Revised Common Lectionary (Semicontinuous)
ಸ್ತುತಿಗೀತೆ. ರಚನೆಗಾರ: ದಾವೀದ.
138 ಯೆಹೋವನೇ, ಪೂರ್ಣಹೃದಯದಿಂದ ನಿನ್ನನ್ನು ಕೊಂಡಾಡುವೆನು.
ನಿನ್ನ ಹಾಡುಗಳನ್ನು ಎಲ್ಲಾ ದೇವರುಗಳ ಎದುರಿನಲ್ಲಿ ಹಾಡುವೆನು.
2 ನಾನು ನಿನ್ನ ಪರಿಶುದ್ಧಾಲಯದ ಕಡೆಗೆ ಅಡ್ಡಬೀಳುವೆನು.
ನಾನು ನಿನ್ನ ಹೆಸರನ್ನೂ ನಿನ್ನ ಪ್ರೀತಿಯನ್ನೂ ನಿನ್ನ ನಂಬಿಗಸ್ತಿಕೆಯನ್ನೂ ಕೊಂಡಾಡುವೆನು.
ನೀನು ನಿನ್ನ ವಾಕ್ಯವನ್ನು ನೆರವೇರಿಸಿ ನಿನ್ನ ನಾಮಮಹತ್ವವನ್ನು ಹೆಚ್ಚಿಸಿರುವೆ.
3 ನಾನು ಸಹಾಯಕ್ಕಾಗಿ ನಿನಗೆ ಮೊರೆಯಿಟ್ಟಾಗ
ನೀನು ನನಗೆ ಸದುತ್ತರವನ್ನು ದಯಪಾಲಿಸಿದೆ; ನನಗೆ ಬಲವನ್ನು ಅನುಗ್ರಹಿಸಿದೆ.
4 ಯೆಹೋವನೇ, ಭೂರಾಜರುಗಳೆಲ್ಲಾ ನಿನ್ನ ನುಡಿಗಳನ್ನು ಕೇಳಿ
ನಿನ್ನನ್ನು ಕೊಂಡಾಡಬೇಕೆಂಬುದು ನನ್ನ ಅಪೇಕ್ಷೆ.
5 ಅವರೆಲ್ಲರೂ ಯೆಹೋವನ ಮಾರ್ಗವನ್ನು ಹಾಡಿ ಕೊಂಡಾಡುವರು;
ಯಾಕೆಂದರೆ ಯೆಹೋವನ ಮಹಿಮೆಯು ಮಹತ್ವವಾದದ್ದು.
6 ಯೆಹೋವನೇ ಮಹೋನ್ನತನು.
ಆದರೂ ಆತನು ದೀನರಿಗೋಸ್ಕರ ಚಿಂತಿಸುವನು.
ಗರ್ವಿಷ್ಠರ ಕಾರ್ಯಗಳು ಆತನಿಗೆ ಗೊತ್ತಿವೆ.
ಆದರೆ ಆತನು ಅವರಿಗೆ ದೂರವಾಗಿಯೇ ಇರುತ್ತಾನೆ.
7 ಯೆಹೋವನೇ, ನಾನು ಆಪತ್ತಿನಲ್ಲಿದ್ದರೆ, ನನ್ನ ಪ್ರಾಣವನ್ನು ಕಾಪಾಡು.
ನನ್ನ ವೈರಿಗಳು ನನ್ನ ಮೇಲೆ ಕೋಪಗೊಂಡಿದ್ದರೆ, ನನ್ನನ್ನು ಅವರಿಂದ ರಕ್ಷಿಸು.
8 ಯೆಹೋವನೇ, ನಿನ್ನ ವಾಗ್ದಾನಗಳನ್ನು ನೆರವೇರಿಸು.
ಯೆಹೋವನೇ, ನಿನ್ನ ಪ್ರೀತಿಯು ಶಾಶ್ವತವಾದದ್ದು.
ನಮ್ಮನ್ನು ಸೃಷ್ಟಿಸಿದಾತನು ನೀನೇ. ನಮ್ಮನ್ನು ಕೈಬಿಡಬೇಡ!
4 ಸಮುವೇಲನ ಸುದ್ದಿಯು ಇಸ್ರೇಲಿನಲ್ಲೆಲ್ಲಾ ಹರಡಿತು. ಏಲಿಯು ಬಹು ವೃದ್ಧನಾದನು. ಅವನ ಮಕ್ಕಳು ಯೆಹೋವನ ಸನ್ನಿಧಿಯಲ್ಲಿ ಕೆಟ್ಟಕಾರ್ಯಗಳನ್ನು ನಡೆಸುತ್ತಲೇ ಇದ್ದರು.
ಇಸ್ರೇಲರನ್ನು ಫಿಲಿಷ್ಟಿಯರು ಸೋಲಿಸುವರು
ಆ ಕಾಲದಲ್ಲಿ ಫಿಲಿಷ್ಟಿಯರು ಇಸ್ರೇಲರಿಗೆ ವಿರುದ್ಧವಾಗಿ ಯುದ್ಧಮಾಡಲು ಒಟ್ಟುಗೂಡಿದರು. ಇಸ್ರೇಲರು ಫಿಲಿಷ್ಟಿಯರಿಗೆ ವಿರುದ್ಧವಾಗಿ ಹೊರಟು ಎಬೆನೆಜೆರಿನಲ್ಲಿ ಪಾಳೆಯ ಮಾಡಿಕೊಂಡರು; ಫಿಲಿಷ್ಟಿಯರು ಅಫೇಕಿನಲ್ಲಿ ಪಾಳೆಯ ಮಾಡಿಕೊಂಡರು. 2 ಫಿಲಿಷ್ಟಿಯರು ಇಸ್ರೇಲರ ಮೇಲೆ ಆಕ್ರಮಣಮಾಡಲು ಸಿದ್ಧರಾದರು. ಹೋರಾಟ ಆರಂಭವಾಯಿತು.
ಫಿಲಿಷ್ಟಿಯರು ಇಸ್ರೇಲರನ್ನು ಸೋಲಿಸಿ ಇಸ್ರೇಲಿನ ಸೈನ್ಯದಲ್ಲಿ ನಾಲ್ಕು ಸಾವಿರ ಸೈನಿಕರನ್ನು ಸಂಹರಿಸಿದರು. 3 ಇಸ್ರೇಲರ ಸೈನಿಕರು ಪಾಳೆಯಕ್ಕೆ ಹಿಂದಿರುಗಿದರು. ಇಸ್ರೇಲರ ಹಿರಿಯರು, “ಫಿಲಿಷ್ಟಿಯರು ನಮ್ಮನ್ನು ಸೋಲಿಸಲು ಯೆಹೋವನು ಅವಕಾಶ ನೀಡಿದ್ದೇಕೆ? ಶೀಲೋವಿನಿಂದ ಯೆಹೋವನ ಪವಿತ್ರ ಒಡಂಬಡಿಕೆಯ ಪೆಟ್ಟಿಗೆಯನ್ನು ತರಿಸೋಣ. ಈ ರೀತಿ ದೇವರು ನಮ್ಮೊಂದಿಗೆ ಯುದ್ಧರಂಗಕ್ಕೆ ಬರಲಿ. ಆತನು ನಮ್ಮನ್ನು ಶತ್ರುಗಳಿಂದ ರಕ್ಷಿಸುತ್ತಾನೆ” ಎಂದು ಹೇಳಿದರು.
4 ಆ ಕಾರಣಕ್ಕಾಗಿ ಶೀಲೋವಿಗೆ ಜನರನ್ನು ಕಳುಹಿಸಿದರು. ಸರ್ವಶಕ್ತನಾದ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ಜನರು ತಂದರು. ಪೆಟ್ಟಿಗೆಯ ಮೇಲ್ಭಾಗದಲ್ಲಿ ಕೆರೂಬಿಗಳಿದ್ದವು. ಅವುಗಳು ಯೆಹೋವನು ಕುಳಿತುಕೊಳ್ಳುವ ಸಿಂಹಾಸನದಂತಿದ್ದವು; ಏಲಿಯ ಮಕ್ಕಳಾದ ಹೊಫ್ನಿ ಮತ್ತು ಫೀನೆಹಾಸರು ಪೆಟ್ಟಿಗೆಯ ಜೊತೆಯಲ್ಲಿ ಬಂದರು.
5 ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯು ಪಾಳೆಯಕ್ಕೆ ಬಂದಾಗ ಇಸ್ರೇಲರೆಲ್ಲರು ಆರ್ಭಟಿಸಿದರು. ಅವರ ಆರ್ಭಟವು ನೆಲವನ್ನು ನಡುಗಿಸಿತು. 6 ಇಸ್ರೇಲರ ಆರ್ಭಟವು ಫಿಲಿಷ್ಟಿಯರಿಗೆ ಕೇಳಿಸಿತು. “ಇಬ್ರಿಯರ ಪಾಳೆಯದಲ್ಲಿ ಆಗುತ್ತಿರುವ ಆರ್ಭಟಕ್ಕೆ ಕಾರಣವೇನು?” ಎಂದು ಅವರು ಕೇಳಿದರು.
ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಇಸ್ರೇಲರ ಪಾಳೆಯಕ್ಕೆ ತಂದಿರುವುದೇ ಅವರ ಆರ್ಭಟಕ್ಕೆ ಕಾರಣವೆಂದು ಫಿಲಿಷ್ಟಿಯರಿಗೆ ತಿಳಿದು ಬಂದಿತು. 7 ಫಿಲಿಷ್ಟಿಯರು ಭಯಗೊಂಡು, “ದೇವರುಗಳೇ ಅವರ ಪಾಳೆಯಕ್ಕೆ ಬಂದಿದ್ದಾರೆ! ನಾವು ತೊಂದರೆಯಲ್ಲಿದ್ದೇವೆ. ಹಿಂದೆಂದೂ ಈ ರೀತಿ ಆಗಿರಲಿಲ್ಲ! 8 ಅಯ್ಯೋ, ಮಹಾಶಕ್ತಿಶಾಲಿಗಳಾದ ಈ ದೇವರುಗಳಿಂದ ನಮ್ಮನ್ನು ರಕ್ಷಿಸುವವರು ಯಾರು! ಈಜಿಪ್ಟಿನವರಿಗೆ ಕಾಯಿಲೆಗಳನ್ನು ಬರಮಾಡಿದ ದೇವರುಗಳು ಇವರೇ ಅಲ್ಲವೇ. 9 ಫಿಲಿಷ್ಟಿಯರೇ, ಧೈರ್ಯದಿಂದಿರಿ! ಶೂರರಂತೆ ಹೋರಾಡಿ! ಇಬ್ರಿಯರು ಪುರಾತನ ಕಾಲದಲ್ಲಿ ನಮಗೆ ಗುಲಾಮರಾಗಿದ್ದರು. ಆದಕಾರಣ ಶೂರರಂತೆ ಹೋರಾಡಿರಿ, ಇಲ್ಲವಾದರೆ ನೀವು ಅವರಿಗೆ ಗುಲಾಮರಾಗುವಿರಿ!” ಎಂದು ಹೇಳಿದರು.
10 ಫಿಲಿಷ್ಟಿಯರು ಶೌರ್ಯದಿಂದ ಹೋರಾಡಿ ಇಸ್ರೇಲರನ್ನು ಸೋಲಿಸಿದರು. ಇಸ್ರೇಲರ ಪ್ರತಿಯೊಬ್ಬ ಸೈನಿಕನೂ ತನ್ನ ಪಾಳೆಯಕ್ಕೆ ಓಡಿಹೋದನು. ಇಸ್ರೇಲರಿಗೆ ಭೀಕರ ಸೋಲಾಯಿತು. ಮೂವತ್ತು ಸಾವಿರ ಇಸ್ರೇಲರು ಹತರಾದರು. 11 ದೇವರ ಪವಿತ್ರ ಪೆಟ್ಟಿಗೆಯು ಫಿಲಿಷ್ಟಿಯರ ವಶವಾಯಿತು. ಏಲಿಯ ಮಕ್ಕಳಾದ ಹೊಫ್ನಿ ಮತ್ತು ಫೀನೆಹಾಸರನ್ನು ಅವರು ಕೊಂದರು.
12 ಆ ದಿನದಂದು ಬೆನ್ಯಾಮೀನ್ ಕುಲದ ಒಬ್ಬನು ದುಃಖದಿಂದ ಬಟ್ಟೆಗಳನ್ನು ಹರಿದುಕೊಂಡು, ತಲೆಯ ಮೇಲೆ ಧೂಳನ್ನು ಹಾಕಿಕೊಂಡು, ರಣರಂಗದಿಂದ ತಪ್ಪಿಸಿಕೊಂಡು ಓಡಿಹೋದನು. 13 ಅವನು ಶೀಲೋವನ್ನು ತಲುಪಿದಾಗ ಏಲಿಯು ಪೀಠದ ಮೇಲೆ ಕುಳಿತಿದ್ದನು. ದೇವರ ಪವಿತ್ರ ಪೆಟ್ಟಿಗೆಗೆ ಏನಾಯಿತೋ ಎಂದು ಚಿಂತಿಸುತ್ತಾ ಏಲಿಯು ನಗರದ್ವಾರದಲ್ಲಿ ಕುರ್ಚಿಯ ಮೇಲೆ ಕಾಯುತ್ತಾ ಕುಳಿತಿದ್ದನು. ಆಗ ಬೆನ್ಯಾಮೀನ್ಯನು ಶೀಲೋವನ್ನು ಪ್ರವೇಶಿಸಿ ಅಲ್ಲಿನ ಕೆಟ್ಟ ಸುದ್ದಿಯನ್ನು ಹೇಳಿದನು. ನಗರದ ಜನರೆಲ್ಲರು ಜೋರಾಗಿ ಗೋಳಾಡಿದರು. 14-15 ಏಲಿಯು ತೊಂಭತ್ತೆಂಟು ವರ್ಷದ ವೃದ್ಧನಾಗಿದ್ದನು; ಅವನಿಗೆ ಕಣ್ಣು ಕಾಣುತ್ತಿರಲಿಲ್ಲ. ಅವನು ಅಳುವಿನ ಧ್ವನಿಯನ್ನು ಕೇಳಿ, “ಏಕಿಷ್ಟು ಗದ್ದಲ?” ಎಂದು ಕೇಳಿದನು.
16 ಆ ಬೆನ್ಯಾಮೀನ್ಯನು ಏಲಿಯ ಬಳಿಗೆ ಹೋಗಿ, “ನಾನು ಈ ದಿನವೇ ರಣರಂಗದಿಂದ ಓಡಿಬಂದೆನು” ಎಂದು ಹೇಳಿದನು.
ಏಲಿಯು, “ನನ್ನ ಮಗನೇ ಏನಾಯಿತು?” ಎಂದು ಕೇಳಿದನು.
17 ಆ ಬೆನ್ಯಾಮೀನ್ಯನು, “ಇಸ್ರೇಲರು ಫಿಲಿಷ್ಟಿಯರಿಂದ ಸೋತು, ಹಿಮ್ಮೆಟ್ಟಿದರು. ಇಸ್ರೇಲರ ಪಡೆಯು ಅನೇಕ ಸೈನಿಕರನ್ನು ಕಳೆದುಕೊಂಡಿತು. ನಿನ್ನ ಮಕ್ಕಳಿಬ್ಬರೂ ಸತ್ತರು. ಫಿಲಿಷ್ಟಿಯರು ಯೆಹೋವನ ಪವಿತ್ರ ಪೆಟ್ಟಿಗೆಯನ್ನು ತೆಗೆದುಕೊಂಡು ಹೋದರು” ಎಂದು ಹೇಳಿದನು.
18 ಯೆಹೋವನ ಪವಿತ್ರ ಪೆಟ್ಟಿಗೆಯ ವಿಚಾರವನ್ನು ಬೆನ್ಯಾಮೀನ್ಯನು ತಿಳಿಸಿದಾಗ, ಏಲಿಯು ಕುರ್ಚಿಯಿಂದ ಹಿಂದಕ್ಕೆ ಬಾಗಿಲಿನ ಸಮೀಪದಲ್ಲಿ ಬಿದ್ದನು; ಅವನ ಕುತ್ತಿಗೆಯು ಮುರಿದು ಬಿತ್ತು. ಏಲಿಯು ಮುದುಕನೂ ಬೊಜ್ಜುಳ್ಳವನೂ ಆಗಿದ್ದುದರಿಂದ ಸತ್ತನು. ಅವನು ಇಸ್ರೇಲರನ್ನು ನಲವತ್ತು ವರ್ಷ ನಡೆಸಿದನು.
ವೈಭವವು ಇಲ್ಲವಾಯಿತು
19 ಏಲಿಯ ಸೊಸೆ ಅಂದರೆ ಫೀನೆಹಾಸನ ಹೆಂಡತಿಯು ಗರ್ಭಿಣಿಯಾಗಿದ್ದಳು. ಹೆರಿಗೆಯ ಸಮಯ ಸಮೀಪಿಸಿತ್ತು. ಯೆಹೋವನ ಪವಿತ್ರ ಪೆಟ್ಟಿಗೆಯು ಶತ್ರುಗಳ ವಶವಾದದ್ದನ್ನೂ ತನ್ನ ಮಾವನಾದ ಏಲಿಯು ಸತ್ತದ್ದನ್ನೂ ಗಂಡನಾದ ಫೀನೆಹಾಸನು ಸತ್ತ ಸುದ್ದಿಯನ್ನೂ ಅವಳು ಕೇಳಿದಳು. ಈ ಸುದ್ದಿಯನ್ನು ಕೇಳಿದ ತಕ್ಷಣ ಪ್ರಸವವೇದನೆಯಾಗಿ ಮಗುವನ್ನು ಹೆತ್ತಳು. 20 ಅವಳಿಗೆ ಸಹಾಯ ಮಾಡುತ್ತಿದ್ದ ಸ್ತ್ರೀಯರು, “ಚಿಂತಿಸಬೇಡ. ನೀನು ಗಂಡುಮಗುವಿಗೆ ಜನ್ಮ ನೀಡಿರುವೆ” ಎಂದು ಹೇಳಿದರು.
ಆದರೆ ಏಲಿಯ ಸೊಸೆಯು ಅವರ ಮಾತಿಗೆ ಉತ್ತರಿಸಲೂ ಇಲ್ಲ, ಲಕ್ಷ್ಯ ಕೊಡಲೂ ಇಲ್ಲ. 21 ಏಲಿಯ ಸೊಸೆಯು, “ಇಸ್ರೇಲರ ವೈಭವವು ಇಲ್ಲವಾಯಿತು” ಎಂದು ಹೇಳಿದಳು. ಅವಳು ತನ್ನ ಮಗುವಿಗೆ ಈಕಾಬೋದ್ ಎಂಬ ಹೆಸರಿಟ್ಟು ಮೃತಳಾದಳು. ಯೆಹೋವನ ಪವಿತ್ರ ಪೆಟ್ಟಿಗೆಯು ಶತ್ರುವಶವಾದದ್ದರಿಂದ ಮಾವನು ಮತ್ತು ಗಂಡನು ಸತ್ತದ್ದರಿಂದ, ಆಕೆ ತನ್ನ ಮಗನಿಗೆ ಈಕಾಬೋದ್ ಎಂದು ಹೆಸರಿಟ್ಟಳು. 22 ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಫಿಲಿಷ್ಟಿಯರು ತೆಗೆದುಕೊಂಡು ಹೋದದ್ದರಿಂದ ಆಕೆಯು, “ಇಸ್ರೇಲರ ವೈಭವ ಇಲ್ಲವಾಯಿತು” ಎಂದು ಹೇಳಿದಳು.
ದೇವರ ವರಗಳಿಗೆ ಉತ್ತಮ ಕಾರ್ಯ ನಿರ್ವಾಹಕರಾಗಿರಿ
7 ಎಲ್ಲಾ ಸಂಗತಿಗಳೂ ಅಂತ್ಯಗೊಳ್ಳುವ ಕಾಲ ಸಮೀಪಿಸಿದೆ. ನೀವು ವಿವೇಕಿಗಳಾಗಿದ್ದು ನಿಮ್ಮನ್ನು ಹತೋಟಿಯಲ್ಲಿಟ್ಟು ಕೊಳ್ಳಿರಿ. ನೀವು ಪ್ರಾರ್ಥಿಸಲು ಇದು ಸಹಾಯ ಮಾಡುತ್ತದೆ. 8 ನೀವು ಒಬ್ಬರನ್ನೊಬ್ಬರು ಎಡಬಿಡದೆ ಪ್ರೀತಿಸುವುದು ಬಹಳ ಮುಖ್ಯವಾದುದು. ಪ್ರೀತಿಯು ಅನೇಕ ಪಾಪಗಳನ್ನು ಅಡಗಿಸಿಬಿಡುತ್ತದೆ. 9 ಗುಣುಗುಟ್ಟದೆ ಅತಿಥಿಸತ್ಕಾರ ಮಾಡಿರಿ. 10 ನಿಮ್ಮಲ್ಲಿ ಪ್ರತಿಯೊಬ್ಬರೂ ದೇವರಿಂದ ಆತ್ಮಿಕ ವರವನ್ನು ಪಡೆದುಕೊಂಡಿರಿ. ದೇವರು ನಿಮಗೆ ಅನೇಕ ವಿಧಗಳಲ್ಲಿ ತನ್ನ ಕೃಪೆಯನ್ನು ದಯಪಾಲಿಸಿರುವನು. ನೀವು ದೇವರ ವರಗಳನ್ನು ಉಪಯೋಗಿಸುವ ಜವಾಬ್ದಾರಿಯುತರಾದ ಸೇವಕರಾಗಿದ್ದೀರಿ. ಆದ್ದರಿಂದ ಒಳ್ಳೆಯ ಸೇವಕರಾಗಿರಿ; ಪರಸ್ಪರ ಸೇವೆ ಮಾಡಲು ನಿಮ್ಮ ವರಗಳನ್ನು ಉಪಯೋಗಿಸಿರಿ. 11 ಬೋಧಿಸುವವನು ದೇವರ ನುಡಿಗಳನ್ನೇ ಬೋಧಿಸಲಿ. ಸೇವೆ ಮಾಡುವವನು ದೇವರೇ ದಯಪಾಲಿಸಿದ ಶಕ್ತಿಯಿಂದ ಸೇವೆ ಮಾಡಲಿ. ನೀವು ಹೀಗೆ ಮಾಡಿದರೆ, ನೀವು ಮಾಡುವ ಪ್ರತಿಯೊಂದರಲ್ಲೂ ಯೇಸು ಕ್ರಿಸ್ತನ ಮೂಲಕ ದೇವರು ಸ್ತುತಿಸಲ್ಪಡುವನು. ಅಧಿಕಾರವೂ ಮಹಿಮೆಯೂ ಯುಗಯುಗಾಂತರಗಳಲ್ಲಿ ಆತನಿಗೆ ಸೇರಿದವುಗಳಾಗಿವೆ. ಆಮೆನ್.
ಕ್ರೈಸ್ತನಾಗಿ ಸಂಕಟಪಡುವುದು
12 ನನ್ನ ಸ್ನೇಹಿತರೇ, ನೀವು ಈಗ ಅನುಭವಿಸುತ್ತಿರುವ ಸಂಕಟಗಳ ವಿಷಯದಲ್ಲಿ ಆಶ್ಚರ್ಯಪಡದಿರಿ. ಅವು ನಿಮ್ಮ ನಂಬಿಕೆಯನ್ನು ಪರೀಕ್ಷಿಸುತ್ತಿವೆ. ವಿಪರೀತವಾದದ್ದು ನಿಮಗೆ ಸಂಭವಿಸುತ್ತಿದೆಯೆಂದು ಯೋಚಿಸದಿರಿ. 13 ಆದರೆ ನೀವು ಕ್ರಿಸ್ತನ ಸಂಕಟಗಳನ್ನು ಹಂಚಿಕೊಳ್ಳುತ್ತಿರುವುದರಿಂದ ಸಂತೋಷಿಸಿರಿ. ಕ್ರಿಸ್ತನು ತನ್ನ ಮಹಿಮೆಯನ್ನು ತೋರ್ಪಡಿಸುವಾಗ ನೀವು ಸಂತೋಷಪಡುವಿರಿ ಮತ್ತು ಆನಂದಿಸುವಿರಿ. 14 ನೀವು ಕ್ರಿಸ್ತನನ್ನು ಅನುಸರಿಸುತ್ತಿರುವುದರ ನಿಮಿತ್ತವಾಗಿ ನಿಮ್ಮ ಬಗ್ಗೆ ಜನರು ಕೆಟ್ಟದ್ದನ್ನು ನುಡಿದರೆ ನೀವು ಭಾಗ್ಯವಂತರಾಗಿದ್ದೀರಿ. ತೇಜೋಮಯವಾದ ಆತ್ಮನು ನಿಮ್ಮಲ್ಲಿ ನೆಲೆಗೊಂಡಿದ್ದಾನೆ. ಆತನು ದೇವರಾತ್ಮನಾಗಿದ್ದಾನೆ. 15 ನೀವು ಕೆಡುಕರಾಗಬಾರದು ಅಂದರೆ ಕೊಲೆಗಾರರಾಗಬಾರದು, ಕಳ್ಳರಾಗಬಾರದು ಮತ್ತು ಇತರರಿಗೆ ತೊಂದರೆ ಕೊಡಬಾರದು. ಇಂಥವುಗಳನ್ನು ಮಾಡುವವನು ಸಂಕಟಕ್ಕೆ ಒಳಗಾಗುವನು. ನಿಮ್ಮಲ್ಲಿ ಯಾರೂ ಆ ರೀತಿಯ ಸಂಕಟಕ್ಕೆ ಒಳಗಾಗಬಾರದು. 16 ನೀವು ಕ್ರೈಸ್ತರಾಗಿರುವುದರಿಂದ ಸಂಕಟಪಟ್ಟರೆ, ನಾಚಿಕೊಳ್ಳಬಾರದು. ಆ (ಕ್ರೈಸ್ತ) ಹೆಸರಿನ ನಿಮಿತ್ತ ನೀವು ದೇವರಿಗೆ ಸ್ತೋತ್ರ ಮಾಡಬೇಕು. 17 ನಿಮ್ಮ ನ್ಯಾಯನಿರ್ಣಯದ ಕಾಲ ಬಂದಿದೆ. ಅದು ದೇವರ ಕುಟುಂಬದಿಂದಲೇ ಆರಂಭವಾಗುವುದು. ನಮ್ಮಲ್ಲಿಯೇ ಅದು ಆರಂಭವಾದರೆ, ದೇವರ ಸುವಾರ್ತೆಗೆ ವಿಧೇಯರಾಗದ ಜನರಿಗೆ ಏನಾಗಬಹುದು?
18 “ನೀತಿವಂತನೇ ರಕ್ಷಣೆ ಹೊಂದಲು ಕಷ್ಟವಾದರೆ,
ಭಕ್ತಿಹೀನನ ಮತ್ತು ಪಾಪಿಷ್ಠನ ಗತಿಯೇನು?”(A)
19 ಆದ್ದರಿಂದ ದೇವರ ಅಪೇಕ್ಷೆಯಂತೆ ಸಂಕಟಪಡುವವರು ತಮ್ಮ ಜೀವಾತ್ಮಗಳನ್ನು ಆತನಿಗೆ ಒಪ್ಪಿಸಿಕೊಡಬೇಕು. ಅವರನ್ನು ಸೃಷ್ಟಿಸಿದಾತನು ದೇವರೇ. ಆದ್ದರಿಂದ ಅವರು ಆತನಲ್ಲಿ ಭರವಸವಿಡತಕ್ಕದ್ದು. ಹೀಗಿರಲಾಗಿ ಅವರು ಒಳ್ಳೆಯದನ್ನು ಮಾಡುತ್ತಲೇ ಇರಬೇಕು.
Kannada Holy Bible: Easy-to-Read Version. All rights reserved. © 1997 Bible League International