Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 77

ರಚನೆಗಾರ: ಆಸಾಫ.

77 ನಾನು ಸ್ವರವೆತ್ತಿ ದೇವರಿಗೆ ಮೊರೆಯಿಡುವೆನು.
    ದೇವರೇ, ಸ್ವರವೆತ್ತಿ ಮೊರೆಯಿಡುವೆನು, ನನಗೆ ಕಿವಿಗೊಡು.
ನನ್ನ ಯೆಹೋವನೇ, ಇಕ್ಕಟ್ಟಿನಲ್ಲಿ ನಿನ್ನನ್ನು ಕರೆದೆನು;
    ರಾತ್ರಿಯೆಲ್ಲಾ ನಿನಗಾಗಿ ಕೈಚಾಚಿಕೊಂಡಿದ್ದೆನು.
    ಆದರೆ ನನ್ನ ಮನಸ್ಸು ಸಮಾಧಾನಗೊಳ್ಳಲಿಲ್ಲ.
ನಾನು ದೇವರನ್ನೇ ಧ್ಯಾನಿಸುತ್ತಾ ನನ್ನ ವ್ಯಥೆಯನ್ನು ಹೇಳಿಕೊಳ್ಳಬಯಸಿದೆ.
    ಆದರೂ ನನ್ನಿಂದಾಗಲಿಲ್ಲ.
ನೀನು ನನಗೆ ನಿದ್ರೆಮಾಡಗೊಡಿಸಲಿಲ್ಲ.
    ನಾನು ಬಹು ಗಲಿಬಿಲಿಗೊಂಡಿದ್ದರಿಂದ ನಿನ್ನೊಂದಿಗೆ ಮಾತಾಡಲಾಗಲಿಲ್ಲ.
ಹಿಂದಿನಕಾಲದ ಬಗ್ಗೆ ಯೋಚಿಸತೊಡಗಿದೆನು.
    ಬಹುಕಾಲದ ಹಿಂದೆ ನಡೆದ ಸಂಗತಿಗಳ ಬಗ್ಗೆ ಯೋಚಿಸತೊಡಗಿದೆನು.
ರಾತ್ರಿಯಲ್ಲಿ, ನಾನು ಮಾಡುತ್ತಿದ್ದ ಗಾನವನ್ನು ನೆನಸಿಕೊಳ್ಳುವೆನು;
    ಆಂತರ್ಯದಲ್ಲಿ ಮಾತಾಡುತ್ತಾ ಅರ್ಥಮಾಡಿಕೊಳ್ಳಲು ಪ್ರಯತ್ನಿಸುವೆನು.
ನಾನು ಆಶ್ಚರ್ಯದಿಂದ ಹೀಗೆಂದುಕೊಳ್ಳುವೆನು:
    “ನಮ್ಮ ಯೆಹೋವನು ನಮ್ಮನ್ನು ಶಾಶ್ವತವಾಗಿ ಕೈಬಿಟ್ಟಿರುವನೇ?
    ಆತನು ನಮ್ಮನ್ನು ಮತ್ತೆಂದಾದರೂ ಅಪೇಕ್ಷಿಸುವನೇ?
ದೇವರ ಕೃಪಾವಾತ್ಸಲ್ಯವು ಎಂದೆಂದಿಗೂ ನಿಂತುಹೋಯಿತೇ?
    ಆತನು ನಮ್ಮೊಂದಿಗೆ ಮತ್ತೆಂದೂ ಮಾತಾಡುವುದಿಲ್ಲವೇ?
ದೇವರು ಕರುಣೆಯನ್ನು ಮರೆತುಬಿಟ್ಟಿರುವನೇ?
    ಆತನ ಕನಿಕರವು ಬದಲಾವಣೆ ಹೊಂದಿ ಕೋಪವಾಗಿರುವುದೇ?”

10 ಬಳಿಕ ನಾನು ಹೀಗೆ ಆಲೋಚಿಸಿಕೊಂಡೆ: “ಮಹೋನ್ನತವಾದ ದೇವರು ತನ್ನ ಶಕ್ತಿಯನ್ನು ಕಳೆದುಕೊಂಡನೇ?”
    ಎಂಬುದೇ ನನ್ನನ್ನು ಕಾಡಿಸುವ ಪ್ರಶ್ನೆ.

11 ಯೆಹೋವನೇ, ನಿನ್ನ ಕಾರ್ಯಗಳನ್ನು ಜ್ಞಾಪಿಸಿಕೊಳ್ಳುವೆನು.
    ಬಹುಕಾಲದ ಹಿಂದೆ ಮಾಡಿದ ಅದ್ಭುತಕಾರ್ಯಗಳನ್ನು ಜ್ಞಾಪಿಸಿಕೊಳ್ಳುವೆನು.
12 ನಿನ್ನ ಕಾರ್ಯಗಳನ್ನೆಲ್ಲಾ ಧ್ಯಾನಿಸುವೆನು;
    ನಿನ್ನ ಕಾರ್ಯಗಳ ಕುರಿತಾಗಿ ಆಲೋಚಿಸುವೆನು.
13 ದೇವರೇ, ನಿನ್ನ ಮಾರ್ಗಗಳು ಪರಿಶುದ್ಧವಾಗಿವೆ.
    ದೇವರೇ, ನಿನ್ನಂತೆ ಮಹತ್ವವುಳ್ಳವರು ಬೇರೆ ಯಾರೂ ಇಲ್ಲ.
14 ಅದ್ಭುತಕಾರ್ಯಗಳನ್ನು ಮಾಡಿದ ದೇವರು ನೀನೇ.
    ನೀನು ಜನರಿಗೆ ನಿನ್ನ ಮಹಾಶಕ್ತಿಯನ್ನು ತೋರಿಸಿದೆ.
15 ನೀನು ನಿನ್ನ ಶಕ್ತಿಯಿಂದ ನಿನ್ನ ಜನರನ್ನು ರಕ್ಷಿಸಿದೆ.
    ಯಾಕೋಬನ ಮತ್ತು ಯೋಸೇಫನ ಸಂತತಿಯವರನ್ನು ನೀನು ರಕ್ಷಿಸಿದೆ.

16 ದೇವರೇ, ನಿನ್ನನ್ನು ಕಂಡು ಜಲರಾಶಿಗಳು ಭಯಗೊಂಡವು.
    ಆಳವಾದ ಜಲರಾಶಿಗಳು ಭಯದಿಂದ ನಡುಗಿದವು.
17 ದಟ್ಟವಾದ ಕಪ್ಪುಮೋಡಗಳು ಮಳೆಗರೆದವು.
    ಜನರಿಗೆ ಮೇಘಮಂಡಲದಿಂದ ಗುಡುಗು ಕೇಳಿಸಿತು.
    ನಿನ್ನ ಮಿಂಚಿನ ಬಾಣಗಳು ಆ ಮೋಡಗಳಲ್ಲಿ ಹಾರಿದವು.
18 ಬಿರುಗಾಳಿಯಲ್ಲಿ ನಿನ್ನ ಗುಡುಗು ಕೇಳಿಸಿತು.
    ಮಿಂಚುಗಳು ಭೂಮಂಡಲವನ್ನು ಬೆಳಗಿಸಿದವು.
    ಭೂಮಿಯು ಅಲ್ಲಾಡಿ ಕಂಪಿಸಿತು.
19 ನೀನು ಸಮುದ್ರದಲ್ಲಿ ಮಾರ್ಗಮಾಡಿದೆ;
    ಆಳವಾದ ಜಲರಾಶಿಗಳನ್ನು ದಾಟಿದೆ.
    ಆದರೆ ನಿನ್ನ ಹೆಜ್ಜೆಯ ಗುರುತು ಕಾಣಲೇ ಇಲ್ಲ.
20 ಕುರುಬನು ಕುರಿಹಿಂಡನ್ನು ಕರೆದೊಯ್ಯುವಂತೆ
    ನಿನ್ನ ಜನರನ್ನು ಕರೆದೊಯ್ಯಲು ಮೋಶೆಯನ್ನೂ ಆರೋನನನ್ನೂ ಉಪಯೋಗಿಸಿದೆ.

2 ರಾಜರುಗಳು 2:1-18

ಎಲೀಯನ ಪರಲೋಕಾರೋಹಣ

ಯೆಹೋವನು ಎಲೀಯನನ್ನು ಸುಂಟರಗಾಳಿಯ ಮೂಲಕ ಪರಲೋಕಕ್ಕೆ ಕರೆದುಕೊಳ್ಳುವ ಕಾಲ ಹತ್ತಿರ ಬಂದಿತು. ಎಲೀಯನು ಎಲೀಷನೊಡನೆ ಗಿಲ್ಗಾಲಿನಿಂದ ಹೋದನು.

ಎಲೀಯನು ಎಲೀಷನಿಗೆ, “ದಯವಿಟ್ಟು ಇಲ್ಲಿಯೇ ಇರು; ಏಕೆಂದರೆ ಬೇತೇಲಿಗೆ ಹೋಗುವಂತೆ ಯೆಹೋವನು ನನಗೆ ಆಜ್ಞಾಪಿಸಿದ್ದಾನೆ” ಎಂದು ಹೇಳಿದನು.

ಆದರೆ ಎಲೀಷನು, “ಯೆಹೋವನಾಣೆ, ನಿನ್ನಾಣೆ, ನಾನು ನಿನ್ನನ್ನು ಬಿಟ್ಟಿರುವುದಿಲ್ಲವೆಂದು ಪ್ರಮಾಣ ಮಾಡುತ್ತೇನೆ” ಎಂದು ಹೇಳಿದನು. ಇಬ್ಬರೂ ಬೇತೇಲಿಗೆ ಹೋದರು.

ಬೇತೇಲಿನಲ್ಲಿ ಪ್ರವಾದಿಗಳ ಗುಂಪೊಂದು ಎಲೀಷನ ಬಳಿಗೆ ಬಂದು, ಅವನಿಗೆ, “ಯೆಹೋವನು ಈ ದಿನ ನಿನ್ನ ಒಡೆಯನನ್ನು ನಿನ್ನಿಂದ ತೆಗೆದುಕೊಳ್ಳುತ್ತಾನೆಂಬುದು ನಿನಗೆ ತಿಳಿದಿದೆಯೇ?” ಎಂದು ಕೇಳಿದರು.

ಎಲೀಷನು, “ಹೌದು, ನನಗೆ ಅದು ತಿಳಿದಿದೆ. ಅದರ ಬಗ್ಗೆ ಮಾತನಾಡಬೇಡಿ” ಎಂದನು.

ಎಲೀಯನು ಎಲೀಷನಿಗೆ, “ದಯವಿಟ್ಟು ಇಲ್ಲಿಯೇ ಇರು, ಏಕೆಂದರೆ ಯೆಹೋವನು ಜೆರಿಕೊವಿಗೆ ಹೋಗುವಂತೆ ನನಗೆ ಆಜ್ಞಾಪಿಸಿದ್ದಾನೆ” ಎಂದು ಹೇಳಿದನು.

ಆದರೆ ಎಲೀಷನು, “ಯೆಹೋವನಾಣೆ, ನಿನ್ನಾಣೆ, ನಾನು ನಿನ್ನನ್ನು ಬಿಟ್ಟಿರುವುದಿಲ್ಲವೆಂದು ಪ್ರಮಾಣ ಮಾಡುತ್ತೇನೆ!” ಎಂದು ಹೇಳಿದನು. ಇಬ್ಬರೂ ಜೆರಿಕೊವಿಗೆ ಹೋದರು.

ಜೆರಿಕೊದಲ್ಲಿ ಪ್ರವಾದಿಗಳ ಗುಂಪೊಂದು ಎಲೀಷನ ಬಳಿಗೆ ಬಂದು ಅವನಿಗೆ, “ಯೆಹೋವನು ಈ ದಿನ ನಿನ್ನ ಒಡೆಯನನ್ನು ನಿನ್ನಿಂದ ತೆಗೆದುಕೊಳ್ಳುತ್ತಾನೆಂಬುದು ನಿನಗೆ ತಿಳಿದಿದೆಯೇ?” ಎಂದು ಕೇಳಿದರು.

ಎಲೀಷನು, “ಹೌದು, ನನಗೆ ಅದು ತಿಳಿದಿದೆ. ಅದರ ಬಗ್ಗೆ ಮಾತನಾಡಬೇಡಿ” ಎಂದನು.

ಎಲೀಯನು ಎಲೀಷನಿಗೆ, “ದಯವಿಟ್ಟು ಇಲ್ಲಿಯೇ ಇರು, ಏಕೆಂದರೆ ಯೆಹೋವನು ಜೋರ್ಡನ್ ನದಿಗೆ ಹೋಗುವಂತೆ ನನಗೆ ಆಜ್ಞಾಪಿಸಿದ್ದಾನೆ” ಎಂದು ಹೇಳಿದನು.

ಎಲೀಷನು, “ಯೆಹೋವನಾಣೆ, ನಿನ್ನಾಣೆ, ನಾನು ನಿನ್ನನ್ನು ಬಿಟ್ಟಿರುವುದಿಲ್ಲವೆಂದು ಪ್ರಮಾಣ ಮಾಡುತ್ತೇನೆ” ಎಂದು ಹೇಳಿದನು. ಅವರಿಬ್ಬರೂ ಮುಂದೆ ಸಾಗಿದರು.

ಅವರನ್ನು ಹಿಂಬಾಲಿಸಿಕೊಂಡು ಬಂದ ಪ್ರವಾದಿಗಳ ಗುಂಪಿನಲ್ಲಿ ಐವತ್ತು ಮಂದಿ ಅಲ್ಲಿದ್ದರು. ಎಲೀಯ ಮತ್ತು ಎಲೀಷರು ಜೋರ್ಡನ್ ನದಿಯ ಹತ್ತಿರ ನಿಂತುಕೊಂಡರು. ಆ ಐವತ್ತು ಮಂದಿ ಜನರು ಎಲೀಯ ಮತ್ತು ಎಲೀಷರಿಗಿಂತ ಬಹುದೂರದಲ್ಲಿ ನಿಂತುಕೊಂಡರು. ಎಲೀಯನು ತನ್ನ ಮೇಲಂಗಿಯನ್ನು ತೆಗೆದು ಅದರಿಂದ ನೀರನ್ನು ಹೊಡೆದನು. ಆಗ ನೀರು ಎರಡು ಭಾಗವಾಗಿ ಬಲಗಡೆಯಲ್ಲಿಯೂ ಎಡಗಡೆಯಲ್ಲಿಯೂ ನಿಂತುಕೊಂಡಿತು. ನಂತರ ಎಲೀಯ ಮತ್ತು ಎಲೀಷರು ಒಣನೆಲದ ಮೇಲೆ ನದಿಯನ್ನು ದಾಟಿದರು.

ಅವರು ನದಿಯನ್ನು ದಾಟಿದ ಮೇಲೆ ಎಲೀಯನು ಎಲೀಷನಿಗೆ, “ದೇವರು ನನ್ನನ್ನು ನಿನ್ನಿಂದ ತೆಗೆದುಕೊಳ್ಳುವುದಕ್ಕೆ ಮುಂಚೆ, ನಾನು ನಿನಗೆ ಏನು ಮಾಡಬೇಕೆಂದು ನೀನು ಅಪೇಕ್ಷಿಸುವೆ?” ಎಂದು ಕೇಳಿದನು.

ಎಲೀಷನು, “ನಿನ್ನ ಆತ್ಮವು ನನ್ನ ಮೇಲೆ ಎರಡರಷ್ಟಿರಬೇಕೆಂದು ನಾನು ನಿನ್ನಲ್ಲಿ ಬೇಡುತ್ತೇನೆ” ಎಂದು ಹೇಳಿದನು.

10 ಎಲೀಯನು, “ನೀನು ಕಷ್ಟಕರವಾದುದನ್ನು ಬೇಡಿಕೊಂಡೆ. ನಿನ್ನಿಂದ ನನ್ನನ್ನು ತೆಗೆದುಕೊಳ್ಳುವಾಗ ನೀನು ನನ್ನನ್ನು ಕಂಡರೆ, ಅದು ನಿನಗೆ ದೊರೆಯುವುದು. ಆದರೆ ನಿನ್ನಿಂದ ನನ್ನನ್ನು ತೆಗೆದುಕೊಳ್ಳುವಾಗ ನೀನು ನನ್ನನ್ನು ಕಾಣದಿದ್ದರೆ, ಅದು ನಿನಗೆ ದೊರೆಯುವುದಿಲ್ಲ” ಎಂದು ಹೇಳಿದನು.

11 ಎಲೀಯ ಮತ್ತು ಎಲೀಷ ಒಟ್ಟಿಗೆ ನಡೆಯುತ್ತಾ ಮಾತನಾಡುತ್ತಿದ್ದರು. ಇದ್ದಕ್ಕಿದ್ದಂತೆ, ಕೆಲವು ಕುದುರೆಗಳು ಮತ್ತು ರಥಗಳು ಬಂದು ಎಲೀಯನನ್ನು ಎಲೀಷನಿಂದ ಬೇರ್ಪಡಿಸಿದವು. ಆ ಕುದುರೆಗಳು ಮತ್ತು ರಥಗಳು ಬೆಂಕಿಯಂತಿದ್ದವು! ನಂತರ ಎಲೀಯನು ಸುಂಟರ ಗಾಳಿಯಲ್ಲಿ ಪರಲೋಕಕ್ಕೆ ಏರಿಹೋದನು.

12 ಎಲೀಷನು ಅದನ್ನು ನೋಡಿ, “ನನ್ನ ತಂದೆಯೇ! ನನ್ನ ತಂದೆಯೇ! ಇಸ್ರೇಲಿಗೆ ರಥರಥಾಶ್ವಗಳೂ ಮತ್ತು ಅಶ್ವದಳವೂ ಆಗಿದ್ದವನೇ!” ಎಂದು ಕೂಗಿಕೊಂಡನು.

ಎಲೀಷನು ಎಲೀಯನನ್ನು ಮತ್ತೆ ನೋಡಲಿಲ್ಲ. ಎಲೀಷನು ತನ್ನ ಬಟ್ಟೆಗಳನ್ನು ಹಿಡಿದುಕೊಂಡು, ತನ್ನ ದುಃಖವನ್ನು ತೋರ್ಪಡಿಸಲು ಅವುಗಳನ್ನು ಹರಿದು ತುಂಡುತುಂಡು ಮಾಡಿದನು. 13 ಎಲೀಯನ ಮೇಲಂಗಿಯು ನೆಲದ ಮೇಲೆ ಬಿತ್ತು. ಎಲೀಷನು ಅದನ್ನು ಎತ್ತಿಕೊಂಡು ಜೋರ್ಡನ್ ನದಿ ತೀರಕ್ಕೆ ಬಂದನು. ಆ ಕಂಬಳಿಯಿಂದ ನೀರನ್ನು ಹೊಡೆದು, “ಎಲೀಯನ ದೇವರಾದ ಯೆಹೋವನು ಎಲ್ಲಿದ್ದಾನೆ?” ಎಂದು ಕೇಳಿದನು. 14 ಎಲೀಷನು ನೀರನ್ನು ಹೊಡೆದಾಗ, ನೀರು ಎರಡು ಭಾಗವಾಗಿ ಬಲಗಡೆಯಲ್ಲೂ ಎಡಗಡೆಯಲ್ಲೂ ನಿಂತುಕೊಂಡಿತು! ಎಲೀಷನು ನದಿಯನ್ನು ದಾಟಿದನು.

ಎಲೀಯನ ಬಗ್ಗೆ ಪ್ರವಾದಿಗಳ ವಿಚಾರ

15 ಜೆರಿಕೊದಲ್ಲಿ ಪ್ರವಾದಿಗಳ ಗುಂಪೊಂದು ಎಲೀಷನನ್ನು ಕಂಡು, “ಎಲೀಯನ ಆತ್ಮವು ಈಗ ಎಲೀಷನ ಮೇಲಿದೆ!” ಎಂದು ಹೇಳಿ ಎಲೀಷನನ್ನು ಭೇಟಿಮಾಡಲು ಬಂದರು. ಅವರು ಎಲೀಷನಿಗೆ ಸಾಷ್ಟಾಂಗನಮಸ್ಕಾರ ಮಾಡಿದರು. 16 ಅವರು ಅವನಿಗೆ, “ನೋಡು, ನಮ್ಮಲ್ಲಿ ಐವತ್ತು ಮಂದಿ ಬಲಿಷ್ಠ ಜನರಿದ್ದಾರೆ. ನಿನ್ನ ಒಡೆಯನನ್ನು ಹುಡುಕಲು ದಯವಿಟ್ಟು ಅವರಿಗೆ ಅವಕಾಶಕೊಡು. ಯೆಹೋವನ ಆತ್ಮವು ಎಲೀಯನನ್ನು ಮೇಲಕ್ಕೆ ಎತ್ತಿಕೊಂಡು ಹೋಗಿ ಯಾವುದಾದರೂ ಬೆಟ್ಟದ ಮೇಲಾಗಲಿ ಅಥವಾ ಕಣಿವೆಯಲ್ಲಾಗಲಿ ಬೀಳಿಸಿರಬೇಕು” ಎಂದು ಹೇಳಿದರು.

ಆದರೆ ಎಲೀಷನು, “ಇಲ್ಲ, ಎಲೀಯನನ್ನು ಹುಡುಕಲು ಜನರನ್ನು ಕಳುಹಿಸಬೇಡಿ!” ಎಂದು ಉತ್ತರಿಸಿದನು.

17 ಎಲೀಷನು ಕಿರಿಕಿರಿಗೊಂಡು ಒಪ್ಪಿಕೊಳ್ಳುವವರೆಗೆ ಆ ಪ್ರವಾದಿಗಳ ಗುಂಪು ಅವನನ್ನು ಬೇಡಿಕೊಂಡರು. ನಂತರ ಎಲೀಷನು, “ಸರಿ, ಎಲೀಯನನ್ನು ಹುಡುಕಲು ಜನರನ್ನು ಕಳುಹಿಸಿ” ಎಂದು ಹೇಳಿದನು.

ಪ್ರವಾದಿಗಳ ಗುಂಪು ಎಲೀಯನನ್ನು ಹುಡುಕಲು ಐವತ್ತು ಮಂದಿ ಜನರನ್ನು ಕಳುಹಿಸಿದರು. ಅವರು ಮೂರು ದಿನ ಹುಡುಕಿದರೂ ಎಲೀಯನನ್ನು ಕಂಡು ಹಿಡಿಯಲಾಗಲಿಲ್ಲ. 18 ಅವರು ಎಲೀಷನು ನೆಲೆಸಿದ್ದ ಜೆರಿಕೊವಿಗೆ ಹೋದರು. ಅವರು ಎಲೀಯನನ್ನು ಕಂಡುಹಿಡಿಯಲಾಗಲಿಲ್ಲವೆಂದು ಎಲೀಷನಿಗೆ ಹೇಳಿದರು. ಎಲೀಷನು ಅವರಿಗೆ, “ನಾನು ನಿಮಗೆ ಹೋಗಬೇಡವೆಂದು ಹೇಳಿದೆನಲ್ಲ” ಎಂದನು.

ಮಾರ್ಕ 11:20-25

ನಂಬಿಕೆಯ ಶಕ್ತಿ

(ಮತ್ತಾಯ 21:20-22)

20 ಮರುದಿನ ಬೆಳಿಗ್ಗೆ, ಯೇಸು ತನ್ನ ಶಿಷ್ಯರೊಂದಿಗೆ ಹೋಗುತ್ತಿದ್ದನು. ಹಿಂದಿನ ದಿನ ಯೇಸು ಶಪಿಸಿದ ಅಂಜೂರದ ಮರವನ್ನು ಶಿಷ್ಯರು ನೋಡಿದರು. ಅಂಜೂರದ ಮರವು ಬೇರುಸಹಿತ ಒಣಗಿಹೋಗಿತ್ತು. 21 ಪೇತ್ರನು ಆ ಮರವನ್ನು ಜ್ಞಾಪಿಸಿಕೊಂಡು, ಯೇಸುವಿಗೆ, “ಗುರುವೇ, ನೋಡು! ನಿನ್ನೆ ನೀನು ಶಪಿಸಿದ ಅಂಜೂರದ ಮರ ಒಣಗಿಹೋಗಿದೆ!” ಎಂದನು.

22 ಯೇಸು, “ದೇವರಲ್ಲಿ ನಂಬಿಕೆ ಇಡಿರಿ. 23 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಈ ಬೆಟ್ಟಕ್ಕೆ, ‘ನೀನು ಹೋಗಿ ಸಮುದ್ರದೊಳಗೆ ಬೀಳು’ ಎಂದು ಹೇಳಿ, ಸಂಶಯವನ್ನೇಪಡದೆ, ನೀವು ಹೇಳಿದ್ದು ಖಂಡಿತವಾಗಿ ನೆರವೇರುತ್ತದೆ ಎಂದು ನಂಬಿದರೆ, ದೇವರು ಅದನ್ನು ನಿಮಗಾಗಿ ಮಾಡುತ್ತಾನೆ. 24 ಆದ್ದರಿಂದ ನೀವು ಪ್ರಾರ್ಥನೆಯಲ್ಲಿ ಬೇಡಿಕೊಂಡು, ಅದನ್ನೆಲ್ಲಾ ಹೊಂದಿಕೊಂಡಾಯಿತೆಂದು ನಂಬಿದರೆ, ಅದೆಲ್ಲಾ ನಿಮ್ಮದಾಗುತ್ತವೆ ಎಂದು ನಾನು ನಿಮಗೆ ಹೇಳುತ್ತೇನೆ. 25 ನೀವು ಪ್ರಾರ್ಥಿಸಲು ಸಿದ್ಧರಾಗಿರುವಾಗ, ನೀವು ಇನ್ನೊಬ್ಬನ ವಿಷಯದಲ್ಲಿ ಯಾವುದೇ ಕಾರಣದಿಂದಾಗಲಿ ಕೋಪದಿಂದಿರುವುದು ನಿಮ್ಮ ನೆನಪಿಗೆ ಬಂದರೆ, ಅವನನ್ನು ಕ್ಷಮಿಸಿಬಿಡಿ. ಆಗ ಪರಲೋಕದಲ್ಲಿರುವ ನಿಮ್ಮ ತಂದೆಯೂ ನಿಮ್ಮ ಪಾಪಗಳನ್ನು ಕ್ಷಮಿಸುವನು” ಎಂದು ಉತ್ತರಿಸಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International