Old/New Testament
ತುತ್ತೂರಿಗಳ ಹಬ್ಬ
29 “ಏಳನೆಯ ತಿಂಗಳಿನ ಮೊದಲನೆ ದಿನದಲ್ಲಿ ವಿಶೇಷ ಸಭೆ ಸೇರಬೇಕು. ಆ ದಿನದಲ್ಲಿ ನೀವು ಯಾವ ಪ್ರಯಾಸದ ಕೆಲಸವನ್ನೂ ಮಾಡಬಾರದು. ಅದು ತುತ್ತೂರಿಗಳ ಧ್ವನಿಯಿಂದ ಪ್ರಕಟವಾಗುವ ದಿನವಾಗಿದೆ. 2 ಅದರಲ್ಲಿ ನೀವು ಯೆಹೋವನಿಗೆ ಸುಗಂಧಕರವಾದ ಸರ್ವಾಂಗಹೋಮಕ್ಕಾಗಿ ಒಂದು ಹೋರಿಯನ್ನೂ ಒಂದು ಟಗರನ್ನೂ ಒಂದು ವರ್ಷದ ಏಳು ಕುರಿಮರಿಗಳನ್ನೂ ಸಮರ್ಪಿಸಬೇಕು. ಇವುಗಳೆಲ್ಲ ಪೂರ್ಣಾಂಗವಾದವುಗಳಾಗಿರಬೇಕು. 3 ಇವುಗಳೊಡನೆ ಧಾನ್ಯಸಮರ್ಪಣೆಗಾಗಿ ಹೋರಿಗೆ ಒಂಭತ್ತು ಸೇರು, ಟಗರಿಗೆ ಆರು ಸೇರು ಮತ್ತು 4 ಪ್ರತಿಯೊಂದು ಕುರಿಮರಿಗೆ ಮೂರು ಸೇರು, ಈ ಮೇರೆಗೆ ಎಣ್ಣೆ ಬೆರೆಸಿದ ಗೋಧಿಹಿಟ್ಟನ್ನು ಸಮರ್ಪಿಸಬೇಕು. 5 ಪಾಪಪರಿಹಾರಕ ಯಜ್ಞಕ್ಕಾಗಿ ಒಂದು ಹೋತವನ್ನು ಅರ್ಪಿಸಬೇಕು. 6 ಅಮಾವಾಸ್ಯೆಯಲ್ಲಿ ಅರ್ಪಿಸುವ ಸರ್ವಾಂಗಹೋಮ ಮತ್ತು ಅದರೊಡನೆ ಅರ್ಪಿಸುವ ಧಾನ್ಯಾರ್ಪಣೆ ಮತ್ತು ಕ್ರಮವಾಗಿ ಪ್ರತಿನಿತ್ಯ ಅರ್ಪಿಸುವ ಸರ್ವಾಂಗಹೋಮ ಮತ್ತು ಅದರೊಡನೆ ಅರ್ಪಿಸುವ ಧಾನ್ಯಾರ್ಪಣೆ ಮತ್ತು ಪಾನದ್ರವ್ಯಾರ್ಪಣೆ ಇವುಗಳಲ್ಲದೆ ಈ ಅರ್ಪಣೆಗಳನ್ನು ಅರ್ಪಿಸಬೇಕು. ಇವುಗಳನ್ನು ನಿಯಮಗಳ ಪ್ರಕಾರವಾಗಿ ಮಾಡಬೇಕು. ಅವು ಯೆಹೋವನಿಗೆ ಸುಗಂಧ ವಾಸನೆಯಾಗಿಯೂ ತ್ಯಾಗಮಯವಾದ ಕಾಣಿಕೆಯಾಗಿಯೂ ಇವೆ.
ದೋಷಪರಿಹಾರಕ ದಿನ
7 “ಏಳನೆಯ ತಿಂಗಳಿನ ಹತ್ತನೆಯ ದಿನದಲ್ಲಿ ವಿಶೇಷ ಸಭೆ ಸೇರಬೇಕು. ಆ ದಿನದಲ್ಲಿ ನೀವು ಉಪವಾಸ ಮಾಡಬೇಕು; ಯಾವ ಕೆಲಸವನ್ನೂ ಮಾಡಬಾರದು. 8 ನೀವು ಯೆಹೋವನಿಗೆ ಸುಗಂಧಕರವಾಗಿರುವ ಸರ್ವಾಂಗಹೋಮವನ್ನಾಗಿ ಒಂದು ಹೋರಿಯನ್ನೂ ಒಂದು ಟಗರನ್ನೂ ಒಂದು ವರ್ಷದ ಏಳು ಗಂಡು ಕುರಿಮರಿಗಳನ್ನೂ ಅರ್ಪಿಸಬೇಕು. ಇವು ಪೂರ್ಣಾಂಗವಾದವುಗಳಾಗಿರಬೇಕು. 9 ಇವುಗಳೊಡನೆ, ಧಾನ್ಯನೈವೇದ್ಯಕ್ಕಾಗಿ ಎಣ್ಣೆ ಬೆರೆಸಿದ ಗೋಧಿಹಿಟ್ಟನ್ನು ಒಂದು ಹೋರಿಗೆ ಒಂಭತ್ತು ಸೇರು, ಟಗರಿಗೆ ಆರು ಸೇರು 10 ಮತ್ತು ಒಂದು ಕುರಿಮರಿಗೆ ಮೂರು ಸೇರು ಸಮರ್ಪಿಸಬೇಕು. 11 ಪಾಪಪರಿಹಾರಕ ಯಜ್ಞಕ್ಕಾಗಿ ಒಂದು ಹೋತವನ್ನು ಸಮರ್ಪಿಸಬೇಕು. ದೋಷಪರಿಹಾರಕ ದಿನಕ್ಕೋಸ್ಕರ ಅರ್ಪಿಸುವ ಪಾಪಪರಿಹಾರಕ ಯಜ್ಞ, ಕ್ರಮವಾಗಿ ಪ್ರತಿನಿತ್ಯ ಅರ್ಪಿಸುವ ಸರ್ವಾಂಗಹೋಮ ಮತ್ತು ಅದರ ಧಾನ್ಯಾರ್ಪಣೆ ಮತ್ತು ಇವುಗಳೊಡನೆ ಅರ್ಪಿಸುವ ದ್ರವ್ಯಾರ್ಪಣೆ ಇವುಗಳಲ್ಲದೆ ಮೇಲೆ ಹೇಳಿದವುಗಳನ್ನೂ ಅರ್ಪಿಸಬೇಕು. ಇವು ಯೆಹೋವನಿಗೆ ಸುಗಂಧಕರವಾಗಿವೆ.
ಪರ್ಣಶಾಲೆಗಳ ಹಬ್ಬ
12 “ಏಳನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ವಿಶೇಷ ಸಭೆ ಸೇರಬೇಕು. ಇದು ಪರ್ಣಶಾಲೆಗಳ ಹಬ್ಬವಾಗಿದೆ. ಆ ದಿವಸ ನೀವು ಯಾವ ಪ್ರಯಾಸದ ಕೆಲಸವನ್ನೂ ಮಾಡಬಾರದು. ಯೆಹೋವನಿಗೆ ಗೌರವಾರ್ಥವಾಗಿ “ಪರ್ಣಶಾಲೆಗಳ ಹಬ್ಬ” ವನ್ನು ನೀವು ಏಳು ದಿನಗಳವರೆಗೆ ಆಚರಿಸಬೇಕು. 13 ನೀವು ಯೆಹೋವನಿಗೆ ಸರ್ವಾಂಗಹೋಮಗಳನ್ನು ಅರ್ಪಿಸಬೇಕು. ಅದರ ಸುವಾಸನೆಯು ಯೆಹೋವನಿಗೆ ಮೆಚ್ಚಿಗೆಕರವಾಗಿದೆ. ಸರ್ವಾಂಗಹೋಮವಾಗಿ ಹದಿಮೂರು ಹೋರಿಗಳನ್ನು, ಎರಡು ಟಗರುಗಳನ್ನು ಮತ್ತು ಒಂದು ವರ್ಷದ ಹದಿನಾಲ್ಕು ಗಂಡು ಕುರಿಮರಿಗಳನ್ನು ಅರ್ಪಿಸಬೇಕು. 14 ಧಾನ್ಯನೈವೇದ್ಯಕ್ಕಾಗಿ ಎಣ್ಣೆ ಬೆರೆಸಿದ ಗೋಧಿಹಿಟ್ಟನ್ನು ಅರ್ಪಿಸಬೇಕು. ಅಂದರೆ ಪ್ರತಿಯೊಂದು ಹೋರಿಗೆ ಒಂಭತ್ತು ಸೇರು, ಟಗರಿಗೆ ಆರು ಸೇರು 15 ಮತ್ತು ಒಂದು ಕುರಿಮರಿಗೆ ಮೂರು ಸೇರು ಸಮರ್ಪಿಸಬೇಕು. 16 ಕ್ರಮವಾಗಿ ಪ್ರತಿನಿತ್ಯ ಅರ್ಪಿಸುವ ಸರ್ವಾಂಗಹೋಮ ಮತ್ತು ಅದರೊಡನೆ ಅರ್ಪಿಸುವ ಧಾನ್ಯಾರ್ಪಣೆ ಮತ್ತು ಪಾನದ್ರವ್ಯಾರ್ಪಣೆಗಳಲ್ಲದೆ ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಹೋತವನ್ನು ಸಮರ್ಪಿಸಬೇಕು.
17 “ಆ ಉತ್ಸವದ ಎರಡನೆಯ ದಿನದಲ್ಲಿ ನೀವು ಹನ್ನೆರಡು ಹೋರಿಗಳನ್ನು, ಎರಡು ಟಗರುಗಳನ್ನು ಮತ್ತು ಒಂದು ವರ್ಷದ ಹದಿನಾಲ್ಕು ಗಂಡು ಕುರಿಮರಿಗಳನ್ನು ಅರ್ಪಿಸಬೇಕು. ಇವುಗಳೆಲ್ಲ ಪೂರ್ಣಾಂಗವಾದವುಗಳಾಗಿರಬೇಕು. 18 ಅಲ್ಲದೆ ಈ ಪಶುಗಳಲ್ಲಿ ಪ್ರತಿಯೊಂದಕ್ಕೂ ನೇಮಕಗೊಂಡ ಧಾನ್ಯಾರ್ಪಣೆಯನ್ನು ಮತ್ತು ಪಾನದ್ರವ್ಯಾರ್ಪಣೆಯನ್ನು ಸರಿಯಾದ ಪ್ರಮಾಣದಲ್ಲಿ ಅರ್ಪಿಸಬೇಕು. 19 ಪಾಪಪರಿಹಾರಕ ಯಜ್ಞಕ್ಕಾಗಿ ಒಂದು ಹೋತವನ್ನು ಸಮರ್ಪಿಸಬೇಕು. ಕ್ರಮವಾಗಿ ಪ್ರತಿನಿತ್ಯ ಅರ್ಪಿಸುವ ಸರ್ವಾಂಗಹೋಮ ಮತ್ತು ಅದರೊಡನೆ ಅರ್ಪಿಸುವ ಧಾನ್ಯಾರ್ಪಣೆ ಮತ್ತು ಪಾನದ್ರವ್ಯಾರ್ಪಣೆಗಳಲ್ಲದೆ ಮೇಲೆ ಹೇಳಿದವುಗಳನ್ನೂ ಅರ್ಪಿಸಬೇಕು.
20 “ಈ ಉತ್ಸವದ ಮೂರನೆಯ ದಿನದಲ್ಲಿ ನೀವು ಹನ್ನೊಂದು ಹೋರಿಗಳನ್ನು, ಎರಡು ಟಗರುಗಳನ್ನು ಮತ್ತು ಒಂದು ವರ್ಷದ ಹದಿನಾಲ್ಕು ಗಂಡು ಕುರಿಮರಿಗಳನ್ನು ಅರ್ಪಿಸಬೇಕು. ಇವುಗಳು ಪೂರ್ಣಾಂಗವಾದವುಗಳಾಗಿರಬೇಕು. 21 ಈ ಪಶುಗಳಲ್ಲಿ ಪ್ರತಿಯೊಂದಕ್ಕೂ ನೇಮಕವಾಗಿರುವ ಧಾನ್ಯಾರ್ಪಣೆಯನ್ನು ಮತ್ತು ಪಾನದ್ರವ್ಯಾರ್ಪಣೆಯನ್ನು ಸರಿಯಾದ ಪ್ರಮಾಣದಲ್ಲಿ ಅರ್ಪಿಸಬೇಕು. 22 ದೋಷಪರಿಹಾರಕ್ಕಾಗಿ ಒಂದು ಹೋತವನ್ನು ಸಮರ್ಪಿಸಬೇಕು. ಕ್ರಮಾನುಸಾರವಾದ ದೈನಂದಿನ ಸರ್ವಾಂಗಹೋಮ ಮತ್ತು ಅದರೊಡನೆ ಅರ್ಪಿಸುವ ಧಾನ್ಯಾರ್ಪಣೆ ಮತ್ತು ಪಾನದ್ರವ್ಯಾರ್ಪಣೆಗಳಲ್ಲದೆ ಮೇಲ್ಕಂಡವುಗಳನ್ನು ಅರ್ಪಿಸಬೇಕು.
23 “ಈ ಉತ್ಸವದ ನಾಲ್ಕನೆಯ ದಿನದಲ್ಲಿ ನೀವು ಹತ್ತು ಹೋರಿಗಳನ್ನು, ಎರಡು ಟಗರುಗಳನ್ನು ಮತ್ತು ಒಂದು ವರ್ಷದ ಹದಿನಾಲ್ಕು ಗಂಡು ಕುರಿಮರಿಗಳನ್ನು ಅರ್ಪಿಸಬೇಕು. ಇವು ಪೂರ್ಣಾಂಗವುಳ್ಳವುಗಳಾಗಿರಬೇಕು. 24 ಈ ಪಶುಗಳಲ್ಲಿ ಪ್ರತಿಯೊಂದಕ್ಕೆ ನೇಮಕವಾದ ಪ್ರಕಾರವೇ ಧಾನ್ಯಾರ್ಪಣೆಯನ್ನು ಮತ್ತು ಪಾನದ್ರವ್ಯಾರ್ಪಣೆಯನ್ನು ಸರಿಯಾದ ಪ್ರಮಾಣದಲ್ಲಿ ಅರ್ಪಿಸಬೇಕು. 25 ಪಾಪಪರಿಹಾರಕಯಜ್ಞಕ್ಕಾಗಿ ಒಂದು ಹೋತವನ್ನು ಸಮರ್ಪಿಸಬೇಕು. ಕ್ರಮವಾಗಿ ಪ್ರತಿನಿತ್ಯ ಅರ್ಪಿಸುವ ಸರ್ವಾಂಗಹೋಮ ಮತ್ತು ಅದರೊಡನೆ ಅರ್ಪಿಸುವ ಧಾನ್ಯಾರ್ಪಣೆ ಮತ್ತು ಪಾನದ್ರವ್ಯಾರ್ಪಣೆಗಳಲ್ಲದೆ ಮೇಲೆ ಹೇಳಿದವುಗಳನ್ನೂ ಅರ್ಪಿಸಬೇಕು.
26 “ಈ ಉತ್ಸವದ ಐದನೆಯ ದಿನದಲ್ಲಿ ನೀವು ಒಂಭತ್ತು ಹೋರಿಗಳನ್ನು, ಎರಡು ಟಗರುಗಳನ್ನು ಮತ್ತು ಒಂದು ವರ್ಷದ ಹದಿನಾಲ್ಕು ಗಂಡು ಕುರಿಮರಿಗಳನ್ನು ಅರ್ಪಿಸಬೇಕು. ಇವುಗಳೆಲ್ಲಾ ಪೂರ್ಣಾಂಗವಾದವುಗಳಾಗಿರಬೇಕು. 27 ಈ ಪಶುಗಳಲ್ಲಿ ಪ್ರತಿಯೊಂದಕ್ಕೂ ನೇಮಕಗೊಂಡ ಧಾನ್ಯಾರ್ಪಣೆಯನ್ನು ಮತ್ತು ಪಾನದ್ರವ್ಯಾರ್ಪಣೆಯನ್ನು ಸರಿಯಾದ ಪ್ರಮಾಣದಲ್ಲಿ ಅರ್ಪಿಸಬೇಕು. 28 ಪಾಪಪರಿಹಾರಕ ಯಜ್ಞಕ್ಕಾಗಿ ಒಂದು ಹೋತವನ್ನು ಸಮರ್ಪಿಸಬೇಕು. ಕ್ರಮವಾದ ದೈನಂದಿನ ಸರ್ವಾಂಗಹೋಮ ಮತ್ತು ಅದರೊಡನೆ ಅರ್ಪಿಸಬೇಕಾದ ಧಾನ್ಯಾರ್ಪಣೆ ಮತ್ತು ಪಾನದ್ರವ್ಯಾರ್ಪಣೆಗಳಲ್ಲದೆ ಮೇಲೆ ಹೇಳಿದವುಗಳನ್ನೂ ಅರ್ಪಿಸಬೇಕು.
29 “ಈ ಉತ್ಸವದ ಆರನೆಯ ದಿನದಲ್ಲಿ ನೀವು ಎಂಟು ಹೋರಿಗಳನ್ನು, ಎರಡು ಟಗರುಗಳನ್ನು ಮತ್ತು ಒಂದು ವರ್ಷದ ಹದಿನಾಲ್ಕು ಗಂಡು ಕುರಿಮರಿಗಳನ್ನು ಅರ್ಪಿಸಬೇಕು. ಇವುಗಳೆಲ್ಲ ಪೂರ್ಣಾಂಗವುಳ್ಳವುಗಳಾಗಿರಬೇಕು. 30 ಈ ಪಶುಗಳಲ್ಲಿ ಪ್ರತಿಯೊಂದಕ್ಕೆ ನೇಮಕವಾದ ಪ್ರಕಾರವೇ ಧಾನ್ಯಾರ್ಪಣೆಯನ್ನೂ ಪಾನದ್ರವ್ಯಾರ್ಪಣೆಯನ್ನೂ ಸರಿಯಾದ ಪ್ರಮಾಣದಲ್ಲಿ ಮಾಡಬೇಕು. 31 ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಹೋತವನ್ನು ಸಮರ್ಪಿಸಬೇಕು. ಕ್ರಮವಾಗಿ ಪ್ರತಿನಿತ್ಯ ಅರ್ಪಿಸುವ ಸರ್ವಾಂಗಹೋಮ ಮತ್ತು ಅದರೊಡನೆ ಅರ್ಪಿಸುವ ಧಾನ್ಯಾರ್ಪಣೆ ಮತ್ತು ಪಾನದ್ರವ್ಯಾರ್ಪಣೆಗಳಲ್ಲದೆ ಮೇಲೆ ಹೇಳಿದವುಗಳನ್ನೂ ಅರ್ಪಿಸಬೇಕು.
32 “ಈ ಉತ್ಸವದ ಏಳನೆಯ ದಿನದಲ್ಲಿ ನೀವು ಏಳು ಹೋರಿಗಳನ್ನು, ಎರಡು ಟಗರುಗಳನ್ನು ಮತ್ತು ಒಂದು ವರ್ಷದ ಹದಿನಾಲ್ಕು ಗಂಡು ಕುರಿಮರಿಗಳನ್ನು ಅರ್ಪಿಸಬೇಕು. ಅವುಗಳೆಲ್ಲ ಪೂರ್ಣಾಂಗವಾದವುಗಳಾಗಿರಬೇಕು. 33 ಈ ಪಶುಗಳಲ್ಲಿ ಪ್ರತಿಯೊಂದಕ್ಕೆ ನೇಮಕವಾದ ಪ್ರಕಾರವೇ ಧಾನ್ಯಾರ್ಪಣೆಗಳನ್ನು ಮತ್ತು ಪಾನದ್ರವ್ಯಾರ್ಪಣೆಗಳನ್ನು ಸರಿಯಾದ ಪ್ರಮಾಣದಲ್ಲಿ ಅರ್ಪಿಸಬೇಕು. 34 ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಹೋತವನ್ನು ಸಮರ್ಪಿಸಬೇಕು. ಕ್ರಮವಾಗಿ ಪ್ರತಿನಿತ್ಯ ಅರ್ಪಿಸುವ ಸರ್ವಾಂಗಹೋಮ ಮತ್ತು ಅದರೊಡನೆ ಅರ್ಪಿಸುವ ಧಾನ್ಯಾರ್ಪಣೆ ಮತ್ತು ಪಾನದ್ರವ್ಯಾರ್ಪಣೆಗಳಲ್ಲದೆ ಮೇಲೆ ಹೇಳಿದವುಗಳನ್ನೂ ಅರ್ಪಿಸಬೇಕು.
35 “ಎಂಟನೆಯ ದಿನದಲ್ಲಿ ಮುಕ್ತಾಯ ಸಭಾಕೂಟವಿರುವುದು. ಆ ದಿನದಲ್ಲಿ ಯಾವ ಪ್ರಯಾಸದ ಕೆಲಸವನ್ನೂ ಮಾಡಬಾರದು. 36 ನೀವು ಈ ಕೆಳಕಂಡವುಗಳನ್ನು ಯೆಹೋವನಿಗೆ ಸುಗಂಧಕರವಾದ ತ್ಯಾಗಮಯವಾದ ಸರ್ವಾಂಗಹೋಮವನ್ನಾಗಿ ಒಂದು ಹೋರಿಯನ್ನೂ ಒಂದು ಟಗರನ್ನೂ ಒಂದು ವರ್ಷದ ಏಳು ಗಂಡು ಕುರಿಮರಿಗಳನ್ನೂ ಅರ್ಪಿಸಬೇಕು. ಇವುಗಳೆಲ್ಲ ಪೂರ್ಣಾಂಗವಾದವುಗಳಾಗಿರಬೇಕು. 37 ಈ ಪಶುಗಳಲ್ಲಿ ಪ್ರತಿಯೊಂದಕ್ಕೆ ನೇಮಕವಾದ ಪ್ರಕಾರವೇ ಧಾನ್ಯಾರ್ಪಣೆಗಳನ್ನು ಮತ್ತು ಪಾನದ್ರವ್ಯಾರ್ಪಣೆಗಳನ್ನು ಸರಿಯಾದ ಪ್ರಮಾಣದಲ್ಲಿ ಅರ್ಪಿಸಬೇಕು. 38 ಪಾಪಪರಿಹಾರಕ ಯಜ್ಞಕ್ಕಾಗಿ ಒಂದು ಹೋತವನ್ನು ಸಮರ್ಪಿಸಬೇಕು. ಕ್ರಮವಾಗಿ ಪ್ರತಿನಿತ್ಯ ಅರ್ಪಿಸುವ ಸರ್ವಾಂಗಹೋಮ ಮತ್ತು ಅದರೊಡನೆ ಅರ್ಪಿಸುವ ಧಾನ್ಯಾರ್ಪಣೆ ಮತ್ತು ಅದರ ಪಾನದ್ರವ್ಯಾರ್ಪಣೆಗಳಲ್ಲದೆ ಮೇಲೆ ಹೇಳಿದವುಗಳನ್ನೂ ಅರ್ಪಿಸಬೇಕು.
39 “ಮೇಲೆ ತಿಳಿಸಿರುವ ಸಾರ್ವಜನಿಕ ಯಜ್ಞಗಳನ್ನು ಇಡೀ ಸಮುದಾಯಕ್ಕೋಸ್ಕರ ಹಬ್ಬದ ದಿನಗಳಲ್ಲಿ ನಿಮ್ಮ ಸರ್ವಾಂಗಹೋಮಗಳನ್ನಾಗಿಯೂ ಧಾನ್ಯಾರ್ಪಣೆಗಳನ್ನಾಗಿಯೂ ಪಾನದ್ರವ್ಯಾರ್ಪಣೆಗಳನ್ನಾಗಿಯೂ ಮತ್ತು ಸಮಾಧಾನಯಜ್ಞಗಳನ್ನಾಗಿಯೂ ಅರ್ಪಿಸಬೇಕು. ನಿಮ್ಮ ವೈಯಕ್ತಿಕ ಹರಕೆಯ ಅರ್ಪಣೆ ಮತ್ತು ಸ್ವಯಿಚ್ಛಾರ್ಪಣೆಗಳಲ್ಲದೆ ಮೇಲೆ ಹೇಳಿದವುಗಳನ್ನೂ ಅರ್ಪಿಸಬೇಕು.”
40 ಯೆಹೋವನು ಆಜ್ಞಾಪಿಸಿದ್ದನ್ನೆಲ್ಲಾ ಮೋಶೆಯು ಇಸ್ರೇಲರಿಗೆ ತಿಳಿಸಿದನು.
ವಿಶೇಷ ಹರಕೆಗಳು
30 ಮೋಶೆಯು ಇಸ್ರೇಲರ ಕುಲಪ್ರಧಾನರಿಗೆ ಹೇಳಿದ್ದೇನೆಂದರೆ: ಯೆಹೋವನು ಹೀಗೆ ಆಜ್ಞಾಪಿಸಿದ್ದಾನೆ:
2 “ಯಾವನಾದರೂ ಯೆಹೋವನಿಗೆ ಇಂಥದ್ದನ್ನು ಕೊಡುತ್ತೇನೆಂದು ಹರಕೆ ಮಾಡಿದರೆ ಅಥವಾ ತಾನು ಇಂಥದ್ದನ್ನು ಮಾಡುವುದಿಲ್ಲ ಎಂದು ಆಣೆಯಿಟ್ಟುಕೊಂಡರೆ, ಅವನು ತನ್ನ ಮಾತನ್ನು ಮೀರದೆ ತಾನು ಹೇಳಿದಂತೆಯೇ ನೆರವೇರಿಸಬೇಕು.
3 “ಇನ್ನೂ ತನ್ನ ತಂದೆಯ ಮನೆಯಲ್ಲಿರುವ ಯುವತಿಯು ಯೆಹೋವನಿಗೆ ಇಂಥದ್ದನ್ನು ಕೊಡುತ್ತೇನೆಂದು ಹರಕೆ ಮಾಡಿಕೊಂಡರೆ ಅಥವಾ ಇಂಥದ್ದನ್ನು ಮಾಡುವುದಿಲ್ಲ ಎಂದು ಆಣೆಯಿಟ್ಟುಕೊಂಡರೆ, 4 ಅವಳ ತಂದೆಯು ಅವಳ ಹರಕೆಯನ್ನಾಗಲಿ ಆಣೆಯನ್ನಾಗಲಿ ಕೇಳಿಯೂ ಅದರ ಬಗ್ಗೆ ಅವಳಿಗೆ ಏನೂ ಹೇಳದಿದ್ದರೆ, ಆಕೆಯು ಅಂಥಾ ಹರಕೆಯನ್ನೂ ಆಣೆಯನ್ನೂ ನೆರವೇರಿಸಲೇಬೇಕು. 5 ಆದರೆ ತಂದೆಯು ಆ ಸಂಗತಿಯನ್ನು ತಿಳಿದ ದಿನವೇ ಅದನ್ನು ಆಕ್ಷೇಪಿಸಿದರೆ, ಆಕೆಯು ಮಾಡಿದ ಹರಕೆಯನ್ನಾಗಲಿ ಇಟ್ಟುಕೊಂಡ ಆಣೆಯನ್ನಾಗಲಿ ನೆರವೇರಿಸಬೇಕಿಲ್ಲ. ತಂದೆಯು ಆಕ್ಷೇಪಿಸಿದ್ದರಿಂದ ಯೆಹೋವನು ಅವಳನ್ನು ಕ್ಷಮಿಸುವನು.
6 “ಆದರೆ ಅವಳು ತನ್ನ ಹರಕೆಯನ್ನಾಗಲಿ ಆಣೆಯನ್ನಾಗಲಿ ನೆರವೇರಿಸಿಲ್ಲದಿರುವಾಗಲೇ ಮದುವೆಯಾದರೆ, 7 ಗಂಡನು ಅದರ ಬಗ್ಗೆ ತಿಳಿದ ದಿನದಂದು ಆಕೆಗೆ ಅದರ ಬಗ್ಗೆ ಏನೂ ಹೇಳದಿದ್ದರೆ, ಆಕೆ ತಾನು ಮಾಡಿದ ಹರಕೆಯನ್ನಾಗಲಿ ಆಣೆಯನ್ನಾಗಲಿ ನೆರವೇರಿಸಬೇಕು. 8 ಆದರೆ ಗಂಡನು ಅದನ್ನು ಕೇಳಿದ ದಿನವೇ ಆಕ್ಷೇಪಿಸಿದರೆ, ಆಕೆಯು ಮಾಡಿದ ಹರಕೆಯನ್ನಾಗಲಿ ಆಣೆಯನ್ನಾಗಲಿ ನೆರವೇರಿಸಬೇಕಿಲ್ಲ. ಯೆಹೋವನು ಅವಳನ್ನು ಕ್ಷಮಿಸುವನು.
9 “ವಿಧವೆಯಾಗಲಿ ವಿವಾಹವಿಚ್ಛೇಧನ ಹೊಂದಿದ ಸ್ತ್ರೀಯಾಗಲಿ ತಾನು ಮಾಡಿದ ಪ್ರತಿಯೊಂದು ಹರಕೆಯನ್ನೂ ಆಣೆಯನ್ನೂ ನೆರವೇರಿಸಲೇಬೇಕು.
10 “ವಿವಾಹಿತ ಸ್ತ್ರೀಯು ಅಂಥಾ ಹರಕೆಯನ್ನಾಗಲಿ ಪ್ರಮಾಣವನ್ನಾಗಲಿ ಮಾಡಿದಾಗ, 11 ಅವಳ ಗಂಡನು ತಿಳಿದು ಅಡ್ಡಿಮಾಡದೆ ಏನೂ ಹೇಳದಿದ್ದರೆ ಆಕೆಯು ಆ ಹರಕೆಗಳನ್ನೂ ಆಣೆಗಳನ್ನೂ ನೆರವೇರಿಸಬೇಕು. 12 ಆದರೆ ಗಂಡನು ಅವುಗಳನ್ನು ತಿಳಿದಾಗಲೇ ರದ್ದುಗೊಳಿಸಿದರೆ, ಅವಳ ಎಲ್ಲ ಹರಕೆಗಳಿಗೆ ಮತ್ತು ಆಣೆಗಳಿಗೆ ಬೆಲೆಯಿರುವುದಿಲ್ಲ. ಯಾಕೆಂದರೆ ಗಂಡನು ಅವುಗಳನ್ನು ರದ್ದುಪಡಿಸಿದನು. ಆದ್ದರಿಂದ ಯೆಹೋವನು ಆಕೆಯನ್ನು ಕ್ಷಮಿಸುತ್ತಾನೆ. 13 ಹೆಂಡತಿ ಮಾಡಿದ ಹರಕೆಯನ್ನೂ ಆಣೆಯನ್ನೂ ಸ್ಥಿರಪಡಿಸುವುದಕ್ಕಾಗಲಿ ರದ್ದುಪಡಿಸುವುದಕ್ಕಾಗಲಿ ಗಂಡನಿಗೆ ಅಧಿಕಾರವಿರುವುದು. 14 ಆದರೆ ಅವಳ ಗಂಡನು ಅದನ್ನು ಕೇಳಿದ ದಿನದಿಂದ ಅದರ ಬಗ್ಗೆ ಆಕ್ಷೇಪಿಸದಿದ್ದರೆ, ಅವನು ಅವಳ ಎಲ್ಲಾ ಹರಕೆಗಳನ್ನು ಮತ್ತು ಆಣೆಗಳನ್ನು ಸ್ಥಿರಪಡಿಸಿದ್ದಾನೆ. ಯಾಕೆಂದರೆ ಅವನು ಅದರ ಬಗ್ಗೆ ಕೇಳಿದ ದಿನದಂದು ಅವಳಿಗೆ ಏನೂ ಹೇಳಲಿಲ್ಲ. 15 ಆದರೆ ಅವನು ಅವುಗಳ ಬಗ್ಗೆ ಕೇಳಿ ಸ್ವಲ್ಪ ದಿನಗಳಾದ ಮೇಲೆ ಆಕೆಯ ಹರಕೆಗಳನ್ನಾಗಲಿ ಆಣೆಗಳನ್ನಾಗಲಿ ರದ್ದುಪಡಿಸಿದರೆ, ಆಕೆಯ ಹರಕೆಯನ್ನು ಮುರಿದದ್ದಕ್ಕಾಗಿ ಅವನು ಶಿಕ್ಷೆಯನ್ನು ಅನುಭವಿಸುವನು.”
16 ಗಂಡಹೆಂಡತಿಯರ ಬಗ್ಗೆ ಮತ್ತು ತಂದೆಯೊಡನೆ ಇನ್ನೂ ಮನೆಯಲ್ಲಿರುವ ಮಗಳ ವಿಷಯದಲ್ಲಿ ಯೆಹೋವನು ಮೋಶೆಗೆ ಈ ಆಜ್ಞೆಗಳನ್ನು ಕೊಟ್ಟನು.
ಇಸ್ರೇಲರು ಮಿದ್ಯಾನ್ಯರನ್ನು ಸಂಹರಿಸಿದ್ದು
31 ಯೆಹೋವನು ಮೋಶೆಯೊಡನೆ ಮಾತಾಡಿ ಹೀಗೆಂದನು: 2 “ನೀನು ಇಸ್ರೇಲರಿಗೋಸ್ಕರ ಮಿದ್ಯಾನ್ಯರ ಮೇಲೆ ಆಕ್ರಮಣಮಾಡಿ ಸೇಡು ತೀರಿಸಿಕೊ. ಇದಾದ ನಂತರ ನೀನು ಸಾಯುವಿ.”[a]
3 ಆಗ ಮೋಶೆ ಇಸ್ರೇಲರಿಗೆ, “ಮಿದ್ಯಾನ್ಯರು ಯೆಹೋವನಿಗೆ ವಿರೋಧವಾಗಿ ಮಾಡಿದ ಕೃತ್ಯಗಳಿಗಾಗಿ ಅವರ ಮೇಲೆ ಆಕ್ರಮಣ ಮಾಡಿ ದಂಡಿಸಲು ನಿಮ್ಮಲ್ಲಿರುವ ಗಂಡಸರಲ್ಲಿ ಕೆಲವರನ್ನು ದಂಡೆಯಾತ್ರೆಗೆ ಆರಿಸಿಕೊಳ್ಳಬೇಕು. 4 ಇಸ್ರೇಲಿನ ಕುಲಗಳವರಲ್ಲಿ ಪ್ರತಿಯೊಂದು ಕುಲದಿಂದ ಒಂದು ಸಾವಿರ ಗಂಡಸರನ್ನು ದಂಡೆಯಾತ್ರೆಗೆ ಕಳುಹಿಸಬೇಕು. 5 ಆದ್ದರಿಂದ ಇಸ್ರೇಲರ ಕುಲಗಳಿಂದ ಪ್ರತಿಯೊಂದು ಕುಲಕ್ಕೆ ಒಂದು ಸಾವಿರ ಗಂಡಸರ ಪ್ರಕಾರ ಹನ್ನೆರಡು ಸಾವಿರ ಗಂಡಸರನ್ನು ಯುದ್ಧಕ್ಕೆ ಆರಿಸಿಕೊಳ್ಳಬೇಕು” ಅಂದನು.
6 ಮೋಶೆಯು ಅವರನ್ನು ಯುದ್ಧಕ್ಕೆ ಕಳುಹಿಸಿದನು. ಅವರ ಸಂಗಡ ಎಲ್ಲಾಜಾರನ ಮಗನಾದ ಫೀನೆಹಾಸನನ್ನೂ ಕಳುಹಿಸಿದನು. ಫೀನೆಹಾಸನು ಪವಿತ್ರವಸ್ತುಗಳನ್ನು ತೆಗೆದುಕೊಂಡನು ಮತ್ತು ಸೂಚನೆ ಕೊಡುವುದಕ್ಕಾಗಿ ತುತ್ತೂರಿಗಳನ್ನು ತೆಗೆದುಕೊಂಡನು. 7 ಯೆಹೋವನು ಆಜ್ಞಾಪಿಸಿದಂತೆಯೇ ಇಸ್ರೇಲರು ಮಿದ್ಯಾನ್ಯರೊಡನೆ ಯುದ್ಧಮಾಡಿದರು. ಅವರು ಮಿದ್ಯಾನ್ಯರ ಗಂಡಸರೆಲ್ಲರನ್ನು ಕೊಂದರು. 8 ಅವರು ಕೊಂದವರಲ್ಲಿ ಎವೀ, ರೆಕೆಮ್, ಜೂರ್, ಹೂರ್ ಮತ್ತು ರೆಬಾ ಎಂಬ ಮಿದ್ಯಾನ್ಯರ ಐದು ಮಂದಿ ರಾಜರು ಸೇರಿದ್ದರು. ಅವರು ಕತ್ತಿಯಿಂದ ಬೆಯೋರನ ಮಗನಾದ ಬಿಳಾಮನನ್ನೂ ಕೊಂದರು.
9 ಇಸ್ರೇಲರು ಮಿದ್ಯಾನ್ಯರ ಹೆಂಗಸರನ್ನು ಮತ್ತು ಮಕ್ಕಳನ್ನು ಸೆರೆಹಿಡಿದರು. ಅವರು ಮಿದ್ಯಾನ್ಯರ ಎಲ್ಲಾ ಪಶುಗಳನ್ನು ಮತ್ತು ಇತರ ಅಮೂಲ್ಯವಾದ ವಸ್ತುಗಳನ್ನು ತೆಗೆದುಕೊಂಡರು. 10 ಅವರು ನೆಲೆಸಿದ್ದ ಊರುಗಳನ್ನೂ ಪಾಳೆಯಗಳನ್ನೂ ಸುಟ್ಟುಹಾಕಿದರು. 11 ಎಲ್ಲಾ ಜನರನ್ನೂ ಪಶುಗಳನ್ನೂ ಹಿಡಿದು, 12 ತಾವು ಸೆರೆಹಿಡಿದವರನ್ನೂ ಪಶುಗಳನ್ನೂ ಆಸ್ತಿಯನ್ನೂ ತೆಗೆದುಕೊಂಡು ಜೆರಿಕೊ ಪಟ್ಟಣದ ಆಚೆ ಜೋರ್ಡನ್ ಹೊಳೆಯ ತೀರದಲ್ಲಿ ಮೋವಾಬ್ಯರ ಬಯಲಿನಲ್ಲಿದ್ದ ಪಾಳೆಯಕ್ಕೆ ಅಂದರೆ ಮೋಶೆ, ಯಾಜಕನಾದ ಎಲ್ಲಾಜಾರ್ ಮತ್ತು ಇಸ್ರೇಲರ ಸರ್ವಸಮೂಹದವರು ಇದ್ದಲ್ಲಿಗೆ ಬಂದರು. 13 ಮೋಶೆಯೂ ಯಾಜಕನಾದ ಎಲ್ಲಾಜಾರನೂ ಸಮೂಹದ ಪ್ರಧಾನರೂ ಪಾಳೆಯದ ಹೊರಗೆ ಬಂದು ಸೈನಿಕರನ್ನು ಎದುರುಗೊಂಡರು.
14 ಮೋಶೆಯು ಯುದ್ಧದಿಂದ ಹಿಂತಿರುಗಿ ಬರುತ್ತಿದ್ದ ಸೈನ್ಯಾಧಿಕಾರಿಗಳ ಮೇಲೆ ಅಂದರೆ ಸಹಸ್ರಾಧಿಪತಿಗಳ ಮತ್ತು ಶತಾಧಿಪತಿಗಳ ಮೇಲೆ ಕೋಪಗೊಂಡನು. 15 ಅವನು ಅವರಿಗೆ, “ನೀವು ಎಲ್ಲಾ ಹೆಂಗಸರನ್ನು ಉಳಿಸಿದ್ದೇಕೆ? 16 ಬಿಳಾಮನ ಸಲಹೆಯನ್ನು ಅನುಸರಿಸಿ, ಯೆಹೋವನಿಗೆ ವಿರೋಧವಾಗಿ ಇಸ್ರೇಲರು ಪಾಪಮಾಡುವಂತೆ ಮಾಡಿ ಪೆಗೋರದ ಬಾಳನ ಸಂಗತಿಗೆ ಕಾರಣರಾದವರು ಇವರೇ ಅಲ್ಲವೇ? ಅದರ ಫಲವಾಗಿ ಭಯಂಕರವಾದ ಕಾಯಿಲೆಯು ಜನರಿಗೆ ಬಂದಿತು. 17 ಆದ್ದರಿಂದ ಈ ಗುಂಪಿನಲ್ಲಿರುವ ಎಲ್ಲಾ ಗಂಡುಮಕ್ಕಳನ್ನೂ ಪುರುಷಸಂಗಮ ಮಾಡಿದ ಎಲ್ಲಾ ಮಿದ್ಯಾನ್ ಹೆಂಗಸರನ್ನೂ ಕೊಲ್ಲಬೇಕು. 18 ಪುರುಷಸಂಗಮ ಮಾಡದಿರುವ ಕನ್ಯೆಯರನ್ನು ನಿಮಗಾಗಿ ಉಳಿಸಿರಿ. 19 ನೀವಾದರೋ ಏಳು ದಿನಗಳವರೆಗೂ ಪಾಳೆಯದ ಹೊರಗೆ ಇರಬೇಕು. ಮನುಷ್ಯರನ್ನು ಕೊಂದವರೂ ಶವಸೋಂಕಿದವರೂ ನಿಮ್ಮವರಾಗಿರಲಿ ಸೆರೆಯವರಾಗಿರಲಿ ಮೂರನೆಯ ಮತ್ತು ಏಳನೆಯ ದಿನದಲ್ಲಿ ನಿಮ್ಮನ್ನು ಶುದ್ಧೀಕರಿಸಿಕೊಳ್ಳಬೇಕು. 20 ಅದಲ್ಲದೆ ಎಲ್ಲಾ ಬಟ್ಟೆಗಳನ್ನೂ ತೊಗಲಿನ ಸಾಮಾನುಗಳನ್ನೂ ಮೇಕೆ ಕೂದಲಿನ ವಸ್ತುಗಳನ್ನೂ ಮರದ ಸಾಮಾನನ್ನೂ ಶುದ್ಧ ಮಾಡಬೇಕು.”
21 ಆಗ ಯಾಜಕನಾದ ಎಲ್ಲಾಜಾರನು ಸೈನಿಕರೊಡನೆ ಮಾತಾಡಿ ಇಂತೆಂದೆನು: “ಯೆಹೋವನು ಮೋಶೆಗೆ ಯುದ್ಧದಿಂದ ಮರಳಿಬರುವ ಸೈನಿಕರ ಬಗ್ಗೆ ಆ ನಿಯಮಗಳನ್ನು ಕೊಟ್ಟನು: 22-23 ಬೆಂಕಿಯನ್ನು ಸಹಿಸಬಲ್ಲ ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ, ತವರ, ಸೀಸ ಮೊದಲಾದವುಗಳನ್ನು ಬೆಂಕಿಯಲ್ಲಿ ಹಾಯಿಸಿ ಶುದ್ಧಮಾಡಬೇಕು. ಬಳಿಕ ಶುದ್ಧೀಕರಣದ ನೀರಿನಿಂದ ಅವುಗಳನ್ನು ಶುದ್ಧೀಕರಿಸಬೇಕು. ಬೆಂಕಿಯನ್ನು ಸಹಿಸಲಾರದ ವಸ್ತುಗಳನ್ನು ನೀರಿನಿಂದ ಮಾತ್ರ ತೊಳೆಯಬೇಕು. 24 ಏಳನೆಯ ದಿನದಲ್ಲಿ ನಿಮ್ಮ ಬಟ್ಟೆಗಳನ್ನು ಒಗೆದುಕೊಂಡ ನಂತರ ನೀವು ಶುದ್ಧರಾಗುವಿರಿ. ಆಮೇಲೆ ನೀವು ಪಾಳೆಯದೊಳಗೆ ಬರಬಹುದು.”
25 ತರುವಾಯ ಯೆಹೋವನು ಮೋಶೆಗೆ, 26 “ನೀನೂ ಯಾಜಕನಾದ ಎಲ್ಲಾಜಾರನೂ ಸಮುದಾಯದ ಎಲ್ಲಾ ಕುಲಪ್ರಧಾನರೂ ಸೆರೆಸಿಕ್ಕಿದ ಮನುಷ್ಯರನ್ನು ಮತ್ತು ಪಶುಗಳನ್ನು ಲೆಕ್ಕಿಸಿ ಪಟ್ಟಿಮಾಡಬೇಕು. 27 ಅವುಗಳನ್ನು ಎರಡು ಭಾಗಮಾಡಿ ಯುದ್ಧಕ್ಕೆ ಹೋದ ಸೈನಿಕರಿಗೆ ಅರ್ಧವನ್ನು ಮಿಕ್ಕ ಸಮೂಹದವರಿಗೆ ಅರ್ಧವನ್ನು ಹಂಚಿಕೊಡಬೇಕು. 28 ಯುದ್ಧಕ್ಕೆ ಹೋದ ಸೈನಿಕರಿಗೆ ಬರುವ ಭಾಗದಿಂದ ಮನುಷ್ಯರನ್ನು, ದನಕರುಗಳನ್ನು, ಕತ್ತೆಗಳನ್ನು ಮತ್ತು ಕುರಿಗಳನ್ನು 29 ನೀನು ಐನೂರರಲ್ಲಿ ಒಂದರ ಮೇರೆಗೆ ಯೆಹೋವನಿಗೋಸ್ಕರ ಕಪ್ಪಕಾಣಿಕೆಯನ್ನು ತೆಗೆದುಕೊಂಡು, ಅದನ್ನು ಪ್ರತ್ಯೇಕಿಸಿ ಯಾಜಕನಾದ ಎಲ್ಲಾಜಾರನಿಗೆ ಒಪ್ಪಿಸಬೇಕು. 30 ಮಿಕ್ಕ ಇಸ್ರೇಲರಿಗೆ ಬರುವ ಭಾಗದಿಂದ ಮನುಷ್ಯರನ್ನು, ದನಕರುಗಳನ್ನು, ಕತ್ತೆಗಳನ್ನು, ಕುರಿಗಳನ್ನು ಐವತ್ತರಲ್ಲಿ ಒಂದರ ಮೇರೆಗೆ ತೆಗೆದುಕೊಳ್ಳಬೇಕು. ಅದನ್ನು ಯೆಹೋವನ ಪವಿತ್ರ ಗುಡಾರವನ್ನು ನೋಡಿಕೊಳ್ಳುವ ಲೇವಿಯರಿಗೆ ಕೊಡಬೇಕು” ಎಂದು ಆಜ್ಞಾಪಿಸಿದನು.
31 ಯೆಹೋವನು ಆಜ್ಞಾಪಿಸಿದ್ದಂತೆಯೇ ಮೋಶೆ ಮತ್ತು ಎಲ್ಲಾಜಾರನು ಮಾಡಿದರು. 32 ಸೈನಿಕರು ಆರು ಲಕ್ಷದ ಎಪ್ಪತ್ತೈದು ಸಾವಿರ ಕುರಿಗಳನ್ನು, 33 ಎಪ್ಪತ್ತೆರಡು ಸಾವಿರ ದನಕರುಗಳನ್ನು, 34 ಅರವತ್ತೊಂದು ಸಾವಿರ ಕತ್ತೆಗಳನ್ನು, 35 ಮೂವತ್ತೆರಡು ಸಾವಿರ ಕನ್ನಿಕೆಯರನ್ನು ಪಡೆದುಕೊಂಡರು. 36 ಯುದ್ಧಕ್ಕೆ ಹೋದ ಸೈನಿಕರು ಅರ್ಧಭಾಗವನ್ನು ಅಂದರೆ ಮೂರು ಲಕ್ಷದ ಮೂವತ್ತೇಳು ಸಾವಿರದ ಐನೂರು ಕುರಿಗಳನ್ನು ಪಡೆದುಕೊಂಡರು. 37 ಅವರು ಆರುನೂರ ಐವತ್ತೇಳು ಕುರಿಗಳನ್ನು ಯೆಹೋವನಿಗೆ ಕೊಟ್ಟರು. 38 ಸೈನಿಕರು ಮೂವತ್ತಾರು ಸಾವಿರ ದನಕರುಗಳನ್ನು ಪಡೆದುಕೊಂಡರು. ಅವುಗಳಲ್ಲಿ ಎಪ್ಪತ್ತೆರಡು ದನಕರುಗಳನ್ನು ಯೆಹೋವನಿಗೆ ಕೊಟ್ಟರು. 39 ಸೈನಿಕರು ಮೂವತ್ತು ಸಾವಿರದ ಐನೂರು ಕತ್ತೆಗಳನ್ನು ಪಡೆದುಕೊಂಡರು. ಅವರು ಅರವತ್ತೊಂದು ಕತ್ತೆಗಳನ್ನು ಯೆಹೋವನಿಗೆ ಕೊಟ್ಟರು. 40 ಸೈನಿಕರು ಹದಿನಾರು ಸಾವಿರ ಮಂದಿ ಕನ್ನಿಕೆಯರನ್ನು ಪಡೆದುಕೊಂಡರು. ಅವರು ಮೂವತ್ತೆರಡು ಮಂದಿ ಕನ್ನಿಕೆಯರನ್ನು ಯೆಹೋವನಿಗೆ ಕೊಟ್ಟರು. 41 ಮೋಶೆಯು ಯೆಹೋವನ ಅಪ್ಪಣೆಯ ಮೇರೆಗೆ ಆ ಕಪ್ಪವನ್ನೆಲ್ಲ ಯೆಹೋವನಿಗೆ ಕೊಡುಗೆಯಾಗಿ ಯಾಜಕನಾದ ಎಲ್ಲಾಜಾರನಿಗೆ ಕೊಟ್ಟನು.
42-43 ಮೋಶೆಯು ಜನರಿಗೆ ಸೇರಿದ ಅರ್ಧಭಾಗವನ್ನು ಎಣಿಸಿದನು. ಯುದ್ಧಕ್ಕೆ ಹೋಗಿದ್ದ ಸೈನಿಕರಿಂದ ಮೋಶೆಯು ತೆಗೆದುಕೊಂಡ ಅರ್ಧಭಾಗ: ಮೂರು ಲಕ್ಷದ ಮೂವತ್ತೇಳು ಸಾವಿರದ ಐನೂರು ಕುರಿಗಳು, 44 ಮೂವತ್ತಾರು ಸಾವಿರ ದನಕರುಗಳು, 45 ಮೂವತ್ತು ಸಾವಿರದ ಐನೂರು ಕತ್ತೆಗಳು 46 ಮತ್ತು ಹದಿನಾರು ಸಾವಿರ ಕನ್ನಿಕೆಯರು. 47 ಇಸ್ರೇಲ್ ಜನರಿಗೆ ದೊರಕಿದ ಅರ್ಧ ಭಾಗದಿಂದ ಮನುಷ್ಯರಲ್ಲಿಯೂ ಪಶುಗಳಲ್ಲಿಯೂ ಮೋಶೆ ಐವತ್ತನೆ ಒಂದು ಭಾಗವನ್ನು ತೆಗೆದುಕೊಂಡು ಯೆಹೋವನ ಪವಿತ್ರಗುಡಾರವನ್ನು ನೋಡಿಕೊಳ್ಳುತ್ತಿದ್ದ ಲೇವಿಯರಿಗೆ ಕೊಟ್ಟನು.
48 ಆಗ ದಂಡಿನ ಸಹಸ್ರಾಧಿಪತಿಗಳೂ ಶತಾಧಿಪತಿಗಳೂ ಮೋಶೆಯ ಬಳಿಗೆ ಬಂದು, 49 “ನಿನ್ನ ದಾಸರಾದ ನಾವು ನಮ್ಮ ಅಧಿಕಾರದೊಳಗೆ ಇದ್ದ ಸೈನಿಕರನ್ನು ಲೆಕ್ಕಿಸಲಾಗಿ ಒಬ್ಬನಾದರೂ ಕಡಿಮೆಯಾಗಿಲ್ಲವೆಂದು ತಿಳಿಯಿತು. 50 ಆದಕಾರಣ ಯೆಹೋವನು ಕಾಪಾಡಿದ ನಮ್ಮ ಪ್ರಾಣಗಳಿಗೆ ಈಡಾಗಿ ಆತನಿಗೋಸ್ಕರ ಕಾಣಿಕೆಯಾಗಿ ನಮ್ಮಲ್ಲಿ ಒಬ್ಬೊಬ್ಬನು ತನಗೆ ಸಿಕ್ಕಿದ ಚಿನ್ನದ ಒಡವೆಗಳನ್ನು ಅಂದರೆ ತೋಳ್ಬಳೆ, ಕಡಗ, ಮುದ್ರೆಯುಂಗುರ, ಮುರುವು, ಕಂಠಮಾಲೆ ಮುಂತಾದವುಗಳನ್ನು ನಮ್ಮ ಶುದ್ಧೀಕರಣಕ್ಕಾಗಿ ಯೆಹೋವನಿಗೆ ತಂದಿದ್ದೇವೆ” ಅಂದರು.
51 ಅವರು ಕೊಟ್ಟ ಎಲ್ಲಾ ಚಿನ್ನದ ಒಡವೆಗಳನ್ನು ಮೋಶೆಯು ಮತ್ತು ಯಾಜಕನಾದ ಎಲ್ಲಾಜಾರನು ತೆಗೆದುಕೊಂಡರು. ಅವುಗಳನ್ನು ಕುಶಲತೆಯಿಂದ ತಯಾರಿಸಿದ ಒಡವೆಗಳಾಗಿದ್ದವು. 52 ಸಹಸ್ರಾಧಿಪತಿಗಳು ಮತ್ತು ಶತಾಧಿಪತಿಗಳು ಯೆಹೋವನಿಗೆ ಕೊಟ್ಟ ಚಿನ್ನವು ನಾನೂರಿಪ್ಪತ್ತು ಪೌಂಡು ತೂಕವಿತ್ತು. 53 ಉಳಿದದ್ದನ್ನು ಸೈನಿಕರು ತಮಗಾಗಿ ಇಟ್ಟುಕೊಂಡರು. 54 ಸಹಸ್ರಾಧಿಪತಿಗಳೂ ಶತಾಧಿಪತಿಗಳೂ ಕೊಟ್ಟ ಚಿನ್ನವನ್ನು ಮೋಶೆಯೂ ಯಾಜಕನಾದ ಎಲ್ಲಾಜಾರನೂ ತೆಗೆದುಕೊಂಡು ದೇವದರ್ಶನಗುಡಾರದಲ್ಲಿ ಇಟ್ಟರು. ಇಸ್ರೇಲರ ವಿಷಯದಲ್ಲಿ ಜ್ಞಾಪಕಾರ್ಥವಾಗಿ ಇದು ಯೆಹೋವನ ಸನ್ನಿಧಿಯಲ್ಲಿ ಇಡಲ್ಪಟ್ಟಿತು.
9 ಆಮೇಲೆ ಯೇಸು ಜನರಿಗೆ, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಇಲ್ಲಿ ನಿಂತಿರುವ ನಿಮ್ಮಲ್ಲಿ ಕೆಲವು ಜನರು ತಾವು ಸಾಯುವುದಕ್ಕೆ ಮುಂಚೆ ದೇವರ ರಾಜ್ಯವು ಅಧಿಕಾರದೊಡನೆ ಬರುವುದನ್ನು ನೋಡುತ್ತಾರೆ” ಎಂದು ಹೇಳಿದನು.
ಮೋಶೆ ಮತ್ತು ಎಲೀಯರೊಡನೆ ಯೇಸು
(ಮತ್ತಾಯ 17:1-13; ಲೂಕ 9:28-36)
2 ಆರು ದಿನಗಳ ನಂತರ ಪೇತ್ರ, ಯಾಕೋಬ ಮತ್ತು ಯೋಹಾನರನ್ನು ಕರೆದುಕೊಂಡು ಯೇಸು ಎತ್ತರವಾದ ಬೆಟ್ಟದ ಮೇಲೆ ಹೋದನು. ಅಲ್ಲಿ ಅವರು ಮಾತ್ರ ಇದ್ದರು. ಈ ಶಿಷ್ಯರು ಯೇಸುವನ್ನು ನೋಡುತ್ತಿರಲು, ಇದ್ದಕ್ಕಿದ್ದಂತೆ ಆತನು ರೂಪಾಂತರ ಹೊಂದಿದನು. 3 ಯೇಸುವಿನ ಬಟ್ಟೆಗಳು ಬಿಳುಪಾಗಿ ಹೊಳೆಯುತ್ತಿದ್ದವು. ಅಷ್ಟು ಬಿಳುಪಾದ ಬಟ್ಟೆಗಳನ್ನು ತಯಾರಿಸಲು ಸಾಧ್ಯವಿರಲಿಲ್ಲ. 4 ಆಗ ಮೋಶೆ ಮತ್ತು ಎಲೀಯ ಅಲ್ಲಿ ಪ್ರತ್ಯಕ್ಷರಾಗಿ ಯೇಸುವಿನೊಂದಿಗೆ ಮಾತಾಡುತ್ತಿದ್ದರು.
5 ಪೇತ್ರನು ಯೇಸುವಿಗೆ, “ಗುರುವೇ, ನಾವು ಇಲ್ಲೇ ಇರುವುದು ಒಳ್ಳೆಯದು. ನಾವು ಇಲ್ಲಿ ಮೂರು ಗುಡಾರಗಳನ್ನು ಹಾಕುತ್ತೇವೆ. ಒಂದು ನಿನಗೆ, ಒಂದು ಮೋಶೆಗೆ ಮತ್ತೊಂದು ಎಲೀಯನಿಗೆ” ಎಂದು ಹೇಳಿದನು. 6 ಪೇತ್ರನಿಗೆ ಏನು ಹೇಳಬೇಕೋ ತಿಳಿಯಲಿಲ್ಲ. ಏಕೆಂದರೆ ಅವನು ಮತ್ತು ಉಳಿದ ಇನ್ನಿಬ್ಬರು ಶಿಷ್ಯರು ಬಹಳ ಭಯಗೊಂಡಿದ್ದರು.
7 ಆಗ ಮೋಡವು ಬಂದು, ಅವರನ್ನು ಮುಸುಕಿತು. ಆ ಮೋಡದ ಒಳಗಿಂದ ಒಂದು ಧ್ವನಿಯು, “ಈತನು ನನ್ನ ಪ್ರಿಯ ಮಗನು. ಈತನಿಗೆ ವಿಧೇಯರಾಗಿ” ಎಂದು ಹೇಳಿತು.
8 ಆಗ ಪೇತ್ರ, ಯಾಕೋಬ ಮತ್ತು ಯೋಹಾನರು ಕಣ್ಣೆತ್ತಿ ನೋಡಿದಾಗ ಯೇಸು ಒಬ್ಬನೇ ಅಲ್ಲಿದ್ದನು.
9 ಯೇಸು ಮತ್ತು ಆ ಶಿಷ್ಯರು ಹಿಂತಿರುಗಿ ಬೆಟ್ಟದಿಂದ ಕೆಳಗಿಳಿದು ಬರುತ್ತಿರುವಾಗ, ಆತನು ಅವರಿಗೆ, “ನೀವು ಬೆಟ್ಟದ ಮೇಲೆ ನೋಡಿದ ಸಂಗತಿಗಳ ಬಗ್ಗೆ ಯಾರಿಗೂ ಹೇಳಬೇಡಿ. ಮನುಷ್ಯಕುಮಾರನು ಸತ್ತು ಜೀವಂತವಾಗಿ ಎದ್ದುಬರುವವರೆಗೆ ಕಾದುಕೊಂಡಿರಿ” ಎಂದು ಆಜ್ಞಾಪಿಸಿದನು.
10 ಆದ್ದರಿಂದ ಆ ಶಿಷ್ಯರು ಈ ಸಂಗತಿಗಳನ್ನು ಯಾರಿಗೂ ತಿಳಿಸಲಿಲ್ಲ. ಆದರೆ “ಸತ್ತು ಜೀವಂತವಾಗಿ ಎದ್ದುಬರುವುದು” ಎಂದರೇನು? ಎಂದು ತಮ್ಮತಮ್ಮಲ್ಲಿಯೇ ಚರ್ಚಿಸಿದರು. 11 ಶಿಷ್ಯರು ಯೇಸುವಿಗೆ, “ಎಲೀಯನೇ ಮೊದಲು ಬರಬೇಕೆಂದು ಧರ್ಮೋಪದೇಶಕರು ಹೇಳಲು ಕಾರಣವೇನು?” ಎಂದು ಕೇಳಿದರು.
12 ಯೇಸು ಅವರಿಗೆ, “ಎಲೀಯನೇ ಮೊದಲು ಬರಬೇಕೆಂದು ಅವರು ಹೇಳುವುದು ಸರಿ. ಎಲೀಯನು ಎಲ್ಲವನ್ನು ಸರಿಪಡಿಸುತ್ತಾನೆ. ಆದರೆ ಮನುಷ್ಯಕುಮಾರನು ಬಹಳ ಸಂಕಟವನ್ನು ಅನುಭವಿಸುವನೆಂತಲೂ ಜನರು ಆತನನ್ನು ಹೀನೈಸುವರೆಂತಲೂ ಪವಿತ್ರಗ್ರಂಥವು ಏಕೆ ಹೇಳುತ್ತದೆ? 13 ಎಲೀಯನು ಈಗಾಗಲೇ ಬಂದಿದ್ದಾನೆಂದು ನಾನು ನಿಮಗೆ ಹೇಳುತ್ತೇನೆ ಮತ್ತು ಜನರು ತಮ್ಮ ಮನಸ್ಸಿಗೆ ಬಂದಂತೆ ಅವನಿಗೆ ಕೇಡನ್ನು ಮಾಡಿದರು. ಅವನಿಗೆ ಹೀಗಾಗುವುದೆಂದು ಪವಿತ್ರಗ್ರಂಥದಲ್ಲಿ ಮೊದಲೇ ಬರೆದಿತ್ತು” ಎಂದು ಉತ್ತರಿಸಿದನು.
ಯೇಸುವಿನಿಂದ ಕಾಯಿಲೆ ಹುಡುಗನಿಗೆ ಸ್ವಸ್ಥತೆ
(ಮತ್ತಾಯ 17:14-20; ಲೂಕ 9:37-43)
14 ನಂತರ ಯೇಸು, ಪೇತ್ರ, ಯಾಕೋಬ ಮತ್ತು ಯೋಹಾನ ಇತರ ಶಿಷ್ಯರ ಬಳಿಗೆ ಹೋದರು. ಆ ಶಿಷ್ಯರ ಸುತ್ತಲೂ ಅನೇಕ ಜನರು ನೆರೆದಿದ್ದರು. ಧರ್ಮೋಪದೇಶಕರು ಅವರೊಡನೆ ವಾದ ಮಾಡುತ್ತಾ ಇದ್ದರು. 15 ಆ ಜನರು ಯೇಸುವನ್ನು ನೋಡಿದಾಗ ಬಹಳ ಆಶ್ಚರ್ಯಪಟ್ಟು ಆತನನ್ನು ಸ್ವಾಗತಿಸಲು ಆತನ ಬಳಿಗೆ ಬಂದರು.
16 ಯೇಸು, “ನೀವು ಯಾವುದರ ಬಗ್ಗೆ ವಾದಿಸುತ್ತಿದ್ದೀರಿ?” ಎಂದು ಕೇಳಿದನು.
17 ಒಬ್ಬನು, “ಗುರುವೇ, ನನ್ನ ಮಗನಿಗೆ ದೆವ್ವ ಹಿಡಿದಿದ್ದ ಕಾರಣ ನಾನು ಅವನನ್ನು ನಿನ್ನ ಶಿಷ್ಯರ ಬಳಿಗೆ ತಂದೆನು. ಅವನು ಮಾತಾಡಲಾರ. 18 ಆ ದೆವ್ವವು ಅವನ ಮೇಲೆ ಆಕ್ರಮಣ ಮಾಡಿದಾಗಲೆಲ್ಲಾ ಅವನನ್ನು ನೆಲಕ್ಕೆ ಕೆಡವುತ್ತದೆ. ನನ್ನ ಮಗನು ಬಾಯಿಂದ ನೊರೆ ಸುರಿಸುತ್ತಾ ಹಲ್ಲುಗಳನ್ನು ಕಟಕಟನೆ ಕಡಿಯುತ್ತಾನೆ ಮತ್ತು ಬಹಳ ಬಿರುಸಾಗುತ್ತಾನೆ. ಅವನನ್ನು ಆ ದೆವ್ವದಿಂದ ಬಿಡಿಸುವಂತೆ ನಾನು ನಿನ್ನ ಶಿಷ್ಯರನ್ನು ಕೇಳಿಕೊಂಡೆನು. ಆದರೆ ಅವರಿಗೆ ಸಾಧ್ಯವಾಗಲಿಲ್ಲ” ಎಂದು ಹೇಳಿದನು.
19 ಯೇಸು, “ವಿಶ್ವಾಸವಿಲ್ಲದ ಸಂತಾನವೇ, ನಾನು ನಿಮ್ಮೊಡನೆ ಇನ್ನೆಷ್ಟು ಕಾಲ ಇರಲಿ? ಇನ್ನೆಷ್ಟು ಕಾಲ ಸಹಿಸಿಕೊಳ್ಳಲಿ? ಆ ಹುಡುಗನನ್ನು ನನ್ನ ಬಳಿಗೆ ತನ್ನಿರಿ!” ಎಂದು ಉತ್ತರಿಸಿದನು.
20 ಆಗ ಶಿಷ್ಯರು ಆ ಹುಡುಗನನ್ನು ಯೇಸುವಿನ ಬಳಿಗೆ ತಂದರು. ಆ ದೆವ್ವವು ಯೇಸುವನ್ನು ನೋಡಿದ ಕೂಡಲೇ ಆ ಹುಡುಗನ ಮೇಲೆ ಆಕ್ರಮಣ ಮಾಡಿತು. ಆ ಹುಡುಗನು ಕೆಳಗೆ ಬಿದ್ದು, ಬಾಯಿಂದ ನೊರೆಯನ್ನು ಸುರಿಸುತ್ತಾ ಒದ್ದಾಡತೊಡಗಿದನು.
21 ಯೇಸು, “ಎಷ್ಟು ಕಾಲದಿಂದ ಹೀಗಾಗುತ್ತಿದೆ?” ಎಂದು ಆ ಹುಡುಗನ ತಂದೆಯನ್ನು ಕೇಳಿದನು.
ಅದಕ್ಕೆ ತಂದೆಯು, “ಬಾಲ್ಯದಿಂದಲೇ ಹೀಗಾಗುತ್ತಿದೆ. 22 ಆಗಿಂದಾಗ್ಗೆ ದೆವ್ವವು ಅವನನ್ನು ಕೊಲ್ಲಲು ಬೆಂಕಿಯೊಳಗೆ ಅಥವಾ ನೀರಿನೊಳಗೆ ಎಸೆಯುತ್ತದೆ. ನಿನಗೆ ಸಾಧ್ಯವಿರುವುದಾದರೆ, ದಯವಿಟ್ಟು ನಮ್ಮ ಮೇಲೆ ಕರುಣೆಯಿಟ್ಟು ಸಹಾಯಮಾಡು” ಎಂದು ಉತ್ತರಿಸಿದನು.
23 ಅದಕ್ಕೆ ಯೇಸು, “‘ನಿನಗೆ ಸಾಧ್ಯವಿರುವುದಾದರೆ’ ಎಂದು ನೀನು ಹೇಳುವುದೇಕೆ? ನಂಬಿಕೆಯಿಡುವ ವ್ಯಕ್ತಿಗೆ ಎಲ್ಲವೂ ಸಾಧ್ಯ” ಎಂದು ಹೇಳಿದನು.
24 ಆ ಹುಡುಗನ ತಂದೆಯು ಸಂತೋಷದಿಂದ, “ನಾನು ನಂಬುತ್ತೇನೆ. ಇನ್ನೂ ಹೆಚ್ಚಾಗಿ ನಂಬಲು ನನಗೆ ಸಹಾಯ ಮಾಡು” ಎಂದನು.
25 ಅಲ್ಲಿ ನಡೆಯುತ್ತಿರುವುದನ್ನು ನೋಡಲು ಜನರೆಲ್ಲರೂ ಓಡಿಬರುತ್ತಿರುವುದನ್ನು ಕಂಡ ಯೇಸು, ಆ ದೆವ್ವಕ್ಕೆ, “ಎಲೈ ಕಿವುಡು ಮೂಕ ದೆವ್ವವೇ, ಈ ಹುಡುಗನಿಂದ ಹೊರಗೆ ಬರುವಂತೆಯೂ ಇವನೊಳಗೆ ಇನ್ನೆಂದಿಗೂ ಪ್ರವೇಶಿಸದಂತೆಯೂ ನಾನು ನಿನಗೆ ಆಜ್ಞಾಪಿಸುತ್ತೇನೆ!” ಎಂದನು.
26 ಆ ದೆವ್ವವು ಅರಚಿತು. ಅದು ಆ ಹುಡುಗನನ್ನು ಮತ್ತೆ ನೆಲದ ಮೇಲೆ ಬೀಳಿಸಿ, ಒದ್ದಾಡಿಸಿ ಹೊರಬಂದಿತು. ಆ ಹುಡುಗನು ಸತ್ತವನಂತೆ ಬಿದ್ದಿದ್ದನು. ಅನೇಕ ಜನರು, “ಅವನು ಸತ್ತುಹೋದನು” ಎಂದರು. 27 ಆದರೆ ಯೇಸು ಆ ಹುಡುಗನ ಕೈ ಹಿಡಿದೆತ್ತಿ, ಎದ್ದುನಿಲ್ಲಲು ಅವನಿಗೆ ಸಹಾಯಮಾಡಿದನು.
28 ಯೇಸು ಮನೆಯೊಳಗೆ ಹೋದ ಮೇಲೆ ಆತನ ಶಿಷ್ಯರು ಪ್ರತ್ಯೇಕವಾದ ಸ್ಥಳದಲ್ಲಿ ಆತನಿಗೆ, “ಆ ದೆವ್ವವನ್ನು ಬಿಡಿಸಲು ನಮಗೆ ಏಕೆ ಸಾಧ್ಯವಾಗಲಿಲ್ಲ?” ಎಂದು ಕೇಳಿದರು.
29 ಯೇಸು, “ಈ ಬಗೆಯ ದೆವ್ವವನ್ನು ಪ್ರಾರ್ಥನೆಯಿಂದ ಮಾತ್ರ ಬಿಡಿಸಲು ಸಾಧ್ಯ” ಎಂದು ಉತ್ತರಿಸಿದನು.
Kannada Holy Bible: Easy-to-Read Version. All rights reserved. © 1997 Bible League International