Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಯೆಶಾಯ 1:1

ಆಮೋಚನ ಮಗನಾದ ಯೆಶಾಯನಿಗೆ ಆದ ದೈವದರ್ಶನ. ಯೆಹೂದ ಮತ್ತು ಜೆರುಸಲೇಮಿನಲ್ಲಿ ನಡೆಯಲಿದ್ದ ಘಟನೆಗಳ ಬಗ್ಗೆ ದೇವರು ಯೆಶಾಯನಿಗೆ ಈ ದರ್ಶನ ನೀಡಿದನು; ಯೆಹೂದದ ಅರಸರಾದ ಉಜ್ಜೀಯ, ಯೋಥಾಮ, ಆಹಾಜ ಮತ್ತು ಹಿಜ್ಕೀಯರ ಕಾಲದಲ್ಲಿ ಯೆಶಾಯನಿಗೆ ಈ ದರ್ಶನವಾಯಿತು.

ಯೆಶಾಯ 1:10-20

10 ಸೊದೋಮಿನ ಅಧಿಪತಿಗಳೇ, ಯೆಹೋವನ ಸಂದೇಶವನ್ನು ಕೇಳಿರಿ. ಗೊಮೋರದ ಜನರೇ, ಆತನ ಉಪದೇಶವನ್ನು ಕೇಳಿರಿ. 11 ಯೆಹೋವನು ಹೇಳುವುದೇನೆಂದರೆ, “ಈ ಯಜ್ಞಗಳನ್ನೆಲ್ಲ ನೀವು ನನಗೆ ಕೊಡುತ್ತಲೇ ಇರುವುದೇಕೆ? ನಿಮ್ಮ ಆಡುಗಳ ಯಜ್ಞಗಳೂ, ಹೋರಿಗಳ, ಕುರಿಗಳ, ಆಡುಗಳ ಕೊಬ್ಬೂ ನನಗೆ ಬೇಕಿಲ್ಲ. ಅವುಗಳ ರಕ್ತಕ್ಕೆ ನಾನು ಪ್ರಸನ್ನನಾಗುವುದಿಲ್ಲ. 12 ನೀವು ನನ್ನನ್ನು ಸಂಧಿಸಲು ಬರುವಾಗ, ನನ್ನ ಪ್ರಾಕಾರಗಳನ್ನು ತುಳಿದುಹಾಕುವಿರಿ. ಹಾಗೆ ಮಾಡಲು ನಿಮಗೆ ಹೇಳಿದವರು ಯಾರು?

13 “ನಿಮ್ಮ ಅಯೋಗ್ಯವಾದ ಯಜ್ಞಗಳನ್ನು ನನ್ನ ಬಳಿಗೆ ತರಬೇಡಿ; ನಿಮ್ಮ ಧೂಪವು ನನಗೆ ಅಸಹ್ಯ; ನಿಮ್ಮ ಅಮಾವಾಸ್ಯೆಯನ್ನಾಗಲಿ ಹಬ್ಬವನ್ನಾಗಲಿ ಸಬ್ಬತ್ತನ್ನಾಗಲಿ ನಾನು ಸಹಿಸಲಾರೆ. ನಿಮ್ಮ ಪವಿತ್ರಕೂಟಗಳಲ್ಲಿ ನೀವು ಮಾಡುವ ದುಷ್ಟತನವನ್ನು ನಾನು ಸಹಿಸಲಾರೆ. 14 ನಿಮ್ಮ ಮಾಸಿಕಕೂಟಗಳನ್ನೂ ಸಭಾಕೂಟಗಳನ್ನೂ ನಾನು ದ್ವೇಷಿಸುತ್ತೇನೆ. ಇವು ನನಗೆ ಭಾರವಾಗಿವೆ. ಈ ಭಾರದಿಂದ ನಾನು ಬೇಸತ್ತು ಹೋಗಿದ್ದೇನೆ.

15 “ನೀವು ನನಗೆ ಪ್ರಾರ್ಥಿಸುವಾಗ ನಿಮ್ಮ ಕೈಗಳನ್ನೆತ್ತುವಿರಿ, ಆದರೆ ನಾನು ನಿಮ್ಮ ಕಡೆಗೆ ನೋಡುವುದಿಲ್ಲ. ನೀವು ಹೆಚ್ಚೆಚ್ಚಾಗಿ ಪ್ರಾರ್ಥಿಸುವಿರಿ, ಆದರೂ ನಾನು ನಿಮಗೆ ಕಿವಿಗೊಡುವುದಿಲ್ಲ. ಯಾಕೆಂದರೆ ನಿಮ್ಮ ಕೈಗಳು ರಕ್ತದಿಂದ ತುಂಬಿವೆ.

16 “ನಿಮ್ಮನ್ನು ಶುದ್ಧಿಮಾಡಿಕೊಳ್ಳಿರಿ; ಶುಚಿಪಡಿಸಿಕೊಳ್ಳಿರಿ. ನಿಮ್ಮ ದುಷ್ಕೃತ್ಯಗಳನ್ನು ತೊಲಗಿಸಿರಿ; ಅವುಗಳನ್ನು ನೋಡಲು ನನಗೆ ಮನಸ್ಸಿಲ್ಲ. ಕೆಟ್ಟದ್ದನ್ನು ಮಾಡದೆ ಒಳ್ಳೆಯದನ್ನೇ ಮಾಡಿರಿ; 17 ಒಳ್ಳೆಯದನ್ನೇ ಮಾಡಲು ಅಭ್ಯಾಸಮಾಡಿಕೊಳ್ಳಿರಿ. ಬೇರೆಯವರೊಂದಿಗೆ ನ್ಯಾಯವಂತರಾಗಿರಿ; ಕೆಡುಕರಿಗೆ ದಂಡನೆ ವಿಧಿಸಿರಿ; ಅನಾಥರಿಗೆ ಸಹಾಯಮಾಡಿರಿ; ವಿಧವೆಯರಿಗೂ ಸಹಾಯಮಾಡಿರಿ.”

18 ಯೆಹೋವನು ಹೀಗೆನ್ನುತ್ತಾನೆ: “ಬನ್ನಿರಿ, ನಾವು ಚರ್ಚೆ ಮಾಡೋಣ. ನಿಮ್ಮ ಪಾಪಗಳು ಕಡುಕೆಂಪಾಗಿದ್ದರೂ ಅವುಗಳನ್ನು ತೊಳೆದಾಗ ನೀವು ಹಿಮದಂತೆ ಬಿಳುಪಾಗುವಿರಿ. ನಿಮ್ಮ ಪಾಪಗಳು ಕಿರಮಂಜಿಬಣ್ಣವಾಗಿದ್ದರೂ ನೀವು ಉಣ್ಣೆಯಂತೆ ಬೆಳ್ಳಗಾಗುವಿರಿ.

19 “ನೀವು ನನ್ನ ಮಾತನ್ನು ಕೇಳಿದರೆ ನಿಮ್ಮ ದೇಶದ ಉತ್ತಮ ಫಸಲುಗಳಿಂದ ಆನಂದಿಸುವಿರಿ. 20 ನನ್ನ ಮಾತುಗಳನ್ನು ಕೇಳದೆ ಹೋದರೆ ನೀವು ನನಗೆ ವಿರೋಧಿಗಳಾಗಿದ್ದೀರಿ. ನಿಮ್ಮ ವೈರಿಯು ನಿಮ್ಮನ್ನು ನಾಶಮಾಡುವನು.”

ಯೋಹೋವನೇ ಇವುಗಳನ್ನು ನುಡಿದಿದ್ದಾನೆ.

ಕೀರ್ತನೆಗಳು 50:1-8

ರಚನೆಗಾರ: ಆಸಾಫ.

50 ದೇವಾಧಿದೇವನಾದ ಯೆಹೋವನು ಪೂರ್ವದಿಂದ ಪಶ್ಚಿಮದವರೆಗೂ
    ಇರುವ ಭೂನಿವಾಸಿಗಳೆಲ್ಲರನ್ನು ತನ್ನ ಸನ್ನಿಧಿಗೆ ಬರಲು ಆಜ್ಞಾಪಿಸುವನು.
ಸೌಂದರ್ಯದಿಂದ ಕಂಗೊಳಿಸುತ್ತಿರುವ ಚೀಯೋನಿನಲ್ಲಿ ದೇವರು ಪ್ರಕಾಶಿಸುತ್ತಾನೆ.
ನಮ್ಮ ದೇವರು ಬರುತ್ತಿದ್ದಾನೆ; ಆತನು ಸುಮ್ಮನಿರುವುದಿಲ್ಲ.
    ಆತನ ಮುಂಭಾಗದಲ್ಲಿ ಬೆಂಕಿಯು ಪ್ರಜ್ವಲಿಸುವುದು.
    ಆತನ ಸುತ್ತಲೂ ಬಿರುಗಾಳಿ ಬೀಸುವುದು.
ಯೆಹೋವನು ತನ್ನ ಜನರಿಗೆ ನ್ಯಾಯವಿಚಾರಣೆಗಾಗಿ
    ಭೂಮ್ಯಾಕಾಶಗಳನ್ನು ಸಾಕ್ಷಿಗಳಾಗಿ ಕರೆಯುವನು.
ದೇವರು, “ನನ್ನೊಡನೆ ಯಜ್ಞದ ಮೂಲಕ ಒಡಂಬಡಿಕೆ ಮಾಡಿಕೊಂಡ ನನ್ನ ಪವಿತ್ರ ಪ್ರಜೆಗಳೇ,
    ನನ್ನ ಸುತ್ತಲೂ ಸೇರಿಬನ್ನಿರಿ” ಎಂದು ಆಜ್ಞಾಪಿಸುವನು.

ದೇವರೊಬ್ಬನೇ ನ್ಯಾಯಾಧಿಪತಿ;
    ಆತನು ನೀತಿಸ್ವರೂಪನೆಂದು ಆಕಾಶಮಂಡಲವು ಘೋಷಿಸುವುದು.

ದೇವರು ಹೀಗೆನ್ನುತ್ತಾನೆ: “ನನ್ನ ಜನರೇ, ಇಸ್ರೇಲರೇ, ನನಗೆ ಕಿವಿಗೊಡಿರಿ!
    ನಾನು ನಿಮಗೆ ವಿರುದ್ಧವಾಗಿ ಸಾಕ್ಷಿ ಹೇಳುವೆನು.
    ದೇವರಾದ ನಾನೇ ನಿಮ್ಮ ದೇವರು!
ನಿಮ್ಮ ಯಜ್ಞಗಳ ಬಗ್ಗೆ ನಾನು ದೂರು ಹೇಳುತ್ತಿಲ್ಲ.
    ಇಸ್ರೇಲರಾದ ನೀವು ನನಗೆ ಸರ್ವಾಂಗಹೋಮಗಳನ್ನು ನಿತ್ಯವೂ ಅರ್ಪಿಸುತ್ತಲೇ ಇದ್ದೀರಿ.

ಕೀರ್ತನೆಗಳು 50:22-23

22 ದೇವರನ್ನು ಮರೆತುಬಿಟ್ಟವರೇ,
    ಇದನ್ನು ಗಮನಕ್ಕೆ ತಂದುಕೊಳ್ಳಿರಿ.
ಇಲ್ಲವಾದರೆ ನಿಮ್ಮನ್ನು ತುಂಡುತಂಡು ಮಾಡುವೆನು;
    ಯಾರೂ ನಿಮ್ಮನ್ನು ರಕ್ಷಿಸಲಾರರು!
23 ನನಗೆ ಕೃತಜ್ಞತಾಯಜ್ಞವನ್ನು ಅರ್ಪಿಸುವವನೇ ನನ್ನನ್ನು ಸನ್ಮಾನಿಸುವವನು.
    ಆದರೆ ನೀತಿವಂತನಾಗಿ ಜೀವಿಸುವವನಿಗೆ ನನ್ನ ರಕ್ಷಣಾಶಕ್ತಿಯನ್ನು ತೋರಿಸುವೆನು.”

ಇಬ್ರಿಯರಿಗೆ 11:1-3

ನಂಬಿಕೆ

11 ನಂಬಿಕೆ ಎಂದರೆ ನಾವು ನಿರೀಕ್ಷೆಯಿಂದಿರುವ ಸಂಗತಿಗಳಲ್ಲಿ ಭರವಸದಿಂದಿರುವುದೂ ನಮ್ಮ ಕಣ್ಣಿಗೆ ಕಾಣದಿರುವುದನ್ನು ನಿಜವೆಂದು ತಿಳಿದುಕೊಳ್ಳುವುದೂ ಆಗಿದೆ. ಬಹಳ ಹಿಂದಿನ ಕಾಲದಲ್ಲಿ ಜೀವಿಸಿದ್ದ ಜನರಲ್ಲಿ ಈ ರೀತಿಯ ನಂಬಿಕೆಯಿದ್ದುದರಿಂದ ದೇವರು ಅವರ ವಿಷಯದಲ್ಲಿ ಸಂತೋಷಪಟ್ಟನು.

ದೇವರು ತನ್ನ ಆಜ್ಞೆಯಿಂದ ಈ ಲೋಕವನ್ನು ಸೃಷ್ಟಿಸಿದನೆಂಬುದನ್ನು ಅರ್ಥಮಾಡಿಕೊಳ್ಳಲು ನಂಬಿಕೆ ನಮಗೆ ಸಹಾಯ ಮಾಡುತ್ತದೆ. ಹೇಗೆಂದರೆ ನಮ್ಮ ಕಣ್ಣಿಗೆ ಕಾಣುವಂಥ ವಸ್ತುಗಳಿಂದ ಈ ಜಗತ್ತು ಸೃಷ್ಟಿಯಾಗಲಿಲ್ಲ.

ಇಬ್ರಿಯರಿಗೆ 11:8-16

ದೇವರು ತಾನು ಕೊಡುತ್ತೇನೆಂದು ವಾಗ್ದಾನ ಮಾಡಿದ್ದ ಸ್ಥಳಕ್ಕೆ ಪ್ರಯಾಣ ಮಾಡಬೇಕೆಂದು ಅಬ್ರಹಾಮನನ್ನು ಕರೆದನು. ಆ ಸ್ಥಳವು ಎಲ್ಲಿದೆಯೆಂಬುದು ಅವನಿಗೆ ತಿಳಿದಿರಲಿಲ್ಲ. ಅಬ್ರಹಾಮನಲ್ಲಿ ನಂಬಿಕೆಯಿದ್ದುದರಿಂದ, ದೇವರಿಗೆ ವಿಧೇಯನಾಗಿ ಪ್ರಯಾಣ ಮಾಡಲಾರಂಭಿಸಿದನು. ದೇವರು ಕೊಡುವುದಾಗಿ ವಾಗ್ದಾನ ಮಾಡಿದ್ದ ದೇಶದಲ್ಲಿ ಅವನು ಪ್ರವಾಸಿಗನಂತೆ ವಾಸಮಾಡಿದ್ದು ನಂಬಿಕೆಯಿಂದಲೇ. ಅದೇ ವಾಗ್ದಾನಕ್ಕೆ ಸಹ ಭಾದ್ಯರಾಗಿದ್ದ ಇಸಾಕನೂ ಯಾಕೋಬನೂ ಅವನಂತೆಯೇ ಡೇರೆಗಳಲ್ಲಿ ವಾಸಿಸಿದರು. 10 ಅಬ್ರಹಾಮನು ಶಾಶ್ವತವಾದ ಅಡಿಪಾಯಗಳುಳ್ಳ ನಗರಕ್ಕಾಗಿ ಕಾದಿದ್ದನು. ದೇವರೇ ಸಂಕಲ್ಪಿಸಿ, ನಿರ್ಮಿಸಿದ ನಗರಕ್ಕಾಗಿ ಅವನು ಕಾದಿದ್ದನು.

11 ಅಬ್ರಹಾಮನು ಮಕ್ಕಳನ್ನು ಪಡೆಯಲಾಗದಷ್ಟು ವೃದ್ಧನಾಗಿದ್ದನು. ಸಾರಳು ಮಕ್ಕಳನ್ನು ಪಡೆಯಲು ಸಮರ್ಥಳಾಗಿರಲಿಲ್ಲ. ಆದರೆ ಅಬ್ರಹಾಮನಿಗೆ ದೇವರಲ್ಲಿ ನಂಬಿಕೆಯಿದ್ದುದರಿಂದ, ಅವರು ಮಕ್ಕಳನ್ನು ಪಡೆಯಲು ಸಮರ್ಥರಾಗುವಂತೆ ದೇವರು ಮಾಡಿದನು. 12 ಅವನು ಮೃತಪ್ರಾಯನಾಗಿದ್ದವನಂತೆ ವೃದ್ಧನಾಗಿದ್ದರೂ ಆಕಾಶದ ನಕ್ಷತ್ರಗಳಂತೆಯೂ ಸಮುದ್ರತೀರದ ಉಸುಬಿನಂತೆಯೂ ಅಸಂಖ್ಯಾತವಾಗಿ ಮಕ್ಕಳು ಹುಟ್ಟಿದರು.

13 ಈ ಮಹಾಪುರಷರೆಲ್ಲರೂ ತಾವು ಸಾಯುವವರೆಗೂ ನಂಬಿಕೆಯುಳ್ಳವರಾಗಿದ್ದರು. ದೇವರು ತನ್ನ ಜನರಿಗೆ ವಾಗ್ದಾನ ಮಾಡಿದ್ದವುಗಳನ್ನು ಆ ಜನರು ಪಡೆಯಲಿಲ್ಲ. ಮುಂದೆ ಬಹುಕಾಲದ ನಂತರ ಬರಲಿದ್ದ ಅವುಗಳನ್ನು ನೋಡಿ ಅವರು ಸಂತೋಷಗೊಂಡರು. ಅವರು ತಾವು ಈ ಲೋಕದಲ್ಲಿ ಪ್ರವಾಸಿಗಳಂತೆ ಮತ್ತು ಅಪರಿಚಿತರಂತೆ ಇದ್ದೇವೆ ಎಂಬುದನ್ನು ಒಪ್ಪಿಕೊಂಡರು. 14 ಅವರು ಹಾಗೆ ಒಪ್ಪಿಕೊಂಡಿದ್ದರಿಂದ ತಾವು ಸ್ವದೇಶಕ್ಕಾಗಿ ಕಾದಿರುವುದಾಗಿ ತೋರ್ಪಡಿಸಿಕೊಂಡಂತಾಯಿತು. 15 ಆ ಜನರು ತಾವು ಬಿಟ್ಟುಬಂದ ದೇಶದ ಮೇಲೇನಾದರೂ ಮನಸ್ಸಿಟ್ಟಿದ್ದರೆ, ಅವರು ಮರಳಿಹೋಗುತ್ತಿದ್ದರು. 16 ಆದರೆ ಆ ಜನರು ಉತ್ತಮ ದೇಶವಾದ ಪರಲೋಕಕ್ಕಾಗಿ ಕಾದಿದ್ದರು. ಆದ್ದರಿಂದ ದೇವರು ತನ್ನನ್ನು ಅವರ ದೇವರೆಂದು ಹೇಳಿಕೊಳ್ಳಲು ನಾಚಿಕೆಪಡದೆ ಅವರಿಗಾಗಿ ಒಂದು ನಗರವನ್ನು ಸಿದ್ಧಪಡಿಸಿದನು.

ಲೂಕ 12:32-40

ಹಣದಲ್ಲಿ ಭರವಸೆ ಇಡಬೇಡಿ

32 “ಚಿಕ್ಕ ಮಂದೆಯೇ, ಹೆದರಬೇಡ, ನಿಮಗೆ ರಾಜ್ಯವನ್ನು ಕೊಡಲು ನಿಮ್ಮ ತಂದೆ ಬಯಸಿದ್ದಾನೆ. 33 ನಿಮ್ಮಲ್ಲಿರುವ ಆಸ್ತಿಯನ್ನು ಮಾರಿ, ಬಂದ ಹಣವನ್ನು ಕೊರತೆಯಲ್ಲಿರುವ ಜನರಿಗೆ ಕೊಡಿರಿ. ಈ ಲೋಕದ ಐಶ್ವರ್ಯ ಶಾಶ್ವತವಲ್ಲ. ಆದ್ದರಿಂದ ಶಾಶ್ವತವಾದ ಐಶ್ವರ್ಯವನ್ನು ಗಳಿಸಿಕೊಳ್ಳಿರಿ. ಲಯವಾಗದ ಸಂಪತ್ತನ್ನು ಪರಲೋಕದಲ್ಲಿ ಶೇಖರಿಸಿಟ್ಟುಕೊಳ್ಳಿರಿ. ಆ ಭಂಡಾರವನ್ನು ಕಳ್ಳರು ಕದಿಯಲಾಗುವುದಿಲ್ಲ ಮತ್ತು ಹುಳಗಳು ನಾಶಮಾಡಲಾಗುವುದಿಲ್ಲ. 34 ನಿಮ್ಮ ಭಂಡಾರ ಎಲ್ಲಿದೆಯೋ ಅಲ್ಲಿಯೇ ನಿಮ್ಮ ಹೃದಯವೂ ಇರುತ್ತದೆ.

ಯಾವಾಗಲೂ ಸಿದ್ಧವಾಗಿರಿ

(ಮತ್ತಾಯ 24:42-44)

35 “ಉಡುಪನ್ನು ಧರಿಸಿಕೊಂಡು ಪೂರ್ಣಸಿದ್ಧರಾಗಿರಿ! ನಿಮ್ಮ ದೀಪಗಳು ಉರಿಯುತ್ತಿರಲಿ. 36 ಮದುವೆಯ ಔತಣದಿಂದ ಮನೆಗೆ ಮರಳಿಬರುವ ಯಜಮಾನನನ್ನು ಎದುರುನೋಡುತ್ತಿರುವ ಸೇವಕರಂತಿರಿ. ಯಜಮಾನನು ಬಂದು ಬಾಗಿಲನ್ನು ತಟ್ಟಿದಾಗ ಸೇವಕರು ಬಾಗಿಲನ್ನು ತೆರೆಯುತ್ತಾರೆ. 37 ಆ ಸೇವಕರೇ ಧನ್ಯರು. ಏಕೆಂದರೆ, ಅವರು ಸಿದ್ಧರಾಗಿದ್ದು ತನಗೋಸ್ಕರ ಕಾಯುತ್ತಿದ್ದುದನ್ನು ಯಜಮಾನನು ನೋಡುತ್ತಾನೆ. ನಾನು ನಿಮಗೆ ಸತ್ಯವಾಗಿ ಹೇಳುವುದೇನೆಂದರೆ, ಆಗ ಯಜಮಾನನು ತಾನೇ ಸೇವಕರ ಉಡುಪನ್ನು ಧರಿಸಿಕೊಂಡು, ಆ ಸೇವಕರನ್ನು ಕುಳ್ಳಿರಿಸಿ, ಅವರಿಗೆ ಊಟ ಬಡಿಸುತ್ತಾನೆ. 38 ಆ ಆಳುಗಳು ತಮ್ಮ ಯಜಮಾನನಿಗಾಗಿ ಮಧ್ಯರಾತ್ರಿಯವರೆಗೆ ಅಥವಾ ಇನ್ನೂ ಹೆಚ್ಚು ಸಮಯದವರೆಗೆ ಎಚ್ಚರದಿಂದ ಇರಬೇಕಾಗಬಹುದು. ಆದರೆ ಯಜಮಾನನು ಬಂದು, ಇನ್ನೂ ಎಚ್ಚರದಿಂದಿರುವ ಅವರನ್ನು ಕಂಡಾಗ ಅವರಿಗೆ ಸಂತೋಷವಾಗುವುದು.

39 “ಇದು ನಿಮ್ಮ ನೆನಪಿನಲ್ಲಿರಲಿ: ಕಳ್ಳನು ಬರುವ ಗಳಿಗೆಯು ಯಜಮಾನನಿಗೆ ತಿಳಿದರೆ, ಅವನು ತನ್ನ ಮನೆಗೆ ಕನ್ನಹಾಕಲು ಬಿಡುವನೇ? ಇಲ್ಲ! 40 ಅಂತೆಯೇ, ನೀವೂ ಸಿದ್ಧರಾಗಿರಿ! ನೀವು ನಿರೀಕ್ಷಿಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುವನು!”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International