Old/New Testament
ಸಿನಾಯ್ ಬೆಟ್ಟದಲ್ಲಿ ಎಲೀಯನು
19 ರಾಜನಾದ ಅಹಾಬನು ಈಜೆಬೆಲಳಿಗೆ ಎಲೀಯನು ಮಾಡಿದ ಎಲ್ಲಾ ಕಾರ್ಯಗಳನ್ನು ಹೇಳಿದನು. ಎಲೀಯನು (ಬಾಳನ) ಪ್ರವಾದಿಗಳನ್ನೆಲ್ಲ ಖಡ್ಗದಿಂದ ಹೇಗೆ ಕೊಂದನೆಂಬುದನ್ನೂ ಅಹಾಬನು ಅವಳಿಗೆ ಹೇಳಿದನು. 2 ಆದ್ದರಿಂದ ಈಜೆಬೆಲಳು ಎಲೀಯನ ಬಳಿಗೆ ಒಬ್ಬ ಸಂದೇಶಕನನ್ನು ಕಳುಹಿಸಿದಳು. ಈಜೆಬೆಲಳು, “ನೀನು ಆ ಪ್ರವಾದಿಗಳನ್ನು ಕೊಂದುಹಾಕಿದಂತೆ ನಾಳೆಯ ದಿನ ನಾನು ಇದೇ ಸಮಯಕ್ಕೆ ಮುಂಚೆ, ನಿನ್ನನ್ನು ಕೊಂದುಹಾಕುವೆನೆಂದು ಪ್ರಮಾಣ ಮಾಡುತ್ತೇನೆ. ನಾನು ಈ ಕಾರ್ಯದಲ್ಲಿ ವಿಜಯಿಯಾಗದಿದ್ದಲ್ಲಿ, ದೇವರುಗಳು ನನ್ನನ್ನು ಕೊಲ್ಲಲಿ” ಎಂದು ಹೇಳಿದಳು.
3 ಎಲೀಯನು ಇದನ್ನು ಕೇಳಿ ಭಯಗೊಂಡನು. ಅವನು ತನ್ನ ಜೀವರಕ್ಷಣೆಗಾಗಿ ಓಡಿಹೋದನು. ಅವನು ತನ್ನ ಸೇವಕನನ್ನೂ ತನ್ನ ಸಂಗಡ ಕರೆದೊಯ್ದನು. ಅವರು ಯೆಹೂದದ ಬೇರ್ಷೆಬಕ್ಕೆ ಹೋದರು. ಎಲೀಯನು ಬೇರ್ಷೆಬದಲ್ಲಿ ತನ್ನ ಸೇವಕನನ್ನು ಬಿಟ್ಟನು. 4 ನಂತರ ಎಲೀಯನು ಮರಳುಗಾಡಿನಲ್ಲಿ ದಿನವೆಲ್ಲ ನಡೆದನು. ಎಲೀಯನು ಒಂದು ಪೊದೆಯ ಕೆಳಗೆ ಕುಳಿತುಕೊಂಡನು. ಅವನು ಸಾಯಲು ಇಚ್ಛಿಸಿ, “ಯೆಹೋವನೇ, ನನಗೆ ಜೀವನ ಸಾಕಾಗಿದೆ! ಸಾಯಲು ನನಗೆ ಅವಕಾಶ ಮಾಡು. ನಾನು ನನ್ನ ಪೂರ್ವಿಕರಿಗಿಂತಲೂ ಉತ್ತಮನೇನಲ್ಲ” ಎಂದು ಹೇಳಿದನು.
5 ನಂತರ ಎಲೀಯನು ಪೊದೆಯ ಕೆಳಗೆ ಮಲಗಿ ನಿದ್ದೆಹೋದನು. ದೂತನೊಬ್ಬನು ಎಲೀಯನ ಹತ್ತಿರಕ್ಕೆ ಬಂದು ಅವನನ್ನು ಸ್ಪರ್ಶಿಸಿ, “ಎದ್ದೇಳು! ಊಟಮಾಡು!” ಎಂದನು. 6 ಇದ್ದಲಿನ ಮೇಲೆ ಸುಟ್ಟ ಒಂದು ರೊಟ್ಟಿಯೂ ಒಂದು ತಂಬಿಗೆ ನೀರೂ ಅವನ ತಲೆಯ ಹತ್ತಿರದಲ್ಲಿ ಇದ್ದುದನ್ನು ಎಲೀಯನು ನೋಡಿದನು. ಎಲೀಯನು ರೊಟ್ಟಿಯನ್ನು ತಿಂದು ನೀರನ್ನು ಕುಡಿದನು. ನಂತರ ಅವನು ನಿದ್ದೆ ಮಾಡಿದನು.
7 ತರುವಾಯ ಯೆಹೋವನ ದೂತನು ಅವನ ಬಳಿಗೆ ಮತ್ತೆ ಬಂದು ಅವನನ್ನು ತಟ್ಟಿ ಅವನಿಗೆ, “ಎದ್ದೇಳು! ಊಟಮಾಡು! ನೀನು ಊಟ ಮಾಡದಿದ್ದರೆ, ಬಹುದೂರ ನೀನು ಪ್ರಯಾಣ ಮಾಡಬೇಕಾಗಿರುವುದರಿಂದ ನಿನ್ನಲ್ಲಿ ಸಾಕಷ್ಟು ಶಕ್ತಿಯಿರುವುದಿಲ್ಲ” ಎಂದು ಹೇಳಿದನು. 8 ಎಲೀಯನು ಎದ್ದು ಊಟಮಾಡಿ ನೀರನ್ನು ಕುಡಿದನು. ಎಲೀಯನು ನಲವತ್ತು ಹಗಲು ಮತ್ತು ರಾತ್ರಿ ಪ್ರಯಾಣ ಮಾಡಲು ಸಾಕಾಗುವಷ್ಟು ಶಕ್ತಿಯನ್ನು ಆ ಆಹಾರವು ನೀಡಿತು. ಅವನು ದೇವರ ಬೆಟ್ಟವಾದ ಹೋರೇಬ್ಗೆ ಹೋದನು. 9 ಎಲೀಯನು ಅಲ್ಲಿನ ಒಂದು ಗುಹೆಗೆ ಹೋಗಿ ರಾತ್ರಿಯೆಲ್ಲಾ ಅಲ್ಲಿ ಕಳೆದನು.
ಆಗ ಯೆಹೋವನು ಎಲೀಯನೊಂದಿಗೆ ಮಾತನಾಡಿ, “ಎಲೀಯನೇ, ನೀನು ಇಲ್ಲಿರುವುದೇಕೆ?” ಎಂದು ಕೇಳಿದನು.
10 ಎಲೀಯನು, “ಸರ್ವಶಕ್ತನಾದ ಯೆಹೋವ ದೇವರೇ, ನಾನು ಯಾವಾಗಲೂ ನಿನ್ನ ಸೇವೆಯನ್ನು ಮಾಡಿದೆನು. ನಾನು ನನ್ನಿಂದ ಸಾಧ್ಯವಾದಷ್ಟು ಉತ್ತಮವಾಗಿ ನಿನ್ನ ಸೇವೆಯನ್ನು ಮಾಡಿದೆನು. ಆದರೆ ಇಸ್ರೇಲಿನ ಜನರು ನಿನ್ನೊಂದಿಗೆ ತಾವು ಮಾಡಿಕೊಂಡ ಒಡಂಬಡಿಕೆಯನ್ನು ಉಲ್ಲಂಘಿಸಿದರು. ಅವರು ನಿನ್ನ ಯಜ್ಞವೇದಿಕೆಗಳನ್ನು ನಾಶಪಡಿಸಿದರು. ಅವರು ನಿನ್ನ ಪ್ರವಾದಿಗಳನ್ನು ಕೊಂದುಹಾಕಿದರು. ಇನ್ನೂ ಜೀವಂತವಾಗಿರುವ ಪ್ರವಾದಿಯು ನಾನೊಬ್ಬನು ಮಾತ್ರ. ಅವರು ಈಗ ನನ್ನನ್ನೂ ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ!” ಎಂದು ಹೇಳಿದನು.
11 ಆಗ ಯೆಹೋವನು ಎಲೀಯನಿಗೆ, “ಹೋಗು, ನನ್ನ ಎದುರಿಗೆ ಬೆಟ್ಟದ ಮೇಲೆ ನಿಲ್ಲು. ನಾನು ನಿನ್ನ ಬಳಿಯಲ್ಲಿ ಹಾದು ಹೋಗುತ್ತೇನೆ” ಎಂದು ಹೇಳಿದನು. ಆಗ ಬಿರುಗಾಳಿಯು ಬೀಸಿತು. ಆ ಬಿರುಗಾಳಿಯು ಬೆಟ್ಟಗಳನ್ನು ಸೀಳಿಹಾಕಿತು; ಅದು ದೊಡ್ಡ ಬಂಡೆಗಳನ್ನು ಯೆಹೋವನ ಎದುರಿನಲ್ಲಿ ಒಡೆದುಹಾಕಿತು. ಆದರೆ ಆ ಗಾಳಿಯೇ ಯೆಹೋವನಲ್ಲ! ಆ ಬಿರುಗಾಳಿಯ ನಂತರ ಅಲ್ಲಿ ಒಂದು ಭೂಕಂಪವುಂಟಾಯಿತು. ಆದರೆ ಆ ಭೂಕಂಪವು ಯೆಹೋವನಲ್ಲ. 12 ಭೂಕಂಪದ ನಂತರ ಅಲ್ಲಿ ಬೆಂಕಿ ಉಂಟಾಯಿತು. ಆದರೆ ಆ ಬೆಂಕಿಯೂ ಯೆಹೋವನಲ್ಲ. ಆ ಬೆಂಕಿಯ ನಂತರ ಸದ್ದಿಲ್ಲದ ಮೃದುವಾದ ಧ್ವನಿ ಉಂಟಾಯಿತು.
13 ಎಲೀಯನಿಗೆ ಆ ಧ್ವನಿಯು ಕೇಳಿಸಿದಾಗ, ಅವನು ತನ್ನ ಮೇಲಂಗಿಯಿಂದ ಮುಖವನ್ನು ಮುಚ್ಚಿಕೊಂಡನು. ನಂತರ ಅವನು ಗುಹೆಯ ಹತ್ತಿರಕ್ಕೆ ಹೋಗಿ, ಅದರ ದ್ವಾರದಲ್ಲಿ ನಿಂತುಕೊಂಡನು. ಆಗ ಆ ಧ್ವನಿಯು, “ಎಲೀಯನೇ, ನೀನು ಏಕೆ ಇಲ್ಲಿರುವೆ?” ಎಂದು ಅವನನ್ನು ಕೇಳಿತು.
14 ಎಲೀಯನು, “ಸರ್ವಶಕ್ತನಾದ ಯೆಹೋವ ದೇವರೇ, ನಾನು ಯಾವಾಗಲೂ ನಿನ್ನ ಸೇವೆಯನ್ನು ಮಾಡಿದೆನು. ನಾನು ನನ್ನಿಂದ ಸಾಧ್ಯವಾದಷ್ಟು ಉತ್ತಮವಾಗಿ ನಿನ್ನ ಸೇವೆಯನ್ನು ಮಾಡಿದೆನು. ಆದರೆ ಇಸ್ರೇಲಿನ ಜನರು ನಿನ್ನೊಂದಿಗೆ ತಾವು ಮಾಡಿಕೊಂಡ ಒಡಂಬಡಿಕೆಯನ್ನು ಉಲ್ಲಂಘಿಸಿದರು. ಅವರು ನಿನ್ನ ಯಜ್ಞವೇದಿಕೆಗಳನ್ನು ನಾಶಪಡಿಸಿದರು. ಅವರು ನಿನ್ನ ಪ್ರವಾದಿಗಳನ್ನು ಕೊಂದುಹಾಕಿದರು. ಇನ್ನೂ ಜೀವಂತವಾಗಿರುವ ಪ್ರವಾದಿಯು ನಾನೊಬ್ಬನು ಮಾತ್ರ. ಅವರು ಈಗ ನನ್ನನ್ನೂ ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ!” ಎಂದು ಹೇಳಿದನು.
15 ಯೆಹೋವನು, “ನೀನು ಬಂದ ದಾರಿಯಿಂದ ಹಿಂತಿರುಗಿ ದಮಸ್ಕದ ಅರಣ್ಯಕ್ಕೆ ಹೋಗು. ಅಲ್ಲಿಂದ ದಮಸ್ಕಕ್ಕೆ ಹೋಗಿ, ಹಜಾಯೇಲನನ್ನು ಅರಾಮ್ಯರ ರಾಜನನ್ನಾಗಿ ಅಭಿಷೇಕಿಸು. 16 ನಂತರ ನಿಂಷಿಯ ಮಗನಾದ ಯೇಹುವನ್ನು ಇಸ್ರೇಲಿನ ರಾಜನನ್ನಾಗಿ ಅಭಿಷೇಕಿಸು. ಅಬೇಲ್ ಮೆಹೋಲದ ಶಾಫಾಟನ ಮಗನಾದ ಎಲೀಷನನ್ನು ನಿನ್ನ ಜಾಗದಲ್ಲಿ ಪ್ರವಾದಿಯನ್ನಾಗಿ ಅಭಿಷೇಕಿಸು. 17 ಹಜಾಯೇಲನು ಕೆಟ್ಟವರಾದ ಅನೇಕ ಜನರನ್ನು ಕೊಲ್ಲುತ್ತಾನೆ. ಹಜಾಯೇಲನ ಖಡ್ಗದಿಂದ ತಪ್ಪಿಸಿಕೊಂಡವರನ್ನು ಯೇಹುವು ಕೊಲ್ಲುತ್ತಾನೆ. ಯೇಹುವಿನಿಂದ ತಪ್ಪಿಸಿಕೊಂಡ ಆ ಕೆಟ್ಟ ಜನರನ್ನೆಲ್ಲ ಎಲೀಷನು ಕೊಲ್ಲುತ್ತಾನೆ. 18 ಎಲೀಯನೇ, ಇಸ್ರೇಲಿನಲ್ಲಿ ನಂಬಿಗಸ್ಥನಾದ ವ್ಯಕ್ತಿಯು ನೀನೊಬ್ಬನು ಮಾತ್ರ ಅಲ್ಲ. ಆ ದುಷ್ಟಜನರು ಅನೇಕ ಜನರನ್ನು ಕೊಲ್ಲುತ್ತಾರೆ. ಆದರೂ, ಅದಾದ ನಂತರ, ಬಾಳನಿಗೆ ಎಂದೆಂದೂ ಬಾಗಿ ನಮಸ್ಕರಿಸದಿರುವ ಏಳು ಸಾವಿರ ಜನರು ಇನ್ನೂ ಇಸ್ರೇಲಿನಲ್ಲಿ ವಾಸಮಾಡುತ್ತಿದ್ದಾರೆ! ಬಾಳನ ವಿಗ್ರಹಕ್ಕೆ ಎಂದೂ ಮುದ್ದಿಡದ ಆ ಏಳು ಸಾವಿರ ಜನರನ್ನು ನಾನು ಅಲ್ಲಿ ಉಳಿಸುವೆನು.”
ಎಲೀಷನು ಪ್ರವಾದಿಯಾದನು
19 ಎಲೀಯನು ಆ ಸ್ಥಳದಿಂದ ಹೊರಟು ಶಾಫಾಟನ ಮಗನಾದ ಎಲೀಷನನ್ನು ಕಂಡುಹಿಡಿಯಲು ಹೋದನು. ಎಲೀಷನು ಹನ್ನೆರಡು ಜೋಡಿ ಎತ್ತುಗಳನ್ನು ತಂದು ಭೂಮಿಯನ್ನು ಉಳುತ್ತಿದ್ದನು. ಎಲೀಯನು ಬಂದಾಗ ಎಲೀಷನು ಹನ್ನೆರಡನೆಯ ಜೋಡಿಯಿಂದ ತಾನಾಗಿ ಭೂಮಿಯನ್ನು ಉಳುತ್ತಿದ್ದನು. ಎಲೀಯನು ಎಲೀಷನ ಹತ್ತಿರಕ್ಕೆ ಹೋಗಿ ತನ್ನ ಮೇಲಂಗಿಯನ್ನು ಎಲೀಷನಿಗೆ ತೊಡಿಸಿದನು. 20 ಎಲೀಷನು ತಕ್ಷಣ ತನ್ನ ಎತ್ತುಗಳನ್ನು ಬಿಟ್ಟು ಎಲೀಯನ ಹಿಂದೆ ಹೋದನು. ಎಲೀಷನು, “ನನ್ನ ತಾಯಿಗೆ ಮುದ್ದಿಟ್ಟು, ತಂದೆಗೆ ನಮಸ್ಕರಿಸಿ, ನಿನ್ನನ್ನು ಹಿಂಬಾಲಿಸುತ್ತೇನೆ” ಎಂದು ಹೇಳಿದನು.
ಎಲೀಯನು, “ಸರಿ, ನಾನು ನಿನ್ನನ್ನು ತಡೆಯುವುದಿಲ್ಲ” ಎಂದು ಉತ್ತರಿಸಿದನು.
21 ನಂತರ ಎಲೀಷನು ಹೋಗಿ ತಾನು ಉಳುತ್ತಿದ್ದ ಎತ್ತುಗಳನ್ನು ವಧಿಸಿ, ಮಾಂಸವನ್ನು ನೊಗದಿಂದಲೇ ಬೇಯಿಸಿ ಜನರೆಲ್ಲರಿಗೆ ಔತಣವನ್ನು ಏರ್ಪಡಿಸಿದನು. ನಂತರ ಅವನು ಎಲೀಯನನ್ನು ಹಿಂಬಾಲಿಸಿ ಅವನ ಸಹಾಯಕನಾದನು.
ಬೆನ್ಹದದ ಮತ್ತು ಅಹಾಬ ಇವರ ಯುದ್ಧ
20 ಬೆನ್ಹದದನು ಅರಾಮಿನ ರಾಜ. ಅವನು ತನ್ನ ಸೇನೆಯನ್ನೆಲ್ಲ ಒಟ್ಟಾಗಿ ಸೇರಿಸಿದನು. ಅವನ ಹತ್ತಿರ ಮೂವತ್ತೆರಡು ಮಂದಿ ರಾಜರಿದ್ದರು. ಅವರ ಬಳಿ ಕುದುರೆಗಳೂ ರಥಗಳೂ ಇದ್ದವು. ಅವರು ಸಮಾರ್ಯಕ್ಕೆ ವಿರುದ್ಧವಾಗಿ ಹೋಗಿ ಅದಕ್ಕೆ ಮುತ್ತಿಗೆ ಹಾಕಿದರು. 2 ರಾಜನು ಆ ನಗರದಲ್ಲಿದ್ದ ಇಸ್ರೇಲಿನ ರಾಜನಾದ ಅಹಾಬನ ಬಳಿಗೆ ತನ್ನ ಸಂದೇಶಕರನ್ನು ಕಳುಹಿಸಿದನು. 3 ಅವನ ಸಂದೇಶವು ಹೀಗಿತ್ತು: “ಬೆನ್ಹದದನು ಹೀಗೆನ್ನುವನು, ‘ನೀವು ನನಗೆ ನಿಮ್ಮಲ್ಲಿರುವ ಬೆಳ್ಳಿಬಂಗಾರಗಳನ್ನು ಒಪ್ಪಿಸಬೇಕು. ನಿಮ್ಮ ಪತ್ನಿಯರನ್ನು ಮತ್ತು ಮಕ್ಕಳನ್ನು ನನಗೆ ಒಪ್ಪಿಸಲೇಬೇಕು.’”
4 ಇಸ್ರೇಲಿನ ರಾಜನು, “ನನ್ನ ಒಡೆಯನಾದ ರಾಜನೇ, ಈಗ ನಾನು ನಿನ್ನವನೇ. ನನ್ನ ಬಳಿ ಇರುವುದೆಲ್ಲವೂ ನಿನ್ನದೇ” ಎಂದು ಉತ್ತರಿಸಿದನು.
5 ನಂತರ ಆ ಸಂದೇಶಕರು ಅಹಾಬನ ಹತ್ತಿರಕ್ಕೆ ಹಿಂದಿರುಗಿ ಬಂದು, “ಬೆನ್ಹದದನು ಹೀಗೆನ್ನುತ್ತಾನೆ, ‘ನೀನು ನಿನ್ನಲ್ಲಿರುವ ಎಲ್ಲಾ ಬೆಳ್ಳಿಬಂಗಾರವನ್ನು ಮತ್ತು ನಿನ್ನ ಪತ್ನಿಯರನ್ನು ಮತ್ತು ಮಕ್ಕಳನ್ನು ನನಗೆ ಒಪ್ಪಿಸಲೇಬೇಕೆಂದು ನಾನು ಮುಂಚೆಯೇ ನಿನಗೆ ತಿಳಿಸಿದ್ದೇನೆ. 6 ನಾಳೆ ಇದೇ ಸಮಯದಲ್ಲಿ, ನಿನ್ನ ಅರಮನೆ ಮತ್ತು ನಿನ್ನ ಅಧೀನದಲ್ಲಿರುವ ಅಧಿಕಾರಿಗಳ ಮನೆಗಳನ್ನು ಶೋಧಿಸಲು ನಾನು ನನ್ನ ಜನರನ್ನು ಕಳುಹಿಸುತ್ತೇನೆ. ನನ್ನ ಜನರು ತಮಗೆ ಇಷ್ಟವಾದುದನ್ನು ತೆಗೆದುಕೊಳ್ಳುತ್ತಾರೆ’” ಎಂದು ಹೇಳಿದರು.
7 ಆದ್ದರಿಂದ ಅಹಾಬನು ತನ್ನ ರಾಜ್ಯದ ಹಿರಿಯರೆಲ್ಲರ ಒಂದು ಸಭೆಯನ್ನು ಕರೆದು, “ನೋಡಿ, ಬೆನ್ಹದದನು ಕೇಡುಮಾಡಬೇಕೆಂದಿದ್ದಾನೆ. ನನ್ನ ಪತ್ನಿಯರನ್ನು, ಮಕ್ಕಳನ್ನು ಮತ್ತು ಬೆಳ್ಳಿಬಂಗಾರಗಳನ್ನು ತನಗೆ ಒಪ್ಪಿಸಬೇಕೆಂದು ಅವನು ನನ್ನನ್ನು ಮೊದಲು ಕೇಳಿದ್ದನು. ನಾನು ಅದಕ್ಕೆ ಒಪ್ಪಿಕೊಂಡಿದ್ದೆನು. ಈಗ ಅವನು ಎಲ್ಲವನ್ನೂ ತೆಗೆದುಕೊಳ್ಳಲು ಅಪೇಕ್ಷೆಪಟ್ಟಿದ್ದಾನೆ” ಎಂದು ಹೇಳಿದನು.
8 ಆದರೆ ಹಿರಿಯರೆಲ್ಲರು ಮತ್ತು ಜನರೆಲ್ಲರು, “ಅವನ ಮಾತಿಗೆ ಒಪ್ಪಬೇಡ. ಅವನು ಹೇಳಿದ್ದನ್ನು ನೀನು ಮಾಡಬೇಡ” ಎಂದು ಹೇಳಿದರು.
9 ಅಹಾಬನು ಬೆನ್ಹದದನ ಸಂದೇಶಕರಿಗೆ, “ನನ್ನ ಒಡೆಯನಾದ ರಾಜನಿಗೆ ಇದನ್ನು ತಿಳಿಸಿರಿ: ನೀನು ಮೊದಲು ಹೇಳಿದ್ದನ್ನು ನಾನು ಮಾಡುತ್ತೇನೆ. ಆದರೆ ನಿನ್ನ ಎರಡನೆಯ ಆಜ್ಞೆಯನ್ನು ನೆರವೇರಿಸಲು ನನ್ನಿಂದ ಸಾಧ್ಯವಿಲ್ಲ” ಎಂದು ಹೇಳಿದನು.
ರಾಜನಾದ ಬೆನ್ಹದದನ ಜನರು ಈ ಸಂದೇಶವನ್ನು ರಾಜನಿಗೆ ತಿಳಿಸಿದರು. 10 ನಂತರ ಅವರು ಬೆನ್ಹದದನ ಮತ್ತೊಂದು ಸಂದೇಶದೊಂದಿಗೆ ಹಿಂದಿರುಗಿ ಬಂದರು. ಆ ಸಂದೇಶವು ಹೀಗಿತ್ತು: “ನಾನು ಸಮಾರ್ಯವನ್ನು ಸಂಪೂರ್ಣವಾಗಿ ನಾಶಗೊಳಿಸುತ್ತೇನೆ. ಆ ನಗರದಲ್ಲಿ ಏನನ್ನೂ ಉಳಿಸುವುದಿಲ್ಲವೆಂದು ನಾನು ಪ್ರಮಾಣ ಮಾಡುತ್ತೇನೆ. ನನ್ನ ಜನರು, ಆ ನಗರವನ್ನು ಕಂಡುಹಿಡಿಯಲಾಗದಂತೆ ಮತ್ತು ಮನೆಗೆ ತೆಗೆದುಕೊಂಡು ಹೋಗಲು ಒಂದು ಹಿಡಿ ಧೂಳೂ ಉಳಿಯದಂತೆ ಮಾಡಿಬಿಡುತ್ತಾರೆ. ನಾನು ಇದನ್ನು ಮಾಡದೆ ಹೋದರೆ ದೇವರು ನನ್ನನ್ನು ನಾಶಪಡಿಸಲಿ!”
11 ರಾಜನಾದ ಅಹಾಬನು, “ಯುದ್ಧಕ್ಕೆ ಹೋಗುವ ಸೈನಿಕನು ತನ್ನ ಆಯುಧಗಳನ್ನು ಧರಿಸಿಕೊಳ್ಳುವಾಗ ಹೆಚ್ಚಳಪಡದೆ, ಯುದ್ಧವಾದ ಮೇಲೆ ತನ್ನ ಆಯುಧಗಳನ್ನು ಬಿಚ್ಚಿಡುವಾಗ ಹೆಚ್ಚಳಪಡುತ್ತಾನೆಂಬುದನ್ನು ಬೆನ್ಹದದನಿಗೆ ಹೇಳಿ” ಎಂದು ಉತ್ತರಿಸಿದನು.
12 ರಾಜನಾದ ಬೆನ್ಹದದನು ಇತರ ಅರಸರೊಡನೆ ಅವನ ಗುಡಾರದಲ್ಲಿ ಕುಡಿಯುತ್ತಾ ಮತ್ತೇರಿಸಿಕೊಳ್ಳುತ್ತಿದ್ದನು. ಆ ಸಮಯದಲ್ಲಿ ರಾಜನಾದ ಅಹಾಬನಿಂದ ಬಂದ ಸಂದೇಶವನ್ನು ಸಂದೇಶಕರು ಅವನಿಗೆ ಹೇಳಿದರು. ರಾಜನಾದ ಬೆನ್ಹದದನು ಆ ನಗರಕ್ಕೆ ಮುತ್ತಿಗೆ ಹಾಕಲು ಸಿದ್ಧರಾಗುವಂತೆ ತನ್ನ ಜನರಿಗೆ ಆಜ್ಞಾಪಿಸಿದನು. ಆದ್ದರಿಂದ ಜನರು ಯುದ್ಧಮಾಡಲು ತಮ್ಮತಮ್ಮ ಸ್ಥಳಗಳಿಗೆ ಹೋದರು.
13 ಅದೇ ಸಮಯಕ್ಕೆ ಒಬ್ಬ ಪ್ರವಾದಿಯು ರಾಜನಾದ ಅಹಾಬನ ಬಳಿಗೆ ಹೋಗಿ, “ರಾಜನಾದ ಅಹಾಬನೇ, ಯೆಹೋವನು ನಿನಗೆ ಹೀಗೆನ್ನುತ್ತಾನೆ. ‘ಆ ಮಹಾಸೇನೆಯನ್ನು ನೀನು ನೋಡಿದೆಯಾ! ಯೆಹೋವನಾದ ನಾನು, ಈ ದಿನ ಆ ಸೇನೆಯನ್ನು ಸೋಲಿಸುವಂತೆ ನಿನಗೆ ಅವಕಾಶ ಮಾಡುತ್ತೇನೆ. ಅನಂತರ ನಾನೇ ಯೆಹೋವನೆಂಬುದು ನಿನಗೆ ತಿಳಿಯುತ್ತದೆ’” ಎಂದು ಹೇಳಿದನು.
14 ಅಹಾಬನು, “ಅವರನ್ನು ಸೋಲಿಸಲು ನೀನು ಯಾರನ್ನು ಬಳಸಿಕೊಳ್ಳುವೆ?” ಎಂದನು.
ಪ್ರವಾದಿಯು, “ಜಿಲ್ಲೆಗಳ ರಾಜ್ಯಪಾಲರುಗಳ ಸೇವೆಮಾಡುತ್ತಿರುವ ಯೌವನಸ್ಥರನ್ನು ಬಳಸಿಕೊಳ್ಳುತ್ತೇನೆ ಎಂದು ಯೆಹೋವನು ಹೇಳುತ್ತಾನೆ” ಎಂದು ಉತ್ತರಿಸಿದನು.
ನಂತರ ರಾಜನು, “ಯುದ್ಧವನ್ನು ಆರಂಭಿಸುವವರು ಯಾರು?” ಎಂದು ಕೇಳಿದನು.
“ನೀನೇ” ಎಂದು ಪ್ರವಾದಿಯು ಉತ್ತರಿಸಿದನು.
15 ಅಹಾಬನು ಜಿಲ್ಲೆಗಳ ರಾಜ್ಯಪಾಲರುಗಳ ಸೇವೆ ಮಾಡುತ್ತಿರುವ ಯೌವನಸ್ಥರನ್ನು ಒಟ್ಟಾಗಿ ಸೇರಿಸಿದನು. ಅಲ್ಲಿ ಇನ್ನೂರ ಮೂವತ್ತೆರಡು ಮಂದಿ ಯುವಜನರಿದ್ದರು. ನಂತರ ರಾಜನು ಇಸ್ರೇಲಿನ ಸೈನ್ಯವನ್ನು ಒಟ್ಟಾಗಿ ಕರೆದನು. ಅವರಲ್ಲಿ ಒಟ್ಟು ಏಳುಸಾವಿರ ಸೈನಿಕರಿದ್ದರು.
16 ಮಧ್ಯಾಹ್ನದ ವೇಳೆಗೆ, ರಾಜನಾದ ಬೆನ್ಹದದನು ಮತ್ತು ಅವನ ಸಹಾಯಕ್ಕಾಗಿ ಬಂದಿದ್ದ ಮೂವತ್ತೆರಡು ಮಂದಿ ರಾಜರು, ಅವರ ಗುಡಾರಗಳಲ್ಲಿ ಕುಡಿಯುತ್ತಾ ಮತ್ತೇರಿಸಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ರಾಜನಾದ ಅಹಾಬನ ಆಕ್ರಮಣವು ಆರಂಭವಾಯಿತು. 17 ಮೊದಲು ಯುವಸಹಾಯಕರು ಆಕ್ರಮಣ ಮಾಡಿದರು. ರಾಜನಾದ ಬೆನ್ಹದದನ ಜನರು, ಸಮಾರ್ಯದಿಂದ ಸೈನಿಕರು ಹೊರಗೆ ಬಂದಿದ್ದಾರೆಂಬುದನ್ನು ಅವನಿಗೆ ತಿಳಿಸಿದರು. 18 ಬೆನ್ಹದದನು, “ಅವರು ಪ್ರಾಯಶಃ ಹೋರಾಡಲು ಬಂದಿರಬಹುದು ಅಥವಾ ಅವರು ಶಾಂತಿ ಸಂಧಾನಕ್ಕಾಗಿ ಬಂದಿರಬಹುದು. ಅವರು ಯಾವುದಕ್ಕಾಗಿ ಬಂದಿದ್ದರೂ ಅವರನ್ನು ಜೀವಸಹಿತ ಬಂಧಿಸಿರಿ” ಎಂದು ಹೇಳಿದನು.
19 ಜಿಲ್ಲೆಗಳ ರಾಜ್ಯಪಾಲರುಗಳ ಸೇವೆಮಾಡುತ್ತಿದ್ದ ಯುವಕರು ಆಕ್ರಮಣದ ಮಂಚೂಣಿಯಲ್ಲಿದ್ದು, ಇಸ್ರೇಲಿನ ಸೇನೆಯು ಅವರನ್ನು ಹಿಂಬಾಲಿಸುತ್ತಿತ್ತು. 20 ಆದರೆ ಇಸ್ರೇಲಿನ ಪ್ರತಿಯೊಬ್ಬನೂ ತನ್ನ ಮೇಲೆ ಬಿದ್ದವನನ್ನು ಕೊಂದುಹಾಕುತ್ತಿದ್ದನು. ಅರಾಮ್ಯದ ಜನರು ಓಡಿಹೋಗಲು ಆರಂಭಿಸಿದರು. ಇಸ್ರೇಲಿನ ಸೈನ್ಯವು ಅವರನ್ನು ಅಟ್ಟಿಸಿಕೊಂಡು ಹೋಯಿತು. ರಾಜನಾದ ಬೆನ್ಹದದನು ಅಶ್ವಸೇನೆಯ ಕುದುರೆಯೊಂದರ ಮೇಲೆ ಕುಳಿತು ತಪ್ಪಿಸಿಕೊಂಡನು. 21 ರಾಜನಾದ ಅಹಾಬನು ತನ್ನ ಸೈನ್ಯವನ್ನು ಮುನ್ನಡೆಸಿ, ಅರಾಮ್ಯರ ಸೇನೆಯಿಂದ ರಥಗಳನ್ನೂ ಅಶ್ವಸೇನೆಯನ್ನೂ ಸೋಲಿಸಿದನು. ಅರಾಮ್ಯರ ಸೇನೆಯ ಮಹಾ ಅಪಜಯಕ್ಕೆ ರಾಜನಾದ ಅಹಾಬನು ಕಾರಣನಾದನು.
22 ಆಗ ಆ ಪ್ರವಾದಿಯು ರಾಜನಾದ ಅಹಾಬನಲ್ಲಿಗೆ ಹೋಗಿ, “ಅರಾಮಿನ ರಾಜನಾದ ಬೆನ್ಹದದನು ಮುಂದಿನ ವಸಂತಮಾಸದಲ್ಲಿ ನಿನ್ನ ವಿರುದ್ಧ ಯುದ್ಧಮಾಡಲು ಮತ್ತೆ ಬರುತ್ತಾನೆ. ಈಗ ನೀನು ಮನೆಗೆ ಹೋಗಿ ನಿನ್ನ ಸೈನ್ಯವನ್ನು ಬಲಪಡಿಸು. ಅವನ ವಿರುದ್ಧ ನೀನು ಸಮರ್ಥನಾಗಲು ಎಚ್ಚರಿಕೆಯಿಂದ ಉಪಾಯಗಳನ್ನು ಮಾಡು” ಎಂದು ಹೇಳಿದನು.
ಬೆನ್ಹದದನ ಮರು ಆಕ್ರಮಣ
23 ರಾಜನಾದ ಬೆನ್ಹದದನ ಅಧಿಕಾರಿಗಳು ಅವನಿಗೆ, “ಇಸ್ರೇಲಿನ ದೇವರು ಬೆಟ್ಟಗಳ ದೇವರಾಗಿದ್ದಾನೆ. ನಾವು ಬೆಟ್ಟಪ್ರದೇಶದಲ್ಲಿ ಹೋರಾಟ ಮಾಡಿದೆವು. ಆದ್ದರಿಂದ ಇಸ್ರೇಲಿನ ಜನರು ಗೆದ್ದರು. ಅವರೊಡನೆ ಸಮತಟ್ಟಾದ ಪ್ರದೇಶದಲ್ಲಿ ಹೋರಾಟ ಮಾಡೋಣ. ಆಗ ನಾವು ಗೆಲ್ಲುತ್ತೇವೆ. 24 ನೀನು ಮಾಡಬೇಕಾದದ್ದೇನೆಂದರೆ, ಮೂವತ್ತೆರಡು ಮಂದಿ ರಾಜರು ಸೇನೆಯನ್ನು ಮುನ್ನಡೆಸುವುದು ಬೇಡ; ಅವರ ಸೇನೆಯನ್ನು ಸೇನಾಧಿಪತಿಗಳೇ ಮುನ್ನಡೆಸಲಿ. 25 ಹಿಂದೆ ನೀನು ಕಳೆದುಕೊಂಡ ಸೇನೆಯಂತಹ ಮತ್ತೊಂದು ಸೈನ್ಯವನ್ನೀಗ ನೀನು ಒಟ್ಟುಗೂಡಿಸು, ಆ ಸೇನೆಯಲ್ಲಿದ್ದಂತಹ ಕುದುರೆಗಳನ್ನೂ ರಥಗಳನ್ನೂ ಒಟ್ಟಾಗಿ ಸೇರಿಸು. ನಂತರ ಇಸ್ರೇಲರೊಡನೆ ಸಮತಟ್ಟಾದ ಪ್ರದೇಶದಲ್ಲಿ ನಾವು ಹೋರಾಟ ಮಾಡೋಣ. ಆಗ ನಾವು ಜಯಗಳಿಸುತ್ತೇವೆ” ಎಂದು ಹೇಳಿದರು. ಬೆನ್ಹದದನು ಅವರ ಸಲಹೆಯನ್ನು ಅನುಸರಿಸಿ ಅವರು ಹೇಳಿದಂತೆಯೇ ಮಾಡಿದನು.
26 ವಸಂತಮಾಸದಲ್ಲಿ ಬೆನ್ಹದದನು ಅರಾಮ್ಯದ ಜನರನ್ನು ಒಟ್ಟುಗೂಡಿಸಿದನು. ಅವನು ಇಸ್ರೇಲರ ವಿರುದ್ಧ ಹೋರಾಡಲು ಅಫೇಕಕ್ಕೆ ಹೋದನು.
27 ಇಸ್ರೇಲರೂ ಯುದ್ಧಕ್ಕೆ ಸಿದ್ಧರಾದರು. ಇಸ್ರೇಲಿನ ಜನರು ಅರಾಮ್ಯದ ಸೇನೆಯೊಡನೆ ಹೋರಾಡಲು ಹೋದರು. ಅವರು ಅರಾಮ್ಯದ ಪಾಳೆಯಕ್ಕೆ ಎದುರಾಗಿ ತಮ್ಮ ಪಾಳೆಯ ಮಾಡಿಕೊಂಡರು. ಶತ್ರುಗಳಿಗೆ ಹೋಲಿಸಿದರೆ ಇಸ್ರೇಲರು ಆಡುಗಳ ಎರಡು ಚಿಕ್ಕಮಂದೆಯಂತೆ ಕಾಣುತ್ತಿದ್ದರು. ಆದರೆ ಅರಾಮ್ಯದ ಸೈನಿಕರು ಎಲ್ಲಾ ಪ್ರದೇಶವನ್ನು ವ್ಯಾಪಿಸಿದ್ದರು.
28 ಇಸ್ರೇಲಿನ ರಾಜನ ಹತ್ತಿರಕ್ಕೆ ಬಂದ ದೇವಮನುಷ್ಯನ ಸಂದೇಶವು ಇಂತಿದೆ: “ಯೆಹೋವನು ಹೀಗೆಂದನು: ‘ಯೆಹೋವನಾದ ನನ್ನನ್ನು ಬೆಟ್ಟಗಳ ದೇವರೆಂದು ಅರಾಮ್ಯದ ಜನರು ಹೇಳಿದ್ದಾರೆ. ನಾನು ಕಣಿವೆಗಳ ದೇವರಲ್ಲವೆಂದು ಸಹ ಅವರು ಯೋಚಿಸಿಕೊಂಡಿದ್ದಾರೆ. ಆದ್ದರಿಂದ ಈ ಮಹಾಸೇನೆಯನ್ನು ನೀನು ಸೋಲಿಸುವಂತೆ ನಾನು ಅವಕಾಶ ಮಾಡುತ್ತೇನೆ. ನಾನೇ ಯೆಹೋವನೆಂಬುದು ಆಗ ನಿನಗೇ ತಿಳಿಯುತ್ತದೆ!’”
29 ಈ ಎರಡು ಸೈನ್ಯಗಳೂ ಎದುರುಬದುರಾಗಿ ಏಳು ದಿನಗಳ ಕಾಲ ಪಾಳೆಯವನ್ನು ಹೂಡಿದವು. ಏಳನೆಯ ದಿನ ಯುದ್ಧವು ಆರಂಭವಾಯಿತು. ಇಸ್ರೇಲರು ಒಂದೇ ದಿನದಲ್ಲಿ ಅರಾಮ್ಯರ ಒಂದು ಲಕ್ಷ ಮಂದಿ ಸೈನಿಕರನ್ನು ಕೊಂದುಹಾಕಿದರು. 30 ಬದುಕಿ ಉಳಿದವರು ಅಫೇಕ್ ನಗರಕ್ಕೆ ಓಡಿಹೋದರು. ಆ ನಗರದ ಗೋಡೆಯು ಉಳಿದಿದ್ದ ಇಪ್ಪತ್ತೇಳು ಸಾವಿರ ಜನರ ಮೇಲೆ ಉರುಳಿ ಬಿತ್ತು. ಬೆನ್ಹದದನೂ ನಗರಕ್ಕೆ ಓಡಿಹೋಗಿ ಒಂದು ಕೊಠಡಿಯಲ್ಲಿ ಅವಿತುಕೊಂಡನು. 31 ಅವನ ಸೇವಕರು ಅವನಿಗೆ, “ಇಸ್ರೇಲಿನ ರಾಜರುಗಳು ಕನಿಕರವುಳ್ಳವರೆಂದು ನಾವು ಕೇಳಿದ್ದೇವೆ. ನಾವು ಗೋಣಿತಟ್ಟುಗಳನ್ನು (ನಮ್ಮ ನಡುಗಳಿಗೆ) ಕಟ್ಟಿಕೊಂಡು, ಹಗ್ಗಗಳನ್ನು ನಮ್ಮ ತಲೆಗಳ ಮೇಲೆ ಹಾಕಿಕೊಂಡು ಇಸ್ರೇಲಿನ ರಾಜನ ಬಳಿಗೆ ಹೋಗೋಣ. ಅವನು ನಮ್ಮ ಜೀವವನ್ನು ಉಳಿಸಬಹುದು” ಎಂದು ಹೇಳಿದರು.
32 ಅವರು ಗೋಣಿತಟ್ಟುಗಳನ್ನು ಧರಿಸಿಕೊಂಡು, ತಲೆಯ ಮೇಲೆ ಹಗ್ಗವನ್ನು ಹಾಕಿಕೊಂಡು, ಇಸ್ರೇಲಿನ ರಾಜನ ಬಳಿಗೆ ಬಂದರು. ಅವರು, “ನಿಮ್ಮ ಸೇವಕನಾದ ಬೆನ್ಹದದನು ಹೀಗೆನ್ನುವನು: ‘ದಯವಿಟ್ಟು ನನ್ನನ್ನು ಜೀವಸಹಿತ ಬಿಡು’” ಎಂದರು.
ಅಹಾಬನು, “ಅವನಿನ್ನೂ ಜೀವಸಹಿತ ಇದ್ದಾನೆಯೇ? ಅವನು ನನ್ನ ಸೋದರ” ಎಂದು ಉತ್ತರಿಸಿದನು.
33 ರಾಜನಾದ ಅಹಾಬನು ತಾನು ಬೆನ್ಹದದನನ್ನು ಕೊಲ್ಲುವುದಿಲ್ಲವೆಂಬುದನ್ನು ಯಾವುದಾದರೂ ಸೂಚನೆಯ ಮೂಲಕ ತಿಳಿಸಬಹುದೆಂದು ಬೆನ್ಹದದನ ಜನರು ಅಪೇಕ್ಷೆಪಟ್ಟಿದ್ದರು. ಅಹಾಬನು ಬೆನ್ಹದದನನ್ನು ತನ್ನ ಸೋದರನೆಂದು ಕರೆದಾಗ, ಸಲಹೆಗಾರರು ತ್ವರಿತವಾಗಿ, “ಹೌದು! ಬೆನ್ಹದದನು ನಿನ್ನ ಸೋದರನೇ” ಎಂದರು.
ಅಹಾಬನು, “ಅವನನ್ನು ನನ್ನ ಬಳಿಗೆ ಕರೆತನ್ನಿ” ಎಂದನು. ಬೆನ್ಹದದನು ರಾಜನಾದ ಅಹಾಬನ ಬಳಿಗೆ ಬಂದನು. ರಾಜನಾದ ಅಹಾಬನು ಅವನನ್ನು ತನ್ನೊಡನೆ ರಥದಲ್ಲಿ ಕುಳ್ಳಿರಿಸಿಕೊಂಡನು.
34 ಬೆನ್ಹದದನು ಅವನಿಗೆ, “ಅಹಾಬನೇ, ನನ್ನ ತಂದೆಯು ನಿನ್ನ ತಂದೆಯಿಂದ ವಶಪಡಿಸಿಕೊಂಡಿರುವ ಪಟ್ಟಣಗಳನ್ನು ನಿನಗೇ ಬಿಟ್ಟುಬಿಡುತ್ತೇನೆ. ನನ್ನ ತಂದೆಯು ಸಮಾರ್ಯದಲ್ಲಿ ಮಾಡಿದಂತೆ ನೀನೂ ದಮಸ್ಕದಲ್ಲಿ ಅಂಗಡಿಗಳನ್ನು ಹಾಕಬಹುದು” ಎಂದನು.
ಅಹಾಬನು, “ನೀನು ಇದಕ್ಕೆ ಒಪ್ಪಿಕೊಂಡರೆ, ನಾನು ನಿನ್ನನ್ನು ಸ್ವತಂತ್ರವಾಗಿ ಹೋಗಲು ಬಿಡುತ್ತೇನೆ” ಎಂದನು. ಆ ಇಬ್ಬರು ರಾಜರುಗಳು ಶಾಂತಿಸಂಧಾನವನ್ನು ಮಾಡಿಕೊಂಡರು. ರಾಜನಾದ ಅಹಾಬನು ಬೆನ್ಹದದನಿಗೆ ಸ್ವತಂತ್ರವನ್ನು ಕೊಟ್ಟು ಕಳುಹಿಸಿದನು.
ಅಹಾಬನ ವಿರುದ್ಧವಾಗಿ ಪ್ರವಾದನೆ
35 ಪ್ರವಾದಿಗಳಲ್ಲಿ ಒಬ್ಬನು ಮತ್ತೊಬ್ಬ ಪ್ರವಾದಿಗೆ, “ನನ್ನನ್ನು ಹೊಡಿ” ಎಂದು ಹೇಳಿದನು. ಹೀಗೆ ಹೇಳುವಂತೆ ಯೆಹೋವನೇ ಅವನಿಗೆ ಆಜ್ಞಾಪಿಸಿದ್ದನು. ಆದರೆ ಇನ್ನೊಬ್ಬ ಪ್ರವಾದಿಯು ಅವನನ್ನು ಹೊಡೆಯಲಿಲ್ಲ. 36 ಆದ್ದರಿಂದ ಮೊದಲನೆಯ ಪ್ರವಾದಿಯು, “ಯೆಹೋವನ ಆಜ್ಞೆಗೆ ನೀನು ವಿಧೇಯನಾಗಲಿಲ್ಲ. ನೀನು ಈ ಸ್ಥಳವನ್ನು ಬಿಟ್ಟು ಹೊರಟಾಗ ನಿನ್ನನ್ನು ಒಂದು ಸಿಂಹವು ಕೊಂದುಹಾಕುತ್ತದೆ” ಎಂದು ಹೇಳಿದನು. ಎರಡನೆಯ ಪ್ರವಾದಿಯು ಆ ಸ್ಥಳವನ್ನು ಬಿಟ್ಟು ಹೊರಟಾಗ ಒಂದು ಸಿಂಹವು ಅವನನ್ನು ಕೊಂದುಹಾಕಿತು.
37 ಮೊದಲನೆಯ ಪ್ರವಾದಿಯು ಇನ್ನೊಬ್ಬ ಮನುಷ್ಯನ ಹತ್ತಿರಕ್ಕೆ ಹೋಗಿ, “ನನ್ನನ್ನು ಹೊಡಿ!” ಎಂದು ಅವನಿಗೆ ಹೇಳಿದನು.
ಈ ಮನುಷ್ಯನು ಅವನನ್ನು ಹೊಡೆದನು. ಪ್ರವಾದಿಗೆ ಗಾಯವಾಯಿತು. 38 ಪ್ರವಾದಿಯು ತನ್ನ ಕಣ್ಣಿನ ಮೇಲೆ ಬಟ್ಟೆಯನ್ನು ಕಟ್ಟಿಕೊಂಡನು. ತನ್ನನ್ನು ಯಾರೂ ಗುರುತಿಸಬಾರದೆಂದು ಅವನು ಹೀಗೆ ಕಟ್ಟಿಕೊಂಡನು. ಬಳಿಕ ಆ ಪ್ರವಾದಿಯು ಹೋಗಿ, ರಾಜನಿಗಾಗಿ ರಸ್ತೆಯಂಚಿನಲ್ಲಿ ಕಾಯುತ್ತಿದ್ದನು. 39 ರಾಜನು ಅಲ್ಲಿಗೆ ಬಂದಾಗ, ಪ್ರವಾದಿಯು ಅವನಿಗೆ, “ನಾನು ಯುದ್ಧದಲ್ಲಿ ಹೋರಾಡುವುದಕ್ಕೆ ಹೋಗಿದ್ದೆನು. ನಿನ್ನವನಾದ ಒಬ್ಬ ಮನುಷ್ಯನು ಶತ್ರುವಿನ ಸೈನಿಕನೊಬ್ಬನನ್ನು ನನ್ನ ಬಳಿಗೆ ಕರೆದುಕೊಂಡು ಬಂದು, ‘ಈ ಮನುಷ್ಯನನ್ನು ರಕ್ಷಿಸು. ಇವನು ಓಡಿಹೋದರೆ, ಇವನ ಜೀವಕ್ಕೆ ಬದಲಾಗಿ ನಿನ್ನ ಜೀವವನ್ನು ಕೊಡಬೇಕಾಗುವುದು ಅಥವಾ ಬೆಳ್ಳಿಯ ಮೂವತ್ನಾಲ್ಕು ಕಿಲೋಗ್ರಾಂ ದಂಡ ಕೊಡಬೇಕಾಗುವುದು’ ಎಂದನು. 40 ಆದರೆ ನಾನು ಇತರ ಕೆಲಸಗಳಲ್ಲಿ ನಿರತನಾಗಿದ್ದಾಗ, ಆ ಮನುಷ್ಯನು ಓಡಿಹೋದನು” ಎಂದು ಹೇಳಿದನು.
ಇಸ್ರೇಲಿನ ರಾಜನು, “ಆ ಸೈನಿಕನು ತಪ್ಪಿಸಿಕೊಂಡು ಹೋಗಲು ಅವಕಾಶ ಮಾಡಿಕೊಟ್ಟ ನೀನು ನಿನ್ನನ್ನು ತಪ್ಪಿತಸ್ಥನೆಂದು ಒಪ್ಪಿಕೊಂಡಿರುವೆ. ಆದ್ದರಿಂದ, ಅದರ ಪರಿಹಾರವೂ ನಿನಗೆ ತಿಳಿದಿದೆ. ಆ ಮನುಷ್ಯನೇನು ಹೇಳಿದನೊ ಅದನ್ನು ನೀನು ಮಾಡಲೇಬೇಕು” ಎಂದು ಉತ್ತರಿಸಿದನು.
41 ಆಗ ಆ ಪ್ರವಾದಿಯು ತನ್ನ ಕಣ್ಣುಗಳ ಮೇಲಿನ ಬಟ್ಟೆಯನ್ನು ಸರಿಸಿದ್ದರಿಂದ ಅವನು ಪ್ರವಾದಿಗಳಲ್ಲಿ ಒಬ್ಬನೆಂಬುದು ಇಸ್ರೇಲಿನ ರಾಜನಿಗೆ ತಿಳಿಯಿತು. 42 ಬಳಿಕ ಪ್ರವಾದಿಯು ರಾಜನಿಗೆ, “ಯೆಹೋವನು ನಿನಗೆ ಹೀಗೆನ್ನುತ್ತಾನೆ, ‘ನಾನು ಸಂಹರಿಸೆಂದು ಹೇಳಿದ ಮನುಷ್ಯನನ್ನು ನೀನು ಸ್ವತಂತ್ರನಾಗಿಸಿದೆ. ಆದ್ದರಿಂದ ಅವನಿಗೆ ಸಂಭವಿಸಬೇಕಾದದ್ದು ನಿನಗೆ ಸಂಭವಿಸುವುದು. ನೀನು ಸಾಯುವೆ! ಶತ್ರುಗಳಿಗೆ ಸಂಭವಿಸಬೇಕಾದದ್ದು ನಿನ್ನ ಜನರಿಗೆ ಸಂಭವಿಸುವುದು. ನಿನ್ನ ಜನರು ಸಾಯುತ್ತಾರೆ!’” ಎಂದು ಹೇಳಿದನು.
43 ನಂತರ ರಾಜನು ಸಮಾರ್ಯದಲ್ಲಿದ್ದ ತನ್ನ ಅರಮನೆಗೆ ಹಿಂದಿರುಗಿದನು. ಅವನು ಬೇಸರಗೊಂಡಿದ್ದನು ಮತ್ತು ಕೋಪಗೊಂಡಿದ್ದನು.
ರಾಜ್ಯಪಾಲ ಪಿಲಾತನಿಂದ ಯೇಸುವಿನ ವಿಚಾರಣೆ
(ಮತ್ತಾಯ 27:1-2,11-14; ಮಾರ್ಕ 15:1-5; ಯೋಹಾನ 18:28-38)
23 ಬಳಿಕ ಅಲ್ಲಿ ಸೇರಿಬಂದಿದ್ದವರೆಲ್ಲ ಎದ್ದು ಯೇಸುವನ್ನು ಪಿಲಾತನ ಬಳಿಗೆ ಕರೆದುಕೊಂಡು ಹೋದರು. 2 ಅವರು ಯೇಸುವಿನ ಮೇಲೆ ದೋಷಾರೋಪಣೆ ಮಾಡತೊಡಗಿದರು. ಅವರು ಪಿಲಾತನಿಗೆ, “ಈ ಮನುಷ್ಯನು ನಮ್ಮ ಜನರನ್ನು ತಪ್ಪುದಾರಿಗೆ ನಡೆಸುವ ಸಂಗತಿಗಳನ್ನು ಹೇಳುತ್ತಿದ್ದನು. ನಾವು ಸೀಸರನಿಗೆ ತೆರಿಗೆ ಕೊಡಬಾರದೆಂದೂ ಇವನು ಹೇಳುತ್ತಿದ್ದನು. ಅಲ್ಲದೆ ಇವನು ತನ್ನನ್ನು ಕ್ರಿಸ್ತನೆಂಬ ಅರಸನೆಂದು ಹೇಳಿಕೊಳ್ಳುತ್ತಾನೆ. ಆದ್ದರಿಂದ ನಾವು ಇವನನ್ನು ಬಂಧಿಸಿದೆವು” ಎಂದು ಹೇಳಿದರು.
3 ಪಿಲಾತನು ಯೇಸುವನ್ನು, “ನೀನು ಯೆಹೂದ್ಯರ ಅರಸನೋ?” ಎಂದು ಕೇಳಿದನು.
ಯೇಸು, “ನೀನೇ ಹೇಳಿರುವೆ!” ಎಂದು ಉತ್ತರಿಸಿದನು.
4 ಪಿಲಾತನು ಮಹಾಯಾಜಕರಿಗೆ ಮತ್ತು ಜನರಿಗೆ, “ನಾನು ಇವನಲ್ಲಿ ಯಾವ ತಪ್ಪನ್ನೂ ಕಾಣಲಿಲ್ಲ” ಎಂದು ಹೇಳಿದನು.
5 ಅದಕ್ಕೆ ಅವರು, “ಇವನು ಜುದೇಯ ಪ್ರಾಂತ್ಯದಲ್ಲೆಲ್ಲಾ ಉಪದೇಶಿಸಿ ಕ್ರಾಂತಿ ಎಬ್ಬಿಸಿದ್ದಾನೆ. ಗಲಿಲಾಯದಲ್ಲಿ ಪ್ರಾರಂಭಿಸಿದ ಇವನು ಈಗ ಇಲ್ಲಿಗೂ ಬಂದಿದ್ದಾನೆ” ಎಂದು ಪದೇಪದೇ ಹೇಳಿದರು.
ಹೆರೋದನ ಮುಂದೆ ಯೇಸು
6 ಪಿಲಾತನು ಇದನ್ನು ಕೇಳಿ, “ಇವನು ಗಲಿಲಾಯದವನೋ?” ಎಂದು ಕೇಳಿದನು. 7 ಯೇಸು ಹೆರೋದನ ಅಧಿಕಾರಕ್ಕೊಳಪಟ್ಟವನೆಂದು ಪಿಲಾತನಿಗೆ ತಿಳಿಯಿತು. ಆ ಸಮಯದಲ್ಲಿ ಹೆರೋದನು ಜೆರುಸಲೇಮಿನಲ್ಲಿದ್ದನು. ಆದ್ದರಿಂದ ಪಿಲಾತನು ಯೇಸುವನ್ನು ಅವನ ಬಳಿಗೆ ಕಳುಹಿಸಿದನು.
8 ಹೆರೋದನು ಯೇಸುವನ್ನು ನೋಡಿದಾಗ ಬಹಳ ಸಂತೋಷಪಟ್ಟನು. ಏಕೆಂದರೆ ಅವನು ಯೇಸುವಿನ ಬಗ್ಗೆ ಎಲ್ಲವನ್ನೂ ಕೇಳಿದ್ದನು ಮತ್ತು ಬಹಳ ಕಾಲದಿಂದ ಆತನಿಂದ ಒಂದು ಅದ್ಭುತಕಾರ್ಯವನ್ನು ನೋಡಬೇಕೆಂದಿದ್ದನು. 9 ಹೆರೋದನು ಯೇಸುವಿಗೆ ಅನೇಕ ಪ್ರಶ್ನೆಗಳನ್ನು ಕೇಳಿದನು. ಆದರೆ ಯೇಸು ಒಂದಕ್ಕೂ ಉತ್ತರ ನೀಡಲಿಲ್ಲ. 10 ಮಹಾಯಾಜಕರು ಮತ್ತು ಧರ್ಮೋಪದೇಶಕರು ಅಲ್ಲಿ ನಿಂತುಕೊಂಡಿದ್ದರು. ಅವರು ಯೇಸುವಿಗೆ ವಿರುದ್ಧವಾಗಿ ಕೂಗುತ್ತಿದ್ದರು. 11 ಆಗ ಹೆರೋದನು ಮತ್ತು ಅವನ ಸೈನಿಕರು ಯೇಸುವನ್ನು ನೋಡಿ ಗೇಲಿಮಾಡಿದರು. ಅವರು ಯೇಸುವಿಗೆ ರಾಜನ ಬಟ್ಟೆ ಉಡಿಸಿ ಹಾಸ್ಯ ಮಾಡಿದರು. ಬಳಿಕ ಹೆರೋದನು ಯೇಸುವನ್ನು ಪಿಲಾತನ ಬಳಿಗೆ ತಿರುಗಿ ಕಳುಹಿಸಿಕೊಟ್ಟನು. 12 ಮೊದಲು ಪಿಲಾತನು ಮತ್ತು ಹೆರೋದನು ವೈರಿಗಳಾಗಿದ್ದರು. ಆದರೆ ಅಂದು ಹೆರೋದನು ಮತ್ತು ಪಿಲಾತನು ಮತ್ತೆ ಸ್ನೇಹಿತರಾದರು.
ಯೇಸುವಿಗೆ ಮರಣದಂಡನೆ
(ಮತ್ತಾಯ 27:15-26; ಮಾರ್ಕ 15:6-15; ಯೋಹಾನ 18:39–19:16)
13 ಪಿಲಾತನು ಮಹಾಯಾಜಕರನ್ನೂ ಯೆಹೂದ್ಯನಾಯಕರನ್ನೂ ಇತರ ಜನರನ್ನೂ ಒಟ್ಟಾಗಿ ಕರೆಸಿ, 14 ಅವರಿಗೆ, “ನೀವು ಈ ಮನುಷ್ಯನನ್ನು (ಯೇಸುವನ್ನು) ನನ್ನ ಬಳಿಗೆ ಕರೆದುಕೊಂಡು ಬಂದಿರಿ. ಇವನು ಜನರನ್ನು ತಪ್ಪುದಾರಿಗೆ ನಡೆಸುತ್ತಿದ್ದಾನೆ ಎಂದು ಹೇಳಿದಿರಿ. ಆದರೆ ನಾನು ನಿಮ್ಮೆಲ್ಲರ ಮುಂದೆ ಇವನನ್ನು ವಿಚಾರಣೆ ಮಾಡಿದೆನು. ಆದರೆ ನಾನು ಇವನಲ್ಲಿ ಯಾವ ತಪ್ಪನ್ನೂ ಕಾಣಲಿಲ್ಲ. ನಿಮ್ಮ ದೋಷಾರೋಪಣೆಗಳು ಇವನಿಗೆ ಅನ್ವಯಿಸುವುದಿಲ್ಲ. 15 ಇದಲ್ಲದೆ ಹೆರೋದನು ಸಹ ಇವನಲ್ಲಿ ಯಾವ ತಪ್ಪನ್ನೂ ಕಾಣಲಿಲ್ಲ. ಹೆರೋದನು ಯೇಸುವನ್ನು ನಮ್ಮ ಬಳಿಗೆ ಮತ್ತೆ ಕಳುಹಿಸಿದನು. ನೋಡಿರಿ, ಯೇಸು ಯಾವ ತಪ್ಪನ್ನೂ ಮಾಡಿಲ್ಲ. ಅವನಿಗೆ ಮರಣದಂಡನೆ ಆಗಬಾರದು. 16 ಆದ್ದರಿಂದ ನಾನು ಇವನನ್ನು ಸ್ವಲ್ಪ ಶಿಕ್ಷಿಸಿ ಬಿಟ್ಟುಬಿಡುತ್ತೇನೆ” ಎಂದು ಹೇಳಿದನು. 17 [a]
18 ಆದರೆ ಜನರೆಲ್ಲರೂ, “ಅವನನ್ನು ಕೊಲ್ಲಿಸು! ಬರಬ್ಬನನ್ನು ಬಿಟ್ಟುಕೊಡು” ಎಂದು ಕೂಗಿದರು. 19 (ಬರಬ್ಬನು ಪಟ್ಟಣದಲ್ಲಿ ದಂಗೆ ಎಬ್ಬಿಸಿದ್ದರಿಂದ ಸೆರೆಮನೆಯಲ್ಲಿದ್ದನು. ಅವನು ಕೆಲವು ಜನರನ್ನು ಕೊಂದಿದ್ದನು.)
20 ಪಿಲಾತನು ಯೇಸುವನ್ನು ಬಿಡಿಸಬೇಕೆಂದಿದ್ದನು. ಆದ್ದರಿಂದ ಯೇಸುವನ್ನು ಬಿಟ್ಟುಬಿಡೋಣ ಎಂದು ಪಿಲಾತನು ಮತ್ತೆ ಅವರಿಗೆ ಹೇಳಿದನು. 21 ಆದರೆ ಅವರು ಮತ್ತೆ, “ಅವನನ್ನು ಕೊಲ್ಲಿಸು! ಅವನನ್ನು ಶಿಲುಬೆಗೇರಿಸು!” ಎಂದು ಕೂಗಿದರು.
22 ಮೂರನೇ ಸಲ ಪಿಲಾತನು ಜನರಿಗೆ, “ಏಕೆ? ಆತನು ಏನು ತಪ್ಪುಮಾಡಿದನು? ಆತನು ತಪ್ಪಿತಸ್ಥನಲ್ಲ. ಆತನನ್ನು ಕೊಲ್ಲಿಸುವುದಕ್ಕೆ ನನಗೆ ಯಾವ ಕಾರಣವೂ ಕಾಣಿಸುವುದಿಲ್ಲ. ಆದ್ದರಿಂದ ಆತನನ್ನು ಸ್ವಲ್ಪ ಶಿಕ್ಷಿಸಿ ಬಿಟ್ಟುಬಿಡುತ್ತೇನೆ” ಎಂದು ಹೇಳಿದನು.
23 ಆದರೆ ಅವರು ಕೂಗಾಟವನ್ನು ಮುಂದುವರಿಸಿ ಯೇಸುವನ್ನು ಶಿಲುಬೆಗೆ ಹಾಕಿ ಕೊಲ್ಲಿಸಬೇಕೆಂದು ಬಲವಂತಪಡಿಸಿದರು. ಅವರ ಕೂಗಾಟ ಬಹಳ ಹೆಚ್ಚಾದದ್ದರಿಂದ, 24 ಪಿಲಾತನು ಅವರ ಬಯಕೆಯನ್ನು ಈಡೇರಿಸಲು ನಿರ್ಧರಿಸಿದನು. 25 ಬರಬ್ಬನನ್ನು ಬಿಡುಗಡೆ ಮಾಡಬೇಕೆಂದು ಜನರು ಕೇಳಿಕೊಂಡರು. ದಂಗೆ ಎಬ್ಬಿಸಿದ್ದರಿಂದ ಮತ್ತು ಕೊಲೆಮಾಡಿದ್ದರಿಂದ ಬರಬ್ಬನು ಸೆರೆಮನೆಯಲ್ಲಿದ್ದನು. ಪಿಲಾತನು ಬರಬ್ಬನನ್ನು ಬಿಡುಗಡೆ ಮಾಡಿ, ಯೇಸುವನ್ನು ಕೊಲ್ಲಿಸುವುದಕ್ಕೆ ಜನರಿಗೆ ಒಪ್ಪಿಸಿದನು. ಜನರ ಬಯಕೆಯೂ ಇದೇ ಆಗಿತ್ತು.
Kannada Holy Bible: Easy-to-Read Version. All rights reserved. © 1997 Bible League International