Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 30

ದೇವಾಲಯದ ಪ್ರತಿಷ್ಠೆಗಾಗಿ ರಚಿಸಲ್ಪಟ್ಟಿದೆ. ರಚನೆಗಾರ: ದಾವೀದ.

30 ಯೆಹೋವನೇ, ನನ್ನನ್ನು ಇಕ್ಕಟ್ಟುಗಳಿಂದ ಮೇಲೆತ್ತಿದವನು ನೀನೇ;
    ಶತ್ರುಗಳಿಗೆ ಸೋತುಹೋಗಿ ಅವರ ಹಾಸ್ಯಕ್ಕೆ ಗುರಿಯಾಗದಂತೆ ಮಾಡಿದವನು ನೀನೇ;
    ಆದ್ದರಿಂದ ನಿನ್ನನ್ನು ಕೊಂಡಾಡುವೆನು.
ನನ್ನ ದೇವರಾದ ಯೆಹೋವನೇ, ನಾನು ನಿನಗೆ ಪ್ರಾರ್ಥಿಸಿದಾಗ
    ನೀನು ನನ್ನನ್ನು ಗುಣಪಡಿಸಿದೆ.
ಯೆಹೋವನೇ, ನೀನು ನನ್ನನ್ನು ಸಾವಿನಿಂದ ಬದುಕಿಸಿದೆ;
    ಪಾತಾಳಕ್ಕೆ ಇಳಿದುಹೋಗದಂತೆ ನನ್ನನ್ನು ಕಾಪಾಡಿದೆ.[a]

ಯೆಹೋವನ ಭಕ್ತರೇ, ಆತನನ್ನು ಕೀರ್ತಿಸಿರಿ!
    ಆತನ ಪರಿಶುದ್ಧ ಹೆಸರನ್ನು[b] ಕೊಂಡಾಡಿರಿ.
ಆತನ ಕೋಪವು ಕ್ಷಣಮಾತ್ರವಿರುವುದು.
    ಆತನ ಪ್ರೀತಿಯಾದರೋ ಶಾಶ್ವತವಾದದ್ದು.
ನಾನು ಸಂಜೆಯಲ್ಲಿ ದುಃಖದಿಂದ ಮಲಗಿಕೊಂಡರೂ
    ಮುಂಜಾನೆ ಹರ್ಷದಿಂದ ಎಚ್ಚರಗೊಳ್ಳುವೆನು.

ನಾನು ಸುರಕ್ಷಿತವಾಗಿದ್ದಾಗ
    ನನಗೆ ಕೇಡೇ ಇಲ್ಲವೆಂದುಕೊಂಡೆನು.
ಯೆಹೋವನೇ, ನಾನು ನಿನ್ನ ಕೃಪೆಗೆ ಪಾತ್ರನಾಗಿದ್ದಾಗ
    ನನ್ನನ್ನು ಯಾವುದೂ ಸೋಲಿಸಲಾರದು ಎಂದುಕೊಂಡೆನು.
ಆದರೆ ನೀನು ನನಗೆ ವಿಮುಖನಾದಾಗ
    ಭಯದಿಂದ ನಡುಗತೊಡಗಿದೆ.
ಯೆಹೋವನೇ, ನಾನು ನಿನಗೆ ಅಭಿಮುಖನಾಗಿ ಪ್ರಾರ್ಥಿಸಿದೆ;
    ಕರುಣೆತೋರು ಎಂದು ನಿನ್ನನ್ನು ಕೇಳಿಕೊಂಡೆ.
“ದೇವರೇ, ನಾನು ಸತ್ತು ಸಮಾಧಿಯೊಳಗೆ ಹೋದರೆ,
    ಅದರಿಂದ ಒಳ್ಳೆಯದೇನಾದೀತು?
ಸತ್ತವರು ಕೇವಲ ಮಣ್ಣಿನಲ್ಲಿ ಬಿದ್ದಿರುವರು!
    ಅವರು ನಿನ್ನನ್ನು ಸ್ತುತಿಸುವುದಿಲ್ಲ!
    ಶಾಶ್ವತವಾದ ನಿನ್ನ ನಂಬಿಗಸ್ತಿಕೆಯ ಕುರಿತು ಅವರು ಹೇಳುವುದಿಲ್ಲ.
10 ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳಿ ನನಗೆ ಕರುಣೆತೋರು!
    ಯೆಹೋವನೇ, ನನಗೆ ಸಹಾಯಮಾಡು!” ಎಂದು ಕೇಳಿಕೊಂಡೆನು.

11 ಆಗ ನೀನು ನನಗೆ ಸಹಾಯಮಾಡಿ ನನ್ನ ಗೋಳಾಟವನ್ನು
    ಸಂತೋಷದ ನರ್ತನವನ್ನಾಗಿ ಮಾರ್ಪಡಿಸಿದೆ.
ನನ್ನ ಶೋಕವಸ್ತ್ರಗಳನ್ನು ತೆಗೆದುಹಾಕಿ
    ಹರ್ಷವಸ್ತ್ರಗಳನ್ನು ಹೊದಿಸಿದೆ.
12 ನಾನು ಮೌನವಾಗಿರದೆ ಸದಾಕಾಲ ನಿನ್ನನ್ನು ಸ್ತುತಿಸುವೆನು.
    ನನ್ನ ದೇವರಾದ ಯೆಹೋವನೇ, ನಿನ್ನನ್ನು ಸದಾಕಾಲ ಸ್ತುತಿಸುವೆನು.

2 ಸಮುವೇಲನು 14:25-33

25 ಜನರು ಅಬ್ಷಾಲೋಮನನ್ನು, ಅವನ ಸುಂದರ ರೂಪಕ್ಕಾಗಿ ಬಹಳ ಹೊಗಳುತ್ತಿದ್ದರು. ಇಸ್ರೇಲಿನಲ್ಲಿ ಅವನಷ್ಟು ರೂಪವಂತನು ಬೇರೆ ಯಾರೂ ಇರಲಿಲ್ಲ. ಅಬ್ಷಾಲೋಮನ ತಲೆಯಿಂದ ಪಾದಗಳವರೆಗೆ ಯಾವ ಕಳಂಕವೂ ಇರಲಿಲ್ಲ. 26 ಪ್ರತಿ ವರ್ಷಾಂತ್ಯದಲ್ಲಿಯೂ ಅಬ್ಷಾಲೋಮನು ತನ್ನ ತಲೆಕೂದಲನ್ನು ಕತ್ತರಿಸಿ ಅದನ್ನು ತೂಕ ಮಾಡಿಸುತ್ತಿದ್ದನು. ಅವನ ತಲೆಕೂದಲು ಐದು ಪೌಂಡುಗಳಷ್ಟು ಭಾರವಾಗಿರುತ್ತಿತ್ತು. 27 ಅಬ್ಷಾಲೋಮನಿಗೆ ಮೂವರು ಗಂಡುಮಕ್ಕಳು ಮತ್ತು ಒಬ್ಬ ಮಗಳು ಇದ್ದರು. ಮಗಳ ಹೆಸರು ತಾಮಾರ್; ಈಕೆಯು ಬಹು ಸುಂದರಿಯಾಗಿದ್ದಳು.

ಯೋವಾಬನು ಬಂದು ತನ್ನನ್ನು ನೋಡಬೇಕೆಂದು ಅಬ್ಷಾಲೋಮನು ಒತ್ತಾಯಿಸಿದ್ದು

28 ಅಬ್ಷಾಲೋಮನು ಎರಡು ವರ್ಷಗಳ ಕಾಲ ಜೆರುಸಲೇಮಿನಲ್ಲಿ ಇದ್ದನು. ಆದರೂ ರಾಜನಾದ ದಾವೀದನನ್ನು ಭೇಟಿಯಾಗಲು ಅವನಿಗೆ ಅವಕಾಶ ದೊರಕಲಿಲ್ಲ. 29 ಆದ್ದರಿಂದ ಅಬ್ಷಾಲೋಮನು ಯೋವಾಬನ ಬಳಿಗೆ ಸಂದೇಶಕರನ್ನು ಕಳುಹಿಸಿದನು. ಅಬ್ಷಾಲೋಮನನ್ನು ರಾಜನ ಹತ್ತಿರಕ್ಕೆ ಕಳುಹಿಸಿ ಕೊಡುವಂತೆ ಈ ಸಂದೇಶಕರು ಯೋವಾಬನನ್ನು ಕೇಳಿದರು. ಆದರೆ ಯೋವಾಬನು ಅಬ್ಷಾಲೋಮನ ಬಳಿಗೆ ಬರಲಿಲ್ಲ. ಅಬ್ಷಾಲೋಮನು ಎರಡನೆಯ ಬಾರಿ ಸಂದೇಶವನ್ನು ಕಳುಹಿಸಿದನು. ಆದರೂ ಯೋವಾಬನು ಬರಲಿಲ್ಲ.

30 ಆಗ ಅಬ್ಷಾಲೋಮನು ತನ್ನ ಸೇವಕರಿಗೆ, “ನೋಡಿರಿ, ನನ್ನ ಹೊಲದ ಪಕ್ಕದಲ್ಲಿ ಯೋವಾಬನ ಹೊಲವಿದೆ. ಅವನು ಆ ಹೊಲದಲ್ಲಿ ಜವೆಗೋಧಿಯನ್ನು ಬೆಳೆದಿದ್ದಾನೆ. ಹೋಗಿ ಆ ಜವೆಗೋಧಿಯನ್ನು ಸುಟ್ಟುಬಿಡಿರಿ” ಎಂದು ಹೇಳಿದನು.

ಅಬ್ಷಾಲೋಮನ ಸೇವಕರು ಹೋಗಿ ಯೋವಾಬನ ಹೊಲದಲ್ಲಿ ಬೆಂಕಿಯನ್ನು ಹಚ್ಚಿದರು. 31 ಆಗ ಯೋವಾಬನು ಅಬ್ಷಾಲೋಮನ ಮನೆಗೆ ಬಂದನು. ಯೋವಾಬನು ಅಬ್ಷಾಲೋಮನಿಗೆ, “ನಿನ್ನ ಸೇವಕರು ನನ್ನ ಹೊಲವನ್ನು ಏಕೆ ಸುಟ್ಟರು?” ಎಂದು ಕೇಳಿದನು.

32 ಅಬ್ಷಾಲೋಮನು ಯೋವಾಬನಿಗೆ, “ನಾನು ನಿನಗೆ ಸಂದೇಶವನ್ನು ಕಳುಹಿಸಿ ಇಲ್ಲಿಗೆ ಬರಲು ಹೇಳಿ ಕಳುಹಿಸಿದ್ದೆನು. ರಾಜನ ಬಳಿಗೆ ನಿನ್ನನ್ನು ಕಳುಹಿಸಲು ನಾನು ಅಪೇಕ್ಷಿಸಿದೆನು. ಗೆಷೂರಿನಿಂದ ನನ್ನನ್ನು ಮನೆಗೆ ಕರೆಸಲು ಅವನು ಇಚ್ಛಿಸಿದ್ದು ಏಕೆ ಎಂಬುದನ್ನು ನೀನು ಕೇಳಬೇಕೆಂದು ನಾನು ಅಪೇಕ್ಷಿಸಿದೆನು. ನಾನು ಅವನನ್ನು ನೋಡಲಾಗದಿದ್ದರೆ ಗೆಷೂರಿನಲ್ಲಿ ವಾಸಿಸುವುದೇ ನನಗೆ ಚೆನ್ನಾಗಿರುತ್ತಿತ್ತು. ಈಗ ರಾಜನನ್ನು ನೋಡಲು ನನಗೆ ಅವಕಾಶವನ್ನು ಕೊಡು. ನಾನು ಪಾಪವನ್ನು ಮಾಡಿದ್ದರೆ ಅವನು ನನ್ನನ್ನು ಕೊಂದುಬಿಡಲಿ!” ಎಂದನು.

ರಾಜನಾದ ದಾವೀದನನ್ನು ಅಬ್ಷಾಲೋಮನು ಭೇಟಿಮಾಡಿದ್ದು

33 ಯೋವಾಬನು ರಾಜನ ಬಳಿಗೆ ಅಬ್ಷಾಲೋಮನು ಹೇಳಿದ್ದನ್ನೆಲ್ಲ ತಿಳಿಸಿದನು. ರಾಜನು ಅಬ್ಷಾಲೋಮನನ್ನು ಕರೆಸಿದನು. ಅಬ್ಷಾಲೋಮನು ರಾಜನ ಬಳಿಗೆ ಬಂದನು. ರಾಜನ ಎದುರಿನಲ್ಲಿ ಅಬ್ಷಾಲೋಮನು ಸಾಷ್ಟಾಂಗನಮಸ್ಕಾರ ಮಾಡಿದನು. ರಾಜನು ಅಬ್ಷಾಲೋಮನಿಗೆ ಮುದ್ದಿಟ್ಟನು.

ಮತ್ತಾಯ 9:2-8

ಕೆಲವರು ಒಬ್ಬ ಪಾರ್ಶ್ವವಾಯು ರೋಗಿಯನ್ನು ಯೇಸುವಿನ ಬಳಿಗೆ ತಂದರು. ಅವನು ತನ್ನ ಹಾಸಿಗೆಯ ಮೇಲೆ ಮಲಗಿದ್ದನು. ಯೇಸು ಈ ಜನರಲ್ಲಿದ್ದ ದೊಡ್ಡ ನಂಬಿಕೆಯನ್ನು ಕಂಡು ಪಾರ್ಶ್ವವಾಯು ರೋಗಿಗೆ, “ಯುವಕನೇ, ಸಂತೋಷಪಡು. ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು.

ಅಲ್ಲಿದ್ದ ಧರ್ಮೋಪದೇಶಕರು ಇದನ್ನು ಕೇಳಿ, “ಇದು ದೇವದೂಷಣೆ” ಎಂದು ತಮ್ಮೊಳಗೆ ಅಂದುಕೊಂಡರು.

ಅವರು ಹೀಗೆ ಆಲೋಚಿಸುತ್ತಿರುವುದು ಯೇಸುವಿಗೆ ತಿಳಿದಿತ್ತು. ಆತನು ಅವರಿಗೆ, “ನೀವು ಏಕೆ ದುರಾಲೋಚನೆ ಮಾಡುತ್ತಿದ್ದೀರಿ? ಯಾವುದು ಸುಲಭ? ಈ ಪಾರ್ಶ್ವವಾಯು ರೋಗಿಗೆ, ‘ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ’ ಎಂದು ಹೇಳುವುದೇ ಅಥವಾ ‘ಮೇಲಕ್ಕೆದ್ದು ನಡೆ’ ಎಂದು ಹೇಳುವುದೇ? ಆದರೆ ಮನುಷ್ಯಕುಮಾರನಿಗೆ ಪಾಪಗಳನ್ನು ಕ್ಷಮಿಸಲು ಭೂಲೋಕದಲ್ಲಿ ಅಧಿಕಾರವಿದೆ ಎಂಬುದನ್ನು ನಾನು ನಿಮಗೆ ನಿರೂಪಿಸುತ್ತೇನೆ” ಎಂದನು. ನಂತರ ಯೇಸು ಪಾರ್ಶ್ವವಾಯು ರೋಗಿಗೆ, “ಎದ್ದು, ನಿನ್ನ ಹಾಸಿಗೆಯನ್ನು ತೆಗೆದುಕೊಂಡು ಮನೆಗೆ ಹೋಗು” ಎಂದನು.

ಆಗ ಅವನು ಎದ್ದು ಮನೆಗೆ ಹೋದನು. ಜನರು ಇದನ್ನು ನೋಡಿ ಆಶ್ಚರ್ಯಚಕಿತರಾದರು. ಮನುಷ್ಯರಿಗೆ ಇಂಥ ಅಧಿಕಾರವನ್ನು ಕೊಟ್ಟಿದ್ದಕ್ಕಾಗಿ ಜನರು ದೇವರನ್ನು ಕೊಂಡಾಡಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International