Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 103:1-7

ರಚನೆಗಾರ: ದಾವೀದ.

103 ನನ್ನ ಆತ್ಮವೇ, ಯೆಹೋವನನ್ನು ಕೊಂಡಾಡು!
    ನನ್ನ ಸರ್ವಾಂಗಗಳೇ, ಆತನ ಪವಿತ್ರ ಹೆಸರನ್ನು ಕೊಂಡಾಡಿರಿ!
ನನ್ನ ಆತ್ಮವೇ, ಯೆಹೋವನನ್ನು ಕೊಂಡಾಡು!
    ಆತನ ಉಪಕಾರಗಳಲ್ಲಿ ಒಂದನ್ನೂ ಮರೆಯಬೇಡ.
ಆತನು ನಮ್ಮ ಪಾಪಗಳನ್ನೆಲ್ಲಾ ಕ್ಷಮಿಸುವನು;
    ನಮ್ಮ ಕಾಯಿಲೆಗಳನ್ನೆಲ್ಲಾ ವಾಸಿಮಾಡುವನು.
ಆತನು ನಮ್ಮ ಜೀವವನ್ನು ನಾಶನದಿಂದ ರಕ್ಷಿಸಿ
    ನಮಗೆ ಪ್ರೀತಿಯನ್ನೂ ಕನಿಕರವನ್ನೂ ತೋರುವನು.
ಆತನು ನಮಗೆ ಸುವರಗಳನ್ನು ಹೇರಳವಾಗಿ ದಯಪಾಲಿಸುವನು.
    ಹದ್ದಿಗೆ ಬರುವಂತೆಯೇ ನಮಗೆ ಯೌವನವನ್ನು ಬರಮಾಡುತ್ತಾನೆ.
ಯೆಹೋವನು ನೀತಿವಂತನಾಗಿದ್ದಾನೆ.
    ಕುಗ್ಗಿಹೋದವರಿಗೆ ಆತನು ನ್ಯಾಯ ದೊರಕಿಸುವನು.
ಆತನು ತನ್ನ ಕಟ್ಟಳೆಗಳನ್ನು ಮೋಶೆಗೆ ಉಪದೇಶಿಸಿದನು;
    ತನ್ನ ಮಹತ್ಕಾರ್ಯಗಳನ್ನು ಇಸ್ರೇಲರಿಗೆ ತೋರಿಸಿದನು.

ಕೀರ್ತನೆಗಳು 103:8-13

ಯೆಹೋವನು ಕನಿಕರವುಳ್ಳವನೂ ಕೃಪಾಪೂರ್ಣನೂ
    ತಾಳ್ಮೆಯುಳ್ಳವನೂ ಪ್ರೀತಿಪೂರ್ಣನೂ ಆಗಿದ್ದಾನೆ.
ಆತನು ಯಾವಾಗಲೂ ಟೀಕಿಸುವವನಲ್ಲ.
    ಆತನು ನಮ್ಮ ಮೇಲೆ ನಿತ್ಯವೂ ಕೋಪವಾಗಿರುವವನಲ್ಲ.
10 ನಾವು ದೇವರಿಗೆ ವಿರೋಧವಾಗಿ ಪಾಪಮಾಡಿದೆವು.
    ಆದರೂ ತಕ್ಕ ದಂಡನೆಯನ್ನು ಆತನು ನಮಗೆ ಕೊಡಲಿಲ್ಲ.
11 ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವಾಗಿದೆಯೋ
    ಆತನ ಮಹಾಪ್ರೀತಿಯು ಆತನ ಭಕ್ತರ ಮೇಲೆ ಅಷ್ಟೇ ಅಪಾರವಾಗಿದೆ.
12 ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟೋ ದೂರವಿರುವಂತೆ
    ನಮ್ಮ ಪಾಪಗಳನ್ನು ನಮ್ಮಿಂದ ತೆಗೆದು ದೂರ ಮಾಡಿದ್ದಾನೆ.
13 ತಂದೆಯು ಮಕ್ಕಳನ್ನು ಕನಿಕರಿಸುವಂತೆ
    ಯೆಹೋವನು ತನ್ನ ಭಕ್ತರನ್ನು ಕನಿಕರಿಸುವನು.

ಆದಿಕಾಂಡ 41:53-42:17

ಬರಗಾಲದ ಪ್ರಾರಂಭ

53 ಈಜಿಪ್ಟಿನಲ್ಲಿ ಸಮೃದ್ಧಿಕರವಾದ ಏಳು ವರ್ಷಗಳು ಮುಗಿದ ಮೇಲೆ 54 ಯೋಸೇಫನು ಹೇಳಿದ್ದಂತೆಯೇ ಕ್ಷಾಮದ ಏಳು ವರ್ಷಗಳು ಆರಂಭಗೊಂಡವು. ಕ್ಷಾಮವು ಸುತ್ತಮುತ್ತಲಿನ ಪ್ರದೇಶಗಳಿಗೆಲ್ಲಾ ಹಬ್ಬಿಕೊಂಡಿತು. ಈಜಿಪ್ಟಿನಲ್ಲಿ ಮಾತ್ರ ಆಹಾರ ದೊರಕುತ್ತಿತ್ತು. 55 ಬರಗಾಲವು ಪ್ರಾರಂಭವಾದಾಗ ಜನರು ಆಹಾರಕ್ಕಾಗಿ ಫರೋಹನನ್ನು ಬೇಡಿಕೊಂಡರು. ಫರೋಹನು ಈಜಿಪ್ಟಿನ ಜನರಿಗೆ, “ಯೋಸೇಫನನ್ನು ಕೇಳಿರಿ; ಅವನು ಹೇಳಿದಂತೆ ಮಾಡಿರಿ” ಎಂದು ಹೇಳಿದನು.

56 ಎಲ್ಲೆಲ್ಲಿಯೂ ಬರಗಾಲವಾದಾಗ, ಯೋಸೇಫನು ಉಗ್ರಾಣಗಳನ್ನು ತೆಗೆಸಿ ದವಸಧಾನ್ಯಗಳನ್ನು ಜನರಿಗೆ ಮಾರಾಟ ಮಾಡಿಸಿದನು. ಈಜಿಪ್ಟಿನಲ್ಲಿ ಬರವು ಭೀಕರವಾಗಿತ್ತು. 57 ಭೂಲೋಕದಲ್ಲೆಲ್ಲಾ ಕ್ಷಾಮವು ಭಯಂಕರವಾಗಿದ್ದುದರಿಂದ ಎಲ್ಲಾ ದೇಶಗಳವರು ಯೋಸೇಫನಿಂದ ಆಹಾರವನ್ನು ಪಡೆದುಕೊಳ್ಳುವುದಕ್ಕಾಗಿ ಈಜಿಪ್ಟಿಗೆ ಬಂದರು.

ಕನಸುಗಳು ನಿಜವಾದವು

42 ಈಜಿಪ್ಟಿನಲ್ಲಿ ದವಸಧಾನ್ಯಗಳಿರುವುದಾಗಿ ಕಾನಾನಿನಲ್ಲಿದ್ದ ಯಾಕೋಬನಿಗೆ ತಿಳಿಯಿತು. ಆದ್ದರಿಂದ ಯಾಕೋಬನು ತನ್ನ ಗಂಡುಮಕ್ಕಳಿಗೆ, “ನಾವು ಇಲ್ಲಿ ಏನೂ ಮಾಡದೆ ಕುಳಿತುಕೊಂಡಿರುವುದೇಕೆ? ಈಜಿಪ್ಟಿನಲ್ಲಿ ದವಸಧಾನ್ಯಗಳಿರುವುದಾಗಿ ನಾನು ಕೇಳಿದ್ದೇನೆ. ಆದ್ದರಿಂದ ನಾವು ಅಲ್ಲಿಗೆ ಹೋಗಿ ನಮ್ಮ ಆಹಾರವನ್ನು ಕೊಂಡುಕೊಳ್ಳೋಣ. ಆಗ ನಾವು ಸಾಯದೆ ಬದುಕಿಕೊಳ್ಳುವೆವು” ಎಂದು ಹೇಳಿದನು.

ಆದ್ದರಿಂದ ಯೋಸೇಫನ ಹತ್ತು ಮಂದಿ ಸಹೋದರರು ದವಸಧಾನ್ಯಗಳನ್ನು ಕೊಂಡುಕೊಳ್ಳಲು ಈಜಿಪ್ಟಿಗೆ ಹೋದರು. ಯಾಕೋಬನು ಬೆನ್ಯಾಮೀನನನ್ನು ಕಳುಹಿಸಲಿಲ್ಲ. (ಬೆನ್ಯಾಮೀನನು ಯೋಸೇಫನ ಒಡಹುಟ್ಟಿದ ಒಬ್ಬನೇ ತಮ್ಮನಾಗಿದ್ದನು.) ಬೆನ್ಯಾಮೀನನಿಗೆ ಏನಾದರೂ ಕೇಡಾಗಬಹುದೆಂಬ ಭಯ ಯಾಕೋಬನಿಗಿತ್ತು.

ಕಾನಾನಿನಲ್ಲಿ ಬರಗಾಲ ಭೀಕರವಾಗಿತ್ತು. ಆದ್ದರಿಂದ ದವಸಧಾನ್ಯಗಳನ್ನು ಕೊಂಡುಕೊಳ್ಳಲು ಅನೇಕ ಜನರು ಕಾನಾನಿನಿಂದ ಈಜಿಪ್ಟಿಗೆ ಹೋದರು; ಇಸ್ರೇಲನ ಗಂಡುಮಕ್ಕಳೂ ಅವರೊಂದಿಗೆ ಹೋದರು.

ಯೋಸೇಫನು ಈಜಿಪ್ಟಿನ ರಾಜ್ಯಪಾಲನಾಗಿದ್ದರಿಂದ ಅವನ ಅನುಮತಿಯಿಲ್ಲದೆ ದವಸಧಾನ್ಯಗಳನ್ನು ಕೊಂಡುಕೊಳ್ಳಲು ಯಾರಿಗೂ ಸಾಧ್ಯವಿರಲಿಲ್ಲ. ಯೋಸೇಫನ ಸಹೋದರರು ಬಂದು ಅವನ ಮುಂದೆ ಅಡ್ಡಬಿದ್ದರು. ಯೋಸೇಫನು ಅವರನ್ನು ಕಂಡು, ತನ್ನ ಅಣ್ಣಂದಿರೆಂದು ತಿಳಿದುಕೊಂಡನು. ಆದರೂ ಅವನು ತನಗೆ ಅವರು ಗೊತ್ತೇ ಇಲ್ಲದಂತೆ ಅವರೊಂದಿಗೆ ಕಟುವಾಗಿ ಮಾತಾಡಿ, ಅವರಿಗೆ, “ನೀವು ಎಲ್ಲಿಂದ ಬಂದಿರುವಿರಿ?” ಎಂದು ಕೇಳಿದನು. ಸಹೋದರರು, “ಆಹಾರವನ್ನು ಕೊಂಡುಕೊಳ್ಳಲು ಕಾನಾನ್ ದೇಶದಿಂದ ಬಂದಿದ್ದೇವೆ” ಎಂದು ಉತ್ತರಿಸಿದರು.

ಯೋಸೇಫನು ತನ್ನ ಅಣ್ಣಂದಿರನ್ನು ಗುರುತಿಸಿದರೂ ಅವನ ಅಣ್ಣಂದಿರು ಯೋಸೇಫನನ್ನು ಗುರುತಿಸಲಿಲ್ಲ. ಆಗ ಯೋಸೇಫನು ತನ್ನ ಅಣ್ಣಂದಿರ ಬಗ್ಗೆ ತಾನು ಕಂಡಿದ್ದ ಕನಸುಗಳ ಬಗ್ಗೆ ಜ್ಞಾಪಿಸಿಕೊಂಡು

ಅವರಿಗೆ, “ನೀವು ಆಹಾರವನ್ನು ಕೊಂಡುಕೊಳ್ಳಲು ಬಂದಿಲ್ಲ; ನೀವು ಗೂಢಚಾರರು. ನಮ್ಮ ದೇಶದ ದುರ್ಬಲ ಸ್ಥಳಗಳನ್ನು ತಿಳಿದುಕೊಳ್ಳಲು ಬಂದಿರುವಿರಿ” ಎಂದು ಹೇಳಿದನು.

10 ಸಹೋದರರು ಅವನಿಗೆ, “ಇಲ್ಲ! ಸ್ವಾಮೀ, ನಿಮ್ಮ ಸೇವಕರಾದ ನಾವು ಆಹಾರವನ್ನು ಕೊಂಡುಕೊಳ್ಳಲು ಬಂದಿದ್ದೇವೆ. 11 ನಾವೆಲ್ಲರೂ ಸಹೋದರರು. ನಮ್ಮೆಲ್ಲರಿಗೂ ಒಬ್ಬನೇ ತಂದೆ. ನಾವು ಯಥಾರ್ಥವಾಗಿ ಬಂದವರೇ ಹೊರತು ಗೂಢಚಾರರಲ್ಲ” ಎಂದು ಹೇಳಿದರು.

12 ಯೋಸೇಫನು ಅವರಿಗೆ, “ಇಲ್ಲ! ನಮ್ಮ ದುರ್ಬಲ ಸ್ಥಳಗಳನ್ನು ಕಂಡುಕೊಳ್ಳುವುದಕ್ಕೆ ನೀವು ಬಂದಿದ್ದೀರಿ” ಎಂದು ಹೇಳಿದನು.

13 ಅದಕ್ಕೆ ಅವರು, “ಇಲ್ಲ, ನಾವೆಲ್ಲಾ ಸಹೋದರರು. ನಮ್ಮ ಕುಟುಂಬದಲ್ಲಿ ಹನ್ನೆರಡು ಮಂದಿ ಅಣ್ಣತಮ್ಮಂದಿರು. ನಮ್ಮೆಲ್ಲರಿಗೂ ಒಬ್ಬನೇ ತಂದೆ. ನಮ್ಮ ಕಿರಿಯ ತಮ್ಮನು ನಮ್ಮ ತಂದೆಯೊಂದಿಗೆ ಮನೆಯಲ್ಲಿದ್ದಾನೆ; ಇನ್ನೊಬ್ಬ ತಮ್ಮನು ಹೊರಟುಹೋದನು. ತಮ್ಮ ಸೇವಕರಾದ ನಾವು ಕಾನಾನ್ ದೇಶದಿಂದ ಬಂದವರು” ಎಂದು ಹೇಳಿದರು.

14 ಯೋಸೇಫನು ಅವರಿಗೆ, “ಇಲ್ಲ, ನಾನು ಹೇಳಿದಂತೆ ನೀವು ಗೂಢಚಾರರೇ. 15 ಆದರೆ ನೀವು ಹೇಳುತ್ತಿರುವುದು ಸತ್ಯವಾಗಿದ್ದರೆ ನಿಮ್ಮ ಚಿಕ್ಕ ತಮ್ಮನು ಇಲ್ಲಿಗೆ ಬರಬೇಕು; ಇಲ್ಲವಾದರೆ ಫರೋಹನ ಜೀವದಾಣೆ, ಅಲ್ಲಿಯವರೆಗೂ ನೀವು ಈ ಸ್ಥಳದಿಂದ ಹೋಗಕೂಡದು. 16 ಆದ್ದರಿಂದ ನಿಮ್ಮಲ್ಲೊಬ್ಬನು ಹಿಂತಿರುಗಿ ಹೋಗಿ ನಿಮ್ಮ ಚಿಕ್ಕ ತಮ್ಮನನ್ನು ಇಲ್ಲಿಗೆ ಕರೆದುಕೊಂಡು ಬರಬೇಕು. ಅಲ್ಲಿಯವರೆಗೆ ಉಳಿದವರೆಲ್ಲರೂ ಇಲ್ಲಿ ಸೆರೆಮನೆಯಲ್ಲಿರಬೇಕು. ನೀವು ಹೇಳುತ್ತಿರುವುದು ಸತ್ಯವೋ ಸುಳ್ಳೋ ಆಗ ನನಗೆ ಗೊತ್ತಾಗುವುದು. ಆದರೆ ನೀವಂತೂ ಗೂಢಚಾರರೆಂದು ತಿಳಿದುಕೊಂಡಿದ್ದೇನೆ” ಎಂದು ಹೇಳಿದನು. 17 ಆಮೇಲೆ ಯೋಸೇಫನು ಅವರೆಲ್ಲರನ್ನು ಮೂರು ದಿನಗಳವರೆಗೆ ಸೆರೆಮನೆಯಲ್ಲಿಟ್ಟನು.

ಅಪೊಸ್ತಲರ ಕಾರ್ಯಗಳು 7:9-16

“ಈ ಪಿತೃಗಳು ಯೋಸೇಫನ (ಅವರು ತಮ್ಮ) ಮೇಲೆ ಹೊಟ್ಟೆಕಿಚ್ಚುಪಟ್ಟರು. ಅವರು ಯೋಸೇಫನನ್ನು ಈಜಿಪ್ಟಿನ ಜನರಿಗೆ ಗುಲಾಮನನ್ನಾಗಿ ಮಾರಿದರು. ಆದರೆ ದೇವರು ಯೋಸೇಫನೊಂದಿಗೆ ಇದ್ದನು. 10 ಯೋಸೇಫನಿಗೆ ಅಲ್ಲಿ ಅನೇಕ ತೊಂದರೆಗಳು ಬಂದವು. ಆದರೆ ದೇವರು ಆ ಎಲ್ಲಾ ತೊಂದರೆಗಳಿಂದ ಅವನನ್ನು ರಕ್ಷಿಸಿದನು. ಆಗ ಫರೋಹನು ಈಜಿಪ್ಟಿನ ರಾಜನಾಗಿದ್ದನು. ದೇವರು ಯೋಸೇಫನಿಗೆ ಕೊಟ್ಟ ಜ್ಞಾನದ ದೆಸೆಯಿಂದ ಫರೋಹನು ಯೋಸೇಫನನ್ನು ಇಷ್ಟಪಟ್ಟನು ಮತ್ತು ಗೌರವಿಸಿದನು. ಫರೋಹನು ಯೋಸೇಫನನ್ನು ಈಜಿಪ್ಟಿನ ರಾಜ್ಯಪಾಲನನ್ನಾಗಿಯೂ ತನ್ನ ಮನೆಯಲ್ಲಿದ್ದ ಎಲ್ಲಾ ಜನರ ಮೇಲೆ ಅಧಿಪತಿಯನ್ನಾಗಿಯೂ ಮಾಡಿದನು. 11 ಆದರೆ ಈಜಿಪ್ಟಿನಲ್ಲಿ ಮತ್ತು ಕಾನಾನಿನಲ್ಲಿ ಬರಗಾಲ ಉಂಟಾಯಿತು. ಆಹಾರವಿಲ್ಲದೆ ನಮ್ಮ ಪಿತೃಗಳಿಗೆ ಬಹಳ ಕಷ್ಟವಾಯಿತು.

12 “ಆದರೆ ಈಜಿಪ್ಟಿನಲ್ಲಿ ಆಹಾರವನ್ನು ಸಂಗ್ರಹಿಸಲಾಗಿದೆ ಎಂಬ ಸುದ್ದಿಯನ್ನು ಯಾಕೋಬನು ಕೇಳಿ, ನಮ್ಮ ಪಿತೃಗಳನ್ನು ಅಲ್ಲಿಗೆ ಕಳುಹಿಸಿದನು. (ಇದು ಈಜಿಪ್ಟಿಗೆ ಅವರ ಮೊದಲ ಪ್ರಯಾಣ.) 13 ಬಳಿಕ ಅವರು ಅಲ್ಲಿಗೆ ಎರಡನೆಯ ಸಲ ಹೋದರು. ಈ ಸಲ, ತಾನು ಯಾರೆಂಬುದನ್ನು ಯೋಸೇಫನು ತನ್ನ ಸಹೋದರರಿಗೆ ತಿಳಿಸಿದನು ಮತ್ತು ಯೋಸೇಫನ ಕುಟುಂಬದ ಬಗ್ಗೆ ಫರೋಹನಿಗೆ ತಿಳಿಯಿತು. 14 ಬಳಿಕ, ಯೋಸೇಫನು ತನ್ನ ತಂದೆಯಾದ ಯಾಕೋಬನನ್ನು ಮತ್ತು ಸಂಬಂಧಿಕರನ್ನು (ಅವರೆಲ್ಲರು ಒಟ್ಟಿಗೆ ಎಪ್ಪತ್ತೈದು ಮಂದಿ) ಈಜಿಪ್ಟಿಗೆ ಆಹ್ವಾನಿಸಲು ಕೆಲವು ಜನರನ್ನು ಕಳುಹಿಸಿದನು. 15 ಆದ್ದರಿಂದ ಯಾಕೋಬನು ಈಜಿಪ್ಟಿಗೆ ಹೋದನು. ಯಾಕೋಬನು ಮತ್ತು ನಮ್ಮ ಪಿತೃಗಳು ತಾವು ಸಾಯುವವರೆಗೆ ಅಲ್ಲೇ ಇದ್ದರು. 16 ಬಳಿಕ ಅವರ ದೇಹಗಳನ್ನು ಶೇಕೆಮಿಗೆ ಸಾಗಿಸಲಾಯಿತು. ಅಲ್ಲಿಯ ಸಮಾಧಿಯೊಂದರಲ್ಲಿ ಅವರನ್ನು ಹೂಳಲಾಯಿತು. (ಅಬ್ರಹಾಮನು ಹಾಮೋರನ ಗಂಡುಮಕ್ಕಳಿಂದ ಕೊಂಡುಕೊಂಡದ್ದು ಈ ಸಮಾಧಿಯನ್ನೇ. ಅವನು ಅವರಿಗೆ ಬೆಳ್ಳಿಯನ್ನು ಕ್ರಯವಾಗಿ ಕೊಟ್ಟಿದ್ದನು.)

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International