Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 6

ರಚನೆಗಾರ: ದಾವೀದ.

ಯೆಹೋವನೇ, ಕೋಪದಿಂದ ನನ್ನನ್ನು ಶಿಕ್ಷಿಸಬೇಡ;
    ರೋಷದಿಂದ ನನ್ನನ್ನು ದಂಡಿಸಬೇಡ.
ಯೆಹೋವನೇ, ನನ್ನನ್ನು ಕನಿಕರಿಸು!
    ನಾನು ರೋಗಿಯಾಗಿದ್ದೇನೆ, ಬಲಹೀನನಾಗಿದ್ದೇನೆ,
ನನ್ನನ್ನು ಗುಣಪಡಿಸು! ನನ್ನ ಎಲುಬುಗಳು ನಡುಗುತ್ತಿವೆ.
ನನ್ನ ಇಡೀ ದೇಹ ನಡುಗುತ್ತಿದೆ.
    ಯೆಹೋವನೇ, ನನ್ನನ್ನು ಗುಣಪಡಿಸಲು ಇನ್ನೆಷ್ಟುಕಾಲ ಬೇಕು?
ಯೆಹೋವನೇ, ನನ್ನನ್ನು ಮತ್ತೆ ಬಲಪಡಿಸು!
    ನಿನ್ನ ಮಹಾಕೃಪೆಯಿಂದ ನನ್ನನ್ನು ರಕ್ಷಿಸು.
ಸತ್ತವರು ನಿನ್ನನ್ನು ಜ್ಞಾಪಿಸಿಕೊಳ್ಳುವರೇ?
    ಸಮಾಧಿಗಳಲ್ಲಿರುವವರು ನಿನ್ನನ್ನು ಸ್ತುತಿಸುವರೇ?
    ಆದ್ದರಿಂದ ನನ್ನನ್ನು ಗುಣಪಡಿಸು.

ಯೆಹೋವನೇ, ರಾತ್ರಿಯೆಲ್ಲಾ ನಿನಗೆ ಪ್ರಾರ್ಥಿಸಿದೆನು.
    ನನ್ನ ಹಾಸಿಗೆಯು ನನ್ನ ಕಣ್ಣೀರಿನಿಂದ ಒದ್ದೆಯಾಗಿದೆ.
ನನ್ನ ಹಾಸಿಗೆಯಿಂದ ಕಣ್ಣೀರು ತೊಟ್ಟಿಕ್ಕುತ್ತಿದೆ.
    ನಾನು ಅತ್ತು ಗೋಳಾಡಿ ಬಲಹೀನನಾಗಿದ್ದೇನೆ.
ನನ್ನ ವೈರಿಗಳು ನನಗೆ ಅನೇಕ ತೊಂದರೆಗಳನ್ನು ಮಾಡಿರುವುದರಿಂದ ನನಗೆ ದುಃಖವೂ ಗೋಳಾಟವೂ ಉಂಟಾಗಿವೆ.
    ನನ್ನ ಕಣ್ಣುಗಳು ಬಲಹೀನಗೊಂಡಿವೆ; ಅತ್ತತ್ತು ಆಯಾಸಗೊಂಡಿವೆ.

ದುಷ್ಟರೇ, ತೊಲಗಿಹೋಗಿರಿ.
    ಯಾಕೆಂದರೆ ಯೆಹೋವನು ನನ್ನ ಗೋಳಾಟಕ್ಕೆ ಕಿವಿಗೊಟ್ಟಿದ್ದಾನೆ.
ಯೆಹೋವನು ನನ್ನ ವಿಜ್ಞಾಪನೆಯನ್ನು ಕೇಳಿದ್ದಾನೆ.
    ಆತನು ನನ್ನ ಪ್ರಾರ್ಥನೆಯನ್ನು ಸ್ವೀಕರಿಸಿ ಸದುತ್ತರವನ್ನು ದಯಪಾಲಿಸುವನು.

10 ನನ್ನ ವೈರಿಗಳೆಲ್ಲ ಗಲಿಬಿಲಿಗೊಂಡು ನಿರಾಶರಾಗುವರು.
    ಇದ್ದಕ್ಕಿದ್ದಂತೆ ಅವಮಾನಿತರಾಗಿ ಹಿಂತಿರುಗುವರು.

2 ರಾಜರುಗಳು 7:3-10

ಅರಾಮ್ಯರ ಪಾಳೆಯವು ಬರಿದಾಗಿರುವುದನ್ನು ಕುಷ್ಠರೋಗಿಗಳು ಕಂಡುಹಿಡಿದರು

ನಗರದ ಬಾಗಿಲಿನ ಹತ್ತಿರ ನಾಲ್ಕು ಮಂದಿ ಕುಷ್ಠರೋಗಿಗಳಿದ್ದರು. ಅವರು, “ನಾವು ಸಾಯುವುದನ್ನೇ ಕಾಯುತ್ತಾ ಕುಳಿತಿರುವುದೇಕೆ? ಸಮಾರ್ಯದಲ್ಲಿ ಆಹಾರವು ಇಲ್ಲವೇ ಇಲ್ಲ. ನಾವು ನಗರದ ಒಳಗೆ ಹೋದರೆ, ನಾವು ಅಲ್ಲೇ ಸಾಯುತ್ತೇವೆ. ನಾವು ಇಲ್ಲೇ ಕುಳಿತಿದ್ದರೂ, ಸಾಯುವುದು ನಿಶ್ಚಿತ. ಆದ್ದರಿಂದ ನಾವು ಅರಾಮ್ಯರ ಪಾಳೆಯಕ್ಕೆ ಹೋಗೋಣ. ಅವರು ನಮ್ಮನ್ನು ಬದುಕಿಸಿದರೆ ನಾವು ಬದುಕೋಣ. ಅವರು ನಮ್ಮನ್ನು ಕೊಂದರೆ ಸಾಯೋಣ” ಎಂದು ಮಾತನಾಡಿಕೊಂಡರು.

ಅಂದು ಸಂಜೆ ಆ ನಾಲ್ವರು ಕುಷ್ಠರೋಗಿಗಳು ಅರಾಮ್ಯರ ಪಾಳೆಯಕ್ಕೆ ಹೋದರು. ಅವರು ಪಾಳೆಯದ ಹೊರ ಅಂಚಿಗೆ ಬಂದರು. ಅಲ್ಲಿ ಜನರೇ ಇರಲಿಲ್ಲ! ಅರಾಮ್ಯರ ಸೇನೆಯು ರಥಗಳ, ಕುದುರೆಗಳ ಮತ್ತು ಮಹಾಸೇನೆಯ ರಣಘೋಷವನ್ನು ಕೇಳುವಂತೆ ಯೆಹೋವನು ಮಾಡಿದ್ದನು. ಅರಾಮ್ಯ ಸೈನಿಕರು, “ಇಸ್ರೇಲಿನ ರಾಜನು, ಹಿತ್ತೀಯರಿಗೆ ಮತ್ತು ಈಜಿಪ್ಟಿನವರಿಗೆ ಹಣಕೊಟ್ಟು ನಮ್ಮ ವಿರುದ್ಧ ಹೋರಾಟಕ್ಕೆ ಬರುವಂತೆ ಮಾಡಿದ್ದಾನೆ” ಎಂದು ಮಾತನಾಡಿಕೊಂಡು,

ಸಂಜೆಗೆ ಮುಂಚೆಯೇ ಓಡಿಹೋಗಿದ್ದರು. ಅವರು ಎಲ್ಲವನ್ನೂ ಅಲ್ಲಿಯೇ ಬಿಟ್ಟುಹೋಗಿದ್ದರು. ಅವರು ತಮ್ಮ ಗುಡಾರಗಳನ್ನು, ಕುದುರೆಗಳನ್ನು, ಹೇಸರಕತ್ತೆಗಳನ್ನು ಅಲ್ಲಿಯೇ ಬಿಟ್ಟು ತಮ್ಮ ಜೀವರಕ್ಷಣೆಗಾಗಿ ಓಡಿಹೋಗಿದ್ದರು.

ಅರಾಮ್ಯರ ಪಾಳೆಯದಲ್ಲಿ ಕುಷ್ಠರೋಗಿಗಳು

ಈ ಕುಷ್ಠರೋಗಿಗಳು ಪಾಳೆಯವು ಆರಂಭವಾಗಿದ್ದಲ್ಲಿಗೆ ಬಂದು, ಒಂದು ಗುಡಾರದೊಳಕ್ಕೆ ಹೋದರು. ಅವರು ಅಲ್ಲಿ ತಿಂದರು ಮತ್ತು ಕುಡಿದರು. ನಂತರ ಈ ನಾಲ್ವರು ಬೆಳ್ಳಿಬಂಗಾರಗಳನ್ನು ಮತ್ತು ಬಟ್ಟೆಗಳನ್ನು ಪಾಳೆಯದಿಂದ ಹೊರಗೆ ತೆಗೆದುಕೊಂಡು ಹೋದರು. ಅವರು ಬೆಳ್ಳಿಬಂಗಾರಗಳನ್ನು ಮತ್ತು ಬಟ್ಟೆಗಳನ್ನು ಅಡಗಿಸಿಟ್ಟರು. ನಂತರ ಅವರು ಹಿಂದಿರುಗಿ ಬಂದು, ಮತ್ತೊಂದು ಗುಡಾರವನ್ನು ಪ್ರವೇಶಿಸಿದರು. ಆ ಗುಡಾರದಿಂದಲೂ ಅವರು ವಸ್ತುಗಳನ್ನು ಕೊಂಡೊಯ್ದರು. ಅವರು ಹೊರಗೆ ಹೋಗಿ ಅವುಗಳನ್ನು ಅಡಗಿಸಿಟ್ಟರು. ಆಗ ಆ ಕುಷ್ಠರೋಗಿಗಳು, “ನಾವು ತಪ್ಪು ಮಾಡುತ್ತಿದ್ದೇವೆ! ಈ ದಿನ ನಮಗೆ ಶುಭವಾರ್ತೆ ಸಿಕ್ಕಿದೆ. ಆದರೆ ನಾವು ನಿಶಬ್ಧದಿಂದ ಇದ್ದೇವೆ. ಸೂರ್ಯನು ಮೇಲಕ್ಕೇರಿ ಬರುವವರೆಗೆ ನಾವು ಸುಮ್ಮನಿದ್ದರೆ ನಮ್ಮನ್ನು ದಂಡಿಸಲಾಗುವುದು. ಈಗ ನಾವು ರಾಜನ ಮನೆಗೆ ಹೋಗಿ ಅಲ್ಲಿ ವಾಸಿಸುವ ಜನರಿಗೆ ಇದನ್ನು ತಿಳಿಸೋಣ” ಎಂದು ಮಾತನಾಡಿಕೊಂಡರು.

ಕುಷ್ಠರೋಗಿಗಳು ತಿಳಿಸಿದ ಶುಭವಾರ್ತೆ

10 ಈ ಕುಷ್ಠರೋಗಿಗಳು ನಗರದ ಬಾಗಿಲಿಗೆ ಬಂದು ದ್ವಾರಪಾಲಕರನ್ನು ಕರೆದು, “ನಾವು ಅರಾಮ್ಯರ ಪಾಳೆಯಕ್ಕೆ ಹೋಗಿದ್ದೆವು. ಆದರೆ ನಾವು ಜನರ ಧ್ವನಿಯನ್ನು ಕೇಳಲೇ ಇಲ್ಲ. ಅಲ್ಲಿ ಜನರ ಸುಳಿವಿಲ್ಲ. ಕುದುರೆಗಳು ಮತ್ತು ಹೇಸರಕತ್ತೆಗಳು ಕಟ್ಟಿಹಾಕಿದಂತೆಯೇ ಇವೆ. ಗುಡಾರಗಳಿನ್ನೂ ಯಥಾಸ್ಥಿತಿಯಲ್ಲಿವೆ. ಆದರೆ ಸೈನಿಕರೆಲ್ಲರೂ ಹೊರಟುಹೋಗಿದ್ದಾರೆ” ಎಂದು ಹೇಳಿದರು.

1 ಕೊರಿಂಥದವರಿಗೆ 10:14-11:1

14 ಆದ್ದರಿಂದ, ನನ್ನ ಪ್ರಿಯ ಸ್ನೇಹಿತರೇ, ವಿಗ್ರಹಗಳ ಪೂಜೆಯ ಬಗ್ಗೆ ಯೋಚಿಸಲೂಬೇಡಿ. 15 ನೀವು ಬುದ್ಧಿವಂತರೆಂದು ನಾನು ನಿಮ್ಮೊಂದಿಗೆ ಮಾತಾಡುತ್ತಿದ್ದೇನೆ. ನಾನು ಹೇಳುವುದನ್ನು ಸ್ವತಃ ನೀವೇ ವಿಚಾರಣೆ ಮಾಡಿ. 16 ನಾವು ದ್ರಾಕ್ಷಾರಸದ ಪಾತ್ರೆಗಾಗಿ ದೇವರಿಗೆ ಸ್ತೋತ್ರ ಸಲ್ಲಿಸಿ ಕುಡಿಯುವಾಗ ಕ್ರಿಸ್ತನ ರಕ್ತದಲ್ಲಿ ಪಾಲುಗಾರರಾಗಲಿಲ್ಲವೇ? ನಾವು ರೊಟ್ಟಿಯನ್ನು ಮುರಿದು ತಿನ್ನುವಾಗ ಕ್ರಿಸ್ತನ ದೇಹದಲ್ಲಿ ಪಾಲುಗಾರರಾಗಲಿಲ್ಲವೇ? 17 ರೊಟ್ಟಿಯು ಒಂದೇ. ಆದ್ದರಿಂದ ನಮ್ಮಲ್ಲಿ ಅನೇಕರಿದ್ದರೂ ನಾವು ಒಂದೇ ದೇಹವಾಗಿದ್ದೇವೆ. ಯಾಕೆಂದರೆ ನಾವೆಲ್ಲಾ ಆ ಒಂದೇ ರೊಟ್ಟಿಯಲ್ಲಿ ಪಾಲು ತೆಗೆದುಕೊಳ್ಳುತ್ತೇವೆ.

18 ಇಸ್ರೇಲ್ ಜನರ ಬಗ್ಗೆ ಯೋಚಿಸಿ. ಯಜ್ಞವಾಗಿ ಅರ್ಪಿತವಾದುದನ್ನು ತಿನ್ನುವ ಆ ಜನರು ಯಜ್ಞವೇದಿಕೆಯಲ್ಲಿ ಪಾಲುಗಾರರಾಗಿಲ್ಲವೇ? 19 ವಿಗ್ರಹಕ್ಕೆ ಅರ್ಪಿತವಾದ ಆಹಾರಪದಾರ್ಥವು ಮುಖ್ಯವಾದದ್ದೆಂದು ನಾನು ಹೇಳುತ್ತಿಲ್ಲ. ಅಲ್ಲದೆ ವಿಗ್ರಹವು ಮುಖ್ಯವಾದದ್ದು ಎಂಬ ಅಭಿಪ್ರಾಯವೂ ನನಗಿಲ್ಲ. 20 ನಾನು ಹೇಳುತ್ತಿರುವುದೇನೆಂದರೆ, ಜನರು ವಿಗ್ರಹಗಳಿಗೆ ಅರ್ಪಿಸಿದ ಪದಾರ್ಥಗಳು ದೆವ್ವಗಳಿಗೆ ಅರ್ಪಿತವಾದುವುಗಳೇ ಹೊರತು ದೇವರಿಗಲ್ಲ. ನೀವು ದೆವ್ವಗಳೊಂದಿಗೆ ಯಾವ ವಿಷಯದಲ್ಲಿಯೂ ಪಾಲು ಹೊಂದಬಾರದೆಂಬುದು ನನ್ನ ಆಸೆ. 21 ನೀವು ಪ್ರಭುವಿನ ಪಾತ್ರೆ ಮತ್ತು ದೆವ್ವಗಳ ಪಾತ್ರೆ ಇವುಗಳೊಳಗೆ ಒಂದರಲ್ಲಿಯೇ ಹೊರತು ಎರಡರಲ್ಲಿಯೂ ಕುಡಿಯಲಾಗದು. ಪ್ರಭುವಿನ ಪಂಕ್ತಿ ಮತ್ತು ದೆವ್ವಗಳ ಪಂಕ್ತಿ ಇವುಗಳೊಳಗೆ ಒಂದರಲ್ಲಿಯೇ ಹೊರತು ಎರಡರಲ್ಲಿಯೂ ಊಟ ಮಾಡಲಾರಿರಿ. 22 ಪ್ರಭುವಿಗೆ ಅಸೂಯೆಯನ್ನು ಉಂಟುಮಾಡಬೇಕೆಂದಿದ್ದೀರೋ? ಆತನಿಗಿಂತಲೂ ನಾವು ಬಲಿಷ್ಠರಾಗಿದ್ದೇವೋ? ಇಲ್ಲ!

ನಿಮ್ಮ ಸ್ವತಂತ್ರ ದೇವರ ಮಹಿಮೆಗೋಸ್ಕರ

23 “ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ಸ್ವಾತಂತ್ರ್ಯವಿದೆ.” ಆದರೆ ನಾವು ಮಾಡುವ ಕಾರ್ಯಗಳೆಲ್ಲಾ ಒಳ್ಳೆಯವೆಂದು ಹೇಳುವುದು ಸರಿಯಲ್ಲ. “ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ಸ್ವಾತಂತ್ರ್ಯವಿದೆ.” ಆದರೆ ಕೆಲವು ಕಾರ್ಯಗಳು ಬೇರೆಯವರ ಅಭಿವೃದ್ಧಿಗೆ ಸಹಾಯಕವಾಗಿರುವುದಿಲ್ಲ. 24 ಪ್ರತಿಯೊಬ್ಬನೂ ತನಗೆ ಮಾತ್ರ ಹಿತಕರವಾದ ಕಾರ್ಯಗಳನ್ನು ಮಾಡದೆ ಬೇರೆಯವರಿಗೂ ಹಿತಕರವಾದ ಕಾರ್ಯಗಳನ್ನು ಮಾಡಲು ಪ್ರಯತ್ನಿಸಬೇಕು.

25 ಮಾಂಸದ ಮಾರುಕಟ್ಟೆಯಲ್ಲಿ ಮಾರುವ ಯಾವ ಮಾಂಸವನ್ನಾದರೂ ತಿನ್ನಿರಿ. ನೀವು ತಿನ್ನಬಾರದೆಂದು ಯೋಚಿಸುವ ಮಾಂಸದಂತೆ ಅದು ತೋರಿದರೂ ಆ ಮಾಂಸದ ಬಗ್ಗೆ ಯಾವ ಪ್ರಶ್ನೆಗಳನ್ನೂ ಕೇಳಬೇಡಿರಿ. 26 ನೀವು ಅದನ್ನು ತಿನ್ನಿರಿ. ಏಕೆಂದರೆ, “ಭೂಮಿಯೂ ಅದರಲ್ಲಿರುವ ಸಮಸ್ತವೂ ಪ್ರಭುವಿನದಾಗಿದೆ.”(A)

27 ಕ್ರಿಸ್ತ ವಿಶ್ವಾಸಿಯಲ್ಲದ ಒಬ್ಬನು ನಿಮ್ಮನ್ನು ಊಟಕ್ಕೆ ಆಹ್ವಾನಿಸಿದರೆ, ಹೋಗುವುದಕ್ಕೆ ನಿಮಗೆ ಇಷ್ಟವಿದ್ದರೆ, ಅವನು ನಿಮಗೆ ಏನು ಬಡಿಸಿದರೂ ತಿನ್ನಿರಿ. ನೀವು ಆ ಪದಾರ್ಥವನ್ನು ತಿನ್ನಬೇಕೇ ಅಥವಾ ತಿನ್ನಬಾರದೇ ಎಂದು ನಿರ್ಧರಿಸಲು ಪ್ರಶ್ನೆಗಳನ್ನು ಕೇಳಬೇಡಿ. 28 ಆದರೆ ಒಬ್ಬನು ನಿಮಗೆ, “ಆ ಪದಾರ್ಥವು ವಿಗ್ರಹಗಳಿಗೆ ಅರ್ಪಿತವಾದದ್ದು” ಎಂದು ಹೇಳಿದರೆ, ನೀವು ಅದನ್ನು ತಿನ್ನಬೇಡಿ. ನಿಮಗೆ ಹೇಳಿದ ವ್ಯಕ್ತಿಯ ನಂಬಿಕೆಯನ್ನು ಹಾಳುಮಾಡಲು ನಿಮಗೆ ಇಷ್ಟವಿಲ್ಲದ್ದರಿಂದ ಮತ್ತು ಆ ಮಾಂಸವನ್ನು ತಿನ್ನುವುದು ತಪ್ಪೆಂದು ಜನರು ಭಾವಿಸಿಕೊಂಡಿರುವುದರಿಂದ ನೀವು ಅದನ್ನು ತಿನ್ನಬಾರದು. 29 ಆದರೆ ನೀವೇ ಆ ರೀತಿ ಭಾವಿಸಿಕೊಂಡಿದ್ದೀರಿ ಎಂದು ನಾನು ಹೇಳುತ್ತಿಲ್ಲ. ಆದರೆ ಮತ್ತೊಬ್ಬ ವ್ಯಕ್ತಿಯು ಅದನ್ನು ತಿನ್ನುವುದು ತಪ್ಪೆಂದು ಭಾವಿಸಿಕೊಂಡಿರುವುದರಿಂದ ಅವನ ಮನಸ್ಸಾಕ್ಷಿಯ ದೆಸೆಯಿಂದ ನಮ್ಮ ಸ್ವಾತಂತ್ರ್ಯವು ವಿಚಾರಣೆಗೆ ಗುರಿಯಾಗಬಾರದು. 30 ನಾನು ದೇವರಿಗೆ ಕೃತಜ್ಞತೆ ಸಲ್ಲಿಸಿ ಊಟಮಾಡಿದ ಪದಾರ್ಥದಿಂದಾಗಿ ಖಂಡನೆಗೆ ಗುರಿಯಾಗಲು ನನಗೆ ಇಷ್ಟವಿಲ್ಲ.

31 ಆದ್ದರಿಂದ ನೀವು ತಿಂದರೂ ಕುಡಿದರೂ ಏನೇ ಮಾಡಿದರೂ ದೇವರ ಮಹಿಮೆಗಾಗಿ ಅದನ್ನು ಮಾಡಿರಿ. 32 ಇತರ ಜನರು ಅಂದರೆ ಯೆಹೂದ್ಯರಾಗಲಿ ಗ್ರೀಕರಾಗಲಿ ಅಥವಾ ದೇವರ ಸಭೆಯವರಾಗಲಿ ತಪ್ಪುಮಾಡಲು ಕಾರಣವಾಗುವಂಥದ್ದನ್ನು ನೀವೆಂದಿಗೂ ಮಾಡಬೇಡಿರಿ. 33 ನಾನು ಸಹ ಹಾಗೆಯೇ ಮಾಡುತ್ತೇನೆ. ಎಲ್ಲರನ್ನು ಎಲ್ಲಾ ವಿಷಯಗಳಲ್ಲಿ ಮೆಚ್ಚಿಸಲು ನಾನು ಪ್ರಯತ್ನಿಸುತ್ತೇನೆ. ನನಗೆ ಹಿತಕರವಾದದ್ದನ್ನು ಮಾಡಲು ಇಷ್ಟಪಡದೆ ಬಹು ಜನರಿಗೆ ಹಿತಕರವಾದದ್ದನ್ನೇ ಮಾಡಲು ಪ್ರಯತ್ನಿಸುತ್ತೇನೆ. ಅವರು ರಕ್ಷಣೆ ಹೊಂದಬೇಕೆಂಬುದೇ ನನ್ನ ಅಪೇಕ್ಷೆ.

11 ನಾನು ಕ್ರಿಸ್ತನ ಮಾದರಿಯನ್ನು ಅನುಸರಿಸುವಂತೆ ನೀವೂ ನನ್ನ ಮಾದರಿಯನ್ನು ಅನುಸರಿಸಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International