Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 29

ರಚನೆಗಾರ: ದಾವೀದ.

29 ದೇವಪುತ್ರರೇ,[a] ಯೆಹೋವನನ್ನು ಸ್ತುತಿಸಿರಿ!
    ಆತನ ಮಹಿಮೆಯನ್ನೂ ಶಕ್ತಿಯನ್ನೂ ಸ್ತುತಿಸಿರಿ.
ಯೆಹೋವನನ್ನು ಸ್ತುತಿಸುತ್ತಾ ಆತನ ಹೆಸರನ್ನು ಘನಪಡಿಸಿರಿ.
    ಪರಿಶುದ್ಧ ವಸ್ತ್ರಗಳನ್ನು ಧರಿಸಿಕೊಂಡು ಆತನನ್ನು ಆರಾಧಿಸಿರಿ.[b]
ಯೆಹೋವನ ಸ್ವರವು ಸಮುದ್ರದ ಮೇಲೆ ಕೇಳಿ ಬರುವುದು.
    ಮಹಾಸಾಗರದ ಮೇಲಿನ ಗುಡುಗಿನಂತೆ ಮಹಿಮಾಸ್ವರೂಪನಾದ ದೇವರ ಸ್ವರವು ಕೇಳಿಬರುವುದು.
ಯೆಹೋವನ ಸ್ವರವು
    ಆತನ ಶಕ್ತಿಯನ್ನೂ ಮಹಿಮೆಯನ್ನೂ ತೋರ್ಪಡಿಸುವುದು.
ಯೆಹೋವನ ಸ್ವರವು ದೇವದಾರು ವೃಕ್ಷಗಳನ್ನು ತುಂಡುತುಂಡು ಮಾಡುತ್ತದೆ.
    ಯೆಹೋವನು ಲೆಬನೋನಿನ ದೇವದಾರು ವೃಕ್ಷಗಳನ್ನೂ ಮುರಿದುಹಾಕುವನು.
ಯೆಹೋವನು ಲೆಬನೋನನ್ನು ನಡುಗಿಸಲು ಅದು ನರ್ತಿಸುತ್ತಿರುವ ಎಳೆಕರುವಿನಂತೆ ಕಾಣುತ್ತದೆ;
    ಸಿರ್ಯೋನ್ ಪರ್ವತವು ಕಂಪಿಸುವಾಗ ಕುಣಿದಾಡುವ ಎಳೆ ಹೋರಿಯಂತೆ ಕಾಣುತ್ತದೆ.
ಯೆಹೋವನ ಗರ್ಜನಕ್ಕೆ ಮಿಂಚುಗಳು ಥಳಥಳನೆ ಹೊಳೆಯುತ್ತವೆ.
ಯೆಹೋವನ ಗರ್ಜನದಿಂದ ಅರಣ್ಯವು ಕಂಪಿಸುವುದು.
    ಆತನ ಗರ್ಜನಕ್ಕೆ ಕಾದೇಶ್ ಅರಣ್ಯವು ನಡುಗುವುದು.
ಯೆಹೋವನ ಗರ್ಜನಕ್ಕೆ ಜಿಂಕೆಗಳು ಹೆದರಿಕೊಳ್ಳುತ್ತವೆ;
    ಕಾಡಿನ ಮರಗಳು ಬರಿದಾಗುತ್ತವೆ;
    ಆದರೆ ಆತನ ಆಲಯದಲ್ಲಿ ಜನರು ಆತನ ಮಹಿಮೆಯನ್ನು ಹಾಡಿಕೊಂಡಾಡುವರು.

10 ಜಲಪ್ರಳಯದ ಕಾಲದಲ್ಲೂ ಯೆಹೋವನು ರಾಜನಾಗಿದ್ದನು.
    ಯೆಹೋವನು ಸದಾಕಾಲ ರಾಜನಾಗಿರುವನು.
11 ಯೆಹೋವನು ತನ್ನ ಜನರಿಗೆ ಬಲವನ್ನು ದಯಪಾಲಿಸಲಿ.
    ಆತನು ತನ್ನ ಜನರಿಗೆ ಶಾಂತಿಯನ್ನು ಸ್ಥಾಪಿಸಲಿ.

ಯೆಹೆಜ್ಕೇಲ 3:12-21

12 ಆಗ ದೇವರಾತ್ಮವು ನನ್ನನ್ನು ಮೇಲಕ್ಕೆ ಎತ್ತಿತು. ಯೆಹೋವನ ಮಹಿಮೆಯು ತನ್ನ ಸ್ಥಳದಿಂದ ಮೇಲೇರಿದಾಗ ನನ್ನ ಹಿಂಭಾಗದಲ್ಲಿ ಮಹಾ ಗುಡುಗುವ ಶಬ್ದವನ್ನು ಕೇಳಿದೆನು. ಅದು ಯೆಹೋವನಿಗೆ ಆತನ ನಿವಾಸದಲ್ಲಿ ಸ್ತೋತ್ರವಾಗಲಿ ಎಂಬ ವಾಣಿಯೊಂದಿಗೆ ಕೇಳಿಸುತ್ತಿತ್ತು. 13 ಅದು ಜೀವಿಗಳು ತಮ್ಮ ರೆಕ್ಕೆಗಳನ್ನು ಒಂದಕ್ಕೊಂದು ಬಡಿದಾಡುವ ಸಪ್ಪಳ ಮತ್ತು ಅವುಗಳ ಪಕ್ಕದಲ್ಲಿದ್ದ ಚಕ್ರಗಳ ಸಪ್ಪಳ. 14 ಆತ್ಮವು ನನ್ನನ್ನು ಅಲ್ಲಿಂದ ಎತ್ತಿಕೊಂಡು ಹೋಯಿತು. ನಾನು ಆಗ ದುಃಖಗೊಂಡು ನನ್ನ ಆತ್ಮದಲ್ಲಿ ತತ್ತರಗೊಂಡೆನು. ಆದರೆ ಯೆಹೋವನ ಶಕ್ತಿಯು ನನ್ನನ್ನು ಸಂಪೂರ್ಣವಾಗಿ ತನ್ನ ಅಧೀನಕ್ಕೆ ತೆಗೆದುಕೊಂಡಿತು. 15 ಕೆಬಾರ್ ಕಾಲುವೆ ಪಕ್ಕದಲ್ಲಿದ್ದ ತೇಲ್ ಆಬೀಬ್‌ನಲ್ಲಿ ಸೆರೆಯಾಳುಗಳಾಗಿದ್ದ ಇಸ್ರೇಲ್ ಜನರ ಬಳಿಗೆ ನಾನು ಒಯ್ಯಲ್ಪಟ್ಟೆನು. ಅಲ್ಲಿದ್ದ ಜನರ ಮಧ್ಯೆ ನಾನು ಏಳು ದಿವಸ ಸ್ತಬ್ಧನಾಗಿದ್ದೆನು.

ಇಸ್ರೇಲಿಗೆ ಕಾವಲುಗಾರನಾಗಿ

16 ಏಳು ದಿವಸಗಳ ತರುವಾಯ, ಯೆಹೋವನ ಸಂದೇಶವು ನನಗೆ ಬಂದಿತು. ಆತನು ಹೇಳಿದ್ದೇನೆಂದರೆ: 17 “ನರಪುತ್ರನೇ, ನಾನು ನಿನ್ನನ್ನು ಇಸ್ರೇಲರಿಗೆ ಕಾವಲುಗಾರನನ್ನಾಗಿ ಮಾಡಿದ್ದೇನೆ. ನಾನು ಅವರಿಗೆ ಸಂಭವಿಸುವ ಕೆಟ್ಟ ವಿಷಯಗಳನ್ನು ನಿನಗೆ ಹೇಳುತ್ತಿದ್ದೇನೆ. ಮತ್ತು ನೀನು ನನ್ನ ಪರವಾಗಿ ಅವರನ್ನು ಎಚ್ಚರಿಸು. 18 ನಾನು ದುಷ್ಟನಿಗೆ, ‘ನೀನು ಸಾಯುವೆ’ ಎಂದು ಹೇಳುವಾಗ, ನೀನು ಅವನನ್ನು ಎಚ್ಚರಿಸಬೇಕು. ಅವನು ತನ್ನ ಪ್ರಾಣವನ್ನು ರಕ್ಷಿಸಿಕೊಳ್ಳುವದಕ್ಕಾಗಿ ತನ್ನ ಜೀವಿತವನ್ನು ಮಾರ್ಪಡಿಸಿಕೊಂಡು ದುಷ್ಕೃತ್ಯ ನಿಲ್ಲಿಸಬೇಕೆಂದು ನೀನು ಅವನಿಗೆ ಹೇಳಬೇಕು. ನೀನು ಅವನನ್ನು ಎಚ್ಚರಿಸದಿದ್ದರೆ ಅವನು ತನ್ನ ಪಾಪದ ದೆಸೆಯಿಂದ ಸಾಯುವನು. ಆದರೆ ಅವನ ಮರಣಕ್ಕೆ ನಾನು ನಿನ್ನನ್ನೇ ಹೊಣೆಗಾರನನ್ನಾಗಿ ಮಾಡುತ್ತೇನೆ.

19 “ಒಂದುವೇಳೆ ನೀನು ಒಬ್ಬ ದುಷ್ಟಮನುಷ್ಯನನ್ನು ಎಚ್ಚರಿಸಿ ಅವನು ಪಾಪ ಮಾಡದಂತೆ ಮತ್ತು ಅವನ ಜೀವಿತವನ್ನು ಬದಲಾವಣೆ ಮಾಡಲು ಹೇಳಿದ್ದಲ್ಲಿ ಆ ಮನುಷ್ಯನು ನಿನ್ನ ಮಾತುಗಳನ್ನು ಕೇಳಲು ನಿರಾಕರಿಸಿದರೆ, ಅವನು ಪಾಪ ಮಾಡುವುದರಿಂದ ಸಾಯುವನು. ಆದರೆ ನೀನು ನಿನ್ನ ಜೀವವನ್ನು ರಕ್ಷಿಸಿಕೊಳ್ಳುವಿ.

20 “ಒಳ್ಳೆಯವನು ತನ್ನ ಒಳ್ಳೆಯತನವನ್ನು ತೊರೆದು ಕೆಟ್ಟದ್ದನ್ನು ಮಾಡಿದರೆ, ನಾನು ಅವನ ಹಾದಿಗೆ ತಡೆಯನ್ನು ಹಾಕಿ ಅವನು ಬೀಳುವಂತೆ ಮಾಡುವೆನು; ಅವನು ಸಾಯುವನು. ನೀನು ಅವನನ್ನು ಎಚ್ಚರಿಸಲಿಲ್ಲವಾದ್ದರಿಂದ ಅವನು ತನ್ನ ಪಾಪದ ನಿಮಿತ್ತ ಸಾಯುವನು. ಆದರೆ ಅವನ ಮರಣಕ್ಕೆ ನಾನು ನಿನ್ನನ್ನೆ ಹೊಣೆಗಾರನನ್ನಾಗಿ ಮಾಡುತ್ತೇನೆ. ಜನರು ಅವನ ಒಳ್ಳೆಯ ಕಾರ್ಯಗಳನ್ನು ಜ್ಞಾಪಿಸಿಕೊಳ್ಳುವುದಿಲ್ಲ.

21 “ನೀನು ಆ ಒಳ್ಳೆಯವನಿಗೆ ಪಾಪ ಮಾಡದಂತೆ ಎಚ್ಚರಿಸಿದರೆ ಮತ್ತು ಅವನು ಪಾಪ ಮಾಡುವದನ್ನು ನಿಲ್ಲಿಸಿದರೆ, ಆ ಮನುಷ್ಯನು ಸಾಯುವದಿಲ್ಲ; ಯಾಕೆಂದರೆ ಅವನು ನಿನ್ನ ಎಚ್ಚರಿಕೆಗೆ ಕಿವಿಗೊಟ್ಟನು ಮತ್ತು ನೀನು ನಿನ್ನ ಸ್ವಂತ ಪ್ರಾಣವನ್ನು ರಕ್ಷಿಸಿಕೊಂಡಿರುವೆ.”

ಲೂಕ 9:18-27

ಯೇಸುವೇ ಕ್ರಿಸ್ತನು

(ಮತ್ತಾಯ 16:13-19; ಮಾರ್ಕ 8:27-29)

18 ಒಮ್ಮೆ ಯೇಸು ಏಕಾಂತವಾಗಿ ಪ್ರಾರ್ಥನೆ ಮಾಡುತ್ತಿದ್ದನು. ಆತನ ಶಿಷ್ಯರು ಒಟ್ಟಾಗಿ ಅಲ್ಲಿಗೆ ಬಂದರು. ಯೇಸು ಅವರಿಗೆ, “ಜನರು ನನ್ನನ್ನು ಯಾರೆಂದು ಹೇಳುತ್ತಾರೆ?” ಎಂದು ಕೇಳಿದನು.

19 ಅದಕ್ಕೆ ಶಿಷ್ಯರು, “ಕೆಲವು ಜನರು ನಿನ್ನನ್ನು ‘ಸ್ನಾನಿಕನಾದ ಯೋಹಾನ’ ಎನ್ನುತ್ತಾರೆ. ಇನ್ನು ಕೆಲವರು, ‘ಎಲೀಯ’ ಎನ್ನುತ್ತಾರೆ. ಮತ್ತೆ ಕೆಲವರು, ‘ಪೂರ್ವಕಾಲದ ಪ್ರವಾದಿಗಳಲ್ಲಿ ಒಬ್ಬನು ಜೀವಂತವಾಗಿ ಎದ್ದುಬಂದಿದ್ದಾನೆ’ ಎನ್ನುತ್ತಾರೆ” ಎಂದು ಉತ್ತರಿಸಿದರು.

20 ಆಗ ಯೇಸು, “ನೀವು ನನ್ನನ್ನು ಯಾರೆನ್ನುತ್ತೀರಿ?” ಎಂದು ಶಿಷ್ಯರನ್ನು ಕೇಳಿದನು.

ಪೇತ್ರನು, “ನೀನು ದೇವರಿಂದ ಬಂದ ಕ್ರಿಸ್ತನು” ಎಂದು ಉತ್ತರಕೊಟ್ಟನು.

21 ಈ ವಿಷಯವನ್ನು ಯಾರಿಗೂ ಹೇಳಬಾರದೆಂದು ಯೇಸು ಅವರನ್ನು ಎಚ್ಚರಿಸಿದನು.

ಯೇಸು ತನ್ನ ಮರಣದ ಕುರಿತು ಮುಂತಿಳಿಸಿದ್ದು

(ಮತ್ತಾಯ 16:21-28; ಮಾರ್ಕ 8:31–9:1)

22 ಬಳಿಕ ಯೇಸು, “ಮನುಷ್ಯಕುಮಾರನು ಅನೇಕ ಸಂಕಟಗಳನ್ನು ಅನುಭವಿಸಬೇಕಾಗಿದೆ. ಆತನು ಹಿರಿಯ ಯೆಹೂದ್ಯನಾಯಕರಿಂದಲೂ ಮಹಾಯಾಜಕರಿಂದಲೂ ಧರ್ಮೋಪದೇಶಕರಿಂದಲೂ ತಿರಸ್ಕೃತನಾಗಿ ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಜೀವಂತವಾಗಿ ಎದ್ದುಬರುವನು” ಎಂದು ಹೇಳಿದನು.

23 ಯೇಸು ತನ್ನ ಮಾತನ್ನು ಮುಂದುವರಿಸಿ ಅವರೆಲ್ಲರಿಗೆ ಹೇಳಿದ್ದೇನೆಂದರೆ: “ನನ್ನ ಹಿಂಬಾಲಕನಾಗಬಯಸುವವನು ತನ್ನನ್ನು ನಿರಾಕರಿಸಿ, ಪ್ರತಿದಿನ ತನ್ನ ಶಿಲುಬೆಯನ್ನು (ತನಗಾಗುವ ಹಿಂಸೆಯನ್ನು) ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ. 24 ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳೆದುಕೊಳ್ಳುವನು. ನನಗೋಸ್ಕರ ತನ್ನ ಜೀವವನ್ನು ಕೊಡುವವನು ಅದನ್ನು ಉಳಿಸಿಕೊಳ್ಳುವನು. 25 ಒಬ್ಬನು ಇಡೀ ಲೋಕವನ್ನೇ ಸಂಪಾದಿಸಿಕೊಂಡು, ತನ್ನನ್ನೇ ಕೆಡಿಸಿಕೊಂಡರೆ ಅಥವಾ ನಷ್ಟಪಡಿಸಿಕೊಂಡರೆ ಅದರಿಂದ ಅವನಿಗೆ ಲಾಭವೇನು? 26 ಯಾವನಾದರೂ ನನಗೂ ನನ್ನ ಉಪದೇಶಕ್ಕೂ ನಾಚಿಕೊಳ್ಳುವುದಾದರೆ, ನಾನು ನನ್ನ ಮಹಿಮೆಯೊಡನೆ, ತಂದೆಯ ಮಹಿಮೆಯೊಡನೆ ಮತ್ತು ಪರಿಶುದ್ಧ ದೂತರ ಮಹಿಮೆಯೊಡನೆ ಬಂದಾಗ ಅವನ ವಿಷಯದಲ್ಲಿ ನಾಚಿಕೊಳ್ಳುವೆನು. 27 ನಾನು ಸತ್ಯವನ್ನು ಹೇಳುತ್ತೇನೆ. ಇಲ್ಲಿ ನಿಂತಿರುವ ಕೆಲವರು ತಾವು ಸಾಯುವುದಕ್ಕಿಂತ ಮೊದಲು ದೇವರ ರಾಜ್ಯವನ್ನು ನೋಡುವರು” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International