Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 140

ಸ್ತುತಿಗೀತೆ. ರಚನೆಗಾರ: ದಾವೀದ.

140 ಯೆಹೋವನೇ, ಕೆಡುಕರಿಂದ ನನ್ನನ್ನು ರಕ್ಷಿಸು.
    ಕ್ರೂರಿಗಳಿಂದ ನನ್ನನ್ನು ಕಾಪಾಡು.
    ಅವರು ಕೇಡುಮಾಡಬೇಕೆಂದಿದ್ದಾರೆ. ಅವರು ಯಾವಾಗಲೂ ಜಗಳವೆಬ್ಬಿಸುತ್ತಾರೆ.
ಅವರ ನಾಲಿಗೆಗಳು ಸರ್ಪಗಳಂತಿವೆ.
    ಅವರ ನಾಲಿಗೆಯ ಕೆಳಗೆ ಹಾವಿನ ವಿಷವಿದೆ.

ಯೆಹೋವನೇ, ದುಷ್ಟರಿಂದ ನನ್ನನ್ನು ರಕ್ಷಿಸು.
    ಕ್ರೂರಿಗಳಿಂದ ನನ್ನನ್ನು ಕಾಪಾಡು.
    ಅವರು ನನ್ನನ್ನು ಹಿಂದಟ್ಟಿ ನನಗೆ ಕೇಡುಮಾಡಬೇಕೆಂದಿದ್ದಾರೆ.
ಆ ಗರ್ವಿಷ್ಠರು ನನಗೆ ಉರುಲನ್ನು ಒಡ್ಡಿದ್ದಾರೆ;
    ನನ್ನನ್ನು ಹಿಡಿಯಲು ಬಲೆಯನ್ನು ಹಾಸಿದ್ದಾರೆ;
    ನನ್ನ ದಾರಿಯಲ್ಲಿ ಬೋನನ್ನು ಇಟ್ಟಿದ್ದಾರೆ.

ಯೆಹೋವನೇ, ನನ್ನ ದೇವರು ನೀನೇ.
    ನನ್ನ ಪ್ರಾರ್ಥನೆಗೆ ಕಿವಿಗೊಡು.
ಯೆಹೋವನೇ, ನನ್ನ ಬಲಿಷ್ಠನಾದ ಒಡೆಯನು ನೀನೇ.
    ನನ್ನ ರಕ್ಷಕನೂ ನೀನೇ, ನನ್ನ ಶಿರಸ್ತ್ರಾಣವೂ ನೀನೇ.
ಯೆಹೋವನೇ, ಆ ದುಷ್ಟರ ದುರಾಶೆಯೂ
    ದುರಾಲೋಚನೆಯೂ ನೆರವೇರಲು ಬಿಡಬೇಡ.

ನನ್ನ ವೈರಿಗಳಿಗೆ ಜಯವಾಗಲು ಬಿಡಬೇಡ.
    ಅವರು ಕುಯುಕ್ತಿಗಳನ್ನು ಮಾಡುತ್ತಿದ್ದಾರೆ; ಅವುಗಳನ್ನು ವಿಫಲಗೊಳಿಸು.
10 ಅವರ ತಲೆಗಳ ಮೇಲೆ ಉರಿಯುವ ಕೆಂಡಗಳನ್ನು ಸುರಿದು
    ಬೆಂಕಿಯೊಳಗೆ ಎಸೆದುಬಿಡು;
    ಎಂದಿಗೂ ಹತ್ತಿ ಬರಲಾಗದ ಗುಂಡಿಯೊಳಗೆ ಅವರನ್ನು ಎಸೆದುಬಿಡು.
11 ಆ ಸುಳ್ಳುಗಾರರನ್ನು ಜೀವಂತವಾಗಿ ಉಳಿಸಬೇಡ.
    ಆ ಕೆಡುಕರಿಗೆ ಕೇಡುಗಳಾಗುವಂತೆ ಮಾಡು.
12 ಯೆಹೋವನು ದೀನರಿಗೆ ನ್ಯಾಯವಾದ ತೀರ್ಪನ್ನು ಪಾಲಿಸುತ್ತಾನೆಂದು ನನಗೆ ಗೊತ್ತಿದೆ.
    ದೇವರು ಅಸಹಾಯಕರಿಗೆ ಸಹಾಯಮಾಡುವನು.
13 ನೀತಿವಂತರು ನಿನ್ನ ಹೆಸರನ್ನು ಕೊಂಡಾಡುವರು;
    ಯಥಾರ್ಥವಂತರು ನಿನ್ನ ಸನ್ನಿಧಿಯಲ್ಲಿ ಜೀವಿಸುವರು.

ಎಸ್ತೇರಳು 5

ಎಸ್ತೇರಳು ರಾಜನನ್ನು ಸಂದರ್ಶಿಸಿದ್ದು

ಮೂರನೇ ದಿವಸದಲ್ಲಿ ಎಸ್ತೇರಳು ವಿಶೇಷ ಬಟ್ಟೆಗಳನ್ನು ಧರಿಸಿ ಅರಸನ ಅರಮನೆಯ ಒಳಾಂಗಣದಲ್ಲಿ ನಿಂತುಕೊಂಡಳು. ಅದು ರಾಜ ದರ್ಬಾರಿನ ಮುಂದೆ ಇತ್ತು. ರಾಜನು ಸಿಂಹಾಸನದ ಮೇಲೆ, ಪ್ರಜೆಗಳು ಪ್ರವೇಶಿಸುವ ಬಾಗಿಲಿಗೆ ಎದುರಾಗಿ ಕುಳಿತಿದ್ದನು. ಅರಸನು ಒಳಾಂಗಣದಲ್ಲಿ ನಿಂತಿದ್ದ ಎಸ್ತೇರಳನ್ನು ಕಂಡ ಕೂಡಲೇ ಆಕೆಯನ್ನು ಮೆಚ್ಚಿಕೊಂಡು ತನ್ನ ಕೈಯಲ್ಲಿದ್ದ ರಾಜದಂಡವನ್ನು ಆಕೆಯ ಕಡೆಗೆ ಚಾಚಿದನು. ಆಗ ಎಸ್ತೇರಳು ಒಳಾಂಗಣವನ್ನು ಪ್ರವೇಶಿಸಿ ರಾಜನ ಬಳಿ ಹೋದಳು ಮತ್ತು ರಾಜದಂಡದ ತುದಿಯನ್ನು ತನ್ನ ಬೆರಳಿನಿಂದ ಮುಟ್ಟಿದಳು.

“ಎಸ್ತೇರ್ ರಾಣಿಯೇ, ಯಾವುದು ನಿನ್ನ ಮನಸ್ಸನ್ನು ಭಾದಿಸುತ್ತದೆ? ನನ್ನನ್ನು ಏನು ಕೇಳಲು ಬಂದಿರುವಿ? ಕೇಳು, ನಾನು ನಿನಗೆ ಅರ್ಧ ರಾಜ್ಯವನ್ನು ಕೇಳಿದರೂ ಕೊಡುವೆನು” ಎಂದು ರಾಜನು ಅಂದನು.

ಅದಕ್ಕೆ ಎಸ್ತೇರಳು, “ನಾನು ಒಂದು ಔತಣವನ್ನು ಸಿದ್ಧಪಡಿಸಿರುತ್ತೇನೆ. ಅದಕ್ಕೆ ನೀವೂ, ಹಾಮಾನನೂ ಬರಬೇಕು ಎಂದು ವಿನಂತಿಸುತ್ತೇನೆ” ಎಂದಳು.

ಆಗ ಅರಸನು, “ಹಾಮಾನನನ್ನು ಬೇಗನೇ ಕರೆಯಿಸಿರಿ, ಎಸ್ತೇರಳು ಹೇಳಿದಂತೆ ನಾವು ಮಾಡುವೆವು” ಅಂದನು.

ಹಾಗೆ ಅರಸನೂ ಹಾಮಾನನೂ ಎಸ್ತೇರಳು ಅವರಿಗಾಗಿ ಮಾಡಿದ ಔತಣಕ್ಕೆ ಹೋದರು. ಅವರು ದ್ರಾಕ್ಷಾರಸವನ್ನು ಸೇವಿಸುತ್ತಿರುವಾಗ ರಾಜನು ಎಸ್ತೇರಳನ್ನು ತಿರಿಗಿ ವಿಚಾರಿಸಿದನು, “ನೀನು ನನ್ನನ್ನು ಏನು ಕೇಳಬೇಕೆಂದಿದ್ದೀ? ಏನೂ ಬೇಕಾದರೂ ಕೇಳು. ನಾನು ಕೊಡುತ್ತೇನೆ. ಹೇಳು ಏನುಬೇಕು? ನನ್ನ ಅರ್ಧ ರಾಜ್ಯವನ್ನು ಕೇಳಿದರೂ ನಾನು ಕೊಡುತ್ತೇನೆ” ಅಂದನು.

ಅದಕ್ಕೆ ಎಸ್ತೇರಳು, “ನನ್ನ ಬಿನ್ನಹವೇನೆಂದರೆ: ರಾಜನು ಸಮ್ಮತಿಸುವದಾದರೆ ಮತ್ತು ನಾನು ಕೇಳಿಕೊಳ್ಳುವುದನ್ನು ಕೊಡಲು ರಾಜನಿಗೆ ಇಷ್ಟವಾದರೆ, ನಾಳೆ ನಾನು ಇನ್ನೊಂದು ಔತಣ ಸಮಾರಂಭವನ್ನು ಏರ್ಪಡಿಸುತ್ತೇನೆ. ಅದಕ್ಕೆ ನೀವೂ ಹಾಮಾನನೂ ಬರಬೇಕು. ಆಗ ನಾನು ನನಗೇನುಬೇಕೆಂದು ತಿಳಿಸುವೆನು” ಅಂದಳು.

ಮೊರ್ದೆಕೈ ಮೇಲೆ ಹಾಮಾನನ ರೋಷ

ಹಾಮಾನನು ಹರ್ಷ ತುಂಬಿದವನಾಗಿ ರಾಜ ಸನ್ನಿಧಿಯಿಂದ ತನ್ನ ಮನೆಗೆ ತೆರಳಿದನು. ಆದರೆ ಹೆಬ್ಬಾಗಿಲ ಬಳಿಯಲ್ಲಿ ಮೊರ್ದೆಕೈಯನ್ನು ನೋಡಿದಾಗ ಅವನ ಮೇಲೆ ಹಾಮಾನನ ಕೋಪ ಉಕ್ಕಿ ಬಂತು. ಯಾಕೆಂದರೆ ಮೊರ್ದೆಕೈ ಹಾಮಾನನಿಗೆ ಯಾವ ಗೌರವವನ್ನೂ ಕೊಟ್ಟಿರಲಿಲ್ಲ ಮತ್ತು ಅವನಿಗೆ ಭಯಪಡಲಿಲ್ಲ. ಇದು ಹಾಮಾನನನ್ನು ಸಿಟ್ಟಿಗೇರುವಂತೆ ಮಾಡಿತು. 10 ಆದರೆ ಹಾಮಾನನು ತನ್ನ ಕೋಪವನ್ನು ಹಿಡಿತದಲ್ಲಿಟ್ಟುಕೊಂಡು ತನ್ನ ಮನೆಗೆ ಹೋದನು. ಅಲ್ಲಿ ತನ್ನ ಸ್ನೇಹಿತರನ್ನೂ ತನ್ನ ಹೆಂಡತಿಯಾದ ಜೆರೆಷಳನ್ನೂ ಕರೆದು 11 ತನ್ನ ಸಂಪತ್ತಿನ ವಿಷಯ ಕೊಚ್ಚಿಗೊಂಡನು. ತನ್ನ ಸ್ನೇಹಿತರಲ್ಲಿ ತನ್ನ ಮಕ್ಕಳ ವಿಚಾರವಾಗಿ ಹೆಗ್ಗಳಿಕೆಯಿಂದ ಮಾತಾಡುತ್ತಿದ್ದನು. ಮಾತ್ರವಲ್ಲದೆ ಅರಸನು ತನ್ನನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸಿ ಇತರ ಎಲ್ಲಾ ನಾಯಕರುಗಳ ಮೇಲೆ ನೇಮಿಸಿದನು. 12 “ಅಷ್ಟೇ ಅಲ್ಲ” ಹಾಮಾನನು ಮುಂದುವರಿಸುತ್ತಾ, “ಎಸ್ತೇರ್ ರಾಣಿಯು ಅರಸನೊಡನೆ ನನ್ನೊಬ್ಬನನ್ನೇ ಕರೆದು ಔತಣ ಮಾಡಿಸಿದಳು. ನಾಳೆಯ ಔತಣ ಸಮಾರಂಭಕ್ಕೂ ಅರಸನೊಡನೆ ನನ್ನನ್ನು ತಿರಿಗಿ ಬರಲು ಆಮಂತ್ರಿಸಿರುತ್ತಾಳೆ. 13 ಆದರೆ ನಾನು ಹೆಬ್ಬಾಗಿಲ ಬಳಿಯಲ್ಲಿ ಕುಳಿತುಕೊಳ್ಳುತ್ತಿರುವ ಮೊರ್ದೆಕೈಯನ್ನು ನೋಡುವಾಗ ನನ್ನ ಸಂತೋಷವೆಲ್ಲವೂ ಮಾಯವಾಗುತ್ತದೆ” ಎಂದು ಹೇಳಿದನು.

14 ಇದನ್ನು ಕೇಳಿದ ಹಾಮಾನನ ಹೆಂಡತಿ ಜೆರೆಷಳೂ ಮತ್ತು ಅವನ ಮಿತ್ರವೃಂದದವರೂ ಅವನಿಗೊಂದು ಸಲಹೆಯನ್ನಿತ್ತರು. “ಒಂದು ಗಲ್ಲುಮರವನ್ನು ನೆಡಿಸು. ಅದು ಎಪ್ಪತ್ತೈದು ಅಡಿ ಎತ್ತರವಿರಲಿ. ನಾಳೆ ಮುಂಜಾನೆ ಮೊರ್ದೆಕೈಯನ್ನು ಗಲ್ಲಿಗೇರಿಸಲು ಅರಸನಿಂದ ಅಪ್ಪಣೆ ತೆಗೆದುಕೋ. ಅನಂತರ ಅರಸನೊಂದಿಗೆ ಔತಣ ಸಮಾರಂಭಕ್ಕೆ ಹೋಗಿ ಸಂತೋಷಪಡು.”

ಇದನ್ನು ಕೇಳಿ ಹಾಮಾನನು ಸಂತೋಷಗೊಂಡನು. ಕೂಡಲೇ ಸೇವಕನನ್ನು ಕರೆಸಿ ಗಲ್ಲುಮರವನ್ನು ಸಿದ್ಧಮಾಡಲು ಆಜ್ಞಾಪಿಸಿದನು.

1 ಯೋಹಾನ 2:18-25

ಕ್ರಿಸ್ತನ ಶತ್ರುಗಳನ್ನು ಅನುಸರಿಸಬೇಡಿ

18 ನನ್ನ ಪ್ರಿಯ ಮಕ್ಕಳೇ, ಅಂತ್ಯವು ಸಮೀಪಿಸಿದೆ! ಕ್ರಿಸ್ತನ ಶತ್ರು ಬರುತ್ತಿದ್ದಾನೆಂಬುದನ್ನು ನೀವು ಕೇಳಿದ್ದೀರಿ. ಕ್ರಿಸ್ತನ ಅನೇಕ ಶತ್ರುಗಳು ಈಗಾಗಲೇ ಇಲ್ಲಿದ್ದಾರೆ. ಆದ್ದರಿಂದ ಅಂತ್ಯವು ಸಮೀಪಿಸಿದೆ ಎಂಬುದು ನಮಗೆ ತಿಳಿದಿದೆ. 19 ಕ್ರಿಸ್ತನ ಶತ್ರುಗಳು ನಮ್ಮ ಗುಂಪಿನಲ್ಲೇ ಇದ್ದರು. ಅವರು ನಮ್ಮನ್ನು ಬಿಟ್ಟುಹೋದರು. ಅವರು ನಿಜವಾಗಿಯೂ ನಮ್ಮವರಾಗಿರಲಿಲ್ಲ. ಅವರು ನಿಜವಾಗಿಯೂ ನಮ್ಮ ಸಭೆಗೆ ಸೇರಿದವರಾಗಿದ್ದರೆ ನಮ್ಮೊಂದಿಗೆ ಇರುತ್ತಿದ್ದರು. ಆದರೆ ಅವರು ಹೊರಟುಹೋದರು. ಅವರು ನಿಜವಾಗಿಯೂ ನಮ್ಮವರಾಗಿರಲಿಲ್ಲ ಎಂಬುದನ್ನು ಇದೇ ತೋರ್ಪಡಿಸುತ್ತದೆ.

20 ಪರಿಶುದ್ಧವಾಗಿರುವಾತನು (ದೇವರು ಅಥವಾ ಕ್ರಿಸ್ತನು) ಕೊಟ್ಟಿರುವ ವರವನ್ನು ನೀವು ಹೊಂದಿದ್ದೀರಿ. ಆದ್ದರಿಂದ ನೀವೆಲ್ಲರೂ ಸತ್ಯವನ್ನು ತಿಳಿದಿದ್ದೀರಿ. 21 ನಾನು ನಿಮಗೆ ಏಕೆ ಬರೆಯಬೇಕು? ನೀವು ಸತ್ಯವನ್ನು ತಿಳಿದಿಲ್ಲವೆಂದು ನಾನು ಬರೆಯಬೇಕೇ? ಇಲ್ಲ! ನೀವು ಸತ್ಯವನ್ನು ತಿಳಿದಿರುವುದರಿಂದ ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ. ಸತ್ಯದಿಂದ ಯಾವ ಸುಳ್ಳೂ ಬರುವುದಿಲ್ಲ ಎಂಬುದು ನಿಮಗೆ ತಿಳಿದಿದೆ.

22 ಆದ್ದರಿಂದ ಸುಳ್ಳು ಹೇಳುವವನು ಯಾರು? ಯೇಸುವನ್ನು ಕ್ರಿಸ್ತನಲ್ಲವೆಂದು ಹೇಳುವವನೇ ಸುಳ್ಳುಗಾರ. ಅವನು ಕ್ರಿಸ್ತನ ವೈರಿಯಾಗಿದ್ದಾನೆ. ಅವನು ತಂದೆಯನ್ನಾಗಲಿ (ದೇವರು), ಆತನ ಮಗನನ್ನಾಗಲಿ (ಕ್ರಿಸ್ತನು) ನಂಬುವುದಿಲ್ಲ. 23 ಮಗನನ್ನು ನಂಬದೆ ಇರುವವನು ತಂದೆಯನ್ನು ಹೊಂದಿಲ್ಲ. ಆದರೆ ಮಗನನ್ನು ಸ್ವೀಕರಿಸಿಕೊಳ್ಳುವವನು ತಂದೆಯನ್ನು ಸಹ ಹೊಂದಿದ್ದಾನೆ.

24 ನೀವು ಆರಂಭದಿಂದಲೂ ಕೇಳಿರುವ ಬೋಧನೆಯನ್ನೇ ಅನುಸರಿಸಿರಿ. ಆ ಬೋಧನೆಯನ್ನು ಅನುಸರಿಸುವವರಾಗಿದ್ದರೆ ನೀವು ಮಗನಲ್ಲಿಯೂ ತಂದೆಯಲ್ಲಿಯೂ ನೆಲೆಗೊಂಡಿದ್ದೀರಿ. 25 ಕ್ರಿಸ್ತನು ನಮಗೆ ಕೊಡುವುದಾಗಿ ಮಾಡಿದ್ದ ವಾಗ್ದಾನವೇ ಈ ನಿತ್ಯಜೀವ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International