Revised Common Lectionary (Complementary)
16 ನಾನು ಸಹಾಯಕ್ಕಾಗಿ ದೇವರಲ್ಲಿ ಮೊರೆಯಿಡುವೆನು.
ಯೆಹೋವನು ನನಗೆ ಉತ್ತರ ಕೊಡುವನು.
17 ನಾನು ದೇವರೊಂದಿಗೆ ಸಾಯಂಕಾಲದಲ್ಲಿಯೂ ಮುಂಜಾನೆಯಲ್ಲಿಯೂ ಮಧ್ಯಾಹ್ನದಲ್ಲಿಯೂ ಮಾತಾಡುವೆನು.
ನನಗಾಗಿರುವ ದುಃಖವನ್ನು ಆತನಿಗೆ ಹೇಳಿಕೊಳ್ಳುವೆನು. ಆತನು ನನಗೆ ಕಿವಿಗೊಡುವನು!
18 ನಾನು ಅನೇಕ ಯುದ್ಧಗಳಲ್ಲಿ ಹೋರಾಡಿದ್ದೇನೆ.
ಆದರೆ ಪ್ರತಿಸಲವೂ ದೇವರು ನನ್ನನ್ನು ಪಾರುಮಾಡಿ, ಸುರಕ್ಷಿತವಾಗಿ ಬರಮಾಡಿದನು.
19 ದೇವರು ನನಗೆ ಕಿವಿಗೊಡುವನು.
ಅನಾದಿಕಾಲದ ರಾಜನು ನನಗೆ ಸಹಾಯ ಮಾಡುವನು.
ನನ್ನ ವೈರಿಗಳು ತಮ್ಮ ಜೀವಿತಗಳನ್ನು ಪರಿವರ್ತಿಸಿಕೊಳ್ಳುವುದಿಲ್ಲ.
ಅವರಿಗೆ ದೇವರಲ್ಲಿ ಭಯಭಕ್ತಿಯಿಲ್ಲ.
20 ನನ್ನ ವೈರಿಗಳು ತಮ್ಮ ಸ್ನೇಹಿತರ ಮೇಲೆಯೇ ಆಕ್ರಮಣ ಮಾಡುವರು;
ತಮ್ಮ ಒಡಂಬಡಿಕೆಗಳನ್ನು ತಾವೇ ಉಲ್ಲಂಘಿಸುವರು.
21 ನನ್ನ ವೈರಿಗಳು ನಯ ನಾಜೂಕಿನಿಂದ ಶಾಂತಿಯ ಕುರಿತು ಮಾತಾಡುವರು;
ಅಂತರಂಗದಲ್ಲಿಯೇ ಯುದ್ಧಗಳ ಕುರಿತು ಆಲೋಚಿಸುವರು.
ಅವರ ಮಾತುಗಳು ಬೆಣ್ಣೆಯಂತೆ ನುಣುಪಾಗಿದ್ದರೂ
ಅವರ ಹೃದಯಗಳು ಬಿಚ್ಚುಗತ್ತಿಗಳೇ ಸರಿ.
22 ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು.
ಆತನು ನಿನ್ನನ್ನು ಉದ್ಧಾರ ಮಾಡುವನು.
ಸಜ್ಜನರಿಗೆ ಸೋಲಾಗಲು ಯೆಹೋವನೆಂದಿಗೂ ಬಿಡನು.
23 ದೇವರೇ, ನೀನು ದುಷ್ಟರನ್ನು ಪಾತಾಳಕ್ಕೆ ದಬ್ಬಿಬಿಡುವೆ.
ಕೊಲೆಪಾತಕರೂ ವಂಚಕರೂ ತಮ್ಮ ಅರ್ಧಾಯುಷ್ಯವಾದರೂ ಬದುಕರು.
ನಾನಾದರೊ ನಿನ್ನನ್ನೇ ನಂಬಿಕೊಂಡಿರುವೆನು.
ಮೊರ್ದೆಕೈಯನ್ನು ಗೌರವಿಸಿದ್ದು
6 ಆ ರಾತ್ರಿ ಅರಸನಿಗೆ ನಿದ್ರಿಸಲಾಗಲಿಲ್ಲ. ಒಬ್ಬ ಸೇವಕನನ್ನು ಕರೆದು ರಾಜಕಾಲವೃತ್ತಾಂತ ಪುಸ್ತಕವನ್ನು ತರಹೇಳಿ ಅವನಿಂದ ಅದನ್ನು ಓದಿಸಿದನು. (ಈ ಪುಸ್ತಕದಲ್ಲಿ ಅರಸರ ರಾಜ್ಯ ಆಳ್ವಿಕೆಯಲ್ಲಿ ನಡೆದ ಘಟನೆಗಳು ಲಿಖಿತವಾಗಿರುತ್ತದೆ.) 2 ಆ ಸೇವಕನು ರಾಜನಿಗೆ ಪುಸ್ತಕದಿಂದ ಓದುತ್ತಾ ಹೋದನು. ರಾಜನನ್ನು ಕೊಲ್ಲುವ ಒಳಸಂಚಿನ ವಿಚಾರವನ್ನೂ ಕೇಳಿದನು. ಬಿಗೆತಾನ್ ಮತ್ತು ತೆರೆಷ್ ಎಂಬ ಇಬ್ಬರು ದ್ವಾರಪಾಲಕರು ರಾಜನನ್ನು ಕೊಲ್ಲಲು ಒಳಸಂಚು ಮಾಡಿದಾಗ ಮೊರ್ದೆಕೈಗೆ ಅದು ತಿಳಿದುಬಂತು. ಕೂಡಲೇ ಅವನು ಬೇರೆಯವರ ಮುಖಾಂತರ ಅರಸನಿಗೆ ತಿಳಿಸಿದನು.
3 ಇದನ್ನು ಕೇಳುತ್ತಿದ್ದ ಅರಸನು, “ಮೊರ್ದೆಕೈ ಹೀಗೆ ಮಾಡಿದುದಕ್ಕೆ ಯಾವ ಗೌರವ ಮತ್ತು ಬಹುಮಾನಗಳು ಕೊಡಲ್ಪಟ್ಟವು?” ಎಂದು ವಿಚಾರಿಸಿದನು. “ಮೊರ್ದೆಕೈಗೆ ಏನೂ ಕೊಡಲಿಲ್ಲ” ಎಂದು ಸೇವಕರು ಉತ್ತರಿಸಿದರು.
4 ಅದೇ ಸಮಯದಲ್ಲಿ ಹಾಮಾನನು ಹೊರಾಂಗಣದಲ್ಲಿದ್ದನು. ಅವನು ತಾನು ತಯಾರಿಸಿಟ್ಟಿರುವ ಗಲ್ಲುಕಂಬದಲ್ಲಿ ಮೊರ್ದೆಕೈಯನ್ನು ಗಲ್ಲಿಗೆ ಹಾಕಲು ಅರಸನಿಂದ ಅಪ್ಪಣೆ ಪಡೆದುಕೊಳ್ಳಲು ಬಂದಿದ್ದನು. ಅರಸನು ಹೊರಾಂಗಣದಲ್ಲಿ “ಈಗ ತಾನೇ ಯಾರು ಬಂದರು?” ಎಂದು ಕೇಳಿದಾಗ 5 ಸೇವಕರು, “ಹಾಮಾನನು ನಿಂತಿದ್ದಾನೆ!” ಎಂದು ಹೇಳಿದರು.
“ಸರಿ, ಒಳಕ್ಕೆ ಕರೆದುಕೊಂಡು ಬನ್ನಿರಿ” ಎಂದು ಆಜ್ಞಾಪಿಸಿದನು.
6 ಹಾಮಾನನು ಒಳಗೆ ಪ್ರವೇಶಮಾಡುವಾಗ ಅರಸನು, “ಹಾಮಾನನೇ, ಅರಸನು ಒಬ್ಬನಿಗೆ ಗೌರವಿಸಬೇಕೆಂದು ಇಚ್ಫಿಸುವಾಗ ಯಾವ ರೀತಿಯಲ್ಲಿ ಅದನ್ನು ಮಾಡಬೇಕು?” ಎಂದು ಕೇಳಿದನು.
ಆಗ ಹಾಮಾನನು, “ಅರಸನು ಗೌರವಿಸುವವನು ನನಗಿಂತ ಹೆಚ್ಚಿನವನು ಯಾರಿರಬಹುದು? ಅವನು ನನ್ನ ವಿಚಾರವಾಗಿಯೇ ನೆನಸುತ್ತಿರಬಹುದು” ಎಂದು ತನ್ನ ಮನಸ್ಸಿನಲ್ಲಿಯೇ ನೆನೆಸಿಕೊಂಡು
7 ಅರಸನಿಗೆ, “ನೀನು ಗೌರವಿಸಬೇಕಾದ ಮನುಷ್ಯನಿಗೆ ಈ ರೀತಿಯಾಗಿ ಮಾಡಬೇಕು. 8 ಅರಸನು ಧರಿಸಿದ ರಾಜವಸ್ತ್ರಗಳನ್ನು ಸೇವಕರ ಮೂಲಕ ತರಿಸು. ಅಲ್ಲದೆ ರಾಜನು ಸವಾರಿ ಮಾಡಿರುವ ಕುದುರೆಯನ್ನು ತರಿಸು. ಸೇವಕರು ಅದರ ಹಣೆಯ ಮೇಲೆ ರಾಜನ ವಿಶೇಷ ಗುರುತನ್ನು ಇಡಲಿ. 9 ಅನಂತರ ಅರಸನ ಮುಖ್ಯ ಅಧಿಕಾರಿಗಳಲ್ಲೊಬ್ಬನನ್ನು ರಾಜವಸ್ತ್ರಗಳಿಗೂ ಕುದುರೆಗೂ ಜವಾಬ್ದಾರನನ್ನಾಗಿ ನೇಮಿಸಿರಿ. ರಾಜನು ಯಾವ ವ್ಯಕ್ತಿಯನ್ನು ಗೌರವಿಸಬೇಕೆಂದಿದ್ದಾನೋ ಆ ವ್ಯಕ್ತಿಯ ಮೇಲೆ ಅವನು ರಾಜವಸ್ತ್ರವನ್ನು ಹಾಕಲಿ. ಆಮೇಲೆ ಅವನನ್ನು ಕುದುರೆಯ ಮೇಲೆ ಕುಳ್ಳಿರಿಸಿಕೊಂಡು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿಸುತ್ತಾ, ‘ರಾಜನು ಗೌರವಿಸುವ ಮನುಷ್ಯನಿಗೆ ಹೀಗೆಯೇ ಆಗುವುದು’ ಎಂದು ಪ್ರಕಟಿಸುತ್ತಾ ಹೋಗಲಿ” ಎಂದು ಹೇಳಿದನು.
10 “ಈಗಲೇ,” ಅರಸನು ಹಾಮಾನನಿಗೆ ಆಜ್ಞೆಕೊಟ್ಟು “ಈಗಲೇ ಹೋಗಿ ರಾಜವಸ್ತ್ರಗಳನ್ನೂ ರಾಜನ ಕುದುರೆಯನ್ನೂ ಕೊಂಡುಹೋಗಿ ಯೆಹೂದ್ಯನಾದ ಮೊರ್ದೆಕೈಗೆ ನೀನು ಹೇಳಿದ ಪ್ರಕಾರವೆ ಮಾಡು. ಮೊರ್ದೆಕೈ ಅರಮನೆಯ ಹೆಬ್ಬಾಗಿಲ ಬಳಿಯಲ್ಲಿ ಕುಳಿತುಕೊಂಡಿರುತ್ತಾನೆ. ನಿನ್ನ ಸಲಹೆಯಂತೆಯೇ ಎಲ್ಲವನ್ನೂ ಮಾಡು” ಅಂದನು.
11 ಹಾಮಾನನು ಉಡುಪನ್ನೂ ಕುದುರೆಯನ್ನೂ ತೆಗೆದುಕೊಂಡು ಮೊರ್ದೆಕೈಗೆ ತೊಡಿಸಿ, ಕುದುರೆಯ ಮೇಲೆ ಕುಳ್ಳಿರಿಸಿ ನಗರದ ಮುಖ್ಯರಸ್ತೆಗಳಲ್ಲಿ ಕರೆದುಕೊಂಡು ಹೋಗುತ್ತಿರುವಾಗ, “ಅರಸನು ಸನ್ಮಾನಿಸುವ ಮನುಷ್ಯನಿಗೆ ಹೀಗೆಯೇ ಆಗುವದು” ಎಂದು ಪ್ರಕಟಿಸಿದನು.
12 ಇದಾದ ಬಳಿಕ ಮೊರ್ದೆಕೈ ಹೆಬ್ಬಾಗಿಲ ಬಳಿಯಲ್ಲಿದ್ದ ತನ್ನ ಸ್ಥಾನಕ್ಕೆ ಹೋದನು. ಆದರೆ ಹಮಾನನು ತನ್ನ ಮನೆಗೆ ಅವಸರವಸರವಾಗಿ ನಡೆದನು. ನಾಚಿಕೆಯಿಂದಲೂ ಸಿಟ್ಟಿನಿಂದಲೂ ತನ್ನ ಮುಖವನ್ನು ಮುಚ್ಚಿಕೊಂಡಿದ್ದನು. 13 ತನ್ನ ಹೆಂಡತಿ ಜೆರೆಷಳಿಗೂ ಮತ್ತು ತನಗೆ ಸಲಹೆ ಕೊಟ್ಟಿದ್ದ ಮಿತ್ರವೃಂದದವರಿಗೂ ನಡೆದ ವಿಷಯ ತಿಳಿಸಿದನು. ಆಗ ಅವರು ತಿಳಿಸಿದ್ದೇನೆಂದರೆ: “ಮೊರ್ದೆಕೈಯು ಯೆಹೂದ್ಯನಾಗಿದ್ದರೆ ನೀನು ಜಯಗಳಿಸುವುದಿಲ್ಲ. ಈಗಲೇ ನೀನು ಸೋಲುತ್ತಿರುವಿ. ನಿಜವಾಗಿಯೂ ನೀನೇ ನಾಶವಾಗುವಿ.”
14 ಅವರು ಮಾತಾಡುತ್ತಿರುವಾಗಲೇ ರಾಜಕಂಚುಕಿಗಳು ಅವನನ್ನು ರಾಣಿ ಎಸ್ತೇರಳು ಏರ್ಪಡಿಸಿದ್ದ ಔತಣಕ್ಕೆ ಕರೆದುಕೊಂಡು ಹೋಗಲು ಬಂದರು.
ಹಾಮಾನನು ಗಲ್ಲಿಗೇರಿಸಲ್ಪಟ್ಟನು
7 ಅರಸನೂ ಹಾಮಾನನೂ ರಾಣಿಯ ಅರಮನೆಗೆ ಔತಣಕ್ಕಾಗಿ ಹೋದರು. 2 ಈ ಔತಣ ಸಮಾರಂಭದ ಎರಡನೆಯ ದಿನದಂದು ಅವರಿಬ್ಬರೂ ದ್ರಾಕ್ಷಾರಸ ಸೇವನೆ ಮಾಡುತ್ತಿರುವಾಗ ತಿರಿಗಿ ರಾಜನು ತನ್ನ ರಾಣಿಯನ್ನು ಪ್ರಶ್ನಿಸಿದನು, “ಎಸ್ತೇರ್ ರಾಣಿಯೇ, ನಿನಗೆ ಬೇಕಾದದ್ದನ್ನು ಕೇಳಿಕೊ. ನಾನು ಕೊಡುವೆನು; ಅರ್ಧ ರಾಜ್ಯ ಬೇಕಾದರೂ ನಾನು ಕೊಡುತ್ತೇನೆ” ಎಂದನು.
3 ಆಗ ಎಸ್ತೇರ್ ರಾಣಿಯು, “ರಾಜನೇ, ನೀನು ನನ್ನನ್ನು ಮೆಚ್ಚಿ ಪ್ರೀತಿಸುವದಾದರೆ ದಯಮಾಡಿ ನಾನು ಬದುಕುವಂತೆ ಮಾಡು. ಅಲ್ಲದೇ ನನ್ನ ಜನರನ್ನು ಉಳಿಸು. ಇದೇ ನನ್ನ ಬಿನ್ನಹ. 4 ಯಾಕೆಂದರೆ ನಾನು, ನನ್ನ ಜನರೂ ಕೊಲ್ಲಲ್ಪಡಲು, ನಾಶವಾಗಲು, ಸಂಪೂರ್ಣವಾಗಿ ನಿರ್ಮೂಲವಾಗಲು ಮಾರಲ್ಪಟ್ಟಿರುತ್ತೇವೆ. ನಾವು ಬರೇ ಗುಲಾಮರಾಗಿ ಮಾರಲ್ಪಟ್ಟಿದರೆ ನಾನು ಸುಮ್ಮನಿರುತ್ತಿದ್ದೆ. ಯಾಕೆಂದರೆ ಅದು ರಾಜನನ್ನು ತೊಂದರೆಪಡಿಸುವಂಥ ದೊಡ್ಡ ವಿಷಯವಲ್ಲ” ಎಂದು ಉತ್ತರಿಸಿದಳು.
5 ಆಗ ರಾಜನು ಎಸ್ತೇರಳಿಗೆ, “ಹೀಗೆ ನಿನಗೆ ಯಾರು ಮಾಡಿದರು? ನಿನ್ನ ಜನರಿಗೆ ಇಂಥಾ ಕೆಲಸವನ್ನು ಮಾಡಲು ಯಾರಿಗೆ ಧೈರ್ಯವಾಯಿತು?” ಎಂದು ಕೇಳಿದನು.
6 ಎಸ್ತೇರಳು ಉತ್ತರಿಸುತ್ತಾ, “ನಮ್ಮನ್ನು ದ್ವೇಷಿಸುವ ಮನುಷ್ಯನು ಈ ಕೆಟ್ಟ ಹಾಮಾನನೇ” ಎಂದು ಹೇಳಿದಳು.
ಆಗ ಹಾಮಾನನು ಭಯದಿಂದ ನಡುಗಿದನು.
30 ಇದರರ್ಥವೇನೆಂದರೆ, ಯೆಹೂದ್ಯರಲ್ಲದವರು ನೀತಿವಂತರಾಗಲು ಪ್ರಯತ್ನಿಸುತ್ತಿರಲಿಲ್ಲ. ಆದರೆ ಅವರನ್ನು ನೀತಿವಂತರನ್ನಾಗಿ ಮಾಡಲಾಯಿತು. ಅವರು ನಂಬಿಕೆಯಿಂದಲೇ ನೀತಿವಂತರಾದರು. 31 ಇಸ್ರೇಲಿನ ಜನರಾದರೋ ಧರ್ಮಶಾಸ್ತ್ರವನ್ನು ಅನುಸರಿಸುವುದರ ಮೂಲಕ ನೀತಿವಂತರಾಗಲು ಪ್ರಯತ್ನಿಸಿ ವಿಫಲರಾದರು. 32 ಏಕೆಂದರೆ ಕ್ರಿಯೆಗಳ ಮೂಲಕ ನೀತಿವಂತರಾಗಲು ಅವರು ಪ್ರಯತ್ನಿಸಿದರೇ ಹೊರತು ನಂಬಿಕೆಯನ್ನು ಆಧಾರ ಮಾಡಿಕೊಳ್ಳಲಿಲ್ಲ. ಜನರನ್ನು ಬೀಳಿಸುವ ಕಲ್ಲಿನ ಮೇಲೆ ಅವರು ಬಿದ್ದರು. 33 ಪವಿತ್ರ ಗ್ರಂಥವು ಆ ಕಲ್ಲಿನ ಬಗ್ಗೆ ಹೀಗೆ ತಿಳಿಸಿದೆ:
“ಇಗೋ, ನಾನು ಸಿಯೋನಿನಲ್ಲಿ[a] ಜನರನ್ನು ಎಡವಿಬೀಳಿಸುವ ಒಂದು ಕಲ್ಲನ್ನು ಇಡುತ್ತೇನೆ.
ಈ ಬಂಡೆಯಿಂದಾಗಿ ಜನರು ಎಡವಿಬೀಳುತ್ತಾರೆ.
ಆದರೆ ಆ ಬಂಡೆಯಲ್ಲಿ ನಂಬಿಕೆಯಿಡುವವನು ಎಂದಿಗೂ ಆಶಾಭಂಗ ಹೊಂದುವುದಿಲ್ಲ.”(A)
10 ಸಹೋದರ ಸಹೋದರಿಯರೇ, ಇಸ್ರೇಲರೆಲ್ಲರೂ ರಕ್ಷಣೆ ಹೊಂದಬೇಕೆಂಬುದೇ ನನ್ನ ಮಹಾಭಿಲಾಷೆ. ನಾನು ದೇವರಲ್ಲಿ ಅದಕ್ಕಾಗಿ ಪ್ರಾರ್ಥಿಸುತ್ತಿದ್ದೇನೆ. 2 ನಾನು ಯೆಹೂದ್ಯರ ಬಗ್ಗೆ ಹೀಗೆ ಹೇಳಬಲ್ಲೆನು: ಅವರು ದೇವರನ್ನು ಹಿಂಬಾಲಿಸಲು ನಿಜವಾಗಿಯೂ ಪ್ರಯತ್ನಿಸುತ್ತಾರೆ. ಆದರೆ ಅವರಿಗೆ ಸರಿಯಾದ ಮಾರ್ಗ ಗೊತ್ತಿಲ್ಲ. 3 ನೀತಿವಂತರನ್ನಾಗಿ ಮಾಡುವ ದೇವರ ಮಾರ್ಗವನ್ನು ಅವರು ತಿಳಿದಿಲ್ಲದ ಕಾರಣ ತಮ್ಮ ಸ್ವಂತ ಮಾರ್ಗದ ಮೂಲಕವಾಗಿ ತಮ್ಮನ್ನು ನೀತಿವಂತರನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸಿದರು. 4 ತನ್ನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬನು ನೀತಿನಿರ್ಣಯ ಹೊಂದಬೇಕೆಂದು ಕ್ರಿಸ್ತನು ಧರ್ಮಶಾಸ್ತ್ರವನ್ನು ಕೊನೆಗೊಳಿಸಿದನು.
Kannada Holy Bible: Easy-to-Read Version. All rights reserved. © 1997 Bible League International