Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 104

104 ನನ್ನ ಆತ್ಮವೇ, ಯೆಹೋವನನ್ನು ಕೊಂಡಾಡು!
    ಯೆಹೋವನೇ, ನನ್ನ ದೇವರೇ, ನೀನು ಬಹಳ ದೊಡ್ಡವನು!
ನೀನು ಮಹಿಮೆಯನ್ನೂ ಘನತೆಯನ್ನೂ ಧರಿಸಿಕೊಂಡಿರುವೆ.
    ನೀನು ಬೆಳಕನ್ನು ನಿಲುವಂಗಿಯಂತೆ ಧರಿಸಿಕೊಂಡಿರುವೆ
ನೀನು ಆಕಾಶಮಂಡಲವನ್ನು ಪರದೆಯಂತೆ ಹರಡಿರುವೆ.
    ನಿನ್ನ ಮನೆಯನ್ನು ಅವುಗಳ ಮೇಲೆ ಕಟ್ಟಿರುವೆ.
ದಟ್ಟವಾದ ಮೋಡಗಳನ್ನು ರಥಗಳನ್ನಾಗಿ ಮಾಡಿಕೊಂಡು
    ಗಾಳಿಯ ರೆಕ್ಕೆಗಳ ಮೇಲೆ ಆಕಾಶದಲ್ಲಿ ಸಂಚರಿಸುವೆ.
ಗಾಳಿಯನ್ನು ನಿನ್ನ ದೂತರನ್ನಾಗಿಯೂ
    ಬೆಂಕಿಯನ್ನು ನಿನ್ನ ಸೇವಕರನ್ನಾಗಿಯೂ ಮಾಡಿರುವೆ.[a]
ಭೂಮಿಯನ್ನು ನೀನು ಅಸ್ತಿವಾರದ ಮೇಲೆ ಕಟ್ಟಿರುವುದರಿಂದ
    ಅದೆಂದಿಗೂ ನಾಶವಾಗದು.
ನೀನು ಭೂಮಿಗೆ ನೀರನ್ನು ಕಂಬಳಿಯಂತೆ ಹೊದಿಸಿರುವೆ.
    ಅದು ಬೆಟ್ಟಗಳನ್ನು ಮುಚ್ಚಿಕೊಂಡಿತು.
ನೀನು ಆಜ್ಞಾಪಿಸಲು ನೀರು ಹಿಂತಿರುಗಿತು.
    ನೀನು ಬರ್ಜಿಸಲು ನೀರು ಓಡಿಹೋಯಿತು.
ಜಲರಾಶಿಗಳು ಬೆಟ್ಟಗಳಿಂದ ಇಳಿದು
    ಕಣಿವೆಗಳಿಗೂ ನೀನು ಗೊತ್ತುಪಡಿಸಿದ ಸ್ಥಳಗಳಿಗೂ ಹರಿದುಹೋದವು.
ನೀನು ಸಮುದ್ರಗಳಿಗೆ ಮೇರೆಗಳನ್ನು ಗೊತ್ತುಪಡಿಸಿರುವುದರಿಂದ
    ನೀರಿನಿಂದ ಭೂಮಿಯು ಮತ್ತೆಂದಿಗೂ ಆವೃತವಾಗದು.

10 ನೀನು ನೀರನ್ನು ಬುಗ್ಗೆಗಳಿಂದ ತೊರೆಗಳಿಗೆ ಹರಿಯಮಾಡುವೆ.
    ಬೆಟ್ಟದ ತೊರೆಗಳ ಮೂಲಕ ನೀರು ಹರಿದುಹೋಗುವುದು.
11 ತೊರೆಗಳು ಎಲ್ಲಾ ಕಾಡುಪ್ರಾಣಿಗಳಿಗೆ ನೀರನ್ನು ಕೊಡುತ್ತವೆ.
    ಕಾಡುಕತ್ತೆಗಳು ಸಹ ನೀರಿಗಾಗಿ ಅಲ್ಲಿಗೆ ಬರುತ್ತವೆ.
12 ಕಾಡುಪಕ್ಷಿಗಳು ಬಂದು ನೀರಿನ ಹಳ್ಳಗಳ ಬಳಿಯಲ್ಲಿ ವಾಸಿಸುತ್ತವೆ.
    ಸಮೀಪದ ಮರಗಳ ಕೊಂಬೆಗಳಲ್ಲಿ ವಾಸವಾಗಿದ್ದು ಗಾನಮಾಡುತ್ತವೆ.
13 ಆತನು ಬೆಟ್ಟಗಳ ಮೇಲೆ ಮಳೆಯನ್ನು ಸುರಿಸುವನು.
    ಆತನ ಸೃಷ್ಟಿಗಳು ಭೂಮಿಗೆ ಅಗತ್ಯವಾದ ಪ್ರತಿಯೊಂದನ್ನೂ ಒದಗಿಸುತ್ತವೆ.
14 ನೀನು ಪಶುಗಳಿಗೋಸ್ಕರ ಹುಲ್ಲನ್ನು ಬೆಳೆಯ ಮಾಡುವೆ.
ನಾವು ದುಡಿದು ಬೆಳೆಸುವುದಕ್ಕಾಗಿ ಸಸಿಗಳನ್ನು ಕೊಟ್ಟಿರುವೆ.
ಅವು ಬೆಳೆದು ನಮಗೆ ಆಹಾರವನ್ನು ಒದಗಿಸುತ್ತವೆ.
15 ನಮ್ಮನ್ನು ಸಂತೋಷಪಡಿಸುವ ದ್ರಾಕ್ಷಾರಸವನ್ನೂ
    ನಮ್ಮ ಚರ್ಮವನ್ನು ಮೃದುಗೊಳಿಸುವ[b] ಎಣ್ಣೆಯನ್ನೂ
    ನಮ್ಮನ್ನು ಬಲಗೊಳಿಸುವ ಆಹಾರವನ್ನೂ ನಮಗೆ ದೇವರು ಕೊಡುತ್ತಾನೆ.

16 ಲೆಬನೋನಿನ ದೇವದಾರು ವೃಕ್ಷಗಳು ಯೆಹೋವನವೇ,
    ಅವುಗಳನ್ನು ನೆಟ್ಟಾತನು ಯೆಹೋವನೇ.
    ಆತನೇ ಅವುಗಳಿಗೆ ಬೇಕಾದ ನೀರನ್ನು ಒದಗಿಸುವನು.
17 ಪಕ್ಷಿಗಳು ಗೂಡುಗಳನ್ನು ಆ ಮರಗಳಲ್ಲಿ ಕಟ್ಟಿಕೊಳ್ಳುತ್ತವೆ.
    ದೊಡ್ಡ ಕೊಕ್ಕರೆಗಳು ತುರಾಯಿ ಮರಗಳಲ್ಲಿ ಜೀವಿಸುತ್ತವೆ.
18 ಎತ್ತರವಾದ ಬೆಟ್ಟಗಳು ಕಾಡುಕುರಿಗಳಿಗೆ ವಾಸಸ್ಥಳವಾಗಿವೆ.
    ದೊಡ್ಡ ಬಂಡೆಗಳು ಬೆಟ್ಟದ ಮೊಲಗಳಿಗೆ ಆಶ್ರಯಸ್ಥಾನಗಳಾಗಿವೆ.

19 ವಿಶೇಷಕಾಲಗಳ ಸೂಚನೆಗಾಗಿ ನೀನು ನಮಗೆ ಚಂದ್ರನನ್ನು ಕೊಟ್ಟಿರುವೆ.
    ಸೂರ್ಯನಿಗೆ ತಾನು ಮುಳುಗತಕ್ಕ ಸಮಯವು ಯಾವಾಗಲೂ ತಿಳಿದಿದೆ.
20 ನೀನು ಕತ್ತಲೆಯನ್ನು ರಾತ್ರಿಯನ್ನಾಗಿ ಮಾಡಿದೆ.
    ಕಾಡುಪ್ರಾಣಿಗಳು ರಾತ್ರಿಯಲ್ಲಿ ಹೊರಬಂದು ಸುತ್ತಮುತ್ತ ಓಡಾಡುತ್ತವೆ.
21 ಸಿಂಹಗಳು ಬೇಟೆಯಾಡುವಾಗ ಆಹಾರಕ್ಕಾಗಿ
    ದೇವರನ್ನು ಕೇಳಿಕೊಳ್ಳುತ್ತಿವೆಯೊ ಎಂಬಂತೆ ಬರ್ಜಿಸುತ್ತವೆ.
22 ಸೂರ್ಯನು ಮೇಲೇರುವಾಗ,
    ಪ್ರಾಣಿಗಳು ತಮ್ಮ ಗುಹೆಗಳಿಗೆ ಹೋಗಿ ವಿಶ್ರಮಿಸಿಕೊಳ್ಳುತ್ತವೆ.
23 ಬಳಿಕ ಜನರು ಕೆಲಸಕಾರ್ಯಗಳಿಗಾಗಿ ಹೊರಟು
    ಸಾಯಂಕಾಲದವರೆಗೂ ದುಡಿಯುವರು.

24 ಯೆಹೋವನೇ, ನೀನು ಅನೇಕ ಆಶ್ಚರ್ಯಕರವಾದ ಕಾರ್ಯಗಳನ್ನು ಮಾಡಿರುವೆ.
    ನೀನು ಸೃಷ್ಟಿಸಿದ ವಸ್ತುಗಳಿಂದ ಭೂಮಿಯು ತುಂಬಿಹೋಗಿದೆ.
    ನಿನ್ನ ಪ್ರತಿಯೊಂದು ಕಾರ್ಯದಲ್ಲೂ ನಿನ್ನ ಜ್ಞಾನವನ್ನು ಕಾಣಬಲ್ಲವು.
25 ಇಗೋ ವಿಶಾಲವಾದ ಸಮುದ್ರವನ್ನು ನೋಡು.
    ಅದರೊಳಗೆ ಅನೇಕ ಬಗೆಯ ದೊಡ್ಡ ಜೀವಿಗಳೂ
    ನಾನಾ ಬಗೆಯ ಚಿಕ್ಕ ಜೀವಿಗಳೂ ಅಸಂಖ್ಯಾತವಾಗಿವೆ.
26 ನೀನು ಸೃಷ್ಟಿಸಿದ ಲಿವ್ಯಾತಾನನು ಸಮುದ್ರದಲ್ಲಿ ಆಟವಾಡುತ್ತಿದ್ದರೂ
    ಹಡಗು ಸಮುದ್ರದ ಮೇಲೆ ಸಂಚರಿಸುವುದು.

27 ಈ ಜೀವಿಗಳೆಲ್ಲಾ ನಿನ್ನನ್ನು ಅವಲಂಭಿಸಿಕೊಂಡಿವೆ.
    ಅವುಗಳಿಗೆ ಸರಿಸಮಯದಲ್ಲಿ ಆಹಾರವನ್ನು ಕೊಡುವಾತನು ನೀನೇ.
28 ಸರ್ವಜೀವಿಗಳಿಗೆ ಆಹಾರವನ್ನು ಕೊಡುವಾತನು ನೀನೇ.
    ನೀನು ಕೈತೆರೆದು ಒಳ್ಳೆಯ ಆಹಾರವನ್ನು ಕೊಡಲು ಅವು ತಿಂದು ತೃಪ್ತಿಯಾಗುತ್ತವೆ.
29 ನೀನು ಅವುಗಳಿಗೆ ವಿಮುಖನಾದಾಗ
    ಅವು ಭಯಗೊಳ್ಳುತ್ತವೆ.
ಅವುಗಳ ಶ್ವಾಸವು ಹೋಗಿ
    ಬಲಹೀನತೆಯಿಂದ ಸತ್ತು ಮತ್ತೆ ಮಣ್ಣಾಗುತ್ತವೆ.
30 ನಿನ್ನ ಜೀವಶ್ವಾಸವನ್ನು ಊದುವಾಗ ಅವು ಸೃಷ್ಟಿಯಾಗುತ್ತವೆ.
    ನೀನು ಭೂಮಿಯನ್ನು ಮತ್ತೆ ನೂತನ ಪಡಿಸುವೆ.

31 ಯೆಹೋವನ ಮಹಿಮೆಯು ಶಾಶ್ವತವಾಗಿರಲಿ!
    ಯೆಹೋವನು ತಾನು ಸೃಷ್ಟಿಸಿದವುಗಳಲ್ಲಿ ಆನಂದಿಸಲಿ.
32 ಆತನು ಭೂಮಿಯ ಕಡೆಗೆ ನೋಡಿದರೆ ಸಾಕು,
    ಭೂಮಿಯು ನಡುಗುವುದು;
ಆತನು ಬೆಟ್ಟಗಳನ್ನು ಮುಟ್ಟಿದರೆ ಸಾಕು,
    ಅವು ಜ್ವಾಲಾಮುಖಿಗಳಾಗುತ್ತವೆ.

33 ನನ್ನ ಜೀವಮಾನವೆಲ್ಲಾ ನಾನು ಯೆಹೋವನಿಗೆ ಗಾನ ಮಾಡುವೆನು.
    ನಾನು ಬದುಕಿರುವವರೆಗೂ ಆತನನ್ನು ಸಂಕೀರ್ತಿಸುವೆನು.
34 ನಾನು ಹೇಳಿದ ಈ ವಿಷಯಗಳು ಆತನನ್ನು ಸಂತೋಷಗೊಳಿಸಲಿ.
    ನಾನಾದರೋ ಯೆಹೋವನಲ್ಲಿ ಸಂತೋಷಿಸುವೆನು.
35 ಪಾಪಾತ್ಮರು ಭೂಮಿಯಿಂದ ಕಾಣದೆಹೋಗಲಿ.
    ದುಷ್ಟರು ಎಂದೆಂದಿಗೂ ನಿರ್ಮೂಲವಾಗಲಿ.
ನನ್ನ ಆತ್ಮವೇ, ಯೆಹೋವನನ್ನು ಸ್ತುತಿಸು!

ಯೆಹೋವನನ್ನು ಕೊಂಡಾಡು!

ಯೆಶಾಯ 66:7-13

7-8 “ಪ್ರಸವವೇದನೆಗಿಂತ ಮೊದಲು ಸ್ತ್ರೀಯು ಮಗುವನ್ನು ಹೆರುವದಿಲ್ಲ. ತಾನು ಹೆರುವ ಶಿಶುವನ್ನು ನೋಡುವ ಮೊದಲು ಸ್ತ್ರೀಯು ಪ್ರಸವವೇದನೆ ಅನುಭವಿಸಲೇಬೇಕು. ಅದೇ ರೀತಿಯಲ್ಲಿ ಒಂದೇ ದಿನದಲ್ಲಿ ಹೊಸ ಭೂಮ್ಯಾಕಾಶಗಳು ಉಂಟಾಗುವದನ್ನು ಯಾರೂ ನೋಡುವದಿಲ್ಲ. ಒಂದೇ ದಿವಸದಲ್ಲಿ ಉಂಟಾದ ಜನಾಂಗದ ಬಗ್ಗೆ ಯಾರೂ ಕೇಳಲಿಲ್ಲ. ದೇಶವು ಪ್ರಸವವೇದನೆಯಂಥ ಬೇನೆಯನ್ನು ಅನುಭವಿಸಬೇಕು. ಆ ಬಳಿಕ ದೇಶವು ಹೊಸ ಜನಾಂಗವೆಂಬ ಮಕ್ಕಳನ್ನು ಹೆರುವುದು. ಅದೇ ರೀತಿಯಲ್ಲಿ ಹೊಸದಾಗಿ ಹುಟ್ಟುವ ಕಾರಣದಿಂದಲೇ ನಾನು ಬೇನೆಯನ್ನು ನಿಮಗೆ ಕೊಡುವೆನು.”

ಯೆಹೋವನು ಹೇಳುವುದೇನೆಂದರೆ: “ನಾನು ನಿಮಗೆ ಹೆರಿಗೆ ಬೇನೆಯನ್ನು ಕೊಡದೆಹೋದರೆ ನೀವು ಹೊಸ ಜನಾಂಗವಾಗಲಾರಿರಿ.” ಇದು ಯೆಹೋವನ ನುಡಿ.

10 ಜೆರುಸಲೇಮೇ, ಹರ್ಷಿಸು. ಜೆರುಸಲೇಮನ್ನು ಪ್ರೀತಿಸುವ ಜನರೇ, ಹರ್ಷಿಸಿರಿ.
    ಜೆರುಸಲೇಮಿಗೆ ದುಃಖಕೊಡುವ ವಿಷಯಗಳು ಜರುಗಿದ್ದರಿಂದ ನೀವು ದುಃಖಪಡುತ್ತಿದ್ದೀರಿ.
    ಆದರೆ ನೀವೀಗ ಸಂತೋಷಪಡಬೇಕು.
11 ಯಾಕೆಂದರೆ ಆಕೆಯ ಎದೆಯಿಂದ ದೊರಕುವ ಹಾಲಿನಂತೆ ನಿಮಗೆ ಕರುಣೆಯು ದೊರಕುವದು.
    ಆ ಹಾಲು ನಿಮ್ಮನ್ನು ಪೂರ್ಣವಾಗಿ ತೃಪ್ತಿಗೊಳಿಸುವದು.
    ನೀವು ಆ ಹಾಲನ್ನು ಕುಡಿದು ಜೆರುಸಲೇಮಿನ ವೈಭವದಲ್ಲಿ ಆನಂದಿಸುವಿರಿ.

12 ಯೆಹೋವನು ಹೇಳುವುದೇನೆಂದರೆ:
“ಇಗೋ, ನಾನು ನಿನಗೆ ಸಮಾಧಾನವನ್ನು ಕೊಡುತ್ತೇನೆ.
ಒಂದು ದೊಡ್ಡ ಹೊಳೆಯು ಹರಿಯುವಂತೆ ನಿನಗೆ ಸಮಾಧಾನವು ಹರಿದುಕೊಂಡು ಬರುವದು.
    ಭೂಮಿಯ ಮೇಲಿರುವ ಎಲ್ಲಾ ದೇಶಗಳ ಐಶ್ವರ್ಯವು ನಿನ್ನ ಬಳಿಗೆ ಹರಿದುಬರುವದು.
    ಅದು ಪ್ರವಾಹದಂತೆ ಹರಿದುಬರುವದು.
ನೀವು ಸಣ್ಣ ಮಕ್ಕಳಂತೆ ಆ ಹಾಲನ್ನು ಕುಡಿಯುವಿರಿ.
    ನಾನು ನಿಮ್ಮನ್ನೆತ್ತಿ ಕೈಗಳಲ್ಲಿ ಅಪ್ಪಿಕೊಳ್ಳುವೆನು.
    ನನ್ನ ತೊಡೆಯ ಮೇಲೆ ನಿಮ್ಮನ್ನು ಕುಳ್ಳಿರಿಸಿ ಆಟವಾಡಿಸುವೆನು.
13 ನಾನು ನಿಮ್ಮನ್ನು ಜೆರುಸಲೇಮಿನಲ್ಲಿ ಸಂತೈಸುವೆನು.
    ತಾಯಿಯು ತನ್ನ ಮಗುವನ್ನು ಸಂತೈಸುವಂತೆ ನಾನು ನಿಮ್ಮನ್ನು ಸಂತೈಸುವೆನು.”

ಲೂಕ 12:22-31

ದೇವರ ರಾಜ್ಯಕ್ಕೆ ಮೊದಲನೆ ಪ್ರಾಧಾನ್ಯತೆ

(ಮತ್ತಾಯ 6:25-34,19-21)

22 ಯೇಸು ತನ್ನ ಶಿಷ್ಯರಿಗೆ ಹೀಗೆ ಹೇಳಿದನು: “ಈ ಕಾರಣದಿಂದ ನಾನು ನಿಮಗೆ ಹೇಳುವುದೇನೆಂದರೆ, ನಿಮ್ಮ ಪ್ರಾಣಧಾರಣೆಗೆ ಬೇಕಾದ ಊಟಕ್ಕಾಗಿ ಮತ್ತು ತೊಟ್ಟುಕೊಳ್ಳಲು ಬೇಕಾದ ಬಟ್ಟೆಗಾಗಿ ಚಿಂತಿಸಬೇಡಿರಿ. 23 ಆಹಾರಕ್ಕಿಂತ ಪ್ರಾಣ ಹೆಚ್ಚು ಪ್ರಾಮುಖ್ಯವಾದದ್ದು. ಬಟ್ಟೆಗಿಂತಲೂ ದೇಹ ಹೆಚ್ಚು ಪ್ರಾಮುಖ್ಯವಾದದ್ದು. 24 ಪಕ್ಷಿಗಳನ್ನು ನೋಡಿರಿ. ಅವು ಬಿತ್ತುವುದೂ ಇಲ್ಲ, ಕೊಯ್ಯುವುದೂ ಇಲ್ಲ. ಅವು ಆಹಾರವನ್ನು ಮನೆಗಳಲ್ಲಾಗಲಿ ಕಣಜಗಳಲ್ಲಾಗಲಿ ತುಂಬಿಟ್ಟುಕೊಳ್ಳುವುದಿಲ್ಲ. ದೇವರೇ ಅವುಗಳನ್ನು ಪರಿಪಾಲಿಸುತ್ತಾನೆ. ನೀವು ಪಕ್ಷಿಗಳಿಗಿಂತ ಎಷ್ಟೋ ಅಮೂಲ್ಯರಾಗಿದ್ದೀರಿ. 25 ನೀವು ಊಟಬಟ್ಟೆಗಳಿಗಾಗಿ ಎಷ್ಟೇ ಚಿಂತಿಸಿದರೂ ನಿಮ್ಮ ಆಯುಷ್ಯೇನೂ ಹೆಚ್ಚಾಗುವುದಿಲ್ಲ. 26 ಚಿಕ್ಕಕಾರ್ಯಗಳನ್ನೇ ಮಾಡಲು ನಿಮಗೆ ಸಾಧ್ಯವಿಲ್ಲದಿರುವಾಗ, ದೊಡ್ಡಕಾರ್ಯಗಳ ಕುರಿತು ನೀವು ಚಿಂತಿಸುವುದೇಕೆ?

27 “ಅಡವಿಯ ಹೂವುಗಳು ಬೆಳೆಯುವ ಬಗೆಯನ್ನು ನೋಡಿರಿ. ಅವು ದುಡಿಯುವುದಿಲ್ಲ. ತಮಗಾಗಿ ಉಡುಪುಗಳನ್ನು ಹೊಲಿದುಕೊಳ್ಳುವುದಿಲ್ಲ. ಆದರೂ ಸೊಲೊಮೋನ ರಾಜನು ತನ್ನ ಸಕಲ ವೈಭವದಲ್ಲಿ ಇದ್ದಾಗಲೂ ಈ ಹೂವುಗಳಲ್ಲಿ ಒಂದರಷ್ಟೂ ಸುಂದರವಾದ ಉಡುಪನ್ನು ಧರಿಸಿರಲಿಲ್ಲ. 28 ದೇವರು ಬಯಲಿನ ಹುಲ್ಲಿಗೂ ಹೀಗೆ ಉಡಿಸುತ್ತಾನೆ. ಹುಲ್ಲಾದರೋ ಈ ಹೊತ್ತಿದ್ದು ನಾಳೆ ಬೆಂಕಿಯ ಪಾಲಾಗುವುದು. ಹೀಗಿರಲು ದೇವರು ನಿಮಗೆ ಎಷ್ಟೋ ಹೆಚ್ಚಾಗಿ ಉಡಿಸುವುದಿಲ್ಲವೇ? ಆದ್ದರಿಂದ ಅಲ್ಪವಿಶ್ವಾಸಿಗಳಾಗಿರಬೇಡಿ!

29 “ಏನು ಊಟಮಾಡಬೇಕು? ಏನು ಕುಡಿಯಬೇಕು? ಎಂದು ಯಾವಾಗಲೂ ಆಲೋಚಿಸಬೇಡಿರಿ ಮತ್ತು ಚಿಂತಿಸಬೇಡಿರಿ. 30 ಅವುಗಳನ್ನು ಪಡೆದುಕೊಳ್ಳುವುದಕ್ಕಾಗಿ ಲೋಕದ ಜನರೆಲ್ಲರೂ ಪ್ರಯತ್ನಿಸುತ್ತಾರೆ. ಅವುಗಳ ಅವಶ್ಯಕತೆ ನಿಮಗೂ ಇದೆ ಎಂಬುದು ನಿಮ್ಮ ತಂದೆಗೆ (ದೇವರು) ತಿಳಿದಿದೆ. 31 ನೀವು ದೇವರ ರಾಜ್ಯಕ್ಕೆ ಮೊದಲನೆ ಪ್ರಾಧಾನ್ಯತೆಯನ್ನು ಕೊಡಿರಿ. ಆಗ ನಿಮಗೆ ಬೇಕಾಗಿರುವ ಉಳಿದವುಗಳನ್ನು ಕೊಡಲಾಗುವುದು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International