Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಯೋಬನು 22-24

ಎಲೀಫಜನ ಉತ್ತರ

22 ಬಳಿಕ ತೇಮಾನ್ ಪಟ್ಟಣದ ಎಲೀಫಜನು ಉತ್ತರಕೊಟ್ಟನು:

“ಯಾವನೂ ದೇವರಿಗೆ ಸಹಾಯಮಾಡಲಾರನು.
    ಮಹಾ ಜ್ಞಾನಿಯು ಸಹ ದೇವರಿಗೆ ಉಪಯುಕ್ತನಾಗಲಾರನು.
ನಿನ್ನ ನಡತೆಯು ಒಳ್ಳೆಯದಾಗಿದ್ದರೆ, ಅದರಿಂದ ದೇವರಿಗೆ ಸಹಾಯವಾಗುವುದೇ? ಇಲ್ಲ.
    ನೀನು ನೀತಿವಂತನಾಗಿದ್ದರೆ ಸರ್ವಶಕ್ತನಾದ ದೇವರಿಗೆ ಅದರಿಂದೇನಾದರೂ ಲಾಭವಾಗುವುದೇ?
ನಿನ್ನ ಆರಾಧನೆಯ ದೆಸೆಯಿಂದ
    ದೇವರು ನಿನ್ನ ಮೇಲೆ ಆರೋಪ ಹೊರಿಸಿ ದಂಡಿಸುವನೇ? ಇಲ್ಲ!
ನಿನ್ನ ಪಾಪವು ಅತಿಯಾಯಿತು!
    ಯೋಬನೇ, ನೀನು ಪಾಪಮಾಡುವುದನ್ನು ನಿಲ್ಲಿಸಲೇ ಇಲ್ಲ.
ಯೋಬನೇ, ನೀನು ನಿಷ್ಕಾರಣವಾಗಿ ನಿನ್ನ ಸಹೋದರರ ವಸ್ತುಗಳನ್ನು ಒತ್ತೆಯಿಟ್ಟುಕೊಂಡು ಸಾಲ ಕೊಟ್ಟಿರಬಹುದು.
    ಜನರ ಬಟ್ಟೆಗಳನ್ನು ತೆಗೆದುಕೊಂಡು ಅವರನ್ನು ಬೆತ್ತಲೆ ಮಾಡಿರಬಹುದು.
ಆಯಾಸಗೊಂಡವರಿಗೆ ನೀರು ಕೊಡದೆ
    ಹಸಿದವರಿಗೆ ಊಟ ಕೊಡದೆಹೋಗಿರಬಹುದು.
ಯೋಬನೇ, ಬಲಿಷ್ಠನಾಗಿದ್ದ ನಿನ್ನಲ್ಲಿ ಬೇಸಾಯಕ್ಕೆ ಬಹಳ ಭೂಮಿಯಿದೆ.
    ಅಲ್ಲದೆ ಜನರು ಸಹ ನಿನ್ನನ್ನು ಗೌರವಿಸುತ್ತಿದ್ದರು.
ಆದರೆ ವಿಧವೆಯರಿಗೆ ದಾನಮಾಡದೆ ಅವರನ್ನು ನೀನು ಕಳುಹಿಸಿಬಿಟ್ಟಿರಬಹುದು.
    ಒಂದುವೇಳೆ ನೀನು ಅನಾಥರಿಗೆ ಮೋಸಮಾಡಿರಬಹುದು.
10 ಆದಕಾರಣ ನಿನ್ನ ಸುತ್ತಲೆಲ್ಲಾ ಉರುಲುಗಳಿವೆ;
    ಫಕ್ಕನೆ ಬರುವ ವಿಪತ್ತು ನಿನ್ನನ್ನು ಭಯಗೊಳಿಸುವುದು.
11 ಆದಕಾರಣ ನಿನಗೆ ಏನೂ ಕಾಣಲಾಗದಷ್ಟು ಕತ್ತಲಾಗಿದೆ,
    ಪ್ರವಾಹದ ನೀರು ನಿನ್ನನ್ನು ಆವರಿಸಿಕೊಂಡಿದೆ.

12 “ದೇವರು ಅತ್ಯುನ್ನತವಾದ ಪರಲೋಕದಲ್ಲಿ ವಾಸಿಸುತ್ತಾನೆ.
    ಆತನು ಅತ್ಯಂತ ಎತ್ತರದಲ್ಲಿರುವ ನಕ್ಷತ್ರಗಳನ್ನು ಬಗ್ಗಿ ನೋಡುವನು.
    ನಕ್ಷತ್ರಗಳು ಎಷ್ಟು ಎತ್ತರದಲ್ಲಿವೆ ಎಂಬುದನ್ನು ನೀನು ನೋಡಬಲ್ಲೆ.
13 ನೀನಾದರೋ, ‘ದೇವರಿಗೆ ಗೊತ್ತಿರುವುದೇನು?
    ಕಾರ್ಮೋಡಗಳ ಆಚೆಯಿಂದ ನಮಗೆ ನ್ಯಾಯತೀರಿಸಬಲ್ಲನೇ?
14 ದಟ್ಟವಾದ ಮೋಡಗಳು ಆತನನ್ನು ಮುಚ್ಚಿಕೊಂಡಿವೆ.
    ಆಕಾಶದ ಮೇಲ್ಗಡೆಯಲ್ಲಿ ನಡೆದಾಡುವ ಆತನು ನಮ್ಮನ್ನು ಕಾಣಲಾರನು’ ಎಂದು ಹೇಳುತ್ತಿರುವೆ.

15 “ಯೋಬನೇ, ದುಷ್ಟರು ನಡೆಯುವ ಹಳೆದಾರಿಯ ಮೇಲೆ
    ನೀನು ನಡೆಯುತ್ತಲೇ ಇರುವಿಯೋ?
16 ಆ ದುಷ್ಟರಿಗೆ ಅಕಾಲಮರಣವು ಬಂದಿತು.
    ಪ್ರವಾಹದಲ್ಲಿನ ಕಟ್ಟಡದಂತೆ ಅವರು ಕೊಚ್ಚಿಕೊಂಡು ಹೋದರು.
17 ಅವರು ದೇವರಿಗೆ, ‘ನಮ್ಮಿಂದ ತೊಲಗಿಹೋಗು;
    ಸರ್ವಶಕ್ತನಾದ ದೇವರು ನಮಗೇನೂ ಮಾಡಲಾರನು!’ ಎಂದು ಹೇಳಿದ್ದರು.
18 ಆದರೆ ದೇವರು ಅವರ ಮನೆಗಳನ್ನು ಐಶ್ವರ್ಯದಿಂದ ತುಂಬಿಸಿದನು.
    ಅಬ್ಬಾ! ದುಷ್ಟರ ಆಲೋಚನೆಯನ್ನು ನಾನು ಅನುಸರಿಸಲಾರೆ.
19 ದುಷ್ಟರ ನಾಶನವನ್ನು ಕಂಡು ನೀತಿವಂತರು ಸಂತೋಷಪಡುವರು.
    ನಿರಪರಾಧಿಗಳು ದುಷ್ಟರನ್ನು ಕಂಡು ನಗುತ್ತಾ,
20 ‘ನಮ್ಮ ಶತ್ರುಗಳು ನಾಶವಾದರು!
    ಬೆಂಕಿಯು ಅವರ ಐಶ್ವರ್ಯವನ್ನು ಸುಟ್ಟುಹಾಕಿತು!’ ಎಂದು ಹೇಳುವರು.

21 “ಯೋಬನೇ, ಈಗಲಾದರೊ ನಿನ್ನನ್ನು ದೇವರಿಗೆ ಒಪ್ಪಿಸಿಕೊಟ್ಟು ಆತನೊಂದಿಗೆ ಸಮಾಧಾನ ಮಾಡಿಕೊ,
    ಆಗ ನೀನು ಆಶೀರ್ವಾದವನ್ನು ಹೊಂದಿಕೊಂಡು ಅಭಿವೃದ್ಧಿಯಾಗುವೆ.
22 ಆತನ ಉಪದೇಶವನ್ನು ಸ್ವೀಕರಿಸಿಕೊ.
    ಆತನ ವಾಕ್ಯಗಳನ್ನು ನಿನ್ನ ಹೃದಯದಲ್ಲಿಟ್ಟುಕೊ.
23 ಯೋಬನೇ, ನೀನು ಸರ್ವಶಕ್ತನಾದ ದೇವರಿಗೆ ಅಭಿಮುಖನಾಗಿ
    ನಿನ್ನ ಮನೆಯಲ್ಲಿರುವ ಪಾಪವನ್ನು ನಿರ್ಮೂಲಮಾಡಿದರೆ ಉದ್ಧಾರವಾಗುವೆ.
24 ನೀನು ಚಿನ್ನವನ್ನು ಧೂಳೆಂದು ಪರಿಗಣಿಸಬೇಕು.
    ನೀನು ಓಫೀರ್ ದೇಶದ ಚಿನ್ನವನ್ನು ನದಿಗಳ ದಂಡೆಯ ಮೇಲಿರುವ ಕಲ್ಲುಗಳಂತೆ ಪರಿಗಣಿಸಬೇಕು.
25 ಆಗ ಸರ್ವಶಕ್ತನಾದ ದೇವರು ನಿನ್ನ ಪಾಲಿಗೆ ಬಂಗಾರವಾಗಿಯೂ
    ಬೆಳ್ಳಿಯ ರಾಶಿಗಳಾಗಿಯೂ ಇರುವನು.
26 ನೀನು ಸರ್ವಶಕ್ತನಾದ ದೇವರಲ್ಲಿ ಆನಂದಿಸುವೆ.
    ದೇವರ ಕಡೆಗೆ ಕಣ್ಣೆತ್ತಿ ನೋಡುವೆ.
27 ನೀನು ಪ್ರಾರ್ಥಿಸುವೆ, ಆತನು ನಿನಗೆ ಕಿವಿಗೊಡುವನು;
    ಆತನಿಗೆ ನಿನ್ನ ಹರಕೆಗಳನ್ನು ಸಲ್ಲಿಸುವೆ.
28 ನಿನ್ನ ಕಾರ್ಯಗಳೆಲ್ಲಾ ಜಯಪ್ರಧವಾಗುವುದು;
    ನಿನ್ನ ಭವಿಷ್ಯತ್ತು ಪ್ರಕಾಶಮಾನವಾಗುವುದು;
29 ದೇವರು ಅಹಂಕಾರಿಗಳನ್ನು ನಾಚಿಕೆಗೀಡುಮಾಡುವನು,
    ದೀನರಿಗಾದರೋ ಸಹಾಯಮಾಡುವನು.
30 ನಿರಪರಾಧಿಗಳನ್ನು ರಕ್ಷಿಸುವನು.
    ನೀನು ಪರಿಶುದ್ಧನಾಗಿರುವುದರಿಂದ ನಿನ್ನ ಪ್ರಾರ್ಥನೆಗೆ ಉತ್ತರವಾಗಿ ಆತನು ಅವರನ್ನು ಕ್ಷಮಿಸುವನು.”

ಯೋಬನ ಉತ್ತರ

23 ಆಗ ಯೋಬನು ಹೀಗೆಂದನು:

“ನಾನಿನ್ನೂ ಸಂಕಟದಲ್ಲಿರುವುದರಿಂದ
    ಈ ಹೊತ್ತು ಸಹ ನಾನು ದೂರು ಹೇಳುವೆನು.
ಆಹಾ, ದೇವರ ದರ್ಶನವು ನನಗೆ ಎಲ್ಲಿ ಆಗುವುದು?
    ಆತನ ಬಳಿಗೆ ನಾನು ಹೇಗೆ ಹೋಗಬೇಕು? ನನಗೆ ಗೊತ್ತಾಗಿದ್ದರೆ ಎಷ್ಟೋ ಮೇಲು!
ಆಗ ನಾನು ದೇವರಿಗೆ ನನ್ನ ವ್ಯಾಜ್ಯದ ಬಗ್ಗೆ ವಿವರಿಸುತ್ತಿದ್ದೆನು;
    ನಾನು ನಿರಪರಾಧಿಯೆಂದು ನಿರೂಪಿಸಲು ನನ್ನ ಬಾಯನ್ನು ವಾದಗಳಿಂದ ತುಂಬಿಸಿಕೊಳ್ಳುತ್ತಿದ್ದೆನು.
ದೇವರ ಪ್ರತ್ಯುತ್ತರವನ್ನು ನಾನು ಕೇಳಬಯಸುವೆ.
    ಆತನ ಉತ್ತರಗಳನ್ನು ಅರ್ಥಮಾಡಿಕೊಳ್ಳಬಯಸುವೆ.
ದೇವರು ತನ್ನ ಮಹಾಶಕ್ತಿಯನ್ನು ನನಗೆ ವಿರೋಧವಾಗಿ ಬಳಸುವನೇ? ಇಲ್ಲ,
    ಆತನು ನನಗೆ ಕಿವಿಗೊಡುವನು!
ನಾನು ಯಥಾರ್ಥನಾಗಿರುವೆ. ದೇವರು ನನ್ನ ವಿಷಯವನ್ನು ಕೇಳುವನು;
    ನನ್ನ ನ್ಯಾಯಾಧಿಪತಿಯು ನನ್ನನ್ನು ಬಿಡುಗಡೆ ಮಾಡುವನು.

“ಆದರೆ, ನಾನು ಪೂರ್ವಕ್ಕೆ ಹೋದರೂ ದೇವರು ಅಲ್ಲಿಲ್ಲ.
    ನಾನು ಪಶ್ಚಿಮಕ್ಕೆ ಹೋದರೂ ದೇವರು ಅಲ್ಲಿಯೂ ನನಗೆ ಕಾಣುವುದಿಲ್ಲ.
ದೇವರು ಉತ್ತರದಿಕ್ಕಿನಲ್ಲಿ ಕಾರ್ಯನಿರತನಾಗಿರುವಾಗಲೂ ನನಗೆ ಕಾಣುವುದಿಲ್ಲ.
    ದೇವರು ದಕ್ಷಿಣ ದಿಕ್ಕಿಗೆ ತಿರುಗಿಕೊಂಡಾಗಲೂ ನನಗೆ ಕಾಣುವುದಿಲ್ಲ.
10 ಆದರೆ ನನ್ನ ಪ್ರತಿಯೊಂದು ಹೆಜ್ಜೆಯನ್ನೂ ದೇವರು ಬಲ್ಲನು.
    ಆತನು ನನ್ನನ್ನು ಪರೀಕ್ಷಿಸಿ ನೋಡಿದಾಗ ನಾನು ಅಪ್ಪಟ ಬಂಗಾರದಂತಿರುವುದನ್ನು ಕಂಡುಕೊಳ್ಳುವನು.
11 ಆತನ ಮಾರ್ಗದಲ್ಲೇ ನಾನು ನಡೆದಿದ್ದೇನೆ.
    ನಾನು ಓರೆಯಾಗದೆ ಆತನ ಮಾರ್ಗವನ್ನೇ ಅನುಸರಿಸಿದ್ದೇನೆ.
12 ಆತನ ಆಜ್ಞೆಗಳನ್ನು ನಾನು ಮೀರಲೇ ಇಲ್ಲ,
    ಆತನ ಬಾಯಿಂದ ಬಂದ ಮಾತುಗಳನ್ನು ಮೃಷ್ಟಾನ್ನಕ್ಕಿಂತಲೂ ಹೆಚ್ಚಾಗಿ ಪ್ರೀತಿಸಿದ್ದೇನೆ.

13 “ದೇವರು ಎಂದಿಗೂ ಬದಲಾಗುವುದಿಲ್ಲ.
    ಯಾವನೂ ಆತನ ಮನಸ್ಸನ್ನು ಮಾರ್ಪಡಿಸಲಾರನು.
    ದೇವರು ತಾನು ಬಯಸಿದ್ದನ್ನೇ ಮಾಡುವನು.
14 ದೇವರು ತನ್ನ ಆಲೋಚನೆಗೆ ತಕ್ಕಂತೆ ನನಗೆ ಮಾಡುವನು.
    ಆತನಲ್ಲಿ ಇಂಥಾ ಸಂಕಲ್ಪಗಳು ಎಷ್ಟೋ ಇವೆ.
15 ಆದಕಾರಣ ನಾನು ಆತನ ಸನ್ನಿಧಿಯಲ್ಲಿ ಭಯಭ್ರಾಂತನಾಗಿದ್ದೇನೆ.
    ಇದನ್ನೆಲ್ಲಾ ಯೋಚಿಸುವಾಗ ಹೆದರಿಕೊಳ್ಳುತ್ತೇನೆ.
16 ನನ್ನ ಹೃದಯವನ್ನು ಕುಂದಿಸಿದವನೂ ದೇವರೇ.
    ನನ್ನನ್ನು ಭಯಭ್ರಾಂತನನ್ನಾಗಿ ಮಾಡಿದವನೂ ಸರ್ವಶಕ್ತನಾದ ದೇವರೇ.
17 ಕಪ್ಪು ಮೋಡವು ನನ್ನ ಮುಖವನ್ನು ಕವಿದುಕೊಳ್ಳುವಂತೆ ಆಪತ್ತುಗಳು ನನಗೆ ಸಂಭವಿಸಿದವು.
    ಆದರೆ ಕಾರ್ಗತ್ತಲೆಯೂ ನನ್ನನ್ನು ಮೌನಗೊಳಿಸಲಾರದು.

24 “ಸರ್ವಶಕ್ತನಾದ ದೇವರು ನ್ಯಾಯತೀರ್ಪಿಗೆ ಸಮಯವನ್ನು ಗೊತ್ತುಪಡಿಸದಿರುವುದೇಕೆ?
    ಆತನನ್ನು ಅರಿತವರಿಗೆ ಸಮಯವು ತಿಳಿಯದಿರುವುದೇಕೆ?

“ಜಮೀನಿನ ಮೇರೆಯನ್ನು ಸರಿಸುವವರೂ ಇದ್ದಾರೆ.
    ದನಕುರಿಗಳನ್ನು ಅಪಹರಿಸಿಕೊಂಡು ಹೋಗುವವರೂ ಇದ್ದಾರೆ.
ಅವರು ಅನಾಥರ ಕತ್ತೆಯನ್ನು ಹೊಡೆದುಕೊಂಡು ಹೋಗುವರು;
    ವಿಧವೆಯ ಹಸುವನ್ನು ಒತ್ತೆಯಿಟ್ಟುಕೊಳ್ಳುವರು;
ನಿರ್ಗತಿಕರನ್ನು ಸ್ಥಳದಿಂದ ಸ್ಥಳಕ್ಕೆ ಅಲೆದಾಡಿಸುವರು.
    ಬಡವರು ಈ ದುಷ್ಟರಿಗೆ ಹೆದರಿ ಅಡಗಿಕೊಳ್ಳುವರು.

“ಬಡವರು ಅಡವಿಯಲ್ಲಿನ ಕಾಡುಕತ್ತೆಗಳೋ ಎಂಬಂತೆ ತಮ್ಮ ಆಹಾರಕ್ಕಾಗಿ ದಿನವೆಲ್ಲಾ ದುಡಿಯುವರು;
    ಕೂಳೆಬಿಟ್ಟ ಹೊಲಗಳೇ ಅವರ ಮಕ್ಕಳಿಗೆ ಆಹಾರವನ್ನು ಒದಗಿಸುತ್ತವೆ.
ಬಡವರು ರಾತ್ರಿಯವರೆಗೂ ಹೊಲಗಳಲ್ಲಿ ಬೆಳೆ ಕೊಯ್ಯುವರು;
    ದುಷ್ಟರ ದ್ರಾಕ್ಷಿತೋಟದಲ್ಲಿ ಅಳಿದುಳಿದ ದ್ರಾಕ್ಷಿಗಳನ್ನು ಆರಿಸಿಕೊಳ್ಳುವರು.
ಅವರು ರಾತ್ರಿಯ ಚಳಿಯಲ್ಲಿಯೂ ಹೊದಿಕೆಯಿಲ್ಲದೆ ಮಲಗುವರು;
    ಹಾಕಿಕೊಳ್ಳಲು ಅವರಲ್ಲಿ ಬಟ್ಟೆಯೂ ಇಲ್ಲ.
ಅವರು ಬೆಟ್ಟಗಳಲ್ಲಿ ಮಳೆಯಿಂದ ನೆನೆದುಹೋಗಿದ್ದಾರೆ.
    ಚಳಿಯಿಂದ ರಕ್ಷಿಸಿಕೊಳ್ಳಲು ಏನೂ ಇಲ್ಲದೆ ವಿಶಾಲವಾದ ಬಂಡೆಯ ಮರೆಗಳನ್ನು ಆಶ್ರಯಿಸಿಕೊಳ್ಳುವರು.
ದುಷ್ಟರು ತಂದೆಯಿಲ್ಲದ ಮಗುವನ್ನು ಅದರ ತಾಯಿಯಿಂದ ಕಿತ್ತುಕೊಳ್ಳುವರು.
    ಬಡವರ ಮಗುವನ್ನು ಸಾಲಕ್ಕೆ ಒತ್ತೆಯಾಗಿಟ್ಟುಕೊಳ್ಳುವರು.
10 ಬಡವರು ಬಟ್ಟೆಗಳಿಲ್ಲದೆ ಬೆತ್ತಲೆಯಾಗಿ ದುಡಿಯುವರು.
    ಅವರು ಹಸಿವೆಯಿಂದಲೇ ದುಷ್ಟರ ಸಿವುಡುಗಳನ್ನು ಹೊರುವರು.
11 ಬಡವರು ಆಲೀವ್ ಎಣ್ಣೆಯ ಗಾಣವಾಡಿಸುವರು;
    ದಾಹದಿಂದಲೇ ದ್ರಾಕ್ಷಿಅಲೆಯಲ್ಲಿ ತುಳಿದು ರಸ ತೆಗೆಯುವರು.
12 ಸಾಯುತ್ತಿರುವ ಜನರ ನರಳಾಟವು ಪಟ್ಟಣದಲ್ಲಿ ಕೇಳಿಬರುತ್ತಿದೆ.
    ಗಾಯಗೊಂಡಿರುವವರು ಸಹಾಯಕ್ಕಾಗಿ ಮೊರೆಯಿಡುತ್ತಿದ್ದಾರೆ, ಆದರೆ ದೇವರು ಕೇಳಿಸಿಕೊಳ್ಳುವುದಿಲ್ಲ.

13 “ಬೆಳಕಿಗೆ ವಿರೋಧವಾಗಿ ದಂಗೆ ಎದ್ದಿರುವ ಜನರಿದ್ದಾರೆ.
    ಅವರಿಗೆ ಹಗಲಿನ ಮಾರ್ಗಗಳ ಪರಿಚಯವಿಲ್ಲ.
    ಅವರು ಅದರ ಮಾರ್ಗಗಳಲ್ಲಿ ಇರುವುದಿಲ್ಲ.
14 ಕೊಲೆಗಾರನು ಮುಂಜಾನೆಯಲ್ಲಿ ಎದ್ದು ದಿಕ್ಕಿಲ್ಲದ ಬಡವರನ್ನು ಕೊಲ್ಲುವನು;
    ರಾತ್ರಿಯಲ್ಲಿ ಕಳವು ಮಾಡುವನು.
15 ವ್ಯಭಿಚಾರಿಯು ರಾತ್ರಿಗಾಗಿಯೇ ಕಾಯುತ್ತಿರುತ್ತಾನೆ.
    ‘ಯಾರ ಕಣ್ಣಿಗೂ ಬೀಳಬಾರದು’ ಎಂದು ಮುಖಕ್ಕೆ ಮುಸುಕು ಹಾಕಿಕೊಳ್ಳುವನು.
16 ದುಷ್ಟರು ರಾತ್ರಿಯ ಕತ್ತಲಲ್ಲಿ ಮನೆಗಳಿಗೆ ಕನ್ನ ಕೊರೆಯುವರು;
    ಹಗಲಲ್ಲಿ ತಮ್ಮ ಮನೆಗಳಲ್ಲಿ ಅಡಗಿಕೊಂಡಿದ್ದು ಬೆಳಕಿಗೆ ಮರೆಯಾಗಿರುವರು.
17 ಆ ದುಷ್ಟರಿಗೆ ಕತ್ತಲೆಯು ಮುಂಜಾನೆಯಂತಿರುವುದು.
    ಕಾರ್ಗತ್ತಲೆಯ ಭೀಕರತೆಗಳು ಅವರ ಸ್ನೇಹಿತರಾಗಿವೆ.

18 “ನೀವು ಹೇಳುವುದೇನೆಂದರೆ, ‘ಪ್ರವಾಹವು ವಸ್ತುಗಳನ್ನು ಕೊಚ್ಚಿಕೊಂಡು ಹೋಗುವಂತೆ ನಾಶನವು ದುಷ್ಟರನ್ನು ಕೊಚ್ಚಿಕೊಂಡು ಹೋಗುವುದು.
    ಅವರ ಜಮೀನು ಶಾಪಗ್ರಸ್ತವಾಗಿದೆ.
    ಆದ್ದರಿಂದ ಅವರು ದ್ರಾಕ್ಷಿಹಣ್ಣುಗಳನ್ನು ತಮ್ಮ ತೋಟಗಳಿಂದ ಸಂಗ್ರಹಿಸಲಾರರು.
19 ಬರಗಾಲವೂ ಬಿಸಿಲೂ ಹಿಮದ ನೀರನ್ನು ಹೀರುವಂತೆ
    ಪಾತಾಳವು ದುಷ್ಟರನ್ನು ಎಳೆದುಕೊಳ್ಳುವುದು.
20 ಸತ್ತುಹೋದ ದುಷ್ಟನನ್ನು ಅವನ ತಾಯಿಯೂ ಮರೆತುಬಿಡುವಳು.
    ದುಷ್ಟನ ದೇಹವನ್ನು ಹುಳಗಳು ತಿಂದುಬಿಡುತ್ತವೆ.
ಅವನನ್ನು ಇನ್ನೆಂದಿಗೂ ಜ್ಞಾಪಿಸಿಕೊಳ್ಳುವುದಿಲ್ಲ.
    ದುಷ್ಟನು ಬಿದ್ದುಹೋದ ಮರದಂತೆ ನಾಶವಾಗುವನು.
21 ದುಷ್ಟರು ಬಂಜೆಯರಿಗೆ ಕೇಡು ಮಾಡುವರು;
    ವಿಧವೆಯರಿಗೆ ಕರುಣೆ ತೋರರು.
22 ಆದರೆ ದೇವರು ತನ್ನ ಶಕ್ತಿಯಿಂದ ಬಲಿಷ್ಠರನ್ನು ನಾಶಮಾಡುವನು;
    ದುಷ್ಟರು ಜೀವನದಲ್ಲಿ ಬೇರೂರಿಕೊಂಡಿದ್ದರೂ ತಮ್ಮ ಭವಿಷ್ಯತ್ತನ್ನು ತಿಳಿಯದವರಾಗಿದ್ದಾರೆ.
23 ತಾವು ಸುರಕ್ಷಿತವಾಗಿದ್ದೇವೆಂದು ದುಷ್ಟರು ಹೇಳುವುದು ಕೇವಲ ಅಲ್ಪಕಾಲದವರಗಷ್ಟೇ.
    ಯಾಕೆಂದರೆ ದೇವರು ಅವರನ್ನು ಗಮನಿಸುತ್ತಲೇ ಇರುವನು.
24 ದುಷ್ಟರು ಸ್ವಲ್ಪಕಾಲ ಅಭಿವೃದ್ಧಿಗೊಂಡರೂ
    ಸುಗ್ಗಿಯ ತೆನೆಗಳಂತೆ ಕೊಯ್ಯಲ್ಪಟ್ಟು ಎಲ್ಲರಂತೆ ಇಲ್ಲವಾಗುವರು.’

25 “ಇದು ನಿಜವಲ್ಲದಿದ್ದರೆ,
    ನಾನು ಸುಳ್ಳು ಹೇಳಿರುವುದಾಗಿ ಯಾರು ನಿರೂಪಿಸಬಲ್ಲರು?
    ನನ್ನ ಮಾತುಗಳು ತಪ್ಪಾದವುಗಳೆಂದು ಯಾರು ತೋರಿಸಬಲ್ಲರು?”

ಅಪೊಸ್ತಲರ ಕಾರ್ಯಗಳು 11

ಪೇತ್ರನು ಜೆರುಸಲೇಮಿಗೆ ಹಿಂತಿರುಗುವನು

11 ಯೆಹೂದ್ಯರಲ್ಲದವರು ಸಹ ದೇವರ ವಾಕ್ಯವನ್ನು ಸ್ವೀಕರಿಸಿಕೊಂಡರೆಂಬುದು ಅಪೊಸ್ತಲರಿಗೂ ಜುದೇಯದ ಸಹೋದರರಿಗೂ ತಿಳಿಯಿತು. ಆದರೆ ಪೇತ್ರನು ಜೆರುಸಲೇಮಿಗೆ ಬಂದಾಗ ಕೆಲವು ಯೆಹೂದ್ಯ ವಿಶ್ವಾಸಿಗಳು[a] ಅವನೊಂದಿಗೆ ವಾದ ಮಾಡಿದರು. ಅವರು, “ಯೆಹೂದ್ಯರಲ್ಲದವರ ಮತ್ತು ಸುನ್ನತಿ ಮಾಡಿಸಿಕೊಂಡಿಲ್ಲದವರ ಮನೆಗಳಿಗೆ ನೀನು ಹೋದೆ! ನೀನು ಅವರೊಂದಿಗೆ ಊಟವನ್ನು ಸಹ ಮಾಡಿದೆ!” ಎಂದು ಹೇಳಿದರು.

ಆದ್ದರಿಂದ ಪೇತ್ರನು ನಡೆದ ಸಂಗತಿಯನ್ನೆಲ್ಲಾ ಅವರಿಗೆ ವಿವರಿಸಿದನು. ಪೇತ್ರನು ಅವರಿಗೆ, “ನಾನು ಜೊಪ್ಪ ಪಟ್ಟಣದಲ್ಲಿದ್ದೆನು. ನಾನು ಪ್ರಾರ್ಥಿಸುತ್ತಿದ್ದಾಗ ನನಗೊಂದು ದರ್ಶನವಾಯಿತು. ಆ ದರ್ಶನದಲ್ಲಿ, ಆಕಾಶದಿಂದ ಇಳಿದುಬರುತ್ತಿರುವ ಒಂದು ವಸ್ತುವನ್ನು ಕಂಡೆನು. ಅದು ದೊಡ್ಡ ತಟ್ಟೆಯಂತಿತ್ತು. ಅದರ ನಾಲ್ಕು ಮೂಲೆಗಳಲ್ಲಿ ಹಗ್ಗವನ್ನು ಕಟ್ಟಿ ಭೂಮಿಗೆ ಇಳಿಯಬಿಡಲಾಗಿತ್ತು. ಅದು ಇಳಿದು ಬಂದು ನನ್ನ ಸಮೀಪದಲ್ಲೇ ನಿಂತುಕೊಂಡಿತು. ನಾನು ಅದರೊಳಗೆ ನೋಡಿದೆನು. ಅದರಲ್ಲಿ ಪಶುಗಳೂ ಕ್ರೂರಪ್ರಾಣಿಗಳೂ ಹರಿದಾಡುವ ಕ್ರಿಮಿಕೀಟಗಳೂ ಹಾರಾಡುವ ಪಕ್ಷಿಗಳೂ ಇದ್ದವು. ಆಗ, ‘ಪೇತ್ರನೇ, ಎದ್ದೇಳು! ಇವುಗಳಲ್ಲಿ ಯಾವುದನ್ನು ಬೇಕಾದರೂ ಕೊಯ್ದುತಿನ್ನು!’ ಎಂದು ನನಗೆ ಹೇಳುವ ವಾಣಿಯನ್ನು ಕೇಳಿದೆನು.

“ಆದರೆ ನಾನು, ‘ಪ್ರಭುವೇ, ನಾನು ಹಾಗೆ ಮಾಡಲಾರೆ! ಅಪವಿತ್ರವಾದ ಮತ್ತು ಅಶುದ್ಧವಾದ ಏನನ್ನಾಗಲಿ ನಾನೆಂದೂ ತಿಂದಿಲ್ಲ’ ಎಂದು ಹೇಳಿದೆನು.

“ಆದರೆ, ‘ಇವುಗಳನ್ನು ದೇವರು ಶುದ್ಧೀಕರಿಸಿದ್ದಾನೆ. ಇವುಗಳನ್ನು ಅಶದ್ಧವೆಂದು ಹೇಳಬೇಡ!’ ಎಂದು ಆ ವಾಣಿಯು ನನಗೆ ಉತ್ತರಕೊಟ್ಟಿತು.

10 “ಹೀಗೆ ಮೂರು ಸಲವಾಯಿತು. ಬಳಿಕ ಆ ಇಡೀ ವಸ್ತುವನ್ನು ಆಕಾಶಕ್ಕೆ ಹಿಂತೆಗೆದುಕೊಳ್ಳಲಾಯಿತು. 11 ಅದೇ ಸಮಯದಲ್ಲಿ ನಾನಿದ್ದ ಮನೆಗೆ ಮೂರು ಮಂದಿ ಬಂದರು. ಈ ಮೂವರನ್ನು ಸೆಜರೇಯ ಪಟ್ಟಣದಿಂದ ಕಳುಹಿಸಲಾಗಿತ್ತು. 12 ಸಂದೇಹಪಡದೆ ಅವರೊಂದಿಗೆ ಹೋಗಬೇಕೆಂದು ಪವಿತ್ರಾತ್ಮನು ನನಗೆ ಹೇಳಿದನು. ಇಲ್ಲಿರುವ ಈ ಆರು ಮಂದಿ ಸಹೋದರರು ನನ್ನೊಂದಿಗೆ ಬಂದರು. ನಾವು ಕೊರ್ನೇಲಿಯನ ಮನೆಗೆ ಹೋದೆವು. 13 ತನ್ನ ಮನೆಯಲ್ಲಿ ದೇವದೂತನೊಬ್ಬನು ನಿಂತಿರುವುದನ್ನು ತಾನು ಕಂಡದ್ದರ ಬಗ್ಗೆ ಕೊರ್ನೇಲಿಯನು ನನಗೆ ಹೇಳಿದನು. ಆ ದೇವದೂತನು ಕೊರ್ನೇಲಿಯನಿಗೆ, ‘ಕೆಲವು ಜನರನ್ನು ಜೊಪ್ಪಕ್ಕೆ ಕಳುಹಿಸು. ಸೀಮೋನ್ ಪೇತ್ರನನ್ನು ಆಹ್ವಾನಿಸಿ ನಿಮ್ಮ ಬಳಿಗೆ ಬರಮಾಡಿಕೊ. 14 ಅವನು ನಿಮ್ಮೊಂದಿಗೆ ಮಾತಾಡುವನು. ಅವನು ಹೇಳುವ ಸಂಗತಿಗಳು ನಿನ್ನನ್ನೂ ನಿನ್ನ ಕುಟಂಬದವರನ್ನೂ ರಕ್ಷಿಸುತ್ತವೆ’ ಎಂದು ಹೇಳಿದನು.

15 “ನಾನು ನನ್ನ ಉಪದೇಶವನ್ನು ಆರಂಭಿಸಿದ ಮೇಲೆ, ಪ್ರಾರಂಭದಲ್ಲಿ[b] ಪವಿತ್ರಾತ್ಮನು ನಮ್ಮ ಮೇಲೆ ಬಂದಂತೆ ಅವರ ಮೇಲೆಯೂ ಬಂದನು. 16 ಆಗ ನಾನು ಪ್ರಭುವಿನ ಮಾತುಗಳನ್ನು ಜ್ಞಾಪಿಸಿಕೊಂಡೆನು. ‘ಯೋಹಾನನು ಜನರಿಗೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸಿದನು, ಆದರೆ ನೀವು ಪವಿತ್ರಾತ್ಮನಲ್ಲಿ ದೀಕ್ಷಾಸ್ನಾನ ಪಡೆಯುವಿರಿ!’ ಎಂದು ಪ್ರಭುವು ಹೇಳಿದ್ದನು. 17 ಪ್ರಭುವಾದ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟ ನಮಗೆ ಕೊಟ್ಟ ವರವನ್ನೇ ದೇವರು ಈ ಜನರಿಗೆ ಕೊಟ್ಟನು. ಹೀಗಿರಲು ನಾನು ದೇವರ ಕೆಲಸವನ್ನು ನಿಲ್ಲಿಸಲು ಸಾಧ್ಯವಿರಲಿಲ್ಲ” ಎಂದು ಹೇಳಿದನು.

18 ಯೆಹೂದ್ಯವಿಶ್ವಾಸಿಗಳು ಈ ಸಂಗತಿಗಳನ್ನು ಕೇಳಿದಾಗ ವಾದವನ್ನು ನಿಲ್ಲಿಸಿ, ದೇವರನ್ನು ಸ್ತುತಿಸುತ್ತಾ, “ಹಾಗಾದರೆ ನಮ್ಮಂತೆಯೇ ತಮ್ಮ ಹೃದಯಗಳನ್ನು ಮಾರ್ಪಡಿಸಿಕೊಂಡು ಜೀವವನ್ನು ಹೊಂದಿಕೊಳ್ಳಲು ದೇವರು ಯೆಹೂದ್ಯರಲ್ಲದವರಿಗೂ ಅವಕಾಶ ಕೊಟ್ಟಿದ್ದಾನೆ!” ಎಂದು ಹೇಳಿದರು.

ಅಂತಿಯೋಕ್ಯಕ್ಕೆ ಸುವಾರ್ತೆ

19 ಸ್ತೆಫನನು ಕೊಲ್ಲಲ್ಪಟ್ಟ ನಂತರ ಉಂಟಾದ ಹಿಂಸೆಯಿಂದಾಗಿ ವಿಶ್ವಾಸಿಗಳು ಚದರಿಹೋದರು. ವಿಶ್ವಾಸಿಗಳಲ್ಲಿ ಕೆಲವರು ಬಹು ದೂರದ ಸ್ಥಳಗಳಾದ ಫೆನಿಷ್ಯ, ಸೈಪ್ರಸ್ ಮತ್ತು ಅಂತಿಯೋಕ್ಯಗಳಿಗೆ ಹೋದರು. ವಿಶ್ವಾಸಿಗಳು ಈ ಸ್ಥಳಗಳಲ್ಲಿ ಸುವಾರ್ತೆಯನ್ನು ತಿಳಿಸಿದರು. ಆದರೆ ಅವರು ಯೆಹೂದ್ಯರಿಗೆ ಮಾತ್ರ ತಿಳಿಸಿದರು. 20 ಈ ವಿಶ್ವಾಸಿಗಳಲ್ಲಿ ಕೆಲವರು ಸೈಪ್ರಸ್ ಮತ್ತು ಸಿರೇನ್ ಸ್ಥಳಗಳವರಾಗಿದ್ದರು. ಈ ಜನರು ಅಂತಿಯೋಕ್ಯಕ್ಕೆ ಬಂದಾಗ ಅವರು, ಪ್ರಭುವಾದ ಯೇಸುವಿನ ವಿಷಯವಾದ ಸುವಾರ್ತೆಯನ್ನು ಅಲ್ಲಿಯ ಗ್ರೀಕ್ ಜನರಿಗೆ ತಿಳಿಸಿದರು. 21 ಪ್ರಭುವು ವಿಶ್ವಾಸಿಗಳಿಗೆ ಸಹಾಯ ಮಾಡುತ್ತಿದ್ದನು. ಜನರು ಬಹು ಸಂಖ್ಯೆಯಲ್ಲಿ ಪ್ರಭುವನ್ನು ನಂಬಿಕೊಂಡು ಅನುಸರಿಸತೊಡಗಿದರು.

22 ಅಂತಿಯೋಕ್ಯದಲ್ಲಿದ್ದ ಈ ಹೊಸ ವಿಶ್ವಾಸಿಗಳ ಬಗ್ಗೆ ಜೆರುಸಲೇಮಿನ ಸಭೆಯವರಿಗೆ ತಿಳಿಯಿತು. ಆದ್ದರಿಂದ ಜೆರುಸಲೇಮಿನ ವಿಶ್ವಾಸಿಗಳು ಬಾರ್ನಬನನ್ನು ಅಂತಿಯೋಕ್ಯಕ್ಕೆ ಕಳುಹಿಸಿದರು. 23-24 ಬಾರ್ನಬನು ಒಳ್ಳೆಯ ಮನುಷ್ಯನಾಗಿದ್ದನು. ಅವನು ಪವಿತ್ರಾತ್ಮಭರಿತನಾಗಿದ್ದನು ಮತ್ತು ಪೂರ್ಣನಂಬಿಕೆಯುಳ್ಳವನಾಗಿದ್ದನು. ಬಾರ್ನಬನು ಅಂತಿಯೋಕ್ಯಕ್ಕೆ ಹೋದಾಗ, ದೇವರು ಆ ಜನರನ್ನು ಅಧಿಕವಾಗಿ ಆಶೀರ್ವದಿಸಿರುವುದನ್ನು ಕಂಡನು. ಇದರಿಂದ ಬಾರ್ನಬನಿಗೆ ತುಂಬಾ ಸಂತೋಷವಾಯಿತು. ಅಂತಿಯೋಕ್ಯದಲ್ಲಿದ್ದ ವಿಶ್ವಾಸಿಗಳನ್ನೆಲ್ಲ ಅವನು ಪ್ರೋತ್ಸಾಹಿಸಿದನು. ಅವನು ಅವರಿಗೆ, “ನಿಮ್ಮ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬೇಡಿ. ಪ್ರಭುವಿಗೆ ನಿಮ್ಮ ಪೂರ್ಣಹೃದಯಗಳಿಂದ ಯಾವಾಗಲೂ ವಿಧೇಯರಾಗಿರಿ” ಎಂದು ಹೇಳಿದನು. ಅನೇಕ ಜನರು ಪ್ರಭುವಾದ ಯೇಸುವಿನ ಹಿಂಬಾಲಕರಾದರು.

25 ಬಳಿಕ ಬಾರ್ನಬನು ಸೌಲನನ್ನು ಹುಡುಕಿಕೊಂಡು ತಾರ್ಸಸ್ ಪಟ್ಟಣಕ್ಕೆ ಹೋದನು. 26 ಬಾರ್ನಬನು ಅಲ್ಲಿ ಸೌಲನನ್ನು ಕಂಡುಕೊಂಡು ಅವನನ್ನು ಅಂತಿಯೋಕ್ಯಕ್ಕೆ ಕರೆದುಕೊಂಡು ಬಂದನು. ಸೌಲನು ಮತ್ತು ಬಾರ್ನಬನು ಅಂತಿಯೋಕ್ಯದಲ್ಲಿ ಒಂದು ವರ್ಷ ಪೂರ್ತಿ ಸಭೆಯ ಅನ್ಯೋನ್ಯತೆಯಲ್ಲಿ ಇದ್ದುಕೊಂಡು ಅನೇಕ ಜನರಿಗೆ ಬೋಧಿಸಿದರು. ಯೇಸುವಿನ ಹಿಂಬಾಲಕರಿಗೆ “ಕ್ರೈಸ್ತರು” ಎಂಬ ಹೆಸರು ಬಂದದ್ದು ಅಂತಿಯೋಕ್ಯದಲ್ಲೇ.

27 ಆ ಕಾಲದಲ್ಲಿ ಕೆಲವು ಪ್ರವಾದಿಗಳು ಜೆರುಸಲೇಮಿನಿಂದ ಅಂತಿಯೋಕ್ಯಕ್ಕೆ ಹೋದರು. 28 ಈ ಪ್ರವಾದಿಗಳಲ್ಲಿ “ಅಗಬ” ಎಂಬ ಒಬ್ಬನಿದ್ದನು. ಅಗಬನು ಅಂತಿಯೋಕ್ಯದಲ್ಲಿ ಪವಿತ್ರಾತ್ಮನ ಪ್ರೇರಣೆಯಿಂದ, “ಇಡೀ ಪ್ರಪಂಚಕ್ಕೆ ಭೀಕರ ಕ್ಷಾಮ ಬರಲಿದೆ” ಎಂದು ಹೇಳಿದನು. (ಈ ಬರಗಾಲವು ಕ್ಲಾಡಿಯಸ್ ಚಕ್ರವರ್ತಿಯ ಕಾಲದಲ್ಲಿ ಬಂದಿತು.) 29 ಜುದೇಯದಲ್ಲಿರುವ ಸಹೋದರ ಸಹೋದರಿಯರಿಗೆ ಸಹಾಯಮಾಡಲು ವಿಶ್ವಾಸಿಗಳು ನಿರ್ಧರಿಸಿದರು. ವಿಶ್ವಾಸಿಗಳಲ್ಲಿ ಪ್ರತಿಯೊಬ್ಬರೂ ತಮ್ಮಿಂದಾದಷ್ಟನ್ನು ಅವರಿಗೆ ಕಳುಹಿಸಿಕೊಡಲು ಯೋಜನೆ ಮಾಡಿದರು. 30 ಅವರು ಹಣವನ್ನು ಕೂಡಿಸಿ ಬಾರ್ನಬ ಮತ್ತು ಸೌಲರಿಗೆ ಕೊಟ್ಟರು. ಬಳಿಕ ಬಾರ್ನಬ ಮತ್ತು ಸೌಲರು ಅದನ್ನು ತಂದು ಜುದೇಯದಲ್ಲಿದ್ದ ಸಭಾಹಿರಿಯರಿಗೆ ಕೊಟ್ಟರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International