Revised Common Lectionary (Complementary)
12 ಯಾರಿಗೆ ಯೆಹೋವನು ದೇವರಾಗಿದ್ದಾನೋ ಅವರೇ ಧನ್ಯರು.
ಯಾಕೆಂದರೆ ಆತನು ಅವರನ್ನು ಸ್ವಕೀಯರನ್ನಾಗಿ ಆರಿಸಿಕೊಂಡಿದ್ದಾನೆ.
13 ಯೆಹೋವನು ಪರಲೋಕದಿಂದ
ಮನುಷ್ಯರನ್ನು ದೃಷ್ಟಿಸಿ ನೋಡುವನು.
14 ಆತನು ತನ್ನ ಮಹಾಸಿಂಹಾಸನದಿಂದ
ಭೂನಿವಾಸಿಗಳೆಲ್ಲರನ್ನು ನೋಡುವನು.
15 ಅವರೆಲ್ಲರ ಮನುಸ್ಸುಗಳನ್ನು ಸೃಷ್ಟಿಸಿದವನು ಆತನೇ.
ಅವರೆಲ್ಲರ ಆಲೋಚನೆಗಳು ಆತನಿಗೆ ತಿಳಿದಿವೆ.
16 ಮಹಾಸೇನಾಬಲದಿಂದಲೇ ಯಾವ ಅರಸನಿಗೂ ಜಯವಾಗುವುದಿಲ್ಲ.
ಭುಜಬಲದಿಂದಲೇ ಯಾವ ಯುದ್ಧವೀರನೂ ಸುರಕ್ಷಿತನಾಗಿರಲಾರನು.
17 ಯುದ್ಧದಲ್ಲಿ ದೊರೆಯುವ ಜಯ ಕುದುರೆಗಳಿಂದಲ್ಲ.
ಅವುಗಳ ಬಲವು ನಿನ್ನನ್ನು ರಕ್ಷಿಸಲಾರದು.
18 ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಲಕ್ಷಿಸುವನು.
ಆತನ ಶಾಶ್ವತವಾದ ಪ್ರೀತಿಯು ಆತನ ಭಕ್ತರನ್ನು ಕಾಪಾಡುವುದು.
19 ಅವರನ್ನು ಸಾವಿನಿಂದ ರಕ್ಷಿಸುವಾತನು ಆತನೇ.
ಅವರು ಹಸಿವೆಯಿಂದಿರುವಾಗ ಆತನು ಅವರಿಗೆ ಶಕ್ತಿಕೊಡುವನು.
20 ಆದ್ದರಿಂದ ಯೆಹೋವನಿಗಾಗಿಯೇ ಕಾದುಕೊಂಡಿರುತ್ತೇವೆ.
ಆತನೇ ನಮ್ಮ ಸಹಾಯಕನೂ ಗುರಾಣಿಯೂ ಆಗಿದ್ದಾನೆ.
21 ದೇವರು ನನ್ನನ್ನು ಸಂತೋಷಗೊಳಿಸುವನು.
ನಾನು ಆತನ ಪರಿಶುದ್ಧ ಹೆಸರಿನಲ್ಲಿಯೇ ಭರವಸವಿಟ್ಟಿದ್ದೇನೆ.
22 ಯೆಹೋವನೇ, ನಾವು ನಿನ್ನನ್ನೇ ನಿರೀಕ್ಷಿಸಿಕೊಂಡಿದ್ದೇವೆ.
ನಿನ್ನ ಶಾಶ್ವತವಾದ ಪ್ರೀತಿಯು ನಮ್ಮ ಮೇಲಿರಲಿ.
ಯೋಬನ ಉತ್ತರ
21 ಬಳಿಕ ಯೋಬನು ಉತ್ತರಕೊಟ್ಟನು:
2 “ನಾನು ಹೇಳುವುದನ್ನು ಕೇಳಿ.
ನಿಮ್ಮಿಂದ ನನಗಾಗಬೇಕಾದ ಆದರಣೆ ಇಷ್ಟೇ.
3 ನಾನು ಮಾತಾಡುವಾಗ ತಾಳ್ಮೆಯಿಂದಿರಿ.
ನಾನು ಮಾತಾಡಿದ ಮೇಲೆ ನೀವು ನನ್ನನ್ನು ಗೇಲಿ ಮಾಡಿದರೂ ಮಾಡಿರಿ.
4 “ನಾನು ಮನುಷ್ಯನ ವಿರೋಧವಾಗಿ ದೂರು ಹೇಳುತ್ತಿಲ್ಲ.
ನನ್ನಲ್ಲಿ ತಾಳ್ಮೆಯಿಲ್ಲದಿರುವುದಕ್ಕೆ ಒಂದು ಒಳ್ಳೆಯ ಕಾರಣವಿದೆ.
5 ನನ್ನನ್ನು ನೋಡಿ ಬೆರಗಾಗಿ
ನಿಮ್ಮ ಬಾಯಿಯ ಮೇಲೆ ಕೈಯಿಟ್ಟುಕೊಳ್ಳಿರಿ, ಗಾಬರಿಯಿಂದ ನನ್ನನ್ನೇ ದೃಷ್ಟಿಸಿ ನೋಡಿರಿ!
6 ನನಗೆ ಸಂಭವಿಸಿದ ಬಗ್ಗೆ ನಾನು ಯೋಚಿಸುವಾಗ
ನನಗೆ ಭಯವಾಗುತ್ತದೆ; ನನ್ನ ದೇಹವು ನಡುಗುತ್ತದೆ.
7 ದುಷ್ಟರು ದೀರ್ಘಕಾಲ ಜೀವಿಸುವುದೇಕೆ?
ಅವರು ವೃದ್ಧರಾಗುವವರೆಗೂ ಅಭಿವೃದ್ಧಿಯಾಗುತ್ತಾ ಬಾಳುವುದೇಕೆ?
8 ದುಷ್ಟರ ಮಕ್ಕಳು ತಮ್ಮ ತಂದೆತಾಯಿಗಳೊಂದಿಗಿದ್ದು ಬೆಳೆಯುವರು;
ದುಷ್ಟರು ತಮ್ಮ ಮೊಮ್ಮಕ್ಕಳನ್ನೂ ನೋಡುವರು.
9 ಅವರ ಕುಟುಂಬಗಳು ಸುರಕ್ಷಿತವಾಗಿರುವುದರಿಂದ ಅವರಿಗೆ ಭಯವಿಲ್ಲ.
ದೇವರು ದುಷ್ಟರನ್ನು ತನ್ನ ದೊಣ್ಣೆಯಿಂದ ದಂಡಿಸುವುದಿಲ್ಲ.
10 ಅವರ ಹೋರಿಗಳು ತಪ್ಪದೆ ಸಂಗಮಿಸುತ್ತವೆ.
ಅವರ ಹಸುಗಳು ಕರುಗಳನ್ನು ಈಯುತ್ತವೆ.
11 ದುಷ್ಟರು ತಮ್ಮ ಮಕ್ಕಳನ್ನು ಕುರಿಮರಿಗಳಂತೆ ಆಟವಾಡಲು ಹೊರಗೆ ಕಳುಹಿಸುವರು.
ಅವರ ಮಕ್ಕಳು ಸುತ್ತಮುತ್ತ ಕುಣಿದಾಡುವರು.
12 ಅವರು ತಂಬೂರಿಗಳನ್ನೂ ಹಾರ್ಪ್ವಾದ್ಯಗಳನ್ನೂ ಬಾರಿಸುತ್ತಾ ಹಾಡುವರು; ಕೊಳಲುಗಳ ಧ್ವನಿಗೆ ಉಲ್ಲಾಸಪಡುವರು.
13 ದುಷ್ಟರು ತಮ್ಮ ಜೀವಮಾನವೆಲ್ಲಾ ಏಳಿಗೆ ಹೊಂದುವರು.
ಅವರು ಸಂಕಟಪಡದೆ ಸತ್ತು ಸಮಾಧಿಗೆ ಸೇರುವರು.
14 ಆದರೆ ದುಷ್ಟರು ದೇವರಿಗೆ, ‘ನಮ್ಮನ್ನು ನಮ್ಮಷ್ಟಕ್ಕೇ ಬಿಟ್ಟುಕೊಡು!
ನಿನ್ನ ಮಾರ್ಗದ ತಿಳುವಳಿಕೆಯೇ ನಮಗೆ ಬೇಡ’ ಎನ್ನುವರು.
15 ದುಷ್ಟರು, ‘ಸರ್ವಶಕ್ತನಾದ ದೇವರು ಯಾರು?
ನಾವು ಆತನ ಸೇವೆಮಾಡುವ ಅಗತ್ಯವಿಲ್ಲ!
ಆತನಿಗೆ ಪ್ರಾರ್ಥಿಸುವುದರಿಂದ ಪ್ರಯೋಜನವೇನೂ ಇಲ್ಲ’ ಎಂದು ಹೇಳುವರು.
16 “ತಮ್ಮ ಏಳಿಗೆಗೆ ಕಾರಣ ತಾವೇ ಎಂದು ದುಷ್ಟರು ಯೋಚಿಸಿಕೊಂಡಿದ್ದಾರೆ.
ಆದರೆ ಅವರ ಆಲೋಚನೆಗಳನ್ನು ನಾನು ತಿರಸ್ಕರಿಸುವೆ.
ದೇವರು ಮತ್ತು ಯೆಹೂದ್ಯರು
9 ನಾನು ಕ್ರಿಸ್ತನಲ್ಲಿದ್ದೇನೆ ಮತ್ತು ನಿಮಗೆ ಸತ್ಯವನ್ನೇ ಹೇಳುತ್ತಿದ್ದೇನೆ. ನಾನು ಸುಳ್ಳಾಡುವುದಿಲ್ಲ. ನನ್ನ ಆಲೋಚನೆಗಳು ಪವಿತ್ರಾತ್ಮನ ಆಳ್ವಿಕೆಗೆ ಒಳಪಟ್ಟಿವೆ. ನನ್ನ ಮನಸ್ಸೇ ಇದಕ್ಕೆ ಸಾಕ್ಷಿ. 2 ಯೆಹೂದ್ಯರ ವಿಷಯದಲ್ಲಿ ನನಗೆ ಅತೀವ ದುಃಖವಿದೆ; ನಿರಂತರ ಮನೋವೇದನೆಯಿದೆ. 3 ಅವರು ನನ್ನ ಸಹೋದರ ಸಹೋದರಿಯರಾಗಿದ್ದಾರೆ; ಇಹಲೋಕದ ಕುಟುಂಬದವರಾಗಿದ್ದಾರೆ. ಅವರಿಗೆ ಸಹಾಯ ಮಾಡಲು ಕ್ರಿಸ್ತನನ್ನು ಅಗಲಿ ಶಾಪಗ್ರಸ್ತನಾಗುವುದಕ್ಕೂ ಸಿದ್ಧನಾಗಿದ್ದೇನೆ. 4 ಅವರು ಇಸ್ರೇಲಿನ ಜನರು. ಅವರು ದೇವರಿಂದ ಆರಿಸಲ್ಪಟ್ಟ ಮಕ್ಕಳು. ಅವರು ದೇವರ ಮಹಿಮೆಯನ್ನು ಮತ್ತು ದೇವರು ಅವರೊಂದಿಗೆ ಮಾಡಿಕೊಂಡ ಒಡಂಬಡಿಕೆಗಳನ್ನು ಹೊಂದಿದ್ದಾರೆ. ದೇವರು ಅವರಿಗೆ ಮೋಶೆಯ ಧರ್ಮಶಾಸ್ತ್ರವನ್ನೂ ಸರಿಯಾದ ಆರಾಧನೆಯ ಕ್ರಮವನ್ನೂ ತನ್ನ ವಾಗ್ದಾನಗಳನ್ನೂ ಕೊಟ್ಟನು. 5 ಅವರು ನಮ್ಮ ಪಿತೃಗಳ ಸಂತಾನಗಳಿಗೆ ಸೇರಿದವರಾಗಿದ್ದಾರೆ; ಕ್ರಿಸ್ತನು ಶಾರೀರಿಕವಾಗಿ ಇವರ ವಂಶದಲ್ಲಿಯೇ ಹುಟ್ಟಿದನು. ಕ್ರಿಸ್ತನು ಸಕಲಕ್ಕೂ ಒಡೆಯನಾಗಿದ್ದಾನೆ. ಆತನಿಗೆ ಎಂದೆಂದಿಗೂ ಸ್ತೋತ್ರವಾಗಲಿ! ಆಮೆನ್.
6 ಹೌದು, ನಾನು ಯೆಹೂದ್ಯರ ವಿಷಯದಲ್ಲಿ ದುಃಖಿಸುತ್ತೇನೆ. ದೇವರು ತನ್ನ ವಾಗ್ದಾನವನ್ನು ನೆರವೇರಿಸುವುದರಲ್ಲಿ ವಿಫಲನಾದನೆಂದು ನಾನು ಹೇಳುತ್ತಿಲ್ಲ. ಏಕೆಂದರೆ ಇಸ್ರೇಲ್ ವಂಶದಲ್ಲಿ ಹುಟ್ಟಿದವರೆಲ್ಲರೂ ದೇವರ ಮಕ್ಕಳಲ್ಲ. 7 ಅಬ್ರಹಾಮನ ಸಂತತಿಗಳವರಲ್ಲಿ ಕೆಲವರು ಮಾತ್ರ ಅಬ್ರಹಾಮನ ನಿಜವಾದ ಮಕ್ಕಳಾಗಿದ್ದಾರೆ. ದೇವರು ಅವನಿಗೆ, “ಇಸಾಕನು ಮಾತ್ರ ನಿಮಗೆ ನ್ಯಾಯಬದ್ಧವಾದ ಮಗನು”(A) ಎಂದು ಹೇಳಿದನು. 8 ಇದರರ್ಥವೇನೆಂದರೆ, ಶರೀರ ಸಂಬಂಧವಾಗಿ ಹುಟ್ಟಿದವರೆಲ್ಲರೂ ದೇವರ ಮಕ್ಕಳಲ್ಲ. ವಾಗ್ದಾನ ಸಂಬಂಧವಾಗಿ ಹುಟ್ಟಿದವರೇ ದೇವರ (ನಿಜ) ಮಕ್ಕಳಾಗಿದ್ದಾರೆ. 9 ದೇವರು ಅವನಿಗೆ, “ನೇಮಿತ ಕಾಲದಲ್ಲಿ ನಾನು ಹಿಂತಿರುಗಿಬರುವೆನು, ಆಗ ಸಾರಳಿಗೆ ಒಬ್ಬ ಮಗನಿರುವನು”(B) ಎಂಬ ವಾಗ್ದಾನ ಮಾಡಿದ್ದನು.
Kannada Holy Bible: Easy-to-Read Version. All rights reserved. © 1997 Bible League International