Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 84:1-7

ರಚನೆಗಾರರು: ಕೋರಹೀಯರು.

84 ಸೇನಾಧೀಶ್ವರನಾದ ಯೆಹೋವನೇ, ನಿನ್ನ ಆಲಯವು ಎಷ್ಟೋ ರಮ್ಯವಾಗಿದೆ.
ಯೆಹೋವನೇ, ನಿನ್ನ ಆಲಯದೊಳಗೆ ಪ್ರವೇಶಿಸಲು ಕಾತುರಗೊಂಡಿರುವೆ.
ನನ್ನ ಅಂಗಾಂಗಗಳೆಲ್ಲಾ ಚೈತನ್ಯಸ್ವರೂಪನಾದ ದೇವರೊಂದಿಗೆ ಇರಲು ಬಯಸುತ್ತಿವೆ.
ಸೇನಾಧೀಶ್ವರನಾದ ಯೆಹೋವನೇ, ನನ್ನ ರಾಜನೇ,
    ನನ್ನ ದೇವರೇ, ಗುಬ್ಬಚ್ಚಿಗಳಿಗೂ ಪಾರಿವಾಳಗಳಿಗೂ ನಿನ್ನ ಆಲಯದಲ್ಲಿ ಗೂಡುಗಳಿವೆ.
ನಿನ್ನ ಯಜ್ಞವೇದಿಕೆಯ ಸಮೀಪದಲ್ಲಿಯೇ
    ಗೂಡು ಕಟ್ಟಿಕೊಂಡು ಮರಿ ಮಾಡುತ್ತವೆ.
ನಿನ್ನ ಆಲಯದಲ್ಲಿ ವಾಸಿಸುವವರು ಭಾಗ್ಯವಂತರೇ ಸರಿ!
    ಅವರು ನಿನ್ನನ್ನು ನಿತ್ಯವೂ ಸ್ತುತಿಸುತ್ತಿರುವರು.
ನಿನ್ನ ಶಕ್ತಿಯನ್ನೇ ಆಶ್ರಯಿಸಿಕೊಂಡು ಚೀಯೋನ್ ಪರ್ವತಕ್ಕೆ
    ಯಾತ್ರಿಕರಾಗಿ ಬರಲು ಬಯಸುವವರು ಎಷ್ಟೋ ಭಾಗ್ಯವಂತರು.
ಒರತೆಯನ್ನಾಗಿ ಮಾಡಿರುವ ಬಾಕಾ ಕಣಿವೆಯ ಮೂಲಕ ಅವರು ಪ್ರಯಾಣಮಾಡುವರು.
    ಮುಂಗಾರು ಮಳೆಯು ಅದನ್ನು ನೀರಿನ ತೊರೆಗಳಿಂದ ಸಮೃದ್ಧಿಗೊಳಿಸುವುದು.
ಜನರು ದೇವರನ್ನು ಸಂದರ್ಶಿಸಲು
    ಊರಿಂದ ಊರಿಗೆ ಪ್ರಯಾಣ ಮಾಡುತ್ತಾ ಚೀಯೋನಿಗೆ ಬರುವರು.

ಯೆರೆಮೀಯ 9:1-16

ನನ್ನ ತಲೆಯಲ್ಲೆಲ್ಲ ನೀರು ತುಂಬಿಕೊಂಡಿದ್ದು,
    ನನ್ನ ಕಣ್ಣುಗಳು ನೀರಿನ ಬುಗ್ಗೆಗಳಾಗಿದ್ದರೆ,
    ನಾಶಮಾಡಲ್ಪಟ್ಟ ನನ್ನ ಜನರಿಗಾಗಿ ಹಗಲಿರುಳು ಗೋಳಾಡುತ್ತಿದ್ದೆ.

ಮರಳುಗಾಡಿನಲ್ಲಿ ನನಗೊಂದು ಸ್ಥಳವಿದ್ದಿದ್ದರೆ,
    ಪ್ರಯಾಣಿಕರು ರಾತ್ರಿಯಲ್ಲಿ ತಂಗುವ ಮನೆ ಇದ್ದಿದ್ದರೆ,
ನಾನು ನನ್ನ ಜನರನ್ನು ಅಲ್ಲಿ ಬಿಟ್ಟು,
    ಅವರಿಂದ ದೂರ ಹೋಗಬಹುದಾಗಿತ್ತು.
ಏಕೆಂದರೆ ಅವರೆಲ್ಲರೂ ದೇವರಿಗೆ ದ್ರೋಹ ಮಾಡುತ್ತಿದ್ದಾರೆ,
    ಅವರೆಲ್ಲರೂ ಆತನಿಗೆ ವಿರೋಧವಾಗಿ ತಿರುಗಿಬಿದ್ದಿದ್ದಾರೆ.

“ಅವರು ತಮ್ಮ ನಾಲಿಗೆಗಳನ್ನು ಬಿಲ್ಲಿನಂತೆ ಉಪಯೋಗಿಸುತ್ತಿದ್ದಾರೆ.
    ಅವರ ಬಾಯಿಂದ ಬಾಣಗಳಂತೆ ಸುಳ್ಳುಗಳು ಬರುತ್ತಿವೆ.
ಈ ನಾಡಿನಲ್ಲಿ ಸತ್ಯವಲ್ಲ, ‘ಅಸತ್ಯ’ ಪ್ರಬಲವಾಗುತ್ತಿದೆ.
ಅವರು ಒಂದು ಪಾಪದಿಂದ ಮತ್ತೊಂದು ಪಾಪಕ್ಕೆ ಹೋಗುತ್ತಿದ್ದಾರೆ.
    ಅವರು ನನ್ನನ್ನು ಅರಿತಿಲ್ಲ.”
ಯೆಹೋವನು ಈ ಮಾತನ್ನು ಹೇಳಿದನು.

“ನಿಮ್ಮ ನೆರೆಮನೆಯವರ ಬಗ್ಗೆ ಎಚ್ಚರವಹಿಸಿರಿ;
    ನಿಮ್ಮ ಸ್ವಂತ ಸಹೋದರನನ್ನೂ ನಂಬಬೇಡಿ.
ಏಕೆಂದರೆ ಪ್ರತಿಯೊಬ್ಬ ಸಹೋದರನೂ ಮೋಸಗಾರನಾಗಿದ್ದಾನೆ.
    ಪ್ರತಿಯೊಬ್ಬ ನೆರೆಯವನೂ ನಿಮ್ಮ ಮರೆಯಲ್ಲಿ ನಿಮ್ಮನ್ನು ನಿಂದಿಸುತ್ತಾನೆ.
ಪ್ರತಿಯೊಬ್ಬನೂ ತನ್ನ ನೆರೆಯವನಿಗೆ ಸುಳ್ಳು ಹೇಳುತ್ತಾನೆ.
    ಒಬ್ಬನೂ ಸತ್ಯವನ್ನು ನುಡಿಯುವದಿಲ್ಲ.
ಯೆಹೂದದ ಜನರು ತಮ್ಮ ನಾಲಿಗೆಗಳಿಗೆ
    ಸುಳ್ಳು ಹೇಳುವದನ್ನು ಕಲಿಸಿದ್ದಾರೆ.
ಅವರು ಹಿಂತಿರುಗಿ ಬರಲು
    ಆಯಾಸವಾಗುವಷ್ಟು ಪಾಪಗಳನ್ನು ಮಾಡಿದ್ದಾರೆ.
ಒಂದು ದುಷ್ಕೃತ್ಯ ಮತ್ತೊಂದು ದುಷ್ಕೃತ್ಯವನ್ನು ಹಿಂಬಾಲಿಸಿ ಬಂದಿತು.
    ಒಂದು ಸುಳ್ಳು ಇನ್ನೊಂದು ಸುಳ್ಳನ್ನು ಹಿಂಬಾಲಿಸಿತು.
    ಜನರು ನನ್ನನ್ನು ಅರಿತುಕೊಳ್ಳಲಿಲ್ಲ.”
ಯೆಹೋವನು ಆ ಮಾತುಗಳನ್ನು ಹೇಳಿದನು.

ಸರ್ವಶಕ್ತನಾದ ಯೆಹೋವನು ಹೀಗೆನ್ನುವನು:
“ಜನರು ಲೋಹವನ್ನು ಪುಟಕ್ಕಿಟ್ಟು ಪರೀಕ್ಷಿಸುವಂತೆ
ನಾನು ಯೆಹೂದದ ಜನರನ್ನು ಪರೀಕ್ಷಿಸುತ್ತೇನೆ.
    ನನಗೆ ಬೇರೆ ಮಾರ್ಗವೇ ಇಲ್ಲ.
    ನನ್ನ ಜನರು ಪಾಪವನ್ನು ಮಾಡಿದ್ದಾರೆ.
ಯೆಹೂದದ ಜನರ ನಾಲಿಗೆಗಳು ಚೂಪಾದ ಬಾಣಗಳಂತಿವೆ.
    ಅವರ ಬಾಯಿಗಳು ಸುಳ್ಳಾಡುತ್ತವೆ.
ಪ್ರತಿಯೊಬ್ಬನು ತನ್ನ ನೆರೆಮನೆಯವನೊಂದಿಗೆ ನಯವಾಗಿ ಮಾತನಾಡುತ್ತಾನೆ.
    ರಹಸ್ಯವಾಗಿ ತನ್ನ ನೆರೆಮನೆಯವನನ್ನು ಆಕ್ರಮಣಮಾಡಲು ಯುಕ್ತಿ ಮಾಡುತ್ತಿರುತ್ತಾನೆ.
ಹೀಗಿರಲು ನಾನು ಯೆಹೂದದ ಜನರನ್ನು ಶಿಕ್ಷಿಸಬಾರದೇ?”
ಇದು ದೇವರಿಂದ ಬಂದ ಮಾತು.
“ಅಂಥಾ ಜನರನ್ನು ನಾನು ಶಿಕ್ಷಿಸಬೇಕೆಂಬುದು ನಿನಗೆ ಗೊತ್ತು.
    ಅವರಿಗೆ ತಕ್ಕ ಶಿಕ್ಷೆಯನ್ನು ನಾನು ಕೊಡಬೇಕು.”

10 ನಾನು ಪರ್ವತಗಳಿಗಾಗಿ ಗಟ್ಟಿಯಾಗಿ ಅಳುವೆನು;
    ಬರಿದಾದ ಹೊಲಗಳಿಗಾಗಿ ಶೋಕಗೀತೆಯನ್ನು ಹಾಡುವೆನು.
    ಏಕೆಂದರೆ ಅಲ್ಲಿ ಸಜೀವ ವಸ್ತುಗಳಿಲ್ಲ.
ಯಾರೂ ಅಲ್ಲಿ ತಿರುಗಾಡುವದಿಲ್ಲ.
    ಆ ಸ್ಥಳಗಳಲ್ಲಿ ದನಗಳ ಸದ್ದು ಕೇಳಿಸುವದಿಲ್ಲ.
ಪಕ್ಷಿಗಳು ಹಾರಿಹೋಗಿವೆ;
    ಪ್ರಾಣಿಗಳು ಓಡಿಹೋಗಿವೆ.

11 “ನಾನು (ಯೆಹೋವನು) ಜೆರುಸಲೇಮ್ ನಗರವನ್ನು ಕಸದ ರಾಶಿಯನ್ನಾಗಿ ಮಾಡುವೆನು.
    ಅದು ನರಿಗಳ ನಿವಾಸವಾಗುವದು.
ನಾನು ಯೆಹೂದ ಪ್ರಾಂತದ ನಗರಗಳನ್ನು ನಾಶಮಾಡುವೆನು.
    ಅಲ್ಲಿ ಒಬ್ಬರೂ ವಾಸಮಾಡಲಾರರು.”

12 ಈ ಭೂಮಿಯನ್ನು ಏಕೆ ಹಾಳು ಮಾಡಲಾಯಿತು?
    ಇದನ್ನು ಯಾರೂ ಹೋಗದ ಬರಿದಾದ ಮರಳುಗಾಡನ್ನಾಗಿ ಏಕೆ ಮಾಡಲಾಯಿತು?
ಇದನ್ನರಿತ ಜ್ಞಾನಿಯೊಬ್ಬನಿದ್ದಾನೆಯೇ?
    ಯೆಹೋವನಿಂದ ತಿಳಿದುಕೊಂಡ ಜ್ಞಾನಿಯೊಬ್ಬನಿದ್ದಾನೆಯೇ?
    ಯೆಹೋವನ ಸಂದೇಶವನ್ನು ವಿವರಿಸಬಲ್ಲವನೊಬ್ಬನಿದ್ದಾನೆಯೇ?

13 ಯೆಹೋವನು ಈ ಪ್ರಶ್ನೆಗಳಿಗೆ ಉತ್ತರಕೊಟ್ಟನು:
“ಏಕೆಂದರೆ ಯೆಹೂದದ ಜನರು ನನ್ನ ಉಪದೇಶವನ್ನು ಅನುಸರಿಸಲಿಲ್ಲ.
ನಾನು ಅವರಿಗೆ ಧರ್ಮೋಪದೇಶವನ್ನು ಕೊಟ್ಟರೂ
    ಅವರು ನನ್ನ ಮಾತನ್ನು ಕೇಳಲು ಒಪ್ಪಲಿಲ್ಲ.
    ಅವರು ನನ್ನ ಧರ್ಮೋಪದೇಶಗಳನ್ನು ಅನುಸರಿಸಲಿಲ್ಲ.
14 ಯೆಹೂದದ ಜನರು ತಮ್ಮದೇ ಆದ ರೀತಿಯಲ್ಲಿ ಜೀವಿಸಿದರು.
    ಅವರು ಹಟಮಾರಿಗಳಾಗಿದ್ದರು.
ಅವರು ಸುಳ್ಳುದೇವರಾದ ಬಾಳನನ್ನು ಅನುಸರಿಸಿದರು.
    ಅವರ ಪೂರ್ವಿಕರು ಸುಳ್ಳುದೇವರುಗಳ ಸೇವೆ ಮಾಡುವದನ್ನು ಅವರಿಗೆ ಕಲಿಸಿದರು.”

15 ಇಸ್ರೇಲಿನ ದೇವರಾದ ಸರ್ವಶಕ್ತನಾದ ಯೆಹೋವನ ಸಂದೇಶವಿದು:
“ಯೆಹೂದದ ಜನರು ಕಹಿಯಾದ ಆಹಾರವನ್ನು ತಿನ್ನುವಂತೆ ನಾನು ಬೇಗನೆ ಮಾಡುವೆನು;
    ಅವರು ವಿಷಮಿಶ್ರಿತ ನೀರನ್ನು ಕುಡಿಯುವಂತೆ ಮಾಡುವೆನು.
16 ನಾನು ಯೆಹೂದದ ಜನರನ್ನು ಬೇರೆ ಜನಾಂಗಗಳಲ್ಲಿ ಚದರಿಸಿಬಿಡುತ್ತೇನೆ.
ಅವರು ಮತ್ತು ಅವರ ತಂದೆಗಳು ಎಂದೂ ಅರಿಯದ
    ಅಪರಿಚಿತ ದೇಶಗಳಲ್ಲಿ ಅವರು ವಾಸಿಸುವರು.
ನಾನು ಖಡ್ಗಧಾರಿಗಳಾದ ಜನರನ್ನು ಕಳುಹಿಸುತ್ತೇನೆ.
    ಅವರು ಯೆಹೂದದ ಜನರನ್ನು ನಿರ್ಮೂಲವಾಗುವವರೆಗೆ ಕೊಲ್ಲುವರು.”

2 ತಿಮೊಥೆಯನಿಗೆ 3:1-9

ಕೊನೆಯ ದಿನಗಳು

ನೆನಪಿನಲ್ಲಿಡಿರಿ! ಕಡೇ ದಿನಗಳಲ್ಲಿ ಅನೇಕ ತೊಂದರೆಗಳು ಬರುತ್ತವೆ. ಆ ಕಾಲದಲ್ಲಿ ಜನರು ಸ್ವಾರ್ಥಿಗಳಾಗಿರುತ್ತಾರೆ, ಹಣದಾಸೆ ಉಳ್ಳವರಾಗಿರುತ್ತಾರೆ; ಬಡಾಯಿಕೊಚ್ಚುವವರಾಗಿರುತ್ತಾರೆ; ಗರ್ವಿಷ್ಠರಾಗಿರುತ್ತಾರೆ; ಚಾಡಿಕೋರರಾಗಿರುತ್ತಾರೆ; ತಂದೆತಾಯಿಗಳಿಗೆ ಅವಿಧೇಯರಾಗಿರುತ್ತಾರೆ; ಕೃತಜ್ಞತೆಯಿಲ್ಲದವರಾಗಿರುತ್ತಾರೆ; ಅಪವಿತ್ರರಾಗಿರುತ್ತಾರೆ; ಇತರರನ್ನು ಪ್ರೀತಿಸದವರಾಗಿರುತ್ತಾರೆ; ಕ್ಷಮಿಸದವರಾಗಿರುತ್ತಾರೆ; ದೂಷಿಸುವವರಾಗಿರುತ್ತಾರೆ. ತಮ್ಮ ಮೇಲೆ ತಮಗೇ ಹತೋಟಿಯಿಲ್ಲದವರಾಗಿರುತ್ತಾರೆ; ಉತ್ತಮವಾದದ್ದನ್ನು ದ್ವೇಷಿಸುವವರಾಗಿರುತ್ತಾರೆ; ಕೋಪಿಷ್ಠರಾಗಿರುತ್ತಾರೆ; ಸಂಕುಚಿತ ಗುಣವುಳ್ಳವರಾಗಿರುತ್ತಾರೆ. ಕೊನೆಯ ದಿನಗಳಲ್ಲಿ ಜನರು ಮಿತ್ರದ್ರೋಹಿಗಳಾಗಿರುತ್ತಾರೆ; ದುಡುಕಿ ಮೂರ್ಖ ಕೆಲಸಗಳನ್ನು ಮಾಡುವವರಾಗಿರುತ್ತಾರೆ; ಜಂಬದಿಂದ ಉಬ್ಬಿಕೊಂಡವರಾಗಿರುತ್ತಾರೆ; ದೇವರನ್ನು ಪ್ರೀತಿಸದೆ ವಿಲಾಸಪ್ರಿಯರಾಗಿರುತ್ತಾರೆ; ಆ ಜನರು ತಾವು ದೇವರ ಸೇವೆ ಮಾಡುತ್ತಿರುವುದಾಗಿ ನಟಿಸುತ್ತಲೇ ಇರುವರು. ಆದರೆ ಅವರು ನಿಜವಾಗಿಯೂ ದೇವರ ಸೇವೆ ಮಾಡುತ್ತಿಲ್ಲವೆಂಬುದನ್ನು ಅವರ ಜೀವಿತವೇ ತೋರ್ಪಡಿಸುತ್ತದೆ. ತಿಮೊಥೆಯನೇ, ಅಂತಹ ಜನರಿಂದ ದೂರವಾಗಿರು.

ಅವರಲ್ಲಿ ಕೆಲವರು ಮನೆಗಳಿಗೆ ನುಸುಳಿಕೊಂಡು ಹೋಗಿ, ಪಾಪಿಷ್ಠರಾದ ಸ್ತ್ರೀಯರನ್ನು ವಶಪಡಿಸಿಕೊಳ್ಳುತ್ತಾರೆ. ಆ ಸ್ತ್ರೀಯರು ಅನೇಕ ಪಾಪದೋಷಗಳಿಂದ ತುಂಬಿದವರಾಗಿದ್ದಾರೆ. ಆ ಸ್ತ್ರೀಯರು ಯಾವಾಗಲೂ ಹೊಸ ಉಪದೇಶಗಳನ್ನು ಕಲಿಯಲು ಪ್ರಯತ್ನಿಸಿದರೂ ಸತ್ಯವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಲು ಅವರಿಗೆ ಸಾಧ್ಯವೇ ಇಲ್ಲ. ಯನ್ನ ಮತ್ತು ಯಂಬ್ರರನ್ನು ನೆನಪುಮಾಡಿಕೊ. ಅವರು ಮೋಶೆಯನ್ನು ವಿರೋಧಿಸಿದರು. ಈ ಜನರೂ ಅವರಂತೆಯೇ. ಅವರು ಸತ್ಯವನ್ನು ವಿರೋಧಿಸುತ್ತಾರೆ. ಆ ಜನರ ಆಲೋಚನೆಗಳೆಲ್ಲ ಗಲಿಬಿಲಿಗೊಂಡಿವೆ. ಅವರು ನಂಬಿಕೆಯನ್ನು ಅನುಸರಿಸುವ ತಮ್ಮ ಪ್ರಯತ್ನದಲ್ಲಿ ಸೋತುಹೋಗಿದ್ದಾರೆ. ಅವರ ಕಾರ್ಯಗಳಲ್ಲಿ ಅವರಿಗೆ ಯಶಸ್ಸಾಗುವುದಿಲ್ಲ. ಅವರು ಮೂರ್ಖರೆಂಬುದು ಜನರೆಲ್ಲರಿಗೂ ಕಾಣುತ್ತದೆ. ಯನ್ನ, ಯಂಬ್ರರಿಗೆ ಹೀಗೆಯೇ ಆಯಿತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International