Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 19

ರಚನೆಗಾರ: ದಾವೀದ.

19 ಆಕಾಶಮಂಡಲವು ದೇವರ ಮಹಿಮೆಯನ್ನು ಪ್ರಕಟಿಸುವುದು.
    ಗಗನವು ಆತನ ಕೈಕೆಲಸವನ್ನು ತಿಳಿಸುವುದು.
ಪ್ರತಿಯೊಂದು ದಿನವೂ ಅದರ ಕುರಿತು ಹೊಸ ವಿಷಯವನ್ನು ತಿಳಿಸುವುದು.
    ಪ್ರತಿಯೊಂದು ರಾತ್ರಿಯೂ ಅದರ ಕುರಿತು ಹೊಸ ಸಂಗತಿಯನ್ನು ಪ್ರಕಟಿಸುವುದು.
ಅವುಗಳ ಮಾತಾಗಲಿ
    ನುಡಿಗಳಾಗಲಿ ಸ್ವರವಾಗಲಿ ನಮಗೆ ಕೇಳಿಸದು.
ಆದರೂ ಅವುಗಳ ಸಂದೇಶವು ಭೂಲೋಕದಲ್ಲೆಲ್ಲಾ ಹರಡುತ್ತದೆ;
    ಭೂಮಿಯ ಕಟ್ಟಕಡೆಗಳವರೆಗೂ ವ್ಯಾಪಿಸುತ್ತದೆ.

ಆಕಾಶವು ಸೂರ್ಯನಿಗೆ ಮನೆಯಂತಿದೆ.
    ಮದುವೆಯ ಮಂಟಪದಿಂದ ಆನಂದದಿಂದ ಬರುವ ಮದುಮಗನಂತೆ ಸೂರ್ಯನು ಮುಂಜಾನೆ ಉದಯಿಸುವನು.
ಕ್ರೀಡಾಪಟುವಿನಂತೆ
    ಸೂರ್ಯನು ಆಕಾಶದಲ್ಲಿ ಓಡಲಾರಂಭಿಸುವನು.
ಸೂರ್ಯನು ಆಕಾಶದ ಒಂದು ಕಡೆಯಿಂದ ಉದಯಿಸಿ
    ಮತ್ತೊಂದು ಕೊನೆಗೆ ಓಡುತ್ತಾಹೋಗುವನು.
    ಅವನ ತಾಪಕ್ಕೆ ಯಾವುದೂ ಮರೆಯಾಗಿರಲಾರದು.

ಯೆಹೋವನ ಉಪದೇಶಗಳು ನಿಷ್ಕಳಂಕವಾಗಿವೆ.
    ಅವು ದೇವಜನರಿಗೆ ಬಲವನ್ನು ಕೊಡುತ್ತವೆ.
ಯೆಹೋವನ ಕಟ್ಟಳೆಯು ಭರವಸೆಗೆ ಯೋಗ್ಯವಾಗಿದೆ.
    ಅದು ಮೂಢರನ್ನು ಜ್ಞಾನಿಗಳನ್ನಾಗಿ ಮಾಡುತ್ತದೆ.
ಯೆಹೋವನ ನಿಯಮಗಳು ನೀತಿಯ ಕಟ್ಟಳೆಗಳಾಗಿವೆ.
    ಅವು ಮನುಸ್ಸನ್ನು ಸಂತೋಷಗೂಳಿಸುತ್ತವೆ.
ಯೆಹೋವನ ಆಜ್ಞೆಗಳು ಒಳ್ಳೆಯ ಆಜ್ಞೆಗಳಾಗಿವೆ.
    ಅವು ಕಣ್ಣುಗಳಿಗೆ ಬೆಳಕನ್ನು ನೀಡುತ್ತವೆ.

ಯೆಹೋವನಲ್ಲಿಡುವ ಭಯಭಕ್ತಿಯು ಪರಿಶುದ್ಧವಾಗಿದೆ;
    ಅದು ಶಾಶ್ವತವಾದದ್ದು.
ಯೆಹೋವನ ವಿಧಿಗಳು ಯಥಾರ್ಥವಾಗಿವೆ;
    ಅವು ಯಾವಾಗಲೂ ನ್ಯಾಯಾನುಸಾರವಾಗಿವೆ.
10 ಆತನ ಉಪದೇಶಗಳು ಬಂಗಾರಕ್ಕಿಂತಲೂ ಅಮೂಲ್ಯವಾಗಿವೆ;
    ಅಪ್ಪಟವಾದ ಜೇನುತುಪ್ಪಕ್ಕಿಂತಲೂ ಮಧುರವಾಗಿವೆ.
11 ಆತನ ಉಪದೇಶಗಳು ಆತನ ಸೇವಕನನ್ನು ಎಚ್ಚರಿಸುತ್ತವೆ;
    ಅವುಗಳನ್ನು ಕೈಕೊಂಡು ನಡೆದರೆ ಒಳ್ಳೆಯದಾಗುವುದು.

12 ಯೆಹೋವನೇ, ಯಾವನೂ ತನ್ನ ತಪ್ಪುಗಳನ್ನೆಲ್ಲಾ ತಿಳಿದುಕೊಳ್ಳುವುದಿಲ್ಲ.
    ಆದ್ದರಿಂದ ಗುಪ್ತ ಪಾಪಗಳನ್ನು ಮಾಡಲು ನನ್ನನ್ನು ಬಿಟ್ಟುಬಿಡಬೇಡ.
13 ನನ್ನ ಇಷ್ಟಾನುಸಾರ ಪಾಪಮಾಡಲು ನನ್ನನ್ನು ಬಿಟ್ಟುಬಿಡಬೇಡ.
    ಆ ಪಾಪಗಳು ನನ್ನನ್ನು ಆಳದಿರಲಿ.
ನೀನು ಸಹಾಯಮಾಡಿದರೆ
    ನಾನು ಪರಿಶುದ್ಧನಾಗಿಯೂ ಪಾಪದಿಂದ ವಿಮುಕ್ತನಾಗಿಯೂ ಇರಲು ಸಾಧ್ಯ.
14 ನನ್ನ ಮಾತುಗಳೂ ನನ್ನ ಆಲೋಚನೆಗಳೂ ನಿನಗೆ ಮೆಚ್ಚಿಕೆಯಾಗಿರಲಿ.
    ಯೆಹೋವನೇ, ನೀನೇ ನನ್ನ ಬಂಡೆಯಾಗಿರುವೆ.[a] ನನ್ನನ್ನು ರಕ್ಷಿಸುವಾತನು ನೀನೇ.

ನೆಹೆಮೀಯ 2:1-10

ನೆಹೆಮೀಯನನ್ನು ಅರ್ತಷಸ್ತನು ಜೆರುಸಲೇಮಿಗೆ ಕಳುಹಿಸಿದ್ದು

ಅರ್ತಷಸ್ತನ ಆಳ್ವಿಕೆಯ ಇಪ್ಪತ್ತನೆಯ ವರ್ಷದ ನಿಸ್ಸಾನ್ ತಿಂಗಳಲ್ಲಿ ರಾಜನಿಗೆ ದ್ರಾಕ್ಷಾರಸವನ್ನು ನಾನು ಕೊಟ್ಟೆನು. ನಾನೆಂದೂ ರಾಜನ ಮುಂದೆ ದುಃಖಿತನಾಗಿರಲಿಲ್ಲ. ಆದರೆ ಈ ಸಮಯದಲ್ಲಿ ನನ್ನ ಮುಖವು ಕಳೆಗುಂದಿದ್ದರಿಂದ, “ನೀನು ಕ್ಷೇಮವೋ?” ಎಂದು ಅರಸನು ವಿಚಾರಿಸಿದನು, “ನೀನು ದುಃಖಿತನಾಗಿರುವುದೇಕೆ? ನಿನ್ನ ಹೃದಯವು ವೇದನೆಯಿಂದ ತುಂಬಿರುವ ಹಾಗಿದೆಯಲ್ಲ?”

ಅರಸನ ಈ ಪ್ರಶ್ನೆಗೆ ನಾನು ಭಯಪಟ್ಟೆನು. ನಾನು ಭಯದಿಂದಲೇ, “ಅರಸನೇ ಚಿರಂಜೀವಿಯಾಗಿರು. ನನ್ನ ಪೂರ್ವಿಕರ ಸಮಾಧಿಗಳಿರುವ ಪಟ್ಟಣವು ಹಾಳುದಿಬ್ಬವಾಗಿರುವುದರಿಂದ ನಾನು ದುಃಖಿತನಾಗಿದ್ದೇನೆ; ಅದರ ಬಾಗಿಲುಗಳು ಬೆಂಕಿಯಿಂದ ಸುಟ್ಟುಹೋಗಿವೆ” ಅಂದೆನು.

ಆಗ ಅರಸನು, “ನಾನು ನಿನಗೆ ಏನುಮಾಡಬೇಕೆಂದು ಅಪೇಕ್ಷಿಸುವೆ?” ಎಂದು ಕೇಳಿದಾಗ ಅವನಿಗೆ ಉತ್ತರಿಸುವ ಮೊದಲು ನಾನು ಪರಲೋಕದ ದೇವರಿಗೆ ಪ್ರಾರ್ಥಿಸಿದೆನು.

ಅನಂತರ ಅರಸನಿಗೆ, “ನಾನು ನಿನಗೆ ಮೆಚ್ಚಿಕೆಯಾಗಿದ್ದಲ್ಲಿ ಮತ್ತು ನಿನಗೆ ಈ ವಿಷಯ ಸರಿಕಂಡಲ್ಲಿ ದಯಮಾಡಿ ಯೆಹೂದ ಪ್ರಾಂತ್ಯದಲ್ಲಿ ನನ್ನ ಪೂರ್ವಿಕರ ಸಮಾಧಿಗಳಿರುವ ಜೆರುಸಲೇಮಿಗೆ ನನ್ನನ್ನು ಕಳುಹಿಸು. ನಾನು ಅಲ್ಲಿಗೆ ಹೋಗಿ ಜೆರುಸಲೇಮನ್ನು ಮತ್ತೆ ಕಟ್ಟಬೇಕು” ಎಂದೆನು.

ರಾಣಿಯು ರಾಜನ ಪಕ್ಕದಲ್ಲಿ ಕುಳಿತಿದ್ದಳು. ರಾಜನೂ ರಾಣಿಯೂ, “ನಿನಗೆ ಹೋಗಿ ಬರಲು ಎಷ್ಟು ಸಮಯ ಬೇಕಾಗುವುದು? ನೀನು ಹಿಂದಕ್ಕೆ ಯಾವಾಗ ಬರುವಿ?” ಎಂದು ವಿಚಾರಿಸಿದರು.

ನನ್ನನ್ನು ಕಳುಹಿಸಲು ರಾಜನಿಗೆ ಸಂತೋಷವಿದ್ದುದರಿಂದ ನಾನೊಂದು ಸಮಯವನ್ನು ಸೂಚಿಸಿದೆನು. ಆಮೇಲೆ “ರಾಜನೇ, ನನಗೆ ಸಹಾಯವನ್ನು ಮಾಡಲು ನೀನು ಇಚ್ಫಿಸುವುದಾದರೆ ಯೂಫ್ರೇಟೀಸ್ ನದಿಯ ಪಶ್ಚಿಮದ ಪ್ರಾಂತ್ಯದ ರಾಜ್ಯಪಾಲರಿಗೆ ಪತ್ರಗಳನ್ನು ಬರೆದುಕೊಟ್ಟರೆ ನಾನು ಯೆಹೂದಕ್ಕೆ ಅವರ ಪ್ರಾಂತ್ಯಗಳ ಮೂಲಕವಾಗಿ ಸುರಕ್ಷಿತವಾಗಿ ಹೋಗಲು ಸಾಧ್ಯವಾಗುವುದು. ಅಲ್ಲದೆ ಬಾಗಿಲುಗಳಿಗೆ, ಗೋಡೆಗಳಿಗೆ, ದೇವಾಲಯದ ಆವರಣದ ಗೋಡೆಗಳಿಗೆ ಮತ್ತು ನನ್ನ ಮನೆಗೆ ಮರದ ತೊಲೆಗಳು ಬೇಕಾಗಿವೆ. ಆದ್ದರಿಂದ ನಿಮ್ಮ ಅರಣ್ಯಗಳ ಮುಖ್ಯಾಧಿಕಾರಿಯಾದ ಆಸಾಫನಿಗೂ ಪತ್ರವನ್ನು ಕೊಡಬೇಕು” ಎಂದು ವಿನಂತಿಸಿದೆನು.

ಅರಸನು ಪತ್ರಗಳನ್ನು ಮತ್ತು ನಾನು ಕೇಳಿದ್ದೆಲ್ಲವನ್ನು ನನಗೆ ಕೊಟ್ಟನು. ದೇವರು ನನ್ನನ್ನು ಕರುಣಿಸಿರುವುದರಿಂದ ರಾಜನು ನನಗೆ ಹಾಗೆ ಮಾಡಿದನು.

ಯೂಫ್ರೇಟೀಸ್ ನದಿಯ ಪಶ್ಚಿಮದಲ್ಲಿರುವ ರಾಜ್ಯಪಾಲರಿಗೆ ಅರಸನು ಕೊಟ್ಟ ಪತ್ರವನ್ನು ಕೊಟ್ಟೆನು. ರಾಜನು ನನ್ನೊಂದಿಗೆ ಸಿಪಾಯಿಗಳನ್ನೂ ಸೈನ್ಯಾಧಿಪತಿಗಳನ್ನೂ ಅಶ್ವ ಸೈನಿಕರನ್ನೂ ಕಳುಹಿಸಿದ್ದನು. 10 ನಾನು ಏನು ಮಾಡುತ್ತಿದ್ದೇನೆಂದು ಸನ್ಬಲ್ಲಟ್ ಮತ್ತು ಟೋಬೀಯ ಎಂಬವರಿಬ್ಬರು ಕೇಳಿಸಿಕೊಂಡರು. ಇಸ್ರೇಲ್ ಜನರಿಗೆ ಸಹಾಯ ಮಾಡಲು ಬರುತ್ತಿದ್ದಾರೆಂಬ ವಿಷಯವು ಅವರನ್ನು ತಳಮಳಗೊಳಿಸಿತು ಮತ್ತು ಅವರಿಗೆ ಸಿಟ್ಟೂ ಬಂದಿತು. ಸನ್ಬಲ್ಲಟನು ಹೋರೋನಿನವನು ಮತ್ತು ಟೋಬೀಯನು ಅಮ್ಮೋನಿಯ ಅಧಿಕಾರಿಯಾಗಿದ್ದನು.

ರೋಮ್ನಗರದವರಿಗೆ 12:1-8

ನಿಮ್ಮ ಜೀವಿತಗಳನ್ನು ದೇವರಿಗೆ ಕೊಡಿರಿ

12 ಆದ್ದರಿಂದ ಸಹೋದರ ಸಹೋದರಿಯರೇ, ದೇವರ ಮಹಾಕನಿಕರವನ್ನು ನಿಮ್ಮ ನೆನಪಿಗೆ ತಂದು ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ, ನಿಮ್ಮನ್ನೇ ದೇವರಿಗೆ ಮೀಸಲಾದ, ಮೆಚ್ಚುಗೆಯಾದ ಸಜೀವ ಯಜ್ಞಗಳಾಗಿ ಅರ್ಪಿಸಿರಿ. ಇದೇ ನೀವು ಸಲ್ಲಿಸಬೇಕಾದ ನಿಜವಾದ ಆರಾಧನೆ. ಈ ಲೋಕದವರ ನಡವಳಿಕೆಯನ್ನು ಅನುಸರಿಸದೆ ಅಂತರಂಗದಲ್ಲಿ ಮಾರ್ಪಾಟನ್ನು ಹೊಂದಿದವರಾಗಿದ್ದು ಪರಲೋಕಭಾವದವರಾಗಿರಿ. ಆಗ ನೀವು ದೇವರ ಚಿತ್ತಾನುಸಾರ ಯಾವುದು ಉತ್ತಮವಾದುದು, ಯಾವುದು ಮೆಚ್ಚಿಕೆಯಾದುದು ಯಾವುದು ಉತ್ಕೃಷ್ಟವಾದುದು ಎಂಬುದನ್ನು ಅರಿತುಕೊಳ್ಳುವಿರಿ.

ದೇವರು ನನಗೆ ವಿಶೇಷವಾದ ಒಂದು ವರವನ್ನು ಕೊಟ್ಟಿದ್ದಾನೆ. ಆದಕಾರಣವೇ, ನಿಮ್ಮಲ್ಲಿರುವ ಪ್ರತಿಯೊಬ್ಬರಿಗೂ ಈ ಸಂಗತಿಗಳನ್ನು ತಿಳಿಸುತ್ತಿದ್ದೇನೆ. ನೀವು ನಿಮ್ಮ ನಿಜವಾದ ಯೋಗ್ಯತೆಗಿಂತಲೂ ಹೆಚ್ಚಾಗಿ ನಿಮ್ಮ ವಿಷಯದಲ್ಲಿ ಭಾವಿಸಿಕೊಳ್ಳಬೇಡಿ. ನೀವು ನಿಮ್ಮ ವಿಷಯದಲ್ಲಿ ಏನು ಭಾವಿಸಿಕೊಂಡರೂ ಆ ಭಾವನೆಯು ನಿಮ್ಮ ನಿಜವಾದ ಯೋಗ್ಯತೆಗೆ ಸರಿಸಮಾನವಾಗಿರಬೇಕು. ದೇವರು ನಿಮಗೆ ಎಂಥ ನಂಬಿಕೆಯನ್ನು ಕೊಟ್ಟಿದ್ದಾನೋ ಆ ನಂಬಿಕೆಗೆ ತಕ್ಕಂತೆ ನಿಮ್ಮ ವಿಷಯದಲ್ಲಿ ಭಾವಿಸಿಕೊಳ್ಳಿರಿ. ಪ್ರತಿಯೊಬ್ಬರಿಗೂ ಒಂದು ದೇಹವಿದೆ. ಆ ದೇಹಕ್ಕೆ ಅನೇಕ ಅಂಗಾಂಗಗಳಿವೆ. ಆ ಅಂಗಾಂಗಗಳು ಒಂದೇ ಕಾರ್ಯವನ್ನು ಮಾಡುವುದಿಲ್ಲ. ಹೀಗೆ ನಮ್ಮಲ್ಲಿ ಅನೇಕರಿದ್ದರೂ ಕ್ರಿಸ್ತನಲ್ಲಿ ನಾವೆಲ್ಲರೂ ಒಂದೇ ದೇಹವಾಗಿದ್ದೇವೆ. ನಾವು ಆ ದೇಹದ ಅಂಗಗಳಾಗಿದ್ದೇವೆ. ಆ ದೇಹದ ಪ್ರತಿಯೊಂದು ಅಂಗವು ಇತರ ಅಂಗಗಳಿಗೂ ಸೇರಿಕೊಂಡಿದೆ.

ನಾವೆಲ್ಲರೂ ಬೇರೆಬೇರೆ ವರಗಳನ್ನು ಹೊಂದಿದ್ದೇವೆ. ದೇವರು ನಮಗೆ ಕೊಟ್ಟಿರುವ ಕೃಪೆಯಿಂದಲೇ ಪ್ರತಿಯೊಂದು ವರವು ಬಂದಿದೆ. ಪ್ರವಾದಿಸುವ ವರವನ್ನು ಹೊಂದಿರುವವನು ತನಗಿರುವ ನಂಬಿಕೆಯೊಂದಿಗೆ ಆ ವರವನ್ನು ಉಪಯೋಗಿಸಬೇಕು. ಸೇವೆಮಾಡುವ ವರವನ್ನು ಹೊಂದಿರುವವನು ಸೇವೆಮಾಡಬೇಕು. ಉಪದೇಶಮಾಡುವ ವರವನ್ನು ಹೊಂದಿರುವವನು ಉಪದೇಶ ಮಾಡಬೇಕು. ಸಂತೈಸುವ ವರವನ್ನು ಹೊಂದಿರುವವನು ಬೇರೆಯವರನ್ನು ಸಂತೈಸಬೇಕು. ದಾನಮಾಡುವ ವರವನ್ನು ಹೊಂದಿರುವವನು ಉದಾರವಾಗಿ ಕೊಡಬೇಕು. ನಾಯಕತ್ವದ ವರವನ್ನು ಹೊಂದಿರುವವನು ನಾಯಕತ್ವವನ್ನು ವಹಿಸಿಕೊಂಡಿರುವಾಗ ಕಷ್ಟಪಟ್ಟು ದುಡಿಯಬೇಕು. ಕನಿಕರವನ್ನು ತೋರುವ ವರವನ್ನು ಹೊಂದಿರುವವನು ಆನಂದದಿಂದ ಆ ಕಾರ್ಯವನ್ನು ಮಾಡಬೇಕು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International