Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 17:1-9

ಪ್ರಾರ್ಥನೆ. ರಚನೆಗಾರ: ದಾವೀದ.

17 ಯೆಹೋವನೇ, ನ್ಯಾಯವಾದ ನನ್ನ ಪ್ರಾರ್ಥನೆಗೆ ಕಿವಿಗೊಡು.
    ನನ್ನ ಮೊರೆಯನ್ನು ಆಲೈಸು, ನನ್ನ ಯಥಾರ್ಥವಾದ ಪ್ರಾರ್ಥನೆಗೆ ಕಿವಿಗೊಡು.
ನನ್ನ ಕುರಿತಾಗಿ ನ್ಯಾಯವಾದ ತೀರ್ಪು ನಿನ್ನಿಂದಲೇ ಬರಲಿ.
    ನೀನು ಸತ್ಯವನ್ನು ನೋಡಬಲ್ಲಾತನಾಗಿರುವೆ.
ನೀನು ನನ್ನ ಅಂತರಾಳವನ್ನು ರಾತ್ರಿಯೆಲ್ಲಾ ಪರೀಕ್ಷಿಸಿರುವೆ.
    ನೀನು ನನ್ನನ್ನು ಪುಟಕ್ಕೆ ಹಾಕಿ ಶೋಧಿಸಿದಾಗ
ನನ್ನಲ್ಲಿ ಯಾವ ದೋಷವೂ ಕಂಡುಬರಲಿಲ್ಲ.
    ನಾನು ಯಾವ ತಪ್ಪನ್ನೂ ಮಾಡಿರಲಿಲ್ಲ.
ನಿನ್ನ ಆಜ್ಞೆಗಳಿಗೆ ವಿಧೇಯನಾಗಲು
    ನನ್ನಿಂದಾದಷ್ಟು ಪ್ರಯತ್ನಿಸಿದ್ದೇನೆ.
ನಿನ್ನ ಜೀವಮಾರ್ಗದಲ್ಲೇ ಹೆಜ್ಜೆಯಿಡುತ್ತಾ ನಡೆಯುತ್ತಿದ್ದೇನೆ.
    ನನ್ನ ಪಾದವು ತಪ್ಪು ದಾರಿಗೆ ಹೋಗಲಿಲ್ಲ.
ದೇವರೇ, ನಾನು ನಿನ್ನನ್ನು ಕರೆದಾಗಲ್ಲೆಲ್ಲಾ, ನೀನು ನನಗೆ ಉತ್ತರಿಸಿದೆ.
    ಆದ್ದರಿಂದ ಈಗಲೂ ನನಗೆ ಕಿವಿಗೊಡು.
ದೇವರೇ, ನಿನ್ನಲ್ಲಿ ಭರವಸೆಯಿಟ್ಟಿರುವ ಭಕ್ತರಿಗೆ
    ನೀನು ಸಹಾಯಮಾಡುವೆ;
ಅವರು ನಿನ್ನ ಬಲಗಡೆಯಲ್ಲಿ ಸುರಕ್ಷಿತವಾಗಿರುವರು.
    ಆದ್ದರಿಂದ ನಿನ್ನ ಭಕ್ತನಾದ ನನ್ನ ಪ್ರಾರ್ಥನೆಗೂ ಕಿವಿಗೊಡು.
ನಿನ್ನ ಕಣ್ಣಿನ ಗುಡ್ಡೆಯಂತೆ ನನ್ನನ್ನು ಸಂರಕ್ಷಿಸು.
    ನಿನ್ನ ರೆಕ್ಕೆಗಳ ಮರೆಯಲ್ಲಿ ನನ್ನನ್ನು ಅಡಗಿಸಿಕೊ.
ಯೆಹೋವನೇ, ನನ್ನನ್ನು ನಾಶಮಾಡಬೇಕೆಂದಿರುವ ದುಷ್ಟರಿಂದ ನನ್ನನ್ನು ತಪ್ಪಿಸಿ ಕಾಪಾಡು.
    ನನಗೆ ಕೇಡುಮಾಡಬೇಕೆಂದು ಸುತ್ತುಗಟ್ಟಿರುವ ಜನರಿಂದ ನನ್ನನ್ನು ಸಂರಕ್ಷಿಸು.

ಆದಿಕಾಂಡ 38:1-26

ಯೆಹೂದನು ಮತ್ತು ತಾಮಾರಳು

38 ಆ ಕಾಲದಲ್ಲಿ ಯೆಹೂದನು ತನ್ನ ಸಹೋದರರನ್ನು ಬಿಟ್ಟು ಹೀರಾ ಎಂಬುವನೊಂದಿಗೆ ವಾಸಿಸಲು ಹೋದನು. ಅವನು ಅದುಲ್ಲಾಮ್ ಊರಿನವನು. ಯೆಹೂದನು ಅಲ್ಲಿ ಒಬ್ಬ ಕಾನಾನ್ಯನ ಮಗಳನ್ನು ಕಂಡು ಆಕೆಯನ್ನು ಮದುವೆಮಾಡಿಕೊಂಡನು. ಆ ಹುಡುಗಿಯ ತಂದೆಯ ಹೆಸರು ಶೂಗ. ಆಕೆಯು ಒಬ್ಬ ಮಗನನ್ನು ಹೆತ್ತಳು. ಅವರು ಅವನಿಗೆ ಏರ ಎಂದು ಹೆಸರಿಟ್ಟರು. ಬಳಿಕ ಆಕೆ ಮತ್ತೊಬ್ಬ ಮಗನಿಗೆ ಜನನವಿತ್ತಳು. ಅವರು ಆ ಮಗನಿಗೆ ಓನಾನ ಎಂದು ಹೆಸರಿಟ್ಟರು. ಆಕೆಗೆ ಮೂರನೆಯ ಮಗನು ಹುಟ್ಟಿದಾಗ ಆಕೆ ಅದಕ್ಕೆ ಶೇಲಹ ಎಂದು ಹೆಸರಿಟ್ಟಳು. ಆ ಮಗು ಹುಟ್ಟಿದಾಗ ಯೆಹೂದನು ಕಜೀಬೂರಿನಲ್ಲಿ ವಾಸಿಸುತ್ತಿದ್ದನು.

ಯೆಹೂದನು ತನ್ನ ಮೊದಲನೆ ಮಗನಾದ ಏರನಿಗಾಗಿ ಒಬ್ಬ ಕನ್ನಿಕೆಯನ್ನು ಆಯ್ಕೆಮಾಡಿದನು. ಆಕೆಯ ಹೆಸರು ತಾಮಾರ. ಆದರೆ ಏರನು ಅನೇಕ ಕೆಟ್ಟಕಾರ್ಯಗಳನ್ನು ಮಾಡಿದ್ದರಿಂದ ಯೆಹೋವನು ಅವನನ್ನು ಸಾಯಿಸಿದನು. ಆಗ ಯೆಹೂದನು ಏರನ ತಮ್ಮನಾದ ಓನಾನನಿಗೆ, “ಹೋಗು, ಸತ್ತುಹೋದ ನಿನ್ನ ಅಣ್ಣನ ಹೆಂಡತಿಗೆ ಗಂಡನಂತಿರು. ನಿನ್ನ ಮೂಲಕ ಆಕೆಯಲ್ಲಿ ಹುಟ್ಟುವ ಮಕ್ಕಳು ನಿನ್ನ ಅಣ್ಣನಾದ ಏರನ ಮಕ್ಕಳಾಗಿರಲಿ” ಎಂದು ಹೇಳಿದನು.

ತಾಮಾರಳಲ್ಲಿ ತನಗೆ ಹುಟ್ಟುವ ಮಕ್ಕಳು ತನ್ನವರಾಗುವುದಿಲ್ಲವೆಂದು ಅರಿತುಕೊಂಡು ಓನಾನನು ಆಕೆಯನ್ನು ಕೂಡಿದರೂ ವೀರ್ಯವನ್ನು ನೆಲದ ಪಾಲು ಮಾಡುತ್ತಿದ್ದನು. 10 ಇದು ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದಾಗಿದ್ದರಿಂದ ಆತನು ಓನಾನನನ್ನು ಸಹ ಸಾಯಿಸಿದನು. 11 ಆಗ ಯೆಹೂದನು ತನ್ನ ಸೊಸೆಯಾದ ತಾಮಾರಳಿಗೆ, “ನಿನ್ನ ತಂದೆಯ ಮನೆಗೆ ಹಿಂತಿರುಗಿ ಹೋಗಿ ಅಲ್ಲಿರು. ನನ್ನ ಮಗನಾದ ಶೇಲಹನು ದೊಡ್ಡವನಾಗುವ ತನಕ ಮದುವೆಯಾಗಬೇಡ” ಎಂದು ಹೇಳಿದನು. ಶೇಲಹನು ಸಹ ತನ್ನ ಅಣ್ಣಂದಿರಂತೆ ಸಾಯಬಹುದೆಂದು ಯೆಹೂದನು ಹೆದರಿಕೊಂಡಿದ್ದನು. ಆದ್ದರಿಂದ ತಾಮಾರಳು ತನ್ನ ತಂದೆಯ ಮನೆಗೆ ಹಿಂತಿರುಗಿ ಹೋದಳು.

12 ಆಮೇಲೆ ಬಹುದಿನಗಳಾದ ಮೇಲೆ ಯೆಹೂದನ ಹೆಂಡತಿಯಾಗಿದ್ದ ಶೂಗನ ಮಗಳು ತೀರಿಕೊಂಡಳು. ಯೆಹೂದನು ತನ್ನ ದುಃಖದ ಸಮಯ ತೀರಿದ ಮೇಲೆ ಅದುಲ್ಲಾಮ್ಯದವನಾದ ತನ್ನ ಸ್ನೇಹಿತ ಹೀರಾನೊಂದಿಗೆ ತನ್ನ ಕುರಿಗಳ ಉಣ್ಣೆ ಕತ್ತರಿಸುವುದಕ್ಕಾಗಿ ತಿಮ್ನಾ ಊರಿಗೆ ಹೋದನು. 13 ಮಾವನು ಉಣ್ಣೆ ಕತ್ತರಿಸುವುದಕ್ಕಾಗಿ ತಿಮ್ನಾ ಊರಿಗೆ ಹೋಗುತ್ತಿರುವುದು ತಾಮಾರಳಿಗೆ ತಿಳಿಯಿತು. 14 ತಾಮಾರಳು ಯಾವಾಗಲೂ ವಿಧವೆಯ ವಸ್ತ್ರಗಳನ್ನು ಧರಿಸಿಕೊಂಡಿರುತ್ತಿದ್ದಳು. ಆದರೆ ಈಗ ಆಕೆ ಬೇರೆ ಬಟ್ಟೆಗಳನ್ನು ಧರಿಸಿಕೊಂಡು ತನ್ನ ಮುಖವನ್ನು ಮುಸುಕಿನಿಂದ ಮುಚ್ಚಿಕೊಂಡು ತಿಮ್ನಾ ಊರಿನ ಸಮೀಪದಲ್ಲಿರುವ ಏನಯಿಮೂರಿನ ದಾರಿಯಲ್ಲಿ ಕುಳಿತುಕೊಂಡಳು. ಯೆಹೂದನ ಚಿಕ್ಕಮಗನಾದ ಶೇಲಹನು ಬೆಳೆದು ದೊಡ್ಡವನಾಗಿರುವುದು ತಾಮಾರಳಿಗೆ ತಿಳಿದಿತ್ತು. ಆದರೆ ಆಕೆಗೆ ಅವನನ್ನು ಮದುವೆ ಮಾಡಿಸಲು ಯೆಹೂದನು ಆಲೋಚಿಸಿರಲಿಲ್ಲ.

15 ಯೆಹೂದನು ಆ ದಾರಿಯಲ್ಲಿ ಪ್ರಯಾಣ ಮಾಡುತ್ತಿರಲು ಆಕೆಯನ್ನು ಕಂಡು ವೇಶ್ಯೆಯೆಂದು ಭಾವಿಸಿದನು. (ಆಕೆಯು ವೇಶ್ಯೆಯಂತೆ ಮುಸುಕು ಹಾಕಿಕೊಂಡಿದ್ದಳು.) 16 ಆದ್ದರಿಂದ ಯೆಹೂದನು ಆಕೆಯ ಬಳಿಗೆ ಹೋಗಿ, “ನಾನು ನಿನ್ನನ್ನು ಕೂಡಬಹುದೇ?” ಎಂದು ಕೇಳಿದನು. (ಆಕೆ ತನ್ನ ಸೊಸೆಯಾದ ತಾಮಾರಳೆಂದು ಯೆಹೂದನಿಗೆ ತಿಳಿದಿರಲಿಲ್ಲ.)

ಅವಳು “ನೀನು ನನಗೆ ಏನು ಕೊಡುವೆ?” ಎಂದು ಕೇಳಿದಳು.

17 ಯೆಹೂದನು, “ನನ್ನ ಮಂದೆಯಿಂದ ನಿನಗೆ ಒಂದು ಆಡುಮರಿಯನ್ನು ಕಳುಹಿಸಿಕೊಡುವೆ” ಎಂದು ಉತ್ತರಿಸಿದನು.

ಅವಳು “ಸರಿ, ನೀನು ನನಗೆ ಆಡುಮರಿಯನ್ನು ಕಳುಹಿಸಿ ಕೊಡುವ ತನಕ ನನ್ನಲ್ಲಿ ಏನಾದರೂ ಒತ್ತೆಯಿಡಬೇಕು” ಎಂದು ಹೇಳಿದಳು.

18 ಯೆಹೂದನು, “ಏನು ಒತ್ತೆಯಿಡಲಿ?” ಎಂದು ಕೇಳಿದನು.

ತಾಮಾರಳು, “ನಿನ್ನ ಪತ್ರಗಳ ಮೇಲೆ ಉಪಯೋಗಿಸುವ ನಿನ್ನ ಮುದ್ರೆಯನ್ನೂ ಅದರ ದಾರವನ್ನೂ ಮತ್ತು ನಿನ್ನ ಊರುಗೋಲನ್ನೂ ಕೊಡು” ಎಂದು ಉತ್ತರಿಸಿದಳು. ಯೆಹೂದನು ಅವುಗಳನ್ನು ಆಕೆಗೆ ಕೊಟ್ಟನು. ಯೆಹೂದನು ಆಕೆಯನ್ನು ಕೂಡಿದನು; ಅವಳು ಗರ್ಭಿಣಿಯಾದಳು. 19 ತಾಮಾರಳು ಮನೆಗೆ ಹೋಗಿ ಮುಸುಕನ್ನು ತೆಗೆದುಹಾಕಿ ಮತ್ತೆ ವಿಧವಾವಸ್ತ್ರಗಳನ್ನು ಧರಿಸಿಕೊಂಡಳು.

20 ಯೆಹೂದನು ಮಾತು ಕೊಟ್ಟಿದ್ದಂತೆಯೇ ಒಂದು ಆಡುಮರಿಯನ್ನು ತನ್ನ ಸ್ನೇಹಿತನಾದ ಹೀರಾನ ಮೂಲಕ ಏನಯಿಮಿಗೆ ಕಳುಹಿಸಿ ಆ ಮುದ್ರೆಯನ್ನೂ ಊರುಗೋಲನ್ನೂ ತೆಗೆದುಕೊಂಡು ಬರುವಂತೆ ಅವನಿಗೆ ತಿಳಿಸಿದನು. ಆದರೆ ಅವನು ಅವಳನ್ನು ಕಂಡುಹಿಡಿಯಲಾಗಲಿಲ್ಲ. 21 ಅವನು ಏನಯಿಮ್ ಊರಿನ ಕೆಲವು ಗಂಡಸರಿಗೆ, “ಇಲ್ಲಿಯ ದಾರಿಯ ಸಮೀಪದಲ್ಲಿರುತ್ತಿದ್ದ ವೇಶ್ಯೆಯು ಎಲ್ಲಿದ್ದಾಳೆ?” ಎಂದು ಕೇಳಿದನು.

ಅದಕ್ಕೆ ಅವರು, “ಇಲ್ಲಿ ಯಾವ ವೇಶ್ಯೆಯೂ ಇಲ್ಲ” ಎಂದು ಉತ್ತರಿಸಿದರು.

22 ಆದ್ದರಿಂದ ಅವನು ಯೆಹೂದನ ಬಳಿಗೆ ಹಿಂತಿರುಗಿ ಬಂದು, “ನಾನು ಆ ವೇಶ್ಯೆಯನ್ನು ಕಂಡುಹಿಡಿಯಲಾಗಲಿಲ್ಲ. ಅದಲ್ಲದೆ ಆ ಸ್ಥಳದ ಗಂಡಸರು ಅಲ್ಲಿ ಒಬ್ಬ ವೇಶ್ಯೆಯೂ ಇಲ್ಲ ಎಂದು ಹೇಳಿದರು” ಅಂದನು.

23 ಅದಕ್ಕೆ ಯೆಹೂದನು, “ಆಕೆ ಆ ವಸ್ತುಗಳನ್ನು ಇಟ್ಟುಕೊಳ್ಳಲಿ. ಜನರು ನಮ್ಮನ್ನು ಕಂಡು ನಗುವುದು ನನಗೆ ಇಷ್ಟವಿಲ್ಲ. ನಾನು ಅವಳಿಗೆ ಆಡನ್ನು ಕೊಡಲು ಪ್ರಯತ್ನಿಸಿದೆ. ಆದರೆ ಅವಳು ನಿನಗೆ ಸಿಕ್ಕಲಿಲ್ಲವಷ್ಟೇ” ಎಂದು ಹೇಳಿದನು.

ತಾಮಾರಳಿಗೆ ಗರ್ಭಧಾರಣೆ

24 ಮೂರು ತಿಂಗಳಾದ ಬಳಿಕ, ಯಾರೋ ಒಬ್ಬನು ಯೆಹೂದನಿಗೆ, “ನಿನ್ನ ಸೊಸೆಯಾದ ತಾಮಾರಳು ವ್ಯಭಿಚಾರದಿಂದ ಗರ್ಭಿಣಿಯಾಗಿದ್ದಾಳೆ” ಎಂದು ತಿಳಿಸಿದನು.

ಆಗ ಯೆಹೂದನು, “ಆಕೆಯನ್ನು ಎಳೆದುಕೊಂಡು ಹೋಗಿ ಸುಟ್ಟುಬಿಡಿ” ಎಂದು ಹೇಳಿದನು.

25 ಆ ಗಂಡಸರು ತಾಮಾರಳನ್ನು ಕೊಲ್ಲಲು ಆಕೆಯ ಬಳಿಗೆ ಹೋದರು. ಆದರೆ ಆಕೆ ತನ್ನ ಮಾವನಿಗೆ, “ನನ್ನನ್ನು ಗರ್ಭಿಣಿ ಮಾಡಿದವನು ಈ ವಸ್ತುಗಳ ಒಡೆಯ. ಈ ವಸ್ತುಗಳನ್ನು ನೋಡು! ಇವು ಯಾರವು? ಈ ಮುದ್ರೆಯೂ ದಾರವೂ ಯಾರವು? ಇದು ಯಾರ ಕೈಕೋಲು?” ಎಂಬ ಸಂದೇಶವನ್ನು ಹೇಳಿ ಕಳುಹಿಸಿದಳು.

26 ಯೆಹೂದನು ಆ ವಸ್ತುಗಳನ್ನು ಗುರುತಿಸಿ, “ಆಕೆ ಸರಿಯಾದದ್ದನ್ನೇ ಮಾಡಿದ್ದಾಳೆ. ನಾನೇ ತಪ್ಪು ಮಾಡಿದೆ. ನಾನು ಆಕೆಗೆ ಮಾತುಕೊಟ್ಟಂತೆ ನನ್ನ ಮಗನಾದ ಶೇಲಹನನ್ನು ಆಕೆಗೆ ಕೊಡಬೇಕಿತ್ತು” ಎಂದು ಹೇಳಿದನು. ಆದರೆ ಯೆಹೂದನು ಆಕೆಯೊಡನೆ ಮತ್ತೆ ಮಲಗಿಕೊಳ್ಳಲಿಲ್ಲ.

ಅಪೊಸ್ತಲರ ಕಾರ್ಯಗಳು 24:10-23

ಫೇಲಿಕ್ಸನ ಎದುರು ಪೌಲನ ಪ್ರತಿಪಾದನೆ

10 ರಾಜ್ಯಪಾಲನು ಪೌಲನಿಗೆ ಸನ್ನೆಮಾಡಿ, ಮಾತಾಡಲು ಸೂಚಿಸಿದನು. ಆಗ ಪೌಲನು ಹೀಗೆಂದನು: “ರಾಜ್ಯಪಾಲನಾದ ಫೇಲಿಕ್ಸನೇ, ನೀನು ಅನೇಕ ವರ್ಷಗಳಿಂದ ಈ ದೇಶಕ್ಕೆ ನ್ಯಾಯಾಧೀಶನಾಗಿರುವುದು ನನಗೆ ಗೊತ್ತಿದೆ. ಆದ್ದರಿಂದ ಸಂತೋಷದಿಂದ ನಿನ್ನ ಮುಂದೆ ನನ್ನನ್ನು ಪ್ರತಿಪಾದಿಸಿಕೊಳ್ಳುವೆನು. 11 ನಾನು ಆರಾಧನೆಗೋಸ್ಕರ ಜೆರುಸಲೇಮಿಗೆ ಹೋದದ್ದು ಕೇವಲ ಹನ್ನೆರಡು ದಿನಗಳ ಹಿಂದೆಯಷ್ಟೆ. ಅದು ಸತ್ಯವೆಂದು ಸ್ವತಃ ನೀನೇ ತಿಳಿದುಕೊಳ್ಳಬಲ್ಲೆ. 12 ನಾನು ದೇವಾಲಯದಲ್ಲಾಗಲಿ ಸಭಾಮಂದಿರಗಳಲ್ಲಾಗಲಿ ಪಟ್ಟಣದಲ್ಲಾಗಲಿ ಯಾರೊಂದಿಗಾದರೂ ವಾದ ಮಾಡುತ್ತಿರುವುದನ್ನು, ಇಲ್ಲವೆ ಜನರ ಗುಂಪು ಕೂಡಿಸುವುದನ್ನು ಇವರು ನೋಡಿಲ್ಲ. 13 ಈಗ ನನಗೆ ವಿರೋಧವಾಗಿ ಹೇಳುತ್ತಿರುವ ಸಂಗತಿಗಳನ್ನು ಈ ಯೆಹೂದ್ಯರು ನಿರೂಪಿಸಲಾರರು.

14 “ಆದರೆ ನಾನು ನಿನಗೆ ಹೇಳುವುದೇನೆಂದರೆ, ಯೇಸುವಿನ ಮಾರ್ಗದ ಹಿಂಬಾಲಕನಾದ ನಾನು ನಮ್ಮ ಪಿತೃಗಳ ದೇವರನ್ನು ಆರಾಧಿಸುತ್ತೇನೆ. ಯೇಸುವಿನ ಮಾರ್ಗವು ಸರಿಯಲ್ಲವೆಂದು ಯೆಹೂದ್ಯರು ಹೇಳುತ್ತಾರೆ. ಆದರೆ ಮೋಶೆಯ ಧರ್ಮಶಾಸ್ತ್ರದಲ್ಲಿಯೂ ಪ್ರವಾದಿಗಳ ಪುಸ್ತಕಗಳಲ್ಲಿಯೂ ಬರೆದಿರುವ ಪ್ರತಿಯೊಂದನ್ನು ನಾನು ನಂಬುತ್ತೇನೆ. 15 ಈ ಯೆಹೂದ್ಯರಿಗೆ ದೇವರಲ್ಲಿ ಯಾವ ನಿರೀಕ್ಷೆಯಿದೆಯೋ ಅದೇ ನಿರೀಕ್ಷೆ ನನಗೂ ಇದೆ. ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುತ್ತದೆ ಎಂಬುದೇ ಆ ನಿರೀಕ್ಷೆ. 16 ಈ ಕಾರಣದಿಂದ ನಾನು ಯಾವುದನ್ನು ಸರಿಯಾದದ್ದು ಎಂದು ನಂಬಿದ್ದೇನೋ ಅದನ್ನು ದೇವರ ಮುಂದೆಯೂ ಮನುಷ್ಯರ ಮುಂದೆಯೂ ಮಾಡಲು ಯಾವಾಗಲು ಪ್ರಯತ್ನಿಸುತ್ತಿದ್ದೇನೆ.

17 “ನಾನು ಅನೇಕ ವರ್ಷಗಳಿಂದ ಜೆರುಸಲೇಮಿನಲ್ಲಿ ಇರಲಿಲ್ಲ. ಬಳಿಕ ನಾನು ನನ್ನ ಜನರಿಗಾಗಿ ಹಣವನ್ನು ತರುವುದಕ್ಕಾಗಿಯೂ ಉಡುಗೊರೆಗಳನ್ನು ಕೊಡುವುದಕ್ಕಾಗಿಯೂ ಜೆರುಸಲೇಮಿಗೆ ಮರಳಿ ಹೋದೆನು. 18 ನಾನು ಈ ಕಾರ್ಯದಲ್ಲಿ ನಿರತನಾಗಿದ್ದಾಗ ಕೆಲವು ಮಂದಿ ಯೆಹೂದ್ಯರು ನನ್ನನ್ನು ದೇವಾಲಯದಲ್ಲಿ ಕಂಡರು. ನಾನು ಶುದ್ಧಾಚಾರದ ವಿಧಿಯನ್ನು ಮುಗಿಸಿದ್ದೆನು. ನಾನು ಯಾವ ಗಲಭೆಯನ್ನೂ ಮಾಡಿರಲಿಲ್ಲ. ನನ್ನ ಸುತ್ತಲೂ ಯಾವ ಜನರೂ ಇರಲಿಲ್ಲ. 19 ಆದರೆ ಏಷ್ಯಾದ ಕೆಲವು ಮಂದಿ ಯೆಹೂದ್ಯರು ಅಲ್ಲಿದ್ದರು. ಅವರು ಈಗ ನಿನ್ನೆದುರಿನಲ್ಲಿ ಇರಬೇಕಿತ್ತು. ನಾನು ನಿಜವಾಗಿ ಏನಾದರೂ ತಪ್ಪು ಮಾಡಿದ್ದರೆ ಏಷ್ಯಾದ ಆ ಯೆಹೂದ್ಯರೇ ನನ್ನ ಮೇಲೆ ದೋಷಾರೋಪಣೆ ಮಾಡಬೇಕಿತ್ತು. 20 ನಾನು ಜೆರುಸಲೇಮಿನಲ್ಲಿ ಯೆಹೂದ್ಯ ನ್ಯಾಯಸಭೆಯ ಮುಂದೆ ನಿಂತಿದ್ದಾಗ, ನನ್ನಲ್ಲಿ ಅವರಿಗೆ ಯಾವ ಅಪರಾಧಗಳು ಕಂಡುಬಂದವೆಂದು ಇಲ್ಲಿರುವ ಈ ಯೆಹೂದ್ಯರನ್ನೇ ಕೇಳು. 21 ನಾನು ಅವರ ಮುಂದೆ ನಿಂತಿದ್ದಾಗ, ‘ಸತ್ತವರು ಪುನರುತ್ಥಾನ ಹೊಂದುತ್ತಾರೆಂದು ನಾನು ನಂಬುವುದರಿಂದ ಇಲ್ಲಿ ನ್ಯಾಯವಿಚಾರಣೆಗೆ ಗುರಿಯಾಗಿದ್ದೇನೆ!’ ಎಂಬ ಒಂದೇ ಒಂದು ಸಂಗತಿಯನ್ನು ನಾನು ಕೂಗಿ ಹೇಳಿದೆ.”

22 ಫೇಲಿಕ್ಸನು ಯೇಸುವಿನ ಮಾರ್ಗದ ಬಗ್ಗೆ ಮೊದಲೇ ಸಾಕಷ್ಟು ಅರ್ಥಮಾಡಿಕೊಂಡಿದ್ದನು. ಅವನು ವಿಚಾರಣೆಯನ್ನು ನಿಲ್ಲಿಸಿ, “ಸೇನಾಧಿಪತಿಯಾದ ಲೂಸಿಯನು ಇಲ್ಲಿಗೆ ಬಂದಾಗ, ಈ ಸಂಗತಿಗಳ ಬಗ್ಗೆ ನಾನು ತೀರ್ಪನ್ನು ಕೊಡುತ್ತೇನೆ” ಎಂದು ಹೇಳಿದನು. 23 ಪೌಲನನ್ನು ಕಾವಲಿನಲ್ಲಿರಿಸಬೇಕೆಂದು ಫೇಲಿಕ್ಸನು ಸೇನಾಧಿಕಾರಿಗೆ ತಿಳಿಸಿದನು. ಆದರೆ ಪೌಲನಿಗೆ ಸ್ವಲ್ಪ ಸ್ವತಂತ್ರವನ್ನು ಕೊಡುವಂತೆಯೂ ಪೌಲನ ಮಿತ್ರರು ಅವನಿಗೆ ಅಗತ್ಯವಾದ ವಸ್ತುಗಳನ್ನು ತಂದುಕೊಡುವುದಕ್ಕೆ ಅವಕಾಶ ಕೊಡಬೇಕೆಂತಲೂ ಅವನು ಅಧಿಕಾರಿಗೆ ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International