M’Cheyne Bible Reading Plan
ಉಳಿದ ಭೂಮಿಯ ಹಂಚುವಿಕೆ
18 ಇಸ್ರೇಲರೆಲ್ಲರು ಶೀಲೋವಿನಲ್ಲಿ ಒಟ್ಟಾಗಿ ಸೇರಿದರು. ಆ ಸ್ಥಳದಲ್ಲಿ ಅವರು ದೇವದರ್ಶನ ಗುಡಾರವನ್ನು ನಿಲ್ಲಿಸಿದರು. ಇಸ್ರೇಲರು ಆ ದೇಶವನ್ನು ಸ್ವಾಧೀನ ಮಾಡಿಕೊಂಡಿದ್ದರು. ಅವರು ಆ ದೇಶದ ಎಲ್ಲ ಶತ್ರುಗಳನ್ನು ಸೋಲಿಸಿದ್ದರು. 2 ಆದರೂ ದೇವರು ವಾಗ್ದಾನ ಮಾಡಿದ ಭೂಮಿಯನ್ನು ಇಸ್ರೇಲರ ಏಳು ಕುಲಗಳು ಇನ್ನೂ ಪಡೆದಿರಲಿಲ್ಲ.
3 ಆದ್ದರಿಂದ ಯೆಹೋಶುವನು ಇಸ್ರೇಲರಿಗೆ, “ನೀವು ನಿಮ್ಮ ಭೂಮಿಯನ್ನು ಪಡೆದುಕೊಳ್ಳಲು ಅಷ್ಟು ದೀರ್ಘಕಾಲದವರೆಗೆ ಏಕೆ ಕಾಯುತ್ತೀರಿ? ನಿಮ್ಮ ಪೂರ್ವಿಕರ ದೇವರಾದ ಯೆಹೋವನು ಈ ಭೂಮಿಯನ್ನು ನಿಮಗೆ ಕೊಟ್ಟಿದ್ದಾನೆ. 4 ಆದ್ದರಿಂದ ಪ್ರತಿಯೊಂದು ಕುಲದಿಂದ ಮೂರು ಮೂರು ಜನರನ್ನು ಆರಿಸಬೇಕು. ಭೂಮಿಯನ್ನು ಪರಿಶೀಲಿಸಲು ನಾನು ಅವರನ್ನು ಕಳುಹಿಸುತ್ತೇನೆ. ಅವರು ಭೂಮಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಅದರ ನಕ್ಷೆಯನ್ನು ಮಾಡಿ ನನ್ನ ಬಳಿಗೆ ತೆಗೆದುಕೊಂಡು ಬರಲಿ. 5 ಅವರು ಆ ಭೂಮಿಯನ್ನು ಏಳು ಭಾಗಗಳಾಗಿ ವಿಂಗಡಿಸಲಿ. ಯೆಹೂದದ ಜನರು ದಕ್ಷಿಣದಲ್ಲಿ ತಮ್ಮ ಭೂಮಿಯನ್ನು ಇಟ್ಟುಕೊಳ್ಳಲಿ. ಯೋಸೇಫನ ಜನರು ಉತ್ತರದಲ್ಲಿ ತಮ್ಮ ಭೂಮಿಯನ್ನು ಇಟ್ಟುಕೊಳ್ಳಲಿ. 6 ಆದರೆ ನೀವು ಒಂದು ನಕ್ಷೆಯನ್ನು ಮಾಡಿ ಭೂಮಿಯನ್ನು ಏಳು ಭಾಗಗಳಾಗಿ ವಿಂಗಡಿಸಬೇಕು. ಆ ನಕ್ಷೆಯನ್ನು ನನ್ನ ಬಳಿಗೆ ತೆಗೆದುಕೊಂಡು ಬನ್ನಿ. ಯಾವ ಕುಲದವರು ಯಾವ ಭೂಮಿಯನ್ನು ತೆಗೆದುಕೊಳ್ಳಬೇಕೆಂಬುದನ್ನು ನಮ್ಮ ದೇವರಾದ ಯೆಹೋವನು ನಿರ್ಣಯಿಸಲಿ. 7 ಲೇವಿಯ ಕುಲದವರಿಗೆ ಭೂಮಿಯಲ್ಲಿ ಪಾಲು ದೊರೆಯುವುದಿಲ್ಲ. ಯಾಜಕರಾಗಿ ಯೆಹೋವನ ಸೇವೆ ಮಾಡುವುದೇ ಅವರ ಪಾಲು. ಗಾದ್ಯರು, ರೂಬೇನ್ಯರು ಮತ್ತು ಮನಸ್ಸೆ ಕುಲದ ಅರ್ಧಜನರು ವಾಗ್ದಾನ ಮಾಡಲಾದ ಭೂಮಿಯನ್ನು ಈಗಾಗಲೇ ಪಡೆದುಕೊಂಡಿದ್ದಾರೆ. ಅವರು ಜೋರ್ಡನ್ ನದಿಯ ಪೂರ್ವದಿಕ್ಕಿನಲ್ಲಿದ್ದಾರೆ. ಯೆಹೋವನ ಸೇವಕನಾದ ಮೋಶೆಯು ಈಗಾಗಲೇ ಆ ಭೂಮಿಯನ್ನು ಅವರಿಗೆ ಕೊಟ್ಟಿದ್ದಾನೆ” ಎಂದನು.
8 ಆದ್ದರಿಂದ ಭೂಮಿಯನ್ನು ಪರಿಶೀಲಿಸಲು ಆರಿಸಲ್ಪಟ್ಟ ಜನರಿಗೆ ಯೆಹೋಶುವನು, “ಹೋಗಿ, ಭೂಮಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿರಿ; ಅದರ ನಕ್ಷೆಗಳನ್ನು ತೆಗೆಯಿರಿ. ಆಮೇಲೆ ಶೀಲೋವಿನಲ್ಲಿ ನಾನಿರುವ ಸ್ಥಳಕ್ಕೆ ಬನ್ನಿ. ಆಗ ನಾನು ಚೀಟುಹಾಕುತ್ತೇನೆ. ಯೆಹೋವನು ನಿಮ್ಮ ಪಾಲುಗಳನ್ನು ಕೊಡಲಿ” ಅಂದನು.
9 ಅಂತೆಯೇ ಅವರು ಹೋಗಿ ಭೂಮಿಯನ್ನು ಚೆನ್ನಾಗಿ ಪರಿಶೀಲಿಸಿದರು; ಯೆಹೋಶುವನಿಗಾಗಿ ನಕ್ಷೆಗಳನ್ನು ತೆಗೆದರು. ಅವರು ಪ್ರತಿಯೊಂದು ಹಳ್ಳಿಯನ್ನು ಪರಿಶೀಲಿಸಿದರು. ಭೂಮಿಯನ್ನು ಏಳು ಭಾಗಗಳಾಗಿ ವಿಂಗಡಿಸಿದರು. ಅವರು ನಕ್ಷೆಗಳನ್ನು ತೆಗೆದು ಯೆಹೋಶುವನ ಬಳಿಗೆ ಶೀಲೋವಿಗೆ ಹಿಂತಿರುಗಿ ಹೋದರು. 10 ಯೆಹೋಶುವನು ಅವರಿಗಾಗಿ ಶೀಲೋವಿನಲ್ಲಿ ಯೆಹೋವನ ಮುಂದೆ ಚೀಟುಹಾಕಿದನು. ಹೀಗೆ ಯೆಹೋಶುವನು ಭೂಮಿಯನ್ನು ಹಂಚಿದನು; ಪ್ರತಿಯೊಂದು ಕುಲಕ್ಕೆ ಅದರ ಭೂಭಾಗವನ್ನು ಕೊಟ್ಟನು.
ಬೆನ್ಯಾಮೀನ್ ಕುಲದವರಿಗೆ ಭೂಮಿ
11 ಬೆನ್ಯಾಮೀನ್ ಕುಲದವರಿಗೆ ಯೆಹೂದ್ಯರ ಮತ್ತು ಯೋಸೇಫ್ಯರ ಪ್ರಾಂತ್ಯಗಳ ಮಧ್ಯದಲ್ಲಿರುವ ಭೂಮಿಯನ್ನು ಕೊಡಲಾಯಿತು. ಬೆನ್ಯಾಮೀನ್ ಕುಲದ ಪ್ರತಿಯೊಂದು ಗೋತ್ರವು ತಮ್ಮ ಭೂಮಿಯನ್ನು ಪಡೆದುಕೊಂಡಿತು. ಇದು ಬೆನ್ಯಾಮೀನ್ ಕುಲದವರಿಗೆ ಆರಿಸಲ್ಪಟ್ಟ ಭೂಮಿಯಾಗಿತ್ತು. 12 ಅದರ ಉತ್ತರದಿಕ್ಕಿನ ಮೇರೆಯು ಜೋರ್ಡನ್ ನದಿಯಿಂದ ಆರಂಭವಾಗುತ್ತದೆ. ಅದು ಜೆರಿಕೊವಿನ ಉತ್ತರ ಅಂಚಿನೊಂದಿಗೆ ಹೊರಟು ಪಶ್ಚಿಮದ ಬೆಟ್ಟಪ್ರದೇಶದೊಳಗೆ ಹೋಗುತ್ತದೆ. ಆ ಸೀಮೆಯು ಬೇತಾವೆನಿನ ಪೂರ್ವದಿಕ್ಕಿಗೆ ಅತಿಸಮೀಪದಲ್ಲಿ ಮುಂದುವರೆದು 13 ದಕ್ಷಿಣದಲ್ಲಿರುವ ಬೇತೇಲ್ ಎಂಬ ಲೂಜಿಗೆ ಹೋಗುತ್ತದೆ. ಅಲ್ಲಿಂದ ಇಳಿದು ಅಟಾರೋತದ್ದಾರ್ಗೆ ಹೋಗುತ್ತದೆ. ಅಟಾರೋತದ್ದಾರ್ ಕೆಳಗಿನ ಬೇತ್ಹೋರೋನಿನ ದಕ್ಷಿಣದಲ್ಲಿರುವ ಬೆಟ್ಟದ ಮೇಲೆ ಇದೆ. 14 ಬೇತ್ಹೋರೋನಿನ ದಕ್ಷಿಣದಲ್ಲಿರುವ ಬೆಟ್ಟದಿಂದ ಆ ಸೀಮೆಯು ದಕ್ಷಿಣಕ್ಕೆ ತಿರುಗಿಕೊಂಡು ಆ ಬೆಟ್ಟದ ಪಶ್ಚಿಮಭಾಗದ ಜೊತೆಗೆ ಮುಂದುವರೆಯುತ್ತದೆ. ಆ ಸೀಮೆಯು ಕಿರ್ಯತ್ಯಾರೀಮ್ ಎಂಬ ಕಿರ್ಯತ್ಬಾಳ್ಗೆ ಹೋಗುತ್ತದೆ. ಈ ಪಟ್ಟಣವು ಯೆಹೂದ್ಯರಿಗೆ ಸೇರಿದ್ದು. ಇದು ಪಶ್ಚಿಮದಿಕ್ಕಿನ ಸೀಮೆಯಾಗಿತ್ತು.
15 ದಕ್ಷಿಣದಿಕ್ಕಿನ ಮೇರೆಯು ಕಿರ್ಯತ್ಯಾರೀಮಿನ ಹತ್ತಿರದಿಂದ ಪ್ರಾರಂಭವಾಗಿ ನೆಪ್ತೋಹ ನದಿಯವರೆಗೆ ಹೋಗುತ್ತದೆ. 16 ಅಲ್ಲಿಂದ ಆ ಮೇರೆಯು ರೆಫಾಯಿಮ್ ತಗ್ಗಿನ ಉತ್ತರದಲ್ಲಿರುವ ಬೆನ್ಹಿನ್ನೋಮ್ ತಗ್ಗಿನ ಹತ್ತಿರ ಆ ಬೆಟ್ಟದ ಬುಡಕ್ಕೆ ಇಳಿಯುತ್ತದೆ. ಆ ಮೇರೆಯು ಹಿನ್ನೋಮ್ ತಗ್ಗಿನಿಂದ ಯೆಬೂಸಿಯ ಪಟ್ಟಣದ ದಕ್ಷಿಣದವರೆಗೆ ಮುಂದುವರೆಯುತ್ತದೆ. ಅಲ್ಲಿಂದ ಅದು ಏನ್ರೋಗೆಲಿಗೆ ಬರುತ್ತದೆ. 17 ಅಲ್ಲಿಂದ ಆ ಸೀಮೆಯು ಉತ್ತರಕ್ಕೆ ತಿರುಗಿ ಏನ್ಷೆಮೆಸ್ಗೆ ಹೋಗುತ್ತದೆ. ಅದು ಗೆಲೀಲೋತದವರೆಗೆ ಮುಂದುವರೆಯುತ್ತದೆ. (ಬೆಟ್ಟಗಳಲ್ಲಿರುವ ಅದುಮ್ಮೀಮ್ ಎಂಬ ಇಕ್ಕಟ್ಟಾದ ಮಾರ್ಗದ ಸಮೀಪದಲ್ಲಿದೆ ಗೆಲೀಲೋತ್.) ಆ ಸೀಮೆಯು ರೂಬೇನನ ಮಗನಾದ ಬೋಹನನ ಹೆಸರಿನ ಮಹಾಬಂಡೆಗೆ ಹೋಗುತ್ತದೆ. 18 ಆ ಸೀಮೆಯು ಬೇತ್ಅರಾಬ ಉತ್ತರಭಾಗಕ್ಕೆ ಮುಂದುವರೆದು ಅಲ್ಲಿಂದ ಅದು ಜೋರ್ಡನ್ ಕಣಿವೆಗೆ ಇಳಿಯುತ್ತದೆ. 19 ಅಲ್ಲಿಂದ ಆ ಮೇರೆಯು ಬೇತ್ಹೊಗ್ಲಾವಿನ ಉತ್ತರಭಾಗದಲ್ಲಿ ಮುಂದುವರೆದು ಲವಣಸಮುದ್ರದ ಉತ್ತರ ದಡದಲ್ಲಿ ಮುಕ್ತಾಯಗೊಳ್ಳುತ್ತದೆ. ಜೋರ್ಡನ್ ನದಿಯು ಸಮುದ್ರಕ್ಕೆ ಸೇರುವುದು ಇಲ್ಲಿಯೇ. ಇದು ದಕ್ಷಿಣದಿಕ್ಕಿನ ಸೀಮೆ.
20 ಜೋರ್ಡನ್ ನದಿಯು ಅವರ ಪೂರ್ವದಿಕ್ಕಿನ ಮೇರೆ. ಬೆನ್ಯಾಮೀನ್ ಗೋತ್ರಗಳ ಸ್ವಾಸ್ತ್ಯದ ಸುತ್ತಲಿನ ಮೇರೆಯು ಇದೇ. 21 ಬೆನ್ಯಾಮೀನ್ ಗೋತ್ರಗಳಿಗೆ ದೊರಕಿದ ಪಟ್ಟಣಗಳು: ಜೆರಿಕೊ, ಬೇತ್ಹೊಗ್ಲಾ, ಏಮೆಕ್ಕೆಚ್ಚೀಚ್, 22 ಬೇತ್ಅರಾಬಾ, ಚೆಮಾರಯಿಮ್, ಬೇತೇಲ್, 23 ಅವ್ವೀಮ್, ಪಾರಾ, ಒಫ್ರಾ, 24 ಅಮ್ಮೋನ್ಯ, ಕೆಫೆರ್, ಒಫ್ನೀ ಮತ್ತು ಗೆಬಾ ಎಂಬ ಹನ್ನೆರಡು ನಗರಗಳು ಮತ್ತು ಅವುಗಳ ಸುತ್ತಮುತ್ತಲಿನ ಎಲ್ಲ ಹೊಲಗದ್ದೆಗಳು.
25 ಬೆನ್ಯಾಮೀನ್ ಗೋತ್ರದವರು ಹದಿನಾಲ್ಕು ಊರುಗಳನ್ನು ಮತ್ತು ಅವುಗಳ ಸುತ್ತಮುತ್ತಲಿನ ಎಲ್ಲಾ ಹೊಲಗದ್ದೆಗಳನ್ನು ಪಡೆದುಕೊಂಡರು. ಆ ಊರುಗಳು ಇಂತಿವೆ: ಗಿಬ್ಯೋನ್, ರಾಮಾ, ಬೇರೋತ್, 26 ಮಿಚ್ಪೆ, ಕೆಫೀರಾ, ಮೋಚಾ, 27 ರೆಕೆಮ್, ಇರ್ಫೇಲ್, ತರಲಾ, 28 ಚೇಲ, ಎಲೆಫ್, ಜೆರುಸಲೇಮ್ ಎಂದು ಕರೆಯಲ್ಪಡುವ ಯೆಬೂಸಿಯರ ಪಟ್ಟಣ, ಗಿಬೆಯತ್ ಮತ್ತು ಕಿರ್ಯತ್. ಬೆನ್ಯಾಮೀನ್ ಗೋತ್ರಗಳವರು ಈ ಪ್ರದೇಶಗಳನ್ನೆಲ್ಲ ಪಡೆದುಕೊಂಡರು.
ಸಿಮೆಯೋನ್ ಕುಲದವರಿಗೆ ಭೂಮಿ
19 ಅನಂತರ ಯೆಹೋಶುವನು ಸಿಮೆಯೋನ್ ಕುಲದ ಎಲ್ಲ ಗೋತ್ರಗಳಿಗೆ ಅವರ ಪಾಲಿನ ಭೂಮಿಯನ್ನು ಕೊಟ್ಟನು. ಅವರಿಗೆ ಸಿಕ್ಕ ಭೂಮಿಯು ಯೆಹೂದ ಕುಲದವರಿಗೆ ಸೇರಿದ ಭೂಭಾಗದ ಮಧ್ಯದಲ್ಲಿತ್ತು. 2 ಅವರಿಗೆ ದೊರೆತ ಭಾಗವಿದು: ಬೇರ್ಷೆಬ, ಮೋಲಾದಾ, 3 ಹಚರ್ಷೂವಾಲ್, ಬಾಲಾ, ಎಚೆಮ್, 4 ಎಲ್ತೋಲದ್, ಬೆತೂಲ್, 5 ಹೊರ್ಮಾ, ಚಿಕ್ಲಗ್, ಬೇತ್ಮರ್ಕಾಬೋತ್, ಹಚರ್ಸೂಸಾ, 6 ಬೇತ್ ಲೆಬಾವೋತ್ ಮತ್ತು ಶಾರೂಹೆನ್ ಎಂಬ ಹದಿಮೂರು ಪಟ್ಟಣಗಳು ಮತ್ತು ಅವುಗಳ ಸುತ್ತಮುತ್ತಲಿನ ಎಲ್ಲ ಹೊಲಗದ್ದೆಗಳು.
7 ಆಯಿನ್, ರಿಮ್ಮೋನ್, ಏತೆರ್, ಆಷಾನ್ ಎಂಬ ನಾಲ್ಕು ಪಟ್ಟಣಗಳು ಮತ್ತು ಅವುಗಳ ಸುತ್ತಮುತ್ತಲಿನ ಎಲ್ಲ ಹೊಲಗದ್ದೆಗಳನ್ನು ಅವರು ಪಡೆದುಕೊಂಡರು. 8 ಬಾಲತ್ಬೇರನ (ನೆಗೇವದಲ್ಲಿದ್ದ ರಾಮ)ವರೆಗೆ ಹಬ್ಬಿದ ಎಲ್ಲ ಪಟ್ಟಣಗಳ ಸುತ್ತಲಿನ ಹೊಲಗದ್ದೆಗಳನ್ನು ಸಹ ಅವರು ಪಡೆದುಕೊಂಡರು. ಇದೇ ಸಿಮೆಯೋನ್ ಕುಲದವರಿಗೆ ದೊರೆತ ಭಾಗವಾಗಿತ್ತು. ಪ್ರತಿಯೊಂದು ಗೋತ್ರದವರು ತಮ್ಮ ಭೂಮಿಯನ್ನು ಪಡೆದುಕೊಂಡರು. 9 ಸಿಮೆಯೋನ್ಯರ ಭೂಮಿಯು ಯೆಹೂದದ ಭೂಮಿಯ ಒಂದು ಭಾಗವಾಗಿತ್ತು. ಯೆಹೂದ್ಯರಿಗೆ ಅವರ ಅವಶ್ಯಕತೆಗಿಂತ ಹೆಚ್ಚು ಭೂಮಿ ಇದ್ದಕಾರಣ ಸಿಮೆಯೋನ್ಯರು ಅದರಲ್ಲಿ ಒಂದು ಭಾಗವನ್ನು ಪಡೆದುಕೊಂಡರು.
ಜೆಬುಲೂನ್ ಕುಲದವರಿಗೆ ಭೂಮಿ
10 ತರುವಾಯ ತಮ್ಮ ಪಾಲಿನ ಭೂಮಿಯನ್ನು ಪಡೆದವರು ಜೆಬುಲೂನ್ ಕುಲದವರು. ಜೆಬುಲೂನ್ ಕುಲದ ಪ್ರತಿಯೊಂದು ಗೋತ್ರಕ್ಕೆ ವಾಗ್ದಾನದ ಪ್ರಕಾರ ಭೂಮಿಯನ್ನು ಕೊಡಲಾಯಿತು. ಜೆಬುಲೂನ್ಯರ ಪ್ರದೇಶವು ಸಾರೀದಿನವರೆಗೂ ವಿಸ್ತರಿಸಿತ್ತು. 11 ಅಲ್ಲಿಂದ ಅದು ಪಶ್ಚಿಮಕ್ಕೆ ಮರ್ಗಲಾಕ್ಕೆ ಹೋಗಿ ದಬ್ಬೆಷೆತ್ನ್ನು ತಲುಪುತ್ತದೆ. ಅಲ್ಲಿಂದ ಯೊಕ್ನೆಯಾಮ್ ಊರಿನ ಈಚೆ ಇರುವ ಹಳ್ಳಕ್ಕೆ ಹೋಗುತ್ತದೆ. 12 ಅಲ್ಲಿಂದ ಅದು ಪೂರ್ವಕ್ಕೆ ತಿರುಗಿಕೊಂಡು ಸಾರೀದಿನಿಂದ ಕಿಸ್ಲೋತ್ ತಾಬೋರಿಗೆ ಹೋಗುತ್ತದೆ. ಅಲ್ಲಿಂದ ಅದು ದಾಬೆರತ್ ಮತ್ತು ಯಾಫೀಯಕ್ಕೆ ಹೋಗುತ್ತದೆ. 13 ಅಲ್ಲಿಂದ ಪೂರ್ವಕ್ಕೆ ಮುಂದುವರೆದು ಗತ್ಹೇಫೆರ್ ಮತ್ತು ಎತ್ಕಾಚೀನಿನ ಮೇಲಿಂದ ರಿಮ್ಮೋನಿಗೆ ತಲುಪಿ ಅಲ್ಲಿಂದ ತಿರುಗಿಕೊಂಡು “ನೇಯಕ್ಕೆ” ಹೋಗುತ್ತದೆ. 14 “ನೇಯ”ದಿಂದ ಅದು ತಿರುಗಿಕೊಂಡು ಉತ್ತರದಿಕ್ಕಿನ ಹನ್ನಾತೋನಿನ ಮೇಲಿಂದ ಇಫ್ತಹೇಲಿನ ಕಣಿವೆಗೆ ಹೋಗುತ್ತದೆ. 15 ಕಟ್ಟಾತ್, ನಹಲ್ಲಾಲ್, ಶಿಮ್ರೋನ್, ಇದಲ್ಲಾ, ಬೆತ್ಲೆಹೇಮ್ ಇವೇ ಮೊದಲಾದ ಹನ್ನೆರಡು ಪಟ್ಟಣಗಳು ಮತ್ತು ಅವುಗಳ ಸುತ್ತಮುತ್ತಲಿನ ಎಲ್ಲ ಹೊಲಗದ್ದೆಗಳು ಈ ಸೀಮೆಯಲ್ಲಿ ಸೇರಿವೆ.
16 ಈ ಪಟ್ಟಣಗಳನ್ನು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳನ್ನು ಜೆಬುಲೂನ್ಯರಿಗೆ ಕೊಡಲಾಯಿತು. ಜೆಬುಲೂನ್ಯರ ಪ್ರತಿಯೊಂದು ಗೋತ್ರದವರು ತಮ್ಮ ಪಾಲಿನ ಭೂಮಿಯನ್ನು ಪಡೆದರು.
ಇಸ್ಸಾಕಾರ್ ಕುಲದವರಿಗೆ ಭೂಮಿ
17 ಭೂಮಿಯ ನಾಲ್ಕನೆಯ ಭಾಗವನ್ನು ಇಸ್ಸಾಕಾರ್ ಕುಲದವರಿಗೆ ಕೊಡಲಾಯಿತು. ಆ ಕುಲದ ಪ್ರತಿಯೊಂದು ಗೋತ್ರದವರು ತಮ್ಮ ಪಾಲಿನ ಭೂಮಿಯನ್ನು ಪಡೆದರು. 18 ಈ ಭೂಮಿಯನ್ನು ಆ ಕುಲದವರಿಗೆ ಕೊಡಲಾಯಿತು: ಇಜ್ರೇಲ್, ಕೆಸುಲ್ಲೋತ್, ಶೂನೇಮ್, 19 ಹಫಾರಯಿಮ್, ಶೀಯೋನ್, ಅನಾಹರತ್, 20 ರಬ್ಬೀತ್, ಕಿಷ್ಯೋನ್, ಎಬೆಜ್, 21 ರೆಮೆತ್, ಏಂಗನ್ನೀಮ್, ಏನ್ಹದ್ದಾ ಮತ್ತು ಬೇತ್ ಪಚ್ಚೇಚ್.
22 ಅವರ ಭೂಮಿಯ ಮೇರೆಯು ತಾಬೋರ್, ಶಹಚೀಮಾ, ಬೇತ್ಷೆಮೆಷ್ ಎಂಬ ಊರುಗಳನ್ನು ತಲುಪಿತ್ತು. ಆ ಸೀಮೆಯು ಜೋರ್ಡನ್ ನದಿಗೆ ಮುಕ್ತಾಯಗೊಳ್ಳುತ್ತಿತ್ತು. ಒಟ್ಟಿನಲ್ಲಿ ಹದಿನಾರು ಪಟ್ಟಣಗಳು ಮತ್ತು ಅವುಗಳ ಸುತ್ತಮುತ್ತಲಿನ ಎಲ್ಲಾ ಹೊಲಗದ್ದೆಗಳು ಇದರಲ್ಲಿದ್ದವು. 23 ಈ ನಗರಗಳು ಮತ್ತು ಪಟ್ಟಣಗಳು ಇಸ್ಸಾಕಾರ್ ಕುಲದವರಿಗೆ ಕೊಟ್ಟ ಭೂಮಿಯ ಭಾಗಗಳಾಗಿದ್ದವು. ಪ್ರತಿಯೊಂದು ಗೋತ್ರದವರು ತಮ್ಮ ಪಾಲಿನ ಭೂಮಿಯನ್ನು ಪಡೆದರು.
ಆಶೇರ್ ಕುಲದವರಿಗೆ ಭೂಮಿ
24 ಭೂಮಿಯ ಐದನೆಯ ಭಾಗವನ್ನು ಆಶೇರ್ ಕುಲದವರಿಗೆ ಕೊಡಲಾಯಿತು. ಆ ಕುಲದ ಪ್ರತಿಯೊಂದು ಗೋತ್ರದವರು ಭೂಮಿಯಲ್ಲಿ ತಮ್ಮ ಪಾಲನ್ನು ಪಡೆದುಕೊಂಡರು. 25 ಆ ಕುಲದವರಿಗೆ ಕೊಟ್ಟ ಭೂಮಿಯಿದು: ಹೆಲ್ಕತ್, ಹಲೀ ಬೆಟೆನ್, ಆಕ್ಷಾಫ್, 26 ಅಲಮ್ಮೆಲೆಕ್, ಅಮಾದ್ ಮತ್ತು ಮಿಷಾಲ್.
ಇದರ ಪಶ್ಚಿಮ ಮೇರೆಯು ಕರ್ಮೆಲ್ ಬೆಟ್ಟ ಮತ್ತು ಶೀಹೋರ್ಲಿಬ್ನತ್ವರೆಗೆ ಚಾಚಿಕೊಂಡಿತ್ತು. 27 ಅಲ್ಲಿಂದ ಅದರ ಸೀಮೆಯು ಪೂರ್ವಕ್ಕೆ ತಿರುಗಿಕೊಂಡು ಬೇತ್ದಾಗೋನಿಗೆ ಹೋಗಿತ್ತು. ಆ ಸೀಮೆಯು ಜೆಬುಲೂನ್ಯರ ಮೇರೆಗೂ ಮತ್ತು ಇಪ್ತಹೇಲ್ ಕಣಿವೆಗೂ ತಲುಪಿತ್ತು. ಅಲ್ಲಿಂದ ಅದು ಬೇತ್ಏಮೆಕ್ ಮತ್ತು ನೆಗೀಯೇಲ್ನ ಉತ್ತರಕ್ಕೆ ಮುಂದುವರಿದು ಕಾಬೂಲಿನ ಉತ್ತರ ಭಾಗವನ್ನು ದಾಟಿತ್ತು. 28 ಅಲ್ಲಿಂದ ಆ ಮೇರೆಯು ಎಬ್ರೋನ್, ರೆಹೋಬ್, ಹಮ್ಮೋನ್ ಮತ್ತು ಕಾನಾ ಇವುಗಳ ಮೂಲಕ ಚೀದೋನ್ ಎಂಬ ಮಹಾನಗರಕ್ಕೆ ತಲುಪಿತ್ತು. 29 ಅಲ್ಲಿಂದ ಆ ಸೀಮೆಯು ದಕ್ಷಿಣದಿಕ್ಕಿಗೆ ಹಿಂತಿರುಗಿ ರಾಮಾವನ್ನು ತಲುಪಿ, ಅಲ್ಲಿಂದ ಸುಭದ್ರ ನಗರವಾದ ತೂರ್ಗೆ ಮುಂದುವರೆದು ಅಲ್ಲಿಂದ ತಿರುಗಿಕೊಂಡು ಹೋಸಾಕ್ಕೆ ತಲುಪುತ್ತದೆ. ಅಲ್ಲಿಂದ ಅಕ್ಜೀಬ್, 30 ಉಮ್ಮಾ, ಅಫೇಕ್ ಮತ್ತು ರೆಹೋಬ್ ಹತ್ತಿರ ಸಮುದ್ರದಲ್ಲಿ ಕೊನೆಗೊಳ್ಳುತ್ತದೆ.
ಒಟ್ಟಿನಲ್ಲಿ ಇಪ್ಪತ್ತೆರಡು ಪಟ್ಟಣಗಳು ಮತ್ತು ಅವುಗಳ ಸುತ್ತಮುತ್ತಲಿನ ಎಲ್ಲ ಹೊಲಗದ್ದೆಗಳು ಇದರಲ್ಲಿ ಸೇರಿದ್ದವು. 31 ಈ ನಗರಗಳು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳು ಆಶೇರ್ ಕುಲದವರಿಗೆ ಕೊಡಲಾಗಿತ್ತು. ಆ ಕುಲದ ಪ್ರತಿಯೊಂದು ಕುಟುಂಬವು ತನ್ನ ಪಾಲಿನ ಭೂಭಾಗವನ್ನು ಪಡೆಯಿತು.
ನಫ್ತಾಲಿ ಕುಲದವರಿಗೆ ಭೂಮಿ
32 ಭೂಮಿಯ ಆರನೆಯ ಭಾಗವನ್ನು ನಫ್ತಾಲಿ ಕುಲದವರಿಗೆ ಕೊಡಲಾಯಿತು. ಆ ಕುಲದ ಪ್ರತಿಯೊಂದು ಗೋತ್ರವು ತನ್ನ ಭೂಭಾಗವನ್ನು ಪಡೆಯಿತು. 33 ಅವರ ಭೂಮಿಯ ಮೇರೆಯು ಚಾನನ್ನೀಮಿನ ಹತ್ತಿರ ಇರುವ ದೊಡ್ಡ ಮರದಿಂದ ಆರಂಭವಾಗುತ್ತದೆ. ಇದು ಹೇಲೆಫಿನ ಹತ್ತಿರ ಇದೆ. ಬಳಿಕ ಆ ಮೇರೆಯು ಅದಾಮೀನೆಕೆಬ್ ಮತ್ತು ಯಬ್ನೆಯೇಲ್ ಇವುಗಳ ಮೂಲಕ ಲಕ್ಕೂಮಿಗೆ ಹೋಗಿ, ಜೋರ್ಡನ್ ನದಿಯ ತೀರದಲ್ಲಿ ಮುಕ್ತಾಯಗೊಂಡಿತು. 34 ಅಲ್ಲಿಂದ ಆ ಮೇರೆಯು ಆಜ್ನೋತ್ತಾಬೋರಿನ ಮೂಲಕ ಹುಕ್ಕೋಕಿಗೆ ಹೋಗಿ ನಿಲ್ಲುತ್ತದೆ. ಅದರ ದಕ್ಷಿಣದ ಮೇರೆ ಜೆಬುಲೂನ್ಯರ ಮೇರೆಗೂ ಪಶ್ಚಿಮದ ಮೇರೆ ಆಶೇರ್ಯರ ಮೇರೆಗೂ ಹೊಂದಿಕೊಂಡಿದೆ. ಆ ಮೇರೆಯು ಪೂರ್ವದಿಕ್ಕಿನಲ್ಲಿ ಜೋರ್ಡನ್ ನದಿಯ ಬಳಿಯಿದ್ದ ಯೆಹೂದಕ್ಕೂ ಹೋಯಿತು. 35 ಈ ಸೀಮೆಯ ಒಳಗಡೆ ಕೆಲವು ಅತಿ ಭದ್ರವಾದ ಪಟ್ಟಣಗಳಿದ್ದವು. ಆ ಪಟ್ಟಣಗಳೆಂದರೆ: ಚಿದ್ದೀಮ್, ಚೇರ್, ಹಮ್ಮತ್, ರಕ್ಕತ್, ಕಿನ್ನೆರೆತ್, 36 ಅದಾಮಾ, ರಾಮಾ, ಹಾಚೋರ್, 37 ಕೆದೆಷ್, ಎದ್ರೈ, ಏನ್ಹಾಚೋರ್, 38 ಇರೋನ್, ಮಿಗ್ದಲೇಲ್, ಹೊರೇಮ್, ಬೇತನಾತ್ ಮತ್ತು ಬೇತ್ಷೆಮೆಷ್ ಎಂಬವುಗಳು. ಒಟ್ಟಿನಲ್ಲಿ ಹತ್ತೊಂಭತ್ತು ಪಟ್ಟಣಗಳು ಮತ್ತು ಅವುಗಳ ಸುತ್ತಮುತ್ತಲಿನ ಎಲ್ಲ ಹೊಲಗದ್ದೆಗಳು.
39 ಈ ನಗರಗಳನ್ನು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳನ್ನು ನಫ್ತಾಲಿ ಕುಲದವರಿಗೆ ಕೊಡಲಾಗಿತ್ತು. ಆ ಕುಲದ ಪ್ರತಿಯೊಂದು ಗೋತ್ರದವರು ತಮ್ಮ ಪಾಲಿನ ಭೂಮಿಯನ್ನು ಪಡೆದುಕೊಂಡರು.
ದಾನ್ ಕುಲದವರಿಗೆ ಭೂಮಿ
40 ಆಮೇಲೆ ದಾನ್ ಕುಲದವರಿಗೆ ಭೂಮಿಯನ್ನು ಕೊಡಲಾಯಿತು. ಆ ಕುಲದ ಪ್ರತಿಯೊಂದು ಗೋತ್ರವು ತನ್ನ ಭೂಮಿಯನ್ನು ಪಡೆಯಿತು. 41 ಅವರಿಗೆ ಕೊಟ್ಟ ಊರುಗಳು: ಚೊರ್ಗಾ, ಎಷ್ಟಾವೋಲ್, ಈರ್ಷೆಮೆಷ್, 42 ಶಾಲಬ್ಬೀನ್, ಅಯ್ಯಾಲೋನ್, ಇತ್ಲಾ, 43 ಏಲೋನ್, ತಿಮ್ನಾ, ಎಕ್ರೋನ್, 44 ಎಲ್ತೆಕೇ, ಗಿಬ್ಬೆತೋನ್, ಬಾಲತ್, 45 ಯೆಹುದ್, ಬೆನೇಬೆರಕ್, ಗತ್ರಿಮ್ಮೋನ್, 46 ಮೇಯರ್ಕೋನ್ ಮತ್ತು ರಕ್ಕೋನ್, ಯೊಪ್ಪಕ್ಕೆ ಹತ್ತಿರದ ಪ್ರದೇಶಗಳೂ ಇವರಿಗೆ ದೊರೆತವು.
47 ದಾನ್ಕುಲದವರು ತಮ್ಮ ಪ್ರಾಂತ್ಯವನ್ನು ವಿಸ್ತರಿಸುವಲ್ಲಿ ಕಷ್ಟಪಡಬೇಕಾಯಿತು. ಅಲ್ಲಿ ಅವರಿಗೆ ಬಲಿಷ್ಠರಾದ ವೈರಿಗಳಿದ್ದರು. ದಾನ್ ಕುಲದವರು ಅವರನ್ನು ಸುಲಭವಾಗಿ ಸೋಲಿಸಲಾಗಲಿಲ್ಲ. ಆದ್ದರಿಂದ ಅವರು ಲೆಷೆಮ್ ಜನರೊಡನೆ ಯುದ್ಧಮಾಡಿ ಅವರನ್ನು ಸಂಹರಿಸಿ ಲೆಷೆಮ್ ಪಟ್ಟಣದಲ್ಲಿ ನೆಲೆಸಿದರು. ಅದಕ್ಕೆ ತಮ್ಮ ಮೂಲಪುರುಷನ ಹೆಸರಾದ ದಾನ್ ಎಂಬ ಹೆಸರನ್ನಿಟ್ಟರು. 48 ಈ ಎಲ್ಲ ನಗರಗಳನ್ನು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳನ್ನು ದಾನ್ಕುಲದವರಿಗೆ ಕೊಡಲಾಯಿತು. ಪ್ರತಿಯೊಂದು ಗೋತ್ರದವರು ತಮ್ಮ ಪಾಲಿನ ಭೂಮಿಯನ್ನು ಪಡೆದುಕೊಂಡರು.
ಯೆಹೋಶುವನಿಗೆ ಭೂಮಿ
49 ಹೀಗೆ ದೇಶವನ್ನು ಆಯಾ ಕುಲಗಳವರಿಗೆ ನಾಯಕರು ಹಂಚಿಕೊಟ್ಟರು. ಆಗ ಇಸ್ರೇಲರು ನೂನನ ಮಗನಾದ ಯೆಹೋಶುವನಿಗೂ ಸ್ವಲ್ಪ ಭೂಮಿಯನ್ನು ಕೊಡಬೇಕೆಂದು ನಿರ್ಧರಿಸಿದರು. ಈ ಭೂಮಿಯನ್ನು ಅವನಿಗೆ ಕೊಡುವುದಾಗಿ ವಾಗ್ದಾನ ಮಾಡಲಾಗಿತ್ತು. 50 ಆ ಭೂಮಿಯನ್ನು ಕೊಡಬೇಕೆಂಬುದು ಯೆಹೋವನ ಆಜ್ಞೆಯಾಗಿತ್ತು. ಆದ್ದರಿಂದ ಅವರು ಯೆಹೋಶುವನ ಅಪೇಕ್ಷೆಯಂತೆ ಎಫ್ರಾಯೀಮ್ಯರ ಬೆಟ್ಟಪ್ರದೇಶದಲ್ಲಿರುವ ತಿಮ್ನತ್ಸೆರಹ ಎಂಬ ಪಟ್ಟಣವನ್ನು ಅವನಿಗೆ ಕೊಟ್ಟರು. ಯೆಹೋಶುವನು ಆ ಪಟ್ಟಣವನ್ನು ಭದ್ರಗೊಳಿಸಿ ಅಲ್ಲಿ ವಾಸವಾಗಿದ್ದನು.
51 ಯಾಜಕನಾದ ಎಲ್ಲಾಜಾರನೂ ನೂನನ ಮಗನಾದ ಯೆಹೋಶುವನೂ ಇಸ್ರೇಲಿನ ಕುಲಪ್ರಧಾನರೂ ಶೀಲೋವಿನಲ್ಲಿ ಸೇರಿಬಂದು ದೇವದರ್ಶನಗುಡಾರದ ಬಾಗಿಲಲ್ಲಿ ಯೆಹೋವನ ಸನ್ನಿಧಿಯಲ್ಲೇ ಚೀಟುಹಾಕಿ ಹಂಚಿಕೊಟ್ಟ ಪ್ರಾಂತ್ಯಗಳೇ ಇವು. ಹೀಗೆ ದೇಶ ವಿಭಾಗ ಕಾರ್ಯವು ಪೂರ್ಣಗೊಂಡಿತು.
149 ಯೆಹೋವನಿಗೆ ಸ್ತೋತ್ರವಾಗಲಿ.
ಯೆಹೋವನ ಹೊಸ ಕಾರ್ಯಗಳಿಗಾಗಿ ಆತನಿಗೆ ಹೊಸ ಹಾಡನ್ನು ಹಾಡಿರಿ!
ಆತನ ಭಕ್ತರ ಸಭೆಯಲ್ಲಿ ಆತನನ್ನು ಸಂಕೀರ್ತಿಸಿರಿ.
2 ಇಸ್ರೇಲರು ತಮ್ಮ ಸೃಷ್ಟಿಕರ್ತನಲ್ಲಿ ಉಲ್ಲಾಸಿಸಲಿ!
ಚೀಯೋನಿನ ಜನರು ತಮ್ಮ ರಾಜನಲ್ಲಿ ಹರ್ಷಿಸಲಿ.
3 ಅವರು ನೃತ್ಯಮಾಡುತ್ತಾ ಝಲ್ಲರಿಗಳನ್ನು ಬಡಿಯುತ್ತಾ
ಹಾರ್ಪ್ವಾದ್ಯಗಳನ್ನು ನುಡಿಸುತ್ತಾ ಆತನನ್ನು ಸ್ತುತಿಸಲಿ.
4 ಯೆಹೋವನು ತನ್ನ ಜನರಲ್ಲಿ ಸಂತೋಷಿಸುವನು.
ಆತನು ತನ್ನ ದೀನಜನರಿಗಾಗಿ ಅದ್ಭುತಕಾರ್ಯವನ್ನು ಮಾಡಿ ಅವರನ್ನು ರಕ್ಷಿಸಿದನು!
5 ಆತನ ಭಕ್ತರೇ, ನಿಮ್ಮ ವಿಜಯದಲ್ಲಿ ಉಲ್ಲಾಸಿಸಿರಿ!
ಹಾಸಿಗೆಯ ಮೇಲಿರುವಾಗಲೂ ಸಂತೋಷದಿಂದಿರಿ.
6 ಜನರು ಆತನಿಗೆ ಗಟ್ಟಿಯಾಗಿ ಸ್ತೋತ್ರಮಾಡುತ್ತಾ
ತಮ್ಮ ಇಬ್ಭಾಯಿ ಕತ್ತಿಗಳನ್ನು ಕೈಗಳಲ್ಲಿ ತೆಗೆದುಕೊಳ್ಳಲಿ.
7 ಅವರು ಹೋಗಿ ತಮ್ಮ ಶತ್ರುಗಳನ್ನು ದಂಡಿಸಲಿ;
ಅನ್ಯ ಜನರನ್ನು ದಂಡಿಸಲಿ.
8 ದೇವಜನರು ಆ ರಾಜರುಗಳನ್ನು ಮತ್ತು ಪ್ರಮುಖರನ್ನು
ಸರಪಣಿಗಳಿಂದಲೂ ಕಬ್ಬಿಣದ ಬೇಡಿಗಳಿಂದಲೂ ಬಂಧಿಸುವರು.
9 ಆತನ ಆಜ್ಞೆಗನುಸಾರವಾಗಿ ಆತನ ಭಕ್ತರು ತಮ್ಮ ಶತ್ರಗಳನ್ನು ದಂಡಿಸುವರು.
ಆತನು ತನ್ನ ಭಕ್ತರಿಗೆ ಒಳ್ಳೆಯವನಾಗಿದ್ದಾನೆ.
ಯೆಹೋವನಿಗೆ ಸ್ತೋತ್ರವಾಗಲಿ.
150 ಯೆಹೋವನಿಗೆ ಸ್ತೋತ್ರವಾಗಲಿ!
ದೇವರನ್ನು ಆತನ ಆಲಯದಲ್ಲಿ ಸ್ತುತಿಸಿರಿ!
ಆತನ ಶಕ್ತಿಯನ್ನು ಪರಲೋಕದಲ್ಲಿ ಸ್ತುತಿಸಿರಿ!
2 ಆತನ ಮಹತ್ಕಾರ್ಯಗಳಿಗಾಗಿ ಆತನನ್ನು ಸ್ತುತಿಸಿರಿ!
ಆತನ ಮಹತ್ವಕ್ಕೆ ತಕ್ಕಂತೆ ಆತನನ್ನು ಸ್ತುತಿಸಿರಿ!
3 ತುತ್ತೂರಿಗಳನ್ನೂ ಕೊಂಬುಗಳನ್ನೂ ಊದುತ್ತಾ ಆತನನ್ನು ಸ್ತುತಿಸಿರಿ!
ಹಾರ್ಪ್ವಾದ್ಯಗಳನ್ನೂ ಲೈರ್ವಾದ್ಯಗಳನ್ನೂ ನುಡಿಸುತ್ತಾ ಆತನನ್ನು ಸ್ತುತಿಸಿರಿ.
4 ದಮ್ಮಡಿಗಳನ್ನು ಬಡಿಯುತ್ತಾ ಕುಣಿಯುತ್ತಾ ಆತನನ್ನು ಸ್ತುತಿಸಿರಿ.
ತಂತಿವಾದ್ಯಗಳಿಂದಲೂ ಕೊಳಲುಗಳಿಂದಲೂ ಆತನನ್ನು ಸ್ತುತಿಸಿರಿ.
5 ತಾಳಗಳಿಂದ ಆತನನ್ನು ಸ್ತುತಿಸಿರಿ!
ಝಲ್ಲರಿಗಳಿಂದ ಆತನನ್ನು ಸ್ತುತಿಸಿರಿ!
6 ಸಮಸ್ತ ಜೀವಿಗಳೇ, ಯೆಹೋವನಿಗೆ ಸ್ತೋತ್ರಮಾಡಿರಿ!
ಯೆಹೋವನಿಗೆ ಸ್ತೋತ್ರವಾಗಲಿ!
9 ನನ್ನ ತಲೆಯಲ್ಲೆಲ್ಲ ನೀರು ತುಂಬಿಕೊಂಡಿದ್ದು,
ನನ್ನ ಕಣ್ಣುಗಳು ನೀರಿನ ಬುಗ್ಗೆಗಳಾಗಿದ್ದರೆ,
ನಾಶಮಾಡಲ್ಪಟ್ಟ ನನ್ನ ಜನರಿಗಾಗಿ ಹಗಲಿರುಳು ಗೋಳಾಡುತ್ತಿದ್ದೆ.
2 ಮರಳುಗಾಡಿನಲ್ಲಿ ನನಗೊಂದು ಸ್ಥಳವಿದ್ದಿದ್ದರೆ,
ಪ್ರಯಾಣಿಕರು ರಾತ್ರಿಯಲ್ಲಿ ತಂಗುವ ಮನೆ ಇದ್ದಿದ್ದರೆ,
ನಾನು ನನ್ನ ಜನರನ್ನು ಅಲ್ಲಿ ಬಿಟ್ಟು,
ಅವರಿಂದ ದೂರ ಹೋಗಬಹುದಾಗಿತ್ತು.
ಏಕೆಂದರೆ ಅವರೆಲ್ಲರೂ ದೇವರಿಗೆ ದ್ರೋಹ ಮಾಡುತ್ತಿದ್ದಾರೆ,
ಅವರೆಲ್ಲರೂ ಆತನಿಗೆ ವಿರೋಧವಾಗಿ ತಿರುಗಿಬಿದ್ದಿದ್ದಾರೆ.
3 “ಅವರು ತಮ್ಮ ನಾಲಿಗೆಗಳನ್ನು ಬಿಲ್ಲಿನಂತೆ ಉಪಯೋಗಿಸುತ್ತಿದ್ದಾರೆ.
ಅವರ ಬಾಯಿಂದ ಬಾಣಗಳಂತೆ ಸುಳ್ಳುಗಳು ಬರುತ್ತಿವೆ.
ಈ ನಾಡಿನಲ್ಲಿ ಸತ್ಯವಲ್ಲ, ‘ಅಸತ್ಯ’ ಪ್ರಬಲವಾಗುತ್ತಿದೆ.
ಅವರು ಒಂದು ಪಾಪದಿಂದ ಮತ್ತೊಂದು ಪಾಪಕ್ಕೆ ಹೋಗುತ್ತಿದ್ದಾರೆ.
ಅವರು ನನ್ನನ್ನು ಅರಿತಿಲ್ಲ.”
ಯೆಹೋವನು ಈ ಮಾತನ್ನು ಹೇಳಿದನು.
4 “ನಿಮ್ಮ ನೆರೆಮನೆಯವರ ಬಗ್ಗೆ ಎಚ್ಚರವಹಿಸಿರಿ;
ನಿಮ್ಮ ಸ್ವಂತ ಸಹೋದರನನ್ನೂ ನಂಬಬೇಡಿ.
ಏಕೆಂದರೆ ಪ್ರತಿಯೊಬ್ಬ ಸಹೋದರನೂ ಮೋಸಗಾರನಾಗಿದ್ದಾನೆ.
ಪ್ರತಿಯೊಬ್ಬ ನೆರೆಯವನೂ ನಿಮ್ಮ ಮರೆಯಲ್ಲಿ ನಿಮ್ಮನ್ನು ನಿಂದಿಸುತ್ತಾನೆ.
5 ಪ್ರತಿಯೊಬ್ಬನೂ ತನ್ನ ನೆರೆಯವನಿಗೆ ಸುಳ್ಳು ಹೇಳುತ್ತಾನೆ.
ಒಬ್ಬನೂ ಸತ್ಯವನ್ನು ನುಡಿಯುವದಿಲ್ಲ.
ಯೆಹೂದದ ಜನರು ತಮ್ಮ ನಾಲಿಗೆಗಳಿಗೆ
ಸುಳ್ಳು ಹೇಳುವದನ್ನು ಕಲಿಸಿದ್ದಾರೆ.
ಅವರು ಹಿಂತಿರುಗಿ ಬರಲು
ಆಯಾಸವಾಗುವಷ್ಟು ಪಾಪಗಳನ್ನು ಮಾಡಿದ್ದಾರೆ.
6 ಒಂದು ದುಷ್ಕೃತ್ಯ ಮತ್ತೊಂದು ದುಷ್ಕೃತ್ಯವನ್ನು ಹಿಂಬಾಲಿಸಿ ಬಂದಿತು.
ಒಂದು ಸುಳ್ಳು ಇನ್ನೊಂದು ಸುಳ್ಳನ್ನು ಹಿಂಬಾಲಿಸಿತು.
ಜನರು ನನ್ನನ್ನು ಅರಿತುಕೊಳ್ಳಲಿಲ್ಲ.”
ಯೆಹೋವನು ಆ ಮಾತುಗಳನ್ನು ಹೇಳಿದನು.
7 ಸರ್ವಶಕ್ತನಾದ ಯೆಹೋವನು ಹೀಗೆನ್ನುವನು:
“ಜನರು ಲೋಹವನ್ನು ಪುಟಕ್ಕಿಟ್ಟು ಪರೀಕ್ಷಿಸುವಂತೆ
ನಾನು ಯೆಹೂದದ ಜನರನ್ನು ಪರೀಕ್ಷಿಸುತ್ತೇನೆ.
ನನಗೆ ಬೇರೆ ಮಾರ್ಗವೇ ಇಲ್ಲ.
ನನ್ನ ಜನರು ಪಾಪವನ್ನು ಮಾಡಿದ್ದಾರೆ.
8 ಯೆಹೂದದ ಜನರ ನಾಲಿಗೆಗಳು ಚೂಪಾದ ಬಾಣಗಳಂತಿವೆ.
ಅವರ ಬಾಯಿಗಳು ಸುಳ್ಳಾಡುತ್ತವೆ.
ಪ್ರತಿಯೊಬ್ಬನು ತನ್ನ ನೆರೆಮನೆಯವನೊಂದಿಗೆ ನಯವಾಗಿ ಮಾತನಾಡುತ್ತಾನೆ.
ರಹಸ್ಯವಾಗಿ ತನ್ನ ನೆರೆಮನೆಯವನನ್ನು ಆಕ್ರಮಣಮಾಡಲು ಯುಕ್ತಿ ಮಾಡುತ್ತಿರುತ್ತಾನೆ.
9 ಹೀಗಿರಲು ನಾನು ಯೆಹೂದದ ಜನರನ್ನು ಶಿಕ್ಷಿಸಬಾರದೇ?”
ಇದು ದೇವರಿಂದ ಬಂದ ಮಾತು.
“ಅಂಥಾ ಜನರನ್ನು ನಾನು ಶಿಕ್ಷಿಸಬೇಕೆಂಬುದು ನಿನಗೆ ಗೊತ್ತು.
ಅವರಿಗೆ ತಕ್ಕ ಶಿಕ್ಷೆಯನ್ನು ನಾನು ಕೊಡಬೇಕು.”
10 ನಾನು ಪರ್ವತಗಳಿಗಾಗಿ ಗಟ್ಟಿಯಾಗಿ ಅಳುವೆನು;
ಬರಿದಾದ ಹೊಲಗಳಿಗಾಗಿ ಶೋಕಗೀತೆಯನ್ನು ಹಾಡುವೆನು.
ಏಕೆಂದರೆ ಅಲ್ಲಿ ಸಜೀವ ವಸ್ತುಗಳಿಲ್ಲ.
ಯಾರೂ ಅಲ್ಲಿ ತಿರುಗಾಡುವದಿಲ್ಲ.
ಆ ಸ್ಥಳಗಳಲ್ಲಿ ದನಗಳ ಸದ್ದು ಕೇಳಿಸುವದಿಲ್ಲ.
ಪಕ್ಷಿಗಳು ಹಾರಿಹೋಗಿವೆ;
ಪ್ರಾಣಿಗಳು ಓಡಿಹೋಗಿವೆ.
11 “ನಾನು (ಯೆಹೋವನು) ಜೆರುಸಲೇಮ್ ನಗರವನ್ನು ಕಸದ ರಾಶಿಯನ್ನಾಗಿ ಮಾಡುವೆನು.
ಅದು ನರಿಗಳ ನಿವಾಸವಾಗುವದು.
ನಾನು ಯೆಹೂದ ಪ್ರಾಂತದ ನಗರಗಳನ್ನು ನಾಶಮಾಡುವೆನು.
ಅಲ್ಲಿ ಒಬ್ಬರೂ ವಾಸಮಾಡಲಾರರು.”
12 ಈ ಭೂಮಿಯನ್ನು ಏಕೆ ಹಾಳು ಮಾಡಲಾಯಿತು?
ಇದನ್ನು ಯಾರೂ ಹೋಗದ ಬರಿದಾದ ಮರಳುಗಾಡನ್ನಾಗಿ ಏಕೆ ಮಾಡಲಾಯಿತು?
ಇದನ್ನರಿತ ಜ್ಞಾನಿಯೊಬ್ಬನಿದ್ದಾನೆಯೇ?
ಯೆಹೋವನಿಂದ ತಿಳಿದುಕೊಂಡ ಜ್ಞಾನಿಯೊಬ್ಬನಿದ್ದಾನೆಯೇ?
ಯೆಹೋವನ ಸಂದೇಶವನ್ನು ವಿವರಿಸಬಲ್ಲವನೊಬ್ಬನಿದ್ದಾನೆಯೇ?
13 ಯೆಹೋವನು ಈ ಪ್ರಶ್ನೆಗಳಿಗೆ ಉತ್ತರಕೊಟ್ಟನು:
“ಏಕೆಂದರೆ ಯೆಹೂದದ ಜನರು ನನ್ನ ಉಪದೇಶವನ್ನು ಅನುಸರಿಸಲಿಲ್ಲ.
ನಾನು ಅವರಿಗೆ ಧರ್ಮೋಪದೇಶವನ್ನು ಕೊಟ್ಟರೂ
ಅವರು ನನ್ನ ಮಾತನ್ನು ಕೇಳಲು ಒಪ್ಪಲಿಲ್ಲ.
ಅವರು ನನ್ನ ಧರ್ಮೋಪದೇಶಗಳನ್ನು ಅನುಸರಿಸಲಿಲ್ಲ.
14 ಯೆಹೂದದ ಜನರು ತಮ್ಮದೇ ಆದ ರೀತಿಯಲ್ಲಿ ಜೀವಿಸಿದರು.
ಅವರು ಹಟಮಾರಿಗಳಾಗಿದ್ದರು.
ಅವರು ಸುಳ್ಳುದೇವರಾದ ಬಾಳನನ್ನು ಅನುಸರಿಸಿದರು.
ಅವರ ಪೂರ್ವಿಕರು ಸುಳ್ಳುದೇವರುಗಳ ಸೇವೆ ಮಾಡುವದನ್ನು ಅವರಿಗೆ ಕಲಿಸಿದರು.”
15 ಇಸ್ರೇಲಿನ ದೇವರಾದ ಸರ್ವಶಕ್ತನಾದ ಯೆಹೋವನ ಸಂದೇಶವಿದು:
“ಯೆಹೂದದ ಜನರು ಕಹಿಯಾದ ಆಹಾರವನ್ನು ತಿನ್ನುವಂತೆ ನಾನು ಬೇಗನೆ ಮಾಡುವೆನು;
ಅವರು ವಿಷಮಿಶ್ರಿತ ನೀರನ್ನು ಕುಡಿಯುವಂತೆ ಮಾಡುವೆನು.
16 ನಾನು ಯೆಹೂದದ ಜನರನ್ನು ಬೇರೆ ಜನಾಂಗಗಳಲ್ಲಿ ಚದರಿಸಿಬಿಡುತ್ತೇನೆ.
ಅವರು ಮತ್ತು ಅವರ ತಂದೆಗಳು ಎಂದೂ ಅರಿಯದ
ಅಪರಿಚಿತ ದೇಶಗಳಲ್ಲಿ ಅವರು ವಾಸಿಸುವರು.
ನಾನು ಖಡ್ಗಧಾರಿಗಳಾದ ಜನರನ್ನು ಕಳುಹಿಸುತ್ತೇನೆ.
ಅವರು ಯೆಹೂದದ ಜನರನ್ನು ನಿರ್ಮೂಲವಾಗುವವರೆಗೆ ಕೊಲ್ಲುವರು.”
17 ಸರ್ವಶಕ್ತನಾದ ಯೆಹೋವನು ಹೀಗೆ ಹೇಳುತ್ತಾನೆ:
“ಈಗ ಈ ವಿಷಯಗಳ ಬಗ್ಗೆ ವಿಚಾರ ಮಾಡಿರಿ,
ಶವಸಂಸ್ಕಾರದ ಸಮಯದಲ್ಲಿ ಕೂಲಿ ಪಡೆದು ಅಳುವ ಹೆಂಗಸರನ್ನು ಕರೆಯಿಸಿರಿ.
18 ‘ಆ ಹೆಂಗಸರು, ಬೇಗನೆ ಬಂದು ನಮಗಾಗಿ ಗೋಳಾಡಲಿ.
ಆಗ ನಮ್ಮ ಕಣ್ಣುಗಳು ಕಣ್ಣೀರಿನಿಂದ ತುಂಬುವವು;
ನಮ್ಮ ಕಣ್ಣುಗಳಿಂದ ನೀರಿನ ಪ್ರವಾಹಗಳು ಹರಿಯುವವು’ ಎನ್ನುವರು.
19 “ಚೀಯೋನಿನಿಂದ ಮಹಾಗೋಳಾಟವು ಕೇಳಿಸುತ್ತಿದೆ:
‘ನಿಜವಾಗಿಯೂ ನಾವು ಹಾಳಾಗಿಹೋದೆವು.
ನಿಜವಾಗಿಯೂ ನಾವು ನಾಚಿಕೆಪಡುವಂತಾಗಿದೆ.
ನಾವು ನಮ್ಮ ನಾಡನ್ನು ಬಿಡಬೇಕು,
ಏಕೆಂದರೆ ನಮ್ಮ ಮನೆಗಳನ್ನು ನಾಶಪಡಿಸಲಾಗಿದೆ.’”
20 ಯೆಹೂದದ ಸ್ತ್ರೀಯರೇ, ಯೆಹೋವನ ಸಂದೇಶವನ್ನು ಕೇಳಿರಿ.
ಯೆಹೋವನ ಬಾಯಿಂದ ಬರುವ ಮಾತುಗಳನ್ನು ಕೇಳಲು ನಿಮ್ಮ ಕಿವಿಗಳನ್ನು ತೆರೆಯಿರಿ.
ಯೆಹೋವನು ಹೇಳುತ್ತಾನೆ, “ಹೇಗೆ ದೊಡ್ಡ ಧ್ವನಿಯಲ್ಲಿ ಅಳಬೇಕೆಂಬುದನ್ನು ನಿಮ್ಮ ಹೆಣ್ಣುಮಕ್ಕಳಿಗೆ ಕಲಿಸಿಕೊಡಿ.
ಪ್ರತಿಯೊಬ್ಬ ಸ್ತ್ರೀಯು ಈ ಶೋಕಗೀತೆಯನ್ನು ಹಾಡಲು ಕಲಿಯಬೇಕು.
21 ಮೃತ್ಯುವು ಬಂದು ನಮ್ಮ ಕಿಟಕಿಗಳಿಂದ ಇಳಿದಿದೆ.
ಮೃತ್ಯುವು ನಮ್ಮ ಅರಮನೆಗಳಲ್ಲಿ ಪ್ರವೇಶ ಮಾಡಿದೆ.
ಬೀದಿಯಲ್ಲಿ ಆಡುವ ನಮ್ಮ ಮಕ್ಕಳಿಗೆ ಮೃತ್ಯುವು ಹಿಡಿದುಕೊಂಡಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಸೇರುವ ನಮ್ಮ ಯುವಕರಿಗೆ ಮೃತ್ಯುವು ಹಿಡಿದುಕೊಂಡಿದೆ.”
22 ಯೆರೆಮೀಯನೇ, ಯೆಹೋವನು ಹೀಗೆ ಹೇಳುತ್ತಾನೆಂದು ಹೇಳು:
“‘ಹೊಲಗಳಲ್ಲಿ ಗೊಬ್ಬರ ಬಿದ್ದಂತೆ ಹೆಣಗಳು ಬೀಳುವವು.
ಆ ಶವಗಳು ಹೊಲ ಕೊಯ್ಯುವವನ ಹಿಂದೆ
ಯಾರೂ ಎತ್ತದೆ ಬಿದ್ದಿರುವ ಮೆದೆಗಳಂತೆ ಬಿದ್ದಿರುವವು.’”
23 ಯೆಹೋವನು ಹೇಳುತ್ತಾನೆ,
“ಜ್ಞಾನಿಗಳು ತಮ್ಮ ಜ್ಞಾನದ ಬಗ್ಗೆ
ಜಂಬಕೊಚ್ಚಿಕೊಳ್ಳಬಾರದು.
ಬಲಶಾಲಿಗಳು ತಮ್ಮ ಬಲದ ಬಗ್ಗೆ
ಬಡಾಯಿಕೊಚ್ಚಿಕೊಳ್ಳಬಾರದು.
ಶ್ರೀಮಂತರು ತಮ್ಮ ಸಂಪತ್ತಿನ ಬಗ್ಗೆ
ಜಂಬಕೊಚ್ಚಿಕೊಳ್ಳಬಾರದು.
24 ಯಾವನಾದರೂ ಜಂಬಕೊಚ್ಚಿಕೊಳ್ಳಬೇಕಾದರೆ, ಅವನು ನನ್ನನ್ನು ಅರಿತಿರುವುದಾಗಿಯೂ
ನನ್ನನ್ನು ತಿಳಿದುಕೊಂಡಿರುವುದಾಗಿಯೂ ಜಂಬಪಡಲಿ.
ನಾನೇ ಯೆಹೋವನೆಂದು ತಿಳಿದುಕೊಂಡಿರುವುದಕ್ಕಾಗಿ ಅವನು ಜಂಬಪಡಲಿ.
ನಾನು ದಯಾವಂತನೂ ನ್ಯಾಯವಂತನೂ ಆಗಿರುವೆ,
ನಾನು ಭೂಲೋಕದಲ್ಲಿ ಒಳ್ಳೆಯದನ್ನು ಮಾಡುತ್ತೇನೆ ಎಂದು ತಿಳಿದುಕೊಂಡಿರುವವನು ಹೆಮ್ಮೆಪಡಲಿ.
ಆಗ ನನಗೆ ಸಂತೋಷವಾಗುವುದು.”
ಇದು ಯೆಹೋವನ ನುಡಿ.
25 “ಕೇವಲ ದೈಹಿಕವಾಗಿ ಸುನ್ನತಿಯನ್ನು ಮಾಡಿಕೊಂಡ ಜನರನ್ನು ನಾನು ಶಿಕ್ಷಿಸುವ ಕಾಲ ಬರಲಿದೆ. 26 ನಾನು ಈಜಿಪ್ಟ್, ಯೆಹೂದ, ಎದೋಮ್, ಅಮ್ಮೋನ್, ಮೋವಾಬ್ ಜನಾಂಗಗಳ ಜನರ ಬಗ್ಗೆ ಮತ್ತು ಮರಳು ಪ್ರದೇಶದಲ್ಲಿ ವಾಸಮಾಡುತ್ತಿರುವ ಎಲ್ಲಾ ಜನಗಳ ಬಗ್ಗೆ ಮಾತನಾಡುತ್ತಿದ್ದೇನೆ. ಈ ಎಲ್ಲಾ ದೇಶಗಳ ಜನರಿಗೆ ದೈಹಿಕವಾಗಿ ಸುನ್ನತಿ ಆಗಿದ್ದಿಲ್ಲ. ಆದರೆ ಇಸ್ರೇಲ್ ವಂಶದವರು ಹೃದಯ ಸುನ್ನತಿಯಿಲ್ಲದವರು” ಎಂದು ಯೆಹೋವನು ಅನ್ನುತ್ತಾನೆ.
ಯೇಸು ಧಾರ್ಮಿಕ ನಾಯಕರನ್ನು ಖಂಡಿಸಿದನು
(ಮಾರ್ಕ 12:38-40; ಲೂಕ 11:37-52; 20:45-47)
23 ಬಳಿಕ ಯೇಸು ನೆರೆದಿದ್ದ ಜನರೊಂದಿಗೂ ತನ್ನ ಶಿಷ್ಯರೊಂದಿಗೂ ಮಾತಾಡಿ ಹೇಳಿದ್ದೇನೆಂದರೆ: 2 “ಮೋಶೆಯ ಧರ್ಮಶಾಸ್ತ್ರ ಹೇಳುವುದನ್ನು ನಿಮಗೆ ತಿಳಿಸಲು ಧರ್ಮೋಪದೇಶಕರಿಗೂ ಫರಿಸಾಯರಿಗೂ ಅಧಿಕಾರವಿದೆ. 3 ಆದ್ದರಿಂದ ನೀವು ಅವರಿಗೆ ವಿಧೇಯರಾಗಿರಬೇಕು ಮತ್ತು ಅವರು ಹೇಳಿದ್ದನ್ನೆಲ್ಲ ಕೈಕೊಂಡು ನಡೆಯಬೇಕು. ಆದರೆ ಅವರ ಜೀವಿತಗಳು ಅನುಸರಿಸತಕ್ಕ ಒಳ್ಳೆಯ ಮಾದರಿ ಜೀವಿತಗಳಲ್ಲ. ಅವರು ನಿಮಗೆ ತಿಳಿಸುವಂಥ ಸಂಗತಿಗಳನ್ನು ತಾವೇ ಅನುಸರಿಸುವುದಿಲ್ಲ. 4 ಅವರು ಬೇರೆಯವರಿಗೆ ಕಷ್ಟಕರವಾದ ನಿಯಮಗಳನ್ನು ಕೊಟ್ಟು ಅವುಗಳಿಗೆ ವಿಧೇಯರಾಗಬೇಕೆಂದು ಒತ್ತಾಯ ಮಾಡುತ್ತಾರೆ. ತಾವಾದರೋ ಆ ನಿಯಮಗಳಲ್ಲಿ ಯಾವದನ್ನಾದರೂ ಅನುಸರಿಸಲು ಪ್ರಯತ್ನಿಸುವುದಿಲ್ಲ.
5 “ತಮ್ಮನ್ನು ಬೇರೆ ಜನರು ನೋಡಲಿ ಎಂಬ ಒಂದೇ ಉದ್ದೇಶದಿಂದ ಅವರು ಒಳ್ಳೆಯ ಕಾರ್ಯಗಳನ್ನು ಮಾಡುತ್ತಾರೆ. ಪವಿತ್ರ ಗ್ರಂಥಗಳು ತುಂಬಿರುವ ವಿಶೇಷವಾದ ಚರ್ಮದ ಚೀಲಗಳನ್ನು ಅವರು ಕಟ್ಟಿಕೊಂಡಿರುತ್ತಾರೆ. ಅವರು ಈ ಚೀಲಗಳನ್ನು ಇನ್ನೂ ಹೆಚ್ಚುಹೆಚ್ಚು ದೊಡ್ಡದನ್ನಾಗಿ ಮಾಡುತ್ತಾರೆ. ಜನರು ನೋಡಲಿ ಎಂದು ಅವರು ತಮ್ಮ ವಿಶೇಷ ಪ್ರಾರ್ಥನೆಯ ಉಡುಪುಗಳನ್ನು ಮತ್ತಷ್ಟು ಉದ್ದ ಮಾಡುತ್ತಾರೆ. 6 ಆ ಫರಿಸಾಯರು ಮತ್ತು ಧರ್ಮೋಪದೇಶಕರು ಔತಣಗಳಲ್ಲಿ ಹಾಗೂ ಸಭಾಮಂದಿರಗಳಲ್ಲಿ ಅತಿ ಪ್ರಾಮುಖ್ಯವಾದ ಸ್ಥಾನಗಳನ್ನು ಅಪೇಕ್ಷಿಸುತ್ತಾರೆ. 7 ಮಾರುಕಟ್ಟೆಗಳಲ್ಲಿ ಜನರು ತಮಗೆ ಮರ್ಯಾದೆ ತೋರಿಸಬೇಕೆಂದು ಆಶಿಸುತ್ತಾರೆ; ಜನರಿಂದ ಉಪದೇಶಕರೆನಿಸಿಕೊಳ್ಳಲು ಇಷ್ಟಪಡುತ್ತಾರೆ.
8 “ಆದರೆ ನೀವು ಉಪದೇಶಕರೆನಿಸಿಕೊಳ್ಳಬೇಡಿ. ನೀವೆಲ್ಲರೂ ಸಹೋದರಸಹೋದರಿಯರು. ನಿಮಗೆ ಒಬ್ಬನೇ ಉಪದೇಶಕನು. 9 ಈ ಲೋಕದಲ್ಲಿ ಯಾರನ್ನೂ ‘ತಂದೆ’ ಎಂದು ಕರೆಯಬೇಡಿ. ನಿಮಗೆ ಒಬ್ಬನೇ ತಂದೆ. ಆತನು ಪರಲೋಕದಲ್ಲಿದ್ದಾನೆ. 10 ‘ಗುರು’ವೆಂದೂ ಕರೆಸಿಕೊಳ್ಳಬೇಡಿ. ನಿಮಗೆ ಕ್ರಿಸ್ತನೊಬ್ಬನೇ ಗುರು. 11 ಸೇವಕನಂತೆ ನಿಮಗೆ ಸೇವೆ ಮಾಡುವವನೇ ನಿಮ್ಮಲ್ಲಿ ಅತ್ಯಂತ ದೊಡ್ಡವನಾಗಿದ್ದಾನೆ. 12 ತಾನು ಬೇರೆಯವರಿಗಿಂತ ಉತ್ತಮನೆಂದು ತನ್ನನ್ನು ಭಾವಿಸಿಕೊಳ್ಳುವವನು ತಗ್ಗಿಸಲ್ಪಡುವನು, ತನ್ನನ್ನು ತಗ್ಗಿಸಿಕೊಳ್ಳುವವನು ಉನ್ನತಿಗೇರಿಸಲ್ಪಡುವನು.
13 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು. ಜನರು ಪರಲೋಕರಾಜ್ಯಕ್ಕೆ ಪ್ರವೇಶಿಸುವ ದಾರಿಯನ್ನು ನೀವು ಮುಚ್ಚಿಬಿಡುತ್ತೀರಿ. ನೀವೂ ಪ್ರವೇಶಿಸುವುದಿಲ್ಲ ಮತ್ತು ಪ್ರವೇಶಿಸುವುದಕ್ಕೆ ಪ್ರಯತ್ನಿಸುವ ಜನರಿಗೂ ಬಿಡುವುದಿಲ್ಲ. 14 [a]
15 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು. ನಿಮ್ಮ ಮಾರ್ಗಗಳನ್ನು ಹಿಂಬಾಲಿಸುವ ಒಬ್ಬನನ್ನು ಕಂಡುಕೊಳ್ಳಲು ನೀವು ಸಮುದ್ರಗಳನ್ನು ದಾಟಿ ಬೇರೆಬೇರೆ ದೇಶಗಳಲ್ಲಿ ಪ್ರಯಾಣ ಮಾಡುತ್ತೀರಿ. ಅವನನ್ನು ಕಂಡುಕೊಂಡ ಮೇಲೆ ನಿಮಗಿಂತಲೂ ಹೆಚ್ಚು ಕೆಟ್ಟವನನ್ನಾಗಿ ಮಾಡುತ್ತೀರಿ. ನೀವು ನರಕಪಾತ್ರರಾಗುವಷ್ಟು ಕೆಟ್ಟವರಾಗಿದ್ದೀರಿ.
16 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಜನರಿಗೆ ಮಾರ್ಗದರ್ಶನ ಮಾಡುತ್ತೀರಿ. ಆದರೆ ನೀವೇ ಕುರುಡರು. ಒಬ್ಬನು ದೇವಾಲಯದ ಹೆಸರಿನ ಮೇಲೆ ವಾಗ್ದಾನ ಮಾಡಿದರೆ ಅದಕ್ಕೇನೂ ಬೆಲೆಯಿಲ್ಲ ಎನ್ನುತ್ತೀರಿ. ಆದರೆ ಒಬ್ಬನು ದೇವಾಲಯದಲ್ಲಿರುವ ಚಿನ್ನದ ಮೇಲೆ ವಾಗ್ದಾನ ಮಾಡಿದರೆ, ಅವನು ಅದನ್ನು ಈಡೇರಿಸಬೇಕು ಎಂದು ಹೇಳುತ್ತೀರಿ! 17 ನೀವು ಕುರುಡರಾದ ಮೂರ್ಖರು! ಯಾವುದು ಹೆಚ್ಚಿನದು? ಚಿನ್ನವೋ ಅಥವಾ ದೇವಾಲಯವೋ? ಆ ಚಿನ್ನವು ಪರಿಶುದ್ಧಗೊಂಡದ್ದು ದೇವಾಲಯದಿಂದಲೇ. ಆದ್ದರಿಂದ ದೇವಾಲಯವೇ ಹೆಚ್ಚಿನದು.
18 “ಒಬ್ಬನು ಯಜ್ಞವೇದಿಕೆಯ ಮೇಲೆ ಆಣೆಯಿಟ್ಟುಕೊಂಡರೆ ಅದಕ್ಕೇನೂ ಬೆಲೆಯಿಲ್ಲ ಎನ್ನುತ್ತೀರಿ. ಆದರೆ ಒಬ್ಬನು ಯಜ್ಞವೇದಿಕೆಯ ಮೇಲಿರುವ ಕಾಣಿಕೆಯ ಮೇಲೆ ವಾಗ್ದಾನ ಮಾಡಿದರೆ ಅವನು ಅದನ್ನು ಈಡೇರಿಸಲೇಬೇಕು ಎಂದು ಹೇಳುತ್ತೀರಿ. 19 ನೀವು ಕುರುಡರು. ನಿಮಗೇನೂ ಅರ್ಥವಾಗುವುದಿಲ್ಲ. ಯಾವುದು ಹೆಚ್ಚಿನದು? ಕಾಣಿಕೆಯೋ ಅಥವಾ ಯಜ್ಞವೇದಿಕೆಯೋ? ಕಾಣಿಕೆ ಪರಿಶುದ್ಧಗೊಂಡದ್ದು ಯಜ್ಞವೇದಿಕೆಯಿಂದಲೇ. ಆದ್ದರಿಂದ ಯಜ್ಞವೇದಿಕೆಯೇ ಹೆಚ್ಚಿನದು. 20 ಯಜ್ಞವೇದಿಕೆಯ ಮೇಲೆ ವಾಗ್ದಾನ ಮಾಡುವವನು ಯಜ್ಞವೇದಿಕೆಯ ಮತ್ತು ಅದರ ಮೇಲಿರುವ ಕಾಣಿಕೆಯ ಮೇಲೆ ವಾಗ್ದಾನ ಮಾಡಿದಂತಾಯಿತು. 21 ದೇವಾಲಯದ ಮೇಲೆ ವಾಗ್ದಾನ ಮಾಡುವವನು ನಿಜವಾಗಿಯೂ ದೇವಾಲಯದ ಮತ್ತು ಅದರೊಳಗೆ ವಾಸವಾಗಿರುವಾತನ ಮೇಲೆ ವಾಗ್ದಾನ ಮಾಡಿದಂತಾಯಿತು. 22 ಪರಲೋಕದ ಮೇಲೆ ವಾಗ್ದಾನ ಮಾಡುವವನು ದೇವರ ಸಿಂಹಾಸನದ ಮೇಲೆಯೂ ಆ ಸಿಂಹಾಸನದ ಮೇಲೆ ಕುಳಿತಿರುವಾತನ ಮೇಲೆಯೂ ವಾಗ್ದಾನ ಮಾಡಿದಂತಾಯಿತು.
23 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು. ನಿಮ್ಮಲ್ಲಿರುವ ಪ್ರತಿಯೊಂದರಲ್ಲೂ ನಿಮ್ಮ ಪುದೀನ, ಸಬ್ಬಸ್ಸಿಗೆ ಸೊಪ್ಪು, ಜೀರಿಗೆ ಗಿಡಗಳಲ್ಲಿಯೂ ಸಹ ಹತ್ತರಲ್ಲೊಂದು ಪಾಲನ್ನು ದೇವರಿಗೆ ಕೊಡುತ್ತೀರಿ. ಆದರೆ ಧರ್ಮಶಾಸ್ತ್ರದ ಬೋಧನೆಗಳಲ್ಲಿ ನಿಜವಾಗಿಯೂ ಪ್ರಾಮುಖ್ಯವಾದ ಆಜ್ಞೆಗಳನ್ನು ಅಂದರೆ ನ್ಯಾಯವನ್ನೂ ಕರುಣೆಯನ್ನೂ ಯಥಾರ್ಥತೆಯನ್ನೂ ನೀವು ತೊರೆದುಬಿಟ್ಟಿದ್ದೀರಿ. ಈ ಆಜ್ಞೆಗಳಿಗೆ ನೀವು ಮೊದಲು ವಿಧೇಯರಾಗಿ, ಈಗ ಮಾಡುತ್ತಿರುವಂಥ ಕಾರ್ಯಗಳನ್ನು ಮಾಡಬೇಕಿತ್ತು. 24 ನೀವು ಜನರಿಗೆ ಮಾರ್ಗದರ್ಶನ ಮಾಡುತ್ತೀರಿ. ಆದರೆ ನೀವೇ ಕುರುಡರು! ಒಬ್ಬನು ತಾನು ಕುಡಿಯುವ ಪಾನೀಯದೊಳಗಿಂದ ಸಣ್ಣ ಸೊಳ್ಳೆಯನ್ನು ತೆಗೆದುಹಾಕಿ ಆಮೇಲೆ ಒಂಟೆಯನ್ನು ನುಂಗುವವನಂತೆ ನೀವಿದ್ದೀರಿ.
25 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು. ನೀವು ನಿಮ್ಮ ಪಾತ್ರೆ ಬಟ್ಟಲುಗಳ ಹೊರಭಾಗವನ್ನು ತೊಳೆದು ಸ್ವಚ್ಛಮಾಡುತ್ತೀರಿ. ಆದರೆ ಅವುಗಳ ಒಳಭಾಗವು ಮೋಸದಿಂದಲೂ ನಿಮಗೆ ತೃಪ್ತಿ ನೀಡುವ ಪದಾರ್ಥಗಳಿಂದಲೂ ತುಂಬಿವೆ. 26 ಫರಿಸಾಯರೇ, ನೀವು ಕುರುಡರು! ಮೊದಲು ಬಟ್ಟಲಿನ ಒಳಭಾಗವನ್ನು ಚೆನ್ನಾಗಿ ಶುಚಿಮಾಡಿರಿ. ಆಗ ಬಟ್ಟಲಿನ ಹೊರಭಾಗವು ನಿಜವಾಗಿಯೂ ಶುಚಿಯಾಗಿರುವುದು.
27 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು. ನೀವು ಸುಣ್ಣ ಹಚ್ಚಿದ ಸಮಾಧಿಗಳಂತಿದ್ದೀರಿ. ಆ ಸಮಾಧಿಗಳ ಹೊರಭಾಗ ಚಂದವಾಗಿ ಕಾಣುತ್ತದೆ. ಆದರೆ ಒಳಭಾಗ ಸತ್ತವರ ಎಲುಬುಗಳಿಂದಲೂ ಎಲ್ಲಾ ಬಗೆಯ ಹೊಲಸುಗಳಿಂದಲೂ ತುಂಬಿರುತ್ತದೆ. 28 ನೀವು ಅದೇ ರೀತಿ ಇದ್ದೀರಿ. ನಿಮ್ಮನ್ನು ನೋಡಿದ ಜನರು ನಿಮ್ಮನ್ನು ಒಳ್ಳೆಯವರೆಂದು ಭಾವಿಸಿಕೊಳ್ಳುತ್ತಾರೆ. ಆದರೆ ನಿಮ್ಮ ಅಂತರಂಗವು ಕಪಟದಿಂದಲೂ ದುಷ್ಟತನದಿಂದಲೂ ತುಂಬಿಕೊಂಡಿದೆ.
29 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು. ನೀವು ಪ್ರವಾದಿಗಳ ಸಮಾಧಿಗಳನ್ನು ಕಟ್ಟುತ್ತೀರಿ. ಒಳ್ಳೆಯವರಾಗಿ ಜೀವಿಸದವರ ಗೋರಿಗಳಿಗೆ ಹೋಗಿ ಗೌರವ ತೋರಿಸುತ್ತೀರಿ. 30 ‘ನಮ್ಮ ಪಿತೃಗಳ ಕಾಲದಲ್ಲಿ ನಾವು ಇದ್ದಿದ್ದರೆ ಈ ಪ್ರವಾದಿಗಳನ್ನು ಕೊಲ್ಲುವುದಕ್ಕೆ ಅವರಿಗೆ ಸಹಾಯ ಮಾಡುತ್ತಿರಲಿಲ್ಲ’ ಎಂದು ಹೇಳುತ್ತೀರಿ. 31 ಆ ಪ್ರವಾದಿಗಳನ್ನು ಕೊಂದವರ ಮಕ್ಕಳು (ಸಂತತಿಯವರು) ನೀವೇ ಎಂಬುದಕ್ಕೆ ಇದೇ ಆಧಾರವಾಗಿದೆ. 32 ನಿಮ್ಮ ಪಿತೃಗಳು ಪ್ರಾರಂಭಿಸಿದ ಆ ಪಾಪವನ್ನು ನೀವು ಪೂರ್ತಿಮಾಡುವಿರಿ!
33 “ನೀವು ಸರ್ಪಗಳು! ನೀವು ವಿಷಕರವಾದ ಹಾವುಗಳ ಕುಟುಂಬದವರು! ನೀವು ದೇವರಿಂದ ತಪ್ಪಿಸಿಕೊಳ್ಳಲಾರಿರಿ. ನೀವೆಲ್ಲರು ಅಪರಾಧಿಗಳೆಂಬ ತೀರ್ಪುಹೊಂದಿ ನರಕಕ್ಕೆ ಹೋಗುವಿರಿ! 34 ನಾನು ನಿಮಗೆ ಹೇಳುವುದೇನೆಂದರೆ, ನಿಮ್ಮ ಬಳಿಗೆ ಪ್ರವಾದಿಗಳನ್ನೂ ಜ್ಞಾನಿಗಳನ್ನೂ ಉಪದೇಶಕರನ್ನೂ ಕಳುಹಿಸುತ್ತೇನೆ. ನೀವು ಅವರಲ್ಲಿ ಕೆಲವರನ್ನು ಕೊಲ್ಲುವಿರಿ; ಇನ್ನು ಕೆಲವರನ್ನು ಶಿಲುಬೆಗೇರಿಸುವಿರಿ; ಇತರ ಕೆಲವರನ್ನು ನಿಮ್ಮ ಸಭಾಮಂದಿರಗಳಲ್ಲಿ ಹೊಡೆಯುವಿರಿ; ನೀವು ಅವರನ್ನು ಊರಿಂದ ಊರಿಗೆ ಅಟ್ಟಿಬಿಡುವಿರಿ.
35 “ಆದ್ದರಿಂದ ಭೂಮಿಯ ಮೇಲೆ ಕೊಲ್ಲಲ್ಪಟ್ಟ ಎಲ್ಲಾ ಸತ್ಪುರುಷರ ಕೊಲೆಯ ಅಪರಾಧಕ್ಕೆ ನೀವು ಗುರಿಯಾಗುವಿರಿ. ಸತ್ಪುರುಷನಾದ ಹೇಬೆಲನನ್ನು ಮೊದಲುಗೊಂಡು ಬರಕೀಯನ ಮಗನಾದ ಜಕರೀಯನನ್ನು ಕೊಂದದ್ದಕ್ಕೆ ನೀವು ಅಪರಾಧಿಗಳಾಗುವಿರಿ. ಜಕರೀಯನು ದೇವಾಲಯಕ್ಕೂ ಯಜ್ಞವೇದಿಕೆಗೂ ನಡುವೆ ಕೊಲ್ಲಲ್ಪಟ್ಟನು. 36 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಈ ಕಾಲದಲ್ಲಿ ಜೀವಿಸುತ್ತಿರುವ ನಿಮ್ಮ ಮೇಲೆ ಈ ಅಪರಾಧಗಳೆಲ್ಲಾ ಬರುತ್ತವೆ.
ಜೆರುಸಲೇಮಿನ ಜನರಿಗೆ ಯೇಸು ನೀಡಿದ ಎಚ್ಚರಿಕೆ
(ಲೂಕ 13:34-35)
37 “ಜೆರುಸಲೇಮೇ, ಜೆರುಸಲೇಮೇ! ಪ್ರವಾದಿಗಳನ್ನು ಕೊಲ್ಲುವವಳೇ, ದೇವರು ನಿನ್ನ ಬಳಿಗೆ ಕಳುಹಿಸಿದ ಜನರನ್ನು ಕಲ್ಲುಗಳಿಂದ ಕೊಲ್ಲುವವಳೇ, ಅನೇಕ ಸಲ ನಿನ್ನ ಜನರಿಗೆ ನಾನು ಸಹಾಯ ಮಾಡಬೇಕೆಂದಿದ್ದೆನು. ಕೋಳಿ ತನ್ನ ಮರಿಗಳನ್ನು ರೆಕ್ಕೆಗಳ ಕೆಳಗೆ ಸೇರಿಸಿಕೊಳ್ಳುವ ಹಾಗೆ ನಿನ್ನ ಜನರನ್ನು ಸೇರಿಸಿಕೊಳ್ಳಲು ನನಗೆ ಮನಸ್ಸಿತ್ತು. ಆದರೆ ನೀನು ಒಪ್ಪಲಿಲ್ಲ. 38 ಈಗ ನಿನ್ನ ಮನೆಯು ಸಂರ್ಪೂಣವಾಗಿ ಬರಿದಾಗಿಬಿಟ್ಟಿದೆ. 39 ನಾನು ನಿನಗೆ ಹೇಳುವುದೇನೆಂದರೆ, ‘ಪ್ರಭುವಿನ ಹೆಸರಿನಲ್ಲಿ ಬರುವಾತನನ್ನು ದೇವರು ಆಶೀರ್ವದಿಸಲಿ’(A) ಎಂದು ನೀನು ಹೇಳುವ ತನಕ ನನ್ನನ್ನು ನೋಡುವುದೇ ಇಲ್ಲ.”
Kannada Holy Bible: Easy-to-Read Version. All rights reserved. © 1997 Bible League International