Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
1 ಪೂರ್ವಕಾಲವೃತ್ತಾಂತ 16

16 ಲೇವಿಯರು ಒಡಂಬಡಿಕೆಯ ಪೆಟ್ಟಿಗೆಯನ್ನು ತಂದು ಅದಕ್ಕಾಗಿ ದಾವೀದನು ನಿರ್ಮಿಸಿದ್ದ ಗುಡಾರದೊಳಗೆ ಇಟ್ಟರು. ಅನಂತರ ಸರ್ವಾಂಗಹೋಮ ಮತ್ತು ಸಮಾಧಾನಯಜ್ಞಗಳನ್ನು ಯೆಹೋವನಿಗೆ ಸಮರ್ಪಿಸಿದರು. ದಾವೀದನು ಯಜ್ಞಗಳನ್ನು ಸಮರ್ಪಿಸಿದ ಬಳಿಕ ಯೆಹೋವನ ಹೆಸರಿನಲ್ಲಿ ಇಸ್ರೇಲರನ್ನು ಆಶೀರ್ವದಿಸಿದನು. ಅನಂತರ ಅಲ್ಲಿ ನೆರೆದಿದ್ದ ಪ್ರತಿಯೊಬ್ಬ ಇಸ್ರೇಲಿನ ಗಂಡಸಿಗೆ ಮತ್ತು ಹೆಂಗಸಿಗೆ ಒಂದು ರೊಟ್ಟಿಯನ್ನೂ ಸ್ವಲ್ಪ ಖರ್ಜೂರವನ್ನೂ ಒಣದ್ರಾಕ್ಷಿಯನ್ನೂ ಕೊಟ್ಟನು.

ದಾವೀದನು ಕೆಲವು ಮಂದಿ ಯಾಜಕರನ್ನು ಒಡಂಬಡಿಕೆಯ ಪೆಟ್ಟಿಗೆಯ ಸೇವೆಮಾಡುವುದಕ್ಕಾಗಿ ನೇಮಿಸಿದನು. ಇಸ್ರೇಲರ ದೇವರಾದ ಯೆಹೋವನಿಗೆ ಸ್ತೋತ್ರ ಸಲ್ಲಿಸುವುದು ಮತ್ತು ಆತನನ್ನು ಕೊಂಡಾಡುವುದೇ ಇವರ ಕೆಲಸವಾಗಿತ್ತು. ಮೊದಲನೇ ಗುಂಪಿನ ಗಾಯಕರಿಗೆ ಆಸಾಫನು ಮುಖಂಡನಾಗಿದ್ದನು. ಆಸಾಫನ ಗುಂಪಿನವರು ತಾಳ ಬಾರಿಸಿದರು. ಜೆಕರ್ಯನು ಎರಡನೇ ಗುಂಪಿನ ನಾಯಕನು. ಬೇರೆ ಲೇವಿಯರು ಯಾರೆಂದರೆ: ಉಜ್ಜೀಯೇಲ್, ಶೆಮೀರಾಮೋತ್, ಯೆಹೀಯೇಲ್, ಮತ್ತಿತ್ಯ, ಎಲೀಯಾಬ್, ಬೆನಾಯ, ಓಬೇದೆದೋಮ್ ಮತ್ತು ಯೆಗೀಯೇಲ್. ಇವರು ಲೈರ್ ಮತ್ತು ಹಾರ್ಪ್ ವಾದ್ಯಗಳನ್ನು ಬಾರಿಸಿದರು. ಬೆನಾಯನೂ ಯೆಹಜೀಯೇಲನೂ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯ ಬಳಿಯಲ್ಲಿ ತುತ್ತೂರಿಗಳನ್ನು ಯಾವಾಗಲೂ ಊದುವ ಯಾಜಕರಾಗಿದ್ದರು. ಈ ವ್ಯವಸ್ಥೆಯನ್ನು ದಾವೀದನು ಪ್ರಥಮ ಬಾರಿಗೆ ಆಸಾಫನಿಗೂ ಅವನ ಸೋದರರಿಗೂ ಯೆಹೋವನ ಸ್ತೋತ್ರವನ್ನು ಹಾಡುವ ಕೆಲಸಕ್ಕಾಗಿ ನೇಮಿಸಿದನು.

ದಾವೀದನ ಕೃತಜ್ಞತಾಸ್ತುತಿ

ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ; ಆತನ ನಾಮದ ಮಹತ್ವವನ್ನು ವರ್ಣಿಸಿರಿ,
    ಆತನ ಮಹತ್ಕಾರ್ಯಗಳನ್ನು ಜನಾಂಗಗಳಲ್ಲಿ ಪ್ರಸಿದ್ಧಪಡಿಸಿರಿ.
ಯೆಹೋವನಿಗೆ ಗಾನ ಮಾಡಿರಿ, ಆತನಿಗೆ ಸ್ತುತಿಗೀತೆ ಹಾಡಿರಿ.
    ಆತನ ಅದ್ಭುತಕಾರ್ಯಗಳನ್ನು ಧ್ಯಾನಿಸಿರಿ.
10 ಯೆಹೋವನ ಪರಿಶುದ್ಧನಾಮದಲ್ಲಿ ಹಿಗ್ಗಿರಿ;
    ಆತನ ದರ್ಶನಕ್ಕಾಗಿ ಬರುವವರೇ, ಸಂತೋಷಪಡಿರಿ.
11 ಯೆಹೋವನನ್ನೂ ಆತನ ಬಲವನ್ನೂ ಆಶ್ರಯಿಸಿರಿ;
    ಯಾವಾಗಲೂ ಆತನ ದರ್ಶನವನ್ನು ಅಪೇಕ್ಷಿಸಿರಿ.
12 ಆತನ ಸೇವಕನಾದ ಇಸ್ರೇಲನ ಸಂತತಿಯವರೇ,
    ಆತನು ಆರಿಸಿಕೊಂಡ ಯಾಕೋಬನ ಸಂತತಿಯವರೇ,
13 ಆತನ ಅದ್ಭುತಕಾರ್ಯಗಳನ್ನೂ ಮಹತ್ಕಾರ್ಯಗಳನ್ನೂ
    ನ್ಯಾಯನಿರ್ಣಯಗಳನ್ನೂ ಜ್ಞಾಪಿಸಿಕೊಳ್ಳಿರಿ.
14 ಯೆಹೋವನೇ ನಮ್ಮ ದೇವರು.
    ಆತನ ನ್ಯಾಯವಿಧಿಗಳು ಭೂಲೋಕದಲ್ಲೆಲ್ಲಾ ಇವೆ.
15 ಯೆಹೋವನ ಒಡಂಬಡಿಕೆಯನ್ನು ಸದಾಕಾಲ ನೆನಪಿನಲ್ಲಿಡಿರಿ.
    ಆತನು ಆ ಆಜ್ಞೆಗಳನ್ನು ಸಾವಿರ ತಲೆಮಾರುಗಳಿಗೆ ಕೊಟ್ಟನು.
16 ಯೆಹೋವನು ಅಬ್ರಹಾಮನೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಸ್ಮರಿಸಿರಿ.
    ಆತನು ಇಸಾಕನಿಗೆ ಮಾಡಿದ ವಾಗ್ದಾನವನ್ನು ಜ್ಞಾಪಕಕ್ಕೆ ತನ್ನಿರಿ.
17 ಯೆಹೋವನು ಯಾಕೋಬನಿಗೆ ಕಟ್ಟಳೆಗಳನ್ನು ಅನುಗ್ರಹಿಸಿದನು.
    ಅದು ಇಸ್ರೇಲರೊಂದಿಗಿನ ನಿರಂತರವಾದ ಒಡಂಬಡಿಕೆ.
18 ಯೆಹೋವನು ಇಸ್ರೇಲರಿಗೆ, “ನಾನು ನಿಮಗೆ ಕಾನಾನ್ ದೇಶವನ್ನು ಕೊಡುವೆನು.
    ಆ ವಾಗ್ದತ್ತ ದೇಶವು ನಿಮ್ಮದಾಗುವುದು” ಎಂದು ಹೇಳಿದನು.

19 ಆತನು, “ನಿಮಗೆ ಈ ದೇಶವನ್ನು ಕೊಡುವೆನು;
    ಅದು ನಿಮ್ಮ ಸಂತತಿಯವರಿಗೆ ಸ್ವಾಸ್ತ್ಯವಾಗಿರುವುದು” ಎಂದು ಹೇಳಿದನು.
20 ಅವರು ಒಂದು ದೇಶದಿಂದ ಇನ್ನೊಂದಕ್ಕೂ
    ಒಂದು ರಾಜ್ಯದಿಂದ ಇನ್ನೊಂದಕ್ಕೂ ಹೋದರು.
21 ಆದರೆ ಅವರಿಗೆ ಕೇಡುಮಾಡಲು ಯೆಹೋವನು ಯಾರಿಗೂ ಅವಕಾಶಕೊಡಲಿಲ್ಲ.
    ಅವರನ್ನು ಬಾಧಿಸದಂತೆ ಆತನು ಅರಸರುಗಳಿಗೆ ಎಚ್ಚರಿಕೆ ಕೊಟ್ಟನು.
22 ಯೆಹೋವನು ಆ ರಾಜರಿಗೆ, “ನಾನು ಆರಿಸಿಕೊಂಡ ಜನಾಂಗಕ್ಕೆ ಉಪದ್ರವ ಕೊಡಬೇಡಿ;
    ನನ್ನ ಪ್ರವಾದಿಗಳಿಗೆ ಕೇಡು ಮಾಡಬೇಡಿ” ಎಂದು ಹೇಳಿದನು.
23 ಭೂನಿವಾಸಿಗಳೇ, ಯೆಹೋವನಿಗೆ ಕೀರ್ತನೆಯನ್ನು ಹಾಡಿರಿ;
    ಆತನ ರಕ್ಷಣೆಯನ್ನು ಪ್ರತಿನಿತ್ಯವೂ ಸಾರಿ ಹೇಳಿರಿ.
24 ಯೆಹೋವನ ಮಹಿಮೆಯನ್ನು ಜನಾಂಗಗಳಲ್ಲಿ ಪ್ರಕಟಿಸಿರಿ.
    ಸರ್ವಜನರಲ್ಲಿ ಆತನ ಅದ್ಭುತಕಾರ್ಯಗಳನ್ನು ಪ್ರಸಿದ್ಧಪಡಿಸಿರಿ.
25 ಯೆಹೋವನು ದೊಡ್ಡವನೂ ಸ್ತುತಿಗೆ ಪಾತ್ರನೂ ಆಗಿದ್ದಾನೆ.
    ಎಲ್ಲಾ ದೇವರುಗಳಲ್ಲಿ ಯೆಹೋವನೇ ಭಯಂಕರನು.
26 ಯಾಕೆಂದರೆ ಜನಾಂಗಗಳಲ್ಲಿರುವ ಬೇರೆ ದೇವರುಗಳೆಲ್ಲಾ ಜಡಮೂರ್ತಿಗಳೇ.
    ಯೆಹೋವನಾದರೋ ಆಕಾಶಮಂಡಲವನ್ನು ಸೃಷ್ಟಿಸಿದಾತನು.
27 ಆತನ ಸಾನ್ನಿಧ್ಯದಲ್ಲಿ ಮಾನಮಹಿಮೆಗಳೂ
    ಆತನ ಪವಿತ್ರಾಲಯದಲ್ಲಿ ಬಲವೂ ಸಂತೋಷವೂ ಇವೆ.
28 ಭೂಜನಾಂಗಗಳೇ, ಬಲಪ್ರಭಾವಗಳು ಯೆಹೋವನವೇ ಯೆಹೋವನವೇ
    ಎಂದು ಹೇಳಿ ಆತನನ್ನು ಘನಪಡಿಸಿರಿ.
29 ಯೆಹೋವನ ಮಹಿಮೆಯನ್ನು ಕೊಂಡಾಡಿರಿ; ಆತನ ಹೆಸರಿಗೆ ಘನತೆಯನ್ನು ಸಲ್ಲಿಸಿರಿ.
    ನಿಮ್ಮ ಕಾಣಿಕೆಗಳನ್ನು ಆತನ ಬಳಿಗೆ ತನ್ನಿರಿ;
    ಆತನ ಪರಿಶುದ್ಧ ನಾಮವನ್ನು ಆರಾಧಿಸಿರಿ.
30 ಯೆಹೋವನ ಮುಂದೆ ಭೂಲೋಕವೆಲ್ಲಾ ಭಯದಿಂದ ನಡುಗುವುದು!
    ಆದರೆ ಆತನು ಅದನ್ನು ಬಲವಾದ ಅಸ್ತಿವಾರಗಳಲ್ಲಿ ನಿರ್ಮಿಸಿದ್ದರಿಂದ ಅದು ಕದಲದು.
31 ಭೂಮ್ಯಾಕಾಶಗಳು ಹರ್ಷಿಸಲಿ! “ಯೆಹೋವನು ರಾಜ್ಯಾಧಿಕಾರವನ್ನು ವಹಿಸಿದ್ದಾನೆ”
    ಎಂದು ಜನಾಂಗಗಳಲ್ಲಿ ಪ್ರಸಿದ್ಧಪಡಿಸಿರಿ.
32 ಸಮುದ್ರವೂ ಅದರೊಳಗಿರುವದೆಲ್ಲವೂ ಆರ್ಭಟಿಸಲಿ,
    ಹೊಲಗದ್ದೆಗಳು ತಮ್ಮ ಹರ್ಷವನ್ನು ವ್ಯಕ್ತಪಡಿಸಲಿ.
33 ಯೆಹೋವನ ಸನ್ನಿಧಿಯಲ್ಲಿ ಅಡವಿಯ ಮರಗಳು ಸಂತೋಷದಿಂದ ಗಾನಮಾಡಲಿ.
    ಯಾಕೆಂದರೆ ಆತನು ಬರುತ್ತಿದ್ದಾನೆ. ಲೋಕಕ್ಕೆ ನ್ಯಾಯತೀರಿಸಲು ಬರುತ್ತಿದ್ದಾನೆ.
34 ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ.
    ಆತನು ಒಳ್ಳೆಯವನು. ಆತನ ಪ್ರೀತಿಯು ಸದಾಕಾಲಕ್ಕೂ ಇರುವದು.
35 “ರಕ್ಷಕನಾದ ಯೆಹೋವನೇ,
    ನಮ್ಮನ್ನು ರಕ್ಷಿಸು;
ನಮ್ಮನ್ನು ಒಂದುಗೂಡಿಸು;
    ಅನ್ಯಜನಾಂಗಗಳಿಂದ ನಮ್ಮನ್ನು ರಕ್ಷಿಸು.
ಆಗ ನಾವು ನಿನ್ನ ಪರಿಶುದ್ಧ ನಾಮವನ್ನು ಕೀರ್ತಿಸುವೆವು.
    ನಮ್ಮ ಹಾಡುಗಳಿಂದ ನಿನ್ನನ್ನು ಘನಪಡಿಸುವೆವು” ಎಂದು ಆತನಿಗೆ ಹೇಳಿರಿ.
36 ಇಸ್ರೇಲರ ದೇವರಾದ ಯೆಹೋವನು ಸದಾಕಾಲವೂ ಘನಹೊಂದಲಿ;
    ನಿರಂತರವೂ ಕೊಂಡಾಡಲ್ಪಡಲಿ!

ಇಸ್ರೇಲರೆಲ್ಲರೂ ಯೆಹೋವನನ್ನು ಸ್ತುತಿಸಿ “ಆಮೆನ್” ಅಂದರು.

37 ಆಗ ದಾವೀದನು ಆಸಾಫನನ್ನೂ ಅವನ ಸಹೋದರರನ್ನೂ ಒಡಂಬಡಿಕೆಯ ಪೆಟ್ಟಿಗೆಯ ಮುಂದೆ ಪ್ರತಿನಿತ್ಯ ಸೇವೆಮಾಡಲು ಅಲ್ಲಿರಿಸಿದನು. 38 ಅವರೊಂದಿಗೆ ಸೇವೆಮಾಡಲು ಓಬೇದೆದೋಮನನ್ನೂ ಇತರ ಅರವತ್ತೆಂಟು ಮಂದಿ ಲೇವಿಯರನ್ನೂ ಅಲ್ಲಿರಿಸಿದನು. ಓಬೇದೆದೋಮ್ ಮತ್ತು ಹೋಸ ಎಂಬವರು ಕಾವಲುಗಾರರಾಗಿದ್ದರು. ಓಬೇದೆದೋಮನು ಯೆದುತೂನನ ಮಗನಾಗಿದ್ದನು.

39 ಗಿಬ್ಯೋನಿನ ಉನ್ನತಸ್ಥಳದಲ್ಲಿದ್ದ ದೇವದರ್ಶನ ಗುಡಾರದಲ್ಲಿ ಸೇವೆಮಾಡಲು ದಾವೀದನು ಚಾದೋಕನನ್ನು ಮತ್ತು ಇತರ ಯಾಜಕರನ್ನು ನೇಮಿಸಿದನು. 40 ಪ್ರತಿ ಮುಂಜಾನೆ ಮತ್ತು ಸಂಧ್ಯಾಕಾಲಗಳಲ್ಲಿ ಚಾದೋಕನು ಮತ್ತು ಇತರ ಯಾಜಕರು ಸರ್ವಾಂಗಹೋಮವನ್ನು ಯಜ್ಞವೇದಿಕೆಯ ಮೇಲೆ ಸಮರ್ಪಿಸುತ್ತಿದ್ದರು. ಇಸ್ರೇಲರಿಗೆ ಕೊಡಲ್ಪಟ್ಟಿದ್ದ ಕಟ್ಟಳೆಗಳಿಗನುಸಾರವಾಗಿ ಅವರು ಮಾಡಿದರು. 41-42 ಹೇಮಾನ್ ಮತ್ತು ಯೆದುತೂನ್ ಅವರೊಂದಿಗಿದ್ದು ತುತ್ತೂರಿಯನ್ನೂದುತ್ತಾ ತಾಳ ಬಾರಿಸುತ್ತಾ ಇತರ ವಾದ್ಯಗಳನ್ನು ನುಡಿಸುತ್ತಾ ಯೆಹೋವನಿಗೆ ಸ್ತುತಿಗೀತೆಗಳನ್ನು ಹಾಡಿದರು. ಯೆದುತೂನನ ಮಕ್ಕಳು ದ್ವಾರಪಾಲಕರಾಗಿದ್ದರು.

43 ಆ ಕಾರ್ಯವು ಮುಗಿದ ಬಳಿಕ ಎಲ್ಲಾ ಇಸ್ರೇಲರು ತಮ್ಮತಮ್ಮ ಮನೆಗಳಿಗೆ ಹಿಂತಿರುಗಿದರು. ದಾವೀದನು ತನ್ನ ಕುಟುಂಬವನ್ನು ಆಶೀರ್ವದಿಸಲು ತನ್ನ ಮನೆಗೆ ಹೋದನು.

ಯಾಕೋಬನು 3

ಹತೋಟಿಮೀರಿ ಮಾತಾಡಬೇಡಿ

ನನ್ನ ಸಹೋದರ ಸಹೋದರಿಯರೇ, ನಿಮ್ಮಲ್ಲಿ ಅನೇಕರು ಬೋಧಕರಾಗಬಾರದು. ಏಕೆಂದರೆ ಬೋಧಕರಾದ ನಮಗೆ ಇತರ ಜನರಿಗಿಂತ ಕಠಿಣವಾದ ತೀರ್ಪಾಗುತ್ತದೆ ಎಂಬುದು ನಿಮಗೆ ತಿಳಿದಿದೆ.

ನಾವೆಲ್ಲರೂ ಅನೇಕ ವಿಷಯಗಳಲ್ಲಿ ತಪ್ಪುವುದುಂಟು. ಆದರೆ ಮಾತಿನಲ್ಲಿ ಎಂದೂ ತಪ್ಪುಮಾಡಿಲ್ಲದ ವ್ಯಕ್ತಿಯು ಪರಿಪೂರ್ಣನೂ ತನ್ನ ದೇಹವನ್ನು ಸ್ವಾಧೀನದಲ್ಲಿಟ್ಟುಕೊಳ್ಳಲು ಸಮರ್ಥನೂ ಆಗಿದ್ದಾನೆ. ನಾವು ಕುದುರೆಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಅವುಗಳ ಬಾಯಿಗೆ ಕಡಿವಾಣ ಹಾಕುತ್ತೇವಲ್ಲಾ; ಆಗ ಅವುಗಳ ದೇಹವನ್ನೆಲ್ಲಾ ಸ್ವಾಧೀನ ಪಡಿಸಿಕೊಳ್ಳಬಹುದು. ಇದೇ ನಿಯಮ ಹಡಗುಗಳಿಗೂ ಅನ್ವಯಿಸುತ್ತದೆ. ಹಡಗು ಬಹಳ ದೊಡ್ಡದಾಗಿರುತ್ತದೆ ಮತ್ತು ಬಲವಾದ ಗಾಳಿಯು ಅದನ್ನು ತಳ್ಳಿಕೊಂಡು ಹೋಗುತ್ತದೆ. ಆದರೆ ಒಂದು ಸಣ್ಣ ಚುಕ್ಕಾಣಿಯು ಆ ದೊಡ್ಡ ಹಡಗನ್ನು ನಿಯಂತ್ರಿಸುತ್ತದೆ. ಚುಕ್ಕಾಣಿಯನ್ನು ಹತೋಟಿಯಲ್ಲಿ ಇಟ್ಟುಕೊಂಡಿರುವವನು ಹಡಗು ಹೋಗಬೇಕಾದ ಮಾರ್ಗವನ್ನು ತೀರ್ಮಾನಿಸುತ್ತಾನೆ. ಅವನ ಅಪೇಕ್ಷೆಯಂತೇ ಹಡಗು ಹೋಗುತ್ತದೆ. ನಮ್ಮ ನಾಲಿಗೆಯೂ ಅದರಂತೆಯೆ. ಅದು ದೇಹದ ಒಂದು ಸಣ್ಣ ಭಾಗವಾದರೂ, ದೊಡ್ಡ ಕಾರ್ಯಗಳನ್ನು ಕೊಚ್ಚಿಕೊಳ್ಳುತ್ತದೆ.

ಒಂದು ಚಿಕ್ಕ ಬೆಂಕಿಯ ಕಿಡಿಯು ದೊಡ್ಡ ಕಾಡ್ಗಿಚ್ಚಿಗೆ ಕಾರಣವಾಗುತ್ತದೆ. ನಾಲಿಗೆಯು ಬೆಂಕಿಯ ಕಿಡಿಯಂತೆ ನಮ್ಮ ದೇಹದ ಭಾಗಗಳಲ್ಲಿ ಅದು ಕೆಟ್ಟ ಲೋಕದಂತಿದೆ. ಹೇಗೆಂದರೆ, ನಾಲಿಗೆಯು ನಮ್ಮ ದೇಹದಲ್ಲೆಲ್ಲಾ ಕೆಟ್ಟತನವನ್ನು ಹರಡುತ್ತದೆ. ನಮ್ಮ ಜೀವಿತದ ಮೇಲೆಲ್ಲಾ ಪ್ರಭಾವ ಬೀರುವ ಬೆಂಕಿಯನ್ನು ಅದು ನರಕದಿಂದ ಪಡೆದು ಹೊತ್ತಿಸುತ್ತದೆ.

ಜನರು ಎಲ್ಲಾ ವಿಧವಾದ ಕಾಡುಮೃಗ, ಪಕ್ಷಿ, ಸರ್ಪ, ಮೀನುಗಳನ್ನು ಹತೋಟಿಗೆ ತರುತ್ತಾರೆ. ಜನರು ಈಗಾಗಲೇ ಇವುಗಳನ್ನು ಹತೋಟಿಗೆ ತಂದಿದ್ದಾರೆ. ಆದರೆ ಯಾರೂ ನಾಲಿಗೆಯನ್ನು ಹತೋಟಿಗೆ ತಂದಿಲ್ಲ. ಅದು ಕ್ರೂರವಾದದ್ದೂ ಕೆಟ್ಟದ್ದೂ ಆಗಿದೆ. ಅದು ಮರಣಕರವಾದ ವಿಷವನ್ನು ತುಂಬಿಕೊಂಡಿದೆ. ನಮ್ಮ ಪ್ರಭುವನ್ನು ಮತ್ತು ತಂದೆಯನ್ನು (ದೇವರು) ಸ್ತುತಿಸಲು ನಮ್ಮ ನಾಲಿಗೆಯನ್ನು ಬಳಸುತ್ತೇವೆ; ಆದರೆ ಅದರಿಂದಲೇ ಜನರನ್ನು ಶಪಿಸುತ್ತೇವೆ. ದೇವರು ಆ ಜನರನ್ನೂ ತನ್ನ ಹೋಲಿಕೆಗನುಸಾರವಾಗಿ ಸೃಷ್ಟಿಸಿದ್ದಾನೆ. 10 ಹೊಗಳಿಕೆ ಮತ್ತು ತೆಗಳಿಕೆಗಳೆರಡೂ ಒಂದೇ ಬಾಯಿಂದ ಬರುತ್ತವೆ! ನನ್ನ ಸಹೋದರ ಸಹೋದರಿಯರೇ, ಇದು ಸಂಭವಿಸಲೇಬಾರದು. 11 ಸಿಹಿಯಾದ ನೀರು ಮತ್ತು ಕಹಿಯಾದ ನೀರು ಒಂದೇ ಬುಗ್ಗೆಯಿಂದ ಹರಿಯುತ್ತವೆಯೋ? ಇಲ್ಲ! 12 ನನ್ನ ಸಹೋದರ ಸಹೋದರಿಯರೇ, ಅಂಜೂರದ ಮರವು ಆಲಿವ್ ಕಾಯಿಗಳನ್ನು ಬಿಡುವುದೇ? ಇಲ್ಲ! ದ್ರಾಕ್ಷಿಬಳ್ಳಿಯು ಅಂಜೂರದ ಹಣ್ಣನ್ನು ಬಿಡುವುದೇ? ಇಲ್ಲ! ಉಪ್ಪು ನೀರಿನಿಂದ ತುಂಬಿದ ಬಾವಿಯು ಸಿಹಿ ನೀರನ್ನು ಕೊಡುವುದಿಲ್ಲ.

ನಿಜವಾದ ಜ್ಞಾನ

13 ನಿಮ್ಮಲ್ಲಿ ಜ್ಞಾನವಂತರಾಗಲಿ ಬದ್ಧಿವಂತರಾಗಲಿ ಇದ್ದಾರೋ? ಅಂಥವನು ತನ್ನ ಜ್ಞಾನವನ್ನು ಯೋಗ್ಯವಾಗಿ ಬದುಕುವುದರ ಮೂಲಕ ತೋರ್ಪಡಿಸಲಿ. ಅವನು ಒಳ್ಳೆಯ ಕಾರ್ಯಗಳನ್ನು ದೀನತೆಯಿಂದ ಮಾಡಲಿ. ಜ್ಞಾನಿಯಾದವನು ಕೊಚ್ಚಿಕೊಳ್ಳುವುದಿಲ್ಲ. 14 ನೀವು ಸ್ವಾರ್ಥಿಗಳೂ ತೀಕ್ಷ್ಣವಾದ ಮತ್ಸರವನ್ನು ಹೃದಯದಲ್ಲಿ ಹೊಂದಿರುವವರೂ ಆಗಿದ್ದರೆ, ನೀವು ಕೊಚ್ಚಿಕೊಳ್ಳುವುದರಲ್ಲಿ ಅರ್ಥವೇ ಇಲ್ಲ. ಏಕೆಂದರೆ ಅದು ಕೇವಲ ಸುಳ್ಳಷ್ಟೇ. 15 ಇಂಥ “ಜ್ಞಾನ”ವು ದೇವರಿಂದ ಬರದೆ ಲೋಕದಿಂದ ಬರುತ್ತದೆ. ಅದು ಆತ್ಮ ಸಂಬಂಧವಾದುದಲ್ಲ. ಅದು ದೆವ್ವಗಳಿಂದ ಬಂದುದು. 16 ಹೊಟ್ಟೆಕಿಚ್ಚು ಮತ್ತು ಸ್ವಾರ್ಥತೆಗಳು ಎಲ್ಲಿರುವವೋ ಅಲ್ಲಿ ಗಲಿಬಿಲಿಯೂ ಎಲ್ಲಾ ಬಗೆಯ ನೀಚತನಗಳೂ ಇರುತ್ತವೆ. 17 ಆದರೆ ದೇವರಿಂದ ಬರುವ ಜ್ಞಾನವು ಹೀಗಿರುತ್ತದೆ: ಮೊದಲನೆಯದಾಗಿ ಅದು ಪರಿಶುದ್ಧವಾದದ್ದು. ಅದು ಶಾಂತಿದಾಯಕವಾದದ್ದು, ಸಾತ್ವಿಕವಾದದ್ದು ಮತ್ತು ಸುಲಭವಾಗಿ ಮೆಚ್ಚಿಕೊಳ್ಳುವಂಥದ್ದು. ಈ ಜ್ಞಾನವು ತೊಂದರೆಯಲ್ಲಿರುವ ಜನರಿಗೆ ಸಹಾಯ ಮಾಡಲು ಮತ್ತು ಇತರ ಜನರಿಗೆ ಒಳ್ಳೆಯದನ್ನು ಮಾಡಲು ಯಾವಾಗಲೂ ಸಿದ್ಧವಾಗಿರುತ್ತದೆ. ಈ ಜ್ಞಾನವು ಯಾವಾಗಲೂ ನ್ಯಾಯವಾದದ್ದು ಮತ್ತು ಯಥಾರ್ಥವಾದದ್ದು. 18 ಶಾಂತಿ ಸ್ಥಾಪಿಸುವುದಕ್ಕಾಗಿ ಸಮಾಧಾನಕರವಾದ ರೀತಿಯಲ್ಲಿ ಕಾರ್ಯ ಮಾಡುವವರು ಯೋಗ್ಯವಾದ ಬದುಕಿನಿಂದ ಬರುವ ಉತ್ತಮ ಫಲಗಳನ್ನು ಪಡೆಯುತ್ತಾರೆ.

ಒಬದ್ಯ

ಎದೋಮ್ ಶಿಕ್ಷಿಸಲ್ಪಡುವದು

ಒಬದ್ಯನಿಗೆ ಆದ ದೈವದರ್ಶನ. ನನ್ನ ಒಡೆಯನಾದ ಯೆಹೋವನು ಎದೋಮಿನ ಬಗ್ಗೆ ಹೀಗೆ ಹೇಳುತ್ತಾನೆ:

ದೇವರಾದ ಯೆಹೋವನಿಂದ ನಾವು ಒಂದು ಸುದ್ಧಿ ಕೇಳಿದೆವು.
    ಒಬ್ಬ ಸಂದೇಶದೂತನು ಜನಾಂಗಗಳ ಕಡೆಗೆ ಕಳುಹಿಸಲ್ಪಟ್ಟನು.
ಅವನು ಹೇಳಿದ್ದೇನೆಂದರೆ, “ಬನ್ನಿ, ನಾವು ಎದೋಮಿಗೆ ವಿರುದ್ಧವಾಗಿ ಯುದ್ಧಮಾಡೋಣ.”

ಯೆಹೋವನು ಎದೋಮಿನೊಂದಿಗೆ ಮಾತನಾಡುತ್ತಾನೆ

“ಎದೋಮೇ, ನಿನ್ನನ್ನು ನಾನು ಅತ್ಯಂತ ಚಿಕ್ಕದಾದ ಜನಾಂಗವನ್ನಾಗಿ ಮಾಡುವೆನು.
    ಎಲ್ಲರೂ ನಿನ್ನನ್ನು ಹೆಚ್ಚಾಗಿ ಹಗೆ ಮಾಡುವರು.
ನಿನ್ನ ಹೆಚ್ಚಳಿಕೆಯು ನಿನ್ನನ್ನು ಮರುಳುಗೊಳಿಸಿತು.
    ನೀನು ಎತ್ತರವಾದ ಬೆಟ್ಟದಂಚಿನ ಗುಹೆಗಳಲ್ಲಿ ವಾಸಿಸುವೆ.
    ನಿನ್ನ ಮನೆಯು ಪರ್ವತಗಳಲ್ಲಿದೆ.
ಆದ್ದರಿಂದ ನೀನು ನಿನ್ನಲ್ಲಿ ಹೇಳಿಕೊಳ್ಳುವದೇನೆಂದರೆ,
    ‘ಯಾರೂ ನನ್ನನ್ನು ಕೆಳಗೆ ಭೂಮಿಯ ಮೇಲೆ ಇಳಿಸಲಾರರು.’”

ಎದೋಮನು ಅದೋಗತಿಗೆ ಸೇರುವನು

ದೇವರಾದ ಯೆಹೋವನು ಹೀಗೆ ಹೇಳುತ್ತಾನೆ:
“ನೀನು ಹದ್ದಿನಂತೆ ಉನ್ನತದಲ್ಲಿ ಹಾರಾಡಿದರೂ,
    ನಕ್ಷತ್ರಗಳಲ್ಲಿ ಗೂಡುಕಟ್ಟಿದರೂ ಸಹ
    ಅಲ್ಲಿಂದಲೂ ನಾನು ನಿನ್ನನ್ನು ಕೆಳಕ್ಕೆ ತರುವೆನು.
ನೀನು ಸಂಪೂರ್ಣವಾಗಿ ನಾಶವಾಗುವೆ.
    ಕಳ್ಳರು ನಿನ್ನ ಬಳಿಗೆ ಬರುವರು,
ದರೋಡೆಗಾರರು ರಾತ್ರಿವೇಳೆ ಬರುವರು.
    ಅವರು ತಮಗೆ ಇಷ್ಟಬಂದದ್ದನ್ನೆಲ್ಲಾ ದೋಚುವರು.
ನಿನ್ನ ತೋಟದಲ್ಲಿ ಕೆಲಸಗಾರರು ದ್ರಾಕ್ಷೆಯನ್ನು ಕೊಯ್ಯುವಾಗ
    ಕೆಲವೊಂದನ್ನು ಬಿಟ್ಟುಬಿಡುವರು.
ಆದರೆ ವೈರಿಯು ಏಸಾವಿನ ಗುಪ್ತನಿಧಿಗಾಗಿ ಹುಡುಕುವರು;
    ಅವರು ಎಲ್ಲವನ್ನು ಕಂಡುಹಿಡಿಯುವರು.
ನಿನ್ನ ಸ್ನೇಹಿತರಂತಿದ್ದ ಜನರೆಲ್ಲರೂ ಸೇರಿ
    ನಿನ್ನನ್ನು ನಿನ್ನ ದೇಶದಿಂದ ಹೊರಗಟ್ಟುವರು.
ನಿನ್ನೊಡನೆ ಸಮಾಧಾನದಲ್ಲಿದ್ದ ಜನರು
    ನಿನ್ನನ್ನು ಮೋಸಪಡಿಸಿ ಸೋಲಿಸುವರು.
ನಿನ್ನೊಂದಿಗೆ ಯುದ್ಧದಲ್ಲಿ ಹೋರಾಡಿದವನು
    ನಿನ್ನನ್ನು ಉರುಲಿನಲ್ಲಿ ಸಿಕ್ಕಿಸುವನು.
‘ಆದರೆ ಅದು ಅವನಿಗೆ ತಿಳಿಯುವುದೇ ಇಲ್ಲ’” ಎಂದು ಅನ್ನುವರು.

ಯೆಹೋವನು ಹೇಳುವುದೇನೆಂದರೆ, “ಆ ದಿವಸದಲ್ಲಿ
    ಎದೋಮಿನಲ್ಲಿರುವ ಬುದ್ಧಿವಂತರನ್ನು ನಾಶಮಾಡುವೆನು.
    ಏಸಾವಿನ ಪರ್ವತದಲ್ಲಿರುವ ಜಾಣರನ್ನು ನಾನು ನಾಶಮಾಡುವೆನು.
ತೇಮಾನನೇ, ನಿನ್ನ ಯುದ್ಧವೀರರು ಭಯಪಡುವರು.
    ಏಸಾವಿನ ಪರ್ವತದಲ್ಲಿರುವ ಪ್ರತಿಯೊಬ್ಬನು ನಾಶವಾಗುವನು.
    ಎಷ್ಟೋ ಮಂದಿ ಹತರಾಗುವರು.
10 ನೀನು ನಾಚಿಕೆಯಿಂದ ಮುಚ್ಚಲ್ಪಡುವೆ, ನಿರಂತರಕ್ಕೂ ನಾಶವಾಗುವೆ.
    ಯಾಕೆಂದರೆ ನೀನು ನಿನ್ನ ಸಹೋದರನಾದ ಯಾಕೋಬನೊಂದಿಗೆ ಕ್ರೂರವಾಗಿ ನಡೆದುಕೊಂಡೆ.
11 ನೀನು ಇಸ್ರೇಲರ ವೈರಿಯೊಂದಿಗೆ ಸೇರಿಕೊಂಡೆ.
    ಅನ್ಯರು ಇಸ್ರೇಲಿನ ಐಶ್ವರ್ಯವನ್ನು ಎತ್ತಿಕೊಂಡು ಹೋದರು.
ಪರದೇಶಿಗಳು ಇಸ್ರೇಲ್ ಪಟ್ಟಣದ ಬಾಗಿಲನ್ನು ಪ್ರವೇಶಿಸಿದರು.
    ಆ ಪರದೇಶಿಗಳು ಜೆರುಸಲೇಮಿನ ಯಾವ ಭಾಗ ತಮಗೆ ದೊರಕಬೇಕೆಂದು ಚೀಟುಹಾಕಿದರು.
    ಆಗ ನೀನು ನಿನ್ನ ಪಾಲನ್ನು ತೆಗೆದುಕೊಳ್ಳಲು ಅವರೊಂದಿಗಿದ್ದೆ.
12 ನಿನ್ನ ಸಹೋದರನ ಸಂಕಟದಲ್ಲಿ ನೀನು ಹರ್ಷಿಸಿದೆ.
    ನೀನು ಹಾಗೆ ಮಾಡಬಾರದಾಗಿತ್ತು.
ಯೆಹೂದವನ್ನು ನಾಶಮಾಡುವಾಗ ನೀನು ಸಂತೋಷಪಟ್ಟೆ.
    ನೀನು ಹಾಗೆ ಮಾಡಬಾರದಾಗಿತ್ತು.
ನೀನು ಅವರ ಸಂಕಟ ಕಾಲದಲ್ಲಿ ಕೊಚ್ಚಿಕೊಂಡೆ.
    ನೀನು ಹಾಗೆ ಮಾಡಬಾರದಾಗಿತ್ತು.
13 ನನ್ನ ಜನರ ನಗರದ ಬಾಗಿಲನ್ನು ನೀನು ಪ್ರವೇಶಿಸಿ ಅವರ ತೊಂದರೆಗಳನ್ನು ನೋಡಿ ನೀನು ಹಾಸ್ಯ ಮಾಡಿದೆ.
    ನೀನು ಹಾಗೆ ಮಾಡಬಾರದಾಗಿತ್ತು.
ಅವರು ಸಂಕಟಪಡುತ್ತಿರುವಾಗ ನೀನು ಅವರ ಐಶ್ವರ್ಯವನ್ನು ಸೂರೆಮಾಡಿದೆ.
    ನೀನು ಹಾಗೆ ಮಾಡಬಾರದಿತ್ತು.
14 ದಾರಿಯ ಚೌಕದಲ್ಲಿ ನೀನು ನಿಂತುಕೊಂಡು ತಪ್ಪಿಸಿಕೊಂಡು ಹೋಗುವವರನ್ನು ಸಾಯಿಸಿದೆ.
    ನೀನು ಹಾಗೆ ಮಾಡಬಾರದಾಗಿತ್ತು.
    ತಪ್ಪಿಸಿಕೊಂಡು ಹೋದವರನ್ನು ನೀನು ಸೆರೆಹಿಡಿದೆ.
    ನೀನು ಹಾಗೆ ಮಾಡಬಾರದಾಗಿತ್ತು.
15 ಎಲ್ಲಾ ಜನಾಂಗಗಳವರಿಗೆ
    ಯೆಹೋವನ ದಿನವು ಬೇಗನೇ ಬರುವದು.
ನೀನು ಬೇರೆಯವರಿಗೆ ಮಾಡಿದ ದುಷ್ಕೃತ್ಯಗಳನ್ನು ಅವರು ನಿನ್ನ ಮೇಲೆಯೇ ನಡೆಸುವರು.
    ಅದೇ ದುಷ್ಕೃತ್ಯಗಳು ನಿನ್ನ ತಲೆ ಮೇಲೆ ಬೀಳುವವು.
16 ಯಾಕೆಂದರೆ ನನ್ನ ಪರಿಶುದ್ಧ ಪರ್ವತದಲ್ಲಿ ರಕ್ತವನ್ನು ಸುರಿಸಿದೆ.
    ನೀನು ಹುಟ್ಟಲೇ ಇಲ್ಲ ಎಂಬುದಾಗಿ ಅನಿಸುವದು.
ಆದ್ದರಿಂದ ಇತರ ಜನಾಂಗಗಳು ನಿನ್ನ ರಕ್ತವನ್ನು ಸುರಿಸುತ್ತವೆ.
    ನೀನು ಕೊನೆಗೊಳ್ಳುವೆ.
17 ಆದರೆ ಚೀಯೋನ್ ಬೆಟ್ಟದಲ್ಲಿ ಅಳಿದುಳಿದವರು ಇರುವರು.
    ಅವರು ನನ್ನ ವಿಶೇಷ ಜನರಾಗಿರುವರು.
ಯಾಕೋಬನ ಜನರು ತಮಗೆ ಸೇರಿರುವದನ್ನು
    ಹಿಂದಕ್ಕೆ ಪಡೆದುಕೊಳ್ಳುವರು.
18 ಯಾಕೋಬನ ಸಂತತಿಯವರು ಬೆಂಕಿಯಂತಿರುವರು.
    ಯೋಸೇಫನ ಜನಾಂಗವು ಬೆಂಕಿಯ ನಾಲಗೆಗಳಂತೆ ಇರುವರು.
ಆದರೆ ಏಸಾವಿನ ಜನಾಂಗ ಸುಟ್ಟ ಬೂದಿಯಂತಿರುವರು.
    ಯೆಹೂದದ ಜನರು ಎದೋಮನನ್ನು ಸುಟ್ಟುಹಾಕುವರು.
    ಯೆಹೂದದ ಜನರು ಎದೋಮನನ್ನು ನಾಶಮಾಡುವರು.
ಆಗ ಏಸಾವಿನ ಜನರಲ್ಲಿ ಯಾರೂ ಉಳಿಯುವದಿಲ್ಲ.”
    ಯಾಕೆಂದರೆ ಇದು ದೇವರಾದ ಯೆಹೋವನ ಮಾತು.
19 ಆಗ ನೆಗೆವಿನ ಜನರು ಏಸಾವಿನ ಪರ್ವತಗಳಲ್ಲಿ ವಾಸಿಸುವರು.
    ಬೆಟ್ಟದ ಕೆಳಗೆ ವಾಸಿಸುವವರು ಫಿಲಿಷ್ಟಿಯರ ದೇಶವನ್ನು ಆಕ್ರಮಿಸುವರು.
ಎಫ್ರಾಯೀಮ್ ಮತ್ತು ಸಮಾರ್ಯದ ಜನರು ಜೀವಿಸುವರು.
    ಗಿಲ್ಯಾದ್ ಪ್ರಾಂತ್ಯವು ಬೆನ್ಯಾಮೀನರಿಗೆ ಸೇರುವದು.
20 ಸೆರೆ ಒಯ್ಯಲ್ಪಟ್ಟ ಇಸ್ರೇಲರು ಚಾರೆಪ್ತದವರೆಗೆ ಕಾನಾನ್ ದೇಶವನ್ನು ವಶಪಡಿಸಿಕೊಳ್ಳುವರು.
    ಸೆಫಾರದಿನಲ್ಲಿ ಸೆರೆಯಾಗಿರುವ ಜೆರುಸಲೇಮಿನವರು ನೆಗೆವಿನ ಪಟ್ಟಣಗಳನ್ನು ವಶಪಡಿಸಿಕೊಳ್ಳುವರು.
21 ವಿಜಯಿಗಳು ಚೀಯೋನ್ ಬೆಟ್ಟವನ್ನೇರಿ
    ಏಸಾವಿನ ಪರ್ವತಗಳಲ್ಲಿ ವಾಸಿಸುವ ಜನರನ್ನಾಳುವರು.
    ಆಗ ಸಾಮ್ರಾಜ್ಯವು ಯೆಹೋವನಿಗೆ ಸೇರುವುದು.

ಲೂಕ 5

ಯೇಸುವನ್ನು ಹಿಂಬಾಲಿಸಿದ ಪೇತ್ರ, ಯಾಕೋಬ, ಯೋಹಾನ

(ಮತ್ತಾಯ 4:18-22; ಮಾರ್ಕ 1:16-20)

ಯೇಸು ಗೆನೆಸರೇತ್ (ಗಲಿಲಾಯ) ಸರೋವರದ ಬಳಿ ನಿಂತುಕೊಂಡಿದ್ದಾಗ, ದೇವರ ವಾಕ್ಯವನ್ನು ಕೇಳಲು ಅನೇಕ ಜನರು ನೂಕಾಡುತ್ತಾ ಆತನ ಸುತ್ತಲೂ ಸೇರಿಬಂದರು. ಸರೋವರದ ದಡದಲ್ಲಿ ನಿಂತಿದ್ದ ಎರಡು ದೋಣಿಗಳನ್ನು ಯೇಸು ನೋಡಿದನು. ಬೆಸ್ತರು ತಮ್ಮ ಬಲೆಗಳನ್ನು ತೊಳೆಯುತ್ತಿದ್ದರು. ಯೇಸು ಸೀಮೋನನ ದೋಣಿಯಲ್ಲಿ ಹತ್ತಿ ಕುಳಿತುಕೊಂಡು ದೋಣಿಯನ್ನು ದಡದಿಂದ ಸ್ವಲ್ಪದೂರಕ್ಕೆ ನೂಕಬೇಕೆಂದು ಸೀಮೋನನಿಗೆ ಹೇಳಿದನು.

ಉಪದೇಶ ಮಾಡಿದಮೇಲೆ ಯೇಸು ಸೀಮೋನನಿಗೆ, “ದೋಣಿಯನ್ನು ಆಳವಾದ ನೀರಿನ ಸ್ಥಳಕ್ಕೆ ನಡೆಸಿ, ಮೀನುಹಿಡಿಯಲು ನಿಮ್ಮ ಬಲೆಗಳನ್ನು ನೀರಿನಲ್ಲಿ ಹಾಕಿರಿ” ಎಂದು ಹೇಳಿದನು.

ಸೀಮೋನನು, “ಗುರುವೇ, ನಾವು ರಾತ್ರಿಯೆಲ್ಲಾ ಪ್ರಯಾಸಪಟ್ಟರೂ ಒಂದು ಮೀನೂ ಸಿಕ್ಕಲಿಲ್ಲ. ಆದರೆ, ನೀನು ಹೇಳಿದ್ದರಿಂದ ಬೀಸುತ್ತೇವೆ” ಎಂದನು. ಬೆಸ್ತರು ತಮ್ಮ ಬಲೆಗಳನ್ನು ನೀರಿನೊಳಗೆ ಬೀಸಿದಾಗ, ಅವರ ಬಲೆಗಳು ಹರಿದುಹೋಗುವಷ್ಟು ಮೀನುಗಳು ರಾಶಿರಾಶಿಯಾಗಿ ಬಲೆಗಳಲ್ಲಿ ತುಂಬಿಕೊಂಡವು. ಆಗ ಅವರು ಮತ್ತೊಂದು ದೋಣಿಯಲ್ಲಿದ್ದ ತಮ್ಮ ಸ್ನೇಹಿತರಿಗೆ ಸನ್ನೆಮಾಡಿ ಸಹಾಯಕ್ಕಾಗಿ ಕರೆದುಕೊಂಡರು. ಅವರೆಲ್ಲರೂ ಮೀನುಗಳನ್ನು ತುಂಬಿಸಲು ದೋಣಿಗಳೆರಡೂ ಮುಳುಗುವಂತಾದವು.

8-9 ಇದನ್ನು ಕಂಡ ಬೆಸ್ತರಿಗೆಲ್ಲಾ ವಿಸ್ಮಯವಾಯಿತು. ಸೀಮೋನ್ ಪೇತ್ರನಂತೂ ಯೇಸುವಿನ ಮುಂದೆ ಮೊಣಕಾಲೂರಿ “ಪ್ರಭುವೇ ನನ್ನನ್ನು ಬಿಟ್ಟುಹೋಗು, ನಾನು ಪಾಪಿಯಾಗಿದ್ದೇನೆ!” ಎಂದನು. 10 ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರೂ ಆಶ್ಚರ್ಯಪಟ್ಟರು. (ಇವರಿಬ್ಬರೂ ಸೀಮೋನನ ಪಾಲುಗಾರರಾಗಿದ್ದರು.)

ಯೇಸು ಸೀಮೋನನಿಗೆ, “ಭಯಪಡಬೇಡ. ಇಂದಿನಿಂದ ನೀನು ಮೀನನ್ನು ಹಿಡಿಯದೆ, ಮನುಷ್ಯರನ್ನು ಒಟ್ಟುಗೂಡಿಸಲು ದುಡಿಯುವೆ!” ಎಂದು ಹೇಳಿದನು.

11 ಅವರು ತಮ್ಮ ದೋಣಿಗಳನ್ನು ದಡಕ್ಕೆ ಸಾಗಿಸಿದ ಮೇಲೆ ಎಲ್ಲವನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು.

ಯೇಸುವಿನಿಂದ ಗುಣಹೊಂದಿದ ಕುಷ್ಠರೋಗಿ

(ಮತ್ತಾಯ 8:1-4; ಮಾರ್ಕ 1:40-45)

12 ಒಮ್ಮೆ ಯೇಸು ಒಂದು ಊರಿನಲ್ಲಿದ್ದಾಗ ಕುಷ್ಠರೋಗಿಯೊಬ್ಬನು ಆತನನ್ನು ಕಂಡು, ಆತನ ಮುಂದೆ ಅಡ್ಡಬಿದ್ದು, “ಪ್ರಭುವೇ, ನೀನು ಮನಸ್ಸು ಮಾಡಿದರೆ ನನ್ನನ್ನು ಗುಣಪಡಿಸಬಲ್ಲೆ ಎಂದು ನನಗೆ ಗೊತ್ತಿದೆ” ಎಂದು ಬೇಡಿಕೊಂಡನು.

13 ಯೇಸು, “ನಿನ್ನನ್ನು ಗುಣಪಡಿಸಲು ನನಗೆ ಮನಸ್ಸುಂಟು. ನಿನಗೆ ಗುಣವಾಗಲಿ!” ಎಂದು ಹೇಳಿ ಅವನನ್ನು ಮುಟ್ಟಿದನು. ಕೂಡಲೆ ಅವನಿಗೆ ಗುಣವಾಯಿತು. 14 ಯೇಸು ಅವನಿಗೆ, “ನಿನಗೆ ಹೇಗೆ ಗುಣವಾಯಿತು ಎಂಬುದರ ಬಗ್ಗೆ ಯಾರಿಗೂ ಹೇಳದೆ ಯಾಜಕನ ಬಳಿಗೆ ಹೋಗಿ ನಿನ್ನ ಮೈಯನ್ನು ತೋರಿಸಿ ಮೋಶೆಯ ನಿಯಮಗಳಿಗನುಸಾರವಾಗಿ ಕಾಣಿಕೆಯನ್ನು ದೇವರಿಗೆ ಸಮರ್ಪಿಸು. ನಿನಗೆ ವಾಸಿಯಾಯಿತೆಂಬುದಕ್ಕೆ ಇದೇ ಜನರಿಗೆಲ್ಲಾ ಸಾಕ್ಷಿಯಾಗಿರುವುದು” ಎಂದು ಹೇಳಿದನು. ಆದರೆ ಯೇಸುವಿನ ಸುದ್ದಿಯು ಹೆಚ್ಚೆಚ್ಚಾಗಿ ಹಬ್ಬಿತು.[a]

15 ಅನೇಕ ಜನರು ಆತನ ಬೋಧನೆಗಳನ್ನು ಕೇಳುವುದಕ್ಕೂ ತಮ್ಮ ಕಾಯಿಲೆಗಳನ್ನು ವಾಸಿಮಾಡಿಸಿಕೊಳ್ಳುವುದಕ್ಕೂ ಬಂದರು. 16 ಯೇಸು ಆಗಾಗ್ಗೆ ನಿರ್ಜನ ಸ್ಥಳಗಳಿಗೆ ಹೋಗಿ ಪ್ರಾರ್ಥನೆ ಮಾಡುತ್ತಿದ್ದನು.

ಯೇಸುವಿನಿಂದ ಗುಣಹೊಂದಿದ ಪಾರ್ಶ್ವವಾಯು ರೋಗಿ

(ಮತ್ತಾಯ 9:1-8; ಮಾರ್ಕ 2:1-12)

17 ಒಂದು ದಿನ ಯೇಸು ಜನರಿಗೆ ಬೋಧಿಸುತ್ತಿದ್ದನು. ಫರಿಸಾಯರು ಮತ್ತು ಧರ್ಮೋಪದೇಶಕರು ಸಹ ಅಲ್ಲಿ ಕುಳಿತುಕೊಂಡಿದ್ದರು. ಅವರು, ಗಲಿಲಾಯದಿಂದಲೂ ಜುದೇಯ ಪ್ರಾಂತ್ಯದ ಊರುಗಳಿಂದಲೂ ಜೆರುಸಲೇಮಿನಿಂದಲೂ ಬಂದಿದ್ದರು. ರೋಗಿಗಳನ್ನು ಗುಣಪಡಿಸಲು ಪ್ರಭುವಿನ ಶಕ್ತಿಯು ಆತನಲ್ಲಿತ್ತು. 18 ಒಬ್ಬ ಪಾರ್ಶ್ವವಾಯು ರೋಗಿ ಅಲ್ಲಿದ್ದನು. ಒಂದು ಚಿಕ್ಕ ಹಾಸಿಗೆಯಲ್ಲಿ ಅವನನ್ನು ಕೆಲವು ಮಂದಿ ಗಂಡಸರು ಹೊತ್ತುಕೊಂಡು ಬಂದು ಯೇಸುವಿನ ಮುಂದೆ ಇಡಲು ಪ್ರಯತ್ನಿಸಿದರು. 19 ಆದರೆ ಅಲ್ಲಿ ಬಹಳ ಜನ ಇದ್ದುದರಿಂದ ಯೇಸುವಿನ ಬಳಿಗೆ ಹೋಗಲು ಅವರಿಗೆ ಸಾಧ್ಯವಾಗಲಿಲ್ಲ. ಆದ್ದರಿಂದ ಅವರು ಮನೆಯ ಮೇಲೆ ಹತ್ತಿ ಹೆಂಚುಗಳನ್ನು ತೆಗೆದು ಪಾರ್ಶ್ವವಾಯು ರೋಗಿಯನ್ನು ಹಾಸಿಗೆಯ ಸಹಿತ ಯೇಸುವಿನ ಮುಂದೆ ಇಳಿಸಿದರು. 20 ಈ ಜನರ ನಂಬಿಕೆಯನ್ನು ನೋಡಿ ಯೇಸು ಆ ರೋಗಿಗೆ, “ಸ್ನೇಹಿತನೇ ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು.

21 ಯೆಹೂದ್ಯ ಧರ್ಮೋಪದೇಶಕರು ಮತ್ತು ಫರಿಸಾಯರು, “ಈ ಮನುಷ್ಯನು (ಯೇಸು) ಯಾರು? ಈತನು ದೇವರಿಗೆ ವಿರುದ್ಧವಾದ ಸಂಗತಿಗಳನ್ನು ಹೇಳುತ್ತಾನಲ್ಲಾ! ದೇವರೊಬ್ಬನೇ ಪಾಪಗಳನ್ನು ಕ್ಷಮಿಸಬಲ್ಲನು” ಎಂದು ತಮ್ಮತಮ್ಮೊಳಗೆ ಯೋಚಿಸಿದರು.

22 ಆದರೆ ಅವರ ಆಲೋಚನೆಯನ್ನು ತಿಳಿದಿದ್ದ ಯೇಸು ಅವರಿಗೆ, “ನೀವು ಆ ರೀತಿ ಯೋಚಿಸುವುದೇಕೆ? 23 ಯಾವುದು ಸುಲಭ? ‘ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ’ ಎಂದು ಪಾರ್ಶ್ವವಾಯು ರೋಗಿಗೆ ಹೇಳುವುದೋ? ಅಥವಾ ‘ಎದ್ದುನಿಂತು ನಡೆ’ ಎನ್ನುವುದೋ? 24 ಆದರೆ ಮನುಷ್ಯಕುಮಾರನಿಗೆ[b] ಭೂಲೋಕದಲ್ಲಿ ಪಾಪಗಳನ್ನು ಕ್ಷಮಿಸುವ ಅಧಿಕಾರ ಉಂಟೆಂಬುದು ನಿಮಗೆ ಖಚಿತವಾಗಬೇಕು” ಎಂದು ಹೇಳಿ, ಪಾರ್ಶ್ವವಾಯು ರೋಗಿಗೆ, “ಏಳು! ನಿನ್ನ ಹಾಸಿಗೆಯನ್ನು ಹೊತ್ತುಕೊಂಡು ಮನೆಗೆ ಹೋಗು!” ಎಂದು ಹೇಳಿದನು.

25 ಆ ಕೂಡಲೇ ಅವನು ಜನರು ಮುಂದೆ ಎದ್ದುನಿಂತು, ತನ್ನ ಹಾಸಿಗೆಯನ್ನು ಹೊತ್ತುಕೊಂಡು ದೇವರನ್ನು ಸ್ತುತಿಸುತ್ತಾ ಮನೆಗೆ ಹೋದನು. 26 ಜನರೆಲ್ಲರೂ ಬಹಳ ಆಶ್ಚರ್ಯಪಟ್ಟು ದೇವರನ್ನು ಸ್ತುತಿಸತೊಡಗಿದರು ಮತ್ತು ದೇವರಲ್ಲಿ ಭಯಭಕ್ತಿಯುಳ್ಳವರಾಗಿ, “ಈ ದಿನ ನಾವು ಆಶ್ಚರ್ಯಕರವಾದ ಸಂಗತಿಯನ್ನು ಕಂಡೆವು!” ಎಂದರು.

ಯೇಸುವನ್ನು ಹಿಂಬಾಲಿಸಿದ ಲೇವಿ

(ಮತ್ತಾಯ 9:9-13; ಮಾರ್ಕ 2:13-17)

27 ಬಳಿಕ, ಯೇಸು ಅಲ್ಲಿಂದ ಹೋಗುತ್ತಿರುವಾಗ, ಸುಂಕದಕಟ್ಟೆಯಲ್ಲಿ ಕುಳಿತುಕೊಂಡಿದ್ದ ಒಬ್ಬನನ್ನು ಕಂಡನು. ಅವನ ಹೆಸರು ಲೇವಿ. ಯೇಸು ಅವನಿಗೆ, “ನನ್ನನ್ನು ಹಿಂಬಾಲಿಸು!” ಎಂದು ಹೇಳಿದನು. 28 ಲೇವಿಯು ಎದ್ದು, ಎಲ್ಲವನ್ನೂ ಅಲ್ಲಿಯೇ ಬಿಟ್ಟು ಯೇಸುವನ್ನು ಹಿಂಬಾಲಿಸಿದನು.

29 ಬಳಿಕ ಲೇವಿಯು ಯೇಸುವಿಗೆ ತನ್ನ ಮನೆಯಲ್ಲಿ ಒಂದು ದೊಡ್ಡ ಔತಣವನ್ನು ಏರ್ಪಡಿಸಿದನು. ಅನೇಕ ಸುಂಕವಸೂಲಿಗಾರರು ಮತ್ತು ಇನ್ನಿತರ ಜನರು ಸಹ ಊಟಕ್ಕೆ ಕುಳಿತಿದ್ದರು. 30 ಆದರೆ ಫರಿಸಾಯರು ಮತ್ತು ಧರ್ಮೋಪದೇಶಕರು ಯೇಸುವಿನ ಶಿಷ್ಯರಿಗೆ, “ನೀವು ಸುಂಕದವರೊಡನೆ ಮತ್ತು ಇತರ ಕೆಟ್ಟ ಜನರೊಂದಿಗೆ ಏಕೆ ಊಟಮಾಡುತ್ತೀರಿ ಮತ್ತು ಕುಡಿಯುತ್ತೀರಿ?” ಎಂದು ಆಕ್ಷೇಪಿಸಿದರು.

31 ಯೇಸು ಅವರಿಗೆ, “ವೈದ್ಯನ ಅಗತ್ಯವಿರುವುದು ಆರೋಗ್ಯವಂತರಿಗಲ್ಲ, ಕಾಯಿಲೆಯವರಿಗಷ್ಟೆ. 32 ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರಿಗಿಕೊಳ್ಳಿರಿ ಎಂದು ನೀತಿವಂತರನ್ನು ಕರೆಯಲು ನಾನು ಬಂದವನಲ್ಲ, ಪಾಪಿಗಳನ್ನು ಕರೆಯಲು ಬಂದವನು!” ಎಂದು ಉತ್ತರಿಸಿದನು.

ಉಪವಾಸದ ಕುರಿತು ಯೇಸುವಿನ ಉತ್ತರ

(ಮತ್ತಾಯ 9:14-17; ಮಾರ್ಕ 2:18-22)

33 ಅವರು ಯೇಸುವಿಗೆ, “ಫರಿಸಾಯರ ಹಿಂಬಾಲಕರು ಉಪವಾಸವಿದ್ದು ಪ್ರಾರ್ಥಿಸುತ್ತಾರೆ. ಯೋಹಾನನ ಶಿಷ್ಯರು ಆಗಾಗ್ಗೆ ಉಪವಾಸವಿದ್ದು ಪ್ರಾರ್ಥಿಸುತ್ತಾರೆ. ನಿನ್ನ ಶಿಷ್ಯರಾದರೋ ಯಾವಾಗಲೂ ತಿಂದುಕುಡಿಯುವುದರಲ್ಲೇ ಇದ್ದಾರೆ” ಎಂದು ಟೀಕಿಸಿದರು.

34 ಯೇಸು ಅವರಿಗೆ, “ಮದುವೆಯಲ್ಲಿ ಮದುಮಗನ ಸಂಗಡ ಇರುವ ಅವನ ಸ್ನೇಹಿತರಿಗೆ ನೀವು ಉಪವಾಸಮಾಡಿ ಎಂದು ಹೇಳಲು ಸಾಧ್ಯವಿಲ್ಲ. 35 ಆದರೆ ಮದುಮಗನು ಅವರ ಬಳಿಯಿಂದ ಹೊರಟುಹೋಗುವ ಕಾಲ ಬರುತ್ತದೆ. ಆಗ ಅವನ ಸ್ನೇಹಿತರು ಉಪವಾಸ ಮಾಡುವರು” ಎಂದು ಉತ್ತರಕೊಟ್ಟನು.

36 ಬಳಿಕ ಯೇಸು ಅವರಿಗೆ ಈ ಸಾಮ್ಯವನ್ನು ಹೇಳಿದನು: “ಹಳೆ ಅಂಗಿಗೆ ತೇಪೆ ಹಚ್ಚುವುದಕ್ಕಾಗಿ ಹೊಸ ಅಂಗಿಯಿಂದ ಬಟ್ಟೆಯನ್ನು ಯಾರೂ ಹರಿದುಕೊಳ್ಳುವುದಿಲ್ಲ. ಹಾಗೆ ಮಾಡಿದ್ದೇಯಾದರೆ, ಹೊಸ ಅಂಗಿಯನ್ನು ಕೆಡಿಸಿಕೊಂಡಂತಾಗುತ್ತದೆ. ಅಲ್ಲದೆ ಹೊಸ ಅಂಗಿಯ ಬಟ್ಟೆಯು ಹಳೆ ಅಂಗಿಗೆ ಹೋಲುವುದೂ ಇಲ್ಲ. 37 ಅಂತೆಯೇ ಹೊಸ ದ್ರಾಕ್ಷಾರಸವನ್ನು ಹಳೆಯ ದ್ರಾಕ್ಷಾರಸದ ಚೀಲಗಳಲ್ಲಿ ಯಾರೂ ತುಂಬಿಡುವುದಿಲ್ಲ. ಒಂದುವೇಳೆ ತುಂಬಿದರೆ, ಹೊಸ ದ್ರಾಕ್ಷಾರಸವು ಚೀಲಗಳನ್ನು ಒಡೆದುಹಾಕುವುದರಿಂದ ದ್ರಾಕ್ಷಾರಸವೂ ಚೆಲ್ಲಿಹೋಗುತ್ತದೆ, ಚೀಲಗಳೂ ಹಾಳಾಗುತ್ತವೆ. 38 ಜನರು ಯಾವಾಗಲೂ ಹೊಸ ದ್ರಾಕ್ಷಾರಸವನ್ನು ಹೊಸ ದ್ರಾಕ್ಷಾರಸದ ಚೀಲಗಳಲ್ಲಿ ತುಂಬಿಡುತ್ತಾರೆ. 39 ಹಳೆಯ ದ್ರಾಕ್ಷಾರಸವನ್ನು ಕುಡಿದವನಿಗೆ ಹೊಸ ದ್ರಾಕ್ಷಾರಸವು ರುಚಿಸುವುದಿಲ್ಲ. ಅವನು ಹಳೆಯ ದ್ರಾಕ್ಷಾರಸವನ್ನೇ ಇಷ್ಟಪಡುತ್ತಾನೆ.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International