M’Cheyne Bible Reading Plan
ಎಫ್ರಾಯೀಮ್ ಮತ್ತು ಮನಸ್ಸೆ ಕುಲದವರಿಗೆ ಸ್ವಾಸ್ತ್ಯಗಳು
16 ಯೋಸೇಫನ ಕುಟುಂಬದವರು ಈ ಸ್ವಾಸ್ತ್ಯವನ್ನು ಪಡೆದುಕೊಂಡರು. ಅವರ ಸ್ವಾಸ್ತ್ಯವು ಜೋರ್ಡನ್ ನದಿಯಿಂದ (ಜೆರಿಕೊ ಹತ್ತಿರ) ಆರಂಭವಾಗಿ ಜೆರಿಕೊವಿನ ಹಳ್ಳಗಳ ಉದ್ದಕ್ಕೂ ಮುಂದುವರೆದಿದೆ. (ಇದು ಜೆರಿಕೊವಿನ ಪೂರ್ವದಲ್ಲಿದೆ.) ಆ ಸೀಮೆಯು ಜೆರಿಕೊವಿನಿಂದ ಬೇತೇಲಿನ ಬೆಟ್ಟಪ್ರದೇಶಕ್ಕೆ ಮುಂದುವರೆಯುತ್ತದೆ. 2 ಲೂಜ್ ಎಂದು ಕರೆಯುವ ಬೇತೇಲಿನಿಂದ ಅಟಾರೋತಿನಲ್ಲಿ ಅರ್ಕೀಯರ ಸೀಮೆಗೆ ಹೋಗುತ್ತದೆ. 3 ಅಲ್ಲಿಂದ ಪಶ್ಚಿಮದಿಕ್ಕಿನಲ್ಲಿರುವ ಯಪ್ಲೇಟ್ಯರ ಪ್ರಾಂತ್ಯದ ಸೀಮೆಗೆ ಮುಟ್ಟಿ ಅಲ್ಲಿಂದ ಕೆಳಗಿನ ಬೇತ್ಹೋರೋನ್ ಕಡೆಗೆ ಮುಂದುವರೆಯುತ್ತದೆ. ಅಲ್ಲಿಂದ ಗೆಜೆರಿಗೆ ಹೋಗಿ ಮೆಡಿಟರೆನಿಯನ್ ಸಮುದ್ರದತ್ತ ಮುಂದುವರೆಯುತ್ತದೆ.
4 ಯೋಸೇಫನ ಮಕ್ಕಳಾದ ಮನಸ್ಸೆ ಕುಲದವರು ಮತ್ತು ಎಫ್ರಾಯೀಮ್ ಕುಲದವರು ತಮ್ಮ ಪಾಲಿನ ಸ್ವಾಸ್ತ್ಯವನ್ನು ಪಡೆದರು.
5 ಎಫ್ರಾಯೀಮ್ ಕುಲದವರಿಗೆ ಕೊಟ್ಟ ಸ್ವಾಸ್ತ್ಯವು ಇಂತಿದೆ: ಅವರ ಸ್ವಾಸ್ತ್ಯದ ಪೂರ್ವದಿಕ್ಕಿನ ಸೀಮೆಯು ಮೇಲಿನ ಬೇತ್ಹೋರೋನಿನ ಹತ್ತಿರ ಇದ್ದ ಅಟಾರೋತದ್ದಾರಿನಿಂದ ಆರಂಭವಾಗುತ್ತದೆ. 6 ಅದರ ಪಶ್ಚಿಮದಿಕ್ಕಿನ ಸೀಮೆಯು ಮಿಕ್ಮೆತಾತ್ನಿಂದ ಆರಂಭವಾಗಿ ಪೂರ್ವದ ಕಡೆಗೆ ತಿರುಗಿಕೊಂಡು ತಾನತ್ ಶೀಲೋ ಎಂಬಲ್ಲಿಗೆ ಹೋಗಿ ಯಾನೋಹ ಊರಿನ ಪೂರ್ವದಿಕ್ಕಿನಲ್ಲಿ ಮುಂದುವರಿಯುತ್ತದೆ. 7 ಅಲ್ಲಿಂದ ಆ ಸೀಮೆಯು ಯಾನೋಹ ಮಾರ್ಗವಾಗಿ ಅಟಾರೋತ್, ನಾರಾ ಎಂಬ ಊರುಗಳ ಮೇಲೆ ಇಳಿಯುತ್ತದೆ. ಆ ಸೀಮೆಯು ಜೆರಿಕೊವಿನವರೆಗೆ ಮುನ್ನಡೆದು ಜೋರ್ಡನ್ ನದಿಯ ಹತ್ತಿರ ಮುಗಿಯುತ್ತದೆ. 8 ಆ ಮೇರೆಯು ತಪ್ಪೂಹದಿಂದ ಪಶ್ಚಿಮದ ಕಡೆಗೆ ಹೋಗುವ ಕಾನಾ ನದಿಗೆ ಹೋಗಿ ಸಮುದ್ರದಲ್ಲಿ ಕೊನೆಗೊಳ್ಳುತ್ತದೆ. ಈ ಪ್ರದೇಶವನ್ನು ಎಫ್ರಾಯೀಮ್ ಕುಲದವರಿಗೆ ಅವರ ಕುಟುಂಬಗಳಿಗನುಸಾರವಾಗಿ ಕೊಡಲಾಗಿತ್ತು. 9 ಎಫ್ರಾಯೀಮಿನ ಹಲವಾರು ಗಡಿಯ ಗ್ರಾಮಗಳು ಮನಸ್ಸೆ ಕುಲದವರ ಪ್ರದೇಶದೊಳಗೆ ಸೇರಿಕೊಂಡಿದ್ದವು. ಆದರೂ ಎಫ್ರಾಯೀಮ್ ಜನರು ಆ ಊರುಗಳನ್ನು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳನ್ನು ತಮ್ಮ ಸ್ವತ್ತಾಗಿ ಮಾಡಿಕೊಂಡಿದ್ದರು. 10 ಆದರೆ ಎಫ್ರಾಯೀಮಿನ ಜನರಿಗೆ ಗೆಜೆರಿನಲ್ಲಿದ್ದ ಕಾನಾನ್ಯರನ್ನು ಅಲ್ಲಿಂದ ಹೊರದೂಡುವುದು ಸಾಧ್ಯವಾಗಲಿಲ್ಲ. ಅದಕ್ಕಾಗಿ ಇಂದಿಗೂ ಕಾನಾನ್ಯರು ಎಫ್ರಾಯೀಮ್ ಜನರೊಂದಿಗೆ ಇರುತ್ತಾರೆ. ಆದರೆ ಕಾನಾನ್ಯರು ಎಫ್ರಾಯೀಮ್ ಜನರ ದಾಸರಾಗಿದ್ದಾರೆ.
17 ಆಮೇಲೆ ಮನಸ್ಸೆ ಕುಲದವರಿಗೆ ಭೂಮಿಯನ್ನು ಕೊಡಲಾಯಿತು. ಮನಸ್ಸೆಯು ಯೋಸೇಫನ ಚೊಚ್ಚಲ ಮಗನು. ಗಿಲ್ಯಾದನ ತಂದೆಯಾದ ಮಾಕೀರನು ಮನಸ್ಸೆಯ ಚೊಚ್ಚಲ ಮಗನು. ಮಾಕೀರನು ವೀರ ಸೈನಿಕನಾಗಿದ್ದನು. ಈ ಕಾರಣದಿಂದ ಗಿಲ್ಯಾದ್ ಮತ್ತು ಬಾಷಾನ್ ಕ್ಷೇತ್ರಗಳನ್ನು ಮಾಕೀರ ಮನೆತನದವರಿಗೆ ಕೊಡಲಾಯಿತು. 2 ಮನಸ್ಸೆ ಕುಲದ ಅಬೀಯೆಜೆರ್, ಹೇಲೆಕ್, ಅಸ್ರೀಯೇಲ್, ಶೆಕೆಮ್, ಹೇಫೇರ್, ಶೆಮೀದಾ ಎಂಬವರ ವಂಶದವರಿಗೂ ಭೂಮಿಯನ್ನು ಕೊಡಲಾಯಿತು. ಇವರೆಲ್ಲರು ಯೋಸೇಫನ ಮಗನಾದ ಮನಸ್ಸೆಯ ಉಳಿದ ಗಂಡುಮಕ್ಕಳು. ಈ ಜನರ ವಂಶದವರೂ ತಮ್ಮ ಪಾಲಿನ ಭೂಮಿಯನ್ನು ಪಡೆದುಕೊಂಡರು.
3 ಚಲ್ಪಹಾದನು ಹೇಫೆರನ ಮಗನು, ಹೇಫೆರನು ಗಿಲ್ಯಾದನ ಮಗನು, ಗಿಲ್ಯಾದನು ಮಾಕೀರನ ಮಗನು. ಮಾಕೀರನು ಮನಸ್ಸೆಯ ಮಗನು. ಚಲ್ಪಹಾದನಿಗೆ ಗಂಡುಮಕ್ಕಳಿರಲಿಲ್ಲ. ಆದರೆ ಅವನಿಗೆ ಐದು ಜನ ಹೆಣ್ಣುಮಕ್ಕಳಿದ್ದರು. ಅವರ ಹೆಸರುಗಳು: ಮಹ್ಲಾ, ನೋಹಾ, ಹೊಗ್ಲಾ, ಮಿಲ್ಕಾ ಮತ್ತು ತಿರ್ಚಾ. 4 ಆ ಹೆಣ್ಣುಮಕ್ಕಳು ಯಾಜಕನಾದ ಎಲ್ಲಾಜಾರ್, ನೂನನ ಮಗನಾದ ಯೆಹೋಶುವ ಮತ್ತು ಇಸ್ರೇಲರ ನಾಯಕರ ಹತ್ತಿರ ಹೋಗಿ, “ಗಂಡುಮಕ್ಕಳಿಗೆ ಕೊಟ್ಟ ಹಾಗೆ ನಮಗೂ ಭೂಮಿಯನ್ನು ಕೊಡಬೇಕೆಂದು ಯೆಹೋವನು ಮೋಶೆಗೆ ಹೇಳಿದ್ದಾನೆ” ಅಂದರು. ಎಲ್ಲಾಜಾರನು ಯೆಹೋವನ ಆಜ್ಞೆಯನ್ನು ಪಾಲಿಸಿ ಆ ಹೆಣ್ಣುಮಕ್ಕಳಿಗೆ ಸ್ವಲ್ಪ ಭೂಮಿಯನ್ನು ಕೊಟ್ಟನು. ಹೀಗೆ ಈ ಹೆಣ್ಣುಮಕ್ಕಳು ಗಂಡುಮಕ್ಕಳಂತೆಯೇ ಭೂಮಿಯನ್ನು ಪಡೆದರು.
5 ಮನಸ್ಸೆ ಕುಲದವರು ಜೋರ್ಡನ್ ನದಿಯ ಪಶ್ಚಿಮದಲ್ಲಿ ಹತ್ತು ಭೂಭಾಗಗಳನ್ನು ಮತ್ತು ಆ ನದಿಯ ಮತ್ತೊಂದು ದಿಕ್ಕಿನಲ್ಲಿ ಗಿಲ್ಯಾದ್ ಮತ್ತು ಬಾಷಾನ್ ಎಂಬ ಮತ್ತೆರಡು ಭೂಭಾಗಗಳನ್ನು ಪಡೆದುಕೊಂಡರು. 6 ಮನಸ್ಸೆಯ ಹೆಣ್ಣುಮಕ್ಕಳು ಗಂಡುಮಕ್ಕಳಂತೆಯೇ ಭೂಮಿಯನ್ನು ಪಡೆದರು. ಗಿಲ್ಯಾದ್ ಪ್ರದೇಶವನ್ನು ಮನಸ್ಸೆ ಕುಲದ ಉಳಿದ ಕುಟುಂಬಗಳಿಗೆ ಕೊಡಲಾಯಿತು.
7 ಮನಸ್ಸೆ ಕುಲದವರ ಪ್ರದೇಶಗಳು ಆಶೇರ್ ಮತ್ತು ಶೆಕಮಿನ ಹತ್ತಿರವಿದ್ದ ಮಿಕ್ಮೆತಾತಿನ ಮಧ್ಯದಲ್ಲಿ ಬರುತ್ತವೆ. ಅದರ ಸೀಮೆಯು ದಕ್ಷಿಣದಲ್ಲಿ ಎನ್ತಪ್ಪೂಹ ಪ್ರದೇಶಕ್ಕೆ ಮುಟ್ಟುತ್ತದೆ. 8 ಎನ್ತಪ್ಪೂಹದ ಸುತ್ತಮುತ್ತಲಿನ ಭೂಮಿ ಮನಸ್ಸೆಕುಲದವರ ಸ್ವತ್ತಾಗಿದ್ದರೂ ಆ ಊರು ಮಾತ್ರ ಅವರ ಅಧೀನದಲ್ಲಿರಲಿಲ್ಲ. ಎನ್ತಪ್ಪೂಹ ಎಂಬ ಊರು ಮನಸ್ಸೆ ಕುಲದವರ ಪ್ರಾಂತ್ಯದ ಸೀಮೆಯಲ್ಲಿದ್ದರೂ ಅದು ಎಫ್ರಾಯೀಮ್ ಜನರ ಸ್ವಾಸ್ತ್ಯದಲ್ಲಿತ್ತು. 9 ಮನಸ್ಸೆ ಪ್ರಾಂತ್ಯದ ಸೀಮೆ ದಕ್ಷಿಣದಲ್ಲಿ ಕಾನಾ ನದಿಯವರೆಗೆ ಹೋಗುತ್ತದೆ. ಈ ಕ್ಷೇತ್ರ ಮನಸ್ಸೆ ಕುಲದವರ ಸ್ವಾಸ್ತ್ಯದಲ್ಲಿದ್ದರೂ ಪಟ್ಟಣಗಳು ಎಫ್ರಾಯೀಮ್ ಜನರ ಸ್ವಾಸ್ತ್ಯದಲ್ಲಿದ್ದವು. ಮನಸ್ಸೆ ಪ್ರಾಂತ್ಯದ ಸೀಮೆಯು ನದಿಯ ಉತ್ತರದಿಕ್ಕಿನಿಂದ ಪಶ್ಚಿಮದಲ್ಲಿ ಮೆಡಿಟರೆನಿಯನ್ ಸಮುದ್ರದವರೆಗೆ ಮುಂದುವರೆದಿದೆ. 10 ದಕ್ಷಿಣದ ಭೂಮಿ ಎಫ್ರಾಯೀಮ್ ಜನರಿಗೆ ಸೇರಿದೆ. ಉತ್ತರದ ಭೂಮಿ ಮನಸ್ಸೆಯ ಜನರಿಗೆ ಸೇರಿದೆ. ಮೆಡಿಟರೆನಿಯನ್ ಸಮುದ್ರವು ಅದರ ಪಶ್ಚಿಮದ ಗಡಿಯಾಗಿತ್ತು. ಅದರ ಸೀಮೆಯು ಉತ್ತರದಲ್ಲಿ ಆಶೇರ್ ಕುಲದವರ ಪ್ರಾಂತ್ಯವನ್ನೂ ಪೂರ್ವದಲ್ಲಿ ಇಸ್ಸಾಕಾರ್ ಕುಲದವರ ನಾಡನ್ನೂ ಮುಟ್ಟುತ್ತದೆ.
11 ಮನಸ್ಸೆ ಕುಲದವರು ಇಸ್ಸಾಕಾರ್, ಆಶೇರ್ ಪ್ರಾಂತಗಳಲ್ಲಿಯೂ ಕೆಲವು ಊರುಗಳನ್ನು ಹೊಂದಿದ್ದರು. ಬೇತ್ಷೆಯಾನ್, ಇಬ್ಲೆಯಾಮ್ ಮತ್ತು ಅವುಗಳ ಸುತ್ತಮುತ್ತಲಿನ ಸಣ್ಣ ಊರುಗಳು ಮನಸ್ಸೆಯ ಜನರ ಅಧೀನದಲ್ಲಿದ್ದವು. ಮನಸ್ಸೆಯ ಜನರು ದೋರ್, ಎಂದೋರ್, ತಾನಕ್, ಮೆಗಿದ್ದೋ ಮತ್ತು ಆ ಪಟ್ಟಣಗಳ ಸುತ್ತಮುತ್ತಲಿನ ಹಳ್ಳಿಗಳಲ್ಲಿಯೂ ವಾಸವಾಗಿದ್ದರು. ಅವರು ನಾಫೊತ್ನ ಮೂರು ಊರುಗಳಲ್ಲಿಯೂ ಇದ್ದರು. 12 ಮನಸ್ಸೆ ಕುಲದವರಿಗೆ ಆ ಪಟ್ಟಣಗಳಲ್ಲಿದ್ದ ಜನರನ್ನು ಹೊರಡಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಕಾನಾನ್ಯರು ಅಲ್ಲಿಯೇ ನೆಲೆಸಿದರು. 13 ಆದರೆ ಸ್ವಲ್ಪ ಕಾಲದ ನಂತರ ಇಸ್ರೇಲರು ಬಲಶಾಲಿಗಳಾಗಿ ಕಾನಾನ್ಯರನ್ನು ತಮ್ಮ ಗುಲಾಮರನ್ನಾಗಿ ಮಾಡಿಕೊಂಡರು. ಆದರೆ ಅವರನ್ನು ಅಲ್ಲಿಂದ ಹೊರಗಟ್ಟಲಿಲ್ಲ.
14 ಯೋಸೇಫನ ವಂಶಸ್ಥರು ಯೆಹೋಶುವನೊಂದಿಗೆ ಮಾತನಾಡಿ, “ನೀನು ನಮಗೆ ಸ್ವಾಸ್ತ್ಯದ ಒಂದು ಕ್ಷೇತ್ರವನ್ನು ಮಾತ್ರ ಕೊಟ್ಟಿರುವೆ. ಆದರೆ ನಾವು ಬಹಳ ಜನರಿದ್ದೇವೆ. ಯೆಹೋವನು ತನ್ನ ಜನರಿಗೆ ಕೊಟ್ಟ ಈ ದೇಶದಲ್ಲಿ ನೀನು ನಮಗೆ ಕೇವಲ ಒಂದು ಭಾಗವನ್ನು ಮಾತ್ರ ಏಕೆ ಕೊಟ್ಟೆ?” ಎಂದು ಕೇಳಿದರು.
15 ಯೆಹೋಶುವನು, “ನಿಮ್ಮಲ್ಲಿ ಬಹಳ ಜನರಿದ್ದರೆ ಬೆಟ್ಟಪ್ರದೇಶಕ್ಕೆ ಹೋಗಿ ಆ ಭೂಮಿಯನ್ನು ತೆಗೆದುಕೊಳ್ಳಿರಿ. ಆ ಭೂಮಿಯು ಈಗ ಪೆರಿಜ್ಜೀಯರ ಮತ್ತು ರೆಫಾಯರ ಸ್ವತ್ತಾಗಿದೆ. ನಿಮಗೆ ಕೊಟ್ಟಿರುವ ಎಫ್ರಾಯೀಮ್ ಬೆಟ್ಟಪ್ರದೇಶವು ಚಿಕ್ಕದೆನಿಸಿದರೆ ಹೋಗಿ ಆ ಭೂಮಿಯನ್ನು ತೆಗೆದುಕೊಳ್ಳಿರಿ” ಎಂದನು.
16 ಯೋಸೇಫನ ಜನರು, “ಎಫ್ರಾಯೀಮ್ ಬೆಟ್ಟಪ್ರದೇಶವು ನಮಗೆ ಸಾಕಾಗುವುದಿಲ್ಲ ಎಂಬುದೇನೋ ನಿಜ. ಆದರೆ ಅಲ್ಲಿ ವಾಸಮಾಡುವ ಕಾನಾನ್ಯರಲ್ಲಿ ಬಲವಾದ ಆಯುಧಗಳಿವೆ; ಕಬ್ಬಿಣದ ರಥಗಳಿವೆ. ಇಜ್ರೇಲ್, ಬೇತ್ಷೆಯಾನ್ ಕಣಿವೆಗಳು ಮತ್ತು ಆ ಕ್ಷೇತ್ರದ ಎಲ್ಲ ಸಣ್ಣ ಹಳ್ಳಿಗಳು ಅವರ ಅಧೀನದಲ್ಲಿವೆ” ಎಂದರು.
17 ಆಗ ಯೆಹೋಶುವನು ಯೋಸೇಫನ ಮನೆತನದವರಾದ ಎಫ್ರಾಯೀಮನ ಮತ್ತು ಮನಸ್ಸೆಯ ಜನರಿಗೆ, “ನೀವು ಬಹಳಷ್ಟು ಜನರಿದ್ದೀರಿ. ನೀವು ಬಹಳ ಶಕ್ತಿಶಾಲಿಗಳಾಗಿದ್ದೀರಿ. ಆದ್ದರಿಂದ ನೀವು ದೇಶದ ಒಂದು ಪಾಲಿಗಿಂತಲೂ ಹೆಚ್ಚು ಪಡೆಯಬೇಕು. 18 ನೀವು ಬೆಟ್ಟಪ್ರದೇಶವನ್ನು ತೆಗೆದುಕೊಳ್ಳಿರಿ. ಅದೊಂದು ಕಾಡು. ಆದರೆ ನೀವು ಆ ಮರಗಳನ್ನು ಕಡಿದುಹಾಕಿ ಅದನ್ನು ವಾಸಿಸಲು ಒಳ್ಳೆಯ ಸ್ಥಳವನ್ನಾಗಿ ಮಾಡಿಕೊಳ್ಳಬಹುದು. ನೀವು ಆ ಪ್ರದೇಶವನ್ನೆಲ್ಲಾ ನಿಮ್ಮ ಸ್ವತ್ತನ್ನಾಗಿ ಮಾಡಿಕೊಳ್ಳಿರಿ. ಆ ಪ್ರದೇಶವನ್ನು ಬಿಟ್ಟುಹೋಗುವಂತೆ ಕಾನಾನ್ಯರನ್ನು ಒತ್ತಾಯಿಸಿರಿ. ಅವರು ಶಕ್ತಿಯುತರಾಗಿದ್ದರೂ ಅವರ ಬಳಿ ಬಲವಾದ ಆಯುಧಗಳಿದ್ದರೂ ನೀವು ಅವರನ್ನು ಸೋಲಿಸುವಿರಿ” ಎಂದು ಹೇಳಿದನು.
148 ಯೆಹೋವನಿಗೆ ಸ್ತೋತ್ರವಾಗಲಿ!
ಮೇಲೋಕದಲ್ಲಿರುವ ದೇವದೂತರೇ, ಆಕಾಶಮಂಡಲದಿಂದ ಯೆಹೋವನನ್ನು ಸ್ತುತಿಸಿರಿ!
2 ಎಲ್ಲಾ ದೂತರುಗಳೇ, ಆತನಿಗೆ ಸ್ತೋತ್ರಮಾಡಿರಿ!
ಆತನ ಎಲ್ಲಾ ಸೈನ್ಯಗಳೇ, ಆತನನ್ನು ಸ್ತುತಿಸಿರಿ!
3 ಸೂರ್ಯಚಂದ್ರರೇ, ಆತನನ್ನು ಸ್ತುತಿಸಿರಿ!
ಆಕಾಶದಲ್ಲಿರುವ ನಕ್ಷತ್ರಗಳೇ, ಬೆಳಕುಗಳೇ, ಆತನನ್ನು ಸ್ತುತಿಸಿರಿ!
ಆತನಿಗೆ ಸ್ತೋತ್ರಮಾಡಿರಿ!
ಆತನ ಸರ್ವಸೈನ್ಯಗಳೇ ಆತನನ್ನು ಸ್ತುತಿಸಿರಿ!
4 ಉನ್ನತೋನ್ನತವಾದ ಆಕಾಶವೇ, ಆತನನ್ನು ಸ್ತುತಿಸು!
ಆಕಾಶದ ಮೇಲಿರುವ ನೀರುಗಳೇ ಆತನನ್ನು ಸ್ತುತಿಸಿರಿ!
5 ಅವು ಯೆಹೋವನ ಹೆಸರನ್ನು ಸ್ತುತಿಸಲಿ.
ಆತನು ಆಜ್ಞಾಪಿಸಲು ಅವುಗಳೆಲ್ಲಾ ಸೃಷ್ಟಿಯಾದವು!
6 ಇವುಗಳೆಲ್ಲಾ ಶಾಶ್ವತವಾಗಿರುವಂತೆ ಆತನು ಮಾಡಿದನು.
ಎಂದಿಗೂ ಕೊನೆಗೊಳ್ಳದ ನಿಯಮಗಳನ್ನು ಆತನು ಮಾಡಿದನು.
7 ಭೂಮಿಯ ಮೇಲಿರುವ ಸಮಸ್ತವೇ, ಯೆಹೋವನಿಗೆ ಸ್ತೋತ್ರಮಾಡಿರಿ!
ಮಹಾಸಮುದ್ರ ಪ್ರಾಣಿಗಳೇ, ಆತನನ್ನು ಸ್ತುತಿಸಿರಿ!
8 ಆತನು ಬೆಂಕಿಯನ್ನೂ ಆಲಿಕಲ್ಲನ್ನೂ ಮಂಜನ್ನೂ
ಹೊಗೆಯನ್ನೂ ಬಿರುಗಾಳಿಯನ್ನೂ ಉಂಟುಮಾಡಿದನು.
9 ಆತನು ಬೆಟ್ಟಗಳನ್ನೂ ಗುಡ್ಡಗಳನ್ನೂ
ಹಣ್ಣಿನ ಮರಗಳನ್ನೂ ದೇವದಾರು ಮರಗಳನ್ನೂ ಸೃಷ್ಟಿಮಾಡಿದನು.
10 ಆತನು ಎಲ್ಲಾ ಕಾಡುಪ್ರಾಣಿಗಳನ್ನೂ ಪಶುಗಳನ್ನೂ ಕ್ರಿಮಿಕೀಟಗಳನ್ನೂ ಪಕ್ಷಿಗಳನ್ನೂ ಸೃಷ್ಟಿಮಾಡಿದನು.
11 ಆತನು ಭೂಮಿಯ ಮೇಲೆ ರಾಜರುಗಳನ್ನೂ ಜನಾಂಗಗಳನ್ನೂ
ನಾಯಕರುಗಳನ್ನೂ ನ್ಯಾಯಾಧಿಪತಿಗಳನ್ನೂ ಸೃಷ್ಟಿಮಾಡಿದನು.
12 ಆತನು ಪ್ರಾಯಸ್ಥರಾದ ಸ್ತ್ರೀಪುರುಷರನ್ನೂ
ವೃದ್ಧರನ್ನೂ ಯೌವನಸ್ಥರನ್ನೂ ಸೃಷ್ಟಿಸಿದನು.
13 ಯೆಹೋವನ ಹೆಸರನ್ನು ಕೊಂಡಾಡಿರಿ!
ಆತನ ಹೆಸರನ್ನು ಶಾಶ್ವತವಾಗಿ ಸನ್ಮಾನಿಸಿರಿ!
ಭೂಮ್ಯಾಕಾಶಗಳಲ್ಲಿರುವ ಸಮಸ್ತವೇ, ಆತನನ್ನು ಸ್ತುತಿಸು!
14 ಆತನು ತನ್ನ ಜನರನ್ನು ಬಲಿಷ್ಠರನ್ನಾಗಿ ಮಾಡುತ್ತಾನೆ.
ಆತನ ಭಕ್ತರನ್ನು ಜನರು ಹೊಗಳುವರು.
ಜನರು ಇಸ್ರೇಲರನ್ನು ಹೊಗಳುವರು.
ಆತನು ಹೋರಾಡುತ್ತಿರುವುದು ಅವರಿಗಾಗಿಯೇ.
ಯೆಹೋವನಿಗೆ ಸ್ತೋತ್ರವಾಗಲಿ!
8 ಯೆಹೋವನು ಹೀಗೆನ್ನುತ್ತಾನೆ: “ಆಗ ಜನರು ಯೆಹೂದದ ರಾಜರ ಮತ್ತು ಪ್ರಮುಖ ಅಧಿಪತಿಗಳ ಎಲುಬುಗಳನ್ನು ಅವರ ಗೋರಿಗಳಿಂದ ಹೊರತೆಗೆಯುವರು. ಅವರು ಯಾಜಕರ ಮತ್ತು ಪ್ರವಾದಿಗಳ ಎಲುಬುಗಳನ್ನು ಅವರ ಗೋರಿಗಳಿಂದ ಹೊರತೆಗೆಯುವರು. ಅವರು ಜೆರುಸಲೇಮಿನ ಎಲ್ಲಾ ಜನರ ಎಲುಬುಗಳನ್ನು ಅವರ ಗೋರಿಗಳಿಂದ ಹೊರತೆಗೆಯುವರು. 2 ಜೆರುಸಲೇಮಿನ ಜನರು ಸೂರ್ಯನನ್ನು, ಚಂದ್ರನನ್ನು, ನಕ್ಷತ್ರಗಣಗಳನ್ನು ಪ್ರೀತಿಸಿ, ಅನುಸರಿಸಿ, ವಿಚಾರಿಸಿ, ಪೂಜಿಸಿದ್ದರಿಂದ ಅವರ ಎಲುಬುಗಳನ್ನು ಅವುಗಳ ಕೆಳಗೆ ಭೂಮಿಯ ಮೇಲೆ ಹರಡುವರು. ಯಾರೊಬ್ಬರೂ ಆ ಎಲುಬುಗಳನ್ನು ಪುನಃ ಒಂದೆಡೆ ಸೇರಿಸಿ ಹೂಳುವುದಿಲ್ಲ. ಆ ಎಲುಬುಗಳು ಭೂಮಿಯ ಮೇಲೆ ಎಸೆದ ಸಗಣಿಯಂತಾಗುವವು.
3 “ಯೆಹೂದದ ಜನರು ತಮ್ಮ ಮನೆಗಳನ್ನು ಮತ್ತು ಪ್ರದೇಶವನ್ನು ಬಿಡುವಂತೆ ಮಾಡುತ್ತೇನೆ. ಆ ಜನರನ್ನು ಪರದೇಶಕ್ಕೆ ಒಯ್ಯಲಾಗುವುದು. ಯುದ್ಧದಲ್ಲಿ ಮರಣ ಹೊಂದದೆ ಅಳಿದುಳಿದ ಕೆಲವು ಮಂದಿ ಯೆಹೂದಿಯರು ತಾವು ಸತ್ತುಹೋಗಿದ್ದರೆ ಚೆನ್ನಾಗಿತ್ತು ಎಂದುಕೊಳ್ಳುವರು.” ಇದು ಯೆಹೋವನ ನುಡಿ.
ಪಾಪ ಮತ್ತು ಶಿಕ್ಷೆ
4 “ಯೆರೆಮೀಯನೇ, ಯೆಹೂದದ ಜನರಿಗೆ ಹೀಗೆ ಹೇಳು: ‘ಯೆಹೋವನು ಈ ಮಾತನ್ನು ಹೇಳುತ್ತಾನೆ.
“‘ಒಬ್ಬ ಮನುಷ್ಯನು ಕೆಳಗೆ ಬಿದ್ದರೆ
ಪುನಃ ಅವನು ಮೇಲಕ್ಕೆ ಏಳುತ್ತಾನೆ;
ಒಬ್ಬ ಮನುಷ್ಯನು ತಪ್ಪುದಾರಿ ಹಿಡಿದರೆ
ಅವನು ಹಿಂತಿರುಗಿ ಬರುತ್ತಾನೆಂಬುದು ನಿಮಗೆ ಗೊತ್ತು.
5 ಯೆಹೂದದ ಜನರು ತಪ್ಪುದಾರಿಯನ್ನು ಹಿಡಿದಿದ್ದಾರೆ.
ಆದರೆ ಜೆರುಸಲೇಮಿನ ಜನರು ಆ ತಪ್ಪು ದಾರಿಯ ಮೇಲೆ ನಡೆಯುವದನ್ನು ಏಕೆ ಮುಂದುವರಿಸಿದ್ದಾರೆ?
ತಮ್ಮ ಸುಳ್ಳುಗಳನ್ನೇ ಅವರು ನಂಬಿದ್ದಾರೆ,
ಅವರು ಹಿಂತಿರುಗಿ ಬರಲು ಸಿದ್ಧರಿಲ್ಲ.
6 ನಾನು ಎಚ್ಚರವಹಿಸಿ ಅವರು ಹೇಳುವದನ್ನು ಕೇಳಿದ್ದೇನೆ.
ಆದರೆ ಅವರು ಸರಿಯಾದುದನ್ನು ಹೇಳುವದಿಲ್ಲ.
ತಾವು ಮಾಡಿದ ಪಾಪಕ್ಕಾಗಿ ಅವರು ಪಶ್ಚಾತ್ತಾಪಪಡುವದಿಲ್ಲ.
ಅವರು ಮಾಡಿದ ದುಷ್ಕೃತ್ಯದ ಬಗ್ಗೆ ಅವರು ಯೋಚಿಸುವದಿಲ್ಲ.
ಜನರು ವಿಚಾರ ಮಾಡದೆ ಕೆಲಸಮಾಡುತ್ತಾರೆ.
ಅವರು ಯುದ್ಧದಲ್ಲಿ ಓಡುವ ಕುದುರೆಯಂತಿದ್ದಾರೆ.
7 ಆಕಾಶದಲ್ಲಿ ಹಾರಾಡುವ ಬಕಪಕ್ಷಿಗಳಿಗೂ ಸಹ
ಆಯಾ ಕೆಲಸ ಮಾಡುವ ಸರಿಯಾದ ಸಮಯ ಗೊತ್ತಿದೆ.
ಬೆಳವಕ್ಕಿಯೂ ಬಾನಕ್ಕಿಯೂ ಕೊಕ್ಕರೆಯೂ
ಹೊಸ ಮನೆಗೆ ಹೋಗಬೇಕಾದ ಕಾಲವನ್ನು ಬಲ್ಲವು.
ಆದರೆ ನನ್ನ ಜನರಿಗೆ ತಮ್ಮ ಯೆಹೋವನು ಅವರಿಂದ ಏನನ್ನು ಬಯಸುತ್ತಾನೆ ಎಂಬುದು ಗೊತ್ತಿಲ್ಲ.
8 “‘“ಯೆಹೋವನ ಧರ್ಮಶಾಸ್ತ್ರವು ನಮ್ಮಲ್ಲಿ ಇದೆ.
ಆದ್ದರಿಂದ ನಾವು ಜ್ಞಾನಿಗಳು” ಎಂದು ನೀವು ಹೇಳುವಿರಿ.
ಆದರೆ ಅದು ನಿಜವಲ್ಲ.
ಏಕೆಂದರೆ ಲಿಪಿಗಾರರು ತಮ್ಮ ಲೇಖನಿಯಿಂದ ಸುಳ್ಳು ಬರೆದಿದ್ದಾರೆ.
9 ಆ “ಜ್ಞಾನಿಗಳು” ಯೆಹೋವನ ಉಪದೇಶವನ್ನು ಕೇಳಲು ಒಪ್ಪಲಿಲ್ಲ.
ಆದ್ದರಿಂದ ಅವರು ನಿಜವಾದ ಜ್ಞಾನಿಗಳಲ್ಲವೇ ಅಲ್ಲ.
ಆ “ಜ್ಞಾನಿಗಳು” ಸಿಕ್ಕಿಹಾಕಿಕೊಂಡಿದ್ದಾರೆ.
ಅವರು ಗಾಬರಿಪಟ್ಟಿದ್ದಾರೆ ಮತ್ತು ನಾಚಿಕೆಪಟ್ಟಿದ್ದಾರೆ.
ಅವರ ಜ್ಞಾನವು ಅಪ್ರಯೋಜಕವಾಗಿದೆ.
10 ಆದ್ದರಿಂದ ನಾನು ಅವರ ಹೆಂಡಂದಿರನ್ನು ಬೇರೆಯವರಿಗೆ ಕೊಡುತ್ತೇನೆ.
ನಾನು ಅವರ ಹೊಲಗಳನ್ನು ಬೇರೆಯವರಿಗೆ ಕೊಡುತ್ತೇನೆ.
ಇಸ್ರೇಲಿನ ಎಲ್ಲಾ ಜನರಿಗೆ ಹೆಚ್ಚಾಗಿ ಹಣಬೇಕು.
ಸಾಮಾನ್ಯರನ್ನು ಮೊದಲುಗೊಂಡು ಅತ್ಯಂತ ಮುಖ್ಯರಾದವರೆಲ್ಲರೂ ಹೀಗೇ ಇದ್ದಾರೆ.
ಪ್ರವಾದಿಗಳಿಂದ ಹಿಡಿದು ಯಾಜಕರವರೆಗೆ ಎಲ್ಲರೂ ಸುಳ್ಳು ಹೇಳುತ್ತಾರೆ.
11 ಪ್ರವಾದಿಗಳು ಮತ್ತು ಯಾಜಕರು ನಮ್ಮ ಜನರ ಆಳವಾದ ಗಾಯಗಳನ್ನು
ಕೇವಲ ಅಲ್ಪಗಾಯಗಳಂತೆ ಪರಿಗಣಿಸಿ ಚಿಕಿತ್ಸೆ ಕೊಡುತ್ತಿದ್ದಾರೆ.
“ಎಲ್ಲಾ ಚೆನ್ನಾಗಿದೆ, ಎಲ್ಲಾ ಚೆನ್ನಾಗಿದೆ” ಎಂದು ಅವರು ಹೇಳುತ್ತಾರೆ.
ಆದರೆ ಎಲ್ಲಾ ಚೆನ್ನಾಗಿಲ್ಲ.
12 ಅವರು ತಮ್ಮ ದುಷ್ಕೃತ್ಯಗಳಿಗಾಗಿ ನಾಚಿಕೆಪಡಬೇಕು.
ಆದರೆ ಅವರು ಸ್ವಲ್ಪವೂ ನಾಚಿಕೆಪಡುವುದಿಲ್ಲ.
ಅವರಿಗೆ ನಾಚಿಕೆ ಎಂಬುದೇ ತಿಳಿದಿಲ್ಲ.
ಆದ್ದರಿಂದ ಉಳಿದೆಲ್ಲರಂತೆ ಅವರಿಗೂ ಶಿಕ್ಷೆ ವಿಧಿಸಲಾಗುವುದು.
ನಾನು ಅವರನ್ನು ಶಿಕ್ಷಿಸುವಾಗ ಅವರು ಮುಗ್ಗರಿಸಿ ಬೀಳುವರು.’”
ಯೆಹೋವನ ನುಡಿಗಳಿವು.
13 “ನಾನು ಅವರ ಹಣ್ಣುಗಳನ್ನೂ ಬೆಳೆಗಳನ್ನೂ ಕಿತ್ತುಕೊಂಡು
ಅವರಿಗೆ ಸುಗ್ಗಿಯಾಗದಂತೆ ಮಾಡುತ್ತೇನೆ.” ಇದು ಯೆಹೋವನ ನುಡಿ.
ದ್ರಾಕ್ಷಿಬಳ್ಳಿಯಲ್ಲಿ ದ್ರಾಕ್ಷಿಗಳಿರುವದಿಲ್ಲ.
ಅಂಜೂರದ ಮರದಲ್ಲಿ ಒಂದಾದರೂ ಅಂಜೂರದ ಹಣ್ಣು ಇರುವದಿಲ್ಲ.
ಎಲೆಗಳು ಸಹ ಒಣಗಿ ಉದುರುವವು.
ನಾನು ಅವರಿಗೆ ಕೊಟ್ಟ ವಸ್ತುಗಳನ್ನು ಕಿತ್ತುಕೊಳ್ಳುವೆನು.
14 “ನಾವು ಇಲ್ಲಿ ಸುಮ್ಮನೆ ಕುಳಿತುಕೊಂಡಿರುವುದೇಕೆ?
ಬನ್ನಿ, ನಾವು ಭದ್ರವಾದ ಪಟ್ಟಣಗಳಿಗೆ ಓಡಿಹೋಗೋಣ.
ನಮ್ಮ ದೇವರಾದ ಯೆಹೋವನು ನಮ್ಮನ್ನು ಸಾಯುವಂತೆ ಮಾಡಿದರೆ ಅಲ್ಲಿಯೇ ಸತ್ತುಹೋಗೋಣ.
ನಾವು ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದ್ದೇವೆ.
ಆದ್ದರಿಂದ ಆತನು ನಮಗೆ ಕುಡಿಯಲು ವಿಷಮಿಶ್ರಿತ ನೀರನ್ನು ಕೊಟ್ಟಿದ್ದಾನೆ.
15 ನಾವು ಶಾಂತಿಯನ್ನು ನಿರೀಕ್ಷಿಸಿದ್ದೆವು.
ಆದರೆ ಒಳ್ಳೆಯದೇನೂ ಆಗಲಿಲ್ಲ.
ಅವನು ನಮ್ಮನ್ನು ಗುಣಪಡಿಸುವ ಸಮಯಕ್ಕಾಗಿ ಕಾದುಕೊಂಡಿದ್ದೆವು.
ಆದರೆ ಕೇವಲ ವಿನಾಶ ಮಾತ್ರ ಬಂದಿತು.
16 ದಾನ್ಕುಲದವರ ಪ್ರದೇಶದಿಂದ
ನಾವು ಶತ್ರುಗಳ ಕುದುರೆಗಳ ಕೆನೆತವನ್ನು ಕೇಳುತ್ತಿದ್ದೇವೆ.
ಅವುಗಳ ಪಾದಗಳ ಬಡಿತದಿಂದ ಭೂಮಿ ನಡುಗುತ್ತಿದೆ.
ಅವರು ನಮ್ಮ ಪ್ರದೇಶವನ್ನು
ಮತ್ತು ಅಲ್ಲಿದ್ದ ಎಲ್ಲವನ್ನು ಹಾಳುಮಾಡಲು ಬಂದಿದ್ದಾರೆ.
ಅವರು ನಗರವನ್ನು ಮತ್ತು ಅಲ್ಲಿದ್ದ ಎಲ್ಲಾ ಜನರನ್ನು
ಹಾಳುಮಾಡಲು ಬಂದಿದ್ದಾರೆ.
17 “ಯೆಹೂದದ ಜನರೇ, ನಿಮ್ಮನ್ನು ಕಚ್ಚುವದಕ್ಕಾಗಿ ವಿಷಪೂರಿತ ಹಾವುಗಳನ್ನು ಕಳಿಸುತ್ತಿದ್ದೇನೆ.
ಆ ಹಾವುಗಳನ್ನು ತಡೆಯಲಾಗದು.
ಅವುಗಳು ನಿಮ್ಮನ್ನು ಕಚ್ಚುವವು.”
ಇದು ಯೆಹೋವನ ನುಡಿ.
18 ದೇವರೇ, ನಾನು ದುಃಖಿತನಾಗಿದ್ದೇನೆ, ಭಯಭೀತನಾಗಿದ್ದೇನೆ.
19 ನನ್ನ ಜನರ ಮೊರೆಯನ್ನು ಆಲಿಸು.
ದೇಶದ ಎಲ್ಲೆಡೆಯಲ್ಲಿಯೂ ಅವರು ಸಹಾಯಕ್ಕಾಗಿ ಕೂಗುತ್ತಿದ್ದಾರೆ.
“ಈಗಲೂ ಯೆಹೋವನು ಚೀಯೋನಿನಲ್ಲಿದ್ದಾನೆಯೇ?
ಚೀಯೋನಿನ ರಾಜನು ಈಗಲೂ ಅಲ್ಲಿದ್ದಾನೆಯೇ?” ಎಂದು ಅವರು ಕೇಳುತ್ತಾರೆ.
ದೇವರು ಹೀಗೆನ್ನುತ್ತಾನೆ: “ಯೆಹೂದದ ಜನರು ತಮ್ಮ ವಿಗ್ರಹಗಳನ್ನು ಪೂಜಿಸಿ ನನ್ನ ಕೋಪವನ್ನು ಏಕೆ ಕೆರಳಿಸುತ್ತಾರೆ?
ಅವರು ನಿಷ್ಪ್ರಯೋಜಕವಾದ ಅನ್ಯದೇವರ ವಿಗ್ರಹಗಳನ್ನು ಪೂಜಿಸಿದರು.”
20 “ಸುಗ್ಗಿಯ ಕಾಲ ಮುಗಿಯಿತು,
ಬೇಸಿಗೆ ಕಾಲ ಹೋಯಿತು,
ಆದರೆ ನಮಗಿನ್ನೂ ರಕ್ಷಣೆ ಆಗಲಿಲ್ಲ” ಎಂದು ಜನರು ಅನ್ನುತ್ತಾರೆ.
21 ನನ್ನ ಜನರು ಗಾಯಗೊಂಡಿದ್ದಾರೆ. ಆದ್ದರಿಂದ ನಾನೂ ಗಾಯಗೊಂಡಿದ್ದೇನೆ.
ಈಗ ಗಾಯಗೊಂಡ ಜನರ ಬಗ್ಗೆ ಯೋಚಿಸುತ್ತ ನಾನು ದುಃಖದಿಂದ ಮೌನವಾಗಿದ್ದೇನೆ.
22 ಗಿಲ್ಯಾದಿನಲ್ಲಿ ಖಂಡಿತವಾಗಿಯೂ ಔಷಧವಿದೆ.
ಖಂಡಿತವಾಗಿಯೂ ಅಲ್ಲಿ ಒಬ್ಬ ವೈದ್ಯನಿದ್ದಾನೆ.
ಆದರೆ ನನ್ನ ಜನರ ಗಾಯಗಳು ಗುಣವಾಗಲಿಲ್ಲವೇಕೆ?
ಊಟಕ್ಕೆ ಆಹ್ವಾನಿಸಲ್ಪಟ್ಟಿದ್ದ ಜನರ ಕುರಿತಾದ ಸಾಮ್ಯ
(ಲೂಕ 14:15-24)
22 ಯೇಸು ಬೇರೆ ಕೆಲವು ವಿಷಯಗಳನ್ನು ಸಾಮ್ಯಗಳ ಮೂಲಕವಾಗಿ ಜನರಿಗೆ ತಿಳಿಸಿದನು: 2 “ಪರಲೋಕರಾಜ್ಯವು ತನ್ನ ಮಗನ ಮದುವೆಯನ್ನು ಸಿದ್ಧಪಡಿಸಿದ ಒಬ್ಬ ರಾಜನಿಗೆ ಹೋಲಿಕೆಯಾಗಿದೆ. 3 ಆ ರಾಜನು ಕೆಲವು ಜನರನ್ನು ಔತಣಕ್ಕೆ ಆಹ್ವಾನಿಸಿದನು. ಅಡಿಗೆ ಸಿದ್ಧವಾದ ಬಳಿಕ ರಾಜನು ತನ್ನ ಸೇವಕರ ಮೂಲಕ ಆ ಜನರಿಗೆ ತಿಳಿಸಿದನು. ಆದರೆ ಅವರು ಔತಣಕ್ಕೆ ಬರಲಿಲ್ಲ.
4 “ಆಮೇಲೆ ರಾಜನು ಇನ್ನೂ ಕೆಲವು ಸೇವಕರನ್ನು ಕರೆದು, ‘ಈ ಜನರನ್ನು ನಾನು ಆಗಲೇ ಆಹ್ವಾನಿಸಿದ್ದೇನೆ. ಆದ್ದರಿಂದ ಈಗ ಔತಣವು ಸಿದ್ಧವಾಗಿದೆ. ಅಡಿಗೆಗಾಗಿ ಕೊಬ್ಬಿದ ಎತ್ತುಗಳನ್ನು ಮತ್ತು ಕರುಗಳನ್ನು ಕೊಯ್ಸಿದ್ದೇನೆ. ಎಲ್ಲವೂ ಸಿದ್ಧವಾಗಿದೆ. ಮದುವೆ ಔತಣಕ್ಕೆ ಬನ್ನಿ ಎಂದು ಅವರಿಗೆ ತಿಳಿಸಿ’ ಎಂದು ಹೇಳಿ ಕಳುಹಿಸಿದನು.
5 “ಅಂತೆಯೇ ಸೇವಕರು ಹೋಗಿ ಆ ಜನರಿಗೆ ತಿಳಿಸಿದರು. ಆದರೆ ಅವರು ಸೇವಕರ ಮಾತಿಗೆ ಕಿವಿಗೊಡಲಿಲ್ಲ. ಒಬ್ಬನು ತನ್ನ ಹೊಲದಲ್ಲಿ ಕೆಲಸ ಮಾಡಲು ಹೊರಟುಹೋದನು. ಬೇರೊಬ್ಬನು ತನ್ನ ವ್ಯಾಪಾರಕ್ಕಾಗಿ ಹೊರಟುಹೋದನು. 6 ಇನ್ನು ಕೆಲವರು ಆ ಸೇವಕರನ್ನು ಹಿಡಿದು, ಹೊಡೆದು ಕೊಂದುಹಾಕಿದರು. 7 ಆಗ ರಾಜನು ಬಹು ಕೋಪಗೊಂಡು ತನ್ನ ಸೈನ್ಯವನ್ನು ಕಳುಹಿಸಿ ಆ ಕೊಲೆಗಾರರನ್ನು ಕೊಲ್ಲಿಸಿದನು ಮತ್ತು ಅವರ ಪಟ್ಟಣವನ್ನು ಸುಟ್ಟುಹಾಕಿಸಿದನು.
8 “ಬಳಿಕ ರಾಜನು ತನ್ನ ಸೇವಕರಿಗೆ, ‘ಮದುವೆ ಊಟ ಸಿದ್ಧವಾಗಿದೆ. ನಾನು ಆಹ್ವಾನಿಸಿದ್ದ ಜನರು ಊಟಕ್ಕೆ ಬರುವಷ್ಟು ಒಳ್ಳೆಯವರಾಗಿರಲಿಲ್ಲ. 9 ಆದ್ದರಿಂದ ಬೀದಿಯ ಮೂಲೆಮೂಲೆಗಳಿಗೆ ಹೋಗಿ ನೀವು ಕಂಡ ಜನರನ್ನೆಲ್ಲ ಔತಣಕ್ಕೆ ಆಹ್ವಾನಿಸಿರಿ’ ಎಂದನು. 10 ಅಂತೆಯೇ ಸೇವಕರು ಬೀದಿಬೀದಿಗಳಿಗೆ ಹೋಗಿ ತಾವು ಕಂಡ ಜನರನ್ನೆಲ್ಲಾ ಒಳ್ಳೆಯವರು, ಕೆಟ್ಟವರು ಎನ್ನದೆ ಒಟ್ಟುಗೂಡಿಸಿ ಊಟ ಸಿದ್ಧವಾಗಿದ್ದ ಸ್ಥಳಕ್ಕೆ ಕರೆತಂದರು. ಆ ಸ್ಥಳವು ಜನರಿಂದ ತುಂಬಿಹೋಯಿತು.
11 “ಆಗ ರಾಜನು ಜನರನ್ನೆಲ್ಲ ನೋಡಲು ಒಳಗೆ ಬಂದನು. ಮದುವೆಗೆ ಯೋಗ್ಯವಾದ ಬಟ್ಟೆಯನ್ನು ಧರಿಸಿಕೊಂಡಿಲ್ಲದ ಒಬ್ಬ ಮನುಷ್ಯನನ್ನು ರಾಜನು ಕಂಡು, 12 ‘ಸ್ನೇಹಿತನೇ, ನೀನು ಒಳಗೆ ಹೇಗೆ ಬಂದೆ? ನೀನು ಮದುವೆಗೆ ಯೋಗ್ಯವಾದ ಬಟ್ಟೆಯನ್ನು ಧರಿಸಿಕೊಂಡಿಲ್ಲವಲ್ಲಾ’ ಅಂದನು. ಆದರೆ ಅವನು ಉತ್ತರ ನೀಡಲಿಲ್ಲ. 13 ಆಗ ರಾಜನು ಕೆಲವು ಸೇವಕರಿಗೆ, ‘ಇವನ ಕೈಕಾಲು ಕಟ್ಟಿ ಹೊರಗೆ ಕತ್ತಲೆಯೊಳಕ್ಕೆ ಎಸೆಯಿರಿ’ ಅಂದನು. ಆ ಸ್ಥಳದಲ್ಲಿ ಜನರು ಗೋಳಾಡುತ್ತಾ ಬಾಧೆಯಿಂದ ತಮ್ಮ ಹಲ್ಲುಗಳನ್ನು ಕಡಿಯುತ್ತಿರುವರು.
14 “ಹೌದು, ಆಹ್ವಾನಿಸಲ್ಪಟ್ಟವರು ಅನೇಕರಾದರೂ ಆರಿಸಲ್ಪಟ್ಟವರು ಕೆಲವರು ಮಾತ್ರ.”
ಯೇಸುವನ್ನು ವಂಚಿಸಲು ಯೆಹೂದ್ಯ ನಾಯಕರ ಪ್ರಯತ್ನ
(ಮಾರ್ಕ 12:13-17; ಲೂಕ 20:20-26)
15 ಆಗ ಫರಿಸಾಯರು, ಅಲ್ಲಿಂದ ಹೊರಟುಹೋಗಿ ಯೇಸುವಿನ ಮಾತಿನಲ್ಲಿ ತಪ್ಪು ಕಂಡುಹಿಡಿಯಲು ಉಪಾಯಗಳನ್ನು ಮಾಡಿಕೊಂಡರು. 16 ಫರಿಸಾಯರು ಯೇಸುವನ್ನು ವಂಚಿಸುವುದಕ್ಕೆ ಕೆಲವರನ್ನು ಕಳುಹಿಸಿದರು. ಅವರಲ್ಲಿ ಕೆಲವರು ಫರಿಸಾಯರ ಹಿಂಬಾಲಕರಾಗಿದ್ದರು. ಇನ್ನು ಕೆಲವರು ಯೆಹೂದ್ಯರ ರಾಜಕೀಯ ಪಂಗಡಕ್ಕೆ ಸೇರಿದವರಾಗಿದ್ದರು. ಈ ಜನರು, “ಬೋಧಕನೇ, ನೀನು ಯಥಾರ್ಥವಂತನೆಂದು ನಾವು ಬಲ್ಲೆವು. ನೀನು ದೇವರ ಮಾರ್ಗದ ಕುರಿತು ಸತ್ಯವನ್ನೇ ಬೋಧಿಸುವೆ ಎಂಬುದು ನಮಗೆ ಗೊತ್ತಿದೆ. ಬೇರೆಯವರು ನಿನ್ನ ವಿಷಯವಾಗಿ ಏನೇ ಯೋಚಿಸಿದರೂ ನೀನು ಹೆದರುವುದಿಲ್ಲ. ನೀನು ಮುಖದಾಕ್ಷಿಣ್ಯ ಮಾಡುವುದಿಲ್ಲ. 17 ಆದ್ದರಿಂದ ನಿನ್ನ ಅಭಿಪ್ರಾಯವನ್ನು ತಿಳಿಸು. ಸೀಸರನಿಗೆ ತೆರಿಗೆ ಕೊಡುವುದು ಸರಿಯೋ ಅಥವಾ ತಪ್ಪೋ?” ಎಂದು ಕೇಳಿದರು.
18 ಈ ಜನರ ಕುತಂತ್ರವು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು, “ನೀವು ಕಪಟಿಗಳು! ನನ್ನನ್ನು ತಪ್ಪಿನಲ್ಲಿ ಸಿಕ್ಕಿಸಲು ಏಕೆ ಪ್ರಯತ್ನಿಸುತ್ತೀರಿ? 19 ತೆರಿಗೆಗಾಗಿ ಕೊಡುವ ಒಂದು ನಾಣ್ಯವನ್ನು ನನಗೆ ತೋರಿಸಿರಿ” ಎಂದನು. ಜನರು ಒಂದು ಬೆಳ್ಳಿಯ ನಾಣ್ಯವನ್ನು ಆತನಿಗೆ ತೋರಿಸಿದರು. 20 ಆಗ ಆತನು, “ನಾಣ್ಯದ ಮೇಲೆ ಯಾರ ಮುಖಚಿತ್ರವಿದೆ ಮತ್ತು ಯಾರ ಹೆಸರಿದೆ?” ಎಂದು ಕೇಳಿದನು.
21 ಜನರು, “ಅದು ಸೀಸರನ ಮುಖಚಿತ್ರ ಮತ್ತು ಹೆಸರು” ಎಂದು ಉತ್ತರಕೊಟ್ಟರು.
ಆಗ ಯೇಸು ಅವರಿಗೆ, “ಸೀಸರನದನ್ನು ಸೀಸರನಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ” ಅಂದನು.
22 ಯೇಸು ಹೇಳಿದ್ದನ್ನು ಕೇಳಿದ ಆ ಜನರು ಆಶ್ಚರ್ಯಚಕಿತರಾಗಿ ಅಲ್ಲಿಂದ ಹೊರಟುಹೋದರು.
ಯೇಸುವನ್ನು ವಂಚಿಸಲು ಕೆಲವು ಸದ್ದುಕಾಯರ ಪ್ರಯತ್ನ
(ಮಾರ್ಕ 12:18-27; ಲೂಕ 20:27-40)
23 ಅದೇ ದಿನದಲ್ಲಿ ಕೆಲವು ಸದ್ದುಕಾಯರು ಯೇಸುವಿನ ಬಳಿಗೆ ಬಂದು, (ಯಾರಿಗೂ ಪುನರುತ್ಥಾನವಿಲ್ಲ ಎಂಬುದು ಸದ್ದುಕಾಯರ ನಂಬಿಕೆ.) 24 “ಬೋಧಕನೇ, ವಿವಾಹಿತನೊಬ್ಬನು ಮಕ್ಕಳನ್ನು ಪಡೆಯದೆ ಸತ್ತರೆ, ಅವನ ಹೆಂಡತಿಯನ್ನು ಅವನ ತಮ್ಮನು ಮದುವೆ ಮಾಡಿಕೊಂಡು ಅಣ್ಣನಿಗಾಗಿ ಸಂತಾನ ಪಡೆಯಬೇಕೆಂದು[a] ಮೋಶೆ ಹೇಳಿದ್ದಾನೆ. 25 ನಮ್ಮಲ್ಲಿ ಏಳು ಮಂದಿ ಸಹೋದರರಿದ್ದರು. ಮೊದಲನೆಯವನು ಮದುವೆಯಾಗಿ ಸತ್ತನು. ಅವನಿಗೆ ಮಕ್ಕಳಿರಲಿಲ್ಲ. ಆದ್ದರಿಂದ ಅವನ ಸಹೋದರನು ಅವನ ಹೆಂಡತಿಯನ್ನು ಮದುವೆಯಾದನು. 26 ಬಳಿಕ ಎರಡನೆಯ ಸಹೋದರನೂ ಸತ್ತನು. ಹೀಗೆಯೇ ಮೂರನೆಯ ಸಹೋದರನಿಗೂ ಮತ್ತು ಉಳಿದೆಲ್ಲ ಸಹೋದರರಿಗೂ ಆಯಿತು. 27 ಕಡೆಯಲ್ಲಿ ಆ ಹೆಂಗಸೂ ಸತ್ತಳು. 28 ಆದರೆ ಏಳು ಮಂದಿಯೂ ಅವಳನ್ನು ಮದುವೆ ಆಗಿದ್ದರು. ಹೀಗಿರಲಾಗಿ ಅವರು ಮರಣದಿಂದ ಮೇಲೇಳುವಾಗ ಅವಳು ಯಾರ ಹೆಂಡತಿಯಾಗಿರುವಳು?” ಎಂದು ಕೇಳಿದರು.
29 ಯೇಸು, “ನೀವು ತಪ್ಪಾಗಿ ತಿಳಿದುಕೊಂಡಿರಲು ಕಾರಣವೇನೆಂದರೆ, ಪವಿತ್ರ ಗ್ರಂಥವು ಏನು ಹೇಳುತ್ತದೆ ಎಂಬುದು ನಿಮಗೆ ತಿಳಿದಿಲ್ಲ ಮತ್ತು ದೇವರ ಶಕ್ತಿಯ ಬಗ್ಗೆಯೂ ನಿಮಗೆ ಗೊತ್ತಿಲ್ಲ. 30 ಸ್ತ್ರೀಯರು ಮತ್ತು ಪುರುಷರು ಪುನರುತ್ಥಾನ ಹೊಂದಿದ ಮೇಲೆ ಮದುವೆ ಮಾಡಿಕೊಳ್ಳುವುದಿಲ್ಲ. ಅವರೆಲ್ಲರೂ ಪರಲೋಕದ ದೇವದೂತರಂತೆ ಇರುತ್ತಾರೆ. 31 ಸತ್ತವರ ಪುನರುತ್ಥಾನದ ಕುರಿತು ದೇವರು, 32 ‘ನಾನು ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು’(A) ಎಂದು ಹೇಳಿರುವುದನ್ನು ನೀವು ಓದಿಲ್ಲವೇ? ಹೀಗಿರುವಲ್ಲಿ, ದೇವರು ಜೀವಿತರಿಗೆ ಮಾತ್ರ ದೇವರೇ ಹೊರತು ಸತ್ತವರಿಗಲ್ಲಾ” ಅಂದನು.
33 ಜನರೆಲ್ಲರೂ ಇದನ್ನು ಕೇಳಿ ಆತನ ಬೋಧನೆಗೆ ಅತ್ಯಾಶ್ಚರ್ಯಪಟ್ಟರು.
ಅತ್ಯಂತ ಪ್ರಮುಖ ಆಜ್ಞೆ ಯಾವುದು?
(ಮಾರ್ಕ 12:28-34; ಲೂಕ 10:25-28)
34 ಸದ್ದುಕಾಯರು ಪ್ರತಿವಾದ ಮಾಡಲಾಗದ ರೀತಿಯಲ್ಲಿ ಯೇಸು ಉತ್ತರಕೊಟ್ಟನೆಂಬುದು ಫರಿಸಾಯರಿಗೆ ತಿಳಿದು ಅವರು ಒಟ್ಟಾಗಿ ಯೇಸುವಿನ ಬಳಿಗೆ ಬಂದರು. 35 ಮೋಶೆಯ ಧರ್ಮಶಾಸ್ತ್ರದಲ್ಲಿ ಪ್ರವೀಣನಾಗಿದ್ದ ಫರಿಸಾಯನೊಬ್ಬನು ಯೇಸುವನ್ನು ಪರೀಕ್ಷಿಸಲು, 36 “ಬೋಧಕನೇ, ಧರ್ಮಶಾಸ್ತ್ರದಲ್ಲಿ ಅತ್ಯಂತ ಪ್ರಮುಖ ಆಜ್ಞೆ ಯಾವುದು?” ಎಂದು ಕೇಳಿದನು.
37 ಯೇಸು, “‘ನಿನ್ನ ದೇವರಾಗಿರುವ ಪ್ರಭುವನ್ನು ಪ್ರೀತಿಸಬೇಕು. ನೀನು ಆತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಮನಸ್ಸಿನಿಂದಲೂ ಪ್ರೀತಿಸಬೇಕು.’(B) 38 ಇದೇ ಮೊದಲನೆಯ ಮತ್ತು ಅತ್ಯಂತ ಪ್ರಮುಖವಾದ ಆಜ್ಞೆ. 39 ಎರಡನೆಯ ಆಜ್ಞೆಯು ಮೊದಲನೆಯ ಆಜ್ಞೆಯಷ್ಟೇ ಪ್ರಮುಖವಾಗಿದೆ. ‘ನೀನು ನಿನ್ನನ್ನು ಪ್ರೀತಿಸುವಂತೆಯೇ ನೆರೆಯವರನ್ನು ಪ್ರೀತಿಸಬೇಕು’(C) ಎಂಬುದೇ ಆ ಆಜ್ಞೆ. 40 ಇಡೀ ಧರ್ಮಶಾಸ್ತ್ರವು ಮತ್ತು ಪ್ರವಾದಿಗಳ ಎಲ್ಲಾ ಗ್ರಂಥಗಳು ಈ ಎರಡು ಆಜ್ಞೆಗಳ ಅರ್ಥವನ್ನೇ ಒಳಗೊಂಡಿವೆ” ಎಂದು ಉತ್ತರಕೊಟ್ಟನು.
ಯೇಸು ಫರಿಸಾಯರಿಗೆ ಕೇಳಿದ ಪ್ರಶ್ನೆ
(ಮಾರ್ಕ 12:35-37; ಲೂಕ 20:41-44)
41 ಫರಿಸಾಯರು ಒಟ್ಟಿಗೆ ಬಂದಿದ್ದಾಗ ಯೇಸು ಅವರಿಗೆ, 42 “ಕ್ರಿಸ್ತನ ವಿಷಯವಾಗಿ ನಿಮ್ಮ ಆಲೋಚನೆಯೇನು? ಆತನು ಯಾರ ಮಗನು?” ಎಂದು ಅವರನ್ನು ಕೇಳಿದನು.
ಫರಿಸಾಯರು, “ಕ್ರಿಸ್ತನು ದಾವೀದನ ಮಗನಾಗಿದ್ದಾನೆ” ಎಂದು ಉತ್ತರಕೊಟ್ಟರು.
43 ಆಗ ಯೇಸುವು ಫರಿಸಾಯರಿಗೆ, “ಹಾಗಾದರೆ ದಾವೀದನು ಆತನನ್ನು ‘ಪ್ರಭು’ ಎಂದು ಏಕೆ ಕರೆದನು? ದಾವೀದನು ಪರಿಶುದ್ಧಾತ್ಮನ ಶಕ್ತಿಯಿಂದ ಮಾತನಾಡಿದ್ದನು. ದಾವೀದನು ಹೇಳಿದ್ದೇನೆಂದರೆ:
44 ‘ಪ್ರಭು (ದೇವರು) ನನ್ನ ಪ್ರಭುವಿಗೆ (ಕ್ರಿಸ್ತನಿಗೆ),
ನಾನು ನಿನ್ನ ವಿರೋಧಿಗಳನ್ನು ನಿನಗೆ ಪಾದಪೀಠವನ್ನಾಗಿ ಮಾಡುವ ತನಕ
ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು’(D)
ಎಂದು ಹೇಳಿದ್ದಾನೆ. 45 ದಾವೀದನು ಕ್ರಿಸ್ತನನ್ನು ‘ಪ್ರಭು’ ಎಂದು ಕರೆದಿದ್ದಾನೆ. ಹೀಗಿರಲು ಆತನು ದಾವೀದನಿಗೆ ಮಗನಾಗಲು ಹೇಗೆ ಸಾಧ್ಯ?” ಅಂದನು.
46 ಯೇಸುವಿನ ಪ್ರಶ್ನೆಗೆ ಉತ್ತರಕೊಡಲು ಫರಿಸಾಯರಲ್ಲಿ ಯಾರಿಗೂ ಸಾಧ್ಯವಾಗಲಿಲ್ಲ. ಅಂದಿನಿಂದ ಯೇಸುವನ್ನು ವಂಚಿಸುವುದಕ್ಕಾಗಿ ಪ್ರಶ್ನೆ ಕೇಳಲು ಯಾರೂ ಧೈರ್ಯಪಡಲಿಲ್ಲ.
Kannada Holy Bible: Easy-to-Read Version. All rights reserved. © 1997 Bible League International