Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 78

ರಚನೆಗಾರ: ಆಸಾಫ.

78 ನನ್ನ ಜನರೇ, ನನ್ನ ಉಪದೇಶಗಳಿಗೆ ಕಿವಿಗೊಡಿರಿ;
    ನನ್ನ ನುಡಿಗಳನ್ನು ಲಾಲಿಸಿರಿ.
ನಾನು ಬಾಯ್ದೆರೆದು ಸಾಮ್ಯರೂಪವಾಗಿ ಉಪದೇಶಿಸುವೆನು;
    ಪೂರ್ವಕಾಲದ ಗೂಡಾರ್ಥಗಳನ್ನು ಹೊರಪಡಿಸುವೆನು.
ನಾವು ಅವುಗಳನ್ನು ಕಿವಿಯಾರೆ ಕೇಳಿದ್ದೇವೆ.
    ನಮ್ಮ ಪೂರ್ವಿಕರೇ ಅವುಗಳನ್ನು ನಮಗೆ ಹೇಳಿದರು.
ನಾವು ಅವುಗಳನ್ನು ಮರೆಯುವುದೇ ಇಲ್ಲ.
    ನಮ್ಮ ಜನರು ಕೊನೆಯ ತಲೆಮಾರಿನವರೆಗೂ ಅವುಗಳನ್ನು ಹೇಳುತ್ತಲೇ ಇರುವರು.
ನಾವೆಲ್ಲರೂ ಯೆಹೋವನ ಪರಾಕ್ರಮವನ್ನೂ
    ಅದ್ಭುತಕಾರ್ಯಗಳನ್ನೂ ಹೇಳುತ್ತಾ ಕೊಂಡಾಡುವೆವು.
ಆತನು ಯಾಕೋಬನೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡನು.
    ಆತನು ಇಸ್ರೇಲರಿಗೆ ಧರ್ಮಶಾಸ್ತ್ರವನ್ನು ಕೊಟ್ಟನು.
    ಆತನು ನಮ್ಮ ಪೂರ್ವಿಕರಿಗೆ ಆಜ್ಞೆಗಳನ್ನು ಕೊಟ್ಟನು.
    ನಿಮ್ಮ ಸಂತತಿಗಳವರಿಗೆ ಧರ್ಮಶಾಸ್ತ್ರವನ್ನು ಉಪದೇಶಿಸಿರಿ ಎಂದು ಆತನು ನಮ್ಮ ಪೂರ್ವಿಕರಿಗೆ ಹೇಳಿದನು.
ಹೊಸ ತಲೆಮಾರುಗಳವರು ಬೆಳೆದು ದೊಡ್ಡವರಾದಾಗ ತಮ್ಮ ಮಕ್ಕಳಿಗೆ ಅವುಗಳನ್ನು ಹೇಳಿಕೊಡುವರು.
    ಹೀಗೆ ಜನರು ಕೊನೆಯ ತಲೆಮಾರಿನವರೆಗೂ ಧರ್ಮಶಾಸ್ತ್ರವನ್ನು ತಿಳಿದಿರುವರು.
ಆಗ ಅವರೆಲ್ಲರೂ ದೇವರಲ್ಲಿ ಭರವಸೆ ಇಡುವರು.
    ದೇವರ ಮಹತ್ಕಾರ್ಯಗಳನ್ನು ಅವರು ಮರೆಯುವುದೇ ಇಲ್ಲ.
    ಅವರು ಜಾಗ್ರತೆಯಿಂದ ದೇವರ ಆಜ್ಞೆಗಳಿಗೆ ವಿಧೇಯರಾಗುವರು.
ಜನರು ತಮ್ಮ ಮಕ್ಕಳಿಗೆ ದೇವರ ಆಜ್ಞೆಗಳನ್ನು ಉಪದೇಶಿಸಿದರೆ,
    ಮಕ್ಕಳು ತಮ್ಮ ಪೂರ್ವಿಕರಂತಾಗುವುದಿಲ್ಲ.
ಅವರ ಪೂರ್ವಿಕರು ದೇವರಿಗೆ ವಿಮುಖರಾಗಿ ಆತನಿಗೆ ವಿಧೇಯರಾಗಲಿಲ್ಲ.
    ಅವರು ಮೊಂಡರಾಗಿದ್ದರು.
    ಅವರು ದೇವರಿಗೆ ನಂಬಿಗಸ್ತರಾಗಿರಲಿಲ್ಲ.

ಎಫ್ರಾಯೀಮ್ ಕುಲದವರು ಬಿಲ್ಲುಗಳಿಂದ ಸುಸಜ್ಜಿತರಾಗಿದ್ದರು.
    ಆದರೆ ಅವರು ಯುದ್ಧದಿಂದ ಓಡಿಹೋದರು.
10 ದೇವರೊಂದಿಗೆ ಮಾಡಿಕೊಂಡಿದ್ದ ಒಡಂಬಡಿಕೆಯನ್ನು ಅವರು ಪಾಲಿಸಲಿಲ್ಲ.
    ಅವರು ಆತನ ಉಪದೇಶಗಳಿಗೆ ವಿಧೇಯರಾಗಲಿಲ್ಲ.
11 ದೇವರ ಮಹತ್ಕಾರ್ಯಗಳನ್ನೂ ಆತನು ಅವರಿಗೆ ತೋರಿಸಿದ ಸೂಚಕಕಾರ್ಯಗಳನ್ನೂ
    ಎಫ್ರಾಯಿಮಿನ ಜನರು ಮರೆತುಬಿಟ್ಟರು.
12 ಈಜಿಪ್ಟಿನ ಸೋನ್ ಪ್ರದೇಶದಲ್ಲಿ ಅವರ ಪೂರ್ವಿಕರಿಗೆ
    ದೇವರು ತನ್ನ ಮಹಾಶಕ್ತಿಯನ್ನು ತೋರಿಸಿದನು.
13 ದೇವರು ಕೆಂಪು ಸಮುದ್ರವನ್ನು ಇಬ್ಭಾಗಮಾಡಿ ಅವರನ್ನು ದಾಟಿಸಿದನು.
    ಅವರ ಎರಡು ಕಡೆಗಳಲ್ಲಿ ನೀರು ಬಲವಾದ ಗೋಡೆಯಂತೆ ನಿಂತುಕೊಂಡಿತು.
14 ಹಗಲಿನಲ್ಲಿ ಮೋಡದಿಂದಲೂ
    ಇರುಳಿನಲ್ಲಿ ಬೆಂಕಿಯ ಬೆಳಕಿನಿಂದಲೂ ಅವರನ್ನು ಮುನ್ನಡೆಸಿದನು.
15 ದೇವರು ಅರಣ್ಯದಲ್ಲಿ ಬಂಡೆಯನ್ನು ಸೀಳಿ ಅವರಿಗೆ ಸಾಗರದಿಂದಲೋ
    ಎಂಬಂತೆ ನೀರನ್ನು ಸಮೃದ್ಧಿಕರವಾಗಿ ಒದಗಿಸಿದನು.
16 ಆತನು ಬಂಡೆಯಿಂದ ನೀರನ್ನು
    ನದಿಯಂತೆ ಬರಮಾಡಿದನು.
17 ಆದರೂ ಅವರು ಅರಣ್ಯದಲ್ಲಿ
    ಮಹೋನ್ನತನಾದ ಆತನ ವಿರೋಧವಾಗಿ ಪಾಪಮಾಡುತ್ತಾ ಬಂದರು.
18 ಬಳಿಕ ಅವರು ತಮ್ಮ ಆಸೆಯನ್ನು ಈಡೇರಿಸಿಕೊಳ್ಳಲು
    ಇಷ್ಟಪದಾರ್ಥವನ್ನು ಕೇಳಿ ದೇವರನ್ನೇ ಪರೀಕ್ಷೆಗೊಡ್ಡಿದರು.
19 ಅವರು ಆತನಿಗೆ ವಿರೋಧವಾಗಿ ಮಾತಾಡಿ,
    “ದೇವರು ನಮಗೆ ಅರಣ್ಯದಲ್ಲಿ ಆಹಾರವನ್ನು ಕೊಡಬಲ್ಲನೇ?
20 ಆತನು ಬಂಡೆಯನ್ನು ಹೊಡೆದಾಗ ನೀರು ಪ್ರವಾಹದಂತೆ ಹೊರಬಂದದ್ದೇನೊ ನಿಜ!
    ಆದರೆ ಆತನು ನಮಗೆ ರೊಟ್ಟಿಯನ್ನೂ ಮಾಂಸವನ್ನೂ ಕೊಡಬಲ್ಲನೇ!” ಎಂದು ಹೇಳಿದರು.
21 ಆ ಜನರು ಹೇಳಿದ್ದನ್ನು ಕೇಳಿ
    ಯೆಹೋವನು ಕೋಪಗೊಂಡನು.
ಆತನು ಯಾಕೋಬ್ಯರ ಮೇಲೆಯೂ
    ಇಸ್ರೇಲರ ಮೇಲೆಯೂ ಕೋಪಗೊಂಡನು.
22     ಯಾಕೆಂದರೆ ಜನರು ಆತನಲ್ಲಿ ಭರವಸೆ ಇಡಲಿಲ್ಲ.
ದೇವರು ತಮ್ಮನ್ನು ರಕ್ಷಿಸಬಲ್ಲನೆಂದು ಅವರು ನಂಬಲಿಲ್ಲ.
23 ಆಗ ಆತನು ಉನ್ನತದಲ್ಲಿರುವ ಮೇಘಗಳನ್ನು ತೆರೆದನು,
    ಅವರ ಆಹಾರಕ್ಕಾಗಿ ಮನ್ನವನ್ನು ಮಳೆಗರೆಸಿದನು.
24 ಆಕಾಶದ ದ್ವಾರಗಳು ತೆರೆದು
    ಆಕಾಶದ ಉಗ್ರಾಣದಿಂದ ಧಾನ್ಯವು ಸುರಿದಂತೆ ಮನ್ನವು ಸುರಿಯಿತು.
25 ಜನರು ದೇವದೂತರ ಆಹಾರವನ್ನು ತಿಂದರು.
    ಅವರನ್ನು ತೃಪ್ತಿಗೊಳಿಸುವುದಕ್ಕಾಗಿ ಆತನು ಆಹಾರವನ್ನು ಹೇರಳವಾಗಿ ಒದಗಿಸಿದನು.
26 ಬಳಿಕ ಯೆಹೋವನು ಪೂರ್ವದಿಂದ ಬಲವಾದ ಗಾಳಿ ಬೀಸುವಂತೆ ಮಾಡಿದನು.
    ಆಗ ಲಾವಕ್ಕಿಗಳು ಮಳೆಯಂತೆ ಅವರಿದ್ದಲ್ಲಿಗೆ ಬಂದು ಬಿದ್ದವು.
27 ಆತನು ತೇಮಾನಿನಿಂದ ಗಾಳಿಬೀಸುವಂತೆ ಮಾಡಿದಾಗ
    ಪಕ್ಷಿಗಳು ಸಮುದ್ರದ ಮರಳಿನಷ್ಟು ಅವರಿದ್ದಲ್ಲಿ ಬಂದು ಬಿದ್ದವು.
28 ಪಕ್ಷಿಗಳು ಪಾಳೆಯದ ಮಧ್ಯಭಾಗದಲ್ಲಿ,
    ಆ ಜನರ ಗುಡಾರಗಳ ಸುತ್ತಲೆಲ್ಲಾ ಬಿದ್ದವು.
29 ಅವರಿಗೆ ತಿನ್ನಲು ಹೇರಳವಾಗಿತ್ತು.
    ಆದರೆ ತಮ್ಮ ಆಸೆಗಳೇ ತಮ್ಮನ್ನು ಪಾಪಕ್ಕೆ ನಡೆಸುವಂತೆ ಅವರು ಮಾಡಿದರು.
30 ಅವರು ತಮ್ಮ ಆಸೆಗಳನ್ನು ತಮ್ಮ ಹತೋಟಿಯಲ್ಲಿಟ್ಟುಕೊಳ್ಳಲಿಲ್ಲ.
    ಆ ಲಾವಕ್ಕಿಗಳ ರಕ್ತವನ್ನು ಪೂರ್ತಿಯಾಗಿ ತೆಗೆಯುವ ಮೊದಲೇ ಅವುಗಳ ಮಾಂಸವನ್ನು ತಿಂದುಬಿಟ್ಟರು.
31 ಆಗ ಆತನು ಅವರ ಮೇಲೆ ಬಹು ಕೋಪಗೊಂಡು, ಅವರಲ್ಲಿ ಅನೇಕರನ್ನು ಕೊಂದುಹಾಕಿದನು.
    ದೃಢಕಾಯರಾಗಿದ್ದ ಅನೇಕ ಯುವಕರಿಗೆ ಆತನು ಸಾವನ್ನು ಬರಮಾಡಿದನು.
32 ಆದರೂ ಅವರು ಪಾಪಮಾಡುತ್ತಾ ಬಂದರು.
    ಆತನ ಅದ್ಭುತಕಾರ್ಯಗಳನ್ನು ಅವರು ನಂಬದೆ ಹೋದರು.
33 ಆದ್ದರಿಂದ ಆತನು ಆಪತ್ತುಗಳನ್ನು ಬರಮಾಡಿ
    ಅವರ ಅಯೋಗ್ಯ ಜೀವಿತಗಳನ್ನು ಉಸಿರಿನಂತೆ ಅಂತ್ಯಗೊಳಿಸಿದನು.
34 ಅವರಲ್ಲಿ ಕೆಲವರನ್ನು ದೇವರು ಕೊಂದಾಗಲೆಲ್ಲಾ,
    ಉಳಿದವರು ಆತನ ಕಡೆಗೆ ತಿರುಗಿಕೊಂಡು ಓಡಿ ಬರುತ್ತಿದ್ದರು.
35 ದೇವರೇ ತಮ್ಮ ಆಶ್ರಯಸ್ಥಾನವೆಂಬುದನ್ನೂ
    ಮಹೋನ್ನತನಾದ ದೇವರೇ ತಮ್ಮ ರಕ್ಷಕನೆಂಬುದನ್ನೂ ಅವರು ಜ್ಞಾಪಿಸಿಕೊಳ್ಳುತ್ತಿದ್ದರು.
36 ಆದರೆ ಅವರು ಯಥಾರ್ಥವಾಗಿರದೆ ಸುಳ್ಳಾಡಿದರು.
37 ಅವರ ಹೃದಯಗಳು ಆತನಲ್ಲಿ ನೆಲೆಗೊಂಡಿರಲಿಲ್ಲ.
    ಆತನ ಒಡಂಬಡಿಕೆಗೆ ಅವರು ನಂಬಿಗಸ್ತರಾಗಿರಲಿಲ್ಲ.
38 ಆದರೆ ಆತನು ಅವರಿಗೆ ಕರುಣೆತೋರಿ ಅವರ ಪಾಪಗಳನ್ನು ಕ್ಷಮಿಸಿದನು.
    ಆತನು ಅವರನ್ನು ನಾಶಮಾಡಲಿಲ್ಲ.
ಅನೇಕ ಸಲ ಆತನು ತನ್ನ ಕೋಪವನ್ನು ತಡೆಯುತ್ತಾ ಬಂದನು;
    ತಾನು ಬಹು ಕೋಪಗೊಳ್ಳದಂತೆ ನೋಡಿಕೊಂಡನು.
39 ಅವರು ಕೇವಲ ಮನುಷ್ಯರೆಂಬುದನ್ನು ಆತನು ಜ್ಞಾಪಿಸಿಕೊಂಡನು.
    ಜನರಾದರೋ ಬೀಸಿದ ನಂತರ ಹಿಂತಿರುಗಿ ಬಾರದ ಗಾಳಿಯಂತಿದ್ದಾರೆ.
40 ಅಯ್ಯೋ, ಅವರು ಅರಣ್ಯದಲ್ಲಿ ಆತನಿಗೆ ವಿರುದ್ಧವಾಗಿ ಅನೇಕ ಸಲ ದಂಗೆ ಎದ್ದರು.
    ಆತನನ್ನು ಬಹಳವಾಗಿ ನೋಯಿಸಿದರು.
41 ಪದೇಪದೇ ಅವರು ಆತನ ತಾಳ್ಮೆಯನ್ನು ಪರೀಕ್ಷಿಸಿದರು.
    ಅವರು ಇಸ್ರೇಲರ ಪರಿಶುದ್ಧನನ್ನು ಬಹಳವಾಗಿ ನೋಯಿಸಿದರು.
42 ಅವರು ಆತನ ಶಕ್ತಿಯನ್ನು ಮರೆತುಬಿಟ್ಟರು.
    ಅನೇಕ ಸಲ ಆತನು ತಮ್ಮನ್ನು ಶತ್ರುಗಳಿಂದ ರಕ್ಷಿಸಿದ್ದನ್ನು ಅವರು ಮರೆತುಬಿಟ್ಟರು.
43 ಈಜಿಪ್ಟಿನಲ್ಲಿಯೂ ಸೋನ್ ಬಯಲುಗಳಲ್ಲಿಯೂ
    ಮಾಡಿದ ಅದ್ಭುತಕಾರ್ಯಗಳನ್ನು ಅವರು ಮರೆತುಬಿಟ್ಟರು.
44 ಆತನು ನದಿಗಳನ್ನು ರಕ್ತವನ್ನಾಗಿ ಪರಿವರ್ತಿಸಿದನು!
    ಈಜಿಪ್ಟಿನವರಿಗೆ ನೀರನ್ನು ಕುಡಿಯಲಾಗಲಿಲ್ಲ.
45 ಆತನು ಹಿಂಡುಹಿಂಡು ಹುಳಗಳನ್ನು ಕಳುಹಿಸಿದನು;
    ಅವು ಈಜಿಪ್ಟಿನ ಜನರನ್ನು ಕಚ್ಚಿದವು.
ಆತನು ಕಪ್ಪೆಗಳನ್ನು ಕಳುಹಿಸಿದನು;
    ಅವು ಈಜಿಪ್ಟಿನವರ ಜೀವಿತಗಳನ್ನು ಹಾಳುಮಾಡಿದವು.
46 ಆತನು ಅವರ ಬೆಳೆಗಳನ್ನು ಜಿಟ್ಟೆಹುಳಗಳಿಗೂ
    ಇತರ ಗಿಡಗಳನ್ನು ಮಿಡತೆಗಳಿಗೂ ಕೊಟ್ಟನು.
47 ಈಜಿಪ್ಟ್ ಜನರ ದ್ರಾಕ್ಷಾಲತೆಗಳನ್ನು ನಾಶಮಾಡಲು ಆತನು ಆಲಿಕಲ್ಲು ಮಳೆ ಸುರಿಸಿದನು;
    ಅವರ ಮರಗಳನ್ನು ನಾಶಮಾಡಲು ಮಂಜುಮಳೆಯನ್ನು ಸುರಿಸಿದನು.
48 ಆತನು ಅವರ ದನಕರುಗಳನ್ನು ಆಲಿಕಲ್ಲಿನಿಂದಲೂ
    ಅವರ ಕುರಿಹಿಂಡುಗಳನ್ನು ಸಿಡಿಲಿನಿಂದಲೂ ಕೊಂದುಹಾಕಿದನು.
49 ಆತನು ಈಜಿಪ್ಟ್ ಜನರಿಗೆ ತನ್ನ ಭಯಂಕರವಾದ ಕೋಪವನ್ನು ತೋರಿದನು.
    ಆತನು ತನ್ನ ಸಂಹಾರ ದೂತರನ್ನು ಅವರಿಗೆ ವಿರೋಧವಾಗಿ ಕಳುಹಿಸಿದನು.
50 ಆತನು ತನ್ನ ಕೋಪವನ್ನು ತೋರಿಸಿದನು.
    ಅವರಲ್ಲಿ ಯಾರೂ ಬದುಕದಂತೆ ಆತನು ಮಾಡಿದನು.
    ಮರಣಕರವಾದ ರೋಗದಿಂದ ಅವರಿಗೆ ಸಾವನ್ನು ಬರಮಾಡಿದನು.
51 ಈಜಿಪ್ಟಿನವರ ಎಲ್ಲಾ ಚೊಚ್ಚಲು ಗಂಡುಮಕ್ಕಳನ್ನು ಆತನು ಕೊಂದುಹಾಕಿದನು.
    ಹಾಮನ ಕುಲಕ್ಕೆ ಸೇರಿದ ಪ್ರತಿಯೊಬ್ಬ ಚೊಚ್ಚಲ ಮಗನನ್ನು ಆತನು ಕೊಂದುಹಾಕಿದನು.
52 ಬಳಿಕ ಆತನು ಕುರುಬನಂತೆ ಇಸ್ರೇಲನ್ನು ನಡೆಸಿದನು.
    ಆತನು ತನ್ನ ಜನರನ್ನು ಕುರಿಗಳಂತೆ ಅರಣ್ಯದಲ್ಲಿ ನಡೆಸಿದನು.
53 ಆತನು ಅವರಿಗೆ ಮಾರ್ಗದರ್ಶನ ಮಾಡುತ್ತಾ
    ಸುರಕ್ಷಿತವಾಗಿ ಮುನ್ನಡೆಸಿದನು.
ಆತನ ಜನರು ಯಾವುದಕ್ಕೂ ಭಯಪಡುವ ಅಗತ್ಯವಿರಲಿಲ್ಲ.
    ಅವರ ಶತ್ರುಗಳನ್ನು ಆತನು ಕೆಂಪು ಸಮುದ್ರದಲ್ಲಿ ಮುಳುಗಿಸಿದನು.
54 ಆತನು ತನ್ನ ಜನರನ್ನು ತನ್ನ ಪವಿತ್ರನಾಡಿಗೂ
    ತನ್ನ ಭುಜಬಲದಿಂದ ತೆಗೆದುಕೊಂಡ ಪರ್ವತಕ್ಕೂ ನಡೆಸಿದನು.
55 ಆ ನಾಡಿನ ಜನಾಂಗಗಳನ್ನು ಆತನು ಬಲವಂತವಾಗಿ ಹೊರಗಟ್ಟಿದನು.
    ಆತನು ಇಸ್ರೇಲಿನ ಪ್ರತಿಯೊಂದು ಕುಲಕ್ಕೂ ಆ ನಾಡಿನಲ್ಲಿ ಪಾಲುಕೊಟ್ಟನು;
    ಆ ನಾಡಿನ ಮನೆಗಳಲ್ಲಿ ಅವರನ್ನು ನೆಲೆಗೊಳಿಸಿದನು.
56 ಆದರೆ ಇಸ್ರೇಲರು ಮಹೋನ್ನತನಾದ ದೇವರನ್ನು ಪರೀಕ್ಷಿಸಿ ಆತನನ್ನು ಬಹಳವಾಗಿ ನೋಯಿಸಿದರು.
    ಅವರು ಆತನ ಆಜ್ಞೆಗಳಿಗೆ ವಿಧೇಯರಾಗಲಿಲ್ಲ.
57 ಇಸ್ರೇಲರು ಆತನಿಗೆ ವಿಮುಖರಾದರು; ತಮ್ಮ ಪೂರ್ವಿಕರಂತೆಯೇ ಆತನಿಗೆ ವಿರೋಧವಾಗಿ ತಿರುಗಿದರು.
    ತಿರುಗುಬಾಣದಂತೆ ತಮ್ಮ ದಿಕ್ಕನ್ನು ಬದಲಾಯಿಸಿಕೊಂಡರು.
58 ಇಸ್ರೇಲರು ಎತ್ತರವಾದ ಸ್ಥಳಗಳನ್ನು ನಿರ್ಮಿಸಿ, ಆತನನ್ನು ಕೋಪಗೊಳಿಸಿದರು.
    ಸುಳ್ಳುದೇವರುಗಳ ವಿಗ್ರಹಗಳನ್ನು ರೂಪಿಸಿ ಆತನನ್ನು ರೇಗಿಸಿದರು.
59 ದೇವರು ಇದನ್ನು ತಿಳಿದು ಬಹು ಕೋಪಗೊಂಡನು,
    ಆತನು ಇಸ್ರೇಲರನ್ನು ಸಂಪೂರ್ಣವಾಗಿ ತಿರಸ್ಕರಿಸಿದನು!
60 ಶೀಲೋವಿನಲ್ಲಿದ್ದ ತನ್ನ ಪವಿತ್ರ ಗುಡಾರವನ್ನು ಆತನು ತೊರೆದುಬಿಟ್ಟನು.
    ಅವರ ಮಧ್ಯದಲ್ಲಿ ಆತನು ವಾಸಮಾಡಿದ್ದು ಆ ಗುಡಾರದಲ್ಲಿಯೇ.
61 ಆತನು ತನ್ನ ಜನರನ್ನು ಇತರ ಜನಾಂಗಗಳ ವಶಕ್ಕೆ ಕೊಟ್ಟನು.
    ಶತ್ರುಗಳು ಆತನ “ಸುಂದರವಾದ ಆಭರಣವನ್ನು” ತೆಗೆದುಕೊಂಡರು.
62 ಆತನು ತನ್ನ ಜನರಿಗೆ ವಿರೋಧವಾಗಿ ತನ್ನ ಕೋಪವನ್ನು ತೋರಿದನು.
    ಯುದ್ಧದಲ್ಲಿ ಅವರಿಗೆ ಮರಣವಾಗುವಂತೆ ಮಾಡಿದನು.
63 ಯುವಕರು ಬೆಂಕಿಯ ಪಾಲಾದರು.
    ಅವರಿಗೆ ನಿಶ್ಚಿತಾರ್ಥವಾಗಿದ್ದ ಕನ್ಯೆಯರು ವಿವಾಹಗೀತೆಯನ್ನು ಹಾಡಲಿಲ್ಲ.
64 ಯಾಜಕರು ಕತ್ತಿಯಿಂದ ಕೊಲ್ಲಲ್ಪಟ್ಟರು,
    ಆದರೆ ವಿಧವೆಯರು ಅವರಿಗಾಗಿ ಗೋಳಾಡಲಿಲ್ಲ.
65 ಕೊನೆಗೆ, ನಿದ್ದೆಯಿಂದ ಎಚ್ಚರಗೊಳ್ಳುತ್ತಿರುವ ಮನುಷ್ಯನಂತೆಯೂ
    ಅಮಲಿಳಿದು ಎಚ್ಚರಗೊಳ್ಳುತ್ತಿರುವ ಸೈನಿಕನಂತೆಯೂ ನಮ್ಮ ಯೆಹೋವನು ಎದ್ದನು.
66 ಆತನು ತನ್ನ ಶತ್ರುಗಳನ್ನು ಸದೆಬಡಿದು ಸೋಲಿಸಿದನು.
    ಆತನು ತನ್ನ ಶತ್ರುಗಳನ್ನು ಸೋಲಿಸಿ ಅವರನ್ನು ನಿತ್ಯನಿಂದೆಗೆ ಗುರಿಮಾಡಿದನು.
67 ಆದರೆ ಆತನು ಯೋಸೇಫನ ಕುಲವನ್ನು ತಿರಸ್ಕರಿಸಿದನು.
    ಎಫ್ರಾಯೀಮನ ಕುಲವನ್ನೂ ಆತನು ಆರಿಸಿಕೊಳ್ಳಲಿಲ್ಲ.
68 ಆತನು ಯೆಹೂದಕುಲವನ್ನೇ ಆರಿಸಿಕೊಂಡನು.
    ಆತನು ತನ್ನ ಪ್ರಿಯ ಚೀಯೋನ್ ಪರ್ವತವನ್ನೇ ಆರಿಸಿಕೊಂಡನು.
69 ಆತನು ತನ್ನ ಪವಿತ್ರಾಲಯವನ್ನು ಆ ಪರ್ವತದ ಮೇಲೆ ಕಟ್ಟಿ
    ಅದನ್ನು ಭೂಮಿಯಂತೆ ಶಾಶ್ವತಗೊಳಿಸಿದನು.
70 ಆತನು ದಾವೀದನನ್ನು ತನ್ನ ವಿಶೇಷ ಸೇವಕನನ್ನಾಗಿ ಆರಿಸಿಕೊಂಡನು.
    ದಾವೀದನು ಕುರಿಹಟ್ಟಿಗಳನ್ನು ಕಾಯುತ್ತಿದ್ದನು.
71 ಆತನು ದಾವೀದನಿಗೆ ಕುರಿಗಳನ್ನು ಪರಿಪಾಲನೆ ಮಾಡುವ ಕೆಲಸದಿಂದ ತೆಗೆದುಹಾಕಿ
    ತನ್ನ ಜನರಾದ ಯಾಕೋಬ್ಯರನ್ನೂ ತನ್ನ ಆಸ್ತಿಯಾದ ಇಸ್ರೇಲರನ್ನೂ ಪರಿಪಾಲಿಸುವ ಉದ್ಯೋಗವನ್ನು ಕೊಟ್ಟನು.
72 ದಾವೀದನು ಯಥಾರ್ಥಹೃದಯದಿಂದಲೂ
    ಬಹು ವಿವೇಕದಿಂದಲೂ ಇಸ್ರೇಲರನ್ನು ನಡೆಸಿದನು.

ಯೆಹೋಶುವನು 24:25-33

25 ಆದ್ದರಿಂದ ಯೆಹೋಶುವನು ಶೆಕೆಮಿನಲ್ಲಿ ಜನರಿಗಾಗಿ ಒಂದು ಒಡಂಬಡಿಕೆಯನ್ನು ಮಾಡಿದನು. ಅದು ಅವರಿಗೆ ಪಾಲಿಸಬೇಕಾದ ಒಂದು ವಿಧಿಯಾಯಿತು. 26 ಯೆಹೋಶುವನು ಇವುಗಳನ್ನು ದೇವರ ಧರ್ಮಶಾಸ್ತ್ರ ಗ್ರಂಥದಲ್ಲಿ ಬರೆದನು. ಯೆಹೋಶುವನು ಅಲ್ಲಿದ್ದ ಒಂದು ದೊಡ್ಡ ಕಲ್ಲನ್ನು ತೆಗೆದುಕೊಂಡು ಈ ಒಡಂಬಡಿಕೆಗೆ ಸಾಕ್ಷಿಯಾಗಿ ಅದನ್ನು ಯೆಹೋವನ ಪವಿತ್ರಗುಡಾರದ ಹತ್ತಿರವಿದ್ದ ಓಕ್ ಮರದ ಕೆಳಗೆ ನಿಲ್ಲಿಸಿದನು.

27 ಆಗ ಯೆಹೋಶುವನು ಜನರೆಲ್ಲರಿಗೆ, “ನಾವು ಇಂದು ಹೇಳಿದ ಎಲ್ಲವನ್ನು ಜ್ಞಾಪಕದಲ್ಲಿಟ್ಟುಕೊಳ್ಳಲು ಈ ಕಲ್ಲು ನಿಮಗೆ ಸಾಕ್ಷಿಯಾಗಿರುವುದು. ಇಂದು ಯೆಹೋವನು ನಮ್ಮೊಡನೆ ಮಾತನಾಡುತ್ತಿದ್ದಾಗ ಈ ಕಲ್ಲು ಇಲ್ಲಿಯೇ ಇತ್ತು. ಅದಕ್ಕಾಗಿ ಈ ಕಲ್ಲು ಇಂದು ನಡೆದ ಸಂಗತಿಯನ್ನು ನೆನಪಿನಲ್ಲಿಡಲು ನಮಗೆ ಸಹಾಯಕವಾಗುವುದು. ನೀವು ನಿಮ್ಮ ದೇವರಾದ ಯೆಹೋವನಿಗೆ ವಿಮುಖರಾದರೆ ಈ ಕಲ್ಲೇ ನಿಮಗೆ ವಿರೋಧವಾಗಿ ಸಾಕ್ಷಿ ಹೇಳುವುದು” ಎಂದು ಹೇಳಿದನು.

28 ಬಳಿಕ ಯೆಹೋಶುವನು ಜನರಿಗೆ ತಮ್ಮ ಮನೆಗಳಿಗೆ ಹೋಗುವಂತೆ ತಿಳಿಸಿದನು. ಆದ್ದರಿಂದ ಪ್ರತಿಯೊಬ್ಬರೂ ತಮ್ಮತಮ್ಮ ಸ್ವನಾಡಿಗೆ ಹೊರಟುಹೋದರು.

ಯೆಹೋಶುವನ ಮರಣ

29 ಇದಾದ ಮೇಲೆ ನೂನನ ಮಗನಾದ ಯೆಹೋಶುವನು ಮರಣ ಹೊಂದಿದನು. ಯೆಹೋಶುವನು ನೂರಹತ್ತು ವರ್ಷ ಬದುಕಿದನು. 30 ಯೆಹೋಶುವನನ್ನು ತಿಮ್ನತ್ ಸೆರಹದ ಅವನ ಸ್ವಂತ ಭೂಮಿಯಲ್ಲಿ ಸಮಾಧಿ ಮಾಡಿದರು. ಇದು ಎಫ್ರಾಯೀಮ್ ಪರ್ವತ ಪ್ರದೇಶದಲ್ಲಿರುವ ಗಾಷ್ ಬೆಟ್ಟದ ಉತ್ತರದಿಕ್ಕಿನಲ್ಲಿದೆ.

31 ಯೆಹೋಶುವನು ಜೀವಿಸಿದಾಗ ಇಸ್ರೇಲರು ಯೆಹೋವನ ಸೇವೆಮಾಡಿದರು; ಯೆಹೋಶುವನ ಮರಣಾನಂತರವೂ ಅವರು ಯೆಹೋವನ ಸೇವೆಯನ್ನು ಮುಂದುವರೆಸಿದರು. ಯೆಹೋವನು ಇಸ್ರೇಲರಿಗಾಗಿ ಮಾಡಿದ ಮಹತ್ಕಾರ್ಯಗಳನ್ನು ನೋಡಿದ್ದ ಅವರ ನಾಯಕರು ಜೀವಿಸಿದ್ದಾಗಲೂ ಇಸ್ರೇಲರು ಯೆಹೋವನ ಸೇವೆಮಾಡಿದರು.

ಯೋಸೇಫನ ಎಲುಬುಗಳನ್ನು ಸ್ವದೇಶದಲ್ಲಿ ಹೂಳಿಟ್ಟದ್ದು

32 ಇಸ್ರೇಲರು ಈಜಿಪ್ಟಿನಿಂದ ಹೊರಟಾಗ ತಮ್ಮೊಂದಿಗೆ ಯೋಸೇಫನ ಎಲುಬುಗಳನ್ನೂ ತೆಗೆದುಕೊಂಡು ಬಂದಿದ್ದರು. ಅವರು ಯೋಸೇಫನ ಎಲುಬುಗಳನ್ನು ಶೆಕೆಮಿನಲ್ಲಿ ಹೂಳಿಟ್ಟರು. ಯಾಕೋಬನು ಶೆಕೆಮನ ತಂದೆಯಾದ ಹಮೋರನ ಗಂಡುಮಕ್ಕಳಿಂದ ನೂರು ಬೆಳ್ಳಿನಾಣ್ಯಗಳನ್ನು ಕೊಟ್ಟು ಕೊಂಡುಕೊಂಡ ಶೆಕೆಮ್ ಊರಿನ ಹೊಲದಲ್ಲಿ ಆ ಎಲುಬುಗಳನ್ನು ಹೂಳಿಟ್ಟರು. ಈ ಭೂಮಿಯ ಯೋಸೇಫನ ಮಕ್ಕಳದಾಗಿತ್ತು.

33 ಆರೋನನ ಮಗನಾದ ಎಲ್ಲಾಜಾರನು ಮರಣಹೊಂದಿದನು. ಗಿಬೇತ್‌ನಲ್ಲಿ ಎಲ್ಲಾಜಾರನನ್ನು ಸಮಾಧಿ ಮಾಡಲಾಯಿತು. ಗಿಬೇತ್ ಊರು ಎಫ್ರಾಯೀಮ್ ಪರ್ವತ ಪ್ರಾಂತ್ಯದಲ್ಲಿತ್ತು. ಆ ಊರನ್ನು ಎಲ್ಲಾಜಾರನ ಮಗನಾದ ಫೀನೆಹಾಸನಿಗೆ ಕೊಡಲಾಗಿತ್ತು.

1 ಕೊರಿಂಥದವರಿಗೆ 14:20-25

20 ಸಹೋದರ ಸಹೋದರಿಯರೇ, ಮಕ್ಕಳಂತೆ ಆಲೋಚಿಸಬೇಡಿ. ಕೆಟ್ಟ ವಿಷಯಗಳಲ್ಲಿ ಎಳೆಗೂಸುಗಳಂತಿರಿ. ಆದರೆ ನಿಮ್ಮ ಆಲೋಚನೆಗಳಲ್ಲಿ ಪ್ರಾಯಸ್ಥರಂತಿರಿ. 21 ಪವಿತ್ರ ಗ್ರಂಥದಲ್ಲಿ ಈ ರೀತಿ ಬರೆಯಲ್ಪಟ್ಟಿದೆ:

“ವಿವಿಧ ಭಾಷೆಗಳನ್ನು ಮಾತಾಡುವವರ ಮೂಲಕವೂ
    ವಿದೇಶಿಯರ ನಾಲಿಗೆಯ ಮೂಲಕವೂ
ನಾನು ಈ ಜನರೊಂದಿಗೆ ಮಾತಾಡುವೆನು;
    ಆದರೂ ಇವರು ನನಗೆ ವಿಧೇಯರಾಗುವುದಿಲ್ಲ.”(A)

ಪ್ರಭುವು ಹೇಳುವುದು ಅದನ್ನೇ.

22 ಆದ್ದರಿಂದ ವಿವಿಧ ಭಾಷೆಗಳನ್ನು ಮಾತಾಡುವ ವರವು ನಂಬದ ಜನರಿಗೆ ಆಧಾರವಾಗಿದೆಯೇ ಹೊರತು ನಂಬುವವರಿಗಲ್ಲ. ಆದರೆ ಪ್ರವಾದನೆಯು ನಂಬುವ ಜನರಿಗೋಸ್ಕರವಾಗಿ ಇದೆಯೇ ಹೊರತು ನಂಬದವರಿಗಲ್ಲ. 23 ಒಂದುವೇಳೆ ಇಡೀ ಸಭೆಯು ಕೂಡಿಬಂದಾಗ ನೀವೆಲ್ಲರೂ ವಿವಿಧ ಭಾಷೆಗಳನ್ನು ಮಾತಾಡತೊಡಗಿದರೆ, ಅಲ್ಲಿಗೆ ಬರುವ ತಿಳುವಳಿಕೆಯಿಲ್ಲದ ಅಥವಾ ನಂಬದ ಕೆಲವು ಜನರು ನಿಮ್ಮನ್ನು ಹುಚ್ಚರೆಂದು ಹೇಳುವರು. 24 ಒಂದುವೇಳೆ ನೀವೆಲ್ಲರೂ ಪ್ರವಾದನೆ ಮಾಡುತ್ತಿರುವಾಗ, ತಿಳುವಳಿಕೆಯಿಲ್ಲದ ಅಥವಾ ನಂಬಿಕೆಯಿಲ್ಲದ ವ್ಯಕ್ತಿಯು ಒಳಗೆ ಬಂದರೆ, ನಿಮ್ಮ ಪ್ರವಾದನೆಗಳು ಆ ವ್ಯಕ್ತಿಗೆ ಅವನ ಪಾಪವನ್ನು ತೋರಿಸಿಕೊಡುತ್ತವೆ ಮತ್ತು ನೀವು ಹೇಳುವ ವಿಷಯಗಳ ಆಧಾರದ ಮೇಲೆ ಅವನಿಗೆ ತೀರ್ಪಾಗುವುದು. 25 ಆ ವ್ಯಕ್ತಿಯ ಹೃದಯದಲ್ಲಿರುವ ರಹಸ್ಯ ಸಂಗತಿಗಳು ಬಯಲಾಗುತ್ತವೆ. ಆದ್ದರಿಂದ ಆ ವ್ಯಕ್ತಿಯು ಅಡ್ಡಬಿದ್ದು ದೇವರನ್ನು ಆರಾಧಿಸುವನು. “ನಿಜವಾಗಿಯೂ ದೇವರು ನಿಮ್ಮ ಸಂಗಡವಿದ್ದಾನೆ” ಎಂದು ಅವನು ಹೇಳುವನು.[a]

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International