Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಅಪೊಸ್ತಲರ ಕಾರ್ಯಗಳು 2:1-21

ಪವಿತ್ರಾತ್ಮನ ಆಗಮನ

ಪಂಚಾಶತ್ತಮ ಹಬ್ಬದ[a] ದಿನ ಬಂದಾಗ ಅವರೆಲ್ಲರು ಒಂದು ಸ್ಥಳದಲ್ಲಿ ಒಟ್ಟಾಗಿ ಸೇರಿದ್ದರು. ಆಗ, ಆಕಾಶದಿಂದ ಒಂದು ಶಬ್ದ ಇದ್ದಕ್ಕಿದ್ದಂತೆ ಬಂದಿತು. ಬಿರುಗಾಳಿ ಬೀಸುತ್ತಿದೆಯೋ ಎಂಬಂತಿತ್ತು ಆ ಶಬ್ದ. ಅವರು ಕುಳಿತುಕೊಂಡಿದ್ದ ಮನೆಯಲ್ಲೆಲ್ಲಾ ಆ ಶಬ್ದ ತುಂಬಿಕೊಂಡಿತು. ಬೆಂಕಿಯ ಜ್ವಾಲೆಗಳಂತಿದ್ದ ಏನನ್ನೊ ಅವರು ಕಂಡರು. ಜ್ವಾಲೆಗಳು ವಿಂಗಡವಾಗಿ ಅಲ್ಲಿದ್ದ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ನೆಲೆಸಿದವು. ಅವರೆಲ್ಲರೂ ಪವಿತ್ರಾತ್ಮಭರಿತರಾದರು ಮತ್ತು ವಿವಿಧ ಭಾಷೆಗಳಲ್ಲಿ ಮಾತಾಡತೊಡಗಿದರು. ಪವಿತ್ರಾತ್ಮನೇ ಅವರಿಗೆ ಆ ಶಕ್ತಿಯನ್ನು ಕೊಟ್ಟನು.

ಬಹು ಧಾರ್ಮಿಕರಾದ ಅನೇಕ ಯೆಹೂದ್ಯರು ಆ ಸಮಯದಲ್ಲಿ ಜೆರುಸಲೇಮಿನಲ್ಲಿದ್ದರು. ಇವರಲ್ಲಿ ಪ್ರಪಂಚದ ಪ್ರತಿಯೊಂದು ದೇಶದಿಂದ ಬಂದ ಜನರಿದ್ದರು. ಈ ಶಬ್ದವನ್ನು ಕೇಳಿ ಈ ಜನರ ಒಂದು ದೊಡ್ಡ ಸಮೂಹವೇ ಅಲ್ಲಿಗೆ ಬಂದಿತು. ಅಪೊಸ್ತಲರು ಮಾತಾಡುತ್ತಿರುವುದು ಪ್ರತಿಯೊಬ್ಬರಿಗೂ ಅವರವರ ಸ್ವಂತ ಭಾಷೆಗಳಲ್ಲಿ ಕೇಳಿಸುತ್ತಿರುವುದನ್ನು ಕಂಡು ಅವರಿಗೆ ಆಶ್ಚರ್ಯವಾಯಿತು.

ಇದನ್ನು ನೋಡಿದ ಯೆಹೂದ್ಯರೆಲ್ಲರೂ ವಿಸ್ಮಯಗೊಂಡರು. ಹೀಗೆ ಮಾಡಲು ಅಪೊಸ್ತಲರಿಗೆ ಹೇಗೆ ಸಾಧ್ಯವಾಯಿತೆಂದು ಅವರಿಗೆ ಅರ್ಥವಾಗಲಿಲ್ಲ. ಅವರು, “ಮಾತಾಡುತ್ತಿರುವ ಈ ಜನರು (ಅಪೊಸ್ತಲರು) ಗಲಿಲಾಯದವರು![b] ಆದರೆ ಇವರು ನಮ್ಮ ಸ್ವಂತ ಭಾಷೆಗಳಲ್ಲಿ ಮಾತಾಡುತ್ತಿರುವಂತೆ ಕೇಳಿಸುತ್ತಿದೆ. ಇದು ಹೇಗೆ ಸಾಧ್ಯ? ನಾವು ಬೇರೆಬೇರೆ ಸ್ಥಳಗಳವರು. ನಮ್ಮಲ್ಲಿ ಪಾರ್ಥ್ಯರು, ಮೇದ್ಯರು, ಏಲಾಮಿನವರು, ಮೆಸೊಪೊಟೇಮದವರು, ಯೂದಾಯದವರು, ಕಪ್ಪದೋಕ್ಯಯದವರು, ಪೊಂತದವರು, ಏಷ್ಯಾದವರು,[c] 10 ಫ್ರಿಜಿಯದವರು, ಪಾಂಫಿಲಿಯದವರು, ಈಜಿಪ್ಟ್‌ನವರು ಮತ್ತು ಸಿರೇನಿನ ಬಳಿಯಲ್ಲಿರುವ ಲಿಬಿಯ ಪ್ರಾಂತ್ಯದವರು, ರೋಮ್‌ನವರು, 11 ಕ್ರೇಟ್‌ನವರು ಮತ್ತು ಅರೇಬಿಯವರು ಇದ್ದಾರೆ. ನಮ್ಮಲ್ಲಿರುವ ಕೆಲವು ಜನರು ಹುಟ್ಟು ಯೆಹೂದ್ಯರು. ಉಳಿದವರು ಮತಾಂತರ ಹೊಂದಿದವರು. ನಾವು ಬೇರೆಬೇರೆ ದೇಶಗಳವರು. ಆದರೆ ಈ ಜನರು ಮಾತಾಡುತ್ತಿರುವುದು ನಮ್ಮ ಸ್ವಂತ ಭಾಷೆಗಳಲ್ಲಿ ನಮಗೆ ಕೇಳಿಸುತ್ತಿದೆ! ಅವರು ದೇವರ ಬಗ್ಗೆ ಹೇಳುತ್ತಿರುವ ಮಹಾಸಂಗತಿಗಳು ನಮಗೆಲ್ಲರಿಗೂ ಅರ್ಥವಾಗುತ್ತಿವೆ” ಎಂದು ಹೇಳಿದರು.

12 ಜನರೆಲ್ಲರೂ ವಿಸ್ಮಯಗೊಂಡರು ಮತ್ತು ಗಲಿಬಿಲಿಯಾದರು. ಅವರು, “ಏನು ನಡೆಯುತ್ತಿದೆ?” ಎಂದು ಒಬ್ಬರನ್ನೊಬ್ಬರು ಕೇಳತೊಡಗಿದರು. 13 ಕೆಲವರು ಅಪೊಸ್ತಲರನ್ನು ನೋಡಿ ನಗುತ್ತಾ, “ಇವರು ಅತಿಯಾಗಿ ದ್ರಾಕ್ಷಾರಸ ಕುಡಿದು ಮತ್ತರಾಗಿದ್ದಾರೆ” ಎಂದು ಹಾಸ್ಯಮಾಡಿದರು.

ಪೇತ್ರನ ಪ್ರಸಂಗ

14 ಬಳಿಕ ಪೇತ್ರನು ಉಳಿದ ಹನ್ನೊಂದು ಮಂದಿ ಅಪೊಸ್ತಲರೊಂದಿಗೆ ಎದ್ದುನಿಂತುಕೊಂಡನು. ಎಲ್ಲಾ ಜನರಿಗೆ ಕೇಳುವಂತೆ ಅವನು ಗಟ್ಟಿಯಾಗಿ ಹೀಗೆಂದನು: “ಯೆಹೂದ್ಯರೇ, ಜೆರುಸಲೇಮಿನಲ್ಲಿ ವಾಸವಾಗಿರುವ ಜನರೇ, ನನಗೆ ಕಿವಿಗೊಡಿರಿ. ನೀವು ತಿಳಿದುಕೊಳ್ಳಬೇಕಾದ ಸಂಗತಿಯನ್ನು ನಾನು ನಿಮಗೆ ಹೇಳುತ್ತೇನೆ. 15 ನೀವು ಯೋಚಿಸಿಕೊಂಡಿರುವಂತೆ ಈ ಜನರು ಕುಡಿದು ಮತ್ತರಾದವರಲ್ಲ. ಈಗ ಮುಂಜಾನೆ ಒಂಭತ್ತು ಗಂಟೆಯಷ್ಟೆ! 16 ಆದರೆ ಈ ಹೊತ್ತು ಇಲ್ಲಿ ನಡೆಯುತ್ತಿರುವ ಸಂಗತಿಗಳ ಬಗ್ಗೆ ಪ್ರವಾದಿಯಾದ ಯೋವೇಲನು ಹೀಗೆ ಬರೆದಿದ್ದಾನೆ:

17 ‘ದೇವರು ಹೀಗೆನ್ನುತ್ತಾನೆ:
ಕೊನೆಯ ದಿನಗಳಲ್ಲಿ, ನಾನು ನನ್ನ ಆತ್ಮವನ್ನು ಎಲ್ಲಾ ಜನರ ಮೇಲೆ ಸುರಿಸುವೆನು.
    ನಿಮ್ಮ ಗಂಡುಮಕ್ಕಳು, ಹೆಣ್ಣುಮಕ್ಕಳು ಪ್ರವಾದಿಸುವರು.
    ನಿಮ್ಮ ಯುವಜನರು ದರ್ಶನಗಳನ್ನು ಕಾಣುವರು.
    ನಿಮ್ಮ ವಯೋವೃದ್ಧರು ವಿಶೇಷ ಕನಸುಗಳನ್ನು ಕಾಣುವರು.
18 ಆ ಸಮಯದಲ್ಲಿ ನಾನು ನನ್ನ ಆತ್ಮವನ್ನು ನನ್ನ ದಾಸದಾಸಿಯರ ಮೇಲೆ ಸುರಿಸುವೆನು.
    ಆಗ ಅವರು ಪ್ರವಾದಿಸುವರು.
19 ನಾನು ಆಕಾಶದಲ್ಲಿ ಅದ್ಭುತಕಾರ್ಯಗಳನ್ನು ತೋರಿಸುವೆನು.
    ಭೂಮಿಯ ಮೇಲೆ ಸೂಚಕಕಾರ್ಯಗಳನ್ನು ಮಾಡುವೆನು.
    ರಕ್ತ, ಬೆಂಕಿ ಮತ್ತು ಕಪ್ಪೊಗೆಗಳು ಅಲ್ಲಿರುವವು.
20 ಸೂರ್ಯನು ಕತ್ತಲಾಗುವನು,
    ಚಂದ್ರನು ರಕ್ತದಂತೆ ಕೆಂಪಾಗುವನು,
ಆಗ ಪ್ರಭುವಿನ ಗಂಭೀರವಾದ ಮಹಾದಿನವು ಬರುವುದು;
21 ಪ್ರಭುವಿನ ಹೆಸರನ್ನು ಹೇಳಿಕೊಳ್ಳುವವರಿಗೆಲ್ಲ ರಕ್ಷಣೆ ಆಗುವುದು.’(A)

ಆದಿಕಾಂಡ 11:1-9

ಪ್ರಪಂಚದ ವಿಭಜನೆ

11 ಜಲಪ್ರಳಯದ ನಂತರ ಇಡೀ ಪ್ರಪಂಚದ ಜನರು ಒಂದೇ ಭಾಷೆಯನ್ನು ಮಾತಾಡುತ್ತಿದ್ದರು. ಎಲ್ಲಾ ಜನರು ಒಂದೇ ಭಾಷೆಯ ಪದಗಳನ್ನು ಬಳಸುತ್ತಿದ್ದರು. ಜನರು ಪೂರ್ವದಿಕ್ಕಿನಿಂದ ಪ್ರಯಾಣಮಾಡಿ ಶಿನಾರ್ ಪ್ರದೇಶದಲ್ಲಿ ಬಯಲು ಸೀಮೆಯನ್ನು ಕಂಡು ಅಲ್ಲೇ ಉಳಿದುಕೊಂಡರು. ಅವರು ಒಬ್ಬರಿಗೊಬ್ಬರು ಮಾತಾಡುತ್ತಾ, “ಬನ್ನಿ, ಒಳ್ಳೆಯ ಸುಟ್ಟ ಇಟ್ಟಿಗೆಗಳನ್ನು ಮಾಡೋಣ” ಎಂದು ನಿರ್ಧರಿಸಿದರು. ಅವರು ತಮ್ಮ ಮನೆಗಳನ್ನು ಕಟ್ಟಲು ಕಲ್ಲುಗಳ ಬದಲಾಗಿ ಇಟ್ಟಿಗೆಗಳನ್ನೂ ಗಾರೆಗೆ ಬದಲಾಗಿ ಕಲ್ಲರಗನ್ನೂ ಉಪಯೋಗಿಸಿದರು.

ಬಳಿಕ ಅವರು, “ನಾವು ನಮಗಾಗಿ ಒಂದು ಪಟ್ಟಣವನ್ನೂ ಆಕಾಶವನ್ನು ಮುಟ್ಟುವಂಥ ಗೋಪುರವನ್ನೂ ಕಟ್ಟಿದರೆ ನಾವು ಪ್ರಸಿದ್ಧರಾಗುತ್ತೇವೆ. ಆಗ ನಾವು ಭೂಮಿಯಲ್ಲೆಲ್ಲಾ ಚದರಿಹೋಗದೆ ಒಂದೇ ಸ್ಥಳದಲ್ಲಿ ವಾಸಿಸಲು ಸಾಧ್ಯವಾಗುತ್ತದೆ” ಎಂದು ಮಾತಾಡಿಕೊಂಡರು.

ಯೆಹೋವನು ಪಟ್ಟಣವನ್ನೂ ಗೋಪುರವನ್ನೂ ನೋಡಲು ಇಳಿದುಬಂದನು. ಜನರು ಅವುಗಳನ್ನು ಕಟ್ಟುತ್ತಿರುವುದನ್ನು ಕಂಡು ಯೆಹೋವನು, “ಈ ಜನರೆಲ್ಲರು ಒಂದೇ ಭಾಷೆಯನ್ನು ಮಾತಾಡುವುದರಿಂದ ಒಟ್ಟಾಗಿ ಸೇರಿಕೊಂಡಿದ್ದಾರೆ. ಪ್ರಾರಂಭದಲ್ಲೇ ಇಂಥ ಕಾರ್ಯವನ್ನು ಮಾಡುತ್ತಿರುವ ಇವರು ಮುಂದೆ ಏನು ಬೇಕಾದರೂ ಮಾಡಲು ಶಕ್ತರಾಗುವರು. ಆದ್ದರಿಂದ ನಾವು ಕೆಳಗೆ ಹೋಗಿ ಅವರ ಭಾಷೆಯನ್ನು ತಾರುಮಾರು ಮಾಡೋಣ; ಆಗ ಅವರು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವುದಿಲ್ಲ” ಎಂದು ಹೇಳಿದನು.

ಅಂತೆಯೇ ಯೆಹೋವನು ಜನರನ್ನು ಭೂಮಿಯ ಮೇಲೆಲ್ಲಾ ಚದರಿಸಿಬಿಟ್ಟನು. ಆದ್ದರಿಂದ ಆ ಪಟ್ಟಣವನ್ನು ಕಟ್ಟಿ ಪೂರೈಸಲು ಅವರಿಗೆ ಸಾಧ್ಯವಾಗಲಿಲ್ಲ. ಯೆಹೋವನು ಇಡೀ ಲೋಕದ ಭಾಷೆಯನ್ನು ತಾರುಮಾರು ಮಾಡಿದ್ದು ಆ ಸ್ಥಳದಲ್ಲೇ. ಆದ್ದರಿಂದ ಆ ಸ್ಥಳಕ್ಕೆ ಬಾಬಿಲೋನ್ ಎಂದು ಹೆಸರಾಯಿತು. ಹೀಗೆ ಯೆಹೋವನು ಜನರನ್ನು ಆ ಸ್ಥಳದಿಂದ ಭೂಮಿಯಲ್ಲೆಲ್ಲಾ ಚದರಿಸಿಬಿಟ್ಟನು.

ಕೀರ್ತನೆಗಳು 104:24-34

24 ಯೆಹೋವನೇ, ನೀನು ಅನೇಕ ಆಶ್ಚರ್ಯಕರವಾದ ಕಾರ್ಯಗಳನ್ನು ಮಾಡಿರುವೆ.
    ನೀನು ಸೃಷ್ಟಿಸಿದ ವಸ್ತುಗಳಿಂದ ಭೂಮಿಯು ತುಂಬಿಹೋಗಿದೆ.
    ನಿನ್ನ ಪ್ರತಿಯೊಂದು ಕಾರ್ಯದಲ್ಲೂ ನಿನ್ನ ಜ್ಞಾನವನ್ನು ಕಾಣಬಲ್ಲವು.
25 ಇಗೋ ವಿಶಾಲವಾದ ಸಮುದ್ರವನ್ನು ನೋಡು.
    ಅದರೊಳಗೆ ಅನೇಕ ಬಗೆಯ ದೊಡ್ಡ ಜೀವಿಗಳೂ
    ನಾನಾ ಬಗೆಯ ಚಿಕ್ಕ ಜೀವಿಗಳೂ ಅಸಂಖ್ಯಾತವಾಗಿವೆ.
26 ನೀನು ಸೃಷ್ಟಿಸಿದ ಲಿವ್ಯಾತಾನನು ಸಮುದ್ರದಲ್ಲಿ ಆಟವಾಡುತ್ತಿದ್ದರೂ
    ಹಡಗು ಸಮುದ್ರದ ಮೇಲೆ ಸಂಚರಿಸುವುದು.

27 ಈ ಜೀವಿಗಳೆಲ್ಲಾ ನಿನ್ನನ್ನು ಅವಲಂಭಿಸಿಕೊಂಡಿವೆ.
    ಅವುಗಳಿಗೆ ಸರಿಸಮಯದಲ್ಲಿ ಆಹಾರವನ್ನು ಕೊಡುವಾತನು ನೀನೇ.
28 ಸರ್ವಜೀವಿಗಳಿಗೆ ಆಹಾರವನ್ನು ಕೊಡುವಾತನು ನೀನೇ.
    ನೀನು ಕೈತೆರೆದು ಒಳ್ಳೆಯ ಆಹಾರವನ್ನು ಕೊಡಲು ಅವು ತಿಂದು ತೃಪ್ತಿಯಾಗುತ್ತವೆ.
29 ನೀನು ಅವುಗಳಿಗೆ ವಿಮುಖನಾದಾಗ
    ಅವು ಭಯಗೊಳ್ಳುತ್ತವೆ.
ಅವುಗಳ ಶ್ವಾಸವು ಹೋಗಿ
    ಬಲಹೀನತೆಯಿಂದ ಸತ್ತು ಮತ್ತೆ ಮಣ್ಣಾಗುತ್ತವೆ.
30 ನಿನ್ನ ಜೀವಶ್ವಾಸವನ್ನು ಊದುವಾಗ ಅವು ಸೃಷ್ಟಿಯಾಗುತ್ತವೆ.
    ನೀನು ಭೂಮಿಯನ್ನು ಮತ್ತೆ ನೂತನ ಪಡಿಸುವೆ.

31 ಯೆಹೋವನ ಮಹಿಮೆಯು ಶಾಶ್ವತವಾಗಿರಲಿ!
    ಯೆಹೋವನು ತಾನು ಸೃಷ್ಟಿಸಿದವುಗಳಲ್ಲಿ ಆನಂದಿಸಲಿ.
32 ಆತನು ಭೂಮಿಯ ಕಡೆಗೆ ನೋಡಿದರೆ ಸಾಕು,
    ಭೂಮಿಯು ನಡುಗುವುದು;
ಆತನು ಬೆಟ್ಟಗಳನ್ನು ಮುಟ್ಟಿದರೆ ಸಾಕು,
    ಅವು ಜ್ವಾಲಾಮುಖಿಗಳಾಗುತ್ತವೆ.

33 ನನ್ನ ಜೀವಮಾನವೆಲ್ಲಾ ನಾನು ಯೆಹೋವನಿಗೆ ಗಾನ ಮಾಡುವೆನು.
    ನಾನು ಬದುಕಿರುವವರೆಗೂ ಆತನನ್ನು ಸಂಕೀರ್ತಿಸುವೆನು.
34 ನಾನು ಹೇಳಿದ ಈ ವಿಷಯಗಳು ಆತನನ್ನು ಸಂತೋಷಗೊಳಿಸಲಿ.
    ನಾನಾದರೋ ಯೆಹೋವನಲ್ಲಿ ಸಂತೋಷಿಸುವೆನು.

ಕೀರ್ತನೆಗಳು 104:35

35 ಪಾಪಾತ್ಮರು ಭೂಮಿಯಿಂದ ಕಾಣದೆಹೋಗಲಿ.
    ದುಷ್ಟರು ಎಂದೆಂದಿಗೂ ನಿರ್ಮೂಲವಾಗಲಿ.
ನನ್ನ ಆತ್ಮವೇ, ಯೆಹೋವನನ್ನು ಸ್ತುತಿಸು!

ಯೆಹೋವನನ್ನು ಕೊಂಡಾಡು!

ರೋಮ್ನಗರದವರಿಗೆ 8:14-17

14 ಯಾರು ತಮ್ಮನ್ನು ದೇವರಾತ್ಮನ ನಡೆಸುವಿಕೆಗೆ ಒಪ್ಪಿಸಿಕೊಡುತ್ತಾರೊ ಅವರೇ ದೇವರ ಮಕ್ಕಳಾಗಿದ್ದಾರೆ. 15 ನಾವು ಹೊಂದಿಕೊಂಡಿರುವ ಆತ್ಮನು ನಮ್ಮನ್ನು ಮತ್ತೆ ಗುಲಾಮರನ್ನಾಗಿ ಮಾಡುವವನಲ್ಲ ಮತ್ತು ನಮ್ಮಲ್ಲಿ ಭಯವನ್ನು ಹುಟ್ಟಿಸುವವನಲ್ಲ. ನಾವು ಹೊಂದಿರುವ ಪವಿತ್ರಾತ್ಮನು ನಮ್ಮನ್ನು ದೇವರ ಮಕ್ಕಳನ್ನಾಗಿ ಮಾಡುತ್ತಾನೆ. ಈ ಆತ್ಮನ ಮೂಲಕವಾಗಿ ನಾವು, “ಅಪ್ಪಾ ತಂದೆಯೇ” ಎಂದು ಹೇಳುತ್ತೇವೆ. 16 ನಾವು ದೇವರ ಮಕ್ಕಳಾಗಿದ್ದೇವೆಂದು ಪವಿತ್ರಾತ್ಮನು ತಾನೇ ನಮ್ಮ ಅಂತರಾತ್ಮದೊಂದಿಗೆ ಹೇಳುತ್ತಾನೆ. 17 ನಾವು ದೇವರ ಮಕ್ಕಳಾಗಿದ್ದರೆ, ಬಾಧ್ಯರಾಗಿದ್ದೇವೆ. ಹೌದು, ದೇವರಿಗೆ ಬಾಧ್ಯರಾಗಿದ್ದೇವೆ ಮತ್ತು ಕ್ರಿಸ್ತನೊಂದಿಗೆ ಬಾಧ್ಯರಾಗಿದ್ದೇವೆ. ಹೇಗೆಂದರೆ, ಕ್ರಿಸ್ತನ ಬಾಧೆಯಲ್ಲಿ ನಾವು ಪಾಲುಗಾರರಾಗುವುದಾದರೆ ಆತನ ಮಹಿಮೆಯಲ್ಲಿಯೂ ಪಾಲುಗಾರರಾಗುವೆವು.

ಅಪೊಸ್ತಲರ ಕಾರ್ಯಗಳು 2:1-21

ಪವಿತ್ರಾತ್ಮನ ಆಗಮನ

ಪಂಚಾಶತ್ತಮ ಹಬ್ಬದ[a] ದಿನ ಬಂದಾಗ ಅವರೆಲ್ಲರು ಒಂದು ಸ್ಥಳದಲ್ಲಿ ಒಟ್ಟಾಗಿ ಸೇರಿದ್ದರು. ಆಗ, ಆಕಾಶದಿಂದ ಒಂದು ಶಬ್ದ ಇದ್ದಕ್ಕಿದ್ದಂತೆ ಬಂದಿತು. ಬಿರುಗಾಳಿ ಬೀಸುತ್ತಿದೆಯೋ ಎಂಬಂತಿತ್ತು ಆ ಶಬ್ದ. ಅವರು ಕುಳಿತುಕೊಂಡಿದ್ದ ಮನೆಯಲ್ಲೆಲ್ಲಾ ಆ ಶಬ್ದ ತುಂಬಿಕೊಂಡಿತು. ಬೆಂಕಿಯ ಜ್ವಾಲೆಗಳಂತಿದ್ದ ಏನನ್ನೊ ಅವರು ಕಂಡರು. ಜ್ವಾಲೆಗಳು ವಿಂಗಡವಾಗಿ ಅಲ್ಲಿದ್ದ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ನೆಲೆಸಿದವು. ಅವರೆಲ್ಲರೂ ಪವಿತ್ರಾತ್ಮಭರಿತರಾದರು ಮತ್ತು ವಿವಿಧ ಭಾಷೆಗಳಲ್ಲಿ ಮಾತಾಡತೊಡಗಿದರು. ಪವಿತ್ರಾತ್ಮನೇ ಅವರಿಗೆ ಆ ಶಕ್ತಿಯನ್ನು ಕೊಟ್ಟನು.

ಬಹು ಧಾರ್ಮಿಕರಾದ ಅನೇಕ ಯೆಹೂದ್ಯರು ಆ ಸಮಯದಲ್ಲಿ ಜೆರುಸಲೇಮಿನಲ್ಲಿದ್ದರು. ಇವರಲ್ಲಿ ಪ್ರಪಂಚದ ಪ್ರತಿಯೊಂದು ದೇಶದಿಂದ ಬಂದ ಜನರಿದ್ದರು. ಈ ಶಬ್ದವನ್ನು ಕೇಳಿ ಈ ಜನರ ಒಂದು ದೊಡ್ಡ ಸಮೂಹವೇ ಅಲ್ಲಿಗೆ ಬಂದಿತು. ಅಪೊಸ್ತಲರು ಮಾತಾಡುತ್ತಿರುವುದು ಪ್ರತಿಯೊಬ್ಬರಿಗೂ ಅವರವರ ಸ್ವಂತ ಭಾಷೆಗಳಲ್ಲಿ ಕೇಳಿಸುತ್ತಿರುವುದನ್ನು ಕಂಡು ಅವರಿಗೆ ಆಶ್ಚರ್ಯವಾಯಿತು.

ಇದನ್ನು ನೋಡಿದ ಯೆಹೂದ್ಯರೆಲ್ಲರೂ ವಿಸ್ಮಯಗೊಂಡರು. ಹೀಗೆ ಮಾಡಲು ಅಪೊಸ್ತಲರಿಗೆ ಹೇಗೆ ಸಾಧ್ಯವಾಯಿತೆಂದು ಅವರಿಗೆ ಅರ್ಥವಾಗಲಿಲ್ಲ. ಅವರು, “ಮಾತಾಡುತ್ತಿರುವ ಈ ಜನರು (ಅಪೊಸ್ತಲರು) ಗಲಿಲಾಯದವರು![b] ಆದರೆ ಇವರು ನಮ್ಮ ಸ್ವಂತ ಭಾಷೆಗಳಲ್ಲಿ ಮಾತಾಡುತ್ತಿರುವಂತೆ ಕೇಳಿಸುತ್ತಿದೆ. ಇದು ಹೇಗೆ ಸಾಧ್ಯ? ನಾವು ಬೇರೆಬೇರೆ ಸ್ಥಳಗಳವರು. ನಮ್ಮಲ್ಲಿ ಪಾರ್ಥ್ಯರು, ಮೇದ್ಯರು, ಏಲಾಮಿನವರು, ಮೆಸೊಪೊಟೇಮದವರು, ಯೂದಾಯದವರು, ಕಪ್ಪದೋಕ್ಯಯದವರು, ಪೊಂತದವರು, ಏಷ್ಯಾದವರು,[c] 10 ಫ್ರಿಜಿಯದವರು, ಪಾಂಫಿಲಿಯದವರು, ಈಜಿಪ್ಟ್‌ನವರು ಮತ್ತು ಸಿರೇನಿನ ಬಳಿಯಲ್ಲಿರುವ ಲಿಬಿಯ ಪ್ರಾಂತ್ಯದವರು, ರೋಮ್‌ನವರು, 11 ಕ್ರೇಟ್‌ನವರು ಮತ್ತು ಅರೇಬಿಯವರು ಇದ್ದಾರೆ. ನಮ್ಮಲ್ಲಿರುವ ಕೆಲವು ಜನರು ಹುಟ್ಟು ಯೆಹೂದ್ಯರು. ಉಳಿದವರು ಮತಾಂತರ ಹೊಂದಿದವರು. ನಾವು ಬೇರೆಬೇರೆ ದೇಶಗಳವರು. ಆದರೆ ಈ ಜನರು ಮಾತಾಡುತ್ತಿರುವುದು ನಮ್ಮ ಸ್ವಂತ ಭಾಷೆಗಳಲ್ಲಿ ನಮಗೆ ಕೇಳಿಸುತ್ತಿದೆ! ಅವರು ದೇವರ ಬಗ್ಗೆ ಹೇಳುತ್ತಿರುವ ಮಹಾಸಂಗತಿಗಳು ನಮಗೆಲ್ಲರಿಗೂ ಅರ್ಥವಾಗುತ್ತಿವೆ” ಎಂದು ಹೇಳಿದರು.

12 ಜನರೆಲ್ಲರೂ ವಿಸ್ಮಯಗೊಂಡರು ಮತ್ತು ಗಲಿಬಿಲಿಯಾದರು. ಅವರು, “ಏನು ನಡೆಯುತ್ತಿದೆ?” ಎಂದು ಒಬ್ಬರನ್ನೊಬ್ಬರು ಕೇಳತೊಡಗಿದರು. 13 ಕೆಲವರು ಅಪೊಸ್ತಲರನ್ನು ನೋಡಿ ನಗುತ್ತಾ, “ಇವರು ಅತಿಯಾಗಿ ದ್ರಾಕ್ಷಾರಸ ಕುಡಿದು ಮತ್ತರಾಗಿದ್ದಾರೆ” ಎಂದು ಹಾಸ್ಯಮಾಡಿದರು.

ಪೇತ್ರನ ಪ್ರಸಂಗ

14 ಬಳಿಕ ಪೇತ್ರನು ಉಳಿದ ಹನ್ನೊಂದು ಮಂದಿ ಅಪೊಸ್ತಲರೊಂದಿಗೆ ಎದ್ದುನಿಂತುಕೊಂಡನು. ಎಲ್ಲಾ ಜನರಿಗೆ ಕೇಳುವಂತೆ ಅವನು ಗಟ್ಟಿಯಾಗಿ ಹೀಗೆಂದನು: “ಯೆಹೂದ್ಯರೇ, ಜೆರುಸಲೇಮಿನಲ್ಲಿ ವಾಸವಾಗಿರುವ ಜನರೇ, ನನಗೆ ಕಿವಿಗೊಡಿರಿ. ನೀವು ತಿಳಿದುಕೊಳ್ಳಬೇಕಾದ ಸಂಗತಿಯನ್ನು ನಾನು ನಿಮಗೆ ಹೇಳುತ್ತೇನೆ. 15 ನೀವು ಯೋಚಿಸಿಕೊಂಡಿರುವಂತೆ ಈ ಜನರು ಕುಡಿದು ಮತ್ತರಾದವರಲ್ಲ. ಈಗ ಮುಂಜಾನೆ ಒಂಭತ್ತು ಗಂಟೆಯಷ್ಟೆ! 16 ಆದರೆ ಈ ಹೊತ್ತು ಇಲ್ಲಿ ನಡೆಯುತ್ತಿರುವ ಸಂಗತಿಗಳ ಬಗ್ಗೆ ಪ್ರವಾದಿಯಾದ ಯೋವೇಲನು ಹೀಗೆ ಬರೆದಿದ್ದಾನೆ:

17 ‘ದೇವರು ಹೀಗೆನ್ನುತ್ತಾನೆ:
ಕೊನೆಯ ದಿನಗಳಲ್ಲಿ, ನಾನು ನನ್ನ ಆತ್ಮವನ್ನು ಎಲ್ಲಾ ಜನರ ಮೇಲೆ ಸುರಿಸುವೆನು.
    ನಿಮ್ಮ ಗಂಡುಮಕ್ಕಳು, ಹೆಣ್ಣುಮಕ್ಕಳು ಪ್ರವಾದಿಸುವರು.
    ನಿಮ್ಮ ಯುವಜನರು ದರ್ಶನಗಳನ್ನು ಕಾಣುವರು.
    ನಿಮ್ಮ ವಯೋವೃದ್ಧರು ವಿಶೇಷ ಕನಸುಗಳನ್ನು ಕಾಣುವರು.
18 ಆ ಸಮಯದಲ್ಲಿ ನಾನು ನನ್ನ ಆತ್ಮವನ್ನು ನನ್ನ ದಾಸದಾಸಿಯರ ಮೇಲೆ ಸುರಿಸುವೆನು.
    ಆಗ ಅವರು ಪ್ರವಾದಿಸುವರು.
19 ನಾನು ಆಕಾಶದಲ್ಲಿ ಅದ್ಭುತಕಾರ್ಯಗಳನ್ನು ತೋರಿಸುವೆನು.
    ಭೂಮಿಯ ಮೇಲೆ ಸೂಚಕಕಾರ್ಯಗಳನ್ನು ಮಾಡುವೆನು.
    ರಕ್ತ, ಬೆಂಕಿ ಮತ್ತು ಕಪ್ಪೊಗೆಗಳು ಅಲ್ಲಿರುವವು.
20 ಸೂರ್ಯನು ಕತ್ತಲಾಗುವನು,
    ಚಂದ್ರನು ರಕ್ತದಂತೆ ಕೆಂಪಾಗುವನು,
ಆಗ ಪ್ರಭುವಿನ ಗಂಭೀರವಾದ ಮಹಾದಿನವು ಬರುವುದು;
21 ಪ್ರಭುವಿನ ಹೆಸರನ್ನು ಹೇಳಿಕೊಳ್ಳುವವರಿಗೆಲ್ಲ ರಕ್ಷಣೆ ಆಗುವುದು.’(A)

ಯೋಹಾನ 14:8-17

ಫಿಲಿಪ್ಪನು ಯೇಸುವಿಗೆ, “ಪ್ರಭುವೇ, ನಮಗೆ ತಂದೆಯನ್ನು ತೋರಿಸು. ನಮಗೆ ಅಷ್ಟೇ ಸಾಕು” ಎಂದು ಹೇಳಿದನು.

ಯೇಸು, “ಫಿಲಿಪ್ಪನೇ, ನಾನು ಇಷ್ಟು ಕಾಲದಿಂದ ನಿನ್ನೊಂದಿಗಿದ್ದರೂ ನೀನು ನನ್ನನ್ನು ತಿಳಿದುಕೊಳ್ಳಲಿಲ್ಲವೇ? ನನ್ನನ್ನು ನೋಡಿದವನು ತಂದೆಯನ್ನು ಸಹ ನೋಡಿದವನಾಗಿದ್ದಾನೆ. ಆದ್ದರಿಂದ, ‘ತಂದೆಯನ್ನು ನಮಗೆ ತೋರಿಸು’ ಎಂದು ಏಕೆ ಕೇಳುವಿರಿ? 10 ನಾನು ತಂದೆಯಲ್ಲಿದ್ದೇನೆ ಮತ್ತು ತಂದೆಯು ನನ್ನಲ್ಲಿದ್ದಾನೆ ಎಂದು ನೀವು ನಿಜವಾಗಿಯೂ ನಂಬುವಿರಾ? ನಾನು ನಿಮಗೆ ಹೇಳುವ ಸಂಗತಿಗಳು ನನ್ನಿಂದಲೇ ಬಂದಂಥವುಗಳಲ್ಲ. ತಂದೆಯು ನನ್ನಲ್ಲಿ ವಾಸವಾಗಿದ್ದಾನೆ ಮತ್ತು ಆತನು ತನ್ನ ಕಾರ್ಯವನ್ನು ಮಾಡುತ್ತಿದ್ದಾನೆ. 11 ನಾನು ತಂದೆಯಲ್ಲಿದ್ದೇನೆ ಮತ್ತು ತಂದೆಯು ನನ್ನಲ್ಲಿದ್ದಾನೆ ಎಂಬ ನನ್ನ ಮಾತನ್ನು ನಂಬಿರಿ. ಇಲ್ಲದಿದ್ದರೆ ನಾನು ಮಾಡಿದ ಅದ್ಭುತಕಾರ್ಯಗಳ ನಿಮಿತ್ತವಾದರೂ ನಂಬಿರಿ.

12 “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನನ್ನಲ್ಲಿ ನಂಬಿಕೆ ಇಡುವ ವ್ಯಕ್ತಿಯು ನಾನು ಮಾಡಿದ ಕಾರ್ಯಗಳನ್ನೇ ಮಾಡುವನು. ಹೌದು ನಾನು ಮಾಡುವ ಕಾರ್ಯಗಳಿಗಿಂತಲೂ ದೊಡ್ಡಕಾರ್ಯಗಳನ್ನು ಅವನು ಮಾಡುವನು. ಏಕೆಂದರೆ ನಾನು ತಂದೆಯ ಬಳಿಗೆ ಹೋಗುತ್ತಿದ್ದೇನೆ. 13 ಮತ್ತು ನೀವು ನನ್ನ ಹೆಸರಿನಲ್ಲಿ ಏನಾದರೂ ಬೇಡಿಕೊಂಡರೆ, ನಾನು ನಿಮಗೋಸ್ಕರ ಅದನ್ನು ನೆರವೇರಿಸುವೆನು. ಆಗ ಮಗನ ಮೂಲಕವಾಗಿ ತಂದೆಗೆ ಮಹಿಮೆ ಆಗುವುದು. 14 ನೀವು ನನ್ನ ಹೆಸರಿನಲ್ಲಿ ಏನಾದರೂ ಬೇಡಿಕೊಂಡರೆ, ನಾನು ಅದನ್ನು ನೆರವೇರಿಸುವೆನು.

ಪವಿತ್ರಾತ್ಮನನ್ನು ಕೊಡುವುದಾಗಿ ವಾಗ್ದಾನ

15 “ನೀವು ನನ್ನನ್ನು ಪ್ರೀತಿಸುವವರಾಗಿದ್ದರೆ, ನಾನು ಆಜ್ಞಾಪಿಸುವವುಗಳನ್ನು ಮಾಡುವಿರಿ. 16 ನಾನು ತಂದೆಯನ್ನು ಕೇಳಿಕೊಳ್ಳುವೆನು. ಆಗ ಆತನು ಬೇರೊಬ್ಬ ಸಹಾಯಕನನ್ನು ನಿಮಗೆ ಕೊಡುವನು. ಆ ಸಹಾಯಕನು ಸದಾಕಾಲ ನಿಮ್ಮೊಂದಿಗಿರುವನು. 17 ಸತ್ಯದ ಆತ್ಮನೇ ಈ ಸಹಾಯಕನು. ಈ ಲೋಕವು ಆತನನ್ನು ಸ್ವೀಕರಿಸಿಕೊಳ್ಳಲಾರದು. ಏಕೆಂದರೆ ಲೋಕವು ಆತನನ್ನು ಕಾಣುವುದೂ ಇಲ್ಲ, ತಿಳಿದುಕೊಳ್ಳುವುದೂ ಇಲ್ಲ. ಆದರೆ ನೀವು ಆತನನ್ನು ಬಲ್ಲಿರಿ. ಆತನು ನಿಮ್ಮೊಂದಿಗೆ ಮತ್ತು ನಿಮ್ಮೊಳಗೆ ವಾಸಿಸುವವನಾಗಿದ್ದಾನೆ.

ಯೋಹಾನ 14:25-27

25 “ನಾನು ನಿಮ್ಮೊಂದಿಗೆ ಇರುವಾಗಲೇ ಈ ಸಂಗತಿಗಳನ್ನೆಲ್ಲಾ ನಿಮಗೆ ಹೇಳಿದ್ದೇನೆ. 26 ಆದರೆ ಆ ಸಹಾಯಕನು ನಿಮಗೆ ಪ್ರತಿಯೊಂದನ್ನೂ ಉಪದೇಶಿಸುವನು. ನಾನು ನಿಮಗೆ ಹೇಳಿದ ಸಂಗತಿಗಳನ್ನೆಲ್ಲಾ ಆ ಸಹಾಯಕನು ನಿಮ್ಮ ನೆನಪಿಗೆ ತರುವನು. ತಂದೆಯು ನನ್ನ ಹೆಸರಿನಲ್ಲಿ ಕಳುಹಿಸಿಕೊಡುವ ಪವಿತ್ರಾತ್ಮನೇ ಆ ಸಹಾಯಕನು.

27 “ನಾನು ನಿಮಗೆ ಶಾಂತಿಯನ್ನು ನೀಡುತ್ತೇನೆ. ಈ ಲೋಕವು ಕೊಡುವುದಕ್ಕಿಂತ ಭಿನ್ನವಾದ ರೀತಿಯಲ್ಲಿ ನಾನು ನಿಮಗೆ ಶಾಂತಿಯನ್ನು ಕೊಡುತ್ತೇನೆ. ಆದ್ದರಿಂದ ನಿಮ್ಮ ಹೃದಯವು ಕಳವಳಗೊಳ್ಳದಿರಲಿ. ಭಯಪಡಬೇಡಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International