Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 60

ದಾವೀದನು ಅರಾಮ್ ನಹಾರಾಯಿಮ್ ಮತ್ತು ಅರಾಮ್ ಜೋಬಾ ಎಂಬುವರೊಂದಿಗೆ ಹೋರಾಡಿದಾಗ ಮತ್ತು ಯೋವಾಬನು ಹಿಂತಿರುಗಿ ಬಂದು ಉಪ್ಪಿನ ಕಣಿವೆಯಲ್ಲಿ ಎದೋಮ್ಯರ 12,000 ಮಂದಿ ಸೈನಿಕರನ್ನು ಸೋಲಿಸಿದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.

60 ದೇವರೇ, ನೀನು ನಮ್ಮನ್ನು ಕೋಪದಿಂದ ಕೈಬಿಟ್ಟಿರುವೆ;
    ನಮ್ಮನ್ನು ನಾಶಗೊಳಿಸಿರುವೆ.
    ನಮ್ಮನ್ನು ಪುನರ್‌ಸ್ಥಾಪಿಸು.
ನೀನು ಭೂಮಿಯನ್ನು ನಡುಗಿಸಿ ಸೀಳಿಬಿಟ್ಟಿರುವೆ.
    ನಮ್ಮ ದೇಶವು ಕುಸಿದುಬೀಳುತ್ತಿದೆ;
    ಅದನ್ನು ಸರಿಪಡಿಸು.
ನೀನು ನಿನ್ನ ಜನರಿಗೆ ಅನೇಕ ಕಷ್ಟಗಳನ್ನು ಕೊಟ್ಟಿರುವೆ.
    ನಾವು ಕುಡಿದವರಂತೆ ತೂರಾಡುತ್ತಾ ಬೀಳುತ್ತಿದ್ದೇವೆ.
ನಿನ್ನ ಆರಾಧಕರನ್ನು ನೀನು ಎಚ್ಚರಿಸುವೆ.
    ಈಗ ಅವರು ಶತ್ರುಗಳಿಂದ ಪಾರಾಗಬಹುದು.

ನಿನ್ನ ಮಹಾಶಕ್ತಿಯಿಂದ ನಮ್ಮನ್ನು ರಕ್ಷಿಸು!
    ನಮ್ಮ ಪ್ರಾರ್ಥನೆಗೆ ಉತ್ತರನೀಡಿ ನಿನ್ನ ಪ್ರಿಯರನ್ನು ರಕ್ಷಿಸು!

ದೇವರು ತನ್ನ ಆಲಯದೊಳಗೆ ಹೀಗೆಂದನು:
    “ನಾನು ಅವರಿಗೆ ಶೆಕೆಮನ್ನು ಕೊಡುವೆನು;
    ಸುಕ್ಕೋತ್ ಕಣಿವೆಯನ್ನೂ ಅವರಿಗೆ ಕೊಡುವೆನು.
    ಗಿಲ್ಯಾದ್ ಮತ್ತು ಮನಸ್ಸೆ ನನ್ನವೇ.
    ಎಫ್ರಾಯೀಮ್ ನನ್ನ ಶಿರಸ್ತ್ರಾಣ.
    ಯೆಹೂದ ನನ್ನ ರಾಜದಂಡ.
    ಮೋವಾಬ್ ನನ್ನ ಸ್ನಾನಪಾತ್ರೆ.
    ಎದೋಮ್ ನನ್ನ ಪಾದರಕ್ಷೆಗಳ ಸ್ಥಳ.
    ನಾನು ಫಿಲಿಷ್ಟಿಯರನ್ನು ಸೋಲಿಸಿ ಜಯಘೋಷ ಮಾಡುವೆ.”

9-10 ದೇವರೇ, ನೀನು ನಮ್ಮನ್ನು ಕೈಬಿಟ್ಟಿರುವೆ.
    ನೀನು ನಮ್ಮ ಸೈನ್ಯಗಳ ಸಂಗಡ ಬರಲಿಲ್ಲ.
ಹೀಗಿರಲು, ಕೋಟೆಕೊತ್ತಲುಗಳುಳ್ಳ ಪಟ್ಟಣಕ್ಕೆ ನನ್ನನ್ನು ನಡೆಸುವವರು ಯಾರು?
    ಎದೋಮಿನ ವಿರುದ್ಧ ನನ್ನನ್ನು ನಡೆಸುವವರು ಯಾರು?
11 ದೇವರೇ, ವೈರಿಗಳನ್ನು ಸೋಲಿಸಲು ನಮಗೆ ಸಹಾಯಮಾಡು!
    ಜನರು ನಮಗೆ ಸಹಾಯಮಾಡಲಾರರು!
12 ದೇವರೊಬ್ಬನೇ ನಮ್ಮನ್ನು ಬಲಗೊಳಿಸಬಲ್ಲನು.
    ಆತನೊಬ್ಬನೇ ನಮ್ಮ ಶತ್ರುಗಳನ್ನು ಸೋಲಿಸಬಲ್ಲನು!

ಹೋಶೇಯ 11:12-12:14

12 “ಎಫ್ರಾಯೀಮನು ಸುಳ್ಳುದೇವರುಗಳಿಂದ ನನ್ನನ್ನು ಸುತ್ತುವರಿದನು.
    ಇಸ್ರೇಲಿನ ಜನರು ನನಗೆ ವಿರುದ್ಧವಾಗಿ ಎದ್ದರು. ಆದರೆ ಅವರು ನಾಶವಾದರು.
ಯೆಹೂದನು ಈಗಲೂ ದೇವರ ಜೊತೆಯಲ್ಲಿ ನಡೆಯುತ್ತಿದ್ದಾನೆ.
    ಯೆಹೂದನು ಪರಿಶುದ್ಧರಿಗೆ ನಿಷ್ಠೆಯಿಂದಿದ್ದಾನೆ.”

ಯೆಹೋವನು ಇಸ್ರೇಲಿಗೆ ವಿರುದ್ಧವಾಗಿದ್ದಾನೆ

12 ಎಫ್ರಾಯೀಮ್ ಸಮಯವನ್ನು ಹಾಳು ಮಾಡುತ್ತಿದ್ದಾನೆ. ಇಸ್ರೇಲು ದಿನವಿಡೀ ಗಾಳಿಯನ್ನು ಹಿಮ್ಮೆಟ್ಟುತ್ತಿದ್ದಾನೆ. ಜನರು ಹೆಚ್ಚೆಚ್ಚಾಗಿ ಸುಳ್ಳು ಹೇಳುತ್ತಿದ್ದಾರೆ; ಹೆಚ್ಚೆಚ್ಚಾಗಿ ಕದಿಯುತ್ತಾರೆ. ಅಶ್ಶೂರ್ಯದವರೊಂದಿಗೆ ಒಪ್ಪಂದ ಮಾಡಿರುತ್ತಾರೆ. ತಮ್ಮ ಆಲೀವ್ ಎಣ್ಣೆಯನ್ನು ಈಜಿಪ್ಟಿಗೆ ಕೊಂಡೊಯ್ಯುತ್ತಿದ್ದಾರೆ.

ಯೆಹೋವನು ಹೇಳುವುದೇನೆಂದರೆ, “ಇಸ್ರೇಲಿಗೆ ವಿರುದ್ಧವಾಗಿ ನಾನು ವಾದ ಮಾಡುತ್ತೇನೆ. ತಾನು ಮಾಡಿದ ಸಂಗತಿಗಳಿಗಾಗಿ ಯಾಕೋಬನು ಶಿಕ್ಷೆ ಅನುಭವಿಸಬೇಕು. ತನ್ನ ತಾಯಿಯ ಗರ್ಭದಲ್ಲಿರುವಾಗಲೇ ಯಾಕೋಬನು ತನ್ನ ಅಣ್ಣನಿಗೆ ಮೋಸ ಮಾಡಲು ಪ್ರಾರಂಭಮಾಡಿದ್ದನು. ಯಾಕೋಬನು ಬಲಶಾಲಿಯಾದ ಯೌವನಸ್ಥನು. ಆಗ ಅವನು ದೇವರೊಂದಿಗೆ ಹೋರಾಡಿದನು. ಯಾಕೋಬನು ದೇವದೂತನೊಡನೆ ಹೋರಾಡಿ ಗೆದ್ದನು. ಅವನು ಕನಿಕರಕ್ಕಾಗಿ ಮೊರೆಯಿಟ್ಟನು. ಇದು ಬೇತೇಲ್ ಎಂಬಲ್ಲಿ ನಡೆಯಿತು. ಆ ಸ್ಥಳದಲ್ಲಿ ಆತನು ನಮ್ಮೊಂದಿಗೆ ಮಾತನಾಡಿದನು. ಹೌದು ಯೆಹೋವನು ಸೈನ್ಯಗಳ ದೇವರಾಗಿದ್ದಾನೆ. ಆತನ ಹೆಸರು ಯೆಹೋವನು. ಆದ್ದರಿಂದ ನಿನ್ನ ಯೆಹೋವನ ಬಳಿಗೆ ಹಿಂದಿರುಗಿ ಬಾ. ಆತನಿಗೆ ವಿಧೇಯನಾಗಿರು. ಸರಿಯಾಗಿರುವದನ್ನೇ ಮಾಡು. ಯಾವಾಗಲೂ ನಿನ್ನ ದೇವರ ಮೇಲೆ ಭರವಸವಿಡು.

“ಯಾಕೋಬನು ಒಬ್ಬ ವ್ಯಾಪಾರಿ.[a] ಅವನು ತನ್ನ ಸ್ನೇಹಿತನಿಗೇ ಮೋಸಮಾಡುತ್ತಾನೆ. ಅವನ ತ್ರಾಸು ಮೋಸದ್ದು, ಎಫ್ರಾಯೀಮು, ‘ನಾನು ಐಶ್ವರ್ಯವಂತನು. ನನ್ನಲ್ಲಿ ನಿಜವಾದ ಐಶ್ವರ್ಯವಿದೆ. ನನ್ನ ಅಪರಾಧಗಳನ್ನು ಯಾರೂ ಕಂಡುಹಿಡಿಯಲಾರರು. ನನ್ನ ದುಷ್ಟತ್ವದ ಬಗ್ಗೆ ಯಾರಿಗೂ ತಿಳಿಯದು’ ಎಂದು ಅನ್ನುತ್ತಾನೆ.

“ಆದರೆ ನೀನು ಈಜಿಪ್ಟ್ ದೇಶದಲ್ಲಿರುವಾಗಲೇ ನಾನು ನಿನ್ನ ದೇವರಾಗಿದ್ದೇನೆ. ನೀನು ಗುಡಾರಗಳಲ್ಲಿ ವಾಸಿಸುವಂತೆ ಮಾಡುವೆನು. 10 ನಾನು ಪ್ರವಾದಿಗಳೊಂದಿಗೆ ಮಾತನಾಡಿದೆನು. ಅವರಿಗೆ ಅನೇಕ ದರ್ಶನಗಳನ್ನು ಕೊಟ್ಟೆನು. ನನ್ನ ಪಾಠಗಳನ್ನು ನಿಮಗೆ ಕಲಿಸುವಂತೆ ಅನೇಕ ಮಾರ್ಗಗಳನ್ನು ಪ್ರವಾದಿಗಳಿಗೆ ತೋರಿಸಿಕೊಟ್ಟೆನು. 11 ಆದರೆ ಗಿಲ್ಯಾದಿನ ಜನರು ಪಾಪ ಮಾಡಿದ್ದಾರೆ. ಅವರ ಬಳಿಯಲ್ಲಿ ಅನೇಕ ಭಯಂಕರವಾದ ವಿಗ್ರಹಗಳಿವೆ. ಗಿಲ್ಗಾಲಿನಲ್ಲಿ ಬಸವನ ವಿಗ್ರಹಗಳಿಗೆ ಜನರು ಯಜ್ಞವನ್ನರ್ಪಿಸುತ್ತಾರೆ. ಅವರಲ್ಲಿ ಅನೇಕ ಯಜ್ಞವೇದಿಕೆಗಳಿವೆ. ಹೇಗೆ ಉಳಿಮೆ ಮಾಡಿದ ಹೊಲದಲ್ಲಿ ಮಣ್ಣಿನ ಸಾಲುಗಳಿರುತ್ತದೋ ಅದೇ ರೀತಿಯಲ್ಲಿ ಅವರ ಬಳಿಯಲ್ಲಿ ವಿಗ್ರಹಗಳ ಸಾಲಿದೆ.

12 “ಯಾಕೋಬನು ಅರಾಮ್ ದೇಶಕ್ಕೆ ಓಡಿಹೋದನು. ಅಲ್ಲಿ ಇಸ್ರೇಲನು ಒಬ್ಬ ಹೆಂಡತಿಗಾಗಿ ಸೇವೆ ಮಾಡಿದನು. ಇನ್ನೊಂದು ಹೆಂಡತಿಯನ್ನು ಮಾಡಿಕೊಳ್ಳಲಿಕ್ಕೆ ಕುರಿಗಳನ್ನು ಕಾಯ್ದನು. 13 ಆದರೆ ದೇವರು ಇಸ್ರೇಲರನ್ನು ಈಜಿಪ್ಟಿನಿಂದ ಹೊರತರುವದಕ್ಕಾಗಿ ಒಬ್ಬ ಪ್ರವಾದಿಯನ್ನು ಉಪಯೋಗಿಸಿದನು. ಇಸ್ರೇಲರನ್ನು ಪ್ರವಾದಿಯ ಮೂಲಕ ಬಿಡಿಸಿದನು. 14 ಆದರೆ ಎಫ್ರಾಯೀಮನು ಯೆಹೋವನನ್ನು ಅತಿಯಾಗಿ ಕೋಪಿಸಿಕೊಳ್ಳುವಂತೆ ಮಾಡಿದನು. ಎಫ್ರಾಯೀಮನು ಅನೇಕ ಮಂದಿಯನ್ನು ಕೊಲೆ ಮಾಡಿದನು. ಅವನ ಅಪರಾಧಗಳಿಗಾಗಿ ಅವನು ಶಿಕ್ಷಿಸಲ್ಪಡುವನು. ಅವನ ದೇವರಾದ ಯೆಹೋವನು ಅವನು ಮಾಡಿದ ಅಪರಾಧಕ್ಕೆ ತಕ್ಕ ದಂಡನೆಯನ್ನು ವಿಧಿಸಿ ಅವಮಾನ ಹೊರುವಂತೆ ಮಾಡುವನು.”

ಕೊಲೊಸ್ಸೆಯವರಿಗೆ 3:18-4:1

ಮನೆಯವರೊಂದಿಗೆ ನಿಮ್ಮ ಹೊಸ ಜೀವನ

18 ಸ್ತ್ರೀಯರೇ, ನಿಮ್ಮ ಗಂಡಂದಿರಿಗೆ ವಿಧೇಯರಾಗಿರಿ. ಇದು ಪ್ರಭುವಿನಲ್ಲಿ ನೀವು ಮಾಡುವ ಯೋಗ್ಯ ಕಾರ್ಯವಾಗಿದೆ.

19 ಪುರುಷರೇ, ನಿಮ್ಮ ಪತ್ನಿಯರನ್ನು ಪ್ರೀತಿಸಿ, ಅವರೊಡನೆ ಸಾತ್ವಿಕರಾಗಿರಿ.

20 ಮಕ್ಕಳೇ, ನಿಮ್ಮ ತಂದೆತಾಯಿಗಳಿಗೆ ಎಲ್ಲಾ ವಿಷಯಗಳಲ್ಲಿಯೂ ವಿಧೇಯರಾಗಿರಿ. ಇದು ಪ್ರಭುವಿಗೆ ಸಂತೋಷವನ್ನು ಉಂಟುಮಾಡುವುದು.

21 ತಂದೆಗಳೇ, ನಿಮ್ಮ ಮಕ್ಕಳಿಗೆ ಕಿರುಕುಳ ಕೊಡಬೇಡಿ. ಇಲ್ಲವಾದರೆ ಅವರು ಕುಂದಿಹೋಗುವರು.

22 ಸೇವಕರೇ, ಎಲ್ಲಾ ಕಾರ್ಯಗಳಲ್ಲಿಯೂ ನಿಮ್ಮ ಯಜಮಾನರಿಗೆ ವಿಧೇಯರಾಗಿರಿ. ಅವರ ಮೆಚ್ಚಿಕೆಯನ್ನು ಗಳಿಸುವುದಕ್ಕಾಗಿ ಅವರ ಕಣ್ಣೆದುರಿನಲ್ಲಿ ಮಾತ್ರ ಸೇವೆ ಮಾಡದಿರಿ. ನೀವು ಪ್ರಭುವಿಗೆ ಭಯಪಡುವುದರಿಂದ ನಿಮ್ಮ ಯಜಮಾನರಿಗೆ ಯಥಾರ್ಥವಾಗಿ ಸೇವೆ ಮಾಡಿರಿ. 23 ಎಲ್ಲಾ ಕಾರ್ಯಗಳನ್ನು ನಿಮ್ಮಿಂದಾದಷ್ಟು ಅತ್ಯುತ್ತಮವಾಗಿಯೇ ಮಾಡಿರಿ. ಯಾವುದೇ ಕಾರ್ಯವನ್ನಾಗಲಿ ಜನರಿಗಾಗಿ ಮಾಡದೆ ಪ್ರಭುವಿಗಾಗಿ ಮಾಡಿರಿ. 24 ಪ್ರಭುವಿನಿಂದಲೇ ನಿಮಗೆ ಪ್ರತಿಫಲ ದೊರೆಯುತ್ತದೆ ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಂಡಿರಿ. ಆತನು ತನ್ನ ಜನರಿಗೆ ಮಾಡಿದ ವಾಗ್ದಾನವು ನಿಮ್ಮ ನೆನಪಿನಲ್ಲಿರಲಿ. 25 ಅನ್ಯಾಯ ಮಾಡುವವನು ಅದಕ್ಕೆ ತಕ್ಕ ಶಿಕ್ಷೆಯನ್ನು ಪಡೆಯುವನು. ಪ್ರಭುವಿನಲ್ಲಿ ಪಕ್ಷಪಾತವಿಲ್ಲ.

ಯಜಮಾನರೇ, ನಿಮ್ಮ ಸೇವಕರಿಗೆ ನ್ಯಾಯವಾದದ್ದನ್ನೂ ಸರಿಯಾದದ್ದನ್ನೂ ಮಾಡಿರಿ. ಪರಲೋಕದಲ್ಲಿ ನಿಮಗೂ ಒಬ್ಬ ಯಜಮಾನನಿದ್ದಾನೆ ಎಂಬುದು ನಿಮ್ಮ ಜ್ಞಾಪಕದಲ್ಲಿರಲಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International