Revised Common Lectionary (Complementary)
ರಚನೆಗಾರ: ದಾವೀದ.
25 ಯೆಹೋವನೇ, ನಿನ್ನಲ್ಲೇ ಮನಸ್ಸಿಟ್ಟಿದ್ದೇನೆ.
2 ನನ್ನ ದೇವರೇ, ನಿನ್ನಲ್ಲಿ ಭರವಸವಿಟ್ಟಿದ್ದೇನೆ.
ನನ್ನನ್ನು ನಿರಾಶೆಗೊಳಿಸಬೇಡ.
ವೈರಿಗಳು ನನ್ನನ್ನು ನೋಡಿ ಗೇಲಿ ಮಾಡದಂತಾಗಲಿ!
3 ನಿನ್ನಲ್ಲಿ ಭರವಸವಿಟ್ಟಿರುವವರು ನಿರಾಶರಾಗುವುದಿಲ್ಲ
ದ್ರೋಹಿಗಳಾದರೋ ನಿರಾಶರಾಗುವರು.
ಅವರಿಗೆ ಏನೂ ದೊರೆಯುವುದಿಲ್ಲ.
4 ಯೆಹೋವನೇ ನಿನ್ನ ಮಾರ್ಗಗಳನ್ನು ನನಗೆ ತಿಳಿಸು.
ನಿನ್ನ ಮಾರ್ಗಗಳನ್ನು ನನಗೆ ಉಪದೇಶಿಸು.
5 ನನಗೆ ಮಾರ್ಗದರ್ಶನ ನೀಡು; ನಿನ್ನ ಸತ್ಯಗಳನ್ನು ನನಗೆ ಉಪದೇಶಿಸು.
ನೀನೇ ನನ್ನ ದೇವರು, ನೀನೇ ನನ್ನ ರಕ್ಷಕ.
ಹಗಲೆಲ್ಲಾ ನಿನ್ನಲ್ಲಿ ಭರವಸವಿಟ್ಟಿರುವೆ.
6 ಯೆಹೋವನೇ, ನನಗೆ ಕರುಣೆ ತೋರಬೇಕೆಂಬುದನ್ನು ಜ್ಞಾಪಿಸಿಕೊ.
ನಿನ್ನ ಶಾಶ್ವತವಾದ ಪ್ರೀತಿಯನ್ನು ನನಗೆ ತೋರಿಸು.
7 ನಾನು ಯೌವನಸ್ಥನಾಗಿದ್ದಾಗ ಮಾಡಿದ ಪಾಪಗಳನ್ನಾಗಲಿ ಕೆಟ್ಟಕಾರ್ಯಗಳನ್ನಾಗಲಿ ಜ್ಞಾಪಿಸಿಕೊಳ್ಳಬೇಡ.
ಯೆಹೋವನೇ, ನಿನ್ನ ಒಳ್ಳೆಯ ಹೆಸರಿನ ನಿಮಿತ್ತ ನನ್ನನ್ನು ಪ್ರೀತಿಯಿಂದ ಜ್ಞಾಪಿಸಿಕೊ.
8 ಯೆಹೋವನು ಒಳ್ಳೆಯವನೂ ಸತ್ಯಸ್ವರೂಪನೂ ಆಗಿದ್ದಾನೆ.
ಆತನು ಪಾಪಿಗಳಿಗೆ ಜೀವಮಾರ್ಗವನ್ನು ಬೋಧಿಸುವನು.
9 ಆತನು ದೀನರಿಗೆ ತನ್ನ ಮಾರ್ಗಗಳನ್ನು ಉಪದೇಶಿಸುವನು.
ಆತನು ಅವರನ್ನು ತನ್ನ ನ್ಯಾಯಾನುಸಾರವಾಗಿ ನಡೆಸುವನು.
10 ಯೆಹೋವನ ಒಡಂಬಡಿಕೆಯನ್ನೂ ವಾಗ್ದಾನಗಳನ್ನೂ ಅನುಸರಿಸುವ ಜನರಿಗೆ
ಆತನ ಮಾರ್ಗಗಳೆಲ್ಲ ಕರುಣೆಯುಳ್ಳವೂ ಸತ್ಯವೂ ಆಗಿವೆ.
ಕನಸುಗಳ ಅರ್ಥವನ್ನು ತಿಳಿಸಲು ಯೋಸೇಫನನ್ನು ಕರೆಸಿದ್ದು
14 ಆಗ ಫರೋಹನು ಯೋಸೇಫನನ್ನು ಸೆರೆಮನೆಯಿಂದ ಕರೆಸಿದನು. ಯೋಸೇಫನು ಕ್ಷೌರಮಾಡಿಕೊಂಡು ಶುದ್ಧವಾದ ಬಟ್ಟೆಗಳನ್ನು ಹಾಕಿಕೊಂಡು ಹೋಗಿ ಫರೋಹನ ಮುಂದೆ ನಿಂತುಕೊಂಡನು. 15 ಫರೋಹನು ಯೋಸೇಫನಿಗೆ, “ನನಗೆ ಒಂದು ಕನಸಾಯಿತು. ಆದರೆ ಅದರ ಅರ್ಥವನ್ನು ತಿಳಿಸಬಲ್ಲವರು ಇಲ್ಲಿ ಯಾರೂ ಇಲ್ಲ. ನೀನು ಕನಸುಗಳ ಅರ್ಥವನ್ನು ಹೇಳಬಲ್ಲೆ ಎಂಬುದಾಗಿ ನಿನ್ನ ಬಗ್ಗೆ ಕೇಳಿದೆ” ಎಂದು ಹೇಳಿದನು.
16 ಯೋಸೇಫನು, “ಕನಸುಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ನನ್ನಲ್ಲಿಲ್ಲ. ಆ ಶಕ್ತಿಯನ್ನು ಹೊಂದಿರುವವನು ದೇವರೊಬ್ಬನೇ. ಆದರೆ ದೇವರು ಫರೋಹನಿಗೋಸ್ಕರ ಅರ್ಥವನ್ನು ತಿಳಿಸುವನು” ಎಂದು ಹೇಳಿದನು.
17 ಆಗ ಫರೋಹನು ಯೋಸೇಫನಿಗೆ, “ನನ್ನ ಕನಸಿನಲ್ಲಿ, ನಾನು ನೈಲ್ ನದಿಯ ತೀರದಲ್ಲಿ ನಿಂತುಕೊಂಡಿದ್ದೆನು. 18 ಕೊಬ್ಬಿದ ಮತ್ತು ಲಕ್ಷಣವಾಗಿದ್ದ ಏಳು ಹಸುಗಳು ನದಿಯೊಳಗಿಂದ ಬಂದು ಹುಲ್ಲನ್ನು ಮೇಯುತ್ತಿದ್ದವು. 19 ಆಗ ಬಡಕಲಾಗಿದ್ದ ಮತ್ತು ಕುರೂಪವಾಗಿದ್ದ ಏಳು ಹಸುಗಳು ನದಿಯೊಳಗಿಂದ ಬಂದು ನಿಂತುಕೊಂಡವು. ಅಂಥಾ ಬಡಕಲು ಹಸುಗಳನ್ನು ನಾನು ಈಜಿಪ್ಟಿನಲ್ಲಿ ಎಂದೂ ನೋಡಿಲ್ಲ. 20 ಬಡಕಲಾಗಿದ್ದ ಆ ಹಸುಗಳು ಮೊದಲು ಬಂದ ಲಕ್ಷಣವಾದ ಏಳು ಹಸುಗಳನ್ನು ತಿಂದುಬಿಟ್ಟವು. 21 ಅವು ಏಳು ಹಸುಗಳನ್ನು ತಿಂದ ಮೇಲೆಯೂ ತಿಂದಂತೆ ಕಾಣುತ್ತಿರಲಿಲ್ಲ; ಅವು ಮೊದಲಿನಂತೆಯೇ ಬಡಕಲಾಗಿದ್ದವು ಮತ್ತು ಕುರೂಪವಾಗಿದ್ದವು. ಆಗ ನನಗೆ ಎಚ್ಚರವಾಯಿತು.
22 “ನನಗಾದ ಎರಡನೆಯ ಕನಸು ಇಂತಿದೆ: ಒಂದೇ ಗಿಡದಲ್ಲಿ ಪುಷ್ಟಿಯಾದ ಏಳು ತೆನೆಗಳು ಹುಟ್ಟಿದವು. 23 ಬಳಿಕ ಅದೇ ಗಿಡದಲ್ಲಿ ಮೇಲೆ ಬಿಸಿಗಾಳಿಯಿಂದ ಬತ್ತಿಹೋಗಿದ್ದ ಏಳು ತೆನೆಗಳು ಹುಟ್ಟಿದವು. 24 ಬತ್ತಿಹೋಗಿದ್ದ ತೆನೆಗಳು ಪುಷ್ಟಿಯಾದ ಏಳು ತೆನೆಗಳನ್ನು ತಿಂದುಬಿಟ್ಟವು.
“ನಾನು ಈ ಕನಸುಗಳನ್ನು ಮಂತ್ರಗಾರರಿಗೂ ವಿದ್ವಾಂಸರಿಗೂ ತಿಳಿಸಿದೆನು. ಆದರೆ ಅವರಲ್ಲಿ ಯಾರೂ ನನಗೆ ಈ ಕನಸುಗಳ ಅರ್ಥವನ್ನು ವಿವರಿಸಲಾಗಲಿಲ್ಲ. ಅವುಗಳ ಅರ್ಥವೇನು?” ಎಂದು ಕೇಳಿದನು.
ಯೋಸೇಫನಿಂದ ಕನಸುಗಳ ಅರ್ಥವಿವರಣೆ
25 ಆಗ ಯೋಸೇಫನು ಫರೋಹನಿಗೆ, “ಆ ಎರಡು ಕನಸುಗಳ ಅರ್ಥವು ಒಂದೇ. ಮುಂದೆ ನಡೆಯಲಿರುವುದನ್ನು ದೇವರು ತಮಗೆ ತಿಳಿಸಿದ್ದಾನೆ. 26 ಒಳ್ಳೆಯ ಏಳು ಹಸುಗಳೇ ಏಳು ವರ್ಷಗಳು. ಒಳ್ಳೆಯ ಏಳು ತೆನೆಗಳೇ ಏಳು ವರ್ಷಗಳು. ಎರಡು ಕನಸುಗಳೂ ಒಂದೇ ಅರ್ಥವನ್ನು ಹೊಂದಿವೆ. 27 ಬಡಕಲಾದ ಮತ್ತು ಕುರೂಪವಾದ ಏಳು ಹಸುಗಳು ಮತ್ತು ಕೆಟ್ಟುಹೋದ ಕಾಳಿನ ಏಳು ತೆನೆಗಳು, ದೇಶಕ್ಕೆ ಬರುವ ಏಳು ವರ್ಷಗಳ ಬರಗಾಲವನ್ನು ಸೂಚಿಸುತ್ತವೆ. ಈ ಏಳು ವರ್ಷಗಳು ಒಳ್ಳೆಯ ವರ್ಷಗಳ ನಂತರ ಬರುತ್ತವೆ. 28 ಮುಂದೆ ನಡೆಯಲಿರುವುದನ್ನು ದೇವರು ನಿಮಗೆ ತಿಳಿಸಿದ್ದಾನೆ. ನಾನು ಹೇಳಿದಂತೆಯೇ ಸಂಭವಿಸುವುದು. 29 ನಿಮಗೆ ಏಳು ವರ್ಷಗಳ ಕಾಲ ಒಳ್ಳೆಯ ಬೆಳೆಯಾಗುವುದು; ಈಜಿಪ್ಟ್ ದೇಶದಲ್ಲೆಲ್ಲಾ ಊಟಕ್ಕೆ ಬೇಕಾದಷ್ಟು ಆಹಾರವಿರುವುದು. 30 ಆದರೆ ಆ ಏಳು ವರ್ಷಗಳಾದ ಮೇಲೆ ದೇಶದಲ್ಲೆಲ್ಲಾ ಏಳು ವರ್ಷಗಳವರೆಗೆ ಬರಗಾಲವಿರುವುದು. ಆಗ ಈಜಿಪ್ಟಿನ ಜನರು ತಾವು ಮೊದಲು ಬೆಳೆದ ಆಹಾರವನ್ನೆಲ್ಲಾ ಮರೆತುಬಿಡುವರು. ಈ ಕ್ಷಾಮವು ದೇಶವನ್ನು ನಾಶಮಾಡುವುದು. 31 ಮೊದಲಿನ ಸಮೃದ್ಧಿಯ ಗುರುತೇ ಜನರಿಗೆ ಕಾಣಸಿಗದು.
32 “ಫರೋಹನೇ, ಒಂದೇ ವಿಷಯದ ಮೇಲೆ ಎರಡು ಕನಸುಗಳಾಗಿರುವುದರಿಂದ ದೇವರು ಇದನ್ನು ನಿಶ್ಚಯವಾಗಿಯೂ ಬೇಗನೆ ಬರಮಾಡಲಿದ್ದಾನೆ. 33 ಆದ್ದರಿಂದ ತಾವು ತುಂಬ ಬುದ್ಧಿವಂತನೂ ವಿವೇಕಿಯೂ ಆಗಿರುವ ಒಬ್ಬನನ್ನು ಆರಿಸಿಕೊಂಡು ಅವನನ್ನು ಈಜಿಪ್ಟ್ ದೇಶದ ಮೇಲೆ ಆಡಳಿತಾಧಿಕಾರಿಯನ್ನಾಗಿ ನೇಮಿಸಬೇಕು. 34 ಅಲ್ಲದೆ ಜನರಿಂದ ಆಹಾರವನ್ನು ಶೇಖರಿಸುವುದಕ್ಕಾಗಿ ತಾವು ಸಂಗ್ರಹಕರನ್ನು ನೇಮಿಸಿ ಒಳ್ಳೆಯ ಏಳು ವರ್ಷಗಳಲ್ಲಿ ಪ್ರತಿಯೊಬ್ಬ ಬೆಳೆಗಾರನಿಂದಲೂ ಬೆಳೆಯ ಐದನೆ ಒಂದು ಭಾಗವನ್ನು ಕಂದಾಯ ರೂಪದಲ್ಲಿ ವಸೂಲಿ ಮಾಡಬೇಕು. 35 ಸಂಗ್ರಹಕಾರರ ಮೂಲಕ ಆಹಾರಪದಾರ್ಥಗಳನ್ನೂ ದವಸಧಾನ್ಯಗಳನ್ನೂ ಶೇಖರಿಸಿ ನಿಮ್ಮ ಉಗ್ರಾಣಗಳಲ್ಲಿಟ್ಟು ನೋಡಿಕೊಳ್ಳಬೇಕು. 36 ಉಗ್ರಾಣಗಳಲ್ಲಿ ಸಾಕಷ್ಟು ಆಹಾರವಿರುವುದರಿಂದ ಈಜಿಪ್ಟಿನವರು ಬರಗಾಲದ ಏಳು ವರ್ಷಗಳಲ್ಲಿ ಆಹಾರವಿಲ್ಲದೆ ಸಾಯುವುದಿಲ್ಲ” ಎಂದು ಹೇಳಿದನು.
ನಂಬಿಕೆ ಮತ್ತು ಉತ್ತಮ ಕಾರ್ಯಗಳು
14 ನನ್ನ ಸಹೋದರ ಸಹೋದರಿಯರೇ, ಒಬ್ಬ ವ್ಯಕ್ತಿಯು ತನ್ನಲ್ಲಿ ನಂಬಿಕೆಯಿದೆಯೆಂದು ಹೇಳಿಕೊಂಡರೂ ಅದನ್ನು ಕಾರ್ಯರೂಪಕ್ಕೆ ತರದಿದ್ದರೆ, ಅವನ ನಂಬಿಕೆಯಿಂದ ಪ್ರಯೋಜನವೇನೂ ಇಲ್ಲ. ಆ ರೀತಿಯ ನಂಬಿಕೆಯು ಅವನನ್ನು ರಕ್ಷಿಸಬಲ್ಲದೇ? ಇಲ್ಲ! 15 ಕ್ರಿಸ್ತನಲ್ಲಿ ಸಹೋದರನಾಗಿರುವವನಿಗೆ ಅಥವಾ ಸಹೋದರಿಯಾಗಿರುವವಳಿಗೆ ಬಟ್ಟೆಗಳು ಬೇಕಾಗಿರಬಹುದು ಅಥವಾ ತಿನ್ನಲು ಆಹಾರ ಬೇಕಾಗಿರಬಹುದು. 16 ಆದರೆ ನೀವು ಆ ವ್ಯಕ್ತಿಗೆ, “ದೇವರು ನಿನ್ನೊಂದಿಗಿರಲಿ! ಚಳಿಕಾಯಿಸಿಕೊಂಡು ತೃಪ್ತಿಯಾಗುವಷ್ಟು ಊಟ ಮಾಡು” ಎಂಬುದಾಗಿ ಹೇಳಿ ಬೇಕಾದವುಗಳನ್ನು ಅವನಿಗೆ ಕೊಡದೆ ಹೋದರೆ ನಿಮ್ಮ ಮಾತುಗಳಿಗೆ ಯಾವ ಬೆಲೆಯೂ ಇಲ್ಲ. 17 ಇದೇ ನಿಯಮ ನಂಬಿಕೆಗೂ ಅನ್ವಯಿಸುತ್ತದೆ. ಕ್ರಿಯೆಯಿಲ್ಲದ ನಂಬಿಕೆಯು ತನ್ನಲ್ಲಿಯೇ ಸತ್ತುಹೋಗಿದೆ.
18 ಆದರೆ ಯಾವನಾದರೂ, “ನಿನ್ನಲ್ಲಿ ನಂಬಿಕೆಯಿದೆ; ನನ್ನಲಿ ಕ್ರಿಯೆಗಳಿವೆ” ಎಂದು ವಾದಿಸಬಹುದು. ಅದಕ್ಕೆ ನನ್ನ ಉತ್ತರವೇನೆಂದರೆ ನೀನು ಕ್ರಿಯೆಗಳಿಲ್ಲದೆ ನಿನ್ನ ನಂಬಿಕೆಯನ್ನು ತೋರಿಸಲಾರೆ. ನಾನಾದರೊ ನನ್ನ ಒಳ್ಳೆಯ ಕಾರ್ಯಗಳ ಮೂಲಕ ನನ್ನ ನಂಬಿಕೆಯನ್ನು ನಿನಗೆ ತೋರಿಸುವೆ ಎಂದು ಹೇಳಬಹುದು. 19 ಒಬ್ಬನೇ ದೇವರಿರುವನೆಂದು ನೀವು ನಂಬಿದ್ದೀರಿ. ಒಳ್ಳೆಯದು! ಆದರೆ ದೆವ್ವಗಳೂ ಅದನ್ನು ನಂಬುತ್ತವೆ ಮತ್ತು ಭಯದಿಂದ ನಡುಗುತ್ತವೆ.
20 ಬುದ್ಧಿಹೀನರೇ, ಕ್ರಿಯೆಯಿಲ್ಲದ ನಂಬಿಕೆಯು ನಿಷ್ಪ್ರಯೋಜಕವೆಂದು ನಿಮಗೆ ತೋರಿಸಬೇಕೋ? 21 ಅಬ್ರಹಾಮನು ನಮ್ಮ ಪಿತೃ. ಅವನು ತನ್ನ ಕ್ರಿಯೆಗಳಿಂದ ನೀತಿವಂತನಾದನು. ಅವನು ಯಜ್ಞವೇದಿಕೆಯ ಮೇಲೆ ತನ್ನ ಮಗನಾದ ಇಸಾಕನನ್ನು ದೇವರಿಗೆ ಅರ್ಪಿಸಿದನು. 22 ಆದ್ದರಿಂದ ಅವನ ನಂಬಿಕೆ ಮತ್ತು ಅವನ ಕ್ರಿಯೆ ಒಟ್ಟಿಗೆ ಕಾರ್ಯ ಮಾಡಿದವು. ಅವನ ನಂಬಿಕೆಯು ಅವನ ಕ್ರಿಯೆಗಳಿಂದಲೇ ಪರಿಪೂರ್ಣಗೊಂಡಿತು. 23 ಹೀಗೆ ಪವಿತ್ರಗ್ರಂಥದ ಈ ಮಾತುಗಳು ನೆರವೇರಿದವು: “ಅಬ್ರಹಾಮನು ದೇವರನ್ನು ನಂಬಿದನು. ದೇವರು ಅಬ್ರಹಾಮನ ನಂಬಿಕೆಯನ್ನು ಒಪ್ಪಿಕೊಂಡು ಅವನನ್ನು ನೀತಿವಂತನೆಂದು ಪರಿಗಣಿಸಿದನು.”(A) ಅಬ್ರಹಾಮನನ್ನು “ದೇವರ ಸ್ನೇಹಿತ”(B) ನೆಂದು ಕರೆಯಲಾಯಿತು. 24 ಹೀಗಿರಲು ಒಬ್ಬನು ತನ್ನ ಕ್ರಿಯೆಗಳಿಂದ ನೀತಿವಂತನಾಗುತ್ತಾನೆ ಎಂಬುದು ಸ್ಪಷ್ಟವಾಗಿದೆ. ಒಬ್ಬನು ಕೇವಲ ನಂಬಿಕೆಯೊಂದರಿಂದಲೇ ನೀತಿವಂತನಾಗಲು ಸಾಧ್ಯವಿಲ್ಲ.
25 ರಹಾಬಳು ಮತ್ತೊಬ್ಬ ಉದಾಹರಣೆಯಾಗಿದ್ದಾಳೆ. ಆಕೆ ಒಬ್ಬ ವೇಶ್ಯೆ. ಆದರೆ ಅವಳು ತನ್ನ ಕ್ರಿಯೆಗಳಿಂದಲೇ ನೀತಿವಂತಳಾದಳು. ಅವಳು ದೇವರ ಜನರಿಗೋಸ್ಕರ ಗೂಢಚಾರರನ್ನು ತನ್ನ ಮನೆಗೆ ಬರಮಾಡಿಕೊಂಡು, ಬೇರೊಂದು ರಸ್ತೆಯಲ್ಲಿ ತಪ್ಪಿಸಿಕೊಂಡು ಹೋಗಲು ಅವರಿಗೆ ಸಹಾಯ ಮಾಡಿದಳು.[a]
26 ಒಬ್ಬ ವ್ಯಕ್ತಿಯ ದೇಹದಲ್ಲಿ ಆತ್ಮವಿಲ್ಲದಿದ್ದರೆ, ಅವನ ದೇಹವು ಸತ್ತದ್ದೇ. ಅದೇ ರೀತಿಯಲ್ಲಿ ಕ್ರಿಯೆಯಿಲ್ಲದ ನಂಬಿಕೆಯು ಸತ್ತದ್ದೇ.
Kannada Holy Bible: Easy-to-Read Version. All rights reserved. © 1997 Bible League International