Revised Common Lectionary (Semicontinuous)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.
125 ಯೆಹೋವನಲ್ಲಿ ಭರವಸವಿಟ್ಟಿರುವವರು ಚೀಯೋನ್ ಪರ್ವತದಂತಿರುವರು.
ಅವರೆಂದಿಗೂ ಕದಲದೆ ಶಾಶ್ವತವಾಗಿರುವರು.
2 ಪರ್ವತಗಳು ಜೆರುಸಲೇಮಿನ ಸುತ್ತಲೂ ಇವೆ.
ಯೆಹೋವನು ತನ್ನ ಜನರ ಸುತ್ತಲೂ ಇರುವನು.
ಆತನು ತನ್ನ ಜನರನ್ನು ಸದಾಕಾಲ ಸಂರಕ್ಷಿಸುವನು.
3 ದುಷ್ಟರು ನೀತಿವಂತರನ್ನು ಶಾಶ್ವತವಾಗಿ ಆಳುವುದಿಲ್ಲ.
ಅವರು ಶಾಶ್ವತವಾಗಿ ಆಳಿದರೆ ನೀತಿವಂತರೂ ದುಷ್ಕೃತ್ಯಗಳನ್ನು ಮಾಡತೊಡಗಬಹುದು.
4 ಯೆಹೋವನೇ, ನೀತಿವಂತರಿಗೂ
ಯಥಾರ್ಥವಂತರಿಗೂ ಉಪಕಾರಮಾಡು.
5 ದುಷ್ಟರು ಕುತಂತ್ರಗಳನ್ನು ಮಾಡುವರು.
ಯೆಹೋವನು ಅವರನ್ನು ದಂಡಿಸುವನು.
ಇಸ್ರೇಲಿನಲ್ಲಿ ಶಾಂತಿ ನೆಲೆಸಿರಲಿ.
ಜ್ಞಾನ—ಒಳ್ಳೆಯ ಸ್ತ್ರೀ
8 ಕೇಳಿ! ಜ್ಞಾನವೆಂಬಾಕೆಯೂ ವಿವೇಕವೆಂಬಾಕೆಯೂ
“ಕಿವಿಗೊಡಿರಿ” ಎಂದು ನಿಮ್ಮನ್ನು ಕೂಗಿ ಕರೆಯುತ್ತಿದ್ದಾಳೆ.
2 ರಸ್ತೆಗಳ ಚೌಕಗಳ ಬಳಿಯಿರುವ
ಗುಡ್ಡದ ಮೇಲ್ಭಾಗದಲ್ಲಿ ಆಕೆಯು ನಿಂತುಕೊಂಡಿದ್ದಾಳೆ.
3 ಪಟ್ಟಣದ ಹೆಬ್ಬಾಗಿಲುಗಳ ಬಳಿಯಿಂದಲೂ
ತೆರೆದ ಬಾಗಿಲುಗಳ ಬಳಿಯಿಂದಲೂ ಕರೆಯುತ್ತಿದ್ದಾಳೆ.
4 “ಮನುಷ್ಯರೇ, ನಿಮ್ಮನ್ನೇ ಕರೆಯುತ್ತೇನೆ;
ಎಲ್ಲಾ ಜನರನ್ನು ಕರೆಯುತ್ತೇನೆ.
5 ಮೂಢರೇ, ಜಾಣತನವನ್ನು ಕಲಿತುಕೊಳ್ಳಿರಿ;
ಜ್ಞಾನಹೀನರೇ ಬುದ್ಧಿಯನ್ನು ಗ್ರಹಿಸಿಕೊಳ್ಳಿರಿ.
6 ಕೇಳಿರಿ! ಶ್ರೇಷ್ಠವಾದವುಗಳನ್ನೂ
ಯಥಾರ್ಥವಾದವುಗಳನ್ನೂ ನಿಮಗೆ ತಿಳಿಸುವೆನು.
7 ನನ್ನ ಮಾತುಗಳು ಸತ್ಯ.
ನನ್ನ ತುಟಿಗಳಿಗೆ ದುಷ್ಟತನ ಅಸಹ್ಯ.
8 ನನ್ನ ಮಾತುಗಳು ನೀತಿಯ ಮಾತುಗಳಾಗಿವೆ.
ನನ್ನ ಮಾತುಗಳಲ್ಲಿ ತಪ್ಪಾಗಲಿ ಕಪಟವಾಗಲಿ ಇಲ್ಲವೇ ಇಲ್ಲ.
9 ತಿಳುವಳಿಕೆಯುಳ್ಳವನಿಗೆ ನನ್ನ ಮಾತುಗಳು ಸ್ಪಷ್ಟವಾಗಿವೆ;
ವಿವೇಕಿಗೆ ಯಥಾರ್ಥವಾಗಿವೆ.
10 ನನ್ನ ಉಪದೇಶವನ್ನು ಬೆಳ್ಳಿಗಿಂತಲೂ
ನನ್ನ ಜ್ಞಾನೋಪದೇಶವನ್ನು ಶುದ್ಧ ಬಂಗಾರಕ್ಕಿಂತಲೂ ಉತ್ತಮವೆಂದು ಸ್ವೀಕರಿಸಿಕೊಳ್ಳಿ.
11 ಜ್ಞಾನವು ಹವಳಕ್ಕಿಂತಲೂ ಶ್ರೇಷ್ಠ,
ಮನುಷ್ಯನ ಇಷ್ಟ ವಸ್ತುಗಳೆಲ್ಲವೂ ಅದಕ್ಕೆ ಸಮವಲ್ಲ.”
ಜ್ಞಾನವು ಮಾಡುವುದೇನು
12 “ನಾನೇ ಜ್ಞಾನ.
ನಾನು ಒಳ್ಳೆಯ ನ್ಯಾಯತೀರ್ಪಿನೊಡನೆ ವಾಸಿಸುವೆ.
ನಾನು ವಿವೇಕದೊಡನೆಯೂ ಒಳ್ಳೆಯ ಆಲೋಚನೆಯೊಡನೆಯೂ ಇರುವೆನು.
13 ಯೆಹೋವನಲ್ಲಿ ಭಯಭಕ್ತಿಯಿರುವವನು ಪಾಪವನ್ನು ದ್ವೇಷಿಸುತ್ತಾನೆ.
ಜ್ಞಾನವೆಂಬ ನಾನು ಗರ್ವವನ್ನೂ ಅಹಂಭಾವವನ್ನೂ
ದುರ್ಮಾರ್ಗತನವನ್ನೂ ಸುಳ್ಳಾಡುವ ಬಾಯನ್ನೂ ದ್ವೇಷಿಸುತ್ತೇನೆ.
14 ಒಳ್ಳೆಯ ಆಲೋಚನೆಗಳೂ ಒಳ್ಳೆಯ ತೀರ್ಪುಗಳೂ ನನ್ನವೇ.
ವಿವೇಕವೂ ಸಾಮರ್ಥ್ಯವೂ ನನ್ನಲ್ಲಿವೆ.
15 ನನ್ನ ಸಹಾಯದಿಂದ ರಾಜರುಗಳು ರಾಜ್ಯವಾಳುವರು;
ಅಧಿಪತಿಗಳು ನ್ಯಾಯವಾದ ಕಾನೂನುಗಳನ್ನು ಮಾಡುವರು.
16 ನನ್ನ ಸಹಾಯದಿಂದ ಅಧಿಪತಿಗಳು ಆಡಳಿತ ಮಾಡುವರು;
ನಾಯಕರು ದೊರೆತನ ಮಾಡುವರು.
17 ನನ್ನನ್ನು ಪ್ರೀತಿಸುವವರನ್ನು ನಾನೂ ಪ್ರೀತಿಸುವೆನು;
ಬಹಳವಾಗಿ ನನ್ನನ್ನು ಹುಡುಕುವವರು ನನ್ನನ್ನು ಕಂಡುಕೊಳ್ಳುವರು.
18 ನನ್ನಲ್ಲಿಯೂ ಸಹ ಕೊಡಲು ಐಶ್ವರ್ಯವಿದೆ ಮತ್ತು ಘನತೆಯಿದೆ.
ನಾನು ಶಾಶ್ವತವಾದ ಐಶ್ವರ್ಯವನ್ನೂ ಯಶಸ್ಸನ್ನೂ ಕೊಡುವೆನು.
19 ನಾನು ಕೊಡುವಂಥವುಗಳು ಬಂಗಾರಕ್ಕಿಂತಲೂ ಶ್ರೇಷ್ಠ.
ನನ್ನ ಉಡುಗೊರೆಗಳು ಅಪ್ಪಟ ಬೆಳ್ಳಿಗಿಂತಲೂ ಉತ್ತಮ.
20 ನಾನು ನೀತಿಮಾರ್ಗದಲ್ಲಿಯೂ
ನ್ಯಾಯಮಾರ್ಗದಲ್ಲಿಯೂ ನಡೆಯುತ್ತೇನೆ.
21 ನನ್ನನ್ನು ಪ್ರೀತಿಸುವವರಿಗೆ ನಾನು ಐಶ್ವರ್ಯವನ್ನು ಕೊಡುವೆನು.
ಹೌದು, ಅವರ ಉಗ್ರಾಣಗಳನ್ನು ತುಂಬಿಸುವೆನು.
22 “ಯೆಹೋವನು ‘ಜ್ಞಾನ’ವೆಂಬ ನನ್ನನ್ನು
ತನ್ನ ಸೃಷ್ಟಿ ಕ್ರಮದಲ್ಲಿ ಮೊದಲು ನಿರ್ಮಿಸಿದನು.
23 ನಾನು ಆದಿಯಲ್ಲಿ ನಿರ್ಮಾಣಗೊಂಡೆನು.
ಪ್ರಪಂಚವು ಆರಂಭವಾಗುವುದಕ್ಕಿಂತ ಮೊದಲೇ ನಾನು ನಿರ್ಮಿತನಾದೆನು.
24 ನಾನು ಸಾಗರಗಳಿಗಿಂತ ಮೊದಲೇ ಜನಿಸಿದೆನು;
ಬುಗ್ಗೆಗಳ ನೀರು ಉಂಟಾಗುವುದಕ್ಕಿಂತ ಮೊದಲೇ ಜನಿಸಿದೆನು.
25 ನಾನು ಪರ್ವತಗಳಿಗಿಂತ ಮೊದಲೇ ಜನಿಸಿದೆನು; ಬೆಟ್ಟಗಳಿಗಿಂತ ಮೊದಲೇ ಹುಟ್ಟಿದೆನು.
26 ಯೆಹೋವನು ಭೂಮಿಯನ್ನು ಸೃಷ್ಟಿಸುವುದಕ್ಕಿಂತ ಮೊದಲೇ ಜ್ಞಾನವೆಂಬ ನಾನು ಹುಟ್ಟಿದೆನು.
ನಾನು ಬಯಲುಗಳಿಗಿಂತ ಮೊದಲೇ ಹುಟ್ಟಿದೆನು. ಆತನು ಭೂಮಿಯ ಮೊದಲನೆ ಧೂಳಿನ ಕಣವನ್ನು ಉಂಟುಮಾಡುವುದಕ್ಕಿಂತ ಮೊದಲೇ ನಾನು ಹುಟ್ಟಿದೆನು.
27 ಯೆಹೋವನು ಆಕಾಶವನ್ನು ಸೃಷ್ಟಿಸಿದ ಸಮಯದಲ್ಲಿ
ಜ್ಞಾನವೆಂಬ ನಾನು ಅಲ್ಲಿದ್ದೆನು.
ಆತನು ಸಾಗರದ ಎಲ್ಲೆಗಳನ್ನು ಗೊತ್ತುಪಡಿಸಿದಾಗ ಜ್ಞಾನವೆಂಬ ನಾನು ಅಲ್ಲಿದ್ದೆನು.
28 ಆತನು ಆಕಾಶದಲ್ಲಿ ಮೋಡಗಳನ್ನೂ
ಸಾಗರಗಳಲ್ಲಿ ನೀರನ್ನೂ ನೆಲೆಗೊಳಿಸಿದಾಗ ನಾನು ಅಲ್ಲಿದ್ದೆನು.
29 ಆತನು ಸಮುದ್ರಗಳ ನೀರಿಗೆ ಎಲ್ಲೆಕಟ್ಟನ್ನು ಹಾಕಿದಾಗಲೂ
ಭೂಮಿಗೆ ಅಸ್ತಿವಾರಗಳನ್ನು ಹಾಕಿದಾಗಲೂ ನಾನು ಅಲ್ಲಿದ್ದೆನು.
30 ನಾನು ಆತನ ಪಕ್ಕದಲ್ಲಿ ನಿಪುಣ ಕೆಲಸಗಾರನಂತಿದ್ದೆನು.
ನಾನು ಪ್ರತಿದಿನವೂ ಸಂತೋಷಪಡುತ್ತಾ ಆತನ ಸನ್ನಿಧಿಯಲ್ಲಿ ಯಾವಾಗಲೂ ಉಲ್ಲಾಸಿಸುತ್ತಿದ್ದೆನು.
31 ಆತನು ಸೃಷ್ಟಿಸಿದ ಭೂಲೋಕದ ವಿಷಯದಲ್ಲಿ ಉಲ್ಲಾಸಿಸುತ್ತಾ
ಮಾನವ ಸಂತಾನದ ವಿಷಯದಲ್ಲಿ ಹರ್ಷಿಸುತ್ತಾ ಇದ್ದೆನು.
ಯೆಹೂದ್ಯಳಲ್ಲದ ಸ್ತ್ರೀಗೆ ಯೇಸು ಮಾಡಿದ ಸಹಾಯ
(ಮಾರ್ಕ 7:24-30)
21 ಯೇಸು ಆ ಸ್ಥಳವನ್ನು ಬಿಟ್ಟು, ಟೈರ್ ಮತ್ತು ಸೀದೋನ್ಗಳ ಸುತ್ತಮುತ್ತಲಿನ ಪ್ರದೇಶಕ್ಕೆ ಹೋದನು. 22 ಆ ಸ್ಥಳದಿಂದ ಕಾನಾನ್ಯಳಾದ ಒಬ್ಬ ಸ್ತ್ರೀ ಯೇಸುವಿನ ಬಳಿಗೆ ಬಂದು, “ಪ್ರಭುವೇ, ದಾವೀದನ ಮಗನೇ, ದಯವಿಟ್ಟು ನನಗೆ ಕರುಣೆ ತೋರು! ನನ್ನ ಮಗಳಲ್ಲಿ ದೆವ್ವ ಸೇರಿಕೊಂಡಿದೆ ಮತ್ತು ಆಕೆ ಬಹಳ ಸಂಕಟಪಡುತ್ತಿದ್ದಾಳೆ” ಎಂದು ಗಟ್ಟಿಯಾಗಿ ಕೂಗಿಕೊಂಡಳು.
23 ಆದರೆ ಯೇಸು ಆ ಸ್ತ್ರೀಗೆ ಉತ್ತರ ಕೊಡಲಿಲ್ಲ. ಆದ್ದರಿಂದ ಶಿಷ್ಯರು ಯೇಸುವಿನ ಬಳಿಗೆ ಬಂದು, “ಆ ಸ್ತ್ರೀಗೆ ಹೊರಟುಹೋಗುವುದಕ್ಕೆ ಹೇಳು. ಆಕೆಯು ಕೂಗಿಕೊಂಡು ನಮ್ಮ ಹಿಂದೆಯೇ ಬರುತ್ತಿದ್ದಾಳೆ” ಎಂದು ಕೇಳಿಕೊಂಡರು.
24 ಯೇಸು, “ತಪ್ಪಿಸಿಕೊಂಡ ಕುರಿಗಳಂತಿರುವ ಇಸ್ರೇಲರ ಬಳಿಗೆ ಮಾತ್ರ ದೇವರು ನನ್ನನ್ನು ಕಳುಹಿಸಿದನು” ಎಂದನು.
25 ಆಗ ಆ ಸ್ತ್ರೀಯು ಯೇಸುವಿನ ಬಳಿಗೆ ಬಂದು ಆತನ ಮುಂದೆ ಅಡ್ಡಬಿದ್ದು, “ಪ್ರಭುವೇ, ನನಗೆ ಸಹಾಯ ಮಾಡು” ಎಂದು ಕೇಳಿದಳು.
26 ಯೇಸು, “ಮಕ್ಕಳು ತಿನ್ನುವ ರೊಟ್ಟಿಯನ್ನು ತೆಗೆದುಕೊಂಡು ನಾಯಿಗಳಿಗೆ ಕೊಡುವುದು ಸರಿಯಲ್ಲ” ಎಂದು ಉತ್ತರಕೊಟ್ಟನು.
27 ಆ ಸ್ತ್ರೀಯು, “ಹೌದು ಪ್ರಭುವೇ, ಆದರೂ ನಾಯಿಗಳು ತಮ್ಮ ಯಜಮಾನರ ಮೇಜಿನಿಂದ ಬೀಳುವ ಆಹಾರದ ತುಂಡುಗಳನ್ನು ತಿನ್ನುತ್ತವೆಯಲ್ಲಾ” ಎಂದಳು.
28 ಆಗ ಯೇಸು, “ಅಮ್ಮಾ, ನಿನ್ನ ನಂಬಿಕೆ ದೊಡ್ಡದು. ನಿನ್ನ ಕೋರಿಕೆಯನ್ನು ನಾನು ಈಡೇರಿಸುತ್ತೇನೆ” ಎಂದನು. ಆ ಕ್ಷಣದಲ್ಲೇ ಆಕೆಯ ಮಗಳು ಗುಣವಾದಳು.
ಯೇಸುವಿನಿಂದ ಅನೇಕರಿಗೆ ಸ್ವಸ್ಥತೆ
29 ಆಗ ಯೇಸು ಆ ಸ್ಥಳವನ್ನು ಬಿಟ್ಟು ಗಲಿಲಾಯ ಸರೋವರದ ದಡಕ್ಕೆ ಹೋಗಿ ಒಂದು ಬೆಟ್ಟದ ಮೇಲೆ ಕುಳಿತುಕೊಂಡನು.
30 ಜನರು ಗುಂಪುಗುಂಪಾಗಿ ಯೇಸುವಿನ ಬಳಿಗೆ ಬಂದರು. ಅವರು ಅನೇಕ ಬಗೆಯ ಕಾಯಿಲೆಯವರನ್ನು ಕರೆದುತಂದು, ಯೇಸುವಿನ ಪಾದಸನ್ನಿಧಿಯಲ್ಲಿ ಬಿಟ್ಟರು. ಅಲ್ಲಿ ಅಂಗವಿಕಲರು, ಕುರುಡರು, ಕುಂಟರು, ಕಿವುಡರು ಮತ್ತು ಇತರ ಅನೇಕ ಜನರಿದ್ದರು. ಆತನು ಇವರನ್ನೆಲ್ಲರನ್ನು ಗುಣಪಡಿಸಿದನು. 31 ಮೂಕರು ಮತ್ತೆ ಮಾತಾಡುವುದನ್ನೂ ಕುಂಟರು ನಡೆದಾಡುವುದನ್ನೂ ಅಂಗವಿಕಲರು ಸ್ವಸ್ಥರಾದದ್ದನ್ನೂ ಕುರುಡರಿಗೆ ಮತ್ತೆ ದೃಷ್ಟಿ ಬಂದದ್ದನ್ನೂ ಕಂಡು ಜನರೆಲ್ಲರೂ ಅತ್ಶಾಶ್ಚರ್ಯಪಟ್ಟು ಇಸ್ರೇಲರ ದೇವರನ್ನು ಕೊಂಡಾಡಿದರು.
Kannada Holy Bible: Easy-to-Read Version. All rights reserved. © 1997 Bible League International