Revised Common Lectionary (Semicontinuous)
99 ಯೆಹೋವನೇ ರಾಜನು!
ಜನಾಂಗಗಳು ಭಯದಿಂದ ನಡುಗಲಿ.
ಆತನು ಕೆರೂಬಿಗಳ ಮೇಲೆ ರಾಜನಂತೆ ಕುಳಿತುಕೊಂಡಿದ್ದಾನೆ.
ಭೂಮಿಯು ಭಯದಿಂದ ನಡುಗಲಿ.
2 ಚೀಯೋನಿನ ಯೆಹೋವನು ದೊಡ್ಡವನು!
ಆತನು ಜನಾಂಗಗಳಿಗೆಲ್ಲಾ ಮಹಾನಾಯಕನಾಗಿದ್ದಾನೆ.
3 ಅವರೆಲ್ಲರೂ ನಿನ್ನ ಭಯಂಕರವಾದ ಹೆಸರನ್ನು ಕೊಂಡಾಡಲಿ.
ಆತನೇ ಪರಿಶುದ್ಧನು.
4 ಶಕ್ತಿಪೂರ್ಣನಾದ ರಾಜನು ನ್ಯಾಯವನ್ನು ಪ್ರೀತಿಸುವನು.
ದೇವರೇ, ನೀತಿಯನ್ನು ಸೃಷ್ಟಿಸಿದಾತನು ನೀನೇ.
ಯಾಕೋಬ್ಯರಲ್ಲಿ ನ್ಯಾಯನೀತಿಗಳನ್ನು ಸ್ಥಾಪಿಸಿದವನು ನೀನೇ.
5 ನಮ್ಮ ದೇವರಾದ ಯೆಹೋವನನ್ನು ಕೊಂಡಾಡಿರಿ,
ಆತನ ಪವಿತ್ರ ಪಾದಪೀಠಕ್ಕೆ[a] ಅಡ್ಡಬೀಳಿರಿ.
6 ಮೋಶೆಯೂ ಆರೋನನೂ ದೇವರ ಯಾಜಕರುಗಳಾಗಿದ್ದರು.
ಸಮುವೇಲನೂ ಆತನ ಹೆಸರಿನಲ್ಲಿ ಪ್ರಾರ್ಥಿಸಿದನು.
ಆತನು ಅವರೆಲ್ಲರ ಪ್ರಾರ್ಥನೆಗಳಿಗೆ ಉತ್ತರಿಸಿದನು.
7 ಆತನು ಮೇಘಸ್ತಂಭದಿಂದ ಅವರೊಂದಿಗೆ ಮಾತಾಡಿದನು.
ಅವರು ಆಜ್ಞೆಗಳಿಗೆ ವಿಧೇಯರಾದರು.
ಆತನು ಅವರಿಗೆ ಧರ್ಮಶಾಸ್ತ್ರವನ್ನು ಕೊಟ್ಟನು.
8 ನಮ್ಮ ದೇವರಾದ ಯೆಹೋವನೇ, ನೀನು ಅವರ ಪ್ರಾರ್ಥನೆಗಳಿಗೆ ಉತ್ತರಿಸಿದೆ.
ನೀನು ಕ್ಷಮಿಸುವ ದೇವರೆಂದೂ
ದುಷ್ಕೃತ್ಯಗಳಿಗೆ ದಂಡಿಸುವವನೆಂದೂ ಅವರಿಗೆ ತೋರ್ಪಡಿಸಿದೆ.
9 ನಮ್ಮ ದೇವರಾದ ಯೆಹೋವನನ್ನು ಕೊಂಡಾಡಿರಿ.
ಆತನ ಪವಿತ್ರ ಪರ್ವತದ ಕಡೆಗೆ ಅಡ್ಡಬಿದ್ದು ಆತನನ್ನು ಆರಾಧಿಸಿರಿ.
ನಮ್ಮ ದೇವರಾದ ಯೆಹೋವನೇ ಪರಿಶುದ್ಧನು!
ಬಂಗಾರದ ಬಸವ
15 “ನಾನು ಕೂಡಲೇ ಬೆಟ್ಟದಿಂದ ಹಿಂತಿರುಗಿ ಬಂದೆನು. ಅದು ಬೆಂಕಿಯಿಂದ ಸುಡುತ್ತಲಿತ್ತು ಮತ್ತು ಒಡಂಬಡಿಕೆಯ ಕಲ್ಲಿನ ಹಲಗೆಗಳು ನನ್ನ ಬಳಿಯಲ್ಲಿ ಇದ್ದವು. 16 ನಾನು ಕೆಳಗೆ ನೋಡಿದಾಗ ಬಂಗಾರದಿಂದ ಬಸವನನ್ನು ಮಾಡಿಕೊಂಡು ಯೆಹೋವನ ವಿರುದ್ಧವಾಗಿ ಪಾಪ ಮಾಡಿದ್ದಿರಿ. ಯೆಹೋವನ ಆಜ್ಞೆಯನ್ನು ಅಷ್ಟು ಬೇಗನೇ ನೀವು ಉಲ್ಲಂಘಿಸಿದ್ದಿರಿ. 17 ನನ್ನ ಬಳಿಯಲ್ಲಿದ್ದ ಆ ಕಲ್ಲಿನ ಹಲಗೆಗಳನ್ನು ನಾನು ನೆಲಕ್ಕೆ ಅಪ್ಪಳಿಸಿದೆನು. ನಿಮ್ಮ ಕಣ್ಣೆದುರಿನಲ್ಲಿ ಅವುಗಳನ್ನು ತುಂಡುತುಂಡಾಗಿ ಮಾಡಿದೆನು. 18 ಆಮೇಲೆ ನಾನು ನಲವತ್ತು ದಿನ ಹಗಲಿರುಳು ಯೆಹೋವನ ಮುಂದೆ ಬೋರಲ ಬಿದ್ದಿದ್ದೆನು. ನಾನು ಊಟ ಮಾಡಲಿಲ್ಲ, ನೀರನ್ನು ಕುಡಿಯಲಿಲ್ಲ ಯಾಕೆಂದರೆ ನೀವು ಪಾಪಮಾಡಿ ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದ್ದರಿಂದ ಆತನು ಕೋಪಗೊಂಡಿದ್ದನು. 19 ಯೆಹೋವನ ಭಯಂಕರ ಕೋಪಕ್ಕೆ ನಾನು ಹೆದರಿದ್ದೆನು. ನಿಮ್ಮನ್ನು ನಾಶಮಾಡುವಷ್ಟರ ತನಕ ಆತನು ಕೋಪಗೊಂಡಿದ್ದನು. ಆದರೆ ಆತನು ನನ್ನ ಬಿನ್ನಹಗಳನ್ನು ಲಾಲಿಸಿದನು. 20 ಯೆಹೋವನು ಆರೋನನನ್ನು ನಾಶಪಡಿಸುವಷ್ಟು ಕೋಪೋದ್ರಿಕ್ತನಾಗಿದ್ದನು. ನಾನು ಅವನಿಗಾಗಿ ಪ್ರಾರ್ಥಿಸಿದೆನು. 21 ನೀವು ಮಾಡಿದ ಬಂಗಾರದ ಬಸವನನ್ನು ತೆಗೆದುಕೊಂಡು ಚೂರುಚೂರು ಮಾಡಿ, ಬೆಂಕಿಯಲ್ಲಿ ಸುಟ್ಟುಬಿಟ್ಟೆನು. ಮತ್ತೆ ಅದನ್ನು ಒಡೆದು ಧೂಳನ್ನಾಗಿ ಮಾಡಿ ಆ ಧೂಳನ್ನು ಬೆಟ್ಟದಿಂದ ಹರಿಯುತ್ತಿದ್ದ ನದಿಯಲ್ಲಿ ಬಿಸಾಡಿಬಿಟ್ಟೆನು.
ಇಸ್ರೇಲರನ್ನು ಮನ್ನಿಸಲು ದೇವರಿಗೆ ಮೋಶೆಯ ಬಿನ್ನಹ
22 “ಅದೇ ಪ್ರಕಾರ ತಬೇರಾ, ಮಸ್ಸಾ ಮತ್ತು ಕಿಬ್ರೋತ್ಹತಾವಾಗಳಲ್ಲಿಯೂ ನೀವು ಯೆಹೋವನನ್ನು ಸಿಟ್ಟಿಗೆಬ್ಬಿಸಿದ್ದಿರಿ. 23 ಕಾದೇಶ್ಬರ್ನೇಯದಿಂದ ಹೊರಡಲು ಆತನು ನಿಮಗೆ ಹೇಳಿದಾಗ ನೀವು ಆತನಿಗೆ ವಿಧೇಯರಾಗಲಿಲ್ಲ. ಆತನು ನಿಮಗೆ, ‘ನೀವು ಬೆಟ್ಟಪ್ರದೇಶವನ್ನು ಹತ್ತಿಹೋಗಿ ನಾನು ನಿಮಗೆ ಕೊಡುವ ದೇಶವನ್ನು ವಶಪಡಿಸಿಕೊಳ್ಳಿ’ ಎಂದು ಹೇಳಿದಾಗ ನಿಮ್ಮ ದೇವರಾದ ಯೆಹೋವನಿಗೆ ವಿಧೇಯರಾಗಲಿಲ್ಲ. ನೀವು ಆತನಲ್ಲಿ ಭರವಸೆ ಇಡಲಿಲ್ಲ. ನೀವು ಆತನ ಆಜ್ಞೆಗೆ ಕಿವಿಗೊಡಲಿಲ್ಲ. 24 ನಾನು ನಿಮ್ಮನ್ನು ತಿಳಿದಿರುವ ಕಾಲದಿಂದ ನೀವು ಯೆಹೋವನಿಗೆ ಅವಿಧೇಯರಾಗಿಯೇ ಇದ್ದೀರಿ.
ಯೇಸು ತಂದೆಗೆ ಮಾಡಿದ ಪ್ರಾರ್ಥನೆ
(ಮತ್ತಾಯ 11:25-27; 13:16-17)
21 ಬಳಿಕ ಯೇಸು ಪವಿತ್ರಾತ್ಮನ ಮೂಲಕ ಬಹಳ ಸಂತೋಷಗೊಂಡು ಹೀಗೆ ಪ್ರಾರ್ಥಿಸಿದನು: “ಪರಲೋಕ ಭೂಲೋಕಗಳ ಪ್ರಭುವಾದ ತಂದೆಯೇ, ನಾನು ನಿನ್ನನ್ನು ಸ್ತುತಿಸುತ್ತೇನೆ. ನೀನು ಜ್ಞಾನಿಗಳಿಗೂ ಬುದ್ಧಿವಂತರಿಗೂ ಈ ಸಂಗತಿಗಳನ್ನು ಮರೆಮಾಡಿದ್ದಕ್ಕಾಗಿ ನಾನು ನಿನ್ನನ್ನು ಸ್ತುತಿಸುತ್ತೇನೆ. ಆದರೆ ನೀನು ಚಿಕ್ಕಮಕ್ಕಳಂತಿರುವ ಜನರಿಗೆ ಈ ಸಂಗತಿಗಳನ್ನು ಪ್ರಕಟಮಾಡಿದೆ. ಹೌದು, ತಂದೆಯೇ, ಅದೇ ನಿನ್ನ ಅಪೇಕ್ಷೆಯಾಗಿತ್ತು.
22 “ನನ್ನ ತಂದೆಯು ಎಲ್ಲವನ್ನೂ ನನಗೆ ಕೊಟ್ಟಿದ್ದಾನೆ. ಮಗನು ಯಾರೆಂಬುದು ಯಾರಿಗೂ ಗೊತ್ತಿಲ್ಲ. ತಂದೆಯೊಬ್ಬನಿಗೇ ಗೊತ್ತಿದೆ. ತಂದೆಯು ಯಾರೆಂಬುದು ಮಗನಿಗೆ ಮಾತ್ರ ಗೊತ್ತಿದೆ. ಮಗನು ತಂದೆಯ ಬಗ್ಗೆ ಯಾರಿಗೆ ತಿಳಿಸುತ್ತಾನೋ ಅವರು ಮಾತ್ರ ತಂದೆಯ ಬಗ್ಗೆ ತಿಳಿದುಕೊಳ್ಳುವರು.”
23 ಬಳಿಕ ಯೇಸು ತನ್ನ ಶಿಷ್ಯರ ಕಡೆಗೆ ತಿರುಗಿ ನೋಡಿದನು. ಅಲ್ಲಿ ಆತನ ಶಿಷ್ಯರು ಮಾತ್ರವಿದ್ದರು. ಯೇಸು ಅವರಿಗೆ, “ಈಗ ನಡೆಯುವ ಸಂಗತಿಗಳನ್ನು ನೋಡುತ್ತಿರುವ ನೀವು ಧನ್ಯರು! 24 ಅನೇಕ ಪ್ರವಾದಿಗಳೂ ಅರಸರೂ ಈಗ ನೀವು ನೋಡುತ್ತಿರುವ ಈ ಸಂಗತಿಗಳನ್ನು ನೋಡಬೇಕೆಂದು ಮತ್ತು ಈಗ ನೀವು ಕೇಳುತ್ತಿರುವ ಸಂಗತಿಗಳನ್ನು ಕೇಳಬೇಕೆಂದು ಅಪೇಕ್ಷಿಸಿದರು. ಆದರೆ ಅವರಿಗೆ ಸಾಧ್ಯವಾಗಲಿಲ್ಲ” ಎಂದನು.
Kannada Holy Bible: Easy-to-Read Version. All rights reserved. © 1997 Bible League International