Revised Common Lectionary (Semicontinuous)
ರಚನೆಗಾರ: ದಾವೀದ.
6 ಯೆಹೋವನೇ, ಕೋಪದಿಂದ ನನ್ನನ್ನು ಶಿಕ್ಷಿಸಬೇಡ;
ರೋಷದಿಂದ ನನ್ನನ್ನು ದಂಡಿಸಬೇಡ.
2 ಯೆಹೋವನೇ, ನನ್ನನ್ನು ಕನಿಕರಿಸು!
ನಾನು ರೋಗಿಯಾಗಿದ್ದೇನೆ, ಬಲಹೀನನಾಗಿದ್ದೇನೆ,
ನನ್ನನ್ನು ಗುಣಪಡಿಸು! ನನ್ನ ಎಲುಬುಗಳು ನಡುಗುತ್ತಿವೆ.
3 ನನ್ನ ಇಡೀ ದೇಹ ನಡುಗುತ್ತಿದೆ.
ಯೆಹೋವನೇ, ನನ್ನನ್ನು ಗುಣಪಡಿಸಲು ಇನ್ನೆಷ್ಟುಕಾಲ ಬೇಕು?
4 ಯೆಹೋವನೇ, ನನ್ನನ್ನು ಮತ್ತೆ ಬಲಪಡಿಸು!
ನಿನ್ನ ಮಹಾಕೃಪೆಯಿಂದ ನನ್ನನ್ನು ರಕ್ಷಿಸು.
5 ಸತ್ತವರು ನಿನ್ನನ್ನು ಜ್ಞಾಪಿಸಿಕೊಳ್ಳುವರೇ?
ಸಮಾಧಿಗಳಲ್ಲಿರುವವರು ನಿನ್ನನ್ನು ಸ್ತುತಿಸುವರೇ?
ಆದ್ದರಿಂದ ನನ್ನನ್ನು ಗುಣಪಡಿಸು.
6 ಯೆಹೋವನೇ, ರಾತ್ರಿಯೆಲ್ಲಾ ನಿನಗೆ ಪ್ರಾರ್ಥಿಸಿದೆನು.
ನನ್ನ ಹಾಸಿಗೆಯು ನನ್ನ ಕಣ್ಣೀರಿನಿಂದ ಒದ್ದೆಯಾಗಿದೆ.
ನನ್ನ ಹಾಸಿಗೆಯಿಂದ ಕಣ್ಣೀರು ತೊಟ್ಟಿಕ್ಕುತ್ತಿದೆ.
ನಾನು ಅತ್ತು ಗೋಳಾಡಿ ಬಲಹೀನನಾಗಿದ್ದೇನೆ.
7 ನನ್ನ ವೈರಿಗಳು ನನಗೆ ಅನೇಕ ತೊಂದರೆಗಳನ್ನು ಮಾಡಿರುವುದರಿಂದ ನನಗೆ ದುಃಖವೂ ಗೋಳಾಟವೂ ಉಂಟಾಗಿವೆ.
ನನ್ನ ಕಣ್ಣುಗಳು ಬಲಹೀನಗೊಂಡಿವೆ; ಅತ್ತತ್ತು ಆಯಾಸಗೊಂಡಿವೆ.
8 ದುಷ್ಟರೇ, ತೊಲಗಿಹೋಗಿರಿ.
ಯಾಕೆಂದರೆ ಯೆಹೋವನು ನನ್ನ ಗೋಳಾಟಕ್ಕೆ ಕಿವಿಗೊಟ್ಟಿದ್ದಾನೆ.
9 ಯೆಹೋವನು ನನ್ನ ವಿಜ್ಞಾಪನೆಯನ್ನು ಕೇಳಿದ್ದಾನೆ.
ಆತನು ನನ್ನ ಪ್ರಾರ್ಥನೆಯನ್ನು ಸ್ವೀಕರಿಸಿ ಸದುತ್ತರವನ್ನು ದಯಪಾಲಿಸುವನು.
10 ನನ್ನ ವೈರಿಗಳೆಲ್ಲ ಗಲಿಬಿಲಿಗೊಂಡು ನಿರಾಶರಾಗುವರು.
ಇದ್ದಕ್ಕಿದ್ದಂತೆ ಅವಮಾನಿತರಾಗಿ ಹಿಂತಿರುಗುವರು.
19 ಆಗ ಎಲೀಷನು, “ಸಮಾಧಾನದಿಂದ ಹೋಗು” ಎಂದನು.
ನಾಮಾನನು ಎಲೀಷನ ಬಳಿಯಿಂದ ಸ್ವಲ್ಪದೂರ ಹೋದನು. 20 ಆದರೆ ದೇವಮನುಷ್ಯನಾದ ಎಲೀಷನ ಸೇವಕನಾದ ಗೇಹಜಿಯು, “ನೋಡು, ಅರಾಮ್ಯನಾದ ನಾಮಾನನು ತಂದಿದ್ದ ಕಾಣಿಕೆಯನ್ನು ಸ್ವೀಕರಿಸದೆ ನನ್ನ ಒಡೆಯನಾದ ಎಲೀಷನು ಅವನನ್ನು ಕಳುಹಿಸಿಬಿಟ್ಟನು! ಯೆಹೋವನಾಣೆಯಾಗಿ, ನಾನು ನಾಮಾನನ ಹಿಂದೆ ಓಡಿಹೋಗಿ ಅವನಿಂದ ಏನನ್ನಾದರೂ ಪಡೆಯುತ್ತೇನೆ!” ಎಂದು ತನ್ನೊಳಗೆ ಅಂದುಕೊಂಡು,
21 ನಾಮಾನನ ಬಳಿಗೆ ಓಡಿದನು. ನಾಮಾನನು ತನ್ನ ಹಿಂದೆ ಓಡಿಬರುತ್ತಿರುವ ಒಬ್ಬನನ್ನು ನೋಡಿ ಗೇಹಜಿಯನ್ನು ಸಂಧಿಸಲು ರಥದಿಂದ ಇಳಿದನು. ನಾಮಾನನು, “ಎಲ್ಲವೂ ಕ್ಷೇಮವೇ?” ಎಂದು ಕೇಳಿದನು.
22 ಗೇಹಜಿಯು, “ಹೌದು, ಎಲ್ಲವೂ ಕ್ಷೇಮವಾಗಿದೆ. ನನ್ನ ಒಡೆಯನಾದ ಎಲೀಷನು ನನಗೆ, ‘ನೋಡು, ಎಫ್ರಾಯೀಮ್ ಬೆಟ್ಟಪ್ರಾಂತ್ಯದ ಪ್ರವಾದಿಗಳ ಗುಂಪಿನಿಂದ ನನ್ನ ಬಳಿಗೆ ಇಬ್ಬರು ತರುಣರು ಬಂದಿದ್ದಾರೆ. ದಯವಿಟ್ಟು ಅವರಿಗೆ ಮೂವತ್ತೈದು ಕಿಲೋ.ಗ್ರಾಂ. ಬೆಳ್ಳಿಯನ್ನು ಮತ್ತು ಎರಡು ಥಾನು ಬಟ್ಟೆಯನ್ನು ತೆಗೆದುಕೊಂಡು ಬಾ’ ಎಂದು ನನ್ನನ್ನು ಕಳುಹಿಸಿದನು” ಎಂದು ಹೇಳಿದನು.
23 ನಾಮಾನನು, “ದಯಮಾಡಿ ಎಪ್ಪತ್ತು ಕಿಲೋಗ್ರಾಂ ತೆಗೆದುಕೊ!” ಎಂದು ಗೇಹಜಿಗೆ ಒತ್ತಾಯಪಡಿಸಿ ಎಪ್ಪತ್ತು ಕಿಲೋಗ್ರಾಂ ಬೆಳ್ಳಿಯನ್ನು ಎರಡು ಚೀಲಗಳಲ್ಲಿ ಹಾಕಿದನು ಮತ್ತು ಎರಡು ಥಾನು ಬಟ್ಟೆಯನ್ನು ತೆಗೆದುಕೊಂಡು ತನ್ನ ಸೇವಕರಿಗೆ ಕೊಟ್ಟನು. ಆ ಸೇವಕರು ಈ ವಸ್ತುಗಳನ್ನು ತೆಗೆದುಕೊಂಡು ಗೇಹಜಿಯೊಡನೆ ಹೋದರು. 24 ಗೇಹಜಿಯು ಬೆಟ್ಟಕ್ಕೆ ಬಂದಾಗ, ಅವುಗಳನ್ನು ಸೇವಕರಿಂದ ತೆಗೆದುಕೊಂಡು ಅವರನ್ನು ಕಳುಹಿಸಿಬಿಟ್ಟನು. ನಂತರ ಗೇಹಜಿಯು ಅವುಗಳನ್ನು ಮನೆಯಲ್ಲಿ ಅಡಗಿಸಿಟ್ಟನು.
25 ಗೇಹಜಿಯು ಒಳಗೆ ಬಂದು ತನ್ನ ಒಡೆಯನಾದ ಎಲೀಷನ ಮುಂದೆ ನಿಂತುಕೊಂಡನು. ಎಲೀಷನು ಗೇಹಜಿಗೆ, “ನೀನು ಎಲ್ಲಿಗೆ ಹೋಗಿದ್ದೆ?” ಎಂದು ಕೇಳಿದನು.
ಗೇಹಜಿಯು, “ನಾನು ಎಲ್ಲಿಗೂ ಹೋಗಿರಲಿಲ್ಲ” ಎಂದನು.
26 ಎಲೀಷನು ಗೇಹಜಿಗೆ, “ಅದು ನಿಜವಲ್ಲ! ನಾಮಾನನು ನಿನ್ನನ್ನು ಸಂಧಿಸಲು ತನ್ನ ರಥದಿಂದ ಹಿಂದಕ್ಕೆ ತಿರುಗಿದಾಗ ನನ್ನ ಹೃದಯವು ನಿನ್ನ ಹತ್ತಿರದಲ್ಲಿಯೇ ಇತ್ತು. ಹಣವನ್ನು, ಬಟ್ಟೆಗಳನ್ನು, ಆಲೀವನ್ನು, ದ್ರಾಕ್ಷಿಯನ್ನು, ಕುರಿಗಳನ್ನು, ಹಸುಗಳನ್ನು ಅಥವಾ ಸೇವಕಸೇವಕಿಯರನ್ನು ತೆಗೆದುಕೊಳ್ಳುವ ಕಾಲ ಇದಲ್ಲ. 27 ಈಗ, ನಿನ್ನನ್ನೂ ನಿನ್ನ ಸಂತಾನದವರನ್ನೂ ಸದಾಕಾಲ ನಾಮಾನನ ರೋಗವು ಹಿಡಿದುಕೊಳ್ಳುವುದು. ನಿನಗೆ ಎಂದೆಂದಿಗೂ ಕುಷ್ಠರೋಗವಿರುವುದು!” ಎಂದು ಹೇಳಿದನು.
ಗೇಹಜಿಯು ಎಲೀಷನನ್ನು ಬಿಟ್ಟುಹೋದಾಗ, ಗೇಹಜಿಯ ಚರ್ಮವು ಮಂಜುಗಡ್ಡೆಯಂತೆ ಬಿಳುಪಾಯಿತು! ಗೇಹಜಿಯು ಕುಷ್ಠರೋಗ ಪೀಡಿತನಾದನು.
28 ಈ ಮಾತುಗಳನ್ನು ಕೇಳಿದ ಜನರು ಬಹು ಕೋಪಗೊಂಡು, “ಎಫೆಸದ ಅರ್ತೆಮಿದೇವಿಯೇ ಮಹಾದೇವಿ!” ಎಂದು ಕೂಗಿದರು. 29 ಪಟ್ಟಣದಲ್ಲಿದ್ದ ಜನರೆಲ್ಲಾ ಗಲಿಬಿಲಿಗೊಂಡರು. ಜನರು ಗಾಯ ಮತ್ತು ಅರಿಸ್ತಾರ್ಕ ಎಂಬವರನ್ನು ಹಿಡಿದುಕೊಂಡರು. (ಇವರಿಬ್ಬರು ಮಕೆದೋನಿಯದವರು ಮತ್ತು ಪೌಲನೊಂದಿಗೆ ಪ್ರಯಾಣ ಮಾಡುತ್ತಿದ್ದವರು.) ಬಳಿಕ ಜನರೆಲ್ಲರು ಕ್ರೀಡಾಂಗಣಕ್ಕೆ ಓಡಿಹೋದರು. 30 ಇದನ್ನು ತಿಳಿದ ಪೌಲನು ಒಳಗೆ ಹೋಗಿ ಜನರೊಂದಿಗೆ ಮಾತಾಡಬೇಕೆಂದಿದ್ದನು. ಆದರೆ ಯೇಸುವಿನ ಶಿಷ್ಯರು ಅವನನ್ನು ಹೋಗಗೊಡಿಸಲಿಲ್ಲ. 31 ಅಲ್ಲದೆ, ಪೌಲನ ಸ್ನೇಹಿತರಾಗಿದ್ದ ಈ ದೇಶದ ನಾಯಕರುಗಳಲ್ಲಿ ಕೆಲವರು ಅವನಿಗೆ ಒಂದು ಸಂದೇಶವನ್ನು ಕಳುಹಿಸಿ ಕ್ರೀಡಾಂಗಣದೊಳಗೆ ಹೋಗಬಾರದೆಂದು ತಿಳಿಸಿದರು.
32 ಕೆಲವು ಜನರು ಒಂದು ವಿಷಯದ ಬಗ್ಗೆ ಬೊಬ್ಬೆ ಹಾಕುತ್ತಿದ್ದರೆ, ಉಳಿದ ಜನರು ಬೇರೆ ವಿಷಯಗಳ ಬಗ್ಗೆ ಕೂಗಾಡುತ್ತಿದ್ದರು. ಸಭೆಯು ಬಹಳ ಗಲಿಬಿಲಿಗೊಳಗಾಯಿತು. ತಾವು ಅಲ್ಲಿಗೆ ಯಾಕೆ ಬಂದಿದ್ದೇವೆ ಎಂಬುದೇ ಅನೇಕ ಜನರಿಗೆ ತಿಳಿದಿರಲಿಲ್ಲ. 33 ಯೆಹೂದ್ಯರು ಅಲೆಕ್ಸಾಂಡರ್ ಎಂಬವನನ್ನು ಜನರ ಮುಂದೆ ನೂಕಿ ಮಾತಾಡಲು ಪುಸಲಾಯಿಸಿದರು. ಅವನು ಜನರಿಗೆ ಮೌನವಾಗಿರುವಂತೆ ಕೈಸನ್ನೆಮಾಡಿ ಜನರ ಪರವಾಗಿ ವಾದಿಸಬೇಕೆಂದಿದ್ದನು. 34 ಆದರೆ ಅಲೆಕ್ಸಾಂಡರನು ಯೆಹೂದ್ಯನೆಂದು ತಿಳಿದಾಗ ಜನರೆಲ್ಲರು, “ಎಫೆಸದ ಅರ್ತೆಮಿಯು ಮಹಾದೇವಿ! ಎಫೆಸದ ಅರ್ತೆಮಿಯು ಮಹಾದೇವಿ! ಅರ್ತೆಮಿಯು ಮಹಾದೇವಿ…!” ಎಂದು ಒಂದೇಸಮನೆ ಎರಡು ತಾಸುಗಳವರೆಗೆ ಕೂಗಿದರು.
35 ಬಳಿಕ ಪಟ್ಟಣದ ಅಧಿಕಾರಿಯು ಜನಸಮೂಹವನ್ನು ಶಾಂತಗೊಳಿಸಿ ಅವರಿಗೆ, “ಎಫೆಸದ ಜನರೇ, ಮಹಾದೇವತೆಯಾದ ಅರ್ತೆಮಿ ದೇವಿಯ ಗುಡಿಯನ್ನು ಎಫೆಸ ಪಟ್ಟಣವು ಕಾಪಾಡಿಕೊಂಡು ಬಂದಿರುವುದು ಜನರೆಲ್ಲರಿಗೆ ತಿಳಿದಿದೆ. ಆಕೆಯ ಪವಿತ್ರ ಕಲ್ಲನ್ನು[a] ಸಹ ನಾವು ಕಾಪಾಡಿಕೊಂಡು ಬಂದಿರುವುದು ಜನರೆಲ್ಲರಿಗೆ ಗೊತ್ತಿದೆ. 36 ಇದು ಸತ್ಯವಲ್ಲವೆಂದು ಯಾರೂ ಹೇಳಲಾಗದು. ಆದ್ದರಿಂದ ಮೌನದಿಂದಿರಬೇಕು. ನೀವು ಏನನ್ನೇ ಮಾಡುವುದಕ್ಕಿಂತ ಮೊದಲು ಸಮಾಧಾನದಿಂದ ಯೋಚಿಸಬೇಕು.
37 “ನೀವು ಈ ಜನರನ್ನು ಹಿಡಿದುಕೊಂಡು ಬಂದಿದ್ದೀರಿ. ಆದರೆ ಇವರು ನಮ್ಮ ದೇವತೆಯ ವಿರೋಧವಾಗಿ ಯಾವ ಕೆಟ್ಟದ್ದನ್ನೂ ಹೇಳಿಲ್ಲ. ಅವರು ಆಕೆಯ ಗುಡಿಯಿಂದ ಏನನ್ನೂ ಕದ್ದುಕೊಂಡಿಲ್ಲ. 38 ನಮ್ಮಲ್ಲಿ ನ್ಯಾಯಾಲಯಗಳಿವೆ ಮತ್ತು ನ್ಯಾಯಾಧೀಶರುಗಳು ಇದ್ದಾರೆ. ದೇಮೇತ್ರಿಯನಿಗಾಗಲಿ ಮತ್ತು ಅವನೊಂದಿಗೆ ಕೆಲಸ ಮಾಡುವ ಜನರಿಗಾಗಲಿ ಯಾರ ಮೇಲಾದರೂ ದೂರುಗಳಿವೆಯೇ? ದೂರುಗಳಿದ್ದರೆ, ಅವರು ನ್ಯಾಯಾಲಯಗಳಿಗೆ ಹೋಗಬೇಕು! ಅವರು ಪರಸ್ಪರ ವಾದ ಮಾಡಲು ಅದೇ ತಕ್ಕ ಸ್ಥಳ!
39 “ನೀವು ಬೇರೆ ಏನನ್ನಾದರೂ ಕುರಿತು ಮಾತಾಡಬೇಕೆಂದಿದ್ದೀರಾ? ಮಾತಾಡಬೇಕೆಂದಿದ್ದರೆ, ಕಾನೂನುಬದ್ಧವಾದ ನಗರಸಭೆಗೆ ಬನ್ನಿರಿ. ಅಲ್ಲಿ ಅದನ್ನು ನಿರ್ಧರಿಸಬಹುದು. 40 ನಾನು ಇದನ್ನು ಯಾಕೆ ಹೇಳುತ್ತಿದ್ದೇನೆಂದರೆ, ಇಂದಿನ ಗಲಭೆಯನ್ನು ಕಂಡ ಕೆಲವು ಜನರು ನಾವು ದಂಗೆ ಏಳುತ್ತಿದ್ದೇವೆಂದು ಹೇಳುವ ಸಾಧ್ಯತೆಯಿದೆ. ನಾವು ಈ ಗಲಭೆಯನ್ನು ಸಮರ್ಥಿಸಿಕೊಳ್ಳಲಾಗುವುದಿಲ್ಲ. ಯಾಕೆಂದರೆ ಈ ಸಭೆಗೆ ಸರಿಯಾದ ಕಾರಣವೇ ಇಲ್ಲ” ಎಂದು ಹೇಳಿದನು. 41 ಪಟ್ಟಣದ ಅಧಿಕಾರಿಯು ಈ ಸಂಗತಿಗಳನ್ನು ಹೇಳಿದ ಬಳಿಕ ಮನೆಗೆ ಹೋಗಬೇಕೆಂದು ಜನರಿಗೆ ತಿಳಿಸಿದನು. ಆಗ ಅವರೆಲ್ಲರು ಹೊರಟುಹೋದರು.
Kannada Holy Bible: Easy-to-Read Version. All rights reserved. © 1997 Bible League International