Revised Common Lectionary (Semicontinuous)
146 ಯೆಹೋವನಿಗೆ ಸ್ತೋತ್ರವಾಗಲಿ!
ನನ್ನ ಮನವೇ, ಯೆಹೋವನನ್ನು ಸ್ತುತಿಸು!
2 ನನ್ನ ಜೀವಮಾನವೆಲ್ಲಾ ಯೆಹೋವನನ್ನು ಸ್ತುತಿಸುವೆನು;
ಆತನನ್ನು ಸಂಕೀರ್ತಿಸುವೆನು.
3 ಸಹಾಯಕ್ಕಾಗಿ ನಿಮ್ಮ ನಾಯಕರುಗಳನ್ನು ಅವಲಂಬಿಸಿಕೊಳ್ಳಬೇಡಿ.
ಮನುಷ್ಯರಲ್ಲಿ ಭರವಸವಿಡಬೇಡಿ, ಅವರು ನಿಮ್ಮನ್ನು ರಕ್ಷಿಸಲಾರರು.
4 ಮನುಷ್ಯರು ಸತ್ತು ಸಮಾಧಿಗೆ ಸೇರುವರು;
ಆಗ ನಿಮಗೆ ಸಹಾಯಮಾಡಬೇಕೆಂಬ ಅವರ ಆಲೋಚನೆಗಳೆಲ್ಲಾ ಅಳಿದುಹೋಗುತ್ತವೆ.
5 ಯಾರಿಗೆ ದೇವರು ಸಹಾಯಕನೋ,
ಯಾರು ತಮ್ಮ ದೇವರಾದ ಯೆಹೋವನಲ್ಲಿ ಭರವಸವಿಟ್ಟಿದ್ದಾರೋ, ಅವರೇ ಭಾಗ್ಯವಂತರು.
6 ಯೆಹೋವನು ಆಕಾಶವನ್ನೂ ಭೂಮಿಯನ್ನೂ
ಸಮುದ್ರವನ್ನೂ ಅದರಲ್ಲಿರುವ ಪ್ರತಿಯೊಂದನ್ನೂ ಸೃಷ್ಟಿಸಿದನು.
ಆತನು ಅವುಗಳನ್ನು ಶಾಶ್ವತವಾಗಿ ಸಂರಕ್ಷಿಸುವನು.
7 ಹಿಂಸೆಗೆ ಗುರಿಯಾಗಿರುವವರಿಗೆ ನ್ಯಾಯವನ್ನೂ;
ಹಸಿದವರಿಗೆ ಆಹಾರವನ್ನೂ ಕೊಡುವವನು ಆತನೇ.
ಯೆಹೋವನು ಸೆರೆಯಲ್ಲಿರುವವರನ್ನು ಬಿಡಿಸುವನು.
8 ಯೆಹೋವನು ಕುರುಡರಿಗೆ ದೃಷ್ಟಿಕೊಡುವನು.
ಯೆಹೋವನು ಕುಗ್ಗಿಹೋದವರನ್ನು ಉದ್ಧರಿಸುವನು.
ಯೆಹೋವನು ನೀತಿವಂತರನ್ನು ಪ್ರೀತಿಸುವನು.
9 ಯೆಹೋವನು ನಮ್ಮ ದೇಶದಲ್ಲಿ ವಾಸವಾಗಿರುವ ವಿದೇಶಿಯರನ್ನು ಕಾಪಾಡುತ್ತಾನೆ.
ಆತನು ವಿಧವೆಯರನ್ನೂ ಅನಾಥರನ್ನೂ ಪರಿಪಾಲಿಸುತ್ತಾನೆ.
ಆದರೆ ಆತನು ದುಷ್ಟರ ಆಲೋಚನೆಗಳನ್ನು ನಾಶಮಾಡುವನು.
10 ಯೆಹೋವನು ಸದಾಕಾಲ ಆಳುವನು!
ಚೀಯೋನೇ, ನಿನ್ನ ದೇವರು ಶಾಶ್ವತವಾಗಿ ಆಳುವನು!
ಯೆಹೋವನಿಗೆ ಸ್ತೋತ್ರವಾಗಲಿ!
ಗಿಬ್ಯೋನ್ಯರು ಯೆಹೋಶುವನಿಗೆ ಮಾಡಿದ ಮೋಸ
9 ಜೋರ್ಡನ್ ನದಿಯ ಪಶ್ಚಿಮದ ಎಲ್ಲ ಅರಸರು ಈ ವಿಷಯಗಳ ಬಗ್ಗೆ ಕೇಳಿದರು. ಇವರು ಹಿತ್ತಿಯರ, ಅಮೋರಿಯರ, ಕಾನಾನ್ಯರ, ಪೆರಿಜ್ಜೀಯರ, ಹಿವ್ವಿಯರ, ಯೆಬೂಸಿಯರ ರಾಜರಾಗಿದ್ದರು. ಅವರು ಬೆಟ್ಟಪ್ರದೇಶಗಳಲ್ಲಿ ಮತ್ತು ಸಮತಲ ಪ್ರದೇಶಗಳಲ್ಲಿ ವಾಸವಾಗಿದ್ದರು. ಅವರು ಭೂಮಧ್ಯಸಾಗರದ ತೀರ ಪ್ರದೇಶದಲ್ಲಿ, ಲೆಬನೋನಿನವರೆಗೆ ಸಹ ವಾಸವಾಗಿದ್ದರು. 2 ಈ ಎಲ್ಲ ಅರಸರು ಒಂದು ಕಡೆ ಸೇರಿದರು. ಅವರು ಯೆಹೋಶುವನ ಮತ್ತು ಇಸ್ರೇಲರ ವಿರುದ್ಧ ಯುದ್ಧ ಮಾಡುವ ಯೋಜನೆಗಳನ್ನು ಹಾಕಿಕೊಂಡರು.
3 ಯೆಹೋಶುವನು “ಜೆರಿಕೊ” ಮತ್ತು “ಆಯಿ” ನಗರಗಳನ್ನು ಸ್ವಾಧೀನಪಡಿಸಿಕೊಂಡ ಬಗೆಯನ್ನು ಗಿಬ್ಯೋನ್ ನಗರದ ಜನರು ಕೇಳಿದ್ದರು. 4 ಇಸ್ರೇಲರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಒಂದು ಉಪಾಯಮಾಡಿದರು. ಅವರು ಹರುಕು-ಮುರುಕಾದ ಹಳೆಯ ದ್ರಾಕ್ಷಾರಸದ ಬುದ್ದಲಿಗಳನ್ನು ತಮ್ಮ ಕತ್ತೆಗಳ ಬೆನ್ನ ಮೇಲೆ ಹೇರಿಸಿದರು; ತಾವು ಬಹುದೂರ ಪ್ರಯಾಣ ಮಾಡಿ ಬಂದಿರುವುದಾಗಿ ತೋರಿಸಲು ತಮ್ಮ ಕತ್ತೆಗಳ ಮೇಲೆ ಹಳೆಯ ಗೋಣಿಚೀಲಗಳನ್ನು ಹಾಕಿದರು. 5 ಅವರು ಹಳೆಯ ಪಾದರಕ್ಷೆಗಳನ್ನು ಮೆಟ್ಟಿಕೊಂಡರು; ಹಳೆಯ ಬಟ್ಟೆಗಳನ್ನು ಧರಿಸಿಕೊಂಡರು; ಒಣಗಿದ ಮತ್ತು ಕೆಟ್ಟುಹೋದ ರೊಟ್ಟಿಗಳನ್ನು ಕಟ್ಟಿಕೊಂಡರು. ಹೀಗೆ ಅವರು ಬಹುದೂರ ಪ್ರಯಾಣಮಾಡಿ ಬಂದವರಂತೆ ತೋರಿಸಿಕೊಂಡರು. 6 ಅವರು ಇಸ್ರೇಲರ ಪಾಳೆಯಕ್ಕೆ ಹೋದರು. ಈ ಪಾಳೆಯವು ಗಿಲ್ಗಾಲಿನ ಹತ್ತಿರ ಇತ್ತು.
ಅವರು ಯೆಹೋಶುವನ ಬಳಿಗೆ ಹೋಗಿ ಅವನಿಗೆ, “ನಾವು ಬಹುದೂರ ದೇಶದಿಂದ ಪ್ರಯಾಣ ಮಾಡಿ ಬಂದಿದ್ದೇವೆ. ನಾವು ನಿಮ್ಮ ಜೊತೆ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳಲು ಇಚ್ಛಿಸುತ್ತೇವೆ” ಎಂದು ಹೇಳಿದರು.
7 ಹಿವ್ವಿಯರಾದ ಅವರಿಗೆ ಇಸ್ರೇಲಿನ ಜನರು, “ಒಂದುವೇಳೆ ನೀವು ನಮ್ಮನ್ನು ಮೋಸಗೊಳಿಸಲು ಪ್ರಯತ್ನಿಸುತ್ತಿರಬಹುದು. ಒಂದುವೇಳೆ ನೀವು ನಮ್ಮ ಹತ್ತಿರದಲ್ಲಿಯೇ ವಾಸಮಾಡುತ್ತಿರಬಹುದು; ನೀವು ಎಲ್ಲಿಯವರು ಎಂಬುದು ನಮಗೆ ಗೊತ್ತಾಗುವವರೆಗೆ ನಾವು ನಿಮ್ಮ ಸಂಗಡ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ” ಎಂದು ಉತ್ತರಕೊಟ್ಟರು.
8 ಹಿವ್ವಿಯರು ಯೆಹೋಶುವನಿಗೆ, “ನಾವು ನಿಮ್ಮ ಸೇವಕರು” ಎಂದು ಹೇಳಿದರು.
ಆದರೆ ಯೆಹೋಶುವನು, “ನೀವು ಯಾರು? ಎಲ್ಲಿಂದ ಬಂದಿರುವಿರಿ?” ಎಂದು ಪ್ರಶ್ನಿಸಿದನು.
9 ಅದಕ್ಕೆ ಅವರು, “ನಿನ್ನ ಸೇವಕರಾದ ನಾವು ಬಹುದೂರ ದೇಶದಿಂದ ಬಂದಿದ್ದೇವೆ. ನಾವು ಬಂದದ್ದಕ್ಕೆ ಕಾರಣವೇನೆಂದರೆ ನಾವು ನಿಮ್ಮ ದೇವರಾದ ಯೆಹೋವನ ಅದ್ಭುತಶಕ್ತಿಯ ಬಗ್ಗೆ ಕೇಳಿದೆವು. ಆತನು ಮಾಡಿದ ಅದ್ಭುತಕಾರ್ಯಗಳ ಬಗ್ಗೆ ಕೇಳಿದೆವು. ಆತನು ಈಜಿಪ್ಟಿನಲ್ಲಿ ಮಾಡಿದ ಪ್ರತಿಯೊಂದು ಅದ್ಭುತದ ಬಗ್ಗೆ ಕೇಳಿದೆವು. 10 ಆತನು ಜೋರ್ಡನ್ ನದಿಯ ಪೂರ್ವದಲ್ಲಿರುವ ಅಮೋರಿಯರ ಇಬ್ಬರು ಅರಸರನ್ನು ಸೋಲಿಸಿದ್ದನ್ನು ನಾವು ಕೇಳಿದೆವು. ಹೆಷ್ಬೋನಿನ ಅರಸನಾದ ಸೀಹೋನ್ ಮತ್ತು ಅಷ್ಟರೋತಿನಲ್ಲಿ ವಾಸವಾಗಿದ್ದ ಬಾಷಾನಿನ ಅರಸನಾದ ಓಗ್ ಇವರೇ ಆ ಅರಸರು. 11 ಆದ್ದರಿಂದ ನಮ್ಮ ಹಿರಿಯರು ಮತ್ತು ನಮ್ಮ ಜನರು ನಮಗೆ, ‘ನಿಮ್ಮ ಪ್ರಯಾಣಕ್ಕೆ ಸಾಕಷ್ಟು ಆಹಾರವನ್ನು ತೆಗೆದುಕೊಂಡು ಹೋಗಿ ಇಸ್ರೇಲರನ್ನು ಭೇಟಿಮಾಡಿ, ನಾವು ನಿಮ್ಮ ಸೇವಕರು. ನಮ್ಮ ಜೊತೆ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳಿರಿ ಎಂದು ಅವರಿಗೆ ತಿಳಿಸಿ’ ಎಂಬುದಾಗಿ ಹೇಳಿ ನಮ್ಮನ್ನು ಕಳುಹಿಸಿದ್ದಾರೆ.
12 “ನಮ್ಮ ರೊಟ್ಟಿಯನ್ನು ನೋಡಿರಿ, ನಾವು ಮನೆಯನ್ನು ಬಿಟ್ಟಾಗ ಬಿಸಿಯಾಗಿತ್ತು ಮತ್ತು ಮೃದುವಾಗಿತ್ತು. ಆದರೆ ಈಗ ಅವುಗಳನ್ನು ನೋಡಿರಿ, ಒಣಗಿಹೋಗಿವೆ. 13 ನಮ್ಮ ದ್ರಾಕ್ಷಾರಸದ ಬುದ್ದಲಿಗಳನ್ನು ನೋಡಿರಿ, ನಾವು ಮನೆಯನ್ನು ಬಿಟ್ಟಾಗ ಅವು ಹೊಸದಾಗಿದ್ದವು ಮತ್ತು ದ್ರಾಕ್ಷಾರಸದಿಂದ ತುಂಬಿದ್ದವು. ಆದರೆ ಈಗ ಹಳೆಯದಾಗಿ ಹರಿದುಹೋಗಿವೆ. ನಮ್ಮ ಬಟ್ಟೆಗಳನ್ನು ಮತ್ತು ಪಾದರಕ್ಷೆಗಳನ್ನು ನೋಡಿರಿ, ಈಗ ಅವು ದೂರ ಪ್ರಯಾಣದಿಂದ ಹಾಳಾಗಿಹೋಗಿವೆ” ಎಂದು ಹೇಳಿದರು.
14 ಅವರು ಹೇಳುತ್ತಿರುವುದು ನಿಜವೇ ಎಂದು ತಿಳಿದುಕೊಳ್ಳಲು ಇಸ್ರೇಲರು ಅವರ ರೊಟ್ಟಿಯನ್ನು ತಿಂದು ನೋಡಿದರು; ಆದರೆ ತಾವು ಏನು ಮಾಡಬೇಕೆಂದು ಯೆಹೋವನನ್ನು ಕೇಳಲಿಲ್ಲ. 15 ಯೆಹೋಶುವನು ಅವರೊಂದಿಗೆ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳಲು ಒಪ್ಪಿಕೊಂಡನು. ಅವರು ಜೀವಸಹಿತ ಇರಲು ಅವಕಾಶ ಮಾಡಿಕೊಟ್ಟನು. ಯೆಹೋಶುವನ ಈ ಒಪ್ಪಂದಕ್ಕೆ ಇಸ್ರೇಲಿನ ಜನನಾಯಕರು ಒಪ್ಪಿಕೊಂಡರು.
16 ಮೂರು ದಿನಗಳ ತರುವಾಯ ಆ ಜನರು ತಮ್ಮ ಪಾಳೆಯದ ಸಮೀಪ ವಾಸಿಸುವವರು ಎಂಬುದು ಇಸ್ರೇಲರಿಗೆ ತಿಳಿದುಬಂತು. 17 ಆದ್ದರಿಂದ ಇಸ್ರೇಲರು ಅವರಿದ್ದ ಸ್ಥಳಕ್ಕೆ ಹೋದರು. ಮೂರನೆಯ ದಿನ ಇಸ್ರೇಲರು ಗಿಬ್ಯೋನ್, ಕೆಫೀರಾ, ಬೇರೋತ್ ಮತ್ತು ಕಿರ್ಯತ್ಯಾರೀಮ್ ಪಟ್ಟಣಗಳಿಗೆ ಬಂದರು. 18 ಆದರೆ ಇಸ್ರೇಲರ ಸೈನ್ಯವು ಆ ಪಟ್ಟಣದ ಜನರೊಂದಿಗೆ ಯುದ್ಧಮಾಡಲಿಲ್ಲ. ಅವರು ಆ ಜನರೊಂದಿಗೆ ಶಾಂತಿ ಒಪ್ಪಂದ ಮಾಡಿಕೊಂಡಿದ್ದರು. ಅವರು ಇಸ್ರೇಲಿನ ದೇವರಾದ ಯೆಹೋವನ ಹೆಸರಿನಲ್ಲಿ ಪ್ರಮಾಣ ಮಾಡಿದ್ದರು.
ಒಪ್ಪಂದವನ್ನು ಮಾಡಿಕೊಂಡ ಜನನಾಯಕರ ಬಗ್ಗೆ ಜನರೆಲ್ಲರೂ ಅಸಮಾಧಾನ ವ್ಯಕ್ತಪಡಿಸಿದರು. 19 ಆದರೆ ಜನನಾಯಕರು, “ನಾವು ಮಾತುಕೊಟ್ಟಿದ್ದೇವೆ; ಇಸ್ರೇಲಿನ ದೇವರಾದ ಯೆಹೋವನ ಮುಂದೆ ಪ್ರಮಾಣ ಮಾಡಿದ್ದೇವೆ; ಈಗ ನಾವು ಅವರ ವಿರುದ್ಧ ಯುದ್ಧ ಮಾಡಲು ಸಾಧ್ಯವಿಲ್ಲ. 20 ನಾವು ಅವರನ್ನು ಜೀವಂತವಾಗಿ ಉಳಿಸಲೇಬೇಕು. ನಾವು ಅವರಿಗೆ ಕೊಟ್ಟ ಮಾತನ್ನು ಮೀರಿದರೆ ದೇವರ ಕೋಪಕ್ಕೆ ಗುರಿಯಾಗುತ್ತೇವೆ. 21 ಆದ್ದರಿಂದ ಅವರು ಜೀವಂತವಾಗಿ ಉಳಿಯಲಿ. ಆದರೆ ಅವರು ನಮ್ಮ ಸೇವಕರಾಗಲಿ. ಅವರು ನಮಗಾಗಿ ಸೌಧೆಯನ್ನು ಕಡಿಯಲಿ ಮತ್ತು ನಮ್ಮೆಲ್ಲರಿಗಾಗಿ ನೀರು ತಂದುಹಾಕಲಿ” ಎಂದು ಉತ್ತರಿಸಿದರು. ಹೀಗೆ ಜನನಾಯಕರು ಆ ಜನರೊಂದಿಗೆ ಮಾಡಿಕೊಂಡ ಶಾಂತಿ ಒಪ್ಪಂದವನ್ನು ಮುರಿಯಲಿಲ್ಲ.
22 ಯೆಹೋಶುವನು ಗಿಬ್ಯೋನಿನ ಜನರನ್ನು ಕರೆದು, “ನೀವು ನಮಗೆ ಸುಳ್ಳು ಹೇಳಿದ್ದೇಕೆ? ನಿಮ್ಮ ನಾಡು ನಮ್ಮ ಪಾಳೆಯದ ಹತ್ತಿರವೇ ಇತ್ತು. ಆದರೆ ನೀವು ನಿಮ್ಮನ್ನು ದೂರದೇಶದವರು ಎಂದು ಹೇಳಿಕೊಂಡಿರಿ. 23 ಈಗ ನೀವು ಶಾಪಕ್ಕೆ ಗುರಿಯಾಗಿದ್ದೀರಿ. ದೇವರ ಮಂದಿರಕ್ಕಾಗಿ ಸೌಧೆಯನ್ನು ಕಡಿಯುವುದೂ ನೀರನ್ನು ಹೊರುವುದೂ ನಿಮಗೆಂದಿಗೂ ತಪ್ಪಿದ್ದಿಲ್ಲ” ಎಂದು ಹೇಳಿದನು.
24 ಗಿಬ್ಯೋನ್ಯರು, “ನೀವು ನಮ್ಮನ್ನು ಕೊಲ್ಲಬಹುದೆಂಬ ಭಯದಿಂದ ನಾವು ನಿಮಗೆ ಸುಳ್ಳು ಹೇಳಿದೆವು; ದೇವರು ತನ್ನ ಸೇವಕನಾದ ಮೋಶೆಗೆ ಈ ಎಲ್ಲ ಭೂಪ್ರದೇಶವನ್ನು ನಿಮಗೆ ಕೊಡಬೇಕೆಂದು ಆಜ್ಞಾಪಿಸಿರುವುದನ್ನೂ ಈ ಪ್ರದೇಶದ ಎಲ್ಲ ಜನರನ್ನು ಕೊಂದುಬಿಡಬೇಕೆಂದು ನಿಮಗೆ ಹೇಳಿರುವನೆಂದೂ ನಾವು ಕೇಳಿದ್ದೆವು. ಆದ್ದರಿಂದ ನಾವು ನಿಮಗೆ ಸುಳ್ಳು ಹೇಳಿದೆವು. 25 ನಾವು ಈಗ ನಿಮ್ಮ ಸೇವಕರು. ನಿಮಗೆ ಸರಿ ಎನಿಸಿದ್ದನ್ನು ನೀವು ಮಾಡಬಹುದು” ಎಂದು ಉತ್ತರಿಸಿದರು.
26 ಹೀಗೆ ಗಿಬ್ಯೋನಿನ ಜನರು ಗುಲಾಮರಾದರು. ಆದರೆ ಯೆಹೋಶುವನು ಅವರನ್ನು ಜೀವಂತವಾಗಿ ಉಳಿಸಿದನು. ಇಸ್ರೇಲರು ಅವರನ್ನು ಕೊಲ್ಲದಂತೆ ನೋಡಿಕೊಂಡರು. 27 ಯೆಹೋಶುವನು ಗಿಬ್ಯೋನಿನ ಜನರನ್ನು ಇಸ್ರೇಲರ ಸೇವಕರನ್ನಾಗಿ ಮಾಡಿಕೊಂಡನು. ತನ್ನ ನಿವಾಸಕ್ಕಾಗಿ ಯೆಹೋವನು ಆರಿಸಿಕೊಳ್ಳುವ ಸ್ಥಳಗಳಲ್ಲಿ ಅವರು ಇಸ್ರೇಲರಿಗಾಗಿಯೂ ಯೆಹೋವನ ಯಜ್ಞವೇದಿಕೆಗಾಗಿಯೂ ಮರವನ್ನು ಕಡಿಯುತ್ತಿದ್ದರು ಮತ್ತು ನೀರನ್ನು ಹೊರುತ್ತಿದ್ದರು. ಆ ಜನರು ಇಂದಿಗೂ ಗುಲಾಮರಾಗಿಯೇ ಇದ್ದಾರೆ.
2 ಕೆಲವರು ಒಬ್ಬ ಪಾರ್ಶ್ವವಾಯು ರೋಗಿಯನ್ನು ಯೇಸುವಿನ ಬಳಿಗೆ ತಂದರು. ಅವನು ತನ್ನ ಹಾಸಿಗೆಯ ಮೇಲೆ ಮಲಗಿದ್ದನು. ಯೇಸು ಈ ಜನರಲ್ಲಿದ್ದ ದೊಡ್ಡ ನಂಬಿಕೆಯನ್ನು ಕಂಡು ಪಾರ್ಶ್ವವಾಯು ರೋಗಿಗೆ, “ಯುವಕನೇ, ಸಂತೋಷಪಡು. ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು.
3 ಅಲ್ಲಿದ್ದ ಧರ್ಮೋಪದೇಶಕರು ಇದನ್ನು ಕೇಳಿ, “ಇದು ದೇವದೂಷಣೆ” ಎಂದು ತಮ್ಮೊಳಗೆ ಅಂದುಕೊಂಡರು.
4 ಅವರು ಹೀಗೆ ಆಲೋಚಿಸುತ್ತಿರುವುದು ಯೇಸುವಿಗೆ ತಿಳಿದಿತ್ತು. ಆತನು ಅವರಿಗೆ, “ನೀವು ಏಕೆ ದುರಾಲೋಚನೆ ಮಾಡುತ್ತಿದ್ದೀರಿ? 5 ಯಾವುದು ಸುಲಭ? ಈ ಪಾರ್ಶ್ವವಾಯು ರೋಗಿಗೆ, ‘ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ’ ಎಂದು ಹೇಳುವುದೇ ಅಥವಾ ‘ಮೇಲಕ್ಕೆದ್ದು ನಡೆ’ ಎಂದು ಹೇಳುವುದೇ? 6 ಆದರೆ ಮನುಷ್ಯಕುಮಾರನಿಗೆ ಪಾಪಗಳನ್ನು ಕ್ಷಮಿಸಲು ಭೂಲೋಕದಲ್ಲಿ ಅಧಿಕಾರವಿದೆ ಎಂಬುದನ್ನು ನಾನು ನಿಮಗೆ ನಿರೂಪಿಸುತ್ತೇನೆ” ಎಂದನು. ನಂತರ ಯೇಸು ಪಾರ್ಶ್ವವಾಯು ರೋಗಿಗೆ, “ಎದ್ದು, ನಿನ್ನ ಹಾಸಿಗೆಯನ್ನು ತೆಗೆದುಕೊಂಡು ಮನೆಗೆ ಹೋಗು” ಎಂದನು.
7 ಆಗ ಅವನು ಎದ್ದು ಮನೆಗೆ ಹೋದನು. 8 ಜನರು ಇದನ್ನು ನೋಡಿ ಆಶ್ಚರ್ಯಚಕಿತರಾದರು. ಮನುಷ್ಯರಿಗೆ ಇಂಥ ಅಧಿಕಾರವನ್ನು ಕೊಟ್ಟಿದ್ದಕ್ಕಾಗಿ ಜನರು ದೇವರನ್ನು ಕೊಂಡಾಡಿದರು.
Kannada Holy Bible: Easy-to-Read Version. All rights reserved. © 1997 Bible League International