Old/New Testament
ಜನರು ಲೆಕ್ಕಿಸಲ್ಪಟ್ಟದ್ದು
26 ಆ ಘೋರ ವ್ಯಾಧಿ ನಿಂತಮೇಲೆ ಯೆಹೋವನು ಮೋಶೆಗೂ ಯಾಜಕ ಆರೋನನ ಮಗನಾದ ಎಲ್ಲಾಜಾರನಿಗೂ, 2 “ನೀವು ಇಸ್ರೇಲರ ಸರ್ವಸಮೂಹದವರಲ್ಲಿ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಾದ ವಯಸುಳ್ಳವರನ್ನು ಮತ್ತು ಇಸ್ರೇಲ್ ಸೈನ್ಯದಲ್ಲಿ ಸೇವೆಮಾಡಲು ಶಕ್ತರಾಗಿರುವ ಗಂಡಸರನ್ನು ಕುಟುಂಬ ಕುಟುಂಬಗಳ ಪ್ರಕಾರ ಲೆಕ್ಕಿಸಬೇಕು” ಎಂದು ಆಜ್ಞಾಪಿಸಿದನು.
3 ಈ ಸಮಯದಲ್ಲಿ ಜನರು ಮೋವಾಬಿನ ಬಯಲುಗಳಲ್ಲಿ ತಂಗಿದ್ದರು. ಇದು ಜೆರಿಕೊ ಪಟ್ಟಣದ ಆಚೆಕಡೆಯಲ್ಲಿರುವ ಜೋರ್ಡನ್ ನದಿಯ ಸಮೀಪದಲ್ಲಿತ್ತು. ಮೋಶೆ ಮತ್ತು ಯಾಜಕನಾದ ಎಲ್ಲಾಜಾರನು ಜನರೊಡನೆ ಮಾತಾಡಿ ಹೇಳಿದ್ದೇನೆಂದರೆ: 4 “ಮೋಶೆ ಮತ್ತು ಇಸ್ರೇಲರು ಈಜಿಪ್ಟಿನಿಂದ ಹೊರಬಂದಾಗ ಯೆಹೋವನು ಮೋಶೆಗೆ ಆಜ್ಞಾಪಿಸಿದ್ದಂತೆಯೇ ನೀವು ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚು ವಯಸ್ಸಾದ ಗಂಡಸರನ್ನು ಲೆಕ್ಕಿಸಬೇಕು.”
5 ರೂಬೇನ್ ಕುಲದ ಜನರು: (ರೂಬೇನನು ಇಸ್ರೇಲನ ಚೊಚ್ಚಲ ಮಗನು.)
ಹನೋಕನ ಕುಟುಂಬದವರಾದ ಹನೋಕ್ಯರು;
ಪಲ್ಲೂವಿನ ಕುಟುಂಬದವರಾದ ಪಲ್ಲೂವಿನವರು;
6 ಹೆಚ್ರೋನನ ಕುಟುಂಬದವರಾದ ಹೆಚ್ರೋನ್ಯರು;
ಕರ್ಮೀಯ ಕುಟುಂಬದವರಾದ ಕರ್ಮೀಯರು.
7 ರೂಬೇನ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟ ಗಂಡಸರ ಒಟ್ಟು ಸಂಖ್ಯೆ 43,730.
8 ಪಲ್ಲೂವಿನ ಮಗನು ಎಲೀಯಾಬ್. 9 ಎಲೀಯಾಬನ ಗಂಡುಮಕ್ಕಳು: ನೆಮೂವೇಲ್, ದಾತಾನ್, ಅಬೀರಾಮ್ ಎಂಬವರೆ. ಕೋರಹನ ಗುಂಪಿನವರು ಯೆಹೋವನಿಗೆ ವಿರೋಧವಾಗಿ ದಂಗೆಯೆದ್ದ ಕಾಲದಲ್ಲಿ ಅವರೊಳಗೆ ಸೇರಿಕೊಂಡು ಮೋಶೆ ಆರೋನರಿಗೆ ವಿರೋಧವಾಗಿ ದಂಗೆ ಎದ್ದವರೇ ದಾತಾನ್ ಮತ್ತು ಅಬೀರಾಮ್. 10 ಭೂಮಿಯು ಬಾಯ್ದೆರೆದು ಅವರನ್ನೂ ಕೋರಹನನ್ನೂ ನುಂಗಿಬಿಟ್ಟಿತು ಮತ್ತು ಬೆಂಕಿಯು ಆ ಗುಂಪಿನವರಲ್ಲಿ ಇತರ ಇನ್ನೂರೈವತ್ತು ಮಂದಿಯನ್ನು ದಹಿಸಿ ಇಸ್ರೇಲರಿಗೆ ಎಚ್ಚರಿಕೆಯುಂಟಾಗುವ ಹಾಗೆ ಮಾಡಿತು. 11 ಆ ಗುಂಪಿನವರೆಲ್ಲರು ಸತ್ತರೂ ಕೋರಹನ ಮಕ್ಕಳು ಆ ಕಾಲದಲ್ಲಿ ಸಾಯಲಿಲ್ಲ.
12 ಸಿಮೆಯೋನ್ ಕುಲದ ಕುಟುಂಬಗಳು:
ನೆಮೂವೇಲನ ಕುಟುಂಬದವರಾದ ನೆಮೂವೇಲ್ಯರು;
ಯಾಮೀನನ ಕುಟುಂಬದವರಾದ ಯಾಮೀನ್ಯರು;
ಯಾಕೀನನ ಕುಟುಂಬದವರಾದ ಯಾಕೀನ್ಯರು;
13 ಜೆರಹನ ಕುಟುಂಬದವರಾದ ಜೆರಹಿಯರು;
ಸೌಲನ ಕುಟುಂಬದವರಾದ ಸೌಲ್ಯರು.
14 ಸಿಮೆಯೋನ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟ ಗಂಡಸರ ಒಟ್ಟು ಸಂಖ್ಯೆ 22,200.
15 ಗಾದ್ ಕುಲದ ಕುಟುಂಬಗಳು:
ಚೆಫೋನನ ಕುಟುಂಬದವರಾದ ಚೆಫೋನ್ಯರು;
ಹಗ್ಗೀಯನ ಕುಟುಂಬದವರಾದ ಹಗ್ಗೀಯರು;
ಶೂನೀಯ ಕುಟುಂಬದವರಾದ ಶೂನೀಯರು;
16 ಒಜ್ನೀಯ ಕುಟುಂಬದವರಾದ ಒಜ್ನೀಯರು;
ಏರೀಯ ಕುಟುಂಬದವರಾದ ಏರೀಯರು;
17 ಅರೋದನ ಕುಟುಂಬದವರಾದ ಆರೋದ್ಯರು;
ಅರೇಲೀಯ ಕುಟುಂಬದವರಾದ ಅರೇಲೀಯರು.
18 ಗಾದ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟ ಗಂಡಸರ ಒಟ್ಟು ಸಂಖ್ಯೆ 40,500.
19-20 ಯೆಹೂದ ಕುಲದ ಕುಟುಂಬಗಳು:
ಶೇಲಹನ ಕುಟುಂಬದವರಾದ ಶೇಲಾನ್ಯರು;
ಪೆರೆಚನ ಕುಟುಂಬದವರಾದ ಪೆರೆಚ್ಯರು;
ಜೆರಹನ ಕುಟುಂಬದವರಾದ ಜೆರಹಿಯರು.
(ಯೆಹೂದನ ಇಬ್ಬರು ಗಂಡುಮಕ್ಕಳಾದ ಏರ್ ಮತ್ತು ಓನಾನನು ಕಾನಾನ್ನಲ್ಲಿ ಸತ್ತರು.)
21 ಪೆರೆಚನ ಕುಟುಂಬಗಳು:
ಹೆಚ್ರೋನನ ಕುಟುಂಬದವರಾದ ಹೆಚ್ರೋನ್ಯರು,
ಹಾಮೂಲನ ಕುಟುಂಬದವರಾದ ಹಾಮೂಲ್ಯರು;
22 ಯೆಹೂದ ಕುಲದವರಲ್ಲಿ ಲೆಕ್ಕಿಸಲ್ಪಟ್ಟ ಗಂಡಸರ ಒಟ್ಟು ಸಂಖ್ಯೆ 76,500.
23 ಇಸ್ಸಾಕಾರನ ಕುಟುಂಬಗಳು:
ತೋಲನ ಕುಟುಂಬದವರಾದ ತೋಲಾಯರು;
ಪುವ್ವನ ಕುಟುಂಬದವರಾದ ಪೂನ್ಯರು;
24 ಯಾಶೂಬನ ಕುಟುಂಬದವರಾದ ಯಾಶೂಬ್ಯರು;
ಶಿಮ್ರೋನನ ಕುಟುಂಬದವರಾದ ಶಿಮ್ರೋನ್ಯರು.
25 ಇಸ್ಸಾಕಾರ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟ ಗಂಡಸರ ಒಟ್ಟು ಸಂಖ್ಯೆ 64,300 ಮಂದಿ.
26 ಜೆಬುಲೂನ್ ಕುಲದ ಕುಟುಂಬಗಳು:
ಸೆರೆದನ ಕುಟುಂಬದವರಾದ ಸೆರೆದ್ಯರು;
ಏಲೋನನ ಕುಟುಂಬದವರಾದ ಏಲೋನ್ಯರು;
ಯಹಲೇಲನ ಕುಟುಂಬದವರಾದ ಯಹಲೇಲ್ಯರು.
27 ಜೆಬುಲೂನ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟ ಗಂಡಸರ ಒಟ್ಟು ಸಂಖ್ಯೆ 60,500.
28 ಯೋಸೇಫನ ಇಬ್ಬರು ಗಂಡುಮಕ್ಕಳು: ಮನಸ್ಸೆ ಮತ್ತು ಎಫ್ರಾಯೀಮ್. 29 ಮನಸ್ಸೆ ಕುಲದ ಕುಟುಂಬಗಳು:
ಮಾಕೀರನ ಕುಟುಂಬದವರಾದ ಮಾಕೀರ್ಯರು;
ಮಾಕೀರನ ಮಗನಾದ ಗಿಲ್ಯಾದನ ಕುಟುಂಬದವರಾದ ಗಿಲ್ಯಾದ್ಯರು.
30 ಗಿಲ್ಯಾದನ ಕುಟುಂಬದವರು:
ಈಯೆಜೆರನ ಕುಟುಂಬದವರಾದ ಈಯೆಜೆರ್ಯರು;
ಹೇಲೆಕನ ಕುಟುಂಬದವರಾದ ಹೇಲೆಕ್ಯರು;
31 ಅಸ್ರೀಯೇಲನ ಕುಟುಂಬದವರಾದ ಅಸ್ರೀಯೇಲ್ಯರು;
ಶೆಕೆಮನ ಕುಟುಂಬದವರಾದ ಶೆಕೆಮ್ಯರು;
32 ಶೆಮೀದಾಯನ ಕುಟುಂಬದವರಾದ ಶೆಮೀದಾಯರು;
ಹೇಫೆರನ ಕುಟುಂಬದವರಾದ ಹೇಫೆರ್ಯರು.
33 ಹೇಫೆರನ ಮಗನಾದ ಚಲ್ಫಹಾದನಿಗೆ ಹೆಣ್ಣುಮಕ್ಕಳು ಮಾತ್ರ ಹುಟ್ಟಿದರು. ಗಂಡುಮಕ್ಕಳು ಹುಟ್ಟಲಿಲ್ಲ. ಅವನ ಹೆಣ್ಣುಮಕ್ಕಳ ಹೆಸರು: ಮಹ್ಲಾ, ನೋವಾ, ಹೊಗ್ಲಾ, ಮಿಲ್ಕಾ, ತಿರ್ಚಾ.
34 ಮನಸ್ಸೆ ಕುಲದವರಲ್ಲಿ ಲೆಕ್ಕಿಸಲ್ಪಟ್ಟ ಗಂಡಸರ ಒಟ್ಟು ಸಂಖ್ಯೆ 52,700.
35 ಎಫ್ರಾಯೀಮ್ ಕುಲದ ಕುಟುಂಬಗಳು:
ಶೂತೆಲಹನ ಕುಟುಂಬದವರಾದ ಶೂತೆಲಹ್ಯರು;
ಬೆಕೆರನ ಕುಟುಂಬದವರಾದ ಬೆಕೆರ್ಯರು;
ತಹನನ ಕುಟುಂಬದವರಾದ ತಹನಿಯರು.
36 ಏರಾನನು ಶೂತೆಲಹನ ಕುಟುಂಬದವನು;
ಏರಾನನ ಕುಟುಂಬದವರಾದ ಏರಾನ್ಯರು.
37 ಎಫ್ರಾಯೀಮ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟ ಗಂಡಸರ ಒಟ್ಟು ಸಂಖ್ಯೆ 32,500.
ಇದೇ ಯೋಸೇಫನ ಕುಲದ ಕುಟುಂಬಗಳ ವಿವರ.
38 ಬೆನ್ಯಾಮೀನ್ ಕುಲದ ಕುಟುಂಬಗಳು:
ಬೆಲಗನ ಕುಟುಂಬದವರಾದ ಬೆಲಗ್ಯರು;
ಅಷ್ಬೇಲನ ಕುಟುಂಬದವರಾದ ಅಷ್ಬೇಲ್ಯರು;
ಅಹೀರಾಮನ ಕುಟುಂಬದವರಾದ ಅಹೀರಾಮ್ಯರು;
39 ಶೂಫಾಮನ ಕುಟುಂಬದವರಾದ ಶೂಫಾಮ್ಯರು;
ಹೂಫಾಮನ ಕುಟುಂಬದವರಾದ ಹೂಫಾಮ್ಯರು.
40 ಬೆಲಗನಿಗೆ ಅರ್ದ್ ಮತ್ತು ನಾಮಾನ್ ಎಂಬ ಇಬ್ಬರು ಗಂಡುಮಕ್ಕಳಿದ್ದರು. ಬೆಲಗನ ಕುಟುಂಬಗಳು:
ಅರ್ದನ ಕುಟುಂಬದವರಾದ ಅರ್ದ್ಯರು;
ನಾಮಾನನ ಕುಟುಂಬದವರಾದ ನಾಮಾನ್ಯರು.
41 ಬೆನ್ಯಾಮೀನ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ 45,600.
42 ದಾನ್ ಕುಲದ ಕುಟುಂಬಗಳು:
ಶೂಹಾಮನ ಕುಟುಂಬದವರಾದ ಶೂಹಾಮ್ಯರು.
43 ದಾನ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ 64,400.
44 ಆಶೇರ್ ಕುಲದ ಕುಟುಂಬಗಳು:
ಇಮ್ನಾಹನ ಕುಟುಂಬದವರಾದ ಇಮ್ನಾಹ್ಯರು;
ಇಷ್ವೀಯ ಕುಟುಂಬದವರಾದ ಇಷ್ವೀಯರು;
ಬೆರೀಯನ ಕುಟುಂಬದವರಾದ ಬೆರೀಯರು;
45 ಬೆರೀಯನ ಮಕ್ಕಳ ಕುಟುಂಬಗಳು:
ಹೇಬೆರನ ಕುಟುಂಬದವರಾದ ಹೇಬೆರ್ಯರು;
ಮಲ್ಕೀಯೇಲನ ಕುಟುಂಬದವರಾದ ಮಲ್ಕೀಯೇಲ್ಯರು.
46 (ಆಶೇರನಿಗೆ ಸೆರಹ ಎಂಬ ಮಗಳೂ ಇದ್ದಳು.) 47 ಆಶೇರನ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ 53,400.
48 ನಫ್ತಾಲಿಯ ಕುಲದ ಕುಟುಂಬಗಳು:
ಯಹಚೇಲನ ಕುಟುಂಬದವರಾದ ಯಹಚೇಲ್ಯರು;
ಗೂನೀಯ ಕುಟುಂಬದವರಾದ ಗೂನೀಯರು;
49 ಯೇಚೆರನ ಕುಟುಂಬದವರಾದ ಯೇಚೆರ್ಯರು;
ಶಿಲ್ಲೇಮನ ಕುಟುಂಬದವರಾದ ಶಿಲ್ಲೇಮ್ಯರು.
50 ನಫ್ತಾಲಿಯ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ 45,400.
51 ಹೀಗೆ ಇಸ್ರೇಲರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ 6,01,730.
52 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 53 “ನೀವು ಈ ಕುಲಗಳಿಗೆ ಅವರವರ ಸಂಖ್ಯೆಯ ಪ್ರಕಾರ ಆ ದೇಶವನ್ನು ಹಂಚಿಕೊಡಬೇಕು. 54 ಹೆಚ್ಚು ಮಂದಿಯುಳ್ಳ ಕುಲಕ್ಕೆ ಹೆಚ್ಚಾಗಿಯೂ ಕಡಿಮೆಯಾದ ಕುಲಕ್ಕೆ ಕಡಿಮೆಯಾಗಿಯೂ ಕೊಡಬೇಕು. ಲೆಕ್ಕಿಸಿದ ಸಂಖ್ಯೆಯ ಪ್ರಕಾರವೇ ಪ್ರತಿಯೊಂದು ಕುಲಕ್ಕೆ ಭೂಮಿಯನ್ನು ಸ್ವಾಸ್ತ್ಯಕ್ಕಾಗಿ ಕೊಡಬೇಕು. 55 ಪ್ರತಿಯೊಂದು ಕುಲದ ಪಿತೃವಿನ ಹೆಸರನ್ನು ಬರೆದು ಚೀಟುಹಾಕಿ ಆಯಾ ಕುಲಕ್ಕೆ ಸ್ವಾಸ್ತ್ಯವನ್ನು ಗೊತ್ತುಮಾಡಬೇಕು. 56 ಕುಲವು ದೊಡ್ಡದಾಗಿರಲಿ ಚಿಕ್ಕದಾಗಿರಲಿ ಚೀಟುಬಂದ ಪ್ರಕಾರವೇ ಸ್ವಾಸ್ತ್ಯವನ್ನು ಗೊತ್ತುಪಡಿಸಬೇಕು.”
57 ಲೇವಿಯರೊಳಗಿನ ಕುಲಗಳನ್ನು ಲೆಕ್ಕಿಸಲಾಗಿ, ಅವರಲ್ಲಿನ ಕುಟುಂಬಗಳು:
ಗೇರ್ಷೋನನ ಕುಟುಂಬದವರಾದ ಗೇರ್ಷೋನ್ಯರು;
ಕೆಹಾತನ ಕುಟುಂಬದವರಾದ ಕೆಹಾತ್ಯರು;
ಮೆರಾರೀಯ ಕುಟುಂಬದವರಾದ ಮೆರಾರೀಯರು.
58 ಲೇವಿ ಕುಲದವರ ಕುಟುಂಬಗಳು:
ಲಿಬ್ನೀಯರ ಕುಟುಂಬ,
ಹೆಬ್ರೋನ್ಯರ ಕುಟುಂಬ,
ಮಹ್ಲೀಯರ ಕುಟುಂಬ,
ಮೂಷೀಯರ ಕುಟುಂಬ,
ಕೋರಹಿಯರ ಕುಟುಂಬ.
59 ಅಮ್ರಾಮನು ಕೆಹಾತನ ಕುಲಕ್ಕೆ ಸೇರಿದವನು. ಅಮ್ರಾಮನ ಹೆಂಡತಿಯ ಹೆಸರು ಯೋಕೆಬೆದಳು. ಅವಳು ಲೇವಿ ಕುಟುಂಬದವಳು. ಅವಳು ಈಜಿಪ್ಟಿನಲ್ಲಿ ಹುಟ್ಟಿದಳು. ಅಮ್ರಾಮ್ ಮತ್ತು ಯೋಕೆಬೆದಳಿಗೆ ಇಬ್ಬರು ಗಂಡುಮಕ್ಕಳು ಹುಟ್ಟಿದರು. ಅವರು ಯಾರೆಂದರೆ ಆರೋನ ಮತ್ತು ಮೋಶೆ. ಅವರಿಗೆ ಒಬ್ಬ ಮಗಳೂ ಇದ್ದಳು. ಅವಳ ಹೆಸರು ಮಿರ್ಯಾಮಳು.
60 ಆರೋನನು ನಾದಾಬ್, ಅಬೀಹೂ, ಎಲ್ಲಾಜಾರ್, ಈತಾಮಾರ್ ಇವರ ತಂದೆ. 61 ಆದರೆ ನಾದಾಬ್ ಮತ್ತು ಅಬೀಹೂ ಸತ್ತರು. ಯೆಹೋವನು ತಿಳಿಸದ ಹೊಸ ಬೆಂಕಿಯಿಂದ ಧೂಪವನ್ನು ಯೆಹೋವನ ಮುಂದೆ ಅರ್ಪಿಸಿದ್ದರಿಂದ ಅವರು ಸತ್ತರು.
62 ಲೇವಿ ಕುಟುಂಬಗಳಲ್ಲಿ ಒಂದು ತಿಂಗಳು ಮೊದಲುಗೊಂಡು ಹೆಚ್ಚು ವಯಸ್ಸಾದ ಪುರುಷರ ಒಟ್ಟು ಸಂಖ್ಯೆ 23,000. ಆದರೆ ಈ ಜನರು ಇತರ ಇಸ್ರೇಲರೊಡನೆ ಲೆಕ್ಕಿಸಲ್ಪಡಲಿಲ್ಲ. ಯೆಹೋವನು ಬೇರೆ ಇಸ್ರೇಲರಿಗೆ ಕೊಟ್ಟ ಸ್ವಾಸ್ತ್ಯದಲ್ಲಿ ಅವರಿಗೆ ಪಾಲು ಸಿಕ್ಕಲಿಲ್ಲ.
63 ಮೋಶೆ ಮತ್ತು ಯಾಜಕನಾದ ಎಲ್ಲಾಜಾರನು ಈ ಜನರನ್ನೆಲ್ಲಾ ಲೆಕ್ಕಿಸಿದರು. ಇಸ್ರೇಲರು ಜೋರ್ಡನ್ ಹೊಳೆಯ ತೀರದಲ್ಲಿ ಜೆರಿಕೊ ಪಟ್ಟಣದ ಆಚೆಯಲ್ಲಿ ಮೋವಾಬ್ಯರ ಬಯಲುಗಳಲ್ಲಿದ್ದಾಗ ಇವರನ್ನು ಲೆಕ್ಕಿಸಿದರು. 64 ಮೋಶೆಯೂ ಯಾಜಕನಾದ ಆರೋನನೂ ಸೀನಾಯಿ ಮರುಭೂಮಿಯಲ್ಲಿ ಇಸ್ರೇಲರ ಸಂಖ್ಯೆಯನ್ನು ನೋಡಿದಾಗ ಲೆಕ್ಕಿಸಲ್ಪಟ್ಟವರೊಳಗೆ ಒಬ್ಬರಾದರೂ ಇವರಲ್ಲಿ ಇರಲಿಲ್ಲ. 65 ಯೆಹೋವನು ಅವರೆಲ್ಲರೂ ಮರುಭೂಮಿಯಲ್ಲಿಯೇ ಸಾಯುವರೆಂದು ಹೇಳಿದ್ದನು. ಆದ್ದರಿಂದ ಯೆಫುನ್ನೆಯ ಮಗನಾದ ಕಾಲೇಬ್ ಮತ್ತು ನೂನನ ಮಗನಾದ ಯೆಹೋಶುವ ಇವರಿಬ್ಬರ ಹೊರತಾಗಿ ಅವರಲ್ಲಿ ಯಾರೂ ಉಳಿಯಲಿಲ್ಲ.
ಚಲ್ಪಹಾದನ ಹೆಣ್ಣುಮಕ್ಕಳು
27 ಚಲ್ಪಹಾದನು ಹೇಫೆರನ ಮಗನು. ಹೇಫೆರನು ಗಿಲ್ಯಾದನ ಮಗನು. ಗಿಲ್ಯಾದನು ಮಾಕೀರನ ಮಗನು. ಮಾಕೀರನು ಮನಸ್ಸೆಯ ಮಗನು. ಮನಸ್ಸೆಯು ಯೋಸೇಫನ ಮಗನು. ಚಲ್ಪಹಾದನಿಗೆ ಐದುಮಂದಿ ಹೆಣ್ಣುಮಕ್ಕಳಿದ್ದರು. ಅವರು ಯಾರೆಂದರೆ: ಮಹ್ಲಾ, ನೋವಾ, ಹೊಗ್ಲಾ, ಮಿಲ್ಕಾ ಮತ್ತು ತಿರ್ಚಾ. 2 ಈ ಐದುಮಂದಿ ಸ್ತ್ರೀಯರು ದೇವದರ್ಶನಗುಡಾರದ ಪ್ರವೇಶದ್ವಾರದ ಬಳಿಗೆ ಹೋಗಿ ಮೋಶೆಯ, ಮಹಾಯಾಜಕನಾದ ಎಲ್ಲಾಜಾರನ, ನಾಯಕರ ಮತ್ತು ಎಲ್ಲಾ ಇಸ್ರೇಲರ ಮುಂದೆ ನಿಂತರು.
3 ಈ ಐದು ಹೆಣ್ಣುಮಕ್ಕಳು, “ನಮ್ಮ ತಂದೆ ಮರುಭೂಮಿಯಲ್ಲಿ ಸತ್ತುಹೋದನು. ಅವನು ಕೋರಹನ ಜೊತೆಯಲ್ಲಿ ಯೆಹೋವನಿಗೆ ವಿರೋಧವಾಗಿ ತಿರುಗಿ ಬಿದ್ದವರಲ್ಲಿ ಸೇರಿದವನಲ್ಲ. ನಮ್ಮ ತಂದೆಯು ತನ್ನ ಪಾಪದ ಫಲವಾಗಿ ಸತ್ತನು. ಅವನಿಗೆ ಗಂಡುಮಕ್ಕಳಿರಲಿಲ್ಲ. 4 ನಮ್ಮ ತಂದೆಗೆ ಗಂಡುಮಗನಿಲ್ಲದ ಮಾತ್ರದಿಂದ ಅವನ ಹೆಸರನ್ನು ಅವನ ಕುಲದವರ ಮಧ್ಯದಿಂದ ತೆಗೆಯುವುದು ನ್ಯಾಯವೋ? ನಮ್ಮ ತಂದೆಯ ಸಂಬಂಧಿಕರೊಡನೆ ನಮಗೂ ಸ್ವಾಸ್ತ್ಯವನ್ನು ಕೊಡು” ಎಂದು ಹೇಳಿದರು.
5 ಮೋಶೆಯು ಇದರ ವಿಷಯದಲ್ಲಿ ತಾನು ಏನು ಮಾಡಬೇಕೆಂದು ಯೆಹೋವನ ಸನ್ನಿಧಿಯಲ್ಲಿ ವಿಚಾರಿಸಲಾಗಿ, 6 ಯೆಹೋವನು ಅವನಿಗೆ ಹೇಳಿದ್ದೇನೆಂದರೆ: 7 “ಚಲ್ಪಹಾದನ ಹೆಣ್ಣುಮಕ್ಕಳು ಹೇಳುವುದು ನ್ಯಾಯವಾಗಿದೆ. ಅವರ ತಂದೆಯ ಸಂಬಂಧಿಕರೊಡನೆ ಅವರಿಗೂ ನೀನು ಸ್ವಾಸ್ತ್ಯವನ್ನು ಕೊಡಬೇಕು. ಅವರ ತಂದೆಯ ಸ್ವಾಸ್ತ್ಯವನ್ನು ನೀನು ಅವರಿಗೆ ವರ್ಗಾವಣೆ ಮಾಡಬೇಕು.
8 “ಮತ್ತು ನೀನು ಇಸ್ರೇಲರಿಗೆ ಹೀಗೆ ಅಪ್ಪಣೆ ಕೊಡಬೇಕು: ‘ಒಬ್ಬ ಮನುಷ್ಯನು ಮಗನಿಲ್ಲದೆ ಸತ್ತರೆ, ನೀವು ಅವನ ಸ್ವಾಸ್ತ್ಯವನ್ನು ಅವನ ಮಗಳಿಗೆ ವರ್ಗಾವಣೆ ಮಾಡಬೇಕು. 9-10 ಮಗಳು ಇಲ್ಲದ ಪಕ್ಷಕ್ಕೆ ಅವನ ಸ್ವಾಸ್ತ್ಯವನ್ನು ಅವನ ಅಣ್ಣತಮ್ಮಂದಿರಿಗೆ ಕೊಡಬೇಕು. ಅಣ್ಣತಮ್ಮಂದಿರು ಇಲ್ಲದ ಪಕ್ಷಕ್ಕೆ ಅವನ ಸ್ವಾಸ್ತ್ಯವನ್ನು ಅವನ ತಂದೆಯ ಸಹೋದರರಿಗೆ ಕೊಡಬೇಕು. 11 ಅವನ ತಂದೆಗೆ ಸಹೋದರರಿಲ್ಲದಿದ್ದರೆ, ಅವನ ಸ್ವಂತ ಕುಲದ ಅತಿ ಸಮೀಪದ ಸಂಬಂಧಿಕನಿಗೆ ಅದನ್ನು ವಹಿಸಿಕೊಡಬೇಕು. ಆಗ ಅವನು ಅದನ್ನು ಸ್ವಾಧೀನಪಡಿಸಿಕೊಳ್ಳುವನು. ಯೆಹೋವನು ಮೋಶೆಗೆ ಆಜ್ಞಾಪಿಸಿದ ಈ ನಿರ್ಧಾರವು ಇಸ್ರೇಲರಿಗೆ ಕಾನೂನು ಬದ್ಧವಾದ ವಿಧಿಯಾಗಿದೆ.’”
ಯೆಹೋಶುವನು ನೂತನ ನಾಯಕ
12 ಬಳಿಕ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಅಬಾರೀಮ್ ಪರ್ವತ ಶ್ರೇಣಿಯಲ್ಲಿರುವ ಈ ಬೆಟ್ಟವನ್ನು ಹತ್ತು. ನಾನು ಇಸ್ರೇಲರಿಗೆ ಕೊಡಲಿಕ್ಕಿರುವ ದೇಶವನ್ನು ನೀನು ಅಲ್ಲಿಂದ ನೋಡು. 13 ಆ ದೇಶವನ್ನು ನೋಡಿದ ನಂತರ ನಿನ್ನ ಅಣ್ಣನಾದ ಆರೋನನಂತೆ ನೀನೂ ಸಾಯುವೆ. 14 ಇಸ್ರೇಲರ ಸಮೂಹದವರು ಚಿನ್ ಮರುಭೂಮಿಯಲ್ಲಿ ನನ್ನೊಡನೆ ವಿವಾದಿಸಿದಾಗ ನೀವಿಬ್ಬರೂ ನನ್ನ ಪವಿತ್ರತೆಯನ್ನು ಜನರ ಮುಂದೆ ತೋರಿಸದೆ ನನ್ನ ಆಜ್ಞೆಗೆ ಅವಿಧೇಯರಾದ ಕಾರಣ ಆ ದೇಶವನ್ನು ನೀನು ಸೇರಬಾರದು.” ಚಿನ್ ಮರುಭೂಮಿಯಲ್ಲಿ ಕಾದೇಶಿನ ಬಳಿ ಮೆರೀಬಾ ಬುಗ್ಗೆಯ ಕುರಿತಾಗಿ ಯೆಹೋವನು ಇದನ್ನು ಹೇಳಿದನು.
15 ಆಗ ಮೋಶೆಯು ಯೆಹೋವನಿಗೆ, 16 “ಎಲ್ಲಾ ಮನುಷ್ಯರ ಯೋಚನೆಗಳನ್ನು ತಿಳಿದಿರುವ ದೇವರಾದ ಯೆಹೋವನು ಈ ಸಮೂಹಕ್ಕೆ ಒಬ್ಬ ನಾಯಕನನ್ನು ನೇಮಿಸಲಿ. 17 ಅವನು ಅವರನ್ನು ಯುದ್ಧದಲ್ಲಿ ಮುನ್ನಡೆಸುವವನೂ ಸೈನ್ಯದ ಯೋಜನೆಗಳನ್ನು ರೂಪಿಸುವವನೂ ಆಗಿರಲಿ. ಆಗ ಯೆಹೋವನ ಸಮೂಹವು ಕುರುಬನಿಲ್ಲದ ಕುರಿಯಂತಾಗುವುದಿಲ್ಲ.”
18 ಅದಕ್ಕೆ ಯೆಹೋವನು, “ನೂನನ ಮಗನಾದ ಯೆಹೋಶುವನು ಹೊಸ ನಾಯಕನಾಗಿರುವನು. ಅವನು ಧೈರ್ಯವಂತನು. ಅವನನ್ನು ಹೊಸ ನಾಯಕನನ್ನಾಗಿ ಮಾಡಲು ಅವನ ಮೇಲೆ ನಿನ್ನ ಕೈಯನ್ನು ಇಡು. 19 ಯಾಜಕನಾದ ಎಲ್ಲಾಜಾರನ ಮುಂದೆಯೂ ಸಮಸ್ತ ಇಸ್ರೇಲರ ಮುಂದೆಯೂ ಅವನನ್ನು ನಿಲ್ಲಿಸು. ಅವರ ಎದುರಿನಲ್ಲಿಯೇ ಅವನಿಗೆ ಆದೇಶಗಳನ್ನು ಕೊಡು.
20 “ಇಸ್ರೇಲರ ಇಡೀ ಸಮುದಾಯವು ವಿಧೇಯರಾಗುವಂತೆ ನಿನ್ನ ಅಧಿಕಾರಗಳಲ್ಲಿ ಸ್ವಲ್ಪವನ್ನು ಅವನಿಗೆ ಕೊಡು. 21 ಯೆಹೋಶುವನು ತೀರ್ಮಾನವೇನಾದರೂ ಮಾಡಬೇಕಾದರೆ ಅವನು ಯಾಜಕನಾದ ಎಲ್ಲಾಜಾರನ ಬಳಿಗೆ ಹೋಗಲಿ, ಎಲ್ಲಾಜಾರನು ಊರೀಮಿನಿಂದ ಯೆಹೋವನ ಉತ್ತರವನ್ನು ಪಡೆಯುವನು. ಆಗ ಯೆಹೋಶುವನೂ ಇಸ್ರೇಲರೆಲ್ಲರೂ ದೇವರು ಹೇಳುವ ಕಾರ್ಯಗಳನ್ನು ಮಾಡುವರು. ಆತನು, ‘ಯುದ್ಧಕ್ಕೆ ಹೋಗಿರಿ’ ಎಂದು ಹೇಳಿದರೆ ಅವರು ಯುದ್ಧಕ್ಕೆ ಹೋಗುವರು. ಆತನು, ‘ಮನೆಗೆ ಹೋಗಿರಿ’ ಎಂದು ಹೇಳಿದರೆ ಅವರು ಮನೆಗೆ ಹೋಗುವರು” ಎಂದು ಹೇಳಿದನು.
22 ಮೋಶೆಯು ಯೆಹೋವನಿಗೆ ವಿಧೇಯನಾಗಿ ಯೆಹೋಶುವನನ್ನು ಯಾಜಕನಾದ ಎಲ್ಲಾಜಾರನ ಮುಂದೆಯೂ ಸಮಸ್ತ ಇಸ್ರೇಲರ ಮುಂದೆಯೂ ನಿಲ್ಲಿಸಿದನು. 23 ಬಳಿಕ ಮೋಶೆಯು ತನ್ನ ಕೈಯನ್ನು ಅವನ ಮೇಲಿಟ್ಟು ಹೊಸ ನಾಯಕನಿಗೆ ಕೊಡತಕ್ಕ ಆದೇಶಗಳನ್ನು ಕೊಟ್ಟನು. ಯೆಹೋವನು ಆಜ್ಞಾಪಿಸಿದಂತೆ ಅವನು ಇದನ್ನು ಮಾಡಿದನು.
ದಿನನಿತ್ಯ ಸಲ್ಲಿಸತಕ್ಕ ಅರ್ಪಣೆಗಳು
28 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 2 “ನೀನು ಇಸ್ರೇಲರಿಗೆ ಈ ಆಜ್ಞೆಯನ್ನು ಕೊಡು. ನೀವು ಎಚ್ಚರಿಕೆಯಾಗಿದ್ದು ನೇಮಿತ ಕಾಲಗಳಲ್ಲಿ ನನಗೆ ಅರ್ಪಿಸತಕ್ಕ ಧಾನ್ಯಸಮರ್ಪಣೆಗಳನ್ನು ನನಗೆ ಸುಗಂಧ ಹೋಮಮಾಡಬೇಕು. 3 ಅವರಿಗೆ ಹೀಗೆ ಹೇಳು: ನೀವು ಯೆಹೋವನಿಗೆ ಕೊಡಬೇಕಾಗಿರುವ ತ್ಯಾಗಮಯವಾದ ಕಾಣಿಕೆಗಳು ಇವುಗಳೇ: ದಿನನಿತ್ಯದ ಸರ್ವಾಂಗಹೋಮಕ್ಕಾಗಿ ಒಂದು ವರ್ಷ ವಯಸ್ಸಿನ ಎರಡು ಗಂಡುಕುರಿಗಳು. 4 ನೀವು ಒಂದು ಕುರಿಮರಿಯನ್ನು ಹೊತ್ತಾರೆಯಲ್ಲಿಯೂ ಇನ್ನೊಂದನ್ನು ನಸುಸಂಜೆಯಲ್ಲಿಯೂ ಅರ್ಪಿಸಬೇಕು. 5 ಹೊತ್ತಾರೆಯ ಸಮರ್ಪಣೆಯೊಂದಿಗೆ ನೀವು ಧಾನ್ಯಸಮರ್ಪಣೆಗಾಗಿ ಒಂದೂವರೆ ಸೇರು ಶ್ರೇಷ್ಠವಾದ ಎಣ್ಣೆಯನ್ನೂ ಮೂರು ಸೇರು ಗೋಧಿಹಿಟ್ಟನ್ನೂ ಬೆರೆಸಿ ಸಮರ್ಪಿಸಬೇಕು.” 6 (ಈ ಸರ್ವಾಂಗಹೋಮವನ್ನು ಸೀನಾಯಿ ಬೆಟ್ಟದ ಮೇಲೆ ಯೆಹೋವನಿಗೆ ತ್ಯಾಗಮಯವಾದ ಕಾಣಿಕೆಯಾಗಿಯೂ ಸುಗಂಧ ವಾಸನೆಯಾಗಿಯೂ ಕ್ರಮವಾಗಿ ಅರ್ಪಿಸಲಾಯಿತು.) 7 ಪ್ರತಿಯೊಂದು ಕುರಿಮರಿಯೊಂದಿಗೆ ಒಂದೂವರೆ ಸೇರು ದ್ರಾಕ್ಷಾರಸವನ್ನು ಪಾನದ್ರವ್ಯದ ಕಾಣಿಕೆಯಾಗಿ ಅರ್ಪಿಸಬೇಕು. ಯೆಹೋವನಿಗೆ ಪಾನದ್ರವ್ಯವಾಗಿ ಅರ್ಪಿಸತಕ್ಕ ದ್ರಾಕ್ಷಾರಸವನ್ನು ಪವಿತ್ರಸ್ಥಳದಲ್ಲಿ ಸುರಿಯಿರಿ. 8 ನೀವು ಎರಡನೆ ಕುರಿಮರಿಯನ್ನು ನಸುಸಂಜೆಯಲ್ಲಿ ಅರ್ಪಿಸುವಾಗ, ಮುಂಜಾನೆಯಲ್ಲಿ ಅರ್ಪಿಸಿದಂತೆಯೇ ಅದರೊಡನೆ ಸಮರ್ಪಕವಾದ ಧಾನ್ಯಾರ್ಪಣೆಯನ್ನು ಮತ್ತು ಪಾನದ್ರವ್ಯಾರ್ಪಣೆಯನ್ನು ಮಾಡಬೇಕು. ಇದು ಯೆಹೋವನಿಗೆ ತ್ಯಾಗಮಯವಾದ ಅರ್ಪಣೆಯಾಗಿದ್ದು ಸುಗಂಧ ವಾಸನೆಯನ್ನು ಉಂಟುಮಾಡುವುದು.
ಸಬ್ಬತ್ತಿನ ಸಮರ್ಪಣೆಗಳು
9-10 “ಸಬ್ಬತ್ದಿನದಲ್ಲಿ ಎರಡು ಪೂರ್ಣಾಂಗವಾದ ಒಂದು ವರ್ಷದ ಗಂಡುಕುರಿಗಳನ್ನೂ ಧಾನ್ಯದ್ರವ್ಯಾರ್ಪಣೆಗಾಗಿ ಎಣ್ಣೆ ಬೆರೆಸಿದ ಆರು ಸೇರು ಗೋಧಿಹಿಟ್ಟನ್ನೂ ಅದಕ್ಕೆ ತಕ್ಕ ಪಾನದ್ರವ್ಯವನ್ನೂ ಸಮರ್ಪಿಸಬೇಕು. ಕ್ರಮವಾಗಿ ಅರ್ಪಿಸತಕ್ಕ ಸರ್ವಾಂಗಹೋಮ ಮತ್ತು ಅದರ ಪಾನದ್ರವ್ಯಾರ್ಪಣೆಗಳಲ್ಲದೆ, ಪ್ರತಿಸಬ್ಬತ್ ದಿನ ಸರ್ವಾಂಗಹೋಮವನ್ನು ಅರ್ಪಿಸಬೇಕು.
ತಿಂಗಳ ಯಜ್ಞಗಳು
11 “ಪ್ರತಿ ತಿಂಗಳ ಮೊದಲನೆಯ ದಿನದಲ್ಲಿ, ನೀವು ಯೆಹೋವನಿಗೆ ಸರ್ವಾಂಗಹೋಮವನ್ನು ಅರ್ಪಿಸಬೇಕು: ಎರಡು ಹೋರಿಗಳು, ಒಂದು ಟಗರು ಮತ್ತು ಒಂದು ವರ್ಷದ ಏಳು ಕುರಿಮರಿಗಳು. ಇವುಗಳೆಲ್ಲಾ ಪೂರ್ಣಾಂಗವಾದವುಗಳಾಗಿರಬೇಕು. 12 ಇವುಗಳೊಡನೆ ಧಾನ್ಯನೈವೇದ್ಯಕ್ಕಾಗಿ ನೀವು ಪ್ರತಿಯೊಂದು ಹೋರಿಗೆ ಎಣ್ಣೆ ಬೆರೆಸಿದ ಉತ್ತಮವಾದ ಒಂಭತ್ತು ಸೇರು ಗೋಧಿಹಿಟ್ಟನ್ನು ಅರ್ಪಿಸಬೇಕು. ಪ್ರತಿಯೊಂದು ಟಗರಿಗೆ ಎಣ್ಣೆ ಬೆರೆಸಿದ ಉತ್ತಮವಾದ ಆರು ಸೇರು ಗೋಧಿಹಿಟ್ಟನ್ನು ಅರ್ಪಿಸಬೇಕು. 13 ಪ್ರತಿಯೊಂದು ಕುರಿಮರಿಗೆ ಎಣ್ಣೆ ಬೆರೆಸಿದ ಉತ್ತಮವಾದ ಮೂರು ಸೇರು ಗೋಧಿಹಿಟ್ಟನ್ನು ಅರ್ಪಿಸಬೇಕು. ಈ ಸರ್ವಾಂಗಹೋಮವು ಯೆಹೋವನಿಗೆ ಸುಗಂಧ ವಾಸನೆಯಾಗಿಯೂ ತ್ಯಾಗಮಯವಾದ ಕಾಣಿಕೆಯಾಗಿಯೂ ಇದೆ. 14 ಇವುಗಳಿಗೆ ತಕ್ಕ ಪಾನದ್ರವ್ಯಾರ್ಪಣೆಗಳನ್ನು ಮಾಡಬೇಕು. ಅವು ಯಾವುವೆಂದರೆ: ಒಂದು ಹೋರಿಯೊಡನೆ ಮೂರು ಸೇರು ದ್ರಾಕ್ಷಾರಸವನ್ನೂ ಟಗರಿನೊಡನೆ ಎರಡು ಸೇರು ದ್ರಾಕ್ಷಾರಸವನ್ನೂ ಕುರಿಮರಿಯೊಡನೆ ಒಂದೂವರೆ ಸೇರು ದ್ರಾಕ್ಷಾರಸವನ್ನೂ ಅರ್ಪಿಸಬೇಕು. ವರ್ಷದ ಪ್ರತಿತಿಂಗಳು ಅಮಾವಾಸ್ಯೆಯಲ್ಲಿ ಅರ್ಪಿಸತಕ್ಕ ಮಾಸಿಕ ಸರ್ವಾಂಗಹೋಮಗಳು ಇವುಗಳೇ. 15 ಕ್ರಮಾನುಸಾರವಾದ ಸರ್ವಾಂಗಹೋಮ ಮತ್ತು ಅದರ ಪಾನದ್ರವ್ಯಾರ್ಪಣೆಗಳಲ್ಲದೆ, ಪಾಪಪರಿಹಾರಕ ಯಜ್ಞವಾಗಿ ಒಂದು ಹೋತವನ್ನು ಯೆಹೋವನಿಗೆ ಅರ್ಪಿಸಬೇಕು.
ಪಸ್ಕಹಬ್ಬ
16 “ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದಲ್ಲಿ ಯೆಹೋವನಿಗೆ ಪಸ್ಕಹಬ್ಬದ ಯಜ್ಞವನ್ನು ಅರ್ಪಿಸಬೇಕು. 17 ಹುಳಿಯಿಲ್ಲದ ರೊಟ್ಟಿಯ ಹಬ್ಬವು ಅದೇ ತಿಂಗಳಿನ ಹದಿನೈದನೆಯ ದಿನದಿಂದ ಪ್ರಾರಂಭವಾಗುವುದು. ಏಳು ದಿನಗಳವರೆಗೂ ಹುಳಿಯಿಲ್ಲದ ರೊಟ್ಟಿಯನ್ನೇ ಊಟಮಾಡಬೇಕು. 18 ಮೊದಲನೆಯ ದಿನದಲ್ಲಿ ದೇವಾರಾಧನೆಗಾಗಿ ಸಭೆ ಸೇರಬೇಕು. ಆ ದಿನದಲ್ಲಿ ಯಾವ ಪ್ರಯಾಸದ ಕೆಲಸವನ್ನು ಮಾಡಬಾರದು. 19 ಯೆಹೋವನಿಗೆ ಸರ್ವಾಂಗಹೋಮಕ್ಕಾಗಿ ಎರಡು ಹೋರಿಗಳನ್ನು, ಒಂದು ಟಗರನ್ನು ಮತ್ತು ಒಂದು ವರ್ಷದ ಏಳು ಗಂಡುಕುರಿಮರಿಗಳನ್ನು ಅರ್ಪಿಸಬೇಕು. ಈ ಪಶುಗಳೆಲ್ಲ ಪೂರ್ಣಾಂಗವಾದವುಗಳಾಗಿರಬೇಕು. 20 ಇವುಗಳೊಂದಿಗೆ ಧಾನ್ಯಸಮರ್ಪಣೆಗಾಗಿ ಎಣ್ಣೆ ಬೆರೆಸಿದ ಗೋಧಿಹಿಟ್ಟನ್ನು ತಂದುಕೊಡಬೇಕು; ಹೇಗೆಂದರೆ, ಒಂದು ಹೋರಿಗೆ ಒಂಭತ್ತು ಸೇರು ಗೋಧಿಹಿಟ್ಟು, ಒಂದು ಟಗರಿಗೆ ಆರು ಸೇರು ಗೋಧಿಹಿಟ್ಟು, 21 ಏಳು ಕುರಿಮರಿಗಳಲ್ಲಿ ಪ್ರತಿಯೊಂದಕ್ಕೂ ಮೂರು ಸೇರು ಗೋಧಿಹಿಟ್ಟು. 22 ಇದಲ್ಲದೆ ನಿಮಗೋಸ್ಕರ ಪ್ರಾಯಶ್ಚಿತ್ತ ಮಾಡಲು ಒಂದು ಹೋತವನ್ನು ಪಾಪಪರಿಹಾರಕ ಯಜ್ಞವಾಗಿ ಅರ್ಪಿಸಬೇಕು. 23 ಕ್ರಮವಾಗಿ ಮುಂಜಾನೆ ಅರ್ಪಿಸುವ ಸರ್ವಾಂಗಹೋಮವಲ್ಲದೆ ಇವುಗಳನ್ನೂ ಅರ್ಪಿಸಬೇಕು.
24 “ಈ ಎಲ್ಲ ಅರ್ಪಣೆಗಳನ್ನು ಆ ಏಳು ದಿನಗಳಲ್ಲಿ ಪ್ರತಿಯೊಂದು ದಿನವೂ ಆಹಾರವಾಗಿಯೂ ತ್ಯಾಗಮಯವಾದ ಕಾಣಿಕೆಯಾಗಿಯೂ ಯೆಹೋವನಿಗೆ ಸುಗಂಧ ವಾಸನೆಯಾಗಿಯೂ ಅರ್ಪಿಸಬೇಕು. ಕ್ರಮಾನುಸಾರವಾದ ಸರ್ವಾಂಗಹೋಮ ಮತ್ತು ಅದರ ಪಾನದ್ರವ್ಯಾರ್ಪಣೆಗಳಲ್ಲದೆ ಇವುಗಳನ್ನೂ ಅರ್ಪಿಸಬೇಕು.
25 “ಇದಲ್ಲದೆ ಏಳನೆಯ ದಿನದಲ್ಲಿ ವಿಶೇಷ ಸಭೆ ಸೇರಬೇಕು. ಆ ದಿನದಲ್ಲಿ ನೀವು ಪ್ರಯಾಸದ ಕೆಲಸವನ್ನು ಮಾಡಕೂಡದು.
ವಾರಗಳ ಹಬ್ಬ (ಪಂಚಾಶತ್ತಮ)
26 “ನಿಮ್ಮ ಪ್ರಥಮಫಲಗಳ ಹಬ್ಬದಲ್ಲಿ ಅಂದರೆ ವಾರಗಳ ಹಬ್ಬದಲ್ಲಿ ನೀವು ಹೊಸದಾಗಿ ಬೆಳೆದ ಗೋಧಿಯನ್ನು ಯೆಹೋವನಿಗೆ ಅರ್ಪಿಸುವಾಗ, ದೇವರನ್ನು ಆರಾಧಿಸಲು ನೀವು ಸಭೆ ಸೇರಬೇಕು. ನೀವು ಯಾವ ಪ್ರಯಾಸದ ಕೆಲಸವನ್ನೂ ಮಾಡಬಾರದು. 27 ಆ ದಿನದಲ್ಲಿ ಎರಡು ಹೋರಿಗಳನ್ನು, ಒಂದು ಟಗರನ್ನು ಮತ್ತು ಒಂದು ವರ್ಷದ ಏಳು ಗಂಡು ಕುರಿಮರಿಗಳನ್ನು ಯೆಹೋವನಿಗೆ ಸುಗಂಧ ವಾಸನೆಯಾಗಿರುವ ಸರ್ವಾಂಗಹೋಮವಾಗಿ ಅರ್ಪಿಸಬೇಕು. 28 ಇವುಗಳೊಂದಿಗೆ ಧಾನ್ಯಸಮರ್ಪಣೆಗಾಗಿ ಎಣ್ಣೆ ಬೆರೆಸಿದ ಗೋಧಿಹಿಟ್ಟನ್ನು ಪ್ರತಿಯೊಂದು ಹೋರಿಗೆ ಒಂಭತ್ತು ಸೇರು, 29 ಟಗರಿಗೆ ಆರು ಸೇರು ಮತ್ತು ಪ್ರತಿಯೊಂದು ಕುರಿಗೆ ಮೂರು ಸೇರು ಈ ಮೇರೆಗೆ ಸಮರ್ಪಿಸಬೇಕು. 30 ನಿಮಗೋಸ್ಕರ ಪ್ರಾಯಶ್ಚಿತ್ತ ಮಾಡಲು ಒಂದು ಹೋತವನ್ನೂ ಪಾಪಪರಿಹಾರಕ ಯಜ್ಞವಾಗಿ ಅರ್ಪಿಸಬೇಕು. 31 ಈ ಪಶುಗಳೆಲ್ಲಾ ಪೂರ್ಣಾಂಗವಾದವುಗಳಾಗಿರಬೇಕು. ಕ್ರಮಾನುಸಾರವಾದ ಸರ್ವಾಂಗಹೋಮ ಮತ್ತು ಅದರ ಧಾನ್ಯಾರ್ಪಣೆಗಳಲ್ಲದೆ ಈ ಯಜ್ಞಗಳನ್ನು ಮತ್ತು ಅವುಗಳೊಡನೆ ಪಾನದ್ರವ್ಯಾರ್ಪಣೆಗಳನ್ನು ಅರ್ಪಿಸಬೇಕು. ನೀವು ಸಮರ್ಪಿಸುವ ಪಶುಗಳಲ್ಲಿಯೂ ಅಥವಾ ಪಾನದ್ರವ್ಯಸಮರ್ಪಣೆಗಳಲ್ಲಿಯೂ ಯಾವ ದೋಷವೂ ಇರಬಾರದು.
ನಾಲ್ಕು ಸಾವಿರಕ್ಕಿಂತ ಹೆಚ್ಚು ಜನರಿಗೆ ಆಹಾರದಾನ
(ಮತ್ತಾಯ 15:32-39)
8 ಇನ್ನೊಂದು ಸಮಯದಲ್ಲಿ ಯೇಸುವಿನ ಜೊತೆಯಲ್ಲಿ ಅನೇಕ ಜನರಿದ್ದರು. ಆ ಜನರ ಬಳಿ ಊಟಕ್ಕೆ ಏನೂ ಇರಲಿಲ್ಲ. ಆದ್ದರಿಂದ ಯೇಸು ತನ್ನ ಶಿಷ್ಯರನ್ನು ಕರೆದು, 2 “ನಾನು ಈ ಜನರಿಗಾಗಿ ಕನಿಕರಪಡುತ್ತೇನೆ. ಇವರು ಮೂರು ದಿನಗಳಿಂದ ನನ್ನ ಜೊತೆಯಲ್ಲಿದ್ದಾರೆ. ಇವರ ಬಳಿ ಊಟಕ್ಕೆ ಏನೂ ಇಲ್ಲ. 3 ಇವರು ಏನನ್ನೂ ತಿನ್ನದೆ ಹಸಿವೆಯಲ್ಲಿಯೇ ಹೊರಟರೆ ದಾರಿಯಲ್ಲಿ ಬಳಲಿ ಹೋಗುವರು. ಈ ಜನರಲ್ಲಿ ಕೆಲವರು ಬಹಳ ದೂರದಿಂದ ಬಂದಿದ್ದಾರೆ” ಎಂದು ಹೇಳಿದನು.
4 ಅದಕ್ಕೆ ಶಿಷ್ಯರು, “ಇಲ್ಲಿಗೆ ಯಾವ ಊರೂ ಸಮೀಪದಲ್ಲಿಲ್ಲ. ಈ ಜನರಿಗೆಲ್ಲಾ ಸಾಕಾಗುವಷ್ಟು ರೊಟ್ಟಿಯನ್ನು ನಾವು ಎಲ್ಲಿಂದ ತರಲು ಸಾದ್ಯ?” ಎಂದು ಉತ್ತರಿಸಿದರು.
5 ಯೇಸು, “ನಿಮ್ಮ ಬಳಿ ಎಷ್ಟು ರೊಟ್ಟಿಗಳಿವೆ?” ಎಂದು ಅವರನ್ನು ಕೇಳಿದನು.
ಅದಕ್ಕೆ ಶಿಷ್ಯರು, “ನಮ್ಮ ಬಳಿ ಏಳು ರೊಟ್ಟಿಗಳಿವೆ” ಎಂದು ಉತ್ತರಿಸಿದರು.
6 ಯೇಸು ಆ ಜನರಿಗೆ ನೆಲದ ಮೇಲೆ ಕುಳಿತುಕೊಳ್ಳುವಂತೆ ಹೇಳಿದನು. ನಂತರ ಆ ಏಳು ರೊಟ್ಟಿಗಳನ್ನು ತೆಗೆದುಕೊಂಡು, ದೇವರಿಗೆ ಸ್ತೋತ್ರಸಲ್ಲಿಸಿ ಅವುಗಳನ್ನು ಮುರಿದು, ತನ್ನ ಶಿಷ್ಯರಿಗೆ ಕೊಟ್ಟು, ಅವುಗಳನ್ನು ಜನರಿಗೆ ಹಂಚಬೇಕೆಂದು ಹೇಳಿದನು. ಶಿಷ್ಯರು ಹಾಗೆಯೇ ಮಾಡಿದರು. 7 ಶಿಷ್ಯರ ಬಳಿ ಕೆಲವು ಸಣ್ಣ ಮೀನುಗಳೂ ಇದ್ದವು. ಯೇಸು ಆ ಮೀನುಗಳಿಗಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿ ಅವುಗಳನ್ನೂ ಜನರಿಗೆ ಕೊಡಬೇಕೆಂದು ಶಿಷ್ಯರಿಗೆ ಹೇಳಿದನು.
8 ಜನರೆಲ್ಲರೂ ಊಟಮಾಡಿ ತೃಪ್ತರಾದರು. ನಂತರ ತಿನ್ನದೆ ಉಳಿದಿದ್ದ ಆಹಾರದ ಚೂರುಗಳನ್ನು ಶಿಷ್ಯರು ಶೇಖರಿಸಿದಾಗ ಏಳು ಬುಟ್ಟಿಗಳು ತುಂಬಿಹೋದವು. 9 ಅಲ್ಲಿ ಊಟ ಮಾಡಿದವರಲ್ಲಿ ಸುಮಾರು ನಾಲ್ಕು ಸಾವಿರ ಗಂಡಸರಿದ್ದರು. ಅವರು ಊಟಮಾಡಿದ ಮೇಲೆ, ಯೇಸು ಅವರನ್ನು ಕಳುಹಿಸಿಕೊಟ್ಟನು. 10 ಬಳಿಕ ಆತನು ತನ್ನ ಶಿಷ್ಯರೊಂದಿಗೆ ದೋಣಿಯನ್ನು ಹತ್ತಿ ದಲ್ಮನೂಥ ಪ್ರದೇಶಕ್ಕೆ ಹೋದನು.
ಯೇಸುವನ್ನು ಪರೀಕ್ಷಿಸಲು ಫರಿಸಾಯರ ಪ್ರಯತ್ನ
(ಮತ್ತಾಯ 16:1-4; ಲೂಕ 11:16,29)
11 ಫರಿಸಾಯರು ಯೇಸುವಿನ ಬಳಿಗೆ ಬಂದು, ಆತನನ್ನು ಪರೀಕ್ಷಿಸಲು ಪ್ರಶ್ನೆಗಳನ್ನು ಕೇಳಿದರು. ಅವರು ಯೇಸುವಿಗೆ, “ನೀನು ದೇವರಿಂದ ಬಂದವನೆಂದು ತೋರಿಸಲು ಒಂದು ಸೂಚಕಕಾರ್ಯವನ್ನು ಮಾಡು” ಎಂದರು. 12 ಆಗ ಯೇಸು ನಿಟ್ಟುಸಿರುಬಿಟ್ಟು ಅವರಿಗೆ, “ನೀವು ಸೂಚಕಕಾರ್ಯವನ್ನು ನೋಡಬಯಸುವುದೇಕೆ? ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನಿಮಗೆ ಯಾವ ಸೂಚಕಕಾರ್ಯವನ್ನೂ ತೋರಿಸಲಾಗುವುದಿಲ್ಲ” ಎಂದು ಹೇಳಿದನು. 13 ನಂತರ ಯೇಸು ಫರಿಸಾಯರ ಬಳಿಯಿಂದ ಹೊರಟು ದೋಣಿಯಲ್ಲಿ ಸರೋವರದ ಆಚೆಯ ದಡಕ್ಕೆ ಹೋದನು.
ಯೆಹೂದ್ಯ ನಾಯಕರ ಬಗ್ಗೆ ಯೇಸು ನೀಡಿದ ಎಚ್ಚರಿಕೆ
(ಮತ್ತಾಯ 16:5-12)
14 ಶಿಷ್ಯರು ದೋಣಿಯಲ್ಲಿ ಹೋಗುತ್ತಿದ್ದಾಗ ಅವರ ಬಳಿಯಲ್ಲಿ ಒಂದೇ ಒಂದು ರೊಟ್ಟಿಯಿತ್ತು. ಅವರು ಮರೆತು ಹೆಚ್ಚು ರೊಟ್ಟಿಗಳನ್ನು ತಂದಿರಲಿಲ್ಲ. 15 ಯೇಸು ಅವರಿಗೆ, “ಜಾಗರೂಕರಾಗಿರಿ! ಫರಿಸಾಯರ ಮತ್ತು ಹೆರೋದನ ಹುಳಿಹಿಟ್ಟಿನ ಬಗ್ಗೆ ಎಚ್ಚರವಹಿಸಿರಿ” ಎಂದು ಎಚ್ಚರಿಸಿದನು.
16 ಶಿಷ್ಯರು ಇದರ ಅರ್ಥವನ್ನು ಚರ್ಚಿಸಿ, “ನಮ್ಮ ಬಳಿ ರೊಟ್ಟಿ ಇಲ್ಲದೆ ಇರುವುದರಿಂದ ಆತನು ಹೀಗೆ ಹೇಳಿದನು” ಎಂದು ತಮ್ಮತಮ್ಮೊಳಗೆ ಅಂದುಕೊಂಡರು.
17 ಶಿಷ್ಯರು ಇದರ ಬಗ್ಗೆ ಮಾತಾಡುತ್ತಿರುವುದು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು ಅವರಿಗೆ, “ರೊಟ್ಟಿ ಇಲ್ಲವೆಂದು ನೀವು ಚರ್ಚಿಸುವುದೇಕೆ? ನಿಮಗಿನ್ನೂ ಕಾಣುವುದಿಲ್ಲವೇ? ನಿಮಗಿನ್ನೂ ಅರ್ಥವಾಗುವುದಿಲ್ಲವೇ? ನಿಮ್ಮ ಹೃದಯಗಳು ಇನ್ನೂ ಕಠಿಣವಾಗಿವೆಯೋ? 18 ನಿಮ್ಮ ಕಣ್ಣುಗಳು ಕುರುಡಾಗಿವೆಯೋ? ನಿಮ್ಮ ಕಿವಿಗಳು ಕಿವುಡಾಗಿವೆಯೋ? ಮೊದಲೊಮ್ಮೆ, ನಮ್ಮ ಬಳಿ ಸಾಕಷ್ಟು ರೊಟ್ಟಿಗಳಿಲ್ಲದಿದ್ದಾಗ, ನಾನು ಏನು ಮಾಡಿದೆನೆಂಬುದನ್ನು ಜ್ಞಾಪಿಸಿಕೊಳ್ಳಿ. 19 ನಾನು ಐದು ಸಾವಿರ ಜನರಿಗಾಗಿ ಐದು ರೊಟ್ಟಿಗಳನ್ನು ಮುರಿದು ನಿಮಗೆ ಕೊಟ್ಟೆ. ಅವರು ಊಟ ಮಾಡಿದ ಮೇಲೆ ತಿನ್ನಲಾರದೆ ಬಿಟ್ಟ ಚೂರುಗಳನ್ನು ಎಷ್ಟು ಬುಟ್ಟಿಗಳಲ್ಲಿ ತುಂಬಿದಿರಿ ಎಂಬುದು ನಿಮಗೆ ನೆನಪಿಲ್ಲವೇ?” ಎಂದು ಹೇಳಿದನು.
ಆ ಶಿಷ್ಯರು, “ನಾವು ಹನ್ನೆರಡು ಬುಟ್ಟಿಗಳಲ್ಲಿ ತುಂಬಿದೆವು” ಎಂದು ಉತ್ತರಿಸಿದರು.
20 “ನಾನು ನಾಲ್ಕು ಸಾವಿರ ಜನರಿಗಾಗಿ ಏಳು ರೊಟ್ಟಿಗಳನ್ನು ಮುರಿದು ಕೊಟ್ಟದ್ದನ್ನು ಜ್ಞಾಪಿಸಿಕೊಳ್ಳಿ. ಅವರು ಊಟ ಮಾಡಿದ ಮೇಲೆ ತಿನ್ನಲಾರದೆ ಬಿಟ್ಟ ಚೂರುಗಳನ್ನು ಎಷ್ಟು ಬುಟ್ಟಿಗಳಲ್ಲಿ ತುಂಬಿದಿರಿ ಎಂಬುದು ನಿಮಗೆ ನೆನಪಿಲ್ಲವೇ?” ಎಂದು ಕೇಳಿದನು.
ಅದಕ್ಕೆ ಶಿಷ್ಯರು, “ನಾವು ಏಳು ಬುಟ್ಟಿಗಳಲ್ಲಿ ತುಂಬಿದೆವು” ಎಂದು ಉತ್ತರಿಸಿದರು.
21 ಆಗ ಯೇಸು ಅವರಿಗೆ, “ನಾನು ಮಾಡಿದ ಈ ಕಾರ್ಯಗಳನ್ನು ನೀವು ಜ್ಞಾಪಕದಲ್ಲಿಟ್ಟುಕೊಂಡಿದ್ದೀರಿ, ಆದರೆ ನೀವಿನ್ನೂ ಅರ್ಥಮಾಡಿಕೊಳ್ಳುವುದಿಲ್ಲವೇ?” ಎಂದು ಕೇಳಿದನು.
ಬೆತ್ಸಾಯಿದದಲ್ಲಿ ಕುರುಡನಿಗೆ ದೃಷ್ಟಿದಾನ
22 ಯೇಸು ಮತ್ತು ಆತನ ಶಿಷ್ಯರು ಬೆತ್ಸಾಯಿದಕ್ಕೆ ಬಂದರು. ಕೆಲವು ಜನರು ಯೇಸುವಿನ ಬಳಿಗೆ ಒಬ್ಬ ಕುರುಡನನ್ನು ತಂದು ಅವನನ್ನು ಮುಟ್ಟಬೇಕೆಂದು ಯೇಸುವನ್ನು ಬೇಡಿಕೊಂಡರು. 23 ಆಗ ಯೇಸು ಆ ಕುರುಡನ ಕೈ ಹಿಡಿದುಕೊಂಡು, ಅವನನ್ನು ಊರಿನಿಂದ ಹೊರಕ್ಕೆ ಕರೆದುಕೊಂಡು ಹೋದನು. ನಂತರ ಯೇಸು ಅವನ ಕಣ್ಣುಗಳಲ್ಲಿ ಉಗುಳಿ ಅವನ ಮೇಲೆ ತನ್ನ ಕೈಗಳನ್ನಿಟ್ಟು, “ಈಗ ನಿನಗೆ ಕಾಣುತ್ತದೆಯೋ?” ಎಂದು ಕೇಳಿದನು.
24 ಆ ಕುರುಡನು ತಲೆಯೆತ್ತಿ ನೋಡಿ, “ಹೌದು, ನನಗೆ ಜನರು ಕಾಣುತ್ತಾರೆ. ಅವರು ಮರಗಳಂತೆ ಕಂಡರೂ ನಡೆದಾಡುತ್ತಿದ್ದಾರೆ” ಎಂದು ಹೇಳಿದನು.
25 ಯೇಸು ತನ್ನ ಕೈಗಳನ್ನು ಮತ್ತೆ ಕುರುಡನ ಕಣ್ಣುಗಳ ಮೇಲೆ ಇಟ್ಟನು. ಆಗ ಅವನು ತನ್ನ ಕಣ್ಣುಗಳನ್ನು ಅಗಲವಾಗಿ ತೆರೆದನು. ಅವನ ಕಣ್ಣುಗಳು ಗುಣಹೊಂದಿದ್ದವು. ಅವನಿಗೆ ಎಲ್ಲವೂ ಸ್ಪಷ್ಟವಾಗಿ ಕಾಣಿಸಿತು. 26 ಯೇಸು ಅವನಿಗೆ, “ನೀನು ನೇರವಾಗಿ ಮನೆಗೆ ಹೋಗು, ಊರೊಳಗೆ ಹೋಗಬೇಡ” ಎಂದು ಹೇಳಿ ಕಳುಹಿಸಿದನು.
ಯೇಸುವೇ ಕ್ರಿಸ್ತನೆಂದು ಪೇತ್ರನ ಪ್ರಕಟನೆ
(ಮತ್ತಾಯ 16:13-20; ಲೂಕ 9:18-21)
27 ಯೇಸು ಮತ್ತು ಆತನ ಶಿಷ್ಯರು ಫಿಲಿಪ್ಪನ ಸೆಜರೇಯ ಎಂಬ ಪಟ್ಟಣದ ಸಮೀಪದಲ್ಲಿರುವ ಊರುಗಳಿಗೆ ಹೋದರು. ಅವರು ಪ್ರಯಾಣ ಮಾಡುತ್ತಿರುವಾಗ, ಯೇಸು ತನ್ನ ಶಿಷ್ಯರನ್ನು, “ನನ್ನನ್ನು ಜನರು ಯಾರೆಂದು ಹೇಳುತ್ತಾರೆ?” ಎಂದು ಕೇಳಿದನು.
28 ಅದಕ್ಕೆ ಶಿಷ್ಯರು, “ಕೆಲವರು ನಿನ್ನನ್ನು, ‘ಸ್ನಾನಿಕ ಯೋಹಾನ’ ಎಂದು ಹೇಳುತ್ತಾರೆ. ಇನ್ನು ಕೆಲವರು ‘ಎಲೀಯ’ ಎಂದು ಹೇಳುತ್ತಾರೆ. ಇನ್ನು ಕೆಲವು ಜನರು ನಿನ್ನನ್ನು, ‘ಪ್ರವಾದಿಗಳಲ್ಲಿ ಒಬ್ಬನು’ ಎನ್ನುತ್ತಾರೆ” ಎಂದು ಉತ್ತರಿಸಿದರು.
29 ಆಗ ಯೇಸು ಅವರಿಗೆ, “ನೀವು ನನ್ನನ್ನು ಯಾರೆಂದು ಹೇಳುತ್ತೀರಿ?” ಎಂದು ಕೇಳಿದನು.
ಕೂಡಲೇ ಪೇತ್ರನು, “ನೀನು ಬರಬೇಕಾದ ಕ್ರಿಸ್ತನು” ಎಂದು ಉತ್ತರಿಸಿದನು.
30 ಯೇಸು ತನ್ನ ಶಿಷ್ಯರಿಗೆ, “ನಾನು ಯಾರೆಂಬುದನ್ನು ಯಾರಿಗೂ ಹೇಳಬೇಡಿ” ಎಂದು ಹೇಳಿದನು.
ಯೇಸು ತನ್ನ ಮರಣದ ಕುರಿತು ಮುಂತಿಳಿಸಿದ್ದು
(ಮತ್ತಾಯ 16:21-28; ಲೂಕ 9:22-27)
31 ನಂತರ ಯೇಸು ತನ್ನ ಶಿಷ್ಯರಿಗೆ ಉಪದೇಶಿಸುತ್ತಾ “ಮನುಷ್ಯಕುಮಾರನು ಅನೇಕ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಹಿರಿಯ ಯೆಹೂದ್ಯನಾಯಕರು, ಮಹಾಯಾಜಕರು ಮತ್ತು ಧರ್ಮೋಪದೇಶಕರು ಆತನನ್ನು ತಿರಸ್ಕರಿಸಿ ಕೊಲ್ಲುವರು. ಆದರೆ ಮೂರನೆಯ ದಿನದಲ್ಲಿ ಆತನು ಸತ್ತವರೊಳಗಿಂದ ಜೀವಂತವಾಗಿ ಎದ್ದುಬರುತ್ತಾನೆ” ಎಂದು ಹೇಳಿದನು. 32 ಮುಂದೆ ಸಂಭವಿಸುವದೆಲ್ಲವನ್ನು ಯೇಸು ಅವರಿಗೆ ಹೇಳಿದನು. ಆತನು ಯಾವುದನ್ನೂ ರಹಸ್ಯವಾಗಿ ಇಡಲಿಲ್ಲ.
ಪೇತ್ರನು ಯೇಸುವನ್ನು ಸ್ವಲ್ಪದೂರ ಕರೆದೊಯ್ದು, “ನೀನು ಹಾಗೆಲ್ಲಾ ಹೇಳಕೂಡದು” ಎಂದು ಪ್ರತಿಭಟಿಸಿದನು. 33 ಆದರೆ ಯೇಸು ತನ್ನ ಶಿಷ್ಯರ ಕಡೆಗೆ ನೋಡಿ, ಪೇತ್ರನಿಗೆ, “ಸೈತಾನನೇ, ನನ್ನಿಂದ ತೊಲಗಿಹೋಗು! ನಿನ್ನ ಆಲೋಚನೆ ಮನುಷ್ಯರದೇ ಹೊರತು ದೇವರದಲ್ಲ” ಎಂದು ಗದರಿಸಿದನು.
34 ನಂತರ ಯೇಸು ಜನರನ್ನು ತನ್ನ ಬಳಿಗೆ ಕರೆದನು. ಆತನ ಶಿಷ್ಯರೂ ಅಲ್ಲಿದ್ದರು. ಯೇಸು ಅವರಿಗೆ, “ಯಾವನಿಗಾದರೂ ನನ್ನನ್ನು ಅನುಸರಿಸಲು ಮನಸ್ಸಿದ್ದರೆ, ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸಬೇಕು. 35 ತನ್ನ ಪ್ರಾಣವನ್ನು ಕಾಪಾಡಿಕೊಳ್ಳಲು ಇಚ್ಛಿಸುವವನು ಅದನ್ನು ಕಳೆದುಕೊಳ್ಳುತ್ತಾನೆ. ನನಗಾಗಿ ಹಾಗೂ ಸುವಾರ್ತೆಗಾಗಿ ತನ್ನ ಪ್ರಾಣವನ್ನು ಕೊಡುವ ಪ್ರತಿಯೊಬ್ಬನೂ ತನ್ನ ಪ್ರಾಣವನ್ನು ನಿರಂತರವಾಗಿ ಕಾಪಾಡಿಕೊಳ್ಳುತ್ತಾನೆ. 36 ಒಬ್ಬನು ಪ್ರಪಂಚವನ್ನೆಲ್ಲಾ ಸಂಪಾದಿಸಿಕೊಂಡು ತನ್ನ ಆತ್ಮವನ್ನೇ ನಷ್ಟಪಡಿಸಿಕೊಂಡರೆ ಅದರಿಂದ ಅವನಿಗೆ ಪ್ರಯೋಜನವೇನು? 37 ಒಬ್ಬನು ತನ್ನ ಆತ್ಮವನ್ನು ಕೊಂಡುಕೊಳ್ಳಲು ಸಾಧ್ಯವೇ? 38 ವ್ಯಭಿಚಾರಿಣಿಯಂತಿರುವ ಈ ಕೆಟ್ಟ ಸಂತತಿಯವರಲ್ಲಿ ಯಾವನಾದರೂ ನನಗೂ ನನ್ನ ಉಪದೇಶಕ್ಕೂ ನಾಚಿಕೊಂಡರೆ, ಮನುಷ್ಯಕುಮಾರನಾದ ನಾನು ನನ್ನ ತಂದೆಯ ಮಹಿಮೆಯೊಂದಿಗೆ ಪರಿಶುದ್ಧ ದೇವದೂತರ ಸಮೇತವಾಗಿ ಬರುವ ಸಮಯದಲ್ಲಿ ಅವನ ಬಗ್ಗೆ ನಾಚಿಕೆಪಡುವೆನು” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International