Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 133

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ. ರಚನೆಗಾರ: ದಾವೀದ.

133 ಆಹಾ, ಸಹೋದರರು ಅನ್ಯೋನ್ಯತೆಯಿಂದಿರುವುದು
    ಎಷ್ಟೋ ಒಳ್ಳೆಯದು, ಎಷ್ಟೋ ರಮ್ಯವಾದದ್ದು.
ಅದು ಯಾಜಕನ ತಲೆಯ ಮೇಲೆ ಹಾಕಲ್ಪಟ್ಟು ಆರೋನನ ಗಡ್ಡಕ್ಕೂ
    ಅಲ್ಲಿಂದ ಅವನ ಉಡುಪುಗಳ ಮೇಲೆಯೂ ಇಳಿದುಬರುವ ಪರಿಮಳ ತೈಲದಂತಿರುವುದು;
ಅದು ಹೆರ್ಮೋನ್ ಪರ್ವತದಿಂದ ಹುಟ್ಟಿ ಚೀಯೋನ್ ಪರ್ವತದ ಮೇಲೆ ಬೀಳುವ ದಟ್ಟವಾದ ಮಂಜಿನಂತಿರುವುದು.
    ಯೆಹೋವನು ನಿತ್ಯಜೀವವೆಂಬ ತನ್ನ ಆಶೀರ್ವಾದವನ್ನು ಅನುಗ್ರಹಿಸಿದ್ದು ಚೀಯೋನಿನಲ್ಲಿಯೇ.

ಆದಿಕಾಂಡ 41:14-36

ಕನಸುಗಳ ಅರ್ಥವನ್ನು ತಿಳಿಸಲು ಯೋಸೇಫನನ್ನು ಕರೆಸಿದ್ದು

14 ಆಗ ಫರೋಹನು ಯೋಸೇಫನನ್ನು ಸೆರೆಮನೆಯಿಂದ ಕರೆಸಿದನು. ಯೋಸೇಫನು ಕ್ಷೌರಮಾಡಿಕೊಂಡು ಶುದ್ಧವಾದ ಬಟ್ಟೆಗಳನ್ನು ಹಾಕಿಕೊಂಡು ಹೋಗಿ ಫರೋಹನ ಮುಂದೆ ನಿಂತುಕೊಂಡನು. 15 ಫರೋಹನು ಯೋಸೇಫನಿಗೆ, “ನನಗೆ ಒಂದು ಕನಸಾಯಿತು. ಆದರೆ ಅದರ ಅರ್ಥವನ್ನು ತಿಳಿಸಬಲ್ಲವರು ಇಲ್ಲಿ ಯಾರೂ ಇಲ್ಲ. ನೀನು ಕನಸುಗಳ ಅರ್ಥವನ್ನು ಹೇಳಬಲ್ಲೆ ಎಂಬುದಾಗಿ ನಿನ್ನ ಬಗ್ಗೆ ಕೇಳಿದೆ” ಎಂದು ಹೇಳಿದನು.

16 ಯೋಸೇಫನು, “ಕನಸುಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ನನ್ನಲ್ಲಿಲ್ಲ. ಆ ಶಕ್ತಿಯನ್ನು ಹೊಂದಿರುವವನು ದೇವರೊಬ್ಬನೇ. ಆದರೆ ದೇವರು ಫರೋಹನಿಗೋಸ್ಕರ ಅರ್ಥವನ್ನು ತಿಳಿಸುವನು” ಎಂದು ಹೇಳಿದನು.

17 ಆಗ ಫರೋಹನು ಯೋಸೇಫನಿಗೆ, “ನನ್ನ ಕನಸಿನಲ್ಲಿ, ನಾನು ನೈಲ್ ನದಿಯ ತೀರದಲ್ಲಿ ನಿಂತುಕೊಂಡಿದ್ದೆನು. 18 ಕೊಬ್ಬಿದ ಮತ್ತು ಲಕ್ಷಣವಾಗಿದ್ದ ಏಳು ಹಸುಗಳು ನದಿಯೊಳಗಿಂದ ಬಂದು ಹುಲ್ಲನ್ನು ಮೇಯುತ್ತಿದ್ದವು. 19 ಆಗ ಬಡಕಲಾಗಿದ್ದ ಮತ್ತು ಕುರೂಪವಾಗಿದ್ದ ಏಳು ಹಸುಗಳು ನದಿಯೊಳಗಿಂದ ಬಂದು ನಿಂತುಕೊಂಡವು. ಅಂಥಾ ಬಡಕಲು ಹಸುಗಳನ್ನು ನಾನು ಈಜಿಪ್ಟಿನಲ್ಲಿ ಎಂದೂ ನೋಡಿಲ್ಲ. 20 ಬಡಕಲಾಗಿದ್ದ ಆ ಹಸುಗಳು ಮೊದಲು ಬಂದ ಲಕ್ಷಣವಾದ ಏಳು ಹಸುಗಳನ್ನು ತಿಂದುಬಿಟ್ಟವು. 21 ಅವು ಏಳು ಹಸುಗಳನ್ನು ತಿಂದ ಮೇಲೆಯೂ ತಿಂದಂತೆ ಕಾಣುತ್ತಿರಲಿಲ್ಲ; ಅವು ಮೊದಲಿನಂತೆಯೇ ಬಡಕಲಾಗಿದ್ದವು ಮತ್ತು ಕುರೂಪವಾಗಿದ್ದವು. ಆಗ ನನಗೆ ಎಚ್ಚರವಾಯಿತು.

22 “ನನಗಾದ ಎರಡನೆಯ ಕನಸು ಇಂತಿದೆ: ಒಂದೇ ಗಿಡದಲ್ಲಿ ಪುಷ್ಟಿಯಾದ ಏಳು ತೆನೆಗಳು ಹುಟ್ಟಿದವು. 23 ಬಳಿಕ ಅದೇ ಗಿಡದಲ್ಲಿ ಮೇಲೆ ಬಿಸಿಗಾಳಿಯಿಂದ ಬತ್ತಿಹೋಗಿದ್ದ ಏಳು ತೆನೆಗಳು ಹುಟ್ಟಿದವು. 24 ಬತ್ತಿಹೋಗಿದ್ದ ತೆನೆಗಳು ಪುಷ್ಟಿಯಾದ ಏಳು ತೆನೆಗಳನ್ನು ತಿಂದುಬಿಟ್ಟವು.

“ನಾನು ಈ ಕನಸುಗಳನ್ನು ಮಂತ್ರಗಾರರಿಗೂ ವಿದ್ವಾಂಸರಿಗೂ ತಿಳಿಸಿದೆನು. ಆದರೆ ಅವರಲ್ಲಿ ಯಾರೂ ನನಗೆ ಈ ಕನಸುಗಳ ಅರ್ಥವನ್ನು ವಿವರಿಸಲಾಗಲಿಲ್ಲ. ಅವುಗಳ ಅರ್ಥವೇನು?” ಎಂದು ಕೇಳಿದನು.

ಯೋಸೇಫನಿಂದ ಕನಸುಗಳ ಅರ್ಥವಿವರಣೆ

25 ಆಗ ಯೋಸೇಫನು ಫರೋಹನಿಗೆ, “ಆ ಎರಡು ಕನಸುಗಳ ಅರ್ಥವು ಒಂದೇ. ಮುಂದೆ ನಡೆಯಲಿರುವುದನ್ನು ದೇವರು ತಮಗೆ ತಿಳಿಸಿದ್ದಾನೆ. 26 ಒಳ್ಳೆಯ ಏಳು ಹಸುಗಳೇ ಏಳು ವರ್ಷಗಳು. ಒಳ್ಳೆಯ ಏಳು ತೆನೆಗಳೇ ಏಳು ವರ್ಷಗಳು. ಎರಡು ಕನಸುಗಳೂ ಒಂದೇ ಅರ್ಥವನ್ನು ಹೊಂದಿವೆ. 27 ಬಡಕಲಾದ ಮತ್ತು ಕುರೂಪವಾದ ಏಳು ಹಸುಗಳು ಮತ್ತು ಕೆಟ್ಟುಹೋದ ಕಾಳಿನ ಏಳು ತೆನೆಗಳು, ದೇಶಕ್ಕೆ ಬರುವ ಏಳು ವರ್ಷಗಳ ಬರಗಾಲವನ್ನು ಸೂಚಿಸುತ್ತವೆ. ಈ ಏಳು ವರ್ಷಗಳು ಒಳ್ಳೆಯ ವರ್ಷಗಳ ನಂತರ ಬರುತ್ತವೆ. 28 ಮುಂದೆ ನಡೆಯಲಿರುವುದನ್ನು ದೇವರು ನಿಮಗೆ ತಿಳಿಸಿದ್ದಾನೆ. ನಾನು ಹೇಳಿದಂತೆಯೇ ಸಂಭವಿಸುವುದು. 29 ನಿಮಗೆ ಏಳು ವರ್ಷಗಳ ಕಾಲ ಒಳ್ಳೆಯ ಬೆಳೆಯಾಗುವುದು; ಈಜಿಪ್ಟ್ ದೇಶದಲ್ಲೆಲ್ಲಾ ಊಟಕ್ಕೆ ಬೇಕಾದಷ್ಟು ಆಹಾರವಿರುವುದು. 30 ಆದರೆ ಆ ಏಳು ವರ್ಷಗಳಾದ ಮೇಲೆ ದೇಶದಲ್ಲೆಲ್ಲಾ ಏಳು ವರ್ಷಗಳವರೆಗೆ ಬರಗಾಲವಿರುವುದು. ಆಗ ಈಜಿಪ್ಟಿನ ಜನರು ತಾವು ಮೊದಲು ಬೆಳೆದ ಆಹಾರವನ್ನೆಲ್ಲಾ ಮರೆತುಬಿಡುವರು. ಈ ಕ್ಷಾಮವು ದೇಶವನ್ನು ನಾಶಮಾಡುವುದು. 31 ಮೊದಲಿನ ಸಮೃದ್ಧಿಯ ಗುರುತೇ ಜನರಿಗೆ ಕಾಣಸಿಗದು.

32 “ಫರೋಹನೇ, ಒಂದೇ ವಿಷಯದ ಮೇಲೆ ಎರಡು ಕನಸುಗಳಾಗಿರುವುದರಿಂದ ದೇವರು ಇದನ್ನು ನಿಶ್ಚಯವಾಗಿಯೂ ಬೇಗನೆ ಬರಮಾಡಲಿದ್ದಾನೆ. 33 ಆದ್ದರಿಂದ ತಾವು ತುಂಬ ಬುದ್ಧಿವಂತನೂ ವಿವೇಕಿಯೂ ಆಗಿರುವ ಒಬ್ಬನನ್ನು ಆರಿಸಿಕೊಂಡು ಅವನನ್ನು ಈಜಿಪ್ಟ್ ದೇಶದ ಮೇಲೆ ಆಡಳಿತಾಧಿಕಾರಿಯನ್ನಾಗಿ ನೇಮಿಸಬೇಕು. 34 ಅಲ್ಲದೆ ಜನರಿಂದ ಆಹಾರವನ್ನು ಶೇಖರಿಸುವುದಕ್ಕಾಗಿ ತಾವು ಸಂಗ್ರಹಕರನ್ನು ನೇಮಿಸಿ ಒಳ್ಳೆಯ ಏಳು ವರ್ಷಗಳಲ್ಲಿ ಪ್ರತಿಯೊಬ್ಬ ಬೆಳೆಗಾರನಿಂದಲೂ ಬೆಳೆಯ ಐದನೆ ಒಂದು ಭಾಗವನ್ನು ಕಂದಾಯ ರೂಪದಲ್ಲಿ ವಸೂಲಿ ಮಾಡಬೇಕು. 35 ಸಂಗ್ರಹಕಾರರ ಮೂಲಕ ಆಹಾರಪದಾರ್ಥಗಳನ್ನೂ ದವಸಧಾನ್ಯಗಳನ್ನೂ ಶೇಖರಿಸಿ ನಿಮ್ಮ ಉಗ್ರಾಣಗಳಲ್ಲಿಟ್ಟು ನೋಡಿಕೊಳ್ಳಬೇಕು. 36 ಉಗ್ರಾಣಗಳಲ್ಲಿ ಸಾಕಷ್ಟು ಆಹಾರವಿರುವುದರಿಂದ ಈಜಿಪ್ಟಿನವರು ಬರಗಾಲದ ಏಳು ವರ್ಷಗಳಲ್ಲಿ ಆಹಾರವಿಲ್ಲದೆ ಸಾಯುವುದಿಲ್ಲ” ಎಂದು ಹೇಳಿದನು.

ಪ್ರಕಟನೆ 15:1-4

ದೇವದೂತರಿಂದ ಕೊನೆಯ ಉಪದ್ರವಗಳು

15 ನಂತರ ಪರಲೋಕದಲ್ಲಿ ಮತ್ತೊಂದು ಅದ್ಭುತವನ್ನು ನಾನು ನೋಡಿದೆನು. ಅದು ಮಹಾ ಆಶ್ಚರ್ಯಕರವಾಗಿತ್ತು. ಏಳು ಉಪದ್ರವಗಳನ್ನು ತರುವ ಏಳು ಮಂದಿ ದೇವದೂತರು ಅಲ್ಲಿದ್ದರು. ದೇವರ ಕೋಪವು ಈ ಉಪದ್ರವಗಳೊಂದಿಗೆ ಮುಗಿಯುತ್ತಿದ್ದುದರಿಂದ ಇವು ಕಡೆಯ ಉಪದ್ರವಗಳಾಗಿದ್ದವು.

ಬೆಂಕಿಯನ್ನು ಬೆರಸಿದ ಗಾಜಿನ ಸಮುದ್ರದಂತೆ ಕಾಣಿಸುವ ಏನೋ ಒಂದು ನನಗೆ ಕಾಣಿಸಿತು. ಮೃಗವನ್ನು, ಅದರ ವಿಗ್ರಹವನ್ನು ಮತ್ತು ಅದರ ಹೆಸರಿನ ಸಂಖ್ಯೆಯನ್ನು ಸೋಲಿಸಿ ಜಯಗಳಿಸಿದವರೆಲ್ಲರೂ ಸಮುದ್ರ ತೀರದಲ್ಲಿ ನಿಂತಿದ್ದರು. ದೇವರು ಅವರಿಗೆ ನೀಡಿದ ತಂತಿವಾದ್ಯಗಳು ಅವರಲ್ಲಿದ್ದವು. ಅವರು ದೇವರ ಸೇವಕನಾದ ಮೋಶೆಯ ಗೀತೆಯನ್ನು ಮತ್ತು ಕುರಿಮರಿಯಾದಾತನ ಗೀತೆಯನ್ನು ಹಾಡಿದರು:

“ಪ್ರಭುವೇ, ಸರ್ವಶಕ್ತನಾದ ದೇವರೇ,
    ನೀನು ಮಹತ್ತಾದ ಕಾರ್ಯಗಳನ್ನೂ ಆಶ್ಚರ್ಯಕರವಾದ ಕಾರ್ಯಗಳನ್ನೂ ಮಾಡುವೆ.
ಸರ್ವಜನಾಂಗಗಳ ರಾಜನೇ,
    ನಿನ್ನ ಮಾರ್ಗಗಳು ನ್ಯಾಯವೂ ಸತ್ಯವೂ ಆಗಿವೆ.
ಪ್ರಭುವೇ, ಜನರೆಲ್ಲರೂ ನಿನಗೆ ಭಯಗೊಳ್ಳುತ್ತಾರೆ;
ಜನರೆಲ್ಲರೂ ನಿನ್ನ ಹೆಸರನ್ನು ಸ್ತುತಿಸುತ್ತಾರೆ.
    ನೀನು ಮಾತ್ರ ಪರಿಶುದ್ಧನಾದವನು.
ನೀನು ಯೋಗ್ಯವಾದ ಕಾರ್ಯಗಳನ್ನು ಮಾಡುತ್ತೀ ಎಂಬುದು ಸ್ಪಷ್ಟವಾಗಿರುವುದರಿಂದ
    ಜನರೆಲ್ಲರೂ ನಿನ್ನ ಸನ್ನಿಧಿಗೆ ಬಂದು ನಿನ್ನನ್ನು ಆರಾಧಿಸುತ್ತಾರೆ.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International