Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 83:1-4

ಸ್ತುತಿಗೀತೆ. ರಚನೆಗಾರ: ಆಸಾಫ.

83 ದೇವರೇ, ಸುಮ್ಮನಿರಬೇಡ!
    ನಿನ್ನ ಕಣ್ಣುಗಳನ್ನು ಮುಚ್ಚಿಕೊಳ್ಳಬೇಡ.
    ದೇವರೇ, ದಯವಿಟ್ಟು ಮಾತನಾಡು.
ದೇವರೇ, ನಿನ್ನ ಶತ್ರುಗಳು ನಿನಗೆ ವಿರೋಧವಾಗಿ ಸಂಚು ಮಾಡುತ್ತಿದ್ದಾರೆ.
    ಬಹುಬೇಗನೆ ಅವರು ಆಕ್ರಮಣ ಮಾಡಲಿದ್ದಾರೆ.
ನಿನ್ನ ಜನರಿಗೆ ವಿರೋಧವಾಗಿ ರಹಸ್ಯ ಯೋಜನೆಗಳನ್ನು ಮಾಡುತ್ತಿದ್ದಾರೆ.
    ನಿನ್ನ ಪ್ರಿಯರ ವಿರೋಧವಾಗಿ ಅವರು ಸಂಚು ಮಾಡುತ್ತಿದ್ದಾರೆ.
ಅವರು ಹೀಗೆಂದುಕೊಳ್ಳುತ್ತಿದ್ದಾರೆ: “ಬನ್ನಿರಿ, ಅವರನ್ನು ಸಂಪೂರ್ಣವಾಗಿ ನಾಶಮಾಡೋಣ.
    ಆಗ ‘ಇಸ್ರೇಲ್’ ಎಂಬ ಹೆಸರೇ ಅಳಿದುಹೋಗುವುದು.”

ಕೀರ್ತನೆಗಳು 83:13-18

13 ಗಾಳಿಗೆ ತೂರಿಹೋಗುವ ಮೊಟಕುಬೇರಿನ ಕಳೆಯಂತೆ ಅವರನ್ನು ಮಾಡು.
    ಗಾಳಿಯು ಹೊಟ್ಟನ್ನು ಚದರಿಸುವಂತೆ ಅವರನ್ನು ಚದರಿಸು.
14 ಕಾಡನ್ನು ನಾಶಮಾಡುವ ಬೆಂಕಿಯಂತೆಯೂ
    ಬೆಟ್ಟಗಳನ್ನು ಸುಟ್ಟುಹಾಕುವ ಅಗ್ನಿಜ್ವಾಲೆಯಂತೆಯೂ ಅವರನ್ನು ನಾಶಮಾಡು.
15 ಬಿರುಗಾಳಿಯಿಂದ ಕೊಚ್ಚಿಕೊಂಡು ಹೋಗುವ ಧೂಳಿನಂತೆ ಅವರನ್ನು ಬೆನ್ನಟ್ಟಿಹೋಗು.
    ಸುಂಟರ ಗಾಳಿಯಂತೆ ಅವರನ್ನು ನಡುಗಿಸು.
16 ಯೆಹೋವನೇ, ತಾವು ನಿಜವಾಗಿಯೂ ಬಲಹೀನರೆಂಬುದನ್ನು ಅವರು ಕಲಿತುಕೊಳ್ಳುವಂತೆ ಮಾಡು;
    ಆಗ ಅವರು ನಿನ್ನ ಹೆಸರನ್ನು ಆರಾಧಿಸಬೇಕೆನ್ನುವರು.
17 ಅವರನ್ನು ಭಯವೂ ನಾಚಿಕೆಯೂ ಕವಿದುಕೊಂಡೇ ಇರಲಿ.
    ಅವರು ಅವಮಾನಗೊಂಡು ನಾಶವಾಗಲಿ.
18 ಆಗ ಅವರು ನೀನೊಬ್ಬನೇ ದೇವರೆಂದೂ
    ನಿನ್ನ ಹೆಸರು ಯೆಹೋವನೆಂದೂ ತಿಳಿದುಕೊಳ್ಳುವರು.
ಭೂಲೋಕಕ್ಕೆಲ್ಲಾ ಮಹೋನ್ನತನಾದ ದೇವರೊಬ್ಬನೇ
    ದೇವರೆಂದು ಅವರು ಅರಿತುಕೊಳ್ಳುವರು.

ವಿಮೋಚನಕಾಂಡ 5:1-6:13

ಫರೋಹನ ಮುಂದೆ ಮೋಶೆ ಆರೋನರು

ಮೋಶೆ ಆರೋನರು ಜನರೊಡನೆ ಮಾತಾಡಿದ ನಂತರ ಫರೋಹನ ಬಳಿಗೆ ಹೋಗಿ, “ಇಸ್ರೇಲರ ದೇವರಾದ ಯೆಹೋವನು ನಿನಗೆ, ‘ನನ್ನ ಜನರು ಅರಣ್ಯದೊಳಗೆ ಹೋಗಿ ಜಾತ್ರೆ ನಡೆಸಲು ಅಪ್ಪಣೆಕೊಡಬೇಕು’ ಎನ್ನುತ್ತಾನೆ” ಎಂದು ಹೇಳಿದರು.

ಆದರೆ ಫರೋಹನು, “ಯೆಹೋವನು ಯಾರು? ನಾನು ಆತನಿಗೆ ಯಾಕೆ ವಿಧೇಯನಾಗಬೇಕು. ಇಸ್ರೇಲರನ್ನು ನಾನು ಯಾಕೆ ಹೋಗಗೊಡಿಸಬೇಕು. ನೀವು ಯೆಹೋವನೆಂದು ಕರೆಯುವ ಆತನನ್ನು ನಾನು ಅರಿಯೆನು, ಆದ್ದರಿಂದ ಇಸ್ರೇಲರನ್ನು ಹೋಗಗೊಡಿಸುವುದಿಲ್ಲ” ಅಂದನು.

ಅದಕ್ಕೆ ಮೋಶೆ ಆರೋನರು, “ಇಬ್ರಿಯರ ದೇವರು ನಮ್ಮ ಸಂಗಡ ಮಾತಾಡಿದ್ದಾನೆ. ಆದ್ದರಿಂದ ನಾವು ಅರಣ್ಯದಲ್ಲಿ ಮೂರು ದಿನಗಳವರೆಗೆ ಪ್ರಯಾಣಮಾಡಿ ನಮ್ಮ ದೇವರಾದ ಯೆಹೋವನಿಗೆ ಯಜ್ಞವನ್ನು ಸಮರ್ಪಿಸುವೆವು. ಇಲ್ಲವಾದರೆ ಆತನು ನಮ್ಮನ್ನು ಕಾಯಿಲೆಯಿಂದಲೋ ಕತ್ತಿಯಿಂದಲೋ ಸಂಹರಿಸುವನು” ಎಂದು ಹೇಳಿದರು.

ಆದರೆ ಈಜಿಪ್ಟಿನ ರಾಜನು ಅವರಿಗೆ, “ಮೋಶೆ ಆರೋನರೇ, ನೀವು ಕೆಲಸಗಾರರಿಗೆ ತೊಂದರೆ ಮಾಡುತ್ತಿದ್ದೀರಿ, ಅವರು ತಮ್ಮ ಕೆಲಸ ಮಾಡಲಿ! ನೀವು ನಿಮ್ಮ ಕೆಲಸವನ್ನು ಮಾಡಿ! ಇಲ್ಲಿ ಬಹಳ ಮಂದಿ ಕೆಲಸಗಾರರಿದ್ದಾರೆ; ಅವರು ಕೆಲಸ ಮಾಡದಂತೆ ನೀವು ತಡೆಯುವುದೇಕೆ?” ಎಂದು ಹೇಳಿದನು.

ಫರೋಹನು ಜನರನ್ನು ದಂಡಿಸಿದ್ದು

ಅದೇ ದಿನ ಫರೋಹನು ಬಿಟ್ಟೀಕೆಲಸ ಮಾಡಿಸುವ ಅಧಿಕಾರಿಗಳಿಗೆ ಮತ್ತು ಮೇಸ್ತ್ರಿಗಳಿಗೆ, “ಇಟ್ಟಿಗೆಗಳನ್ನು ಮಾಡುವುದಕ್ಕೆ ಬೇಕಾದ ಹುಲ್ಲನ್ನು ನೀವು ಜನರಿಗೆ ಇಲ್ಲಿಯವರೆಗೆ ಕೊಟ್ಟಿದ್ದೀರಿ. ಆದರೆ ಈಗ ಇಟ್ಟಿಗೆಗಳನ್ನು ಮಾಡಲು ಅವರೇ ಹುಲ್ಲನ್ನು ಕಂಡುಕೊಳ್ಳಬೇಕೆಂದು ಅವರಿಗೆ ಹೇಳಿರಿ. ಆದರೂ ಅವರು ಹಿಂದೆ ಮಾಡುತ್ತಿದ್ದಷ್ಟೇ ಇಟ್ಟಿಗೆಗಳನ್ನು ಈಗಲೂ ಮಾಡಬೇಕು. ಅವರು ಸೋಮಾರಿಗಳಾಗಿದ್ದಾರೆ. ಆದಕಾರಣ ತಮ್ಮನ್ನು ಹೋಗಬಿಡಬೇಕೆಂದು ಕೇಳುತ್ತಿದ್ದಾರೆ. ಅವರಿಗೆ ಸಾಕಷ್ಟು ಕೆಲಸವಿಲ್ಲ. ಆದ್ದರಿಂದ ತಮ್ಮ ದೇವರಿಗೆ ಯಜ್ಞಗಳನ್ನು ಅರ್ಪಿಸಲು ಹೋಗಗೊಡಿಸಬೇಕೆಂದು ಕೇಳುತ್ತಾರೆ. ಈ ಜನರಿಗೆ ಇನ್ನೂ ಕಷ್ಟಕರವಾದ ಕೆಲಸವನ್ನು ಕೊಡಿರಿ. ಅವರು ಕಾರ್ಯಮಗ್ನರಾಗಿರುವಂತೆ ನೋಡಿಕೊಳ್ಳಿರಿ. ಆಗ ಅವರಿಗೆ ಮೋಶೆಯ ಸುಳ್ಳುಗಳನ್ನು ಕೇಳುವುದಕ್ಕೆ ಸಮಯವಿರುವುದಿಲ್ಲ” ಎಂದು ಹೇಳಿದನು.

10 ಆದ್ದರಿಂದ ಈಜಿಪ್ಟಿನ ಬಿಟ್ಟೀಕೆಲಸ ಮಾಡಿಸುವ ಅಧಿಕಾರಿಗಳು ಮತ್ತು ಮೇಸ್ತ್ರಿಗಳು ಇಸ್ರೇಲರ ಬಳಿಗೆ ಬಂದು, “ಫರೋಹನು ಇಟ್ಟಿಗೆಗಳನ್ನು ಮಾಡಲು ನಿಮಗೆ ಹುಲ್ಲು ಕೊಡುವುದಿಲ್ಲವೆಂದು ತೀರ್ಮಾನಿಸಿದ್ದಾನೆ. 11 ಆದ್ದರಿಂದ ನೀವೇ ಹೋಗಿ ಹುಲ್ಲನ್ನು ಕಂಡುಕೊಳ್ಳಿರಿ. ಆದರೆ ನೀವು ಮೊದಲು ಮಾಡುತ್ತಿದ್ದಷ್ಟೇ ಇಟ್ಟಿಗೆಗಳನ್ನು ಮಾಡಬೇಕು” ಎಂದು ಹೇಳಿದರು.

12 ಆದ್ದರಿಂದ ಜನರು ಹುಲ್ಲನ್ನು ಹುಡುಕುತ್ತಾ ಈಜಿಪ್ಟಿನ ಪ್ರತಿಯೊಂದು ಕಡೆಗೂ ಹೋದರು. 13 ಬಿಟ್ಟೀಕೆಲಸ ಮಾಡಿಸುವ ಅಧಿಕಾರಿಗಳು, ಜನರಿಂದ ಕಷ್ಟಕರವಾದ ಕೆಲಸಗಳನ್ನು ಬಲವಂತದಿಂದ ಮಾಡಿಸುತ್ತಲೇ ಇದ್ದರು. ಮೊದಲು ಅವರಿಗೆ ಹುಲ್ಲನ್ನು ಕೊಟ್ಟಿದ್ದಾಗ ಮಾಡುತ್ತಿದ್ದಷ್ಟೇ ಇಟ್ಟಿಗೆಗಳನ್ನು ಈಗಲೂ ಬಲವಂತದಿಂದ ಮಾಡಿಸಿದರು. 14 ಈಜಿಪ್ಟಿನ ಈ ಅಧಿಕಾರಿಗಳು ಇಬ್ರಿಯ ಮೇಸ್ತ್ರಿಗಳನ್ನು ಆರಿಸಿ ಜನರು ಮಾಡಿದ ಕೆಲಸಕ್ಕೆ ಅವರನ್ನು ಜವಾಬ್ದಾರರನ್ನಾಗಿ ಮಾಡಿದರು. ಈಜಿಪ್ಟಿನ ಅಧಿಕಾರಿಗಳು ಇಬ್ರಿಯ ಮೇಸ್ತ್ರಿಗಳನ್ನು ಹೊಡೆದು, “ನೀವು ಹಿಂದೆ ಮಾಡುತ್ತಿದ್ದಷ್ಟೇ ಇಟ್ಟಿಗೆಗಳನ್ನು ಯಾಕೆ ಮಾಡುತ್ತಿಲ್ಲ? ಹಿಂದೆ ನೀವು ಮಾಡಲು ಸಾಧ್ಯವಾಗಿದ್ದರೆ, ಈಗಲೂ ನೀವು ಮಾಡಬಹುದು” ಎಂದು ಹೇಳಿದರು.

15 ಆಗ ಇಬ್ರಿಯ ಮೇಸ್ತ್ರಿಗಳು ಫರೋಹನ ಬಳಿಗೆ ಹೋಗಿ, “ನಿನ್ನ ಸೇವಕರಾದ ನಮಗೆ ನೀನು ಯಾಕೆ ಈ ರೀತಿ ಮಾಡುತ್ತಿ? 16 ನೀನು ನಮಗೆ ಹುಲ್ಲು ಕೊಡುವುದಿಲ್ಲ. ಆದರೆ ನಾವು ಮೊದಲು ಮಾಡುತ್ತಿದ್ದಷ್ಟೇ ಇಟ್ಟಿಗೆಗಳನ್ನು ಮಾಡಬೇಕೆಂದು ನಮಗೆ ಅಪ್ಪಣೆಯಾಗಿರುವುದರಿಂದ ನಾವು ಅಧಿಕಾರಿಗಳಿಂದ ಹೊಡೆತ ತಿನ್ನಬೇಕಾಯಿತು. ಹೀಗೆ ನಿನ್ನ ಜನರು ತಪ್ಪು ಮಾಡುತ್ತಿದ್ದಾರೆ” ಎಂದು ದೂರು ಹೇಳಿದರು.

17 ಫರೋಹನು, “ನೀವು ಸೋಮಾರಿಗಳು. ನಿಮಗೆ ಕೆಲಸ ಮಾಡಲು ಇಷ್ಟವಿಲ್ಲ. ಆದ್ದರಿಂದ ನಿಮ್ಮನ್ನು ಹೋಗಗೊಡಿಸಬೇಕೆಂದು ನೀವು ನನ್ನನ್ನು ಕೇಳುತ್ತೀರಿ. ಇಲ್ಲಿಂದ ಹೊರಟುಹೋಗಿ ಯೆಹೋವನಿಗೆ ಯಜ್ಞಗಳನ್ನು ಮಾಡಬೇಕೆಂದು ಅಪೇಕ್ಷಿಸುತ್ತೀರಿ. 18 ಈಗ ನಿಮ್ಮ ಕೆಲಸಕ್ಕೆ ಹೋಗಿರಿ! ನಾವು ನಿಮಗೆ ಹುಲ್ಲನ್ನು ಕೊಡುವುದಿಲ್ಲ. ಆದರೆ ನೀವು ಹಿಂದೆ ಮಾಡುತ್ತಿದ್ದಷ್ಟೇ ಇಟ್ಟಿಗೆಗಳನ್ನು ಮಾಡಬೇಕು” ಎಂದು ಉತ್ತರಿಸಿದನು.

19 ಇಬ್ರಿಯ ಮೇಸ್ತ್ರಿಗಳಿಗೆ ತಾವು ತೊಂದರೆಯಲ್ಲಿದ್ದೇವೆಂದು ತಿಳಿಯಿತು. ತಾವು ಹಿಂದೆ ಮಾಡುತ್ತಿದ್ದಷ್ಟೇ ಇಟ್ಟಿಗೆಗಳನ್ನು ತಮ್ಮಿಂದ ಮಾಡಲಾಗುವುದಿಲ್ಲವೆಂದು ಅವರಿಗೆ ಗೊತ್ತಿತ್ತು.

20 ಅವರು ಫರೋಹನನ್ನು ಸಂಧಿಸಿ ಹೊರಟುಹೋಗುವಾಗ ತಮಗಾಗಿ ಕಾಯತ್ತಿದ್ದ ಮೋಶೆ ಆರೋನರನ್ನು ಕಂಡು, 21 “ನಮಗೆ ಹೋಗಲು ಅಪ್ಪಣೆಕೊಡಬೇಕೆಂದು ನೀವು ಫರೋಹನನ್ನು ಕೇಳಿ ನಮಗೆ ಕೆಟ್ಟದ್ದನ್ನು ಮಾಡಿದಿರಿ. ಫರೋಹನು ಮತ್ತು ಅವನ ಅಧಿಕಾರಿಗಳು ನಮ್ಮನ್ನು ದ್ವೇಷಿಸುವಂತೆ ನೀವು ಮಾಡಿದ್ದರಿಂದ ಯೆಹೋವನು ನಿಮಗೆ ತೀರ್ಪು ನೀಡಲಿ. ಅವರು ನಮ್ಮನ್ನು ಕೊಲ್ಲುವುದಕ್ಕೆ ನೀವು ಅವಕಾಶ ಮಾಡಿಕೊಟ್ಟಿರಿ” ಎಂದು ಹೇಳಿದರು.

ಮೋಶೆಯು ದೇವರಿಗೆ ಸಲ್ಲಿಸಿದ ದೂರು

22 ಆಗ ಮೋಶೆಯು ಯೆಹೋವನಿಗೆ ಪ್ರಾರ್ಥಿಸಿ, “ಯೆಹೋವನೇ, ನಿನ್ನ ಜನರಿಗೆ ಈ ಕೇಡನ್ನು ಏಕೆ ಮಾಡಿದೆ? ನನ್ನನ್ನು ಯಾಕೆ ಇಲ್ಲಿಗೆ ಕಳುಹಿಸಿದೆ? 23 ನಾನು ಫರೋಹನ ಬಳಿಗೆ ಹೋಗಿ ನೀನು ಹೇಳಿದ್ದನ್ನೇ ತಿಳಿಸಿದೆ. ಆದರೆ ಅಂದಿನಿಂದ ಅವನು ಜನರನ್ನು ಕೀಳಾಗಿ ಕಾಣುತ್ತಿದ್ದಾನೆ. ಅಲ್ಲದೆ ನೀನೂ ನಿನ್ನ ಜನರಿಗೆ ಸಹಾಯ ಮಾಡುತ್ತಿಲ್ಲ” ಅಂದನು.

ಆಗ ಯೆಹೋವನು ಮೋಶೆಗೆ, “ನಾನು ಫರೋಹನಿಗೆ ಮಾಡುವುದನ್ನು ಈಗ ನೀನು ನೋಡುವೆ. ನಾನು ನನ್ನ ಮಹಾಶಕ್ತಿಯನ್ನು ಅವನಿಗೆ ವಿರುದ್ಧವಾಗಿ ಉಪಯೋಗಿಸುವುದರಿಂದ ಅವನು ನನ್ನ ಜನರನ್ನು ಹೋಗಗೊಡಿಸುವನು; ಬಲವಂತದಿಂದ ಅವರನ್ನು ಹೊರಡಿಸುವನು” ಎಂದು ಹೇಳಿದನು.

ಬಳಿಕ ಯೆಹೋವನು ಮೋಶೆಗೆ, “ನಾನು ಯೆಹೋವನೇ. ನಾನು ಅಬ್ರಹಾಮನಿಗೂ ಇಸಾಕನಿಗೂ ಯಾಕೋಬನಿಗೂ ಕಾಣಿಸಿಕೊಂಡೆನು. ಅವರು ನನ್ನನ್ನು ‘ಎಲ್ ಶದ್ದಾಯ್’ (ಸರ್ವಶಕ್ತನಾದ ದೇವರು) ಎಂದು ಕರೆದರು. ಆದರೆ ನಾನು ನನ್ನನ್ನು ಯೆಹೋವ ಎಂಬ ನನ್ನ ಹೆಸರಿನಲ್ಲಿ ಅವರಿಗೆ ಗೊತ್ತುಪಡಿಸಿಕೊಳ್ಳಲಿಲ್ಲ. ನಾನು ಅವರೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡೆನು. ಕಾನಾನ್ ದೇಶವನ್ನು ಅವರಿಗೆ ಕೊಡುವುದಾಗಿ ನಾನು ವಾಗ್ದಾನ ಮಾಡಿದೆನು. ಅವರು ಆ ದೇಶದಲ್ಲಿ ಜೀವಿಸಿದರೂ ಅದು ಅವರ ಸ್ವಂತ ದೇಶವಾಗಿರಲಿಲ್ಲ. ಈಗ ಇಸ್ರೇಲರ ಕಷ್ಟಗಳನ್ನೂ ಬಲ್ಲೆನು; ಅವರು ಈಜಿಪ್ಟಿನವರ ಗುಲಾಮರೆಂದೂ ಬಲ್ಲೆನು; ನಾನು ನನ್ನ ಒಡಂಬಡಿಕೆಯನ್ನು ಜ್ಞಾಪಿಸಿಕೊಂಡಿದ್ದೇನೆ. ಆದ್ದರಿಂದ ನನ್ನ ಈ ಮಾತುಗಳನ್ನು ಇಸ್ರೇಲರಿಗೆ ತಿಳಿಸು: ‘ನಾನೇ ಯೆಹೋವನು. ಈಜಿಪ್ಟಿನವರು ನಿಮ್ಮಿಂದ ಮಾಡಿಸುವ ಬಿಟ್ಟೀಕೆಲಸದಿಂದ ತಪ್ಪಿಸಿ ಈಜಿಪ್ಟಿನವರ ಗುಲಾಮಗಿರಿಯಿಂದ ಬಿಡಿಸುವೆನು. ನನ್ನ ಮಹಾಶಕ್ತಿಯಿಂದ ಈಜಿಪ್ಟಿನವರನ್ನು ಭಯಂಕರವಾಗಿ ದಂಡಿಸುವೆನು; ಬಳಿಕ ನಿಮ್ಮನ್ನು ರಕ್ಷಿಸುವೆನು. ನೀವು ನನ್ನ ಜನರಾಗಿರುವಿರಿ; ನಾನು ನಿಮ್ಮ ದೇವರಾಗಿರುವೆನು. ನಿಮ್ಮ ದೇವರಾಗಿರುವ ಯೆಹೋವನಾದ ನಾನೇ ನಿಮ್ಮನ್ನು ಈಜಿಪ್ಟಿನವರ ಬಿಟ್ಟೀಕೆಲಸದಿಂದ ಬಿಡುಗಡೆಗೊಳಿಸಿದೆನೆಂದು ಆಗ ನೀವು ತಿಳಿದುಕೊಳ್ಳುವಿರಿ. ಇದಲ್ಲದೆ ಅಬ್ರಹಾಮ, ಇಸಾಕ ಮತ್ತು ಯಾಕೋಬರಿಗೆ ನಾನು ವಾಗ್ದಾನ ಮಾಡಿದ ದೇಶಕ್ಕೆ ನಿಮ್ಮನ್ನು ನಡಿಸುವೆನು. ನಾನು ಆ ದೇಶವನ್ನು ನಿಮಗೆ ಕೊಡುವೆನು. ಅದು ನಿಮ್ಮದಾಗಿರುವುದು. ನಾನೇ ಯೆಹೋವನು’” ಎಂದು ಹೇಳಿದನು.

ಅಂತೆಯೇ ಮೋಶೆಯು ಇಸ್ರೇಲರಿಗೆ ತಿಳಿಸಿದನು. ಆದರೆ ಜನರು ಬಹು ಪ್ರಯಾಸಪಟ್ಟು ದುಡಿಯುತ್ತಿದ್ದುದರಿಂದ ಮೋಶೆಯ ಮಾತಿಗೆ ಕಿವಿಗೊಡುವಷ್ಟು ತಾಳ್ಮೆ ಅವರಿಗಿರಲಿಲ್ಲ.

10 ಆಗ ಯೆಹೋವನು ಮೋಶೆಗೆ, 11 “ಹೋಗು, ಇಸ್ರೇಲರನ್ನು ಈಜಿಪ್ಟಿನಿಂದ ಕಳುಹಿಸಬೇಕೆಂದು ಫರೋಹನಿಗೆ ಹೇಳು” ಅಂದನು.

12 ಅದಕ್ಕೆ ಮೋಶೆ, “ಇಸ್ರೇಲರು ನನ್ನ ಮಾತನ್ನು ಕೇಳುವುದಿಲ್ಲ! ಆದ್ದರಿಂದ ಫರೋಹನು ನನ್ನ ಮಾತನ್ನು ಖಂಡಿತವಾಗಿ ಕೇಳುವುದಿಲ್ಲ. ನಾನು ಮಾತಾಡುವುದರಲ್ಲಿ ಜಾಣನಲ್ಲ”[a] ಎಂದು ಹೇಳಿದನು.

13 ಆದರೆ, ಯೆಹೋವನು ಮೋಶೆ ಮತ್ತು ಆರೋನರ ಸಂಗಡ ಮಾತಾಡಿ ಇಸ್ರೇಲರೊಡನೆಯೂ ಫರೋಹನೊಡನೆಯೂ ಮಾತಾಡಬೇಕೆಂದು ಆಜ್ಞಾಪಿಸಿದನು. ಅಲ್ಲದೆ ಈಜಿಪ್ಟಿನಿಂದ ಇಸ್ರೇಲರನ್ನು ಬಿಡಿಸಿಕೊಂಡು ಹೋಗಬೇಕೆಂದು ಯೆಹೋವನು ಅವರಿಗೆ ಆಜ್ಞಾಪಿಸಿದನು.

ಪ್ರಕಟನೆ 3:7-13

ಫಿಲದೆಲ್ಫಿಯದಲ್ಲಿರುವ ಸಭೆಗೆ ಯೇಸುವಿನ ಪತ್ರ

“ಫಿಲದೆಲ್ಫಿಯದಲ್ಲಿರುವ ಸಭೆಯ ದೂತನಿಗೆ ಇದನ್ನು ಬರೆ:

“ಪವಿತ್ರನೂ ಸತ್ಯವಂತನೂ ಆಗಿರುವಾತನು ನೀಡುವ ಸಂದೇಶವಿದು: ದಾವೀದನ ಬೀಗದ ಕೈ ನನ್ನಲ್ಲಿದೆ. ನಾನು ತೆರೆದದ್ದನ್ನು ಯಾರೂ ಮುಚ್ಚಲಾರರು;(A) ಮುಚ್ಚಿದ್ದನ್ನು ಯಾರೂ ತೆರೆಯಲಾರರು.

“ನೀನು ಮಾಡುವ ಕಾರ್ಯಗಳು ನನಗೆ ತಿಳಿದಿವೆ. ನಿನ್ನ ಮುಂದೆ ತೆರೆದ ಬಾಗಿಲನ್ನು ಇಟ್ಟಿದ್ದೇನೆ. ಅದನ್ನು ಯಾರೂ ಮುಚ್ಚಲಾರರು. ನೀನು ದುರ್ಬಲನೆಂಬುದು ನನಗೆ ತಿಳಿದಿದೆ. ಆದರೆ ನೀನು ನನ್ನ ಬೋಧನೆಯನ್ನು ಅನುಸರಿಸಿದೆ. ನನ್ನ ಹೆಸರನ್ನು ಹೇಳಲು ನೀನು ಹಿಂಜರಿಯಲಿಲ್ಲ. ಆಲಿಸು! ಅಲ್ಲಿ ಸೈತಾನನ ಗುಂಪಿಗೆ ಸೇರಿದವರಿದ್ದಾರೆ. ಆ ಜನರು ತಮ್ಮನ್ನು ಯೆಹೂದ್ಯರೆಂದು ಹೇಳಿಕೊಳ್ಳುತ್ತಾರೆ. ಆದರೆ ಅದು ಸುಳ್ಳು. ಅವರು ನಿಜವಾದ ಯೆಹೂದ್ಯರಲ್ಲ. ಆ ಜನರು ನಿನ್ನ ಮುಂದೆ ಬಂದು ನಿನ್ನ ಪಾದಗಳಿಗೆ ಅಡ್ಡಬಿದ್ದು ನಮಸ್ಕರಿಸುವಂತೆ ಮಾಡುತ್ತೇನೆ. ನಾನು ಪ್ರೀತಿಸಿದ ಜನರು ನೀವೇ ಎಂಬುದನ್ನು ಆಗ ಅವರು ತಿಳಿದುಕೊಳ್ಳುತ್ತಾರೆ. 10 ನೀನು ನನ್ನ ಆಜ್ಞೆಯನ್ನು ಸಹನೆಯಿಂದ ಮತ್ತು ತಾಳ್ಮೆಯಿಂದ ಅನುಸರಿಸಿದೆ. ಆದ್ದರಿಂದ ಈ ಲೋಕಕ್ಕೆಲ್ಲಾ ಉಂಟಾಗುವ ಕಡುಶೋಧನೆಯಿಂದ ನಾನು ನಿನ್ನನ್ನು ತಪ್ಪಿಸುತ್ತೇನೆ. ಭೂನಿವಾಸಿಗಳೆಲ್ಲರನ್ನು ಈ ಶೋಧನೆಯು ಪರಿಶೋಧಿಸುತ್ತದೆ.

11 “ನಾನು ಬೇಗನೆ ಬರುತ್ತೇನೆ. ಈಗ ನೀನಿರುವಂತೆಯೇ ಇರು. ಆಗ ಯಾರೂ ನಿನ್ನ ಕಿರೀಟವನ್ನು ಕಸಿದುಕೊಳ್ಳಲಾರರು. 12 ಜಯಗಳಿಸಿದ ವ್ಯಕ್ತಿಯನ್ನು ನನ್ನ ದೇವರ ಆಲಯದಲ್ಲಿ ಆಧಾರಸ್ತಂಭವನ್ನಾಗಿ ಮಾಡುವೆನು. ಅವನು ದೇವರ ಆಲಯವನ್ನು ಮತ್ತೆಂದಿಗೂ ಬಿಟ್ಟುಹೋಗುವ ಅಗತ್ಯವಿಲ್ಲ. ನನ್ನ ದೇವರ ಹೆಸರನ್ನೂ ನನ್ನ ದೇವರ ಪಟ್ಟಣದ ಹೆಸರನ್ನೂ ಅವನ ಮೇಲೆ ಬರೆಯುತ್ತೇನೆ. ಹೊಸ ಜೆರುಸಲೇಮೇ ಆ ಪಟ್ಟಣ. ಆ ಪಟ್ಟಣವು ನನ್ನ ದೇವರ ಬಳಿಯಿಂದ ಪರಲೋಕದಿಂದ ಇಳಿದುಬರುತ್ತದೆ. ನನ್ನ ಹೊಸ ಹೆಸರನ್ನೂ ಅವನ ಮೇಲೆ ಬರೆಯುತ್ತೇನೆ. 13 ಪವಿತ್ರಾತ್ಮನು ಸಭೆಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International