Revised Common Lectionary (Semicontinuous)
10 “ಮಳೆಯೂ ಹಿಮವೂ ಆಕಾಶದಿಂದ ಬೀಳುವವು.
ಅವು ನೆಲವನ್ನು ತೇವಮಾಡದೆ ಆಕಾಶಕ್ಕೆ ಹಿಂತಿರುಗುವುದಿಲ್ಲ.
ಆಗ ನೆಲವು ಬೀಜವನ್ನು ತೋಯಿಸಿ ಸಸಿ ಚಿಗುರುವಂತೆ ಮಾಡುವದು.
ಆ ಸಸಿಗಳು ವ್ಯವಸಾಯಗಾರನಿಗೆ ಧಾನ್ಯವನ್ನು ಫಲಿಸುತ್ತವೆ.
ಜನರು ಆ ಧಾನ್ಯದಿಂದ ರೊಟ್ಟಿಗಳನ್ನು ಮಾಡುವರು.
11 ಅದೇ ಪ್ರಕಾರ ನನ್ನ ಬಾಯಿಂದ ಹೊರಟ ಮಾತುಗಳು
ಯೋಚಿಸಿದ ಕಾರ್ಯಗಳನ್ನು ಮಾಡದೆ ಹಿಂತಿರುಗುವುದಿಲ್ಲ.
ನನ್ನ ಮಾತುಗಳು ನನ್ನ ಆಲೋಚನೆಗೆ ಸರಿಯಾಗಿ ಕಾರ್ಯ ಮಾಡುವವು.
ನನ್ನ ಮಾತುಗಳು ತಮಗೆ ನೇಮಕವಾದ ಆ ಕಾರ್ಯಗಳನ್ನು ಮಾಡಿಮುಗಿಸುವವು.
12 “ಆದ್ದರಿಂದ ನೀವು ಸಂತೋಷದಿಂದ ಹೊರಡುವಿರಿ
ಮತ್ತು ಸಮಾಧಾನದಿಂದ ಮೆರವಣಿಗೆಯಾಗಿ ಬರುವಿರಿ.
ಪರ್ವತಗಳೂ ಬೆಟ್ಟಗಳೂ ಸಂತೋಷದಿಂದ ನಿಮ್ಮ ಮುಂದೆ ಕುಣಿದಾಡುವವು.
ಭೂಮಿಯ ಮೇಲಿರುವ ಮರಗಳೆಲ್ಲಾ ಚಪ್ಪಾಳೆ ತಟ್ಟುವವು.
13 ಪೊದೆಗಳು ಇದ್ದ ಸ್ಥಳಗಳಲ್ಲಿ ಎತ್ತರವಾದ ದೇವದಾರು ಮರಗಳು ಬೆಳೆಯುವವು.
ಹಣಜಿಯಿರುವ ಸ್ಥಳಗಳಲ್ಲಿ ಸುಗಂಧ ಮರಗಳು ಬೆಳೆಯುವವು.
ಇವು ಯೆಹೋವನಾಮವನ್ನು ಪ್ರಸಿದ್ಧಿಪಡಿಸುವವು.
ಯೆಹೋವನೇ ಸರ್ವಶಕ್ತನೆಂದು ಇವು ತೋರಿಸುವವು.
ಈ ಸಾಕ್ಷಿಯು ಎಂದಿಗೂ ನಾಶವಾಗುವದಿಲ್ಲ.”
ಸಬ್ಬತ್ ದಿನದ ಸ್ತುತಿಗೀತೆ.
92 ಯೆಹೋವನೇ, ನಿನ್ನನ್ನು ಸ್ತುತಿಸುವುದೂ
ಮಹೋನ್ನತನಾದ ದೇವರೇ, ನಿನ್ನ ಹೆಸರನ್ನು ಕೊಂಡಾಡುವುದೂ ಯುಕ್ತವಾಗಿದೆ.
2-3 ಹತ್ತು ತಂತಿವಾದ್ಯಗಳನ್ನೂ ಹಾರ್ಪ್ ಮತ್ತು ಲೈರ್ ವಾದ್ಯಗಳನ್ನೂ ನುಡಿಸುತ್ತಾ
ನಿನ್ನ ಪ್ರೀತಿಯ ಕುರಿತು ಮುಂಜಾನೆಯಲ್ಲಿಯೂ
ನಿನ್ನ ನಂಬಿಗಸ್ತಿಕೆಯ ಕುರಿತು ರಾತ್ರಿಯಲ್ಲಿಯೂ ಹಾಡುವುದು ಯುಕ್ತವಾಗಿದೆ.
4 ಯೆಹೋವನೇ, ನಿನ್ನ ಕಾರ್ಯಗಳಿಂದ ನಮ್ಮನ್ನು ನಿಜವಾಗಿಯೂ ಸಂತೋಷಗೊಳಿಸಿರುವೆ.
ಅವುಗಳ ಕುರಿತು ನಾವು ಹರ್ಷದಿಂದ ಹಾಡುವೆವು.
12-13 ನೀತಿವಂತರಾದರೋ ಯೆಹೋವನ ಆಲಯದಲ್ಲಿ
ಬೆಳೆಯುತ್ತಿರುವ ಲೆಬನೋನಿನ ದೇವದಾರು ವೃಕ್ಷದಂತಿರುವರು.
ನೀತಿವಂತರಾದರೋ ನಮ್ಮ ದೇವಾಲಯದ ಅಂಗಳದಲ್ಲಿ
ಮೊಗ್ಗು ಬಿಡುತ್ತಿರುವ ಖರ್ಜೂರದ ಮರಗಳಂತಿರುವರು.
14 ಅವರು ಮುಪ್ಪಿನಲ್ಲಿಯೂ ಪುಷ್ಟಿಯಾಗಿ ಬೆಳೆದಿರುವ
ಎಲೆಮರಗಳಂತೆ ಫಲಿಸುವರು.
15 ಯೆಹೋವನು ಒಳ್ಳೆಯವನೆಂಬುವುದಕ್ಕೆ
ಅವರು ದೃಷ್ಟಾಂತವಾಗಿರುವರು.
ಆತನೇ ನನ್ನ ಬಂಡೆ.
ಆತನು ಎಂದಿಗೂ ತಪ್ಪು ಮಾಡನು.
51 ಆದರೆ ಕೇಳಿರಿ, ನಾನು ನಿಮಗೆ ಈ ರಹಸ್ಯವೊಂದನ್ನು ತಿಳಿಸುತ್ತೇನೆ. ನಾವೆಲ್ಲರೂ ಸಾಯುವುದಿಲ್ಲ. ಆದರೆ ನಾವೆಲ್ಲರೂ ಮಾರ್ಪಾಟಾಗುವೆವು. 52 ಇದಕ್ಕೆ ಕೇವಲ ಒಂದು ಕ್ಷಣಕಾಲ ಸಾಕು. ರೆಪ್ಪೆಬಡಿಯುವಷ್ಟು ವೇಗವಾಗಿ ನಾವು ಮಾರ್ಪಾಟಾಗುವೆವು. ಕಡೇ ತುತ್ತೂರಿಯನ್ನು ಊದಿದಾಗ ಇದು ಸಂಭವಿಸುವುದು. ತುತ್ತೂರಿಯನ್ನು ಊದಲಾಗುವುದು; ಆಗ ಸತ್ತುಹೋಗಿದ್ದ ವಿಶ್ವಾಸಿಗಳು ಸದಾಕಾಲ ಜೀವಿಸುವುದಕ್ಕಾಗಿ ಎಬ್ಬಿಸಲ್ಪಡುವರು ಮತ್ತು ನಾವು ಮಾರ್ಪಾಟಾಗುವೆವು. 53 ಅಳಿದುಹೋಗುವ ಈ ದೇಹವು ಅಳಿದುಹೋಗದ್ದನ್ನು ಧರಿಸಿಕೊಳ್ಳುವುದು. ಮರಣಾಧೀನವಾದ ಈ ದೇಹವು ಅಮರತ್ವವನ್ನು ಧರಿಸಿಕೊಳ್ಳುವುದು. 54 ಅಳಿದುಹೋಗುವ ಈ ದೇಹ ಅಮರತ್ವವನ್ನು ಧರಿಸಿಕೊಂಡಾಗ ಪವಿತ್ರಗ್ರಂಥದ ಈ ಮಾತುಗಳು ನೆರವೇರುತ್ತವೆ:
“ಮರಣವು ಜಯದಲ್ಲಿ ನುಂಗಿಯೇಹೋಯಿತು.”(A)
55 “ಮರಣವೇ, ನಿನ್ನ ಜಯವೆಲ್ಲಿ?
ಮರಣವೇ, ಕೇಡುಮಾಡುವ ನಿನ್ನ ಶಕ್ತಿ ಎಲ್ಲಿ?”(B)
56 ಕೇಡುಮಾಡಲು ಮರಣಕ್ಕಿರುವ ಶಕ್ತಿಯು ಪಾಪವೇ. ಪಾಪದ ಶಕ್ತಿಯು ಧರ್ಮಶಾಸ್ತ್ರವೇ. 57 ಆದರೆ ನಾವು ದೇವರಿಗೆ ಕೃತಜ್ಞತಾಸ್ತುತಿ ಮಾಡುತ್ತೇವೆ. ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಮೂಲಕ ಆತನು ನಮಗೆ ಜಯವನ್ನು ಕೊಡುತ್ತಾನೆ.
58 ಆದ್ದರಿಂದ, ನನ್ನ ಪ್ರಿಯ ಸಹೋದರ ಸಹೋದರಿಯರೇ, ದೃಢವಾಗಿರಿ, ನಿಶ್ಚಲರಾಗಿರಿ. ಪ್ರಭುವಿನ ಸೇವೆಗಾಗಿ ನಿಮ್ಮನ್ನು ಯಾವಾಗಲೂ ಸಂಪೂರ್ಣವಾಗಿ ಪ್ರತಿಷ್ಠಿಸಿಕೊಳ್ಳಿರಿ. ನೀವು ಪ್ರಭುವಿಗಾಗಿ ಪಡುವ ಪ್ರಯಾಸವು ಎಂದಿಗೂ ವ್ಯರ್ಥವಾಗುವುದಿಲ್ಲ.
39 ಯೇಸು ಅವರಿಗೆ ಈ ಸಾಮ್ಯವನ್ನೂ ಹೇಳಿದನು: “ಒಬ್ಬ ಕುರುಡನು ಇನ್ನೊಬ್ಬ ಕುರುಡನನ್ನು ನಡಿಸುವುದಕ್ಕಾದೀತೇ? ಇಲ್ಲ! ಅವರಿಬ್ಬರೂ ಗುಂಡಿಯಲ್ಲಿ ಬೀಳುವರು. 40 ಶಿಷ್ಯನು ಗುರುವಿಗಿಂತ ಮೇಲಲ್ಲ. ಆದರೆ, ಶಿಷ್ಯನು ಪೂರ್ಣ ಕಲಿತಾಗ ಗುರುವಿನಂತೆ ಆಗುವನು.
41 “ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ನೋಡದೆ, ನಿನ್ನ ಸಹೋದರನ ಕಣ್ಣಿನಲ್ಲಿರುವ ಅಣುವನ್ನು ನೀನು ಗಮನಿಸುವುದೇಕೆ? 42 ನೀನು ಅವನಿಗೆ, ‘ಸಹೋದರನೇ, ನಿನ್ನ ಕಣ್ಣಿನಲ್ಲಿರುವ ಅಣುವನ್ನು ತೆಗೆಯುತ್ತೇನೆ’ ಎಂದು ನೀನು ಹೇಗೆ ಹೇಳಬಲ್ಲೆ? ನಿನ್ನ ಸ್ವಂತ ಕಣ್ಣಿನಲ್ಲಿರುವ ತೊಲೆಯೇ ನಿನಗೆ ಕಾಣಿಸದು! ನೀನು ಕಪಟಿ.[a] ಮೊದಲು ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ತೆಗೆದುಹಾಕು. ಆಗ ನಿನ್ನ ಸಹೋದರನ ಕಣ್ಣಿನಲ್ಲಿರುವ ಅಣುವನ್ನು ತೆಗೆಯಲು ನಿನಗೆ ಸ್ಪಷ್ಟವಾಗಿ ಕಾಣಿಸುವುದು.
ಎರಡು ವಿಧವಾದ ಫಲ
(ಮತ್ತಾಯ 7:17-20; 12:34-35)
43 “ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡುವುದಿಲ್ಲ. ಅದೇ ರೀತಿಯಲ್ಲಿ ಕೆಟ್ಟಮರವು ಒಳ್ಳೆಯ ಫಲವನ್ನು ಕೊಡುವುದಿಲ್ಲ. 44 ಪ್ರತಿಯೊಂದು ಮರವನ್ನು ಅದರ ಫಲದಿಂದಲೇ ಗುರುತಿಸಲಾಗುವುದು. ಜನರು ಮುಳ್ಳುಗಿಡಗಳಲ್ಲಿ ಅಂಜೂರದ ಹಣ್ಣುಗಳನ್ನಾಗಲಿ ಪೊದೆಗಳಲ್ಲಿ ದ್ರಾಕ್ಷಿಹಣ್ಣುಗಳನ್ನಾಗಲಿ ಪಡೆಯುವುದಿಲ್ಲ! 45 ಒಳ್ಳೆಯವನ ಹೃದಯದಲ್ಲಿ ಒಳ್ಳೆಯವು ಇರುತ್ತವೆ. ಆದ್ದರಿಂದ ಅವನ ಹೃದಯದೊಳಗಿಂದ ಒಳ್ಳೆಯವು ಹೊರಬರುತ್ತವೆ. ಆದರೆ ಕೆಟ್ಟವನ ಹೃದಯದಲ್ಲಿ ಕೆಟ್ಟವು ಇರುತ್ತವೆ. ಆದ್ದರಿಂದ ಅವನ ಹೃದಯದೊಳಗಿಂದ ಕೆಟ್ಟವು ಹೊರಬರುತ್ತವೆ. ಹೃದಯದಲ್ಲಿ ತುಂಬಿರುವುದೇ ಬಾಯಲ್ಲಿ ಬರುವುದು.
ಎರಡು ವಿಧವಾದ ಜನರು
(ಮತ್ತಾಯ 7:24-27)
46 “ನನ್ನನ್ನು ಸ್ವಾಮೀ, ಸ್ವಾಮೀ, ಎಂದು ಕರೆದು ನಾನು ಹೇಳುವುದನ್ನು ನಡಿಸದೆ ಇರುವುದೇಕೆ? 47 ನನ್ನ ಬಳಿಗೆ ಬಂದು ನನ್ನ ಮಾತುಗಳನ್ನು ಕೇಳಿ, ಅವುಗಳಿಗೆ ವಿಧೇಯನಾಗುವ ಪ್ರತಿಯೊಬ್ಬನು ಮನೆಯನ್ನು ಕಟ್ಟುವ ವ್ಯಕ್ತಿಯಂತಿರುವನು. 48 ಅವನು ಆಳವಾದ ಅಸ್ತಿವಾರ ಹಾಕಿ, ಬಲವಾದ ಬಂಡೆಯ ಮೇಲೆ ತನ್ನ ಮನೆಯನ್ನು ಕಟ್ಟುತ್ತಾನೆ. ಪ್ರವಾಹವು ಏರಿಬಂದು ಆ ಮನೆಗೆ ಅಪ್ಪಳಿಸಿದರೂ ಆ ಮನೆಯನ್ನು ಕದಲಿಸಲಾರದು; ಏಕೆಂದರೆ ಆ ಮನೆಯು ಬಲವಾಗಿ ಕಟ್ಟಲ್ಪಟ್ಟಿದೆ.
49 “ಅದೇ ರೀತಿಯಲ್ಲಿ, ನನ್ನ ಮಾತುಗಳನ್ನು ಕೇಳಿಯೂ ಅವುಗಳಿಗೆ ವಿಧೇಯನಾಗದ ವ್ಯಕ್ತಿಯು ಅಸ್ತಿವಾರವಿಲ್ಲದೆ ನೆಲದಮೇಲೆ ಮನೆ ಕಟ್ಟಿದ ಮನುಷ್ಯನಂತಿರುವನು. ಪ್ರವಾಹ ಬಂದಾಗ, ಮನೆಯು ಬೇಗನೆ ಕುಸಿದುಹೋಗಿ ಸಂಪೂರ್ಣವಾಗಿ ನಾಶವಾಗುತ್ತದೆ.”
Kannada Holy Bible: Easy-to-Read Version. All rights reserved. © 1997 Bible League International