಿನ ಕಿರಣಗಳು ಆತನ ಕೈಯಿಂದ ಹೊಳೆಯುತ್ತವೆ.
ಅದು ಹೊಳೆಯುವಂಥ ಪ್ರಕಾಶಮಾನವಾದ ಹೊಳಪು.
    ಆ ಕೈಗಳಲ್ಲಿ ಅಂಥಾ ಶಕ್ತಿಯು ಅಡಕವಾಗಿದೆ.
ರೋಗವು ಆತನ ಮುಂದೆ ಹೊರಟಿತು.
    ನಾಶಕನು ಆತನನ್ನು ಹಿಂಬಾಲಿಸಿದನು.
ಯೆಹೋವನು ನಿಂತು ಪ್ರಪಂಚದ ನ್ಯಾಯತೀರಿಸಿದನು.
    ಎಲ್ಲಾ ಜನಾಂಗಗಳ ಜನರ ಕಡೆಗೆ ನೋಡಿದನು.
    ಅವರು ಭಯದಿಂದ ನಡುಗಿದರು.
ತಲಾಂತರಗಳಿಂದ ಪರ್ವತಗಳು ಸ್ಥಿರವಾಗಿ ನಿಂತಿದ್ದವು.
    ಆದರೆ ಅದೇ ಪರ್ವತಗಳು ತುಂಡುತುಂಡಾಗಿ ಬಿದ್ದವು.
ಪುರಾತನ ಕಾಲದ ಬೆಟ್ಟಗಳು ಬಿದ್ದುಹೋದವು.
    ಹಾಗೆ ಮಾಡಲು ದೇವರು ಯಾವಾಗಲೂ ಶಕ್ತನಾಗಿದ್ದಾನೆ.
ಕೂಷಾನಿನ ನಗರಗಳು ಸಂಕಟದಲ್ಲಿರುವುದನ್ನು ಕಂಡೆನು.
    ಮಿದ್ಯಾನಿನ ಮನೆಗಳು ಹೆದರಿ ನಡುಗುತ್ತಿದ್ದವು.
ಯೆಹೋವನೇ, ನೀನು ನದಿಗಳ ಮೇಲೆ ಕೋಪಗೊಂಡಿದ್ದೀಯೋ?
    ತೊರೆಗಳ ಮೇಲೆ ನೀನು ಕೋಪಗೊಂಡಿದ್ದೀಯೋ?
ಸಮುದ್ರದ ಮೇಲೆ ನೀನು ಕೋಪಗೊಂಡಿದ್ದೀಯೋ?
    ನೀನು ನಿನ್ನ ಕುದುರೆಗಳ ಮೇಲೆ ಮತ್ತು ರಥಗಳ ಮೇಲೆ ಸವಾರಿ ಮಾಡಿದಾಗ ಕೋಪಗೊಂಡಿದ್ದೀಯೋ?

ಆದಾಗ್ಯೂ ನೀನು ನಿನ್ನ ಮೇಘದ ಬಿಲ್ಲನ್ನು ತೋರಿಸಿದೆ.
    ಈ ಲೋಕದ ಮನುಷ್ಯರೊಂದಿಗೆ ಅದು ನಿನ್ನ ಒಡಂಬಡಿಕೆಯ ಸಾಕ್ಷಿ.

ಭೂಮಿಯು ನದಿಯನ್ನು ಇಬ್ಭಾಗವಾಗಿ ಮಾಡಿತು.
10     ಪರ್ವತಗಳು ನಿನ್ನನ್ನು ನೋಡಿ ನಡುಗಿದವು.
ನೆಲದ ಮೇಲಿಂದ ನೀರು ಹರಿದುಹೋಯಿತು.
    ಭೂಮಿಯ ಮೇಲೆ ತನಗಿದ್ದ ಶಕ್ತಿ ಹೋದದ್ದನ್ನು ನೋಡಿ
    ಸಮುದ್ರವು ಗಟ್ಟಿಯಾಗಿ ಶಬ್ದ ಮಾಡಿತು.
11 ಸೂರ್ಯಚಂದ್ರರು ತಮ್ಮ ಪ್ರಕಾಶವನ್ನು ಕಳಕೊಂಡವು.
    ಹೊಳೆಯುವ ನಿನ್ನ ಮಿಂಚುಗಳನ್ನು ನೋಡಿ ಅವು ಪ್ರಕಾಶಿಸುವದನ್ನು ನಿಲ್ಲಿಸಿದವು.
    ಆ ಮಿಂಚುಗಳು ಗಾಳಿಯಲ್ಲಿ ತೂರಿಬರುವ ಭರ್ಜಿ, ಬಾಣಗಳಂತಿದ್ದವು.
12 ಸಿಟ್ಟಿನಿಂದ ನೀನು ಭೂಮಿಯ ಮೇಲೆ ನಡೆದೆ.
    ಮತ್ತು ಜನಾಂಗಗಳನ್ನು ಶಿಕ್ಷಿಸಿದೆ.
13 ನಿನ್ನ ಜನರನ್ನು ರಕ್ಷಿಸಲು ನೀನು ಬಂದೆ.
    ನೀನು ಆರಿಸಿದ್ದ ರಾಜನನ್ನು ಜಯದ ಕಡೆಗೆ ನಡಿಸುವುದಕ್ಕಾಗಿ ಬಂದೆ.
ಪ್ರತೀ ದುಷ್ಟ ಕುಟುಂಬದ ನಾಯಕನನ್ನು ನೀನು ಸಂಹರಿಸಿದೆ.
    ಭೂಲೋಕದಲ್ಲಿದ್ದ ಪ್ರಮುಖನಿಂದಿಡಿದು
    ಪ್ರಮುಖನಲ್ಲದವನವರೆಗೂ ನೀನು ಹತಿಸಿದೆ.

ಯೋಹಾನ 12:1-11

ಬೆಥಾನಿಯಲ್ಲಿ ಯೇಸು

(ಮತ್ತಾಯ 26:6-13; ಮಾರ್ಕ 14:3-9)

12 ಪಸ್ಕಹಬ್ಬಕ್ಕೆ ಇನ್ನೂ ಆರು ದಿನಗಳಿದ್ದಾಗ ಯೇಸು ಬೆಥಾನಿಗೆ ಹೋದನು. ಲಾಜರನು ವಾಸವಾಗಿದ್ದ ಊರೇ ಬೆಥಾನಿ. (ಯೇಸು ಸತ್ತವರೊಳಗಿಂದ ಎಬ್ಬಿಸಿದ ಮನುಷ್ಯನೇ ಲಾಜರನು.) ಅವರು ಯೇಸುವಿಗೆ ರಾತ್ರಿಭೋಜನವನ್ನು ಏರ್ಪಡಿಸಿದ್ದರು. ಮಾರ್ಥಳು ಊಟವನ್ನು ಬಡಿಸುತ್ತಿದ್ದಳು. ಯೇಸುವಿನೊಂದಿಗೆ ಊಟ ಮಾಡುತ್ತಿದ್ದವರಲ್ಲಿ ಲಾಜರನೂ ಒಬ್ಬನಾಗಿದ್ದನು. ಆಗ ಮರಿಯಳು, ಬಹು ಬೆಲೆಬಾಳುವ ಸುಗಂಧತೈಲವನ್ನು[a] ಅರ್ಧ ಲೀಟರಿನಷ್ಟು ತೆಗೆದುಕೊಂಡು ಬಂದು, ಯೇಸುವಿನ ಪಾದಗಳಿಗೆ ಹಚ್ಚಿದಳು. ಬಳಿಕ ತನ್ನ ತಲೆ ಕೂದಲಿನಿಂದ ಆತನ ಪಾದಗಳನ್ನು ಒರೆಸಿದಳು. ಆ ಪರಿಮಳದ್ರವ್ಯದ ಸುವಾಸನೆಯು ಇಡೀ ಮನೆಯನ್ನೇ ತುಂಬಿಕೊಂಡಿತು.

ಇಸ್ಕರಿಯೋತ ಯೂದನು ಅಲ್ಲಿದ್ದನು. ಅವನು ಯೇಸುವಿನ ಶಿಷ್ಯರಲ್ಲಿ ಒಬ್ಬನಾಗಿದ್ದನು. (ಮುಂದೆ, ಯೇಸುವಿಗೆ ದ್ರೋಹ ಮಾಡಿದವನು ಇವನೇ.) ಮರಿಯಳು ಮಾಡಿದ ಈ ಕಾರ್ಯವನ್ನು ಯೂದನು ಇಷ್ಟಪಡಲಿಲ್ಲ. ಅವನು, “ಆ ಪರಿಮಳದ ದ್ರವ್ಯದ ಬೆಲೆ ಮುನ್ನೂರು ಬೆಳ್ಳಿನಾಣ್ಯಗಳು.[b] ಅದನ್ನು ಮಾರಿ ಆ ಹಣವನ್ನು ಬಡವರಿಗೆ ಕೊಡಬೇಕಿತ್ತು” ಎಂದು ಟೀಕಿಸಿದನು. ಆದರೆ ಯೂದನಿಗೆ ಬಡವರ ಬಗ್ಗೆ ನಿಜವಾಗಿಯೂ ಚಿಂತೆಯಿರಲಿಲ್ಲ. ಅವನು ಕಳ್ಳನಾಗಿದ್ದುದರಿಂದ ಹಾಗೆ ಹೇಳಿದನು. ಶಿಷ್ಯಸಮುದಾಯಕ್ಕೋಸ್ಕರವಿದ್ದ ಹಣದ ಪೆಟ್ಟಿಗೆಯು ಅವನ ವಶದಲ್ಲಿತ್ತು. ಅವನು ಆಗಾಗ್ಗೆ ಆ ಪೆಟ್ಟಿಗೆಯಿಂದ ಹಣವನ್ನು ಕದ್ದುಕೊಳ್ಳುತ್ತಿದ್ದನು.

ಯೇಸು ಅವನಿಗೆ, “ಆಕೆಯನ್ನು ತಡೆಯಬೇಡ. ನನ್ನನ್ನು ಶವಸಂಸ್ಕಾರಕ್ಕೆ ಸಿದ್ಧಪಡಿಸುವ ಈ ದಿನಕ್ಕೋಸ್ಕರ ಆಕೆ ಸುಗಂಧ ದ್ರವ್ಯವನ್ನು ಶೇಖರಿಸಿದ್ದು ಒಳ್ಳೆಯದೇ ಸರಿ. ಬಡವರು ಯಾವಾಗಲೂ ನಿಮ್ಮೊಂದಿಗಿರುತ್ತಾರೆ ಆದರೆ ನಾನು ನಿಮ್ಮೊಂದಿಗೆ ಯಾವಾಗಲೂ ಇರುವುದಿಲ್ಲ” ಎಂದು ಉತ್ತರಕೊಟ್ಟನು.

ಲಾಜರನ ವಿರುದ್ಧ ಸಂಚು

ಯೇಸು ಬೆಥಾನಿಯಲ್ಲಿದ್ದಾನೆ ಎಂಬ ಸುದ್ದಿಯನ್ನು ಅನೇಕ ಯೆಹೂದ್ಯರು ಕೇಳಿ ಆತನನ್ನೂ ಲಾಜರನನ್ನೂ ನೋಡಬೇಕೆಂದು ಅಲ್ಲಿಗೆ ಹೋದರು. ಯೇಸುವಿನಿಂದ ಜೀವಂತವಾಗಿ ಎಬ್ಬಿಸಲ್ಪಟ್ಟವನೇ ಲಾಜರನು. 10 ಆದರೆ ಮಹಾಯಾಜಕರು ಲಾಜರನನ್ನು ಸಹ ಕೊಲ್ಲಲು ಯೋಜನೆಗಳನ್ನು ಮಾಡಿದರು. 11 ಲಾಜರನ ನಿಮಿತ್ತ ಅನೇಕ ಯೆಹೂದ್ಯರು ತಮ್ಮ ನಾಯಕರನ್ನು ತೊರೆದು ಯೇಸುವಿನಲ್ಲಿ ನಂಬಿಕೆ ಇಡುತ್ತಿದ್ದರು. ಆದಕಾರಣವೇ ಯೆಹೂದ್ಯ ನಾಯಕರು ಲಾಜರನನ್ನು ಸಹ ಕೊಲ್ಲಬೇಕೆಂದಿದ್ದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International